SEARCH HERE

Thursday 8 April 2021

ಯಾವ ಮನ್ವಂತರದಲ್ಲಿ ಯಾರು ವ್ಯಾಸ who will be vyasa in whose manvantara




ಶ್ರೀವಿಷ್ಣುಪುರಾಣ 462 ಶ್ರೀಮನ್ನಾರಾಯಣಾಯ ನಮ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||

ತೃತೀಯಾಂಶ:  ತೃತೀಯೋಧ್ಯಾಯ:
********

ಶ್ರೀಮೈತ್ರೇಯ ಉವಾಚ:

ಜ್ಞಾತಮೇತನ್ಮಯಾ ತ್ವತ್ತೋ ಯಥಾ ಸರ್ವಮಿದಂ ಜಗತ್|
ವಿಷ್ಣುರ್ವಿಷ್ಣೌ ವಿಷ್ಣುತಶ್ಚ ನ ಪರಂ ವಿದ್ಯತೇ ತತ:||1||

ಏತತ್ತು ಶ್ರೋತುಮಿಚ್ಛಾಮಿ ವ್ಯಸ್ತಾ ವೇದಾ ಮಹಾತ್ಮನಾ|
ವೇದವ್ಯಾಸಸ್ವರೂಪೇಣ ತಥಾ ತೇನ ಯುಗೇ ಯುಗೇ||2||

ಯಸ್ಮಿನ್ಯಸ್ಮಿನ್ಯುಗೇ ವ್ಯಾಸೋ ಯೋ ಯ ಆಸೀನ್ಮಹಾಮುನೇ|
ತಂ ತಮಾಚಕ್ಷ್ವ ಭಗವಾನ್ ಶಾಖಾ ಭೇದಾಂಶ್ಚ ಮೇ ವದ||3||

ಶ್ರೀಪರಾಶರ ಉವಾಚ:-

ವೇದದ್ರುಮಸ್ಯ ಮೈತ್ರೇಯ ಶಾಖಾಭೇದಾಸ್ಸಹಸ್ರಶ:|
ನ ಶಕ್ತೋ ವಿಸ್ತರಾದ್ವಕ್ತುಂ ಸಂಕ್ಷೇಪೇಣ ಶೃಣುಷ್ವ ತಮ್||4||

ಮೈತ್ರೇಯರು:

"ಮಹರ್ಷಿಗಳೇ, ಈ ಜಗತ್ತೆಲ್ಲವೂ ವಿಷ್ಣುವೇ ಎಂದೂ ವಿಷ್ಣುವಿನಲ್ಲಿ ಇದೆಯೆಂದೂ ವಿಷ್ಣುವಿನಿಂದ ಜನಿಸಿದೆ ಎಂದೂ ವಿಷ್ಣುವಿಗಿಂತ ಬೇರೆಯಾಗಿ ಯಾವುದೂ ಇಲ್ಲವೆಂದೂ ನಿಮ್ಮಿಂದ ನಾನು ತಿಳಿದಿದ್ದೇನೆ.

ಈಗ ನಾನು ಕೇಳಬೇಕೆಂದು ಇಚ್ಛಿಸುವುದೇನೆಂದರೆ, ಮಹಾತ್ಮನಾದ ವಿಷ್ಣುವು ವೇದವ್ಯಾಸರೂಪನಾಗಿ ಯುಗಯುಗಗಳಲ್ಲಿಯೂ ವೇದಗಳನ್ನು ವಿಭಜಿಸುತ್ತಾನೆ ಎಂದು ಹೇಳಿದಿರಷ್ಟೆ.

ಯಾವ ಯಾವ ಯುಗದಲ್ಲಿ ಯಾವ ಯಾವ ಹೆಸರಿನ ವ್ಯಾಸನಾಗಿ ಅವತರಿಸಿದನೆಂಬುದನ್ನು ಹೇಳಿರಿ.
ಅಲ್ಲದೆ ವೇದಗಳ ಶಾಖಾಭೇದಗಳನ್ನೂ ನನಗೆ ತಿಳಿಸಿರಿ" ಎಂದು ಕೇಳಿದರು.

ಆಗ ಪರಾಶರರು ನುಡಿದರು:

ಮೈತ್ರೇಯ, ವೇದವೆಂಬ ವೃಕ್ಷಕ್ಕೆ ಸಾವಿರಾರು ಶಾಖಾಭೇದಗಳಿವೆ. ಅವೆಲ್ಲವನ್ನೂ ವಿಸ್ತಾರವಾಗಿ ಹೇಳಲಾರೆ.
ಸಂಕ್ಷೇಪವಾಗಿ ಹೇಳುತ್ತೇನೆ, ಕೇಳು.
********

ದ್ವಾಪರೇ ದ್ವಾಪರೇ ವಿಷ್ಣುರ್ವ್ಯಾಸರೂಪೀ ಮಹಾಮುನೇ|
ವೇದಮೇಕಂ ಸುಬಹುಧಾ ಕುರುತೇ ಜಗತೋ ಹಿತ:||5||

ವೀರ್ಯಂ ತೇಜೋ ಬಲಂ ಚಾಲ್ಪಂ ಮನುಷ್ಯಾಣಾಮವೇಕ್ಷ್ಯ ಚ|
ಹಿತಾಯ ಸರ್ವಭೂತಾನಾಂ ವೇದಭೇದಾನ್ ಕರೋತಿ ಸ:||6||

ಯಯಾಸೌ ಕುರುತೇ ತನ್ವಾ ವೇದಮೇಕಂ ಪೃಥಕ್ ಪ್ರಭು:|
ವೇದವ್ಯಾಸಾಭಿಧಾನಾ ತು ಸಾ ಚ ಮೂರ್ತಿರ್ಮಧುದ್ವಿಷ:||7||

ಯಸ್ಮಿನ್ಮನ್ವಂತರೇ ವ್ಯಾಸಾ ಯೇ ಯೇ ಸ್ಯುಸ್ತಾನ್ನಿಬೋಧ ಮೇ|
ಯಥಾ ಚ ಭೇದಶ್ಯಾಖಾನಾಂ ವ್ಯಾಸೇನ ಕ್ರೀಯತೇ ಮುನೇ||8||

ಜಗತ್ತಿಗೆ ಹಿತವನ್ನು ಮಾಡಬೇಕೆಂದು ವಿಷ್ಣುವು ಪ್ರತಿಯೊಂದು ದ್ವಾಪರಯುಗದಲ್ಲಿಯೂ ವ್ಯಾಸರೂಪಿಯಾಗಿ ಒಂದೇ ಆದ ವೇದವನ್ನು ಬಹುಮುಖವಾಗಿ ವಿಂಗಡಿಸುತ್ತಾನೆ. 

ಮಾನವರ ವೀರ್ಯತೇಜೋಬಲಗಳು ಅಲ್ಪವೆಂದರಿತು ಸಕಲ ಜೀವಿಗಳ ಶ್ರೇಯಸ್ಸಿಗಾಗಿ ಆತನು ವೇದಗಳ ವಿಭಾಗವನ್ನು ಮಾಡುತ್ತಾನೆ. 

ಯಾವ ಮೂರ್ತಿಯನ್ನು ಧರಿಸಿ ಆ ಪ್ರಭು ವೇದದ ವ್ಯಾಸ (ವಿಭಾಗ) ವನ್ನು ಮಾಡುತ್ತಾನೋ ಆ ಮೂರ್ತಿಗೆ ವೇದವ್ಯಾಸ ಎಂದು ಹೆಸರು. 

ಯಾವ ಮನ್ವಂತರದಲ್ಲಿ ಯಾವ ಯಾವ ವ್ಯಾಸರಾಗುತ್ತಾರೆ ಎಂಬುದನ್ನೂ ವ್ಯಾಸನು ಯಾವ ರೀತಿಯಲ್ಲಿ ವೇದದ ಶಾಖಾಭೇದಗಳನ್ನು ಮಾಡುತ್ತಾನೆಂಬುದನ್ನೂ ತಿಳಿಸುತ್ತೇನೆ, ಕೇಳು. 
******

ಅಷ್ಟಾವಿಂಶತಿಕೃತ್ವೋ ವೈ ವೇದೋ ವ್ಯಸ್ತೋ ಮಹರ್ಷಿಭಿ:|
ವೈವಸ್ವತೇಂತರೇ ತಸ್ಮಿನ್ ದ್ವಾಪರೇಷು ಪುನ: ಪುನ:||9||

ವೇದವ್ಯಾಸಾ ವ್ಯತೀತಾ ಯೇ ಹ್ಯಷ್ಟಾವಿಂಶತಿ ಸತ್ತಮ|
ಚತುರ್ಥಾ ಯೈ: ಕೃತೋ ವೇದೋ ದ್ವಾಪರೇಷು ಪುನ: ಪುನ:||10||

ದ್ವಾಪರೇ ಪ್ರಥಮೇ ವ್ಯಸ್ತಸ್ಸ್ವಯಂ ವೇದ: ಸ್ವಯಂಭುವಾ|
ದ್ವಿತೀಯೇ ದ್ವಾಪರೇ ಚೈವ ವೇದವ್ಯಾಸ: ಪ್ರಜಾಪತಿ:||11||

ತೃತೀಯೇ ಚೋಶನಾ ವ್ಯಾಸಶ್ಚತುರ್ಥೇ ಚ ಬೃಹಸ್ಪತಿ:|
ಸವಿತಾ ಪಂಚಮೇ ವ್ಯಾಸ: ಷಷ್ಠೇ ಮೃತ್ಯುಸ್ಸ್ಮೃತ: ಪ್ರಭು:||12||

ಸಪ್ತಮೇ ಚ ತಥೈವೇಂದ್ರೋ ವಸಿಷ್ಠಶ್ಚಾಷ್ಟಮೇ ಸ್ಮೃತ:|
ಸಾರಸ್ವತಶ್ಚ ನವಮೇ ತ್ರಿಧಾಮಾ ದಶಮೇ ಸ್ಮೃತ:||13||

ಏಕಾದಶೇ ತು ತ್ರಿಶಿಖೋ ಭರದ್ವಾಜಸ್ತತ: ಪರ:|
ತ್ರಯೋದಶೇ ಚಾಂತರಿಕ್ಷೋ ವರ್ಣೀ ಚಾಪಿ ಚತುರ್ದಶೇ||14||

ಈ ವೈವಸ್ವತ ಮನ್ವಂತರದ ದ್ವಾಪರಯುಗಗಳಲ್ಲಿ ವ್ಯಾಸಮಹರ್ಷಿಗಳು ಇಪ್ಪತ್ತೆಂಟು ಬಾರಿ ಮತ್ತೆ ಮತ್ತೆ ವೇದವನ್ನು ವಿಭಜಿಸಿದ್ದಾರೆ. 

ಹೀಗೆ ಈ ಮನ್ವಂತರದಲ್ಲಿ ಇಪ್ಪತ್ತೆಂಟು ವ್ಯಾಸರು ಗತಿಸಿಹೋದರು!  ಅವರು ಮತ್ತೆ ಮತ್ತೆ ದ್ವಾಪರಯುಗದಲ್ಲಿ ವೇದವನ್ನು ನಾಲ್ಕು ವಿಭಾಗ ಮಾಡಿದ್ದಾರೆ. 

ಮೊದಲನೆಯ ದ್ವಾಪರಯುಗದಲ್ಲಿ ಸ್ವಯಂ ಬ್ರಹ್ಮದೇವನೇ ವೇದವಿಭಾಗವನ್ನು ಮಾಡಿದನು. 
ಎರಡನೆಯ ದ್ವಾಪರಯುಗದಲ್ಲಿ ಪ್ರಜಾಪತಿಯು (ಮನು) ವ್ಯಾಸನಾದನು. 

ಮೂರನೆಯ ದ್ವಾಪರದಲ್ಲಿ ಶುಕ್ರ, 
ನಾಲ್ಕನೆಯದರಲ್ಲಿ ಬೃಹಸ್ಪತಿ, 
ಐದನೆಯದರಲ್ಲಿ ಸೂರ್ಯ, 
ಆರನೆಯದರಲ್ಲಿ ಪ್ರಭುವಾದ ಮೃತ್ಯು ವ್ಯಾಸರಾದರು. 

ಏಳನೆಯ ದ್ವಾಪರದಲ್ಲಿ ಇಂದ್ರನೂ, 
ಎಂಟನೆಯದರಲ್ಲಿ ವಸಿಷ್ಠನೂ, 
ಒಂಬತ್ತನೆಯದರಲ್ಲಿ ಸಾರಸ್ವತನೂ, 
ಹತ್ತನೆಯದರಲ್ಲಿ ತ್ರಿಧಾಮನೂ ವ್ಯಾಸರಾದರು. 

ಹನ್ನೊಂದನೆಯ ದ್ವಾಪರಯುಗದಲ್ಲಿ ವಿಶಿಖ, 
ಆಮೇಲೆ ಹನ್ನೆರಡನೆಯದರಲ್ಲಿ ಭರದ್ವಾಜ, 
ಹದಿಮೂರನೆಯದರಲ್ಲಿ ಅಂತರಿಕ್ಷ, 
ಹದಿನಾಲ್ಕನೆಯದರಲ್ಲಿ ವರ್ಣಿ ಇವರು ವ್ಯಾಸರಾದರು. 

********

ತ್ರಯ್ಯಾರುಣ: ಪಂಚದಶೇ ಷೋಡಸೇ ತು ಧನಂಜಯ:|
ಕ್ರತುಂಜಯ: ಸಪ್ತದಶೇ ತದೂರ್ಧ್ವಂ ಚ ಜಯಸ್ಸ್ಮೃತ:||15||

ತತೋ ವ್ಯಾಸೋ ಭರದ್ವಾಜೋ ಭರದ್ವಾಜಾಚ್ಚ ಗೌತಮ:|
ಗೌತಮಾದುತ್ತರೋ ವ್ಯಾಸೋ ಹರ್ಯಾತ್ಮಾ ಯೋಭಿಧೀಯತೇ||16||

ಅಥ ಹರ್ಯಾತ್ಮನೋಂತೇ ಚ ಸ್ಮೃತೋ ವಾಜಶ್ರವಾ ಮುನಿ:|
ಸೋಮಶುಷ್ಮಾಯಣಸ್ತಸ್ಮಾತ್ ತೃಣಬಿಂದುರಿತಿ ಸ್ಮೃತ:||17||

ಋಕ್ಷೋಭೂದ್ಭಾರ್ಗವಸ್ತಾಸ್ಮಾದ್ವಾಲ್ಮೀಕಿರ್ಯೋಭಿಧೀಯತೇ|
ತಸ್ಮಾದಸ್ಮತ್ಪಿತಾ ಶಕ್ತಿರ್ವ್ಯಾಸಸ್ತಸ್ಮಾದಹಂ ಮುನೇ||18||

ಜಾತುಕರ್ಣೋಭವನ್ಮತ್ತ: ಕೃಷ್ಣದ್ವೈಪಾಯನಸ್ತತ:|
ಅಷ್ಟಾವಿಂಶತಿರಿತ್ಯೇತೇ ವೇದವ್ಯಾಸಾ: ಪುರಾತನಾ:||19||

ಏಕೋ ವೇದಶ್ಚತುರ್ಧಾ ತು ತೈ: ಕೃತೋ ದ್ವಾಪರಾದಿಷು||20||

ಭವಿಷ್ಯೇ ದ್ವಾಪರೇ ಚಾಪಿ ದ್ರೌಣಿರ್ವ್ಯಾಸೋ ಭವಿಷ್ಯತಿ|
ವ್ಯತಿತೇ ಮಮ ಪುತ್ರೇಸ್ಮಿನ್ ಕೃಷ್ಣದ್ವೈಪಾಯನೇ ಮುನೇ||21||

ಆಮೇಲೆ ಭರದ್ವಾಜನೂ ಅನಂತರ ಗೌತಮನೂ ಅವನಾದ ಮೇಲೆ ಹರ್ಯಾತ್ಮನೂ ವ್ಯಾಸರೆನಿಸಿದ್ದಾರೆ. 

ಹರ್ಯಾತ್ಮನಾದ ಮೇಲೆ ವಾಜಸ್ರವಸ್ಸೆಂಬ ಮುನಿಯೂ ತರುವಾಯ ಸೋಮಶುಷ್ಮಾಯಣನೂ ಆಮೇಲೆ ತೃಣಬಿಂದುವೂ ವ್ಯಾಸರೆನಿಸಿದರು. 

ಭೃಗುವಂಶೀಯನಾದ ಋಕ್ಷನು ಅನಂತರ ಇಪ್ಪತ್ನಾಲ್ಕನೆಯ ವ್ಯಾಸನಾದನು. ಆತನಿಗೆ ವಾಲ್ಮೀಕಿಯೆಂದೂ ಹೆಸರಿತ್ತು. 

ಇಪ್ಪತ್ತೈದನೆಯ ವ್ಯಾಸನು ನಮ್ಮ ತಂದೆಯಾದ ಶಕ್ತಿ. 
ಅನಂತರ, ಮೈತ್ರೇಯ, ನಾನು ವ್ಯಾಸನಾದೆನು. 
ನಾನಾದ ಮೇಲೆ ಜಾತುಕರ್ಣನು ಇಪ್ಪತ್ತೇಳನೆಯ ವ್ಯಾಸ. 

ಆಮೇಲೆ ಇಪ್ಪತ್ತೆಂಟನೆಯ ವ್ಯಾಸನು ಕೃಷ್ಣದ್ವೈಪಾಯನ. 
ಈ ರೀತಿಯಲ್ಲಿ ಇಪ್ಪತ್ತೆಂಟು ಪ್ರಾಚೀನ ವೇದವ್ಯಾಸರನ್ನು ಕೀರ್ತಿಸಿದ್ದೇನೆ. 

ದ್ವಾಪರಯುಗಗಳ ಆದಿಭಾಗದಲ್ಲಿ ಅವರು ಒಂದೇ ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು. 
ನನ್ನ ಪುತ್ರನಾದ ಕೃಷ್ಣದ್ವೈಪಾಯನನ ತರುವಾಯ ಮುಂದೆ ಬರುವ ದ್ವಾಪರದಲ್ಲಿ ದ್ರೋಣಪುತ್ರನಾದ ಅಶ್ವತ್ಥಾಮನು ವ್ಯಾಸನಾಗುವನು. 
********
ಧ್ರುವಮೇಕಾಕ್ಷರಂ ಬ್ರಹ್ಮ ಓಮಿತ್ಯೇವ ವ್ಯವಸ್ಥಿತಮ್|
ಬೃಹತ್ತ್ವಾದ್ ಬೃಂಹಣತ್ವಾಚ್ಚ ತದ್ ಬ್ರಹ್ಮೇತ್ಯಬಿಧೀಯತೇ||22||

ಪ್ರಣವಾವಸ್ಥಿತಂ ನಿತ್ಯಂ ಭೂರ್ಭುವಸ್ಸ್ವರಿತೀರ್ಯತೇ|
ಋಗ್ಯಜುಸ್ಸಾಮಾಥರ್ವಾಣೋ ಯತ್ತಸ್ಮೈ ಬ್ರಹ್ಮಣೇ ನಮ:||23||

ಜಗತ: ಪ್ರಲಯೋತ್ಪತ್ಯೋರ್ಯತ್ತತ್ಕಾರಣ ಸಂಜ್ಞಿತಮ್|
ಮಹತ: ಪರಮಂ ಗುಹ್ಯಂ ತಸ್ಮೈ ಸುಬ್ರಹ್ಮಣೇ ನಮ:||24||

ಅಗಾಧಾಪಾರಮಕ್ಷಯ್ಯಂ ಜಗತ್ಸಮ್ಮೋಹನಾಲಯಮ್|
ಸ್ವಪ್ರಕಾಶಪ್ರವೃತ್ತಿಭ್ಯಾಂ ಪುರುಷಾರ್ಥಪ್ರಯೋಜನಮ್||25||

ಓಂ ಎಂಬ ಅವಿನಾಶಿಯಾದ ಏಕಾಕ್ಷರವು ಬ್ರಹ್ಮವಾಗಿದೆ. 
ಅದು ಬೃಹತ್ತಾದ್ದರಿಂದಲೂ ಬೃಂಹಣ (ವೃದ್ಧಿ) ಶೀಲವಾದ್ದರಿಂದಲೂ ಬ್ರಹ್ಮವೆನಿಸಿದೆ. 

ಓಂಕಾರರೂಪವಾದ ಈ ಪ್ರಣವದಲ್ಲಿ ಭೂ: ಭುವ: ಸ್ವ: (ಸುವ:) - ಎಂಬ ವ್ಯಾಹೃತಿಗಳು (ಮೂರುಲೋಕಗಳು) ನಿತ್ಯವೂ ನೆಲೆಸಿವೆ. ಋಗ್ಯಜು:ಸಾಮಾರ್ಥ ವೇದರೂಪವಾದ ಓಂಕಾರ ಬ್ರಹ್ಮಕ್ಕೆ ನಮಸ್ಕಾರ. 

ಜಗತ್ತಿನ ಪ್ರಳಯ ಮತ್ತು ಉತ್ಪತ್ತಿಗಳಿಗೆ ಕಾರಣವೂ ಮಹತ್ತಿಗೆ ಪರವಾಗಿ ಪರಮವೂ ಗುಹ್ಯವೂ ಆದ ಆ ಓಂಕಾರಬ್ರಹ್ಮಕ್ಕೆ ನಮಸ್ಕಾರ. 

ಆ ಬ್ರಹ್ಮವು ಅಗಾಧವೂ ಅಪಾರವೂ ಅಕ್ಷಯವೂ ಆಗಿ ಜಗತ್ತಿನ ಸಂಮೋಹಕ್ಕೆ ಕಾರಣವಾದ ತಮೋಗುಣಕ್ಕೆ ಆಶ್ರಯವಾದದ್ದು. 
ಸ್ವಪ್ರಕಾಶ (ಸತ್ವಗುಣ) ದಿಂದಲೂ ಪ್ರವೃತ್ತಿಕಾರಣ (ರಜೋಗುಣ) ವಾದ್ದರಿಂದಲೂ ಪುರುಷಾರ್ಥವನ್ನು ಉಂಟುಮಾಡತಕ್ಕದ್ದು. 
********
ಸಾಂಖ್ಯಜ್ಞಾನವತಾಂ ನಿಷ್ಠಾ ಗತಿಶ್ಸಮಸದಮಾತ್ಮನಾಮ್|
ಯತ್ತದವ್ಯಕ್ತಮಮೃತಂ ಪ್ರವೃತ್ತಿಬ್ರಹ್ಮಶಾಶ್ವತಮ್||26||

ಪ್ರಧಾನಮಾತ್ಮಯೋನಿಶ್ಚ ಗುಹಾಸಂಸ್ಥಂ ಚ ಶಬ್ದ್ಯತೇ|
ಅವಿಭಾಗಂ ತಥಾ ಶುಕ್ರಮಕ್ಷಯಂ ಬಹುಧಾತ್ಮಕಮ್||27||

ಪರಮಬ್ರಹ್ಮಣೇ ತಸ್ಮೈ ನಿತ್ಯಮೇವ ನಮೋ ನಮ:|
ಯದ್ರೂಪಂ ವಾಸುದೇವಸ್ಯ ಪರಮಾತ್ಮಸ್ವರೂಪಿಣ:||28||

ಏತದ್ ಬ್ರಹ್ಮ ತ್ರಿದಾ ಭೇದಮಭೇದಮಪಿ ಸ ಪ್ರಭು:|
ಸರ್ವಭೇದೇಯ್ವಭೇದೋಸೌ ಭಿದ್ಯತೇ ಭಿನ್ನಬುದ್ಧಿಭಿ:||29||

ಸ ಋಙ್ಮಯಸ್ಸಾಮಮಯ: ಸರ್ವಾತ್ಮಾ ಸ ಯಜುರ್ಮಯ:|
ಋಗ್ಯಜುಸ್ಸಾಮಸಾರಾತ್ಮಾ ಸ ಏವಾತ್ಮಾ ಶರೀರಿಣಾಮ್||30||

ಸ ಭಿದ್ಯತೇ ವೇದಮಯಸ್ಸ್ವವೇದಂ ಕರೋತಿ ಭೇದೈರ್ಬಹುಭಿಸ್ಸಶಾಖಮ್|
ಶಾಖಾಪ್ರಣೇತಾ ಸ ಸಮಸ್ತಶಾಖಾಜ್ಞಾನಸ್ವರೂಪೋ ಭಗವಾನಸಂಗ:||31||

ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ತೃತೀಯೋಧ್ಯಾಯ:||

ಸಾಂಖ್ಯಜ್ಞಾನಿಗಳಿಗೆ ಪರಾಯಣವೂ ಶಮದಮಾದಿ ಗುಣಶಾಲಿಗಳಿಗೆ ಗತಿಯೂ ಅವ್ಯಕ್ತವೂ ಅಮೃತವೂ ಪ್ರವೃತ್ತಿಶೀಲವಾದ (ಸಗುಣವಾದ) ಶಾಶ್ವತ ಬ್ರಹ್ಮವೂ ಆಗಿದೆ. 

ಅದು ಪ್ರಧಾನವೆಂದೂ ಆತ್ಮಯೋನಿಯೆಂದೂ ಗುಹಾಸಂಸ್ಥವೆಂದೂ ಹೇಳಲ್ಪಡುತ್ತದೆ. ಅದು ವಿಭಾಗವಿಲ್ಲದ್ದು, ದೀಪ್ತಿಶಾಲಿಯೂ ಅಕ್ಷಯವೂ ಆದದ್ದು, ಬಹು ಸ್ವರೂಪವುಳ್ಳದ್ದು. 

ಆ ಪರಮಬ್ರಹ್ಮಕ್ಕೆ ಸದಾ ನಮೋ ನಮ:. ಪರಮಾತ್ಮನಾದ ವಾಸುದೇವನ ರೂಪವೇ ಅದು. ಈ ಬ್ರಹ್ಮವು ಅಭಿನ್ನವಾದರೂ (ಆಕಾರ, ಉಕಾರ, ಮಕಾರ ರೂಪಗಳಿಂದ) ಮೂರು ಭೇದವುಳ್ಳದ್ದಾಗಿ ಕಾಣಿಸುತ್ತದೆ. 
ಆ ಪ್ರಭು ಸರ್ವಭೇದಗಳಿರುವಂತೆ ಕಂಡರೂ ಅಭಿನ್ನವೇ ಸರಿ. ದ್ವೈತಬುದ್ಧಿಯವರಿಗೆ ಭಿನ್ನವಾಗಿ ಕಾಣಿಸುತ್ತಾನೆ. 

ಆ ಸರ್ವಾತ್ಮನಾದ ಪ್ರಣವಸ್ವರೂಪನೂ ಋಙ್ಮಯನೂ ಯಜುರ್ಮಯನೂ ಸಾಮಮಯನೂ ಆಗಿದ್ದಾನೆ. ಋಗ್ಯಯಜು:ಸಾಮಗಳ ಸಾರವೇ ಆಗಿದ್ದಾನೆ. ದೇಹಿಗಳಲ್ಲಿ ಆತನೇ ಆತ್ಮನಾಗಿದ್ದಾನೆ. 

ವೇದಮಯನಾದ ಆತನು ಋಗಾದಿಭೇದಗಳಿಂದ ಅನೇಕವಾಗುತ್ತಾನೆ. ಶಾಖಾಯುಕ್ತವಾಗಿ ತನ್ನದೇ ಆದ ವೇದವನ್ನು ಬಹುಭೇದಗಳಿಂದ ವಿಂಗಡಿಸುತ್ತಾನೆ. ವೇದಶಾಖೆಗಳನ್ನು ರಚಿಸತಕ್ಕವನೂ ಆತನೇ. ಆ ಭಗವಂತನು ನಿ:ಸಂಗವಾಗಿ ಸಮಸ್ತ ವೇದ ಶಾಖೆಗಳಿಂದ ಪ್ರತಿಪಾದ್ಯನಾದ ಜ್ಞಾನದ ಸ್ವರೂಪನಾಗಿದ್ದಾನೆ. 

ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ಮೂರನೆಯ ಅಧ್ಯಾಯ ಮುಗಿಯಿತು.‌
********

**



No comments:

Post a Comment