SEARCH HERE

Friday 14 February 2020

ಬ್ರಾಹ್ಮಣರ ಭೋಜನ

ಬ್ರಾಹ್ಮಣರ ಭೋಜನ :

ಅಮೇರಿಕಾ ದೇಶದ ಆಹಾರ ತಜ್ಞರ ತಂಡವೊಂದು ಆಹಾರ ತಯಾರಿಕಾ ಕ್ರಮದ, ಉಣ್ಣುವ ಬಗೆಗಿನ ರೀತಿಯನ್ನು ಪ್ರಪಂಚದೆಲ್ಲಡೆ ಅಭ್ಯಸಿಸಿ, ದಕ್ಷಿಣ ಭಾರತದ ಬ್ರಾಹ್ಮಣರ ಭೋಜನ ವಿಧಿಯು, ಮನುಷ್ಯ ದೇಹಕ್ಕೆ ಅತ್ಯಂತ ಸಮರ್ಪಕವಾಗಿ ಹೊಂದಿ ಕೊಳ್ಳುವ ಹಾಗೂ ಸಧೃಢ ಆರೋಗ್ಯಕ್ಕೆ ಪೂರಕವಾದ ವಿಧಾನವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಬ್ರಾಹ್ಮಣರ ಪಾಕ ವಿಧಾನವು ಮನುಷ್ಯನ ವ್ಯಕ್ತಿತ್ವ, ದೈಹಿಕ ನಿಲುವು, ಸಾಮರ್ಥ್ಯ, ಮನಸಿನ ಹತೋಟಿಯಲ್ಲಿಡುವಿಕೆ, ಇದರ ತಳಹದಿಯಲ್ಲಿ ರೂಪಿಸಲ್ಪಟ್ಟಿದೆ. ಬ್ರಾಹ್ಮಣರ ಅಡುಗೆ ಮನೆಗಳಲ್ಲಿ ಶುದ್ದತೆಗೆ ಮಹತ್ವ ನೀಡಿ ಆಹಾರ ತಯಾರಿಕೆಯಲ್ಲಿ ರುಚಿ, ಸುವಾಸನೆ, ವರ್ಣ ಹಾಗೂ ವೈವಿಧ್ಯತೆ ಗೆ ಒತ್ತು ನೀಡಲ್ಪಟ್ಟಿರುತ್ತದೆ. ಸಾಂಬಾರ ಪದಾರ್ಥಗಳು ನಮ್ಮ ದೈನಂದಿನ ಜೀವನದಲ್ಲಿ ಅತೀ ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ. ಮೆಂತೆಯು ಜೀರ್ಣಕಾರಕವಾಗಿ, ಜೀರಿಗೆ ಸರ್ವ ವಿಧದಲ್ಲೂ ಆರೋಗ್ಯಕ್ಕೆ ಉಪಯುಕ್ತವಾಗಿ, ಹುರಿಯಲ್ಪಟ್ಟ ಬೇಳೆ ಕಾಳುಗಳ ದೇಹಕ್ಕೆ ಪುಷ್ಟಿ ನೀಡುವ ವಸ್ತುಗಳಾಗಿವೆ. ಅರಶಿನವು ಆಶ್ಚರ್ಯಕರವಾಗಿ ಗಾಯವನ್ನು ಗುಣ ಪಡಿಸುತ್ತದೆ. ಇಂಗು ಹೊಟ್ಟೆಯ ಉಬ್ಬರವನ್ನು ನಿವಾರಿಸುತ್ತದೆ. ಕರಿಮೆಣಸು ಶೀತ ಹಾಗೂ ಕಫಕ್ಕೆ ರಾಮಬಾಣದಂತೆ ಉಪಯುಕ್ತ ಪದಾರ್ಥ. ಕರಬೇವು ಹಾಗೂ ಕೊತ್ತಂಬರಿ ಸೊಪ್ಪುಗಳು ಕರುಳು ಹಾಗೂ ಪಿತ್ತಕೋಶಗಳ ಶುದ್ಧೀಕರಿಸುತ್ತದೆ. ಬ್ರಾಹ್ಮಣರ ಅಡುಗೆಯಲ್ಲಿ ಉಪಯೋಗಿಸಲ್ಪಡುವ ಪ್ರತಿಯೊಂದು ಆಹಾರದ ವಸ್ತುವು ರುಚಿ ಹಾಗೂ ಬಣ್ಣಕ್ಕಿಂತ ಮಿಗಿಲಾಗಿ ಅದರದ್ದೇ ಆದ ಮಹತ್ವ, ಕಾರಣವನ್ನು ಹೊಂದಿರುತ್ತದೆ. 

* ಇಡ್ಲಿ, ದೋಸೆ, ಅವಲಕ್ಕಿ, ಉಪ್ಪಿಟ್ಟು ಬ್ರಾಹ್ಮಣರ ಬೆಳಗಿನ ಉಪಹಾರದ ಸಾಮಾನ್ಯದ ತಿಂಡಿಗಳು. ಎಣ್ಣೆ, ಜಿಡ್ಡಿನ ತಿಂಡಿಗಳು ಬೆಳಗಿನ ಉಪಹಾರಕ್ಕೆ ವ್ಯರ್ಜ್ಯ. ಎಣ್ಣೆ ಜಿಡ್ಡಿನ ಪದಾರ್ಥಗಳು ಕಿಂಚಿದಂಶ ಮನುಷ್ಯನ ಮೆದುಳಿನ ಶಕ್ತಿಯನ್ನು ಕುಂದಿಸುವ ಕಾರಣ ಇದರ ಉಪಯೋಗ ಕಡಿಮೆ. ಬೆಳ್ಳಂಬೆಳಗೆಯೇ ನಮ್ಮ ನೈಮಿತ್ತಿಕ ಕೆಲಸ ಕಾರ್ಯಗಳಲ್ಲಿ ಮೆದುಳೇ ಸ್ತಬ್ದವಾದರೆ ಜೀವನದ ಆರಂಭಕ್ಕೇ ತೊಡಕಲ್ಲವೇ?ಲೈಕೋಪೀನ್ ಎಂಬ ರಾಸಾಯನಿಕವನ್ನು ಹೊಂದಿರುವ ಅತೀ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಟೊಮ್ಯಾಟೊ ಚಟ್ನಿಯು ಬ್ರಾಹ್ಮಣರಲ್ಲಿ ಹೆಚ್ಚಾಗಿ ಬಳಕೆಯಾಗುವ ಪದಾರ್ಥ. ಈ ಚಟ್ನಿಯನ್ನು ದಿನನಿತ್ಯ ಒಂದು ಚಮಚ ಅಥವಾ ವಾರಕ್ಕೊಮ್ಮೆಯಾದರೂ ಉಪಯೋಗಿಸಿದರೆ ಅರ್ಬುದ ರೋಗವನ್ನು ತಡೆಗಟ್ಟ ಬಹುದು.

ಕೇವಲ ಏಳೇ ನಿಮಿಷಗಳಲ್ಲಿ ತಯಾರಿಸಲ್ಪಡ ಬಹುದಾದ ಉಪ್ಪಿಟ್ಟು , ಅಕ್ಕಿಯ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವುದು ಮಾತ್ರವಲ್ಲದೇ ಬೇಗನೇ ಉದ್ಭವಿಸುವ ಹಸಿವನ್ನು ನಿವಾರಿಸುತ್ತದೆ. ಕೆಲವು ಬ್ರಾಹ್ಮಣರು ಬೆಳಗಿನ ಉಪಹಾರವನ್ನು ತ್ಯಜಿಸಿ ನೇರವಾಗಿ ಹತ್ತು ಗಂಟೆಯ ಹೊತ್ತಿಗೆ ಉಣ್ಣುತ್ತಾರೆ. ಇದರಿಂದ ದಿನನಿತ್ಯ ಲವಲವಿಕೆ ಮತ್ತು ಹೊತ್ತಿಡೀ ಉತ್ಸಾಹದಿಂದಿರಲೂ ಸಾಧ್ಯ. ಮಧ್ಯಾಹ್ನದ ಊಟ ದೇಹದೊಂದಿನ ವ್ಯಾಮೋಹದಾಟವಲ್ಲ. ದೇಹದ ಸಮರ್ಥಿಕೆಗೆ ನೀಡುವ ಸೇವೆಯಿದು. ಉಪಯೋಗಿಸಲ್ಪಡುವ ಸರ್ವ ಪದಾರ್ಥಗಳು ದೇಹ, ಮನಸು ಆತ್ಮದ ಪಾವಿತ್ರ್ಯಕ್ಕೆ ಸಹಕಾರಿಯಾಗ ಬೇಕೆಂಬುದೇ ಬ್ರಾಹ್ಮರ ಪಾಕ ವಿಧಾನದ ಮೂಲ ತತ್ವ.

* ಬಾಳೆದಿಂಡಿನ ಪಲ್ಯವು ಅಥವಾ ಅದರ ಇನ್ನಿತರ ಉಪ ಆಹಾರ ವ್ಯಂಜನ ರುಚಿಕರವಾದುದು. ಇದರಲ್ಲಿರುವ ನಾರಿನಂಶ ಉದರದಲ್ಲಿರುವ ಅತೀ ಸಣ್ಣ ಕಲ್ಮಶವನ್ನೂ ಹೊರ ಹಾಕ ಬಲ್ಲ ಸಾಮಾರ್ಥ್ಯ ಹೊಂದಿರುವಂತಹುದು. ಇದರ ರಸವನ್ನು ಮಕ್ಕಳ ಆರೋಗ್ಯ ವರ್ಧಕವಾಗಿ  ನೀಡುತ್ತಾರೆ.

* ಬೆಂಡೆಕಾಯಿ ಪದಾರ್ಥದ ರುಚಿ ಅನನ್ಯ. ಮಕ್ಕಳ ಬುದ್ಧಿಮತ್ತೆಯ ಅಭಿವೃದ್ಧಿ, ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಉತ್ತಮ ಸಹಕಾರಿ.

* ಸೊಪ್ಪಿನ ಪದಾರ್ಥಗಳು ಬ್ರಾಹ್ಮಣರ ಅಡುಗೆಯಲ್ಲಿ ಸಾಮಾನ್ಯ. ಇದರಲ್ಲಿರುವ ಅಂಶಗಳು ಪಚನ ಕ್ರಿಯೆ ಹಾಗೂ ರೋಗರುಜಿನ ಬಾರದಂತೆ ತಡೆಗಟ್ಟುವಲ್ಲಿ ಮೊದಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಮೆಂತೆ ಸೊಪ್ಪಿನ ಹುಳಿ, ಹರಿವೆ ಸೊಪ್ಪಿನ ಪದಾರ್ಥಗಳು ನಿತ್ಯ ಹುರುಪಲ್ಲಿರಲು ಸಹಾಯಕಾರಿ.

 * ಮಜ್ಜಿಗೆ ನೀರು ಅಥವಾ ಮೊಸರಲ್ಲಿ ಕಲಸಿದ ಹಸಿರು ತರಕಾರಿಗಳ ಪದಾರ್ಥವೂ ಬಹಳ ರುಚಿಕರವಾದುದು.

* ಬೆಲ್ಲ ನೀರು ಮತ್ತು ಒಣಗಿಸಿದ ಶುಂಠಿಯ ಪುಡಿಯನ್ನು ಕಲಸಿ ತಯಾರಿಸಿದ ಪಾನಕ ಮತ್ತು ಕೋಸಂಬರಿಯನ್ನು ಶ್ರೀರಾಮ ದೇವರಿಗೆ ಅರ್ಪಿಸುತ್ತೇವೆ. ನೆನಸಿದ ಹೆಸರು, ಕಡಲೆ ಬೇಳೆಯೊಂದಿಗೆ ಮುಳ್ಳು ಸೌತೆ, ಕ್ಯಾರೆಟ್ ಇನ್ನಿತರ ತರಕಾರಿಗಳೊಂದಿಗೆ ಸೇರಿಸಿ ನೀಡುವ ಈ ಆಹಾರ ಬಹಳ ಸತ್ವಯುತ.

 * ಬ್ರಾಹ್ಮಣರು ಭೋಜನದ ಅಂತ್ಯದಲ್ಲಿ ಮೊಸರು ಹಾಗೂ ಉಪ್ಪಿನ ಕಾಯಿಯಲ್ಲಿ ಉಣ್ಣುತ್ತಾರೆ. ಎಲ್ಲಾ ಬಗೆಯ ಪದಾರ್ಥಗಳ ಸೇವನೆಯ ನಂತರ ಉದರವು ತಂಪಾಗಿರಲು ಮೊಸರು- ಮಜ್ಜಿಗೆ, ಜೊಲ್ಲು ರಸ ಸ್ರವಿಸಲು ಉಪ್ಪಿನ ಕಾಯಿಯ ಸೇವನೆ ಸಾಧುವಾದುದು ಹಾಗೂ ಮಹತ್ತರವಾದುದು.

* ಬಲಿತು ಹಣ್ಣಾದ ಬಾಳೆಹಣ್ಣಿನ ಸೇವನೆಯೊಂದಿಗೆ ಭೋಜನ ವಿಧಿಯು ಪರಿಪೂರ್ಣಗೊಳ್ಳುತ್ತದೆ.

No comments:

Post a Comment