SEARCH HERE

Friday 1 October 2021

ಹೊಟ್ಟೆಹುಳು ಸಮಸ್ಯೆ ನಿವಾರಣೆ

 ಹೊಟ್ಟೆಹುಳು ಸಮಸ್ಯೆ ನಿವಾರಣೆಗೆ, ಇಲ್ಲಿದೆ ನೈಸರ್ಗಿಕ ಪರಿಹಾರಗಳು

🌸🌸🌸🌸🌼🌼🌼🌼🌼🌼🌼

ಕರುಳಿನ ಭಾಗದಲ್ಲಿ ಉಂಟಾಗುವ ಯಾವುದೇ ಸೋಂಕುಗಳಿಗೆ ಅಲ್ಲಿರುವ ಕ್ರಿಮಿಗಳು ಮುಖ್ಯ ಕಾರಣ. ಇವುಗಳನ್ನು ನಿವಾರಣೆ ಮಾಡಿಕೊಳ್ಳದೆ ಹೋದರೆ ಇಡೀ ದೇಹಕ್ಕೆ ತೊಂದರೆ ಗ್ಯಾರಂಟಿ.ನಾವು ಸೇವನೆ ಮಾಡಿದ ಆಹಾರವನ್ನು ನಮ್ಮ ಹೊಟ್ಟೆಯ ಭಾಗ ಜೀರ್ಣ ಮಾಡಿದರೆ ಅದರಲ್ಲಿರುವ ಪೌಷ್ಟಿಕ ಸತ್ವಗಳನ್ನು ಹೀರಿಕೊಂಡು ಬೇಡದಿರುವ ತ್ಯಾಜ್ಯವನ್ನು ಮಲದ ರೂಪದಲ್ಲಿ ಹೊರ ಹಾಕಲು ಅನುಕೂಲ ಮಾಡಿಕೊಡುವುದು ನಮ್ಮ ಕರುಳು. ಇಂತಹ ಬಹುಮುಖ್ಯವಾದ ಅಂಗಾಂಗದಲ್ಲಿ ಹುಳುಗಳು ಸೇರಿಕೊಂಡರೆ ನಮ್ಮ ಆಹಾರದಲ್ಲಿ ಸಿಗುವಂತಹ ಪೌಷ್ಟಿಕ ಸತ್ವಗಳನ್ನು ಅವು ಸೇವನೆ ಮಾಡಿ ನಮ್ಮ ದೇಹಕ್ಕೆ ಯಾವುದೇ ಸತ್ವಗಳು ಸಿಗದೆ ಇರುವಂತೆ ಮಾಡುತ್ತವೆ.


ಇದರಿಂದ ನಾವು ಯಾವುದೇ ಬಗೆಯ ಆಹಾರ ಸೇವನೆ ಮಾಡಿದರೂ ಅದು ನಮ್ಮ ದೇಹಕ್ಕೆ ಯಾವುದೇ ಪ್ರಯೋಜನ ಸಿಗದಂತೆ ಇರುತ್ತದೆ. ನಮ್ಮ ದೈಹಿಕ ಬೆಳವಣಿಗೆಯಲ್ಲಿ ಹಾಗೂ ಮಾನಸಿಕ ಅಭಿವೃದ್ಧಿಯಲ್ಲಿ ಜೊತೆಗೆ ದೇಹದ ರಕ್ತ ಸಂಚಾರದಲ್ಲಿ ಕೂಡ ಇದರಿಂದ ಸಾಕಷ್ಟು ತೊಂದರೆ ಎದುರಾಗಬಹುದು.


ಹೀಗಾಗಿ ಸಾಧ್ಯವಾದಷ್ಟು ಉತ್ತಮ ಆಹಾರ ಪದ್ಧತಿಯನ್ನು ಹೊಂದುವ ಜೊತೆಗೆ ಕರುಳಿನ ಆರೋಗ್ಯವನ್ನು ಹೆಚ್ಚಿಸುವಂತಹ ಆಹಾರಗಳನ್ನು ಸೇವನೆ ಮಾಡಬೇಕು. ಇದರ ಜೊತೆಗೆ ಕರುಳಿನ ಭಾಗದ ಹುಳುಗಳನ್ನು ಮತ್ತು ಸೋಂಕುಗಳನ್ನು ನಿವಾರಣೆ ಮಾಡಿಕೊಳ್ಳುವ ತಂತ್ರವನ್ನು ಅನುಸರಿಸಬೇಕು.


ಬನ್ನಿ ಈ ಲೇಖನದಲ್ಲಿ ಈ ವಿಷಯದ ಬಗ್ಗೆ ನೀಡಲಾಗಿರುವ ಸಮಗ್ರವಾದ ಹಾಗೂ ಉಪಯುಕ್ತವಾದ ಮಾಹಿತಿಯನ್ನು ನಾವೆಲ್ಲರೂ ತಿಳಿದುಕೊಳ್ಳೋಣ.


​ಕುಂಬಳಕಾಯಿ ಬೀಜಗಳ ಪ್ರಯೋಗ ಮಾಡಿ ನೋಡಿ


ಕುಂಬಳಕಾಯಿ ಬೀಜಗಳನ್ನು ಸಾಂಪ್ರದಾಯಿಕವಾಗಿ ಕರುಳಿನ ಭಾಗದ ಹುಳುಗಳನ್ನು ನಾಶಪಡಿಸಲು ಬಳಸುತ್ತಾರೆ. ಈ ಹಿಂದೆಯೂ ಕೂಡ ಆಯುರ್ವೇದ ಪ್ರಕಾರಗಳಲ್ಲಿ ಕುಂಬಳಕಾಯಿ ಬೀಜಗಳಿಗೆ ಅವುಗಳ ಔಷಧಿಯ ಪ್ರಭಾವದಿಂದ ಉತ್ತಮವಾದ ಮನ್ನಣೆ ಸಿಕ್ಕಿದೆ.

ಇದಕ್ಕಾಗಿ ನೀವು ಕುಂಬಳಕಾಯಿ ಬೀಜಗಳನ್ನು ಕುಂಬಳಕಾಯಿ ಕಡೆಯಿಂದ ಬೇರ್ಪಡಿಸಿಕೊಂಡು ಅದರಿಂದ ಪಾನಿಯವನ್ನು ತಯಾರು ಮಾಡಿ ಕುಡಿಯಬಹುದು. ಅಥವಾ ಅವುಗಳನ್ನು ಜಜ್ಜಿಕೊಂಡು ನೀವು ತಯಾರುಮಾಡುವ ಯಾವುದಾದರೂ ಹಣ್ಣುಗಳ ಪಾನೀಯದ ಜೊತೆಗೆ ಮಿಶ್ರಣ ಮಾಡಿ ಸೇವನೆ ಮಾಡಬಹುದು.

ಇನ್ನೊಂದು ವಿಧಾನದಲ್ಲಿ ಒಣಗಿದ ಕುಂಬಳಕಾಯಿ ಬೀಜಗಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಅದನ್ನು ಸೋಯಾ ಹಾಲಿನ ಜೊತೆ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಜಜ್ಜಿದ ಈರುಳ್ಳಿ ಹಾಕಿ ಆನಂತರ ಸೇವನೆ ಮಾಡಿ.


​ಪರಂಗಿ ಹಣ್ಣಿನ ರಸ ಸೇವನೆ ಮಾಡಿ


ಪರಂಗಿ ಹಣ್ಣಿನಲ್ಲಿ 'ಪಪಾಯಿನ್' ಎನ್ನುವ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕಾರಿಯಾಗಿ ಕೆಲಸ ಮಾಡುವ ಅಂಶ ಅಡಗಿದೆ. ಪರಂಗಿ ಹಣ್ಣಿನ ಬೀಜಗಳು ಅಥವಾ ಹಸಿ ಪರಂಗಿಕಾಯಿ ಕರುಳಿನ ಭಾಗದ ಹುಳುಗಳಿಗೆ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುತ್ತದೆ.


ಪರಂಗಿ ಹಣ್ಣಿನ ತಿರುಳನ್ನು ತೆಗೆದುಕೊಂಡು ಅದರಿಂದ ರಸವನ್ನು ತಯಾರು ಮಾಡಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆಳೆಸಿಕೊಂಡು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಕರುಳಿನ ಭಾಗದಲ್ಲಿರುವ ಹುಳುಗಳು ಸತ್ತು ಹೋಗಿ ಮಲ ವಿಸರ್ಜನೆಯ ಮೂಲಕ ದೇಹದಿಂದ ಹೊರಗೆ ಬರುತ್ತವೆ.


ಅದಾದ ನಂತರದಲ್ಲಿ ನೀವು 1 ಟೀ ಚಮಚ ಹರಳೆಣ್ಣೆಯನ್ನು ತೆಗೆದುಕೊಂಡು ಅದನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಪರಂಗಿ ಹಣ್ಣಿನ ಜ್ಯೂಸ್ ಕುಡಿದ ನಂತರ 30 ನಿಮಿಷಗಳು ಹಾಗೆ ಇದ್ದು ಇದನ್ನು ಸೇವಿಸಬೇಕು. ನಿರಂತರವಾಗಿ ಎರಡು ದಿನಗಳ ಕಾಲ ಹೀಗೆ ಮಾಡುವುದರಿಂದ ನಿಮ್ಮ ಕರುಳಿನ ಭಾಗದ ಸೋಂಕುಗಳಿಂದ ನಿಮಗೆ ಮುಕ್ತಿ ಸಿಗುತ್ತದೆ.


​ದಾಳಿಂಬೆ ಹಣ್ಣಿನ ಸಿಪ್ಪೆ ಪ್ರಯೋಗಿಸಿ


ದಾಳಿಂಬೆ ಹಣ್ಣಿನ ಮೇಲ್ಭಾಗದ ಸಿಪ್ಪೆ ಹಾಗೂ ಒಳಭಾಗದ ಒಗರಾದ ತಿರುಳು ಕರುಳಿನ ಭಾಗಕ್ಕೆ ತುಂಬಾ ಸಹಕಾರಿ. ಕರುಳಿನ ಆರೋಗ್ಯವನ್ನು ಕಾಪಾಡುವ ಜೊತೆಗೆ ಕರುಳಿನ ಭಾಗದಲ್ಲಿ ಕಂಡುಬರುವ ಹುಳುಗಳು ಮತ್ತು ಅವುಗಳ ಕಾರಣದಿಂದ ಉಂಟಾಗುವ ಸೋಂಕನ್ನು ಸುಲಭವಾಗಿ ನಿಯಂತ್ರಣ ಮಾಡುತ್ತದೆ.


ದಾಳಿಂಬೆ ಹಣ್ಣಿನ ಮೇಲ್ಭಾಗದ ಸಿಪ್ಪೆಯನ್ನು ಪುಡಿಮಾಡಿಕೊಂಡು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.


​ಬೆಳ್ಳುಳ್ಳಿ ಸೇವನೆ ಮಾಡಿ


ಬೆಳ್ಳುಳ್ಳಿಯಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಆಂಟಿಬಯೋಟಿಕ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳು ಸಾಕಷ್ಟಿವೆ. ಕೇವಲ ಕರುಳಿನ ಭಾಗದ ಸೋಂಕು ಮಾತ್ರವಲ್ಲದೆ ಇಡೀ ದೇಹವನ್ನು ಸೋಂಕು ಮುಕ್ತವಾಗಿಸುವ ಗುಣಲಕ್ಷಣ ಬೆಳ್ಳುಳ್ಳಿಯಲ್ಲಿ ಕಂಡುಬರುತ್ತದೆ.


ಹೀಗಾಗಿ ಒಂದು ವೇಳೆ ನಿಮ್ಮ ಕರುಳಿನ ಭಾಗದಲ್ಲಿ ಸೋಂಕುಗಳು ಉಂಟಾಗಿವೆ ಎಂದು ನಿಮಗೆ ಅನಿಸಿದರೆ, ಬೆಳ್ಳುಳ್ಳಿಯನ್ನು ತುರಿದು ಅಥವಾ ಜಿಜ್ಜಿ ಹಸಿಯಾಗಿ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಎರಡು-ಮೂರು ದಿನಗಳಲ್ಲಿ ನಿಮ್ಮ ಕರುಳಿನ ಭಾಗ ಸ್ವಚ್ಛವಾಗುತ್ತದೆ ಮತ್ತು ಕರುಳಿನ ಹುಳುಗಳು ಸಾಯುತ್ತವೆ.


ಕರುಳಿನ ಆರೋಗ್ಯ ಹದಗೆಟ್ಟರೆ ನಿಮ್ಮ ದೇಹದ ಸಂಪೂರ್ಣ ಆರೋಗ್ಯ ಹದಗೆಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ನೈಸರ್ಗಿಕ ರೀತಿಯಲ್ಲಿ ನಿಮ್ಮ ಕರುಳಿನ ಭಾಗದ ಹುಳುಗಳಿಂದ ಮುಕ್ತಿ ಪಡೆದುಕೊಳ್ಳಿ. ಒಂದು ವೇಳೆ ಇದಕ್ಕೂ ಸಹ ನಿಮಗೆ ಪರಿಹಾರ ಸಿಗದೇ ಇದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

***


No comments:

Post a Comment