SEARCH HERE

Tuesday 30 November 2021

ಧನುರ್ ಮಾಸ ಆದಿರಂಗ ಮಧ್ಯರಂಗ ಅಂತ್ಯರಂಗ

 ಧನುರ್ ಮಾಸದಲ್ಲಿ  

3 ರಂಗಗಳನ್ನು 24⌚ಗಂಟೆಯೊಳಗೆ ನೋಡಬೇಕೆಂಬ ಪ್ರತೀತಿ ಇದೆ. 

ಯಾರು  ನೋಡಿಲ್ಲವೋ 

ಅವರು 

ಆದಿ ರಂಗ, ಶ್ರೀರಂಗಪಟ್ಟಣ.

ಮಧ್ಯರಂಗ, ಶಿವನಸಮುದ್ರ. 

ಅಂತ್ಯರಂಗ, ಶ್ರೀರಂಗಂ. 

ದೇವರುಗಳನ್ನು 4 ಸೆಕೆಂಡುಗಳಲ್ಲಿ ನೋಡಿ ಆನಂದಿಸಿ,

ದೇವರ ಕೃಪೆಗೆ ಪಾತ್ರರಾಗಿ

ಆದಿ, ಮಧ್ಯ ಹಾಗೂ ಅಂತ್ಯ ರಂಗಗಳ ಶ್ರೀರಂಗನಾಥ


ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ ದೇವಸ್ಥಾನಗಳು ನಮ್ಮ ನಾಡಿನಲ್ಲಿವೆ. ಇವುಗಳಲ್ಲಿ ವಿಶೇಷವಾಗಿವೆ  ‌      ‌       ‌                                                ‌                                                         ರಂಗನಾಥನ ತ್ರಿರಂಗ ಕ್ಷೇತ್ರಗಳು.

 ‌                                                                                                                    ರಂಗನಾಥನ ಈ ತ್ರಿರಂಗ ಕ್ಷೇತ್ರಗಳು ಆದಿ ರಂಗ, ಮಧ್ಯ ರಂಗ ಹಾಗೂ ಅಂತ್ಯ ರಂಗಗಳೆಂದು ಪ್ರಸಿದ್ಧವಾಗಿದ್ದು ಕಾವೇರಿ ನದಿಯಗುಂಟ ರೂಪಿತವಾದ ಮೂರು ದ್ವೀಪಗಳಲ್ಲಿ ನೆಲೆಸಿವೆ. ಒಂದು ನಂಬಿಕೆಯ ಪ್ರಕಾರ, ಕ್ರಮವಾಗಿ ಈ ಮೂರು ಸ್ಥಳಗಳಲ್ಲಿ ನೆಲೆಸಿರುವ ರಂಗನಾಥನನ್ನು ದರ್ಶಿಸಿದರೆ ಎಲ್ಲಾ ಪಾಪ-ಕರ್ಮಗಳು ನಾಶ ಹೊಂದಿ ಭಗವಂತನ ಕೃಪೆ ಉಂಟಾಗುತ್ತದೆ ಎನ್ನಲಾಗಿದೆ.


ಆ ಮೂರು ರಂಗ ಕ್ಷೇತ್ರಗಳು ಯಾವುವು ಹಾಗೂ ಅವೆಲ್ಲೆಲ್ಲಿವೆ ಎಂಬುದರ ಕುರಿತು ತಿಳಿಯೋಣ.

‌       

 ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ಆದಿ ರಂಗವಾಗಿ, ಶಿವನ ಸಮುದ್ರದ ರಂಗನಾಥ ಸ್ವಾಮಿಯು ಮಧ್ಯ ರಂಗನಾಗಿಯೂ ಹಾಗೂ ತಮಿಳುನಾಡಿನ ಶ್ರೀರಂಗವು ಅಂತ್ಯ ರಂಗವಾಗಿದೆ. ಈ ಮೂರೂ ಸ್ಥಳಗಳಲ್ಲಿ ಇರುವ ರಂಗನಾಥಸ್ವಾಮಿ ದೇವಸ್ಥಾನಗಳು ಕಾವೇರಿ ನದಿಯಿಂದ ಸುತ್ತುವರಿಯಲ್ಲಪಟ್ಟಿವೆ. ಹೀಗಾಗಿ ಇವುಗಳನ್ನು ಮೊದಲನೆ, ಎರಡನೆ ಮತ್ತು ಮೂರನೆ ದ್ವೀಪಗಳೆನ್ನುತ್ತಾರೆ. ಮೂರು ರಂಗನ ದರ್ಶನವನ್ನು ಏಕದಿನದಲ್ಲಿ ಮಾಡಿದರೆ ಪುಣ್ಯ ಹೆಚ್ಚು...                            ‌    ‌      ‌           ‌                           ‌    ‌    ‌     ‌     ‌     ‌     ‌                                                                   ಶ್ರೀರಂಗಪಟ್ಟಣ:

ಮೂರು ರಂಗಗಳ ಪೈಕಿ ಮೊದಲನೆಯ ಆದಿ ರಂಗವೇ ಈ ಕ್ಷೇತ್ರ. ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ.


 ಶ್ರೀರಂಗಪಟ್ಟಣದ ಅತ್ಯಂತ ಆಕರ್ಷಕ ಪ್ರವಾಸಿ ಸ್ಥಳ ಹಾಗೂ ಪೌರಾಣಿಕ ಕೇಂದ್ರವೆಂದರೆ ಸುಪ್ರಸಿದ್ದ "ಶ್ರೀರಂಗನಾಥ ಸ್ವಾಮಿಯವರ ದೇವಾಲಯ" ಶ್ರೀರಂಗನಾಥ ಸ್ವಾಮಿಯವರ ದೇವಾಲಯವೂ ವಿಶಾಲವಾದ ಪ್ರದೇಶದಲ್ಲಿ ಬಹಳ ವಿಸ್ತಾರವಾಗಿ ಮೂರು ಹಂತ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿರುತ್ತದೆ.  ‌    ‌     ‌       ‌                                                                                                                                                                                                                         ಶ್ರೀರಂಗನಾಥ ಸ್ವಾಮಿಯವರ ದೇವಾಲಯ ಗರ್ಭಗುಡಿಯು ಕ್ರಿ.ಶ 894ರಲ್ಲಿ ಗಂಗರ  ಮುಖ್ಯಸ್ಥ ಶ್ರೀ ತಿರುಮಲಯ್ಯ ಎಂಬುವವರಿಂದ ನಿರ್ಮಿಸಲ್ಪಟ್ಟಿತ್ತೆಂದು ತಿಳಿಸುತ್ತದೆ. ಇತಿಹಾಸ ಆನಂತರ ವಿಜಯನಗರದ ಅರಸರ ಕಾಲದಲ್ಲಿ ನವರಂಗ ಮುಖಮಂಟಪ, ದೇವಾಲಯದ ರಾಜಗೋಪುರವು ನಿರ್ಮಾಣವಾಗಿರುವುದಾಗಿ ತಿಳಿದು ಬಂದಿದೆ ಮೂರನೇ ಹಂತ ಪಾತಾಳಂಕಣದ ಮುಂದಿನ ಭಾಗ  ಹೈದರಾಲಿಯವರ ಕಾಲದಲ್ಲಿ ಗರ್ಭಗುಡಿಗೆ ಸೇರಿದಂತೆ ಸುತ್ತು ಶ್ರೀ ವಿಷ್ಣುವಿನ ವಿವಿಧ ಅವತಾರದ ಸುಂದರ ವಿಗ್ರಹಗಳ ಗುಡಿಗಳಲ್ಲದೇ ರಾಮಾನುಜಾಚಾರ್ಯರು, ಶ್ರೀ ವೇದಾಂತ ದೇಶಿಕರು ಹಾಗೂ ಶ್ರೀ ಜೀಯರ್ ರವರ ಗುಡಿಗಳಲ್ಲದೆ ವಿವಿಧ ಆಳ್ವಾರರ ಗುಡಿಗಳೂ ಸಹ ಇವೆ. ಶ್ರೀರಂಗನಾಥ ಸ್ವಾಮಿಯವರ ಗರ್ಭಗುಡಿಯ ಪಕ್ಕದಲ್ಲಿ ಶ್ರೀ ಮಹಾಲಕ್ಷೀ ಅಮ್ಮನವರು ಶ್ರೀರಂಗನಾಯಕಿ ನಾಮಾಕಿಂತ ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿರುತ್ತಾರೆ . 


ಶ್ರೀರಂಗನಾಥ ಸ್ವಾಮಿಯವರ ದೇವಾಲಯವನ್ನು ಪೌರಾಣಿಕ ಹಿನ್ನೆಲೆಯಿಂದ ಗಮನಿಸಿದಾಗ ಶ್ರೀರಂಗ ಕ್ಷೇತ್ರ ಸುತ್ತಲೂ ಹರಿಯುವ ಕಾವೇರಿ ಮಾತೆಯ ಪ್ರಾರ್ಥನೆಯ ಮೇರೆಗೆ ಹಾಗೂ ಶ್ರೀ ಗೌತಮ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶ್ರೀಮಹಾವಿಷ್ಣುವು ಶ್ರೀರಂಗನಾಥ ನಾಮಂಕಿತರಾಗಿ ಈ ಕ್ಷೇತ್ರದಲ್ಲಿ ನೆಲೆಸಿರುವುದಾಗಿ ಶ್ರೀ ವ್ಯಾಸ ಮಹರ್ಷಿ ಪ್ರಣೀತ ಶ್ರೀ ಬ್ರಹ್ಮಾಂಡ ಪುರಣಾದಲ್ಲಿ ಉಕ್ತವಾಗಿದೆ. ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟ ಮೂರು ರಂಗ ಕ್ಷೇತ್ರಗಳಲ್ಲಿ ಆದಿರಂಗನಾಗಿಯೂ , ಶ್ರೀಮತ್ ಪಶ್ಚಿಮ ರಂಗನಾಥನಾಗಿಯೂ, ಗೌತಮ ಕ್ಷೇತ್ರವೆಂದೂ ಸಹ ಕ್ಷೇತ್ರವನ್ನು ಕರೆಯುತ್ತಾರೆ. 


ಶ್ರೀರಂಗನಾಥ ಸ್ವಾಮಿಯವರ ದೇವಾಲಯದಲ್ಲಿ ಪ್ರತಿ ಮಾಹೆಯಲ್ಲೂ ಸಹ ವಿವಿಧ ಉತ್ಸವಗಳು , ವಿಶೇಷ ಪೂಜೆಗಳು ನಡೆಯುತ್ತವೆಯಾದರೂ ಈ ಕೆಳಕಂಡಂತೆ ತಿಳಿಸಿರುವ ಉತ್ಸವ ಹಾಗೂ ವಿಶೇಷ ಪೂಜೆಗಳೂ ಮಹತ್ವ ಪಡೆದು ಜನರನ್ನು ಆಕರ್ಷಿಸುತ್ತಿದೆ, 


ಶ್ರೀರಂಗನಾಥಸ್ವಾಮಿಯವರ ದೇವಾಲಯವನ್ನು ಪ್ರತಿನಿತ್ಯ ಬೆಳಿಗ್ಗೆ 7,30 ಗಂಟೆಗೆ ಶ್ರೀ ಸ್ವಾಮಿಯವರೆಗೆ ಸುಪ್ರಭಾತ ಸೇವೆಯ ನಂತರ ಭಕ್ತಾದಿಗಳ ದರ್ಶನಕ್ಕೆ ತೆರೆಯಲಾಗುವುದು. ಆನಂತರ ಬೆಳಿಗ್ಗೆ 8.30 ರಿಂದ 9.30 ವರಗೆ ಶ್ರೀರಂಗನಾಥಸ್ವಾಮಿ ಹಾಗೂ ಶ್ರೀರಂಗನಾಯಕಿ ಅಮ್ಮನವರಿಗೆ ಆರಾಧನೆ ಮತ್ತು ಶಾತ್ತು ಮುರೈ ಪೂಜೆನಂತರ ಭಕ್ತಾದಿಗಳಿಗೆ ದರ್ಶನಕ್ಕೆ ಮಧ್ಯಾಹ್ನ 1,30 ಗಂಟೆಯವರೆವಿಗೂ ತೆರದಿಡಲಾಗುವುಗುವುದು ಪುನಃ ಸಾಯಂಕಾಲ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಶ್ರೀಯವರ ದೇವಾಲಯದ ಬಾಗಿಲನ್ನು ತೆರೆಯಲಾಗುವುದು, ಸಾಯಂಕಾಲ 7 ಗಂಟೆಯಿಂದ 8 ಗಂಟೆವರೆಗೆ ಆರಾಧನೆ ಹಾಗೂ ಶಾತ್ತುಮುರೈ ಪಾರಾಯಣಾದಿ ಸೇವೆಗಳು ಜರಗುತ್ತದೆ.                                       ‌   ‌    ‌     ‌                                           ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ. ದರ್ಶನದ ವೇಳೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 01.00 ಘಂಟೆ ಹಾಗೂ ಸಂಜೆ 4.00 ಘಂಟೆಯಿಂದ ರಾತ್ರಿ 8.00 ಘಂಟೆಯವರೆಗೆ.


ಶಿವನಸಮುದ್ರಂ:

ತ್ರಿರಂಗ ಕ್ಷೇತ್ರಗಳ ಎರಡನೆಯ ಕ್ಷೇತ್ರ ಮಧ್ಯ ರಂಗವಾಗಿದ್ದು ಇದು ಶಿವನಸಮುದ್ರಂ ಪಟ್ಟಣದಲ್ಲಿದೆ. ಶ್ರೀರಂಗಪಟ್ಟಣದಿಂದ ಮಳವಳ್ಳಿ ಮಾರ್ಗವಾಗಿ 87 ಕಿ.ಮೀ ಗಳಷ್ಟು ದೂರದಲ್ಲಿ ಈ ಕ್ಷೇತ್ರವನ್ನು ತಲುಪಬಹುದು. ಸಾಂಕೇತಿಕವಾಗಿ ಇದು ವಿಷ್ಣುವಿನ ಯೌವ್ವನಾವಸ್ಥೆಯನ್ನು ಸೂಚಿಸುವುದರಿಂದ ಇಲ್ಲಿರುವ ರಂಗನ ದೇವಸ್ಥಾನವನ್ನು ಮೋಹನರಂಗ ಅಥವಾ ಜಗನ್ಮೋಹನ ರಂಗ ದೇವಸ್ಥಾನ ಎಂತಲೂ ಕರೆಯುತ್ತಾರೆ.

                                                                                                                              ಮಂಡ್ಯ ಜಿಲ್ಲೆ ಮಳವಳ್ಳಿ ಯ ಶಿವನಸಮುದ್ರದ ಬಳಿ ಇರುವ ಶ್ರೀರಂಗನಾಥಸ್ವಾಮಿ ಮಧ್ಯ ರಂಗನೆಂದು ಪ್ರಸಿದ್ಧಿ. 


ಸ್ಥಳ ಪುರಾಣ


ಕೃತಯುಗದ ಕಾಲದಲ್ಲಿಯೇ ಸ್ಥಾಪಿತಗೊಂಡ ದೇವಸ್ಥಾನವಿದು. ಭಕ್ತರ ಕಣ್ಮನ ಸೆಳೆಯುವುದರಿಂದ ಜಗನ್ಮೋಹನ ಶ್ರೀರಂಗನಾಥಸ್ವಾಮಿ ಎಂಬ ಹೆಸರು. ಶ್ರೀರಂಗನಾಥಸ್ವಾಮಿಗೆ ಹೂವಿನ ಹಾರದಂತೆ ಸುತ್ತುವರಿದು ಹರಿಯುತ್ತಿದ್ದ ಕಾವೇರಿ ನದಿಯ ಹರಿವಿಗೆ ಹೆಬ್ಬಂಡೆ ರೂಪದಲ್ಲಿ ರಾಕ್ಷಸ ಅಡ್ಡಿಯಾಗಿರುತ್ತಾನೆ. ಆಗ ಶಿವನು ರಾಕ್ಷಸನನ್ನು ಸಂಹಾರ ಮಾಡಿದಾಗ ಬಂಡೆ ಛಿದ್ರವಾಗುತ್ತದೆ, ಮತ್ತು ಕಾವೇರಿ ಸುಗಮವಾಗಿ ಹರಿಯಲು ಹಾದಿಯಾಗುತ್ತದೆ. ಹೀಗಾಗಿ ಇದು ಶಿವನ ಸಮುದ್ರ.


ಬಹಳ ಹಿಂದೆ ದೇವರಾಜನಾದ ದೇವೇಂದ್ರನಿಗೆ ಕಾರಣಾಂತರಗಳಿಂದ ಶಾಪವಾಗಿರುತ್ತದೆ. ಅದರ ವಿಮೋಚನೆಗಾಗಿ ಈ ಸ್ಥಳದಲ್ಲಿ  ಶ್ರೀ ವಿಷ್ಣುವಿನ ಶೇಷಶಯನ ರೂಪವನ್ನು ಭೂಲೋಕದ ಭಕ್ತರೂ ಕಾಣುವಂತೆ ಶ್ರೀರಂಗನಾಥನ ಸಾಲಿಗ್ರಾಮ ಶಿಲೆಯ ವಿಗ್ರಹವನ್ನು ಸ್ಥಾಪಿಸಲು ಸಪ್ತರ್ಷಿಗಳು ಸೂಚಿಸುತ್ತಾರೆ. ಅದರಂತೆ ಇಂದ್ರನು ಶ್ರೀರಂಗನಾಥಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಾನೆ. ಸಪ್ತರ್ಷಿಗಳು ಭರಚುಕ್ಕಿಯಲ್ಲಿರುವ ಕಾವೇರಿ ಜಲದಲ್ಲಿ ಪ್ರತಿ ದಿನ ಸಂಧ್ಯಾ ಸಮಯದಲ್ಲಿ ಪವಿತ್ರ ಸ್ನಾನ ಮತ್ತು ಸಂಧ್ಯಾವಂದನಾದಿ ವಿಧಿಗಳನ್ನು ಈಗಲೂ ಪೂರೈಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಸ್ಥಳವು ಸಪ್ತರ್ಷಿ ಕ್ಷೇತ್ರ ಎಂದೂ ಪ್ರಸಿದ್ಧಿ ಪಡೆದಿದೆ.


ಸರ್ಪಲೋಕದ ಒಡೆಯ ತಕ್ಷಕನು ಇಲ್ಲಿ ಕ್ಷೇತ್ರಪಾಲಕ. ದೇವಸ್ಥಾನದ ಒಳಗಡೆ ಎಡಭಾಗದಲ್ಲಿರುವ ಮೊದಲನೇ ವಿಗ್ರಹವೇ ತಕ್ಷಕನದು. ಶ್ರೀ ರಂಗನಾಥಸ್ವಾಮಿಯ ವಿಗ್ರಹದಿಂದ ೬೦ ಅಡಿಗಳ ಕೆಳಗೆ ಬಹಳ ವರ್ಷಗಳ ಹಿಂದೆ ಋಷಿಗಳು ‘ಅಮೃತಕುಂಭ’ ವನ್ನು ಸ್ಥಾಪಿಸಿದ್ದಾರೆ; ಪ್ರಳಯದ ನಂತರದಲ್ಲಿ ಈ ಕುಂಭವು ಇಡೀ ಜಗತ್ತನ್ನು ಪುನಶ್ಚೇತನಗೊಳಿಸುತ್ತದೆ ಎಂದು ಹೇಳಲಾಗಿದೆ. ಈಗ ಕುಂಭವು ಅಗಸ್ತ್ಯರ ಪತ್ನಿ ಲೋಪಮುದ್ರಾದೇವಿ, ದುರ್ಗಾದೇವಿ ಮತ್ತು ಆಂಜನೇಯಸ್ವಾಮಿ ಅವರುಗಳಿಂದ ಸಂರಕ್ಷಿಸಲ್ಪಟ್ಟಿದೆ. ಈ ದೇವಾಲಯದ ಇತಿಹಾಸದ ವಿವರಗಳನ್ನು ಬೆಂಗಳೂರಿನ ಹಲಸೂರಿನ ಸುಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಶಿಲಾ ಶಾಸನದಲ್ಲಿ ಕಾಣಬಹುದು.


ತಲಪುವುದು ಹೇಗೆ?


ಮಧ್ಯರಂಗವು ಬೆಂಗಳೂರಿನಿಂದ ಸುಮಾರು ೧೪೦ ಕಿ.ಮೀ. ದೂರದಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮದ್ದೂರು ತಲಪಿದ ಮೇಲೆ ಎಡಕ್ಕೆ ತಿರುಗಿ ಮದ್ದೂರು-ಕೊಳ್ಳೇಗಾಲ ರಸ್ತೆ ಸೇರುವುದು. ಮಳವಳ್ಳಿ ಮುಖಾಂತರ ಹೋಗಿ ಸತ್ತೇಗಾಲದಲ್ಲಿ  ಎಡಕ್ಕೆ ತಿರುಗಿದರೆ ದೇವಸ್ಥಾನ ಸಿಗುತ್ತದೆ.    ‌                                    ‌     ‌      ‌                                                              ‌                                                             ಶ್ರೀರಂಗಂ ಶ್ರೀರಂಗನಾಥಸ್ವಾಮಿ

 ‌                                                                                                  ಮೂಲತಃ ಶ್ರೀರಂಗಂ ಒಂದು ನಡುಗಡ್ಡೆ ಪ್ರದೇಶವಾಗಿದ್ದು ತಿರುಚ್ಚಿ ನಗರದ ಪ್ರಮುಖ ಭಾಗವಾಗಿ ನಿರ್ವಹಿಸಲ್ಪಡುತ್ತಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆ ಅತಿ ವಿಶಾಲವಾದ ಶ್ರೀರಂಗನಾಥಸ್ವಾಮಿಯ ದೇವಾಲಯ ಸಂಕೀರ್ಣ.


ಶ್ರೀರಂಗಂ ಒಂದು ಕಡೆಯಿಂದ ಕಾವೇರಿ ನದಿಯಿಂದ ಸುತ್ತುವರೆದಿದ್ದರೆ ಇನ್ನೊಂದು ಕಡೆಯಿಂದ ಕಾವೇರಿಯ ಉಪನದಿಯಾದ ಕೊಳ್ಳಿಡಂನಿಂದ ಸುತ್ತುವರೆದಿದೆ. ಕಾವೇರಿಗೆ ಅಡ್ಡಲಾಗಿ ಕಟ್ಟಲಾದ ವಿಶಾಲವಾದ ಸೇತುವೆಯಿಂದ ಶ್ರೀರಂಗಂ ಅನ್ನು ತಿರುಚ್ಚಿ ನಗರದಿಂದ ಪ್ರವೇಶಿಸಬಹುದು.


ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯವು ಹಿಂದೂಗಳಲ್ಲಿ ಅದರಲ್ಲೂ ವಿಶೇಷವಾಗಿ ಶ್ರೀವೈಷ್ಣವರಿಗೆ ಪವಿತ್ರ ಯಾತ್ರಾ ಕೇಂದ್ರವಾಗಿದ್ದು ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಸಹ ಸೆಳೆಯುತ್ತದೆ.


ದೇವಸ್ಥಾನ ಮಂಡಳಿಯ ವೆಬ್ ತಾಣದ ಪ್ರಕಾರ, ಇದನ್ನು ಪ್ರಸ್ತುತ ದೇಶದ ಕಾರ್ಯಚಟುವಟಿಕೆಯಲ್ಲಿರುವ ಅತಿ ದೊಡ್ಡ ಹಿಂದು ದೇವಾಲಯವೆಂದು ಪರಿಗಣಿಸಬಹುದಾಗಿದೆ.


ಸ್ಥಳ ಪುರಾಣದಂತೆ, ಕೆಲವೇ ಕೆಲವು ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳ ಪೈಕಿ ಶ್ರೀರಂಗಂ ಸಹ ಒಂದಾಗಿದೆ. ಆದ್ದರಿಂದ ಧಾರ್ಮಿಕವಾಗಿ ಬಹು ಮಹತ್ವವುಳ್ಳ ಯಾತ್ರಾ ಕೇಂದ್ರವಾಗಿ ಶ್ರೀರಂಗಂ ಹೆಸರುವಾಸಿಯಾಗಿದೆ.


ಇನ್ನೂ ಈ ದೇವಸ್ಥಾನದ ಗಾತ್ರಕ್ಕೆ ಬರುವುದಾದರೆ ಇದರ ಸಂಕೀರ್ಣ ವಿಶಾಲವಾಗಿದ್ದು 156 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಭವ್ಯವಾಗಿ ಹರಡಿದೆ. ಈ ಸಂಕೀರ್ಣದ ಸುತ್ತಳತೆಯೆ ಸುಮಾರು ನಾಲ್ಕು ಕಿ.ಮೀ ಗಳಷ್ಟೆಂದರೆ ನೀವೇ ಊಹಿಸಿಕೊಳ್ಳಬಹುದು.


ಈ ದೇವಾಲಯ ಸಂಕೀರ್ಣದಲ್ಲಿ ಒಟ್ಟು ಏಳು ಪ್ರಾಕಾರಗಳಿದ್ದು ಒಟ್ಟಾರೆಯಾಗಿ 21 ಸುಂದರ ಗೋಪುರಗಳಿವೆ. ಮುಖ್ಯ ದೇವಾಲಯದ ಗೋಪುರವು ರಾಜಗೋಪುರವಾಗಿದ್ದು ಇದು ಏಷಿಯಾದಲ್ಲೆ ಅತಿ ಎತ್ತರದ (236 ಅಡಿಗಳು) ಗೋಪುರ ಎಂಬ ಖ್ಯಾತಿಗೆ ಪಾತ್ರವಾಗಿದೆ.


ದಕ್ಷಿಣ ಭಾರತದ 12 ಪ್ರಸಿದ್ಧ ಅಳ್ವಾರ್ (ತಮಿಳು ಸಂತ ಕವಿಗಳು ಹಾಗೂ ವಿಷ್ಣುವನ್ನು ಪಾಲಿಸುವವರು) ಗಳ ಪೈಕಿ ಅಂಡಾಳ್ ಏಕೈಕ ಸ್ತ್ರೀ ಸಂತ ಕವಿಯಾಗಿದ್ದು ಅವಳಿಗೆ ಮುಡಿಪಾದ ದೇವಾಲಯವೊಂದು ಶ್ರೀರಂಗಂ ದೇವಾಲಯ ಸಂಕೀರ್ಣದಲ್ಲಿದೆ.


ಶ್ರೀರಂಗಂನ ರಂಗನಾಥಸ್ವಾಮಿಯ ಕುರಿತಂತೆ ಕುತೂಹಲಕರವಾದ ಹಿನ್ನಿಲೆಯೊಂದಿದೆ. ಹಿಂದೆ ರಾಮನು ಸೀತೆಯನ್ನು ಗೆದ್ದು ಅಯೋಧ್ಯೆಗೆ ಮರಳಿ ಬಂದು ರಾಜ್ಯಾಭಾರ ಮಾಡುತ್ತಿದ್ದಾಗ ಒಂದು ದಿನ ವಿಷ್ಣುವಿನ ಮೂರ್ತಿಗೆ ಪೂಜೆ ಸಲ್ಲಿಸಿ ಅದನ್ನು ಆಗ ಲಂಕಾ ದೊರೆಯಾಗಿದ್ದ ವಿಭೀಷಣನಿಗೆ ಅರ್ಪಿಸಿದ ಹಾಗೂ ಲಂಕೆಯನ್ನು ತಲುಪುವವರೆಗೂ ಆ ಮೂರ್ತಿಯನ್ನು ಎಲ್ಲಿಯೂ ಇಡಕೂಡದೆಂದು ಆಜ್ಞಾಪಿಸಿದ.


ಈ ರೀತಿಯಾಗಿ ವಿಭೀಷಣನು ಆ ರಂಗನ ವಿಗ್ರಹವನ್ನು ತೆಗೆದುಕೊಂಡು ಹೋಗುವಾಗ ಕಾವೇರಿ ನದಿ ಹರಿದ ಈಗಿನ ಶ್ರೀರಂಗಂನಲ್ಲಿ ಬೀಡು ಬಿಟ್ಟು ಮೂರ್ತಿಯನ್ನು ಅಲ್ಲಿಯೆ ಇರಿಸಿದ. ನಂತರ ತನ್ನ ಕಾರ್ಯಗಳನ್ನು ಪೂರೈಸಿದ ನಂತರ ಲಂಕೆಗೆ ಮರಳಲು ಸಿದ್ಧವಾದಾಗ ಮೂರ್ತಿಯನ್ನು ಕಿಂಚಿತ್ತೂ ಎತ್ತಲಾಗಲಿಲ್ಲ.


ಕೊನೆಗೆ ಭಕ್ತಿಯಿಂದ ವಿಷ್ಣುವನ್ನು ಬೇಡಿಕೊಂಡಾಗ ವಿಷ್ಣು ಪ್ರಸನ್ನನಾಗಿ ತನಗೆ ಈ ಕ್ಷೇತ್ರ ಇಷ್ಟವಾಗಿದ್ದು, ತಾನು ಇಲ್ಲಿಯೆ ನೆಲೆಸುವುದಾಗಿ, ಆದರೆ ದಕ್ಷಿಣಕ್ಕೆ ಮುಖ ಮಾಡಿ ನಿನ್ನನ್ನು ಸದಾ ಅಶೀರ್ವದಿಸುವುದಾಗಿ ಹೇಳಿದ. ಹೀಗಾಗಿ ಶ್ರೀರಂಗಂ ರಂಗನಾಥಸ್ವಾಮಿಯು ಶ್ರೀಲಂಕಾ ಇರುವ ದಿಕ್ಕಿನಲ್ಲಿ ಅಂದರೆ ದಕ್ಷಿಣಕ್ಕೆ ಮುಖ ಮಾಡಿ ನಿಂತಿದ್ದಾನೆ.                                            ‌         ‌       ‌                                             ‌   ‌                                                                                    ತಿರುಚ್ಚಿಯಿಂದ ಶ್ರೀರಂಗಂಗೆ ಬಸ್ ಸೌಲಭ್ಯವಿದೆ. ಚೆನ್ನೈ, ಕನ್ಯಾಕುಮಾರಿ, ಹೈದರಾಬಾದ್, ಬೆಂಗಳೂರು, ಕೋಯಮತ್ತೂರು, ಮೈಸೂರು, ಮಂಗಳುರು, ಕೊಚ್ಚಿ, ರಾಮೇಶ್ವರಂ, ತಂಜಾವೂರು, ಮದುರೈ, ಚಿದಂಬರಮ್, ತೂತುಕುಡಿ, ಕೊಲ್ಲಮ್, ತೆಂಕಸಿ ಮತ್ತು ತಿರುಪತಿಯಿಂದ ಬಸ್ ಸೌಕರ್ಯಗಳು ತಿರುಚ್ಚಿಗೆ ಇವೆ. ಶ್ರೀರಂಗಂನಲ್ಲಿರುವ ಈ ದೇವಾಲಯವು ತ್ರಿರಂಗಗಳ ಪೈಕಿ ಅತಿ ದೊಡ್ಡ ದೇವಾಲಯವಾಗಿರುವುದೂ ಅಲ್ಲದೆ ದೇಶದ ಅತಿ ದೊಡ್ಡ ದೇವಾಲಯಗಳ ಪೈಕಿಯೂ ಒಂದಾಗಿದೆ.

***


No comments:

Post a Comment