SEARCH HERE

Monday 13 December 2021

ಬಯಸುವ ಫಲ ಯಾವ ರಾಶಿಗೆ ಯಾವ ಸ್ತುತಿ prayer according to respective rashi

 



ಬಯಸುವ ಫಲ ಸಿಗಲಿಕ್ಕೆ ನೀವು ಯಾವ ದೇವರನ್ನು ಪೂಜಿಸಬೇಕು ?

ಹಿಂದೂ ಧರ್ಮದ ವಿಶಿಷ್ಟತೆ ಏನೆಂದರೆ ಇಲ್ಲಿ ಕೋಟ್ಯಾಂತರ ದೇವರುಗಳು ಇರುವುದು. ಪ್ರತಿಯೊಬ್ಬನಿಗೂ ಅವನ ಧರ್ಮದ, ಜಾತಿಯ, ಸಮುದಾಯದ, ಮನೆಯ ದೇವರು ಬೇರೆಬೇರೆ ಇರುತ್ತಾರೆ. ಆದರೆ, ನಂಬುತ್ತೀರೋ ಇಲ್ಲವೋ, ಹಿಂದೂ ಧರ್ಮದಲ್ಲಿ ಇರುವುದು ಮೂರು ದೈವೀ ಪಂಥಗಳು ಮಾತ್ರ. ಅವು ಯಾವುವು ಎಂದರೆ ಶೈವ (ಶಿವನನ್ನು ಪೂಜಿಸುವವರು), ವೈಷ್ಣವ (ವಿಷ್ಣುವನ್ನು ಪೂಜಿಸುವವರು) ಹಾಗೂ ಶಾಕ್ತ (ಶಕ್ತಿದೇವತೆಯನ್ನು ಪೂಜಿಸುವವರು). ಈ ಮೂವರು ದೇವರುಗಳ ನಾನಾ ಅವತಾರಗಳು, ನಾನಾ ಸ್ವರೂಪಗಳನ್ನೇ ನಾವು ಪೂಜಿಸುವುದು. ಮೇಲ್ನೋಟಕ್ಕೆ ಬೇರೆ ಎಂದು ಕಂಡರೂ, ಸೂಕ್ಷ್ಮವಾಗಿ ನೋಡಿದರೆ ನೀವು ಪೂಜಿಸುತ್ತಿರುವ ದೇವರು ಈ ಮೂವರಲ್ಲೇ ಒಬ್ಬರ ಅವತಾರ ಎಂಬುದು ನಿಮಗೆ ಗೊತ್ತಾಗುತ್ತದೆ.


ಪ್ರತಿ ಜನ್ಮರಾಶಿಗೂ ಒಂದು ನಕ್ಷತ್ರ ಇರುತ್ತದೆ. ಪ್ರತಿ ರಾಶಿಗೂ ಒಂದು ಗುಣಸ್ವಭಾವ, ಒಂದು ಪಂಚಭೂತ ಇರುವಂತೆ, ನಮ್ಮಿಂದ ಪೂಜೆಗೊಳ್ಳಬೇಕಾದ ದೇವತೆಯೂ ಒಂದಿರುತ್ತದೆ. ಆಯಾ ಜನ್ಮರಾಶಿಯವರು ತಮಗೆ ಸಂಬಂಧಿಸಿದ ದೇವತೆಗಳನ್ನು ನೆನೆದರೆ, ಧ್ಯಾನಿಸಿದರೆ, ಪೂಜಿಸಿದರೆ ಅವರು ಒಲಿಯುವುದು, ಪ್ರಸನ್ನರಾಗಿ ವರ ನೀಡುವುದು ಬಲುಬೇಗ. ಹಾಗಿದ್ದರೆ ನಿಮ್ಮ ರಾಶಿಯ ದೇವತೆ ಯಾರು, ತಿಳಿಯೋಣವೇ?


ಮೇಷ, ವೃಶ್ಚಿಕ, ಮಕರ, ಕುಂಭ


ಮೇಷ ಮತ್ತು ವೃಶ್ಚಿಕ ರಾಶಿಯನ್ನು ಆಳುವ ಗ್ರಹ ಮಂಗಳ.  ‌                            ‌    ‌                                                              ಮಕರ ಮತ್ತು ಕುಂಭ ರಾಶಿಯವರ ಗ್ರಹ ಶನಿ. ಈ ನಾಲ್ಕೂ ರಾಶಿಗಳಿಗೂ ಶಿವನೇ ಅಧಿದೇವತೆ. ಈತನಿಗೆ ನಮ್ಮ ಮೊದಲ ಪೂಜೆ ಸಲ್ಲಬೇಕು. ಹಾಗಂತ ಇತರ ದೇವತೆಗಳನ್ನು ಪೂಜಿಸಿದರೆ ಶಿವ ಕೋಪಿಸಿಕೊಳ್ಳುತ್ತಾನೆ ಎಂದೇನಿಲ್ಲ, ಆದರೆ ಶಿವ ಪಂಚಾಕ್ಷರಿಗಿಂತ ಅತ್ಯುತ್ತಮವಾದ ಮಂತ್ರ ಪಠಣ ನಮಗೆ ಬೇರಿನ್ನೊಂದಿಲ್ಲ. ಲಿಂಗಕ್ಕೆ ಅಭಿಷೇಕ, ಅರ್ಚನೆ ಮಾಡುವುದು, ಬಿಲ್ವಪತ್ರೆ ಸಮರ್ಪಿಸುವುದು, ಶಿವರಾತ್ರಿ ಜಾಗರಣೆ, ಶಿವಪೂಜೆ, ರುದ್ರಾಷ್ಟಕ ಪಠನ ಮುಂತಾದವುಗಳಿಂದ ಆತ ಸಂತುಷ್ಟನಾಗುತ್ತಾನೆ. ಶಿವ ದೇವಾಲಯಕ್ಕೆ ಭೇಟಿ ನೀಡಿದರೂ ಸಾಕು.


ತುಲಾ, ವೃಷಭ


ತುಲಾ ಮತ್ತು ವೃಷಭ ರಾಶಿಗಳನ್ನು ಆಳುವ ಗ್ರಹವೆಂದರೆ ಶುಕ್ರ. ಈ ಎರಡು ರಾಶಿಗಳಿಗೆ ಅಧಿದೇವತೆ ಮಹಾಲಕ್ಷ್ಮೀ. ಅಂತೆಯೇ ಇವರಿಗೆ ಮಹಾಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಆಗುವುದು ಬಲುಬೇಗ. ಇವರಿಗೆ ಬಾಳಿನಲ್ಲಿ ಕೆಲವೊಮ್ಮೆ ಧನಾಗಮನ ತಡವಾಗಬಹುದು. ಅದಕ್ಕೆ ಅವರು ಮಹಾಲಕ್ಷ್ಮಿಯನ್ನು ಪೂಜಿಸದಿರುವುದೇ ಕಾರಣವೆಂದು ತಿಳಿಯಬೇಕು. ಇವರಿಗೆ ವ್ಯಾಪಾರ ವ್ಯವಹಾರಗಳು ಚೆನ್ನಾಗಿ ಕೈ ಹಿಡಿಯಬಹುದು. ಶಕ್ತಿ ದೇವತೆಯ ಯಾವುದೇ ಅವತಾರವನ್ನೂ ಇವರು ಪೂಜಿಸಬಹುದು. ನವರಾತ್ರಿ ಪೂಜೆ, ಶಾರದಾ ಪೂಜೆ, ದುರ್ಗಾಪೂಜೆಗಳನ್ನು ಶಕ್ತ್ಯಾನುಸಾರ ಮಾಡಬೇಕು.  ದೇವಿಯ ಕೃಪೆ ಪಡೆಯಲು ವಿಶೇಷವಾಗಿ ಪ್ರಯತ್ನಿಸಬೇಕು.


ಮಿಥುನ, ಕನ್ಯಾ

      ‌                                                             ಮಿಥುನ ಮತ್ತು ಕನ್ಯಾ ಈ ಎರಡು ರಾಶಿಗಳಿಗೆ ಅಧಿಪತಿ ಗ್ರಹವು ಬುಧ. ಇವರ ಸುಖೀಜೀವನಕ್ಕೆ ಕಾರಣನಾಗುವ ದೇವರೆಂದರೆ ಶ್ರೀಮನ್ನಾರಾಯಣ. ಕ್ಷೀರಸಾಗರ ನಿವಾಸಿಯಾದ ಈತನು ಲಕ್ಷ್ಮೀಸಹಿತನಾಗಿ ಇರುವುದರಿಂದ, ಲಕ್ಷ್ಮೀಕಟಾಕ್ಷವೂ ಇವರಿಗೆ ಇದೆಯೆಂದು ತಿಳಿಯಬೇಕು. ಕೆಲವೊಮ್ಮೆ ಸಾಹೇಬರ ಹೆಂಡತಿಯನ್ನು ಪ್ರಸನ್ನೀಕರಿಸಿದರೆ ಸಾಹೇಬರ ಕೃಪೆಯೂ ಒಲಿಯುವ ಹಾಗೆ, ರಮಾದೇವಿಯ ಪೂಜೆಯಿಂದ ಶ್ರೀಮನ್ನಾರಾಯಣನೂ ಪ್ರಸನ್ನನಾಗುವ ಸಂಭವ ಇಲ್ಲದೇ ಇಲ್ಲ. ವಿಷ್ಣು ಅಥವಾ ಕೃಷ್ಣ ದೇವಾಲಯಗಳಿಗೆ ಭೇಟಿ ಕೊಡುವುದು, ವಿಷ್ಣುಪುರಾಣ ಓದುವುದು, ವಿಷ್ಣುವಿಗೆ ತುಳಸಿಯ ಪೂಜೆ ಇತ್ಯಾದಿಗಳಿಂದ ಒಲಿಸಿಕೊಳ್ಳಬಹುದು. ಓಂ ನಮೋ ಭಗವತೇ ವಾಸುದೇವಾಯ ಅಥವಾ ಓಂ ನಾರಾಯಣೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್‌ ಎಂಬ ಮಂತ್ರಗಳು ಶ್ರೇಯಸ್ಕರ. ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಸರ್ವ ಶ್ರೇಷ್ಠ.


ಕಟಕ


ಕಟಕ ರಾಶಿಯವರಿಗೆ ಅಧಿಪತಿಯಾದ ಗ್ರಹವು ಚಂದ್ರ ನು. ಇವರು ಪೂಜಿಸಬೇಕಾದ ದೇವತೆಯೆಂದರೆ ಗೌರಿ ಅಥವಾ ಪಾರ್ವತಿ. ಚಂದ್ರನು ಮನಸ್ಸಿನಲ್ಲಿ ಉಬ್ಬರವಿಳಿತಗಳಿಗೆ ಕಾರಣನಾಗುತ್ತಾನೆ. ಆದರೆ ಪಾರ್ವತಿಯು ಕರುಣಾಳು ಮಾತೆ. ಆಕೆಯನ್ನು ನೆನೆಯುವುದು ಪೂಜಿಸುವುದು ಪ್ರಾರ್ಥಿಸುವುದರಿಂದ ಮನಸ್ಸಿನ ಮೇಲೆ ಶಾಂತಿಯು ಪ್ರಭಾವ ಬೀರುತ್ತದೆ. ಪಾರ್ವತಿ ದೇವಿಯ ಉಪಾಸನೆಯಿಂದ ಶಿವನೂ ಪ್ರಸನ್ನನಾಗುವನು. ದೇವಿಸ್ತುತಿ, ಶ್ರೀ ಲಲಿತಾ ಸಹಸ್ರನಾಮಗಳ ಪಠನದಿಂದ ಮಂಗಳವಾಗುವುದು. ದುರ್ಗಾದೇವಿಯ ದೇವಾಲಯ ಹತ್ತಿರದಲ್ಲಿದ್ದರೆ ಭೇಟಿ ಕೊಡುವುದನ್ನು ತಪ್ಪಿಸಬೇಡಿ.

 

ಸಿಂಹ


ಸಿಂಹ ಜನ್ಮರಾಶಿಯವರಿಗೆ ಸೂರ್ಯನು ಅಧಿಪತಿಯಾಗುವ ಗ್ರಹ. ಸೂರ್ಯನ ಪ್ರಖರತೆಯನ್ನು ತಡೆದುಕೊಳ್ಳಬಲ್ಲ ದೇವಾಧಿದೇವ, ಕೈಲಾಸವಾಸಿಯಾದ ಈಶ್ವರನು ನಿಮ್ಮ ಅಧಿದೇವತೆ. ಈತನು ಸೂರ್ಯನ ಪ್ರಜ್ವಲತೆಯನ್ನು ಕಡಿಮೆ ಮಾಡಿ, ಜೀವನದಲ್ಲಿ ಶಾಂತಿ ನೆಮ್ಮದಿಗಳನ್ನು ಸಿಂಹ ರಾಶಿಯವರಿಗೆ ಕೊಡುವವನು. ಈಶ್ವರನು ಸುಲಭವಾಗಿ ಒಲಿಯುವವನಲ್ಲವಾದರೂ ನಿರಂತರ ಧ್ಯಾನ, ನೆನೆಯುವಿಕೆ, ಪೂಜೆ ಇತ್ಯಾದಿಗಳಿಂದ ಅವನನ್ನು ಪ್ರಸನ್ನ ಮಾಡಿಕೊಳ್ಳಬಹುದು.


ಧನಸ್ಸು, ಮೀನ


ಧನಸ್ಸು ಮತ್ತು ಮೀನ  ಈ ಎರಡೂ ರಾಶಿಯವರನ್ನು ಆಳುವ ಗ್ರಹನೆಂದರೆ ಗುರು. ಗುರುವಿಗೆ ಅಧಿದೇವತೆ ದೇವತೆಯೆಂದರೆ ಶ್ರೀ ದಕ್ಷಿಣಾಮೂರ್ತಿ. ದಕ್ಷಿಣಾಮೂರ್ತಿಯೂ ಕೂಡ ಶ್ರೀ ಶಿವ ದೇವರ ಒಂದು ಅವತಾರವೇ ಆಗಿದ್ದಾನೆ. ಈತನು ಬಹಳ ಪ್ರಭಾವಶಾಲಿಯಾದ ದೇವತೆಯಾಗಿದ್ದು, ನಿರ್ದಿಷ್ಟ ಪೂಜೆ ಮಂತ್ರಗಳಿಂದ ಅರ್ಚಿಸಿದರೆ ಈತನನ್ನು ಒಲಿಸಿಕೊಳ್ಳುವುದು ಏನೂ ಕಷ್ಟವಲ್ಲ. ದುಷ್ಟ ಶಕ್ತಿಗಳ ಭಯದಿಂದ ನಿಮ್ಮ ಫ್ಯಾಮಿಲಿಯನ್ನು ಈತನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾನೆ.

***


No comments:

Post a Comment