SEARCH HERE

Showing posts with label ವಿಶ್ವಾಸ- ಭಗವಂತ ಧರಿಸಿದ ಪಾದರೇಖೆಗಳ ವೈಶಿಷ್ಟ್ಯ. Show all posts
Showing posts with label ವಿಶ್ವಾಸ- ಭಗವಂತ ಧರಿಸಿದ ಪಾದರೇಖೆಗಳ ವೈಶಿಷ್ಟ್ಯ. Show all posts

Sunday, 13 December 2020

ಭಗವಂತ ಧರಿಸಿದ ಪಾದರೇಖೆಗಳ ವೈಶಿಷ್ಟ್ಯ

   ಭಗವಂತ ಧರಿಸಿದ ಪಾದರೇಖೆಗಳ ವೈಶಿಷ್ಟ್ಯ


ಶ್ರೀಮದ್ ಭಾಗವತ ತೃತೀಯ ಸ್ಕಂಧದಲ್ಲಿ ಸಂಚಿಂತಯೇತ್ ಭಗವತಶ್ಚರಣಾರವಿಂದಂ ವಜ್ರಂಕುಶಧ್ವಜಸರರುಹ ಲಾಂಛನಾಡ್ಯಮ್ ಎಂದಂತೆ ಅಂಕುಶ,ಧ್ವಜ ,ಪದ್ಮರೇಖೆಗಳೇ ಮೊದಲಾದ ಚಿಹ್ನೆಗಳಿಂದ ಕೊಡಿದ ಆ ಭಗವಂತನ ಪಾದಕಮಲವನ್ನು ಧ್ಯಾನಿಸಬೇಕು ಎಂದು ತಿಳಿಸಿದ್ದಾರೆ.

ಭಗವಂತನು ಪಾದದಲ್ಲಿ ಈ ವಜ್ರಾಂಕುಶಗಳೇ ಮೊದಲಾದ ರೇಖೆಗಳನ್ನು ಏಕೆ ಧರಿಸಿದ್ದಾನೆ ? ಅವುಗಳ ವೈಶಿಷ್ಟ್ಯವೇನೆಂಬುದನ್ನು ಶ್ರೀಆದಿತ್ಯ ಪುರಾಣಾಂತರ್ಗತ  ವೆಂಕಟೇಶ ಮಹಾತ್ಮೆಯಲ್ಲಿ ತಿಳಿಸಿದ್ದಾರೆ ಅವುಗಳ ಮಹಾತ್ಮೆಯನ್ನು ಒಂದೋಂದಾಗಿ ತಿಳಿಯೋಣ.


         🌷ವಜ್ರರೇಖೆ🌷


ಪಾದಪಂಕಜಮಾಹಾತ್ಮ್ಯಂ ಲಿಖಿತ್ಯೈವ ಸ್ವಹಸ್ತತಃ |

ಧಾತೃಣಾಂ ವೈಷ್ಣಾವಾಗ್ರೇಭ್ಯೋ ಮಹಾsಘೌಘಾದ್ರಿಭೇಧನಮ್ |

ಕರೋಮೀತಿ ಜ್ಞಾಪನಾಯ ವಜ್ರರೇಖಾಂ ಪದೇsಧರಃ ||


ಭಗವಂತನ ಪಾದಕಮಲಗಳ ಮಹಾತ್ಮೆಯನ್ನು ತಮ್ಮ ಕೈಗಳಿಂದ ಬರೆದು ಅದನ್ನು ಶ್ರೇಷ್ಠರಾದ ವಿಷ್ಣುಭಕ್ತರಿಗೆ ದಾನ ಕೊಡುವರೋ ಅವರಮಹತ್ತರವಾದ ಬ್ರಹ್ಮಹತ್ಯಾದಿ ಪಾಪಗಳ ಸಮೂಹವೆಂಬ ಪರ್ವತಗಳನ್ನೇ ಸೀಳುತ್ತೇನೆ ಎಂದು ತಿಳಿಸುವುದಕ್ಕಾಗಿ ಪಾದದಲ್ಲಿ ವಜ್ರರೇಖೆಯನ್ನು ಧರಿಸಿದ್ದಾನೆ .


       

       🌷ಅಂಕುಶರೇಖೆ🌷


ಮಾಹತ್ಮ್ಯಮರ್ಚಕಾನಾಂ ತು ಗಜಾನ್ ಕಾಮಾದಿಸಂಜ್ಞಿತಾನ್ |

ಅದಮ್ಯಾನ್ ದಮಯಾಮೀತಿ ಹ್ಯಂಕುಂಶಾಭ್ಯಾಂ ಪದೇsಧರಃ ||


ಭಗವಂತನ ಪಾದದ ಮಹಾತ್ಮೆಯ ಹಿರಿಮೆಯನ್ನು ಬರೆದು ಪೂಜಿಸುವವರ ಕಾಮ, ಕ್ರೋಧ ,ಮದ ,ಮತ್ಸರ ,ಮೋಹ , ಲೋಭಗಳೆಂಬ  ಹೆಸರುಳ್ಳ ನಿಗ್ರಹಿಸಲು ಆಶಕ್ಯಗಳಾದ ಮದ್ದಾನೆಗಳನ್ನು ದಮನಮಾಡುತ್ತೇನೆ ಎಂದು ತಿಳಿಸಿಕೊಡುವುದಕ್ಕಾಗಿ ಭಗವಂತನು  ಪಾದಪದ್ಮಗಳಲ್ಲಿ ಅಂಕುಶರೇಖೆಯನ್ನು ಧರಿಸಿದ್ದಾನೆ .


 ಆದಿತ್ಯಪುರಾಣೋಕ್ತ ವೆಂಕಟೇಶ ಮಹಾತ್ಮೆ 2-44

           

          🌷ಧ್ವಜ ರೇಖೆ🌷


ಶ್ರುತ್ವಾssದರೇಣ  ಸಂತುಷ್ಟಾನ್ ಭಕ್ತಾನ್ ಧ್ವಜವದುಚ್ಛ್ರಿತಾನ್ |

ಕರೋಮೀತಿ ಜ್ಞಾಪನಾಯ

ಧ್ವಜ-ರೇಖಾಂ ಪದೇsಧರಃ ||


ಭಗವಂತನ ಪಾದಮಾಹಾತ್ಮೆಯನ್ನು ಆದರದಿಂದ ಶ್ರವಣಮಾಡಿ ಸಂತುಷ್ಟರಾದ ಭಗವದ್ ಭಕ್ತರನ್ನು ಧ್ವಜಸ್ಥಂಭದಂತೆ ಎತ್ತರಕ್ಕೆ ಏರಿಸುತ್ತೇನೆಂದು ತಿಳಿಸಲು ಭಗವಂತನು ಪಾದದಲ್ಲಿ ಧ್ವಜರೇಖೆಯನ್ನು ಧರಿಸಿದ್ದಾನೆ .


             🌷ಪದ್ಮ ರೇಖೆ🌷


ಪಾದಮಾಹಾತ್ಮ್ಯವಕ್ತೃಣಾಂ ಉತ್ತಮೇ ಮಂದಿರೇ ಸದಾ |

ಪದ್ಮಯಾ ಭಾರ್ಯಯಾ ಸಾಕಂ ಪದ್ಮಜೇನ ಸುತೇನ ಚ ||


ಕುಟುಂಬೀ ಪದ್ಮನಾಭೋsಹಂ

ವಸಮಿತ್ಯೇವ ಸೂಚಯನ್ |

ಪದ್ಮರೇಖಾಂ ಪಾದಪಾದ್ಮೇ

ಪದ್ಮೇಶ ತ್ವಂ ಧರನ್ನಸಿ ||


ಲಕ್ಷ್ಮೀಪತಿಯಾದ ಭಗವಂತನು ತನ್ನ ಪಾದದ ಮಹಿಮೆಯನ್ನು ಹೇಳುವವರಿಗೆ  ಉತ್ತಮವಾದ ಮಂದಿರದಲ್ಲಿ ಪ್ರಿಯಳಾದ ಲಕ್ಷ್ಮೀದೇವಿಯರಿಂದಲೂ  ಪದ್ಮದಿಂದ ಹುಟ್ಟಿದ ಮಗನಾದ ಬ್ರಹ್ಮನಿಂದಲೂ ಕೂಡಿಕೊಂಡು ಕುಟುಂಬಿಯಾಗಿ ಪದ್ಮನಾಭನಾದ ನಾನು ಸದಾ ವಾಸಮಾಡುತ್ತೆನೆಂದು ಸೂಚಿಸಲು ಪಾದಪದ್ಮದಲ್ಲಿ ಪದ್ಮರೇಖೆಯನ್ನು ಧರಿಸಿದ್ದಾನೆ


            🌷ಗದಾರೇಖೆ🌷


ಪಾದಮಾಹತ್ಮ್ಯ ಧ್ಯಾತೃಣಾಮುದ್ರವಕರಾನ್ ಖಲಾನ್ ||

ದೈತ್ಯ -ರಕ್ಷಃ-ಪಿಶಾಚಾದೀನ್

ಕೂಷ್ಮಾಂಡ-ಬ್ರಹ್ಮ-ರಾಕ್ಷಸಾನ್ |

ಸಂಚೂರ್ಣಯಾಮಿತಿ ಹರೇ

ಗದಾ-ರೇಖಾಂಪದೇsಧರಃ ||


ಭಗವಂತನ ಪಾದದ ಮಹಾತ್ಮೆಯನ್ನು ಧ್ಯಾನಮಾಡುವವರಿಗೆ ಉಪದ್ರವ ಮಾಡತಕ್ಕ ದುಷ್ಟರಾದ ದೈತ್ಯರು ,ರಾಕ್ಷಸರು ,ಪಿಶಾಚರು ,ಕೂಷ್ಮಾಂಡರು ,ಬ್ರಹ್ಮರಾಕ್ಷಸರು ಇವರನ್ನು ಚೆನ್ನಾಗಿ ಪುಡಿ ಪುಡಿ ಮಾಡುತ್ತೇನೆಂದು ತಿಳಿಸುವುದಕ್ಕಾಗಿ ಪಾದದಲ್ಲಿ ಗದಾರೇಖೆಯನ್ನು ಧರಿಸಿದ್ದಾನೆ.


ಆದಿತ್ಯಪುರಾಣೋಕ್ತ ವೆಂಕಟೇಶಮಹಾತ್ಮೆ 2-34,35


           🌷ಶಂಖರೇಖೆ🌷


ಪಾದಮಾಹಾತ್ಮ್ಯ ಮಂತೃಣಾಂ ಸಾಂಗವೇದಚತುಷ್ಟಯಮ್ |

ಇತಿಹಾಸ ಪುರಾಣಾನಿ ಮಂತ್ರೋಪನಿಷದಾತ್ಮಕಾಃ

ಸರ್ವವಿದ್ಯಾಂ ದದಾಮೀತಿ ದರಾರೇಖಾಂ ಪದೇದರಃ ||


ಭಗವಂತನ ಪಾದಮಹಾತ್ಮೆಯನ್ನು ತಿಳಿದವರಿಗೆ ಷಡಂಗಸಹಿತಗಳಾದ( ಶೀಕ್ಷಾ ಕಲ್ಪೋ ನಿರುಕ್ತಂ ಚ ಛಂದೋ ವ್ಯಾಕರಣಂ ತಥಾ |

ಜ್ಯೋತಿಷಂ ಇತಿ ಷಡಂಗಾನಿ ||

ಶೀಕ್ಷಾ ,ಕಲ್ಪ ,ನಿರುಕ್ತ ,ಛಂದಸ್ ,ವ್ಯಾಕರಣ ,ಜ್ಯೋತಿಷ ಎಂದು ಆರು ವೇದಾಂಗಗಳು .)

ನಾಲ್ಕು. ವೇದ ,ಇತಿಹಾಸಪುರಾಣಗಳು ,ಮಂತ್ರ ,ಉಪನಿಷತ್ತುರೂಪವಾದ ಎಲ್ಲ ವಿದ್ಯೆಗಳನ್ನೂ ಕೊಡುವೆನೆಂದು ಶಂಖರೇಖೆಯನ್ನು ಪಾದದಲ್ಲಿ ಧರಿಸಿದ್ದಾನೆ .


ಆದಿತ್ಯಪುರಾಣೋಕ್ತ ವೆಂಕಟೇಶಮಹಾತ್ಮೆ 2-33


 ಭಗವಂತನನ್ನು ಕಂಡು ನಿಬ್ಬೆರಗಾದ ಧ್ರುವಕುಮಾರನು ಶ್ರೀಹರಿಯು ಅವನ ಕಪೋಲಗಳಿಗೆ ತನ್ನ ಶಂಖ ಸ್ಪರ್ಷವನ್ನು ಮಾಡಿದನು ಕೂಡಲೆ ಧ್ರುವನು ಭಗವಂತನನ್ನು ಸ್ತೋತ್ರ ಮಾಡಿದನೆಂಬುದು ಭಾಗವತ ಚತುರ್ಥಸ್ಕಂಧದಲ್ಲಿ ಪ್ರಸಿದ್ಧವಾಗಿದೆ .ಶಂಖವು ವಿದ್ಯೆಯನ್ನು ನಿಡುವುದು ಇಲ್ಲಿ ಸಿದ್ಧವಾಗಿದೆ .


           🌷ಚಕ್ರರೇಖೆ🌷


ಪಾದಮಾಹತ್ಮ್ಯ ಶ್ರೋತೃಣಾಂ ಭಕ್ತಾನಾಂ ಭಕ್ತವತ್ಸಲ |

ಮಹಾsಜ್ಞಾನ ತಮೋ ಭಿತ್ವಾ  ಕೃತ್ವಾ ಜ್ಞಾನಪ್ರಕಾಶನಮ್ |

ತನ್ಮಾರ್ಗದರ್ಶನಾರ್ಥಾಯಾ ಚಕ್ರರೇಖಾಂ ಪದೇsದರಃ ||


ಭಕ್ಚವತ್ಸಲನಾದ ಭಗವಂತನು ಪಾದದ ಮಹಿಮೆಯನ್ನು ಕೇಳತಕ್ಕ ಭಕ್ತರಿಗೆ ಮಹತ್ತಾದ ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸಿ ಜ್ಞಾನ ರೂಪ ಪ್ರಕಾಶವನ್ನು ಕೊಟ್ಟು ವೈಕುಂಠ ಮಾರ್ಗವನ್ನು ತೋರಿಸಲು ಅಥವಾ ತನ್ನ ವಿಷಯಕವಾದ ಸಮ್ಯಕ್ ಜ್ಞಾನವನ್ನು ಕರುಣಿಸಲು ಪಾದದಲ್ಲಿ ಚಕ್ರರೇಖೆ ಯನ್ನು. ಧರಿಸಿದ್ದಾನೆ .

ಆದಿತ್ಯಪುರಾಣೋಕ್ತ ವೆಂಕಟೇಶಮಹಾತ್ಮೆ 2-31,32


ಇಂಥ ಔಚಿತ್ಯಪೂರ್ಣವಾದ ರೇಖೆಗಳನ್ನು ಧರಿಸಿದ ಆ ಭಗವಂತನ ಪಾದಕಮಲಗಳನ್ನು ನಿತ್ಯದಲ್ಲಿ ಸರ್ವರೂ ಸ್ಮರಿಸುವವರಾಗಿ ಕೃತಾರ್ಥರಾಗಬೇಕು .

  

  || ಶ್ರೀಕೃಷ್ಣಾರ್ಪಣಾಮಸ್ತು ||

***