SEARCH HERE

Friday 9 April 2021

ಅದ್ವೈತ ಒಂದೇ ಬ್ರಹ್ಮ advaita one brahma only

ಬ್ರಹ್ಮವೇ ಸತ್ಯ. ಜಗತ್ತು ಮಿಥ್ಯ🕉
ಅದ್ವೈತ ತಾನಾಗಿ
ಇರುವುದು ಒಂದೇ ಬ್ರಹ್ಮ. ಅದು ಏಕಮೇವಾದ್ವಿತೀಯವಾದುದು. ದ್ವೈತ ಅಥವಾ ಎರಡು ಇಲ್ಲದ್ದು ಎಂದು ಅದ್ವೈತ ಸಿದ್ಧಾಂತವು ಸಾರುತ್ತದೆ. ಶಂಕರಾಚಾರ್ಯರು ಹೇಳುವ ಪ್ರಕಾರ ‘ಬ್ರಹ್ಮವೇ ಸತ್ಯ. ಜಗತ್ತು ಮಿಥ್ಯ. ಜೀವವೂ ಬ್ರಹ್ಮವೇ. ಅದಕ್ಕಿಂತ ಬೇರೆಯಿಲ್ಲ.’ ವಿಶ್ವದಲ್ಲಿರುವ ತತ್ತ್ವವು ಒಂದೇ ಆಗಿದ್ದರೆ ಅದು ಹಲವಾಗಿ ತೋರುವುದೇಕೆ? ಇದು ಹಲವರನ್ನು ಕಾಡುವ ಪ್ರಶ್ನೆ. ಇದಕ್ಕೆ ಮಾಯೆಯೇ ಕಾರಣವೆಂದು ಶಂಕರಾಚಾರ್ಯರು ಹೇಳುತ್ತಾರೆ. ಇಲ್ಲದಿರುವುದನ್ನು ಇರುವಂತೆ ತೋರಿಸಿಕೊಡುವ ಶಕ್ತಿಯೇ ಮಾಯೆ. ಈ ಮಾಯೆಯಿಂದಾಗಿ ಈಶ್ಚರ, ಜೀವ, ಜಗತ್ತು, ಇಂದ್ರಿಯಗಳು ಇವೆ ಮತ್ತು ಇವೆಲ್ಲ ಬೇರೆ ಬೇರೆ ಎನ್ನುವ ಭ್ರಮೆ ಉಂಟಾಗುತ್ತದೆ. ಮಾಯೆಯ ತೆರೆ ಹರಿದಾಗ ಬ್ರಹ್ಮ ಸಾಕ್ಷಾತ್ಕಾರವಾಗುತ್ತದೆ.
‘ಅದ್ವೈತ ತಾನಾಗಿ ಯುದ್ಧವಿನ್ನಾರೊಡನೆ?’ ಎಂಬ ವಾಕ್ಯಮಾಣಿಕ್ಯವನ್ನು ರೂಪಿಸಿದವನು ಸರ್ವಜ್ಞ ಕವಿ. ಅದ್ವೈತ ತತ್ತ್ವದ ಮಹತ್ತ್ವವನ್ನು ಅವನು ಸೊಗಸಾದ ತ್ರಿಪದಿಯೊಂದರಲ್ಲಿ ಕಂಡರಿಸಿದ್ದಾನೆ. ಲೋಕದಲ್ಲಿ ಜನ ಪರಸ್ಪರ ಕಾದಾಟ, ಹೊಡೆದಾಟ ನಡೆಸುವುದು, ಒಬ್ಬರನ್ನೊಬ್ಬರು ತಾರತಮ್ಯ ದೃಷ್ಟಿಯಿಂದ ನೋಡುವುದು ಎಲ್ಲರೂ ಬೇರೆ ಬೇರೆ ಎಂಬ ತಪ್ಪು ಕಲ್ಪನೆಯಿಂದ ತಾನೇ? ಅದ್ವೈತನು ತಾನು (ಎರಡಿಲ್ಲದವನು) ತಾನೇ ಬ್ರಹ್ಮ ಎಂದು ತಿಳಿದವನಿಗೆ ಯಾರೊಂದಿಗೂ ಯುದ್ಧಕ್ಕೆ ಆಸ್ಪದವಿಲ್ಲ. ಏಕೆಂದರೆ ಅವನ ದೃಷ್ಟಿಯಲ್ಲಿ ಎಲ್ಲವೂ ಒಂದೇ, ಎಲ್ಲರೂ ಒಂದೇ.
‘ಸರ್ವಂ ಖಲ್ವಿದಂ ಬ್ರಹ್ಮ’ (ಎಲ್ಲವೂ ಬ್ರಹ್ಮವೇ) ಎಂಬ ಅನುಭವ ಉಂಟಾಗುವವರೆಗೆ ಎಲ್ಲವೂ ಬೇರೆ ಬೇರೆಯಾಗಿ ಕಾಣಿಸುತ್ತದೆ. ಬ್ರಹ್ಮವೇ ಆಗಿರುವ ಜಗತ್ತು ಭಿನ್ನವಾಗಿ ಗೋಚರಿಸುತ್ತದೆ. ಉದಾಹರಣೆಗೆ ಹಗ್ಗವೊಂದು ನಸುಗತ್ತಲಲ್ಲಿ ಹಾವಾಗಿ ಕಾಣಿಸಿ ನಮ್ಮಲ್ಲಿ ಭಯ ಹುಟ್ಟಿಸುತ್ತದೆ. ಆದರೆ ಅದರ ಮೇಲೆ ಬೆಳಕನ್ನು ಹಾಯಿಸಿ ನೋಡಿದಾಗ ಅದು ಯಾವುದೇ ಅಪಾಯ, ಚಲನೆಗಳಿಲ್ಲದ ಹಗ್ಗವೆಂಬುದು ಗೊತ್ತಾಗುತ್ತದೆ. ಇಲ್ಲಿ ಹಗ್ಗವು ಹಾವಾಗಿ ತೋರಿತೇ ವಿನಾ ಹಾವು ಇರಲೇ ಇಲ್ಲ. ಇದೇ ರೀತಿ ಅಜ್ಞಾನದಿಂದಾಗಿ ಬ್ರಹ್ಮದ ಭಾಗವೇ ಆಗಿರುವ ಜಗತ್ತು ಬೇರೆಯಾಗಿ ಕಾಣಿಸುತ್ತದೆ. ಜ್ಞಾನದ ಬೆಳಕನ್ನು ಬಳಸಿ ನೋಡಿದಾಗ ಮಾತ್ರ ಜಗತ್ತು ಮಿಥ್ಯೆ ಎನ್ನುವುದರ ಅರಿವು ಉಂಟಾಗುತ್ತದೆ.
ಸನಾತನ ಧರ್ಮವು ಪ್ರತಿಪಾದಿಸಿದ ಕರ್ಮ, ಭಕ್ತಿ, ಯೋಗ ಮಾರ್ಗಗಳಿಗೆ ಅದ್ವೈತ ಸಿದ್ಧಾಂತವು ವಿರೋಧಿಯೇನೂ ಅಲ್ಲ. ಆದರೆ ಅದು ಪ್ರಾಧಾನ್ಯ ನೀಡಿದ್ದು ಜ್ಞಾನಮಾರ್ಗಕ್ಕೆ. ಜಗತ್ತಿನ ಮಿಥ್ಯತೆಯನ್ನು ಮತ್ತು ಜೀವ ಬ್ರಹ್ಮ ಅಭೇದವನ್ನು ಯಾರು ತಿಳಿದುಕೊಳ್ಳುತ್ತಾರೋ ಅವರಿಗೆ ಮೋಕ್ಷ ನಿಶ್ಚಿತ ಎಂದು ಅದು ಹೇಳುತ್ತದೆ.
ಸರ್ವಜ್ಞನ ನುಡಿಮುತ್ತಿನಂತೆ ‘ಬುದ್ಧಿಯಿಂ ತನ್ನನರಿದಂಗೆ ಲೋಕದಾ ಗುದ್ದಾಟವಿಲ್ಲ.’ ಬುದ್ಧಿಶಕ್ತಿಯನ್ನು ಬಳಸಿಕೊಂಡು ಯಾರು ತನ್ನನ್ನು ತಾನು ತಿಳಿದುಕೊಳ್ಳುತ್ತಾನೋ, ಅದ್ವೈತ ವೇದಾಂತವನ್ನು ಪೂರ್ತಿಯಾಗಿ ಮೈಗೂಡಿಸಿಕೊಳ್ಳುತ್ತಾನೋ ಅವನಿಗೆ ಜಗತ್ತಿನ ಯಾವ ವ್ಯಕ್ತಿಯೊಂದಿಗೂ ಗುದ್ದಾಟವಾಡುವ ಪ್ರಮೇಯ ಉಂಟಾಗುವುದೇ ಇಲ್ಲ. ಏಕೆಂದರೆ ಒಂದಕ್ಕಿಂತ ಬ್ರಹ್ಮಕ್ಕಿಂತ ಬೇರೆಯಾದ ಯಾವ ಘಟ ಕವೂ ಇಲ್ಲವೆಂದಾದ ಮೇಲೆ ಯಾರೊಂದಿಗೆ ಜಗಳವಾಡುವುದು?
ತನಗಿಂತ ಇತರರು ಬೇರೆಯವರು ಎನ್ನುವ ತಪ್ಪು ಕಲ್ಪನೆ ಮಾಡಿಕೊಂಡು, ಜಾತಿ – ಮತ – ಪಂಥ – ಪಂಗಡ – ಬಣ್ಣ – ಪ್ರದೇಶ ಮುಂತಾದ ಭೇದಗಳನ್ನು ಆರೋಪಿಸಿ ಜಗಳವಾಡುವುದು ಮನುಷ್ಯನ ಅಜ್ಞಾನದ ಲಕ್ಷಣ ಎಂಬುದು ಇಲ್ಲಿ ವ್ಯಕ್ತವಾಗುತ್ತದೆ.
***

ಅಹಂ ಬ್ರಹ್ಮಾಸ್ಮಿ (ನಾನೇ ಬ್ರಹ್ಮನಾಗಿದ್ದೇನೆ - ಅದ್ವೈತ ತತ್ವ)

💠 ತತ್ವಮಸಿ (ನೀನು ಅದೇ ಆಗಿರುವೆ - ಆತ್ಮ ತತ್ವ)

💠 ಬ್ರಹ್ಮ ಸತ್ಯಂ, ಜಗನ್ಮಿತ್ಯಂ 
(ಪರಬ್ರಹ್ಮವೇ ಸತ್ಯ, ಈ ಜಗತ್ತು ಮಾಯೆ, ಮಿಥ್ಯೆ)

💠 ಪ್ರಜ್ಞಾನಂ ಬ್ರಹ್ಮ

💠 ಅಯಮಾತ್ಮ ಬ್ರಹ್ಮ

💠 ನಹಿ ಜ್ಞಾನೇನ ಸದೃಶಂ

💠 ಈಶಾವಾಸ್ಯಮಿದಂ ಸರ್ವಂ

💠 ಸರ್ವಂ ಶಿವಮಯಮ್

💠 ಶರೀರಮಿದಂ ಖಲು ಧರ್ಮ ಸಾಧನಂ

💠 ಪರೋಪಕಾರಾರ್ಥಮಿದಂ ಶರೀರಂ

💠 ತೇನ ವಿನಾ ತೃಣಮಪಿ ನ ಚಲತಿ

💠 ವಸುಧೈವ ಕುಟುಂಬಕಂ (ವಿಶ್ವವೇ ಒಂದು ಕುಟುಂಬ)

💠 ಸತ್ಯಮೇವ ಜಯತೆ

💠 ಸತ್ಯ ಸರ್ವಂ ಪ್ರತಿಷ್ಠಿತಂ

💠 ಶ್ರದ್ಧಾವಾನ್ ಲಭತೇ ಜ್ಞಾನಂ

💠 ಓಂ ಸಹನಾವವತು ಸಹನೌ ಭುನಕ್ತು 
ಸಹವೀರ್ಯಂಕರವಾವಹೈ ತೇಜಸ್ವಿನಾವಧೀತಮಸ್ತು ಮಾ ವಿದ್ವಿಶಾವಹೈ ಓಂ ಶಾಂತಿ ಶಾಂತಿ ಶಾಂತಿಃ

💠 ಜ್ಞಾನಂ ಪರಮ ಬಲಂ

💠 ಓಂ ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿ ಶಾಂತಿ ಶಾಂತಿಃ

💠 ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಂ..

💠 ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ...

💠 ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ...

💠 ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ,

💠 ನೆಲನೊಂದೇ ಹೊಲೆಗೇರಿ, ಶಿವಾಲಯಕ್ಕೆ!
ಜಲವೊಂದೇ ಶೌಚಾಚಮನಕ್ಕೆ!
ಕುಲವೊಂದೇ ತನ್ನ ತಾನರಿದವಂಗೆ!
ಫಲವೊಂದೇ ಷಡುದರ್ಶನ ಮುಕ್ತಿಗೆ!
ನಿಲವೊಂದೇ, ಕೂಡಲಸಂಗಮದೇವ,
ನಿಮ್ಮನರಿದವಂಗೆ.

💠 ನೀನೊಲಿದರೆ ಕೊರಡು ಕೊನರುವುದಯ್ಯಾ..
ನೀನೊಲಿದರೆ ಬರಡು ಹಯನಹುದಯ್ಯಾ

💠 ಅರಿತರೆ ಶರಣ, ಮರೆತರೆ ಮಾನವ...

💠 ದಯವೇ ಧರ್ಮದ ಮೂಲವಯ್ಯಾ..

💠 ಆಚಾರವೇ ಸ್ವರ್ಗ, ಅನಾಚಾರವೇ ನರಕ....

💠 ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ...

💠 ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ..

💠 ಹರ ಮುನಿದರೆ ಗುರು ಕಾಯ್ವನು, ಗುರು ಮುನಿದರೆ ಹರಿಹರಬ್ರಹ್ಮಾದಿಗಳೂ ಕಾಯೋದಿಲ್ಲ..

💠 ಶಿವಪಥ ತೋರಿದ ಗುರು ಮೊದಲು, ಗುರುವಿಂದಧಿಕವಿಲ್ಲ..

💠 ಉತ್ತಿಷ್ಠಿತಾ ಜಾಗೃತ ಪ್ರಾಪ್ಯವರೇನ್ ನಿಬೋಧತ

💠 ಮಾನವ ಜನ್ಮ ದೊಡ್ಡದು, ಅದ ಹಾಳುಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ...

💠 ತನ್ನ ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಕೆಯಿಲ್ಲ.

💠 ಶಿವಪಥ ಅರಿವೊಡೆ ಗುರುಪಥವೆ ಮೊದಲು...

💠 ಅರಿವೇ ಗುರು..

💠 ನಿಂದಕರು ಇರಬೇಕಯ್ಯ..

💠 ನಂಬಿ ಕೆಟ್ಟವರಿಲ್ಲವೊ ನಿನ್ನ ನಂಬದೆ ಕೆಟ್ಟರೆ ಕೆಡಲಿ

💠 ನುಡಿದರೆ ಮುತ್ತಿನ ಹಾರದಂತೆ ಇರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.

💠 ಆಸೆಯೇ ದುಃಖ ಕ್ಕೆ ಮೂಲ 

💠 ಅಹಿಂಸೋ ಪರಮೋ ಧರ್ಮ, 

💠 ಕಾಯಕವೇ ಕೈಲಾಸ, 

💠 ಸರ್ವೇಜನೊ ಸುಖಿನೋ ಭವಂತು.

💠ಲೋಕಾ ಸಮಸ್ತಾ ಸುಖಿನೋ ಭವಂತು

💠 ಸತ್ಯಂ ವದ ಧರ್ಮಂ ಚರ

💠 ನುಡಿದಂತೆ ನಡೆ ಈ ಜನ್ಮ ಕಡೆ

💠 ಮಾನವ ಕುಲ ತಾನೊಂದೆ ವಲಂ

💠 ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ.

💠 ಏಕಂ ಸತ್ ವಿಪ್ರಾ ಬಹುಧಾ ವದಂತಿ (ಸತ್ಯ ಒಂದೇ, ಪಂಡಿತರು ಅದನ್ನು ಬಹು ಪ್ರಕಾರವಾಗಿ ಹೇಳುವರು)

💠 ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ, 
ನೀ ದೇಹದೊಳಗೋ, ನಿನ್ನೊಳು ದೇಹವೋ..!?

💠 ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೊ..

💠 ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ..

💠 ಕಾಶಿಗೆ ಹೋದರೂ ಕರ್ಮ ಕಳೆಯದು..

💠 ವಿದ್ಯಾ ದದಾತಿ ವಿನಯಂ

💠 ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು.

💠 ಬ್ರಹ್ಮಾಂಡದೊಳಿರುವುದು ಪಿಂಡಾಂಡದೊಳಿಹಿದು..

💠 ನಿನ್ನೊಳಗ ನೀ ತಿಳಿದುನೋಡು.., ಹೊರಗೇನೈತಿ..

💠 ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ..
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಅದಕುಸಿಯ ನೆಲವಿಹುದು ಮಂಕುತಿಮ್ಮ

💠 ಗುರು ಹೊಕ್ಕ ಮನೆ ನೂರು ವರುಷ, ಗೂಬೆ ಹೊಕ್ಕ ಮನೆ ಮೂರು ದಿವಸ.

💠 ಹರಿ ಸರ್ವೋತ್ತಮ ವಾಯು ಜೀವೋತ್ತಮ

💠 ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..

💠 ಸ್ನಾನ ಮಾಡಿರೋ ಜ್ಞಾನ ತೀರ್ಥದಲಿ, 
ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೇ 
ಮಡಿ ಮಾಡುವ ಬಗೆ ಬೇರುಂಟು... 

💠 ಮಲಗಿ ಪರಮಾ ದರದಿ ಪಾಡಲು ಕುಳಿತು ಕೇಳುವ ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೇ ಒಲಿವ ನಾ ನಿನಗೆಂಬಾ ಕೃಷ್ಣ ಕೃಷ್ಣ ಕೃಷ್ಣ

💠 ಹೆತ್ತ ತಾಯಿ ತಂದೆಯರ  ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು, ಸತ್ಯ ಸದಾಚಾರ ಇಲ್ಲದವನು ಜಪ ಹತ್ತು ಸಾವಿರ ಮಾಡಿ ಫಲವೇನು,? 

💠ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆಯಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡಗೊಡದೆ
ಆ ರತ್ನವ ನೀನು ಅಲಂಕರಿಸಿದೆಯಾದೆಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ
ನಿನ್ನಿಂದ ಬಿಟ್ಟಧಿಕ ಸಿರಿವಂತರಿಲ್ಲ
ಕಣಾ

💠 ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ
ಜ್ಯೋತಿಯಬಲದಿಂದ ತಮಂಧದ ಕೇಡ ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯ

💠 ಪರಿವರ್ತನೆ ಜಗದ ನಿಯಮ.

💠 ಶ್ರೀಗುರು ವಚನೋಪದೇಶವನಾಲಿಸಿದಾಗಳಹುದು ನರರಿಗೆ ಮುಕುತಿ.

💠 ಬಿಟ್ಟೆನೆಂದರೆ ಬಿಡದೀ ಮಾಯೆ, ಬಿಡದಿದ್ದರೆ ಬೆಂಬತ್ತಿತ್ತು ಮಾಯೆ..

💠 ಶ್ರೀಗುರು ವಚನದಿಂದಧಿಕ ಸುಧೆಯುಂಟೇ?

💠 ಈಸಬೇಕು ಇದ್ದು ಜೈಸಬೇಕು

💠 ಸಂಕಟ ಬಂದಾಗ ವೆಂಕಟರಮಣ.

💠 ಕಟ್ಟಿಟ್ಟ ಬುತ್ತಿ ಮುಂದೆ ಉಣಲುಂಟು ನಿನಗೆ....

💠 ಗುರುವಿನಿಂದ ಬಂಧುಗಳು ಗುರುವಿನಿಂದ ದೈವಗಳು 
ಗುರುವಿಂದಲಿಹುದು ಪುಣ್ಯವದು  
ಜಗಕೆಲ್ಲ ಗುರುವಿನಿಂದ ಮುಕ್ತಿ  ಸರ್ವಜ್ಞ.

💠 ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ...

💠 ವಿದ್ಯೆಗೆ ವಿನಯವೇ ಭೂಷಣ

💠 ದೇವನೊಬ್ಬ ನಾಮ ಹಲವು....

💠 ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ

💠 ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ

💠 ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ.

💠 ಏನಾದರೂ ಆಗು ಮೊದಲು ಮಾನವನಾಗು.

💠 ಮಾನವ ಧರ್ಮಕ್ಕೆ ಜಯವಾಗಲಿ,ಧರ್ಮದಿಂದಲೇ ವಿಶ್ವಕ್ಕೆ ಶಾಂತಿ,

💠 ನಿರ್ಮಲವಾದ ಮನಸೇ ಮಡಿ ಉಳಿದುದೆಲ್ಲ ಕಾಲ್ಮಡಿ

💠 ಆದುದೆಲ್ಲಾ  ಒಳಿತೇ ಆಯಿತು...

💠 ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ..

💠 ಸಬ್ ಕಾ ಮಾಲೀಕ್ ಏಕ್ ಹೈ

💠 ಹ್ಯಾಂಗೆ ಮಾಡಲಯ್ಯಾ ಕೃಷ್ಣಾ  ಹೋಗುತಿದೆ ಆಯುಷ್ಯ.

💠 ಸತ್ಯವಂತರ ಸಂಗವಿರಲು ತೀರ್ಥವೇತಕೆ

💠 ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ.

💠 ನಿನ್ನ ನೀನು ತಿಳಿದ ಮೇಲೆ ಇನ್ನೇನೋ ಇನ್ನೇನೋ 

💠 ಉಸಿರಿರುವ ತನಕ ನಾನು ನನ್ನದು ಉಸಿರು ನಿಂತ ಮೇಲೆ ಏನಿದೆ ನಿನ್ನದು 

 💠 ಶ್ರದ್ಧೆಯಿದ್ದರೆ ನಿನಗೆ ಜ್ಞಾನ ಲಭಿಸುತ್ತದೆ

💠 ಎಂತಹ ಕಠಿಣ ಪರಿಸ್ಥಿತಿ ಬಂದರೂ ಮೌನಕ್ಕೆ ಶರಣಾಗು.

💠 ಕಲ್ಲಲಿ  ಹುಟ್ಟಿ  ಕೂಗುವ ಕಪ್ಪೆಗೇ  ಅಲ್ಲಿಗಲ್ಲಿಗೇ  ಆಹಾರ   ವಿತ್ತವರು  ಯಾರು? ಬಲ್ಲಿದನು  ಪರಮಾತ್ಮ ಇದಕೆ ಸಂಶಯವಿಲ್ಲ! ತಲ್ಲಣಿಸದಿರು ತಾಳು ಮನವೇ.... ಎಲ್ಲರನು ಸಲಹುವನು ಶ್ರೀನಿವಾಸ ಇದಕ್ಕೆ ಸಂಶಯವಿಲ್ಲ.  

💠 ಕುಲ, ಕುಲ, ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?

💠 ಸರ್ವಂ ಶಿವಮಯಂ

💠 ಸಂತೆಯೊಳಗೊಂದು ಮನೆಯ ಮಾಡಿ ಶಬ್ದಗಳಿಗಂಜಿದೊಡೆಂತಯ್ಯ

💠 ಹುಚ್ಚು ಹಿಡಿಯಿತು...ಎನಗೆ ಹುಚ್ಚು ಹಿಡಿಯಿತು....ಅಚ್ಯತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ..ಹುಚ್ಚು..ಹಿಡಿಯಿತು
****

No comments:

Post a Comment