SEARCH HERE

Tuesday 1 January 2019

ಸಂಪ್ರದಾಯ ಪಾಲಿಸಿ ಸಂಪ್ರದಾಯ ಉಳಿಸಿ ಮಕ್ಕಳಿಗೆ ತಿಳಿಸಿ follow sampradaya


Sampradaya
ಮೊದಲು ಇದ್ದಲು,ಉಪ್ಪು,ಬೇವಿನಕಡ್ಡಿ ಉಪಯೋಗಿಸಿ ಹಲ್ಲುಜ್ಜುವುದನ್ನು ತಪ್ಪು ಎಂದು ಹೇಳಿದ ಕಂಪನಿಗಳು ಈಗ ಉಪ್ಪು ಇದೆಯಾ, ಲವಂಗ ಇದ್ಯಾ ಅಂತ ಕೇಳುತ್ತಿವೆ.

ಬೆಳಿಗ್ಗೆ ಎದ್ದ ಕೂಡಲೇ ರಾತ್ರಿ ತುಂಬಿಟ್ಟ ತಾಮ್ರದ ತಂಬಿಗೆಯ ನೀರು ಕುಡಿಬೇಕು ಅಂತ.  ಪ್ಲಾಸ್ಟಿಕ್ ನಲ್ಲಿ ಸಂಗ್ರಹಿಸಿದ ನೀರು ಕ್ಯಾನ್ಸರ್ ಕಾರಕ.

ಮಡಿ, ಮುಸುರೆ,ಎಂಜಲು ಹೀಗೆ ಬೇರೆ ಬೇರೆ ಇಡುವ ಪದ್ಧತಿಯಿತ್ತು. ಈಗಿನವರಿಗೆ ಇದು ಹಾಸ್ಯಾಸ್ಪದ. ಆದರೆ ಅದರಹಿಂದೆ logic ಇತ್ತು.

ಉಪ್ಪು, ಸಕ್ಕರೆ ತರದ ಪದಾರ್ಥಗಳು ತುಂಬಾ ದಿನದವರೆಗೆ ಉಪಯೋಗಿಸಬಹುದಾದ ವಸ್ತುಗಳು. ಹಾಲು,ಮೊಸರು, ಮುಂತಾದವು ಬೇಗ ಹಾಳಾಗುವ ಪದಾರ್ಥ. ಒಂದಕ್ಕೆ ಒಂದು ಬಿದ್ದು ಹಾಳಾಗುವುದನ್ನು ತಪ್ಪಿಸಲು ಈ ವಿಧಾನ ಅನುಸರಿಸಲಾಗುತ್ತಿತ್ತು. ಇನ್ನು ಒಬ್ಬರು ತಿಂದು ಬಿಟ್ಟಿದ್ದನ್ನು ಮತ್ತೊಬ್ಬರಿಗೆ ಕೊಡುತ್ತಿರಲಿಲ್ಲ. ಸಾಂಕ್ರಾಮಿಕ ರೋಗಗಳು ಬರದಂತೆ ತಡೆಗಟ್ಟಲು ಇದು ಸಹಾಯಕಾರಿ

ಆಯಾ ಕಾಲಕ್ಕೆ ತಕ್ಕಂತೆ ಹಬ್ಬಗಳು,ಅದಕ್ಕೆ ತಕ್ಕಂತೆ ತಿನಿಸುಗಳು.

ಚಳಿಗಾಲದ ಸಮಯದಲ್ಲಿ ಬರುವ ಸಂಕ್ರಾಂತಿಗೆ ತಿನ್ನುವ ಎಳ್ಳು ಬೆಲ್ಲ ಚಳಿಗಾಲದಲ್ಲಿ ಒಣಗಿದ ಚರ್ಮಕ್ಕೆ ಬೇಕಾದ ಎಣ್ಣೆ ಅಂಶ ದೇಹಕ್ಕೆ ಒದಗಿಸುತ್ತದೆ.

ಹಬ್ಬಹಬ್ಬಕ್ಕೆ ಮಾಡುವ ಅಭ್ಯಂಗ ದೇಹಕ್ಕೆ ಶಕ್ತಿ ಕೊಡುತ್ತದ್ದೆ. ಎಣ್ಣೆ ನೀರು ದೇಹದ ರಕ್ತ ಸಂಚಾರ ಹೆಚ್ಚಾಗುವಂತೆ ಮಾಡುತ್ತದೆ.

ಮುಂಬಾಗಿಲಲ್ಲಿ ಹಾಕುವ ಸಗಣಿ ನೀರು ಕ್ರಿಮಿ ಕೀಟಗಳು ಮನೆಯಒಳಗೆ ಬರುವುದನ್ನು ತಪ್ಪಿಸುತ್ತದೆ.

ತಿಂಗಳಿಗೊಮ್ಮೆ ಮಾಡುವ ಸಂಕಷ್ಟಿ ಉಪವಾಸ ದೇಹದ ಪಚನಕ್ರಿಯೆಗೆ ಒಂದಷ್ಟು ವಿಶ್ರಾಂತಿ ಕೊಟ್ಟು ದೇಹದ ಜೊತೆಗೆ ಮನಸ್ಸಿನ ಹತೋಟಿಗೂ ಸಹಾಯಮಾಡುತ್ತದೆ.

ವಿಠ್ಠಲ ನಾಮಸ್ಮರಣೆಯಿಂದ ಹೃದಯಾಘಾತ ತಪ್ಪುತ್ತದೆ ಎನ್ನುವುದು ಇತ್ತೀಚೆಗೆ ಸಂಶೋಧನೆಯಿಂದ ದೃಢಪಟ್ಟ ವಿಷಯ.

ಸಂಧ್ಯಾವಂದನೆ ಕೇವಲ ಒಂದು ಆಚರಣೆಯಲ್ಲ. ಅದೊಂದು ಯೋಗ ಪ್ರಾಣಾಯಾಮ ಸೇರಿದ ಅಭ್ಯಾಸ. ಗಮನಿಸಿ ನೋಡಿ, ಅದರಲ್ಲಿ ಪ್ರಾಣಾಯಮವಿದೆ, ಅರ್ಘ್ಯ ನೀಡಲು ಕೂರುವುದು ಏಳುವುದು ಹೀಗೆ ದೇಹಕ್ಕೆ ಒಳ್ಳೆಯ ವ್ಯಾಯಾಮ ಕೂಡ.

ಮೊದಲೆಲ್ಲಾ ಆರೋಗ್ಯದ ಏರುಪೇರಿಗೆ ಅಜ್ಜಿಯ ಕಷಾಯ, ಅಳಲೇಕಾಯಿ, ಮನೆಮದ್ದು ಸಾಕಿತ್ತು.  ಈಗ ನಾವು ದೇಹವನ್ನು ಮೊದಲಿಂದಲೇ ಬೇರೆ ಔಷಧಿಗಳ ಪ್ರಯೋಗಾಲಯ ಮಾಡಿದ್ದೇವೆ. ಎಲ್ಲದ್ದಕ್ಕೂ ಮಾತ್ರೆ,ಔಷಧಿ.. ಸಣ್ಣ ಪುಟ್ಟ ಖಾಯಿಲೆಗೆ ವೈದ್ಯರು! ನಮ್ಮ ರೋಗನಿರೋಧಕ ಶಕ್ತಿಯನ್ನು ನಾವೇ ಕುಗ್ಗಿಸಿಬಿಟ್ಟಿದ್ದೇವೆ.

ಮನೆಯಲ್ಲಿ ಯಾವುದಾದರೂ ದೇವರ ಪೂಜೆ, ಕಾರ್ಯವಿದ್ದರೆ ಹಿಂದಿನ ದಿನ ರಾತ್ರಿ ಫಲಾಹಾರ, ಬೆಳಿಗ್ಗೆ ಉಪವಾಸ.. ಕಾರಣ ಸರಳ. ವಾಯುಕಾರಕ ಪದಾರ್ಥಗಳನ್ನು ಸೇವಿಸಿದರೆ ಅದು ಆರೋಗ್ಯವನ್ನು ಏರುಪೇರು ಮಾಡುತ್ತದೆ.

ಇನ್ನು ಒಂದಷ್ಟು ಪದಾರ್ಥಗಳು ವರ್ಜ್ಯವೆನ್ನಲು ಇದೆ ಕಾರಣ. ಆಹಾರ ಪದಾರ್ಥಗಳನ್ನು ವಿಂಗಡಿಸಿದ್ದಾರೆ ಹಿರಿಯರು. ತಾಮಸ, ರಾಜಸಿಕ ಅಂಶದ ಪದಾರ್ಥ ಹೀಗಾಗಿ ವರ್ಜ್ಯವೆಂದು ಇದಕ್ಕೇ ಹೇಳುತ್ತಿದ್ದರು.

ಬಾಳೆಎಲೆ ಯಲ್ಲಿ ಊಟ ಮಾಡುವುದು ಒಳ್ಳೆಯದು.. ಏಕೆಂದರೆ ಅದು ದೇಹಕ್ಕೆ ಅಗತ್ಯವಿದ್ದ ಒಳ್ಳೆ ಅಂಶವನ್ನು ನೀಡುತ್ತದೆ. ಹಾಗೆಯೇ ವಿಷದ ಪದಾರ್ಥ ಅದರಮೇಲೆ ಬಿದ್ದರೆ ಅದು ಕಪ್ಪಾಗುತ್ತದೆಯಂತೆ.

ಊಟದ ವಿಷಯದಲ್ಲೂ ವಿಜ್ಞಾನವಿದೆ.. ಮೊದಲು ಅಜ್ಜಿ ಹೇಳ್ತಾ ಇದ್ದರು. ನಾವು ತಿನ್ನಬೇಕಿರುವುದು ಒಂದು ಮುಷ್ಟಿ ಅನ್ನ, 32 ತುತ್ತು, ಒಂದೊಂದು ತುತ್ತು 32 ಸಲ ಅಗೆದು ತಿನ್ನಿ ಅಂತ.. ಇದನ್ನೇ ಮಾಡಿದರೆ ಯಾವ diet ಯಾಕೆ ಬೇಕು ಹೇಳಿ?

ಹಾ! ಮತ್ತೊಂದು.. ಊಟದ ಮೊದಲು ಚಿತ್ರ ಇಟ್ಟು,ಎಲೆ ಸುತ್ತ ನೀರು ಹಾಕುವುದು ಯಾವುದೇ ಸಣ್ಣ ಕ್ರಿಮಿ ಕೀಟಗಳು ಬಾಳೆಲೆಗೆ ಬಾರದಿರಲಿ ಅಂತ..

ಬೆಳ್ಳಿಯಲ್ಲಿ ರೋಗನಿರೋಧಕ ಶಕ್ತಿ ಇರೋದ್ರಿಂದ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ಅಂತ ಹೇಳ್ತಾ ಇದ್ರು.

ಸಂಜೆ ಕತ್ತಲಾದ ಮೇಲೆ ಕಸಗುಡಿಸಿ ಕಸ ಹೊರಗೆ ಹಾಕಿದ್ರೆ ಅಮೂಲ್ಯವಾದ ವಸ್ತುಗಳು ಏನಾದ್ರೂ ಇದ್ದು ಕತ್ತಲೆಗೆ ಕಾಣದೆ ಇದ್ರೆ ಕಷ್ಟ ಅನ್ನೋದು ಸಂಜೆ ವೇಳೆಗೆ ಕಸ ತೆಗಿಬಾರ್ದು ಅನ್ನೋದಕ್ಕೆ ಕಾರಣ.

ಮೈ ಮೇಲೆ ಚೂರಾದ್ರು ಬಂಗಾರ ಇರ್ಲಿ ಅಂತ ಹೇಳ್ತಿದ್ರು ಅಲ್ವಾ? ಬಂಗಾರದ ಮೇಲೆ ಬಿದ್ದ ನೀರು ಮೈ ಮೇಲೆ ಬಿದ್ರೆ ಚರ್ಮರೋಗ ನಿವಾರಣೆಗೆ ಸಹಾಯಮಾಡುತ್ತದೆ.

💠 ನಾವು ಸಂದ್ಯಾವಂದನೆ ಮಾಡುವುದೇಕೆ?

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ "ಸಂಧ್ಯಾವಂದನೆ". ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಟಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ಧವಾಗಿ ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ದೀರ್ಘಾಯುಷ್ಯದ ಗುಟ್ಟು ಈ "ಪ್ರಾಣಾಯಾಮ". ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ "ಡಿ" ಅನ್ನಾಂಗಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

💠 ನಾವು ಧ್ಯಾನವನ್ನೇಕೆ ಮಾಡ ಬೇಕು?

ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಈ ಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ "ಧ್ಯಾನ". ದೃಢವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದು ಕೊಳ್ಳ ಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದು ಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.

💠 ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ?

ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ. ಆತನಿಗೆ ಜ್ಯೋತಿಗಳಿಂದ ಉಪಯೊಗವೇನು? ಅಂದರೆ ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನುತ್ತೇನೆ. ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ. ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಅಧಿಕ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶ್ರೇಷ್ಟ ಎಂದಿದ್ದಾರೆ. ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ, ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಘರ್ಷಣೆಯಿಂದ ಅಥವಾ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟು ಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿ ಕೊಂಡು ಬಂದಿರ ಬೇಕು.

💠 ನಾವು ಧೂಪವನ್ನು ಹಚ್ಚುವುದೇಕೆ?

ಲೋಭಾನ, ಶ್ರೀಗಂಧ, ಚಂಗಲ ಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಮಾಡಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಸೇವಿಸಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು "ದಶಾಂಗ ಧೂಪ" ಎನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿ ಆಗುವುದಿಲ್ಲ. ಧೂಪವನ್ನು ಹಚ್ಚುವುದರಿಂದ ಅದರ ಸುವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸ ಅಲ್ಲವೆಂಬುದು ಸತ್ಯವಷ್ಟೇ.

💠 ನಾವು ಪೂಜೆಗೆ ಮುಂಚೆ ಘಂಟೆಯನ್ನೇಕೆ ಭಾರಿಸುತ್ತೇವೆ?

ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳು ಉಂಟಾಗುತ್ತವೆ. ಈ ಶಬ್ಧ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ.

ಸಾಮಾನ್ಯವಾಗಿ ಘಂಟೆಗಳನ್ನು ಕಂಚು, ಪಂಚಲೋಹ, ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸ ಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿ ಬಿಡುತ್ತದೆ ಗಮನಿಸಿದ್ದೀರಾ? ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರ ಬರುವ ತರಂಗಗಳಿಂದ ಶುದ್ಧವಾಗುತ್ತದೆ. ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.

💠 ನಾವು ಆಚಮನ ಮಾಡುವುದೇಕೆ?

ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ಼ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರ ಬೀಳುತ್ತದೆ. ಗಂಟಲಿನಲ್ಲಿರುವ ಕಫ಼ವು ಶಬ್ಧವನ್ನು ಸ್ವಚ್ಛವಾಗಿ ಉಚ್ಛಾರ ಮಾಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಛವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡು ಕೊಂಡ ಉಪಾಯವೇ ಈ "ಆಚಮನ" ಆಗಿದೆ. ಆಚಮನ ಮಾಡುವಾಗ ವೇದಗಳ, ದೇವರ ಸ್ಮರಿಸಿ ನೀರು ಕುಡಿಯುವುದರಿಂದ ವಿಶೇಷ ಶಕ್ತಿ ಸಿಕ್ಕ ಅನುಭವ ಆಗುವುದು.

💠 ನಾವು ಸಂಕಲ್ಪವನ್ನೇಕೆ ಮಾಡುತ್ತೇವೆ?

ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡ ಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿ ಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿದ್ದು ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿ ಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿ ಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ. ಇದರಿಂದ ಕಾರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಭೀತಾಗುತ್ತದೆ.

💠 ನಾವು ಪವಿತ್ರವನ್ನು ಯಾಕೆ ಧರಿಸ ಬೇಕು?

"ಪವಿತ್ರ"ವೆಂದರೆ ಹೆಸರೇ ಹೇಳುವಂತೆ ಬಹಳ ಪವಿತ್ರವಾದದ್ದು. ಧರ್ಭೆಗಳನ್ನು ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿ ಕೊಳ್ಳುವ ಸಾಧನವೇ ಪವಿತ್ರ. ಧರ್ಭೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದೆ. ಈ ಮುಳ್ಳುಗಳು ಎಷ್ಟೋ ಬ್ಯಾಕ್ಟೀರಿಯಾಗಳನ್ನು ತಡೆದು ತನ್ನಲ್ಲೆ ಉಳಿಸಿ ಕೊಳ್ಳುತ್ತದೆ. ಈ ಪವಿತ್ರವನ್ನು ಹಾಕಿ ಕೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರುವ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಾಣುಗಳು ನಮ್ಮ ದೇಹವನ್ನು ಸೇರುವುದು ತಪ್ಪುತ್ತದೆ ಮತ್ತು ಆರೋಗ್ಯವಾಗಿ ಇರುವುದಕ್ಕೆ ಸಹಕಾರಿಯಾಗಿರುತ್ತದೆ.

💠 ಕಲಶಗಳ ಕೆಳಗೆ ಅಕ್ಕಿಯನ್ನೇಕೆ ಹಾಕ ಬೇಕು?

ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ, ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

💠 ನಾವು ತಾಮ್ರದ ಕಲಶವನ್ನೇ ಏಕೆ ಉಪಯೋಗಿಸುತ್ತೇವೆ?

ತಾಮ್ರವು ಲೋಹಗಳಲ್ಲೆಲ್ಲಾ ಅತುತ್ತಮವಾದದ್ದು. ಇದಕ್ಕೆ ವಿಶೇಷವಾದ ಗುಣಗಳು ಇರುವುದರಿಂದಲೇ ಇದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗಿ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಭೀತಾಗಿದೆ.

💠ನಾವು ಕಲಶದೊಳಗೆ ಧರ್ಬೆಯ ಕೂರ್ಚವನ್ನೇಕೆ ಹಾಕುತ್ತೇವೆ?

ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳಾಗುವ ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು ಸಂಯೋಜಿಸಲ್ಪಟ್ಟು ಶಕ್ತಿಯು ಕಲಶದೊಳಗೆ ಇಟ್ಟಿರುವ ಧರ್ಭೆಯಿಂದ ಆಕರ್ಷಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

💠 ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ ?

ಮಾವಿನ ಎಲೆಗಳಲ್ಲಿ ಪತ್ರ ಹರಿತ್ತಿನ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿದ್ದು ಹಾಗೆ ಬಹಳ ಜನ ಸೇರಿದಾಗ ಅಷ್ಟೂ ಜನಕ್ಕೆ ಸರಿ ಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ದೀರ್ಘ ಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಚರ್ಮ ರೋಗಗಳಿಗೆ ರಾಮಬಾಣವಾಗಿದೆ.

💠ಕಲಶದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?

ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳ ಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ತೆಂಗು ಯಾವುದೇ ಪ್ರಾಣಿ - ಪಕ್ಷಿಗಳ ಎಂಜಲಿನಿಂದ ಬೆಳೆದಿರುವುದಿಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷ ಎಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟು ಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.

💠 ಮನೆಯ ಮುಂದೆ ಸಗಣಿಯಿಂದ ಸಾರಿಸುವುದೇಕೆ?

ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯ ಎನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ವಿಶೇಷವಾಗಿ ಗೋಮಯದಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ ಬ್ಯಾಕ್ಟೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ. ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ಟೀರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡ ಬಹುದಾಗಿದೆ. ಹಾಗೆಯೇ ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಷಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣುಗಳೂ ಸಹ ಜೀವ ನಿರೋಧಕ ಎಂಬುದನ್ನು ಮರೆಯ ಬಾರದು. ಈಗೀಗ ನಗರ ಪ್ರದೇಶಗಳಲ್ಲಿ ಸಮಯದ ಮತ್ತು ಸ್ಥಳದ ಅಭಾವದಿಂದ ಮನೆಯ ಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ಧೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.

💠 ಮನೆಯ ಮುಂದೆ ತುಳಸಿ ಕಟ್ಟೆಯನ್ನೇಕೆ ಕಟ್ಟುತ್ತೇವೆ?

ತುಳಸಿಯ ಎಲೆಗಳಲ್ಲಿ ವಿಶೇಷ ಗುಣಗಳಿವೆ. ತುಳಸಿಯು ಔಷಧೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸ ಬಹುದು. ಆಯುರ್ವೇದದಲ್ಲಿ ತುಳಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ಼ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಳಸಿಗಿದೆ. ಅಂತಹ ತುಳಸಿ ಪ್ರತಿಯೊಂದು ಮನೆಯಲ್ಲೂ ಇಲ್ಲದೆ ಇದ್ದರೆ ಮುಂದಿನ ಪೀಳಿಗೆಯವರಿಗೆ ಕನ್ನಡಿಯೊಳಗಿನ ಗಂಟು ಆಗುವುದರಲ್ಲಿ ಸಂದೇಹವಿಲ್ಲ.
--‪ ಸಂಗ್ರಹ
*********


ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?

೧. ಅನ್ನವು ‘ಪೂರ್ಣಬ್ರಹ್ಮ’ವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವವನ್ನು ಕೊಡಬೇಕು. ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗಿ ಅನ್ನಬ್ರಹ್ಮದಲ್ಲಿನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ.

೨. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ, ಶರೀರದ ಸಂಪರ್ಕವು ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವದ ಅಂತರ್ಮನಸ್ಸಿನ ವಾಸನೆಯ ವಿಚಾರಗಳಿಗನುಸಾರ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಂಕ್ರಮಿತವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜ-ತಮಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನಿಟ್ಟುಕೊಂಡು ಸೇವಿಸುತ್ತಿರುತ್ತದೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ.

೩. ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸುಪ್ತವಾಗಿರುವ ಸ್ಪಂದನಗಳು ಕಾರ್ಯನಿರತವಾಗಿ ಅನ್ನವು ಅಪವಿತ್ರವಾಗಬಹುದು, ಆದುದರಿಂದ ಊಟದ ತಟ್ಟೆಯನ್ನು ತೊಡೆಗಳ ಮೇಲೆ ಇಟ್ಟುಕೊಂಡು ಊಟವನ್ನು ಮಾಡಬಾರದು.
*********

ಅನ್ನವನ್ನು ಅಂದರೆ ಊಟ ಮಾಡುವ ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡಿದರೆ, ಅನ್ನದಲ್ಲಿರುವ ದೈವತ್ವಕ್ಕೆ ಅಗೌರವ ತೋರಿದಂತಾಗುತ್ತದೆ. ಅನ್ನ ಬ್ರಹ್ಮದಲ್ಲಿನ ಸಾತ್ವಿಕತೆಯ ಲಾಭವೂ ಅಪೇಕ್ಷಿತ ರೀತಿಯಲ್ಲಿ ಆಗುವುದಿಲ್ಲ.ಆನ್ನವೂ ಪೂರ್ಣ ಬ್ರಹ್ಮವಾಗಿರುವುದರಿಂದ ಅದಕ್ಕೆ ದೈವತ್ವದ ಗೌರವವನ್ನು ಕೊಡಬೇಕಾಗುತ್ತೆ.

ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜತಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನು ಇಟ್ಟುಕೊಂಡು ಸೇವಿಸುತ್ತಾ ಇರುತ್ತೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿಯಲ್ಲಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ. ಶರೀರದ ಸಂಪರ್ಕವೂ ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ.

ತೊಡೆಯ ಮೇಲೆ ಊಟ ಮಾಡುವ ತಟ್ಟೆಯನ್ನು ಇಟ್ಟುಕೊಂಡು ಅನ್ನವನ್ನು ಸೇವಿಸಿದರೆ ಇದರಿಂದ ಜೀವನದ ಅಂತರ ಮನಸ್ಸಿನ ವಾಸನೆಯ ವಿಚಾರಗಳಿಗೆ ಅನುಸಾರವಾಗಿ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಾಂಕ್ರಾಮಿಕವಾಗುತ್ತದೆ.

ಇನ್ನೂ ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸೂಕ್ತವಾಗಿರುವ ಸ್ಪಂದನಗಳು ಕಾರ್ಯ ನಿರತವಾಗಿ ಅನ್ನವೂ ಅಪವಿತ್ರವಾಗಿಬಹುದು. ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನೆಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ.

ಆದ್ದರಿಂದ ನಾವು ಊಟವಾಗಲಿ,ತಿಂಡಿಯನ್ನಾಗಲಿ ಅಥವಾ ಬೇರೆ ಇನ್ನೇನ್ನೇ ಆದರೂ ಕೂಡಾ ತೊಡೆಯ ಮೇಲೆ ಇಟ್ಟುಕೊಂಡು ತಿನ್ನಬಾರದು.ಬದಲಾಗಿ ಒಂದು ಮೇಜಿನ ಮೇಲೆ ಅಥವಾ ನೆಲದ ಮೇಲೆ ತೆಟ್ಟೆಯನ್ನು ಇಟ್ಟುಕೊಂಡು ನೆಲದ ಮೇಲೆಯೇ ಕುಳಿತುಕೊಂಡು ಊಟಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು.

ನಾವು - ನಮ್ಮ ಧರ್ಮ/ಪದ್ದತಿ

1. 🌸ಹೆಂಗಸರು ಏಕೆ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ?

ಕಾಲುಂಗುರ ಹಾಕಿಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ ಮತ್ತು ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದುಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ.

ಕಾಲುಂಗುರ ಧರಿಸುವುದರಿಂದ ಏನು ಪ್ರಯೋಜನ

1. ತಾಳಿ ಎಷ್ಟು ಪ್ರಯೋಜನವಿದೆಯೇ ಹಾಗೆ ಕಾಲುಂಗುರ ಅಷ್ಟೇ ಪ್ರಯೋಜನಕಾರಿಯಾಗಿದೆ 
2. ಗಂಡನಿಗೆ ಬರುವ ಕಂಟಕಗಳು ದೂರವಾಗುತ್ತದೆ ಕಾಲುಂಗುರ ಧರಿಸುವುದರಿಂದ 
3. ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು 
4. ಹಣದ ಕೊರತೆ ಇರುವುದಿಲ್ಲ 
5. ಬೆಳಗ್ಗೆ ಎದ್ದ ಕೂಡಲೇ ಗಂಡ ಕಾಲುಂಗುರ ಧರಿಸಿರುವ ಹೆಂಡತಿನ್ನ ನೋಡಿದರೆ ಅವನಿಗೆ ದಿನವೆಲ್ಲಾ ಸುಖ ಶಾಂತಿ ನೆಮ್ಮದಿ ಇರುತ್ತದೆ

2. 🌸ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ:

ಹಿಂದೂ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ಪವಿತ್ರ ತುಳಸಿ ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗು ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.

3. 🌸ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ 

ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ ( ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ). ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ). ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ. ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಹಾಗು ಅಪ್ಪಿಕೊಳ್ಳುವ ಮೂಲಕ ಸಹ ಮಾಡಬಹುದು. ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ.ಯಾವಾಗ ನೀವು ನಿಮ್ಮ ಕೈಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ  ಧಾರಕ ಗಳಾಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿ ಯನ್ನು  ನೀಡುವ ಅಂಶವಾಗಿ ಗುರುತಿಸಲ್ಪಡುತ್ತದೆ.

4. 🌸ನೆಲದ ಮೇಲೆ ಕುಳಿತು ಊಟಮಾಡುವುದು 

ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರಬಹುದಾದ ಆಸನ. ಈ ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಈ ಪ್ರಯೋಜನಗಳು ಸಿಗುವುದಿಲ್ಲ.

5. 🌸ಹಣೆಗೆ ತಿಲಕ ಹಚ್ಚುವ ಕ್ರಮ

ಪುರಾತನ ಕಾಲದಿಂದಲು ಹಣೆಯ ಮೇಲೆ ಎರಡು ಹುಬ್ಬುಗಳ ನಡುವಿನ ಭಾಗದಲ್ಲಿ ನೆಲೆಸಿರುವ ಸ್ಥಳವನ್ನು ಮಾನವ ದೇಹದ ಪ್ರಧಾನ ನರಕೇಂದ್ರವೆಂದು ಪರಿಗಣಿಸಲಾಗಿದೆ. ತಿಲಕವು ದೇಹದಲ್ಲಿನ ಶಕ್ತಿಯು ಪೋಲಾಗುವುದುನ್ನು ತಡೆಯುತ್ತದೆ. ಎರಡು ಹುಬ್ಬುಗಳ ನಡುವೆ ಇಡುವ ಕೆಂಪು"ಕುಂಕುಮ"ವು ದೇಹದಲ್ಲಿನ ಶಕ್ತಿಯನ್ನು ಮರು ಸಂಚಯಗೊಳಿಸುತ್ತದೆ ಮತ್ತು ಏಕಾಗ್ರತೆಯ ವಿವಿಧ ಘಟ್ಟಗಳನ್ನು ನಿಯಂತ್ರಿಸುತ್ತದೆ.

6. 🌸ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ 

ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈಧ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು ಧರಿಸುತ್ತಾರೆ.

7. 🌸ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ

 ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸಬಹುದು. ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿಕೊಳ್ಳುವುದು ತಿಳಿದ ವಿಚಾರವೇ. ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ, ಆಗ ಬಳೆಗಳು ಅದನ್ನು ಎಳೆದುಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ.

8. 🌸ದೇವಾಲಯಗಳಲ್ಲಿ ಘಂಟೆಗಳು ಏಕೆ ಇರುತ್ತವೆ

ಜನರು ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ. ಕಾರಣವೇನೆಂದರೆ ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ.

9. 🌸ಗಂಡಸರ ತಲೆಯ ಮೇಲೆ ಶಿಖೆ

ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು ಅಧಿಪತಿ ಮರ್ಮ ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವು ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಈ ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.

10. 🌸ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ 

ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಈ ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.

11. 🌸ಸೂರ್ಯ ನಮಸ್ಕಾರ

ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

12. 🌸ನಾವೇಕೆ ಉಪವಾಸವಿರುತ್ತೇವೆ 

ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಈ ಪ್ರಾಚೀನ ವೈಧ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಈ ಅವಧಿಯಲ್ಲಿ ನಿಯಮಿತವಾಗಿ ಲಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ 80% ರಷ್ಟು ನೀರು ಮತ್ತು ಶೇ.20% ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿಪಡಿಸುತ್ತದೆ.

13. 🌸ನಮಸ್ಕಾರ ಮಾಡಲು ಎರಡು ಅಂಗೈಗಳನ್ನು ಜೋಡಿಸುವುದು

ಹಿಂದೂ ಸಂಪ್ರದಾಯದಲ್ಲಿ ಅತಿಥಿಗಳನ್ನು ಅಥವಾ ಹಿರಿಯರನ್ನು ಕಂಡಾಗ ಅವರನ್ನು ಸ್ವಾಗತಿಸಲು ನಮಸ್ಕಾರ 🙏 ಮುದ್ರೆ ಎಂದರೆ ಎರಡು ಅಂಗೈಗಳನ್ನು ಜೋಡಿಸುವ ಕ್ರಿಯೆಯನ್ನು ಮಾಡಲಾಗುತ್ತದೆ. ಇನ್ನು ಇದರ ಹಿಂದಿನ ವೈಜ್ಞಾನಿಕ ಸತ್ಯಾಂಶವನ್ನು ನೋಡುವುದಾದರೆ, ನಮಗೆ ತಿಳಿದು ಬರುವುದು ಇಷ್ಟು. ಎರಡು ಕೈಗಳ ಅಂಗೈಗಳನ್ನು ಪರಸ್ಪರ ಜೋಡಿಸುವುದರಿಂದ ಹತ್ತು ಬೆರಳುಗಳು ಪರಸ್ಪರ ಕೂಡುತ್ತವೆ. ಆಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ತಾಕುತ್ತವೆ ಇದರಿಂದ ನಮಗೆ ಪರಿಚಯವಾಗುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನಾವು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ದೈಹಿಕವಾಗಿ ಆ ವ್ಯಕ್ತಿಯನ್ನು ಸ್ಪರ್ಶಿಸಲು ಹೋಗದ ಕಾರಣ, ಯಾವುದೇ ಕೀಟಾಣುಗಳು ಸಹ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ.

14. 🌸ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು

ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದಾಗಿ, ಅದೃಷ್ಟವು ನಮಗೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ಆದರೆ ಇಂದು ಸ್ಟೇನ್‍ಲೆಸ್ ಸ್ಟೀಲ್‍ನಲ್ಲಿ ಮಾಡಲಾಗುತ್ತಿದೆ.ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹವನ್ನು ಸೇರುವ ವ್ಯವಸ್ಥೆಯನ್ನು ನಮ್ಮ ಪೂರ್ವಜರು ಮಾಡಿದ್ದರು. ಇದು ಒಂದು ಸಂಪ್ರದಾಯವಾಗಿ ಇಂದಿಗು ನಡೆದುಕೊಂಡು ಬಂದಿದೆ.

15. 🌸ಹಣೆಗೆ ಸಿಂಧೂರ ಅಥವಾ ಕುಂಕುಮ ಹಚ್ಚುವುದು 

ಮದುವೆಯಾದ ಹೆಂಗಸರು ಹಣೆಯಲ್ಲಿ ಧರಿಸುವ ಸಿಂಧೂರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಏಕೆಂದರೆ ಸಿಂಧೂರವನ್ನು ಅರಿಶಿಣ-ಸುಣ್ಣ ಮತ್ತು ಪಾದರಸದ ಲೋಹಗಳನ್ನು ಸೇರಿಸಿ ಮಾಡಿರುತ್ತಾರೆ. ಪಾದರಸವು ಸ್ವಾಭಾವಿಕವಾಗಿ ರಕ್ತದ ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಲೈಂಗಿಕಾಸಕ್ತಿಯನ್ನು ಸಹ ಕೆರಳಿಸುತ್ತದೆ. ಇದರಿಂದಾಗಿಯೇ ವಿಧವೆಯರು ಸಿಂಧೂರವನ್ನು ಧರಿಸಲು ಸಂಪ್ರದಾಯ ನಿಷೇಧ ಹೇರಿರುವುದು.ಸಿಂಧೂರವನ್ನು ಹಚ್ಚಿಕೊಳ್ಳುವಾಗ ಪಿಟ್ಯುಟರಿ ಗ್ರಂಥಿಗಳವರೆಗೆ ಹಚ್ಚಿಕೊಂಡರೆ ಒಳ್ಳೆಯದು. ಏಕೆಂದರೆ ಈ ಗ್ರಂಥಿಗಳಲ್ಲಿಯೇ ನಮ್ಮ ಭಾವನೆಗಳೆಲ್ಲವು ಕ್ರೋಢೀಕರಣಗೊಳ್ಳುವುದು. ಪಾದರಸವು ಒತ್ತಡ ಮತ್ತು ಆಯಾಸವನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ತನ್ನಲ್ಲಿ ಹೊಂದಿದೆ.

16. 🌸ನಾವೇಕೆ ಅರಳಿ ಮರವನ್ನು ಪೂಜಿಸುತ್ತೇವೆ

ಅರಳಿ ಮರ" ಅಥವಾ ಅಶ್ವತ್ಥ ವೃಕ್ಷ ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಒಬ್ಬ ಸಾಮಾನ್ಯ ಹಳ್ಳಿಯವರು ಅಥವಾ ಜನರು ಸಹ ಇದನ್ನು ಬೆಳೆಸಿ, ಪೋಷಿಸಿ, ಇದರ ರಕ್ಷಣೆಗೆ ನಿಂತಿರುತ್ತಾರೆ ಎಂದರೆ ಅಂತಹದು ಏನಿದೆ ಈ ಮರದಲ್ಲಿ? ಹೌದು, ಇದೆ ಅದನ್ನೆ ನಮ್ಮ ಪೂರ್ವಿಕರು ಕಂಡು ಹಿಡಿದಿದ್ದು, ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕ ಎಂದು ಪರಿಗಣಿಸಿಯೇ, ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸಲು ತಿಳಿಸಿದ್ದಾರೆ.

17. 🌸ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗಬಾರದು

ಇದರ ಹಿಂದೆ ಒಂದು ಕಟ್ಟುಕತೆಯಿದೆ, ಅದೇನೆಂದರೆ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದೆವ್ವ ಅಥವಾ ಭೂತಗಳನ್ನು ಆಹ್ವಾನಿಸಿದಂತಾಗುತ್ತವೆ ಎಂಬುದು. ಆದರೆ ವಿಜ್ಞಾನವು ಹೇಳುವುದೇನೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವು ಇರುತ್ತದೆ (ಇದನ್ನು ಹೃದಯದ ಕಾಂತ ಅಥವಾ ಮ್ಯಾಗ್ನೆಟಿಕ್ ಕ್ಷೇತ್ರ ಎಂದು ಸಹ ಕರೆಯುತ್ತಾರೆ. ಏಕೆಂದರೆ ರಕ್ತ ಪರಿಚಲನೆಯ ಕಾರಣವಾಗಿ) ಮತ್ತು ಭೂಮಿಯೇ ಒಂದು ದೊಡ್ಡ ಸೂಜಿಗಲ್ಲು ಅಥವಾ ಮ್ಯಾಗ್ನೆಟ್. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತೇವೆಯೋ, ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಂದೆ ರಕ್ತದ ಒತ್ತಡ ಮತ್ತು ಹೃದ್ರೋಗದಂತಹ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಈ ಕಾಂತ ಕ್ಷೇತ್ರದ ಸಮತೋಲವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಕಬ್ಬಿಣಾಂಶವಿರುತ್ತದೆ. ನಾವು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು , ಅಲ್ಜೀಮರ್ ಕಾಯಿಲೆ, ಪ್ರಜ್ಞಾಶೂನ್ಯತೆ ( ಅರಿವಿನ ಕೊರತೆ), ಪಾರ್ಕಿನ್‍ಸನ್ ಕಾಯಿಲೆ ಮತ್ತು ಮೆದುಳಿನ ಕಾರ್ಯ ಕ್ಷೀಣಿಸುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

18. 🌸ನವರಾತ್ರಿಗಳು ಏಕೆ ಇವೆ

ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕು ಮತ್ತು ಇಂದಿನ ಜೀವನಕ್ಕು ಅಜಗಜಾಂತರ ವ್ಯತ್ಯಾಸಗಳು ನಮಗೆ ಕಂಡು ಬರುತ್ತವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂಬ ಎರಡು ನವರಾತ್ರಿಗಳನ್ನು ನಾವು ಆಚರಿಸುತ್ತೇವೆ. ಈ ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತ ಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು ( ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು ಹೆಚ್ಚಾಗುತ್ತದೆ) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.

19. 🌸ಖಾರದ ಜೊತೆಗೆ ಆರಂಭ ಮತ್ತು ಸಿಹಿಯ ಜೊತೆಗೆ ಮುಕ್ತಾಯ

ನಮ್ಮ ಪೂರ್ವಿಕರು ನಮಗೆ ಹೇಳಿರುವುದು ಹೀಗೆ:  ಊಟ ಮಾಡುವಾಗ ಖಾರವನ್ನು ಮೊದಲು ಸೇವಿಸಿ ತದನಂತರ ಮುಕ್ತಾಯ ಮಾಡುವಾಗ ಸಿಹಿಯನ್ನು ಸೇವಿಸಿ ಎಂದು.ಇದರ ಹಿಂದಿನ ಕಾರಣವೇನೆಂದರೆ, ಖಾರವು ನಮ್ಮ ಹೊಟ್ಟೆಯಲ್ಲಿ ಜೀರ್ಣ ಮಾಡುವಂತಹ ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದ ಜೀರ್ಣ ಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತದೆ. ಇನ್ನೂ ಸಿಹಿ ತಿಂಡಿಗಳು ಅಥವಾ ಕಾರ್ಬೋಹೈಡ್ರೇಟ್‍ಗಳು ಜೀರ್ಣ ಕ್ರಿಯೆಯನ್ನು ಕೆಳಗೆ ಎಳೆಯುವ ಸಾಮರ್ಥ್ಯವನ್ನು ಹೊಂದಿವೆ. ಇದರಿಂದಾಗಿ ಜೀರ್ಣವಾದ ಆಹಾರವು ಸರಾಗವಾಗಿ ಕರುಳುಗಳಲ್ಲಿ ಸಾಗಿ ಹೋಗುತ್ತದೆ. ಇದಕ್ಕಾಗಿಯೇ ಸಿಹಿಯನ್ನು ಕಡೆಯಲ್ಲಿ ಸೇವಿಸಿ ಎಂದು ಹೇಳುವುದು.

20 🌸ಕೈಗಳಿಗೆ ಮೆಹಂದಿ/ಹೆನ್ನಾವನ್ನು ಹಚ್ಚಿಕೊಳ್ಳುವುದು

ಕೈಗಳಿಗೆ ಅಲಂಕಾರವನ್ನು ನೀಡುವುದರ ಜೊತೆಗೆ ಮೆಹಂದಿಯು ತನ್ನಲ್ಲಿರುವ ಔಷಧೀಯ ಗುಣಗಳಿಂದ ಖ್ಯಾತಿ ಪಡೆದಿದೆ. ಮದುವೆಯು ಅತ್ಯಂತ ಒತ್ತಡಕಾರಿಯಾಗಿರುವ ಸಂಗತಿ ಎಲ್ಲರಿಗು ತಿಳಿದ ವಿಚಾರವೇ. ಈ ಒತ್ತಡವು ತಲೆನೋವು ಮತ್ತು ಜ್ವರವನ್ನು ತರಬಹುದು. ಆದ್ದರಿಂದ ಮದುವೆ ದಿನ ಹತ್ತಿರ ಬಂದಾಗ ವಧುವಿಗೆ ಮೆಹಂದಿಯನ್ನು ಹಚ್ಚುತ್ತಾರೆ. ಇದರಿಂದ ವಧುವಿಗೆ ಒತ್ತಡವು ಕಡಿಮೆಯಾಗುತ್ತದೆ ಮತ್ತು ಆಕೆಯ ದೇಹಕ್ಕೆ ಇದು ತಂಪನ್ನು ನೀಡಿ, ನರಗಳು ಒತ್ತಡಕ್ಕೆ ಒಳಗಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ಮೆಹಂದಿಯನ್ನು ನರಗಳು ಕೊನೆಗೊಳ್ಳುವ ಭಾಗದಲ್ಲಿ ಅಂದರೆ, ಅಂಗೈ ಮತ್ತು ಅಂಗಾಲುಗಳಿಗೆ ಹಚ್ಚುತ್ತಾರೆ.

*21. 🌸ದೀಪಾವಳಿಯ ಆಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಸ್ವಚ್ಛತಾ ಕಾರ್ಯಗಳು

ದೀಪಾವಳಿಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಅಂದರೆ ಚಳಿಗಾಲದ ಆರಂಭ ಕಾಲದಲ್ಲಿ ಬರುತ್ತದೆ. ಆಗ ತಾನೇ ಮಳೆಗಾಲವು ಮುಗಿದಿರುತ್ತದೆ ಈ ಕಾಲದಲ್ಲಿ. ಮಳೆಗಾಲವು ಎಲ್ಲರಿಗು ತಿಳಿದಂತೆ ಪ್ರತಿಯೊಂದಕ್ಕು ಹಾನಿಯನ್ನು ಮಾಡಿರುತ್ತದೆ. ಸುಮಾರು ಮನೆಗಳು ಇದರಿಂದ ಹಾನಿಗೆ ಒಳಗಾಗಿರುತ್ತವೆ. ಸುಮಾರು ಮನೆಗಳ ದುರಸ್ತಿ ಕಾರ್ಯವು ನಡೆಯಬೇಕಾಗಿರುತ್ತದೆ. ಆದ್ದರಿಂದ ಚಳಿಗಾಲದ ಆರಂಭದಲ್ಲಿ ಬರುವ ಈ ಹಬ್ಬದ ನೆಪದಲ್ಲಿ ಸುಮಾರು ಜನರು ತಮ್ಮ ಮನೆಗಳನ್ನು ದುರಸ್ತಿ ಮಾಡಿಕೊಳ್ಳುತ್ತಾರೆ. ಮನೆಗೆ ಸುಣ್ಣ - ಬಣ್ಣ ಬಳಿದು ಅಂದವನ್ನು ಸಹ ಹೆಚ್ಚಿಸುತ್ತಾರೆ. ಜೊತೆಗೆ ಚಳಿಗಾಲದ ಉಡುಗೆ-ತೊಡುಗೆಗಳನ್ನು ಸಹ ಕೊಂಡುಕೊಳ್ಳುತ್ತಾರೆ.
**********

Aachaara Vichaara

ದೇವರನ್ನು ಆಶ್ರಯಿಸುವ ವಿಧಾನ - ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸ ಬಹುದು.

1.ಮಾರ್ಜಾಲ ಕಿಶೋರ ನ್ಯಾಯ
2.ಮರ್ಕಟ ಕಿಶೋರ ನ್ಯಾಯ
3.ಮತ್ಸ್ಯ ಕಿಶೋರ ನ್ಯಾಯ.

ಮಾರ್ಜಾಲ ಕಿಶೋರ ನ್ಯಾಯ ---- ಬೆಕ್ಕು ತನ್ನ ಮರಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಅದರ ಕತ್ತನ್ನು ಕಚ್ಚಿಕೊಂಡು ಉಪಾಯವಾಗಿ ಕೊಂಡೊಯ್ಯುತ್ತದೆ. ಆದರೆ ಮರಿಗೆ ಚೂರಾದರೂ ನೋವಾಗುವುದಿಲ್ಲ. ಹಾಗೆ ಭಗವಂತನನ್ನು ಆಶ್ರಯಿಸಿದವರಿಗೆ ಕರ್ಮಗಳನ್ನು ಕಳೆಯುತ್ತಾನೆ. ಆಗ ಮನುಷ್ಯ ಕಷ್ಟಗಳಲ್ಲಿ ತೊಳಲಾಡುತ್ತಾನೆ. ಅದರಿಂದ ಭಗವಂತ ಭಕ್ತನ ವಿಶ್ವಾಸಕ್ಕೆ ಚೂರೂ ಧಕ್ಕೆ ಬರದ ಹಾಗೆ ಕಾಪಾಡುತ್ತಾನೆ.

ಮರ್ಕಟ ಕಿಶೋರ ನ್ಯಾಯ --- ಕೋತಿ ತನ್ನ ಮರಿಯನ್ನು ಹಿಡಿದು ಕೊಳ್ಳುವುದೇ ಇಲ್ಲ. ಏಕೆಂದರೆ ಕೋತಿಯ ಮರಿ ಅಮ್ಮನನ್ನು ಎಷ್ಟು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆಂದರೆ ತಾಯಿಗೆ ತಲೆ ಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ಸಲೀಸಾಗಿ ಹಾರಾಡುತ್ತದೆ. ಹಾಗೇ ಇಲ್ಲಿ ಭಕ್ತ ಭಗವಂತನನ್ನು ಎಷ್ಟು ಗಟ್ಟಿಯಾಗಿ ಆಶ್ರಯಿಸುತ್ತಾನೆಂದರೆ ಯಾವುದೇ ಕಷ್ಟಗಳು ಯಾವುದೇ ಪರಿಸ್ಥಿತಿಯೂ ಅವನ ನಂಬಿಕೆಯನ್ನು ಕದಲಿಸಲಾರದು. ಇದು ಅತ್ಯಂತ ಕಠಿಣ, ಅಷ್ಟೇ ಶ್ರೇಷ್ಠವಾದುದು.

ಮತ್ಸ್ಯ ಕಿಶೋರ ನ್ಯಾಯ --- ಮೀನಿನ ಮರಿ ಕೋಟ್ಯಾಂತರ ಮೈಲಿ ದೂರದಲ್ಲಿದ್ದರೂ ಅದು ತಾಯಿಯನ್ನು ನೆನೆದರೆ ಸಾಕು ಮರುಕ್ಷಣ ತಾಯಿ ಕಣ್ಣಮುಂದೆ ಇರುತ್ತದೆ. ಹಾಗೆ ಭಗವಂತನನ್ನು ಸರಿಯಾಗಿ ನೆನೆಸಿ ಕೊಳ್ಳುವ ಕಲೆ ಗೊತ್ತಿದ್ದರೆ ನಮ್ಮ ಮನಸು ಸದಾ ಅವನಲ್ಲಿಲ್ಲದಿದ್ದರೂ ಕರೆದೊಡನೆ ಬರುತ್ತಾನೆ.

ಸರ್ವೇ ಜನಾ ಸುಖಿನೋ ಭವಂತು|
ಸಮಸ್ತ ಸನ್ಮಂಗಳಾನಿ ಭವಂತು ||
**********

ಮನೆಯಲ್ಲಿ ಅನುಸರಿಸಬೇಕಾದ ಒಂದಿಷ್ಟು ನಿಯಮಗಳ ಸಂಪ್ರದಾಯಗಳ ಕುರಿತು ಮಾಹಿತಿ

1) ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.

2) ಮನೆಯ ಮುಖ್ಯ ದ್ವಾರ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ. ಅಷ್ಟು ಮಾತ್ರವೇ ಅಲ್ಲ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ.

3) ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ. ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.

4) ಪರಕೆಯ ತುದಿಯ ಭಾಗ (ಕಸ ಗುಡಿಸುವ ಭಾಗ) ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನ ಮನೆಯ ಸೂಚಕವಾಗಿದೆ. ಆದ್ದರಿಂದ ಹಾಗೆ ಇಡುವುದು ಸತ್ತವರ ಮನೆಯಲ್ಲಿ ಮಾತ್ರ.

5) ಮೊರ, ಪರಕೆಗಳನ್ನು ಕಾಲುಗಳಿಂದ ಒದೆಯಬೇಡಿ ಅಥವಾ ತುಳಿಯಬೇಡಿ ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೆ ಪರಕೆಗೆ ನಮಸ್ಕರಿಸಿ.

6) ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಎದುರಿಗೆ ಅಥವಾ ಬಳಿ ಬಿಡಬೇಡಿ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು. ರಂಗೋಲಿ ಹಾಕದೆ ಹಾಗೆ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರು ಹಾಕಿ.

7) ಮನೆಯ ಗೋಡೆಯ ಮೇಲೆ, ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಶಾಯಿ ಅಥವಾ ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.

8) ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡಬೇಡಿ. ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು. ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ. ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು

9) ಮಂಗಳವಾರ, ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳು ಅವಾಚ್ಯ ಶಬ್ದಗಳಿಂದ ಬಯ್ಯಲುಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.

10) ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿಗಳ, ಪ್ರಯೋಗ ಮಾಡಿಸಿದ್ದರೆ ಅವುಗಳ ಪರಿಣಾಮ ಬೇಗ

11) ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರ್ಯದ ಸಂಕೇತವಾಗಿದೆ.

12) ಉಗುರುಗಳನ್ನು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ, ಮಂಗಳವಾರ ಹಾಗೂ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಎಸೆಯಬಾರದು. ಹಾಲನ್ನು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.

13) ಮನೆಯಲ್ಲಿ ಹೆಣ್ಣುಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ

14) ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.

15) ಹಾಸಿಗೆ , ಸೋಫಾ, ಮಂಚದ ಮೇಲೆ ಕುಳಿತು ದ್ಯಾನ ಪೂಜೆಗಳನ್ನು ಮಾಡಬೇಡಿ ಅಂತಹವು ಯಾವ ಫಲವನ್ನು ನೀಡುವುದಿಲ್ಲ.

16) ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ. ಮುಸ್ಸಂಜೆ ವೇಳೆ ಮತ್ತು ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ಅದು ದರಿದ್ರಲಕ್ಷ್ಮೀ ಮನೆಯಲ್ಲಿ ತಾಂಡವವಾಡುತ್ತಾಳೆ.

ಕರ್ಮ ಅಂದರೆ ಬೇರೇನೂ ಅಲ್ಲ. ನಾವು ಮಾಡಿದ ತಪ್ಪು- ಸರಿಗಳನ್ನು ಅನುಭವಿಸುವುದು.
***

ಸಂಪ್ರದಾಯಗಳ ಗುಣಧರ್ಮಗಳು ...

ಚಿಕ್ಕಂದಿನಲ್ಲಿ ನಮಗೆ ಹೆಚ್ಚಿನ ಎಲ್ಲಾ ಹಿರಿಯರು ಹೇಳುತ್ತಿದ್ದರು: “ಪುಸ್ತಕವನ್ನು ತುಳಿದರೆ ನಮಸ್ಕಾರ ಮಾಡಬೇಕು, ಇಲ್ಲದಿದ್ದರೆ ವಿದ್ಯಾದೇವತೆಯ ಶಾಪ ಸಿಗುತ್ತದೆ” ಎಂದು. ಈ ಕ್ರಮ ಅನೇಕರು ಎಷ್ಟು ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದರೆ ಅಪ್ಪಿತಪ್ಪಿಯೂ ಒಮ್ಮೆ ಕಾಲು ತಾಕಿದರೆ ಪ್ರತಿಯಾಗಿ ಕಿವಿ-ಗಲ್ಲ ಮುಟ್ಟಿ ನಮಸ್ಕಾರ ಮಾಡದಿದ್ದರೆ ಅವರಿಗೆ ಭೀತಿಯುಂಟಾಗುತ್ತದೆ, ತೀವ್ರವಾಗಿ ಇರುಸುಮುರುಸುಂಟಾಗುತ್ತದೆ, ಯಾಕೆ? ವಿದ್ಯಾದೇವತೆಯ ಶಾಪ ತಟ್ಟಿದರೆ ಏನು ಗತಿ?
ಪುಸ್ತಕದ ಬಗ್ಗೆ ಗೌರವವಿರಿಸಿಕೊಳ್ಳಬೇಕು, ಅವಗಣನೆ ಸಲ್ಲದು ಎಂಬ ಸದಾಚಾರದಿಂದ ಶುರುವಾದ ಈ ಕ್ರಮ.

ಇನ್ನೂ ಕೆಲವು ಉದಾಹರಣೆಗಳು:

‘ಬೆಕ್ಕು ಅಡ್ಡ ಬಂದರೆ ವಿಘ್ನ’ ಎಂಬುದನ್ನು ಈಗ ಅನೇಕರು ಹಾಸ್ಯವೆಂದು ಪರಿಗಣಿಸುತ್ತಾರೆ, ಆದರೆ ಅನೇಕರ ಜೀವನದಲ್ಲಿ ಹಾಸುಹೊಕ್ಕಾಗಿ ಇನ್ನೂ ಮೆರೆಯುತ್ತಿರುವ ಹಲವು ಉದಾಹರಣೆಗಳನ್ನು ಕೊಡಬಹುದು.

ನಿನಗಿಂತ ದೊಡ್ಡವರಿಗೆ ಕಾಲು ತಾಕಿದರೆ ನಿನ್ನ ಕಾಲಿನಲ್ಲಿ ಹುಳುವಾಗುತ್ತದೆ, ತಪ್ಪಿಸಬೇಕಾದರೆ ನಮಸ್ಕಾರ ಮಾಡಬೇಕು

ದುಡ್ಡನ್ನು ತುಳಿಯಬಾರದು

ಎಡಗೈಯಲ್ಲಿ ದುಡ್ಡು ಕೊಡಬಾರದು

ಇತರರು ನಮಗೆ ಕೊಟ್ಟದ್ದನ್ನು ಎಡಗೈಯಲ್ಲಿ ತೆಗೆದುಕೊಳ್ಳಬಾರದು

ಎಡಗೈಯ ಮೂಲಕ ಇರಿಸಿದ ವಸ್ತು ಕಾಣೆಯಾಗುತ್ತದೆ

ಕೈ-ಕಾಲಿಂದ ಉಗುರು ಕಿತ್ತ ಮೇಲೆ ಅದನ್ನು ಯಾರಿಗೂ ಸಿಗದ ಜಾಗಕ್ಕೆ ಹಾಕಬೇಕು, ಅದನ್ನು ಯಾರಾದರೂ ತುಳಿದು ಬಿಟ್ಟರೆ ಅವರು ನಿನ್ನ ವೈರಿಗಳಾಗುತ್ತಾರೆ

ತಪ್ಪುದಾರಿಗೆಳೆಯುವುದಲ್ಲ ಉದ್ದೇಶ, ತುಂಟ ಮಕ್ಕಳನ್ನು ಅಂಕೆಯಲ್ಲಿಡುವ ಅಸ್ತ್ರ, ಅಷ್ಟೆ:

ಬಹುಷಃ ಈ ಭೀತಿವಾದ ಅನೇಕ ಮನೆಗಳಲ್ಲಿ ಇನ್ನೂ ಎಳೆಯದರಲ್ಲಿಯೇ ಶುರುವಾಗುತ್ತದೆ: ಊಟ ಮಾಡದಿದ್ದರೆ ಕಳ್ಳ ಬಂದು ಎತ್ತಿಕೊಂಡು ಹೋಗುತ್ತಾನೆ, ಹಾಗೆ ಮಾಡದಿದ್ದರೆ ಡಾಕ್ಟ್ರು ಸೂಜಿ ಚುಚ್ಚುತ್ತಾರೆ, ಭೂತ-ರಾಕ್ಷಸ ಕಾಟ ಕೊಡುತ್ತಾನೆ ಎಂದಿತ್ಯಾದಿ ಹೆದರಿಸಿ ಎಳೆಯರನ್ನು ಬಗ್ಗಿಸುವುದು ಕೂಡ ಬಹುಷಃ ನಮಗೆ ತಂದುಕೊಡುವುದು ಕೇವಲ ತಾತ್ಕಾಲಿಕ ವಿಜಯ. ದೂರಗಾಮಿ ದೃಷ್ಟಿಯಿಂದ ನೋಡಿದರೆ ಇದು ಅಂತಹ ಎಳೆಯರನ್ನು ವಿಕೃತಗೊಳಿಸುತ್ತದೆ ಎಂದು ನನಗನಿಸುತ್ತದೆ. ಹಠಮಾರಿ ಮಕ್ಕಳನ್ನು ಈ ರೀತಿಯಲ್ಲಲ್ಲದೆ ಹತೋಟಿಯಲ್ಲಿಡುವುದು ಕಷ್ಟಕರ ಎಂದು ನೀವು ಹೇಳಿದರೆ ಅದಕ್ಕೆ ಮನೋತಜ್ಞರು ಬೇರೆಯೇ ಉತ್ತರಗಳನ್ನು ಕೊಡಬಹುದು.
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
****


No comments:

Post a Comment