SEARCH HERE

Tuesday 1 January 2019

ಪಾಣಿನಿ panini 700 BC


ಪಾಣಿನಿ ಸುಪ್ರಸಿದ್ಧ ಸಂಸ್ಕೃತ ವ್ಯಾಕರಣ ಬರೆದಾತ. ತಾಯಿ ದಾಕ್ಷಾ ಅಥವಾ ದಾಕ್ಷೀ. ತಂದೆ ಶಲಂಕ, ಗಾಂಧಾರದೇಶದ ಶಲಾತುರ ಗ್ರಾಮದವ. ಪಾಣಿನಿಯನ್ನು ಅವನ ತಾಯಿಯ ಹೆಸರಿನ ಮೇಲೆ ದಾಕ್ಷಾ ಅಥವಾ ದಾಕ್ಷೀಪುತ್ರನೆಂದೂ ತಂದೆಯ ಹೆಸರಿನ ಮೇಲೆ ಶಾಲಂಕನೆಂದೂ ಗ್ರಾಮದ ಹೆಸರಿನ ಮೇಲೆ ಶಾಲಾತುರೀಯ ಎಂದೂ ಕರೆಯುತ್ತಿದ್ದರಂತೆ. ಶಾಲಾತುರೀಯ ಎಂಬ ರೂಪವನ್ನು ಪಾಣಿನಿಯೇ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಈತನಿಗೆ ಅಹಿಕ ಎಂಬ ಇನ್ನೊಂದು ಹೆಸರೂ ಇತ್ತು ಎಂದು ತಿಳಿದುಬರುತ್ತದೆ. ಪಾಟಲೀಪುತ್ರದಲ್ಲಿದ್ದ ವರ್ಷ ಎಂಬ ಆಚಾರ್ಯರಲ್ಲಿ ಪಾಣಿನಿ ಶಿಷ್ಯನಾಗಿದ್ದುದಾಗಿ ಕಥಾಸರಿತ್ಸಾಗರದಲ್ಲಿ ಹೇಳಲ್ಪಟ್ಟಿದೆ. ಪಾಣಿನಿ ಸಿಂಹದ ಬಾಯಿಗೆ ತುತ್ತಾಗಿ ಸತ್ತನೆಂದು ಕಥೆಯೊಂದರಿಂದ ತಿಳಿದುಬರುತ್ತದೆ.
ಪಾಣಿನಿಯ ಕಾಲವೂ ಇಂತಹದ್ದೇ ಎಂದು ತಿಳಿದು ಬಂದಿಲ್ಲ. ಕ್ರಿಸ್ತಪೂರ್ವದಲ್ಲಿ ಇದ್ದನೆಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲವಾದರೂ ಬ್ರಾಹ್ಮಣಗಳ ಕಾಲಕ್ಕಿಂತ ಈಚಿನವನೆಂದೂ ಪ್ರಾಯಃ ಪ್ರಾಚೀನ ಉಪನಿಷತ್ತುಗಳ ಕಾಲದವನಿರಬೇಕೆಂದೂ ಕೆಲವರು ಹೇಳಿದರೆ, ಬೌದ್ಧರ ಕಾಲಕ್ಕಿಂತ ಹಿಂದೆ ಅಂದರೆ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ಇನ್ನು ಕೆಲವರ ಅಭಿಮತ, ಅಲೆಗ್ಜಾಂಡರನ ದಂಡ(ದ)ಯಾತ್ರೆಗಳಿಗಿಂತ ಹಿಂದೆ ಪಾಣಿನಿಯ ವ್ಯಾಕರಣ ರಚಿತವಾಗಿದ್ದಿರಲು ಸಾಧ್ಯವೇ ಇಲ್ಲವೆಂದೂ ವೀಬರ್ ಹೇಳುತ್ತಾರೆ. ಅವರು ಹೇಳುವಂತೆ ಯವನರ ಲಿಪಿ ಎಂಬರ್ಥದಲ್ಲಿ ಯವನಾನೀ ಎಂಬ ಪದವನ್ನು ಪಾಣಿನಿ ಬಳಸಿದ್ದಾನೆ. ಅಲೆಗ್ಜಾಂಡರನದಂಡದಯಾತ್ರೆಗಳಿಗಿಂತ ಹಿಂದೆ ಭಾರತೀಯರಿಗೆ ಯವನರ ಪರಿಚಯವಿರಲಿಲ್ಲ. ಪಾಣಿನಿ ಯವನಾನೀ ಪದಬಳಸಿರುವುದರಿಂದ ಅವನಿಗೆ ಯವನರ ಮತ್ತು ವಾಯವ್ಯ ಪ್ರಾಂತ್ಯಗಳ ಪರಿಚಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಇದು ನಂಬಲರ್ಹವಲ್ಲದ ವಾದ. ಆದರೆ ಇದಕ್ಕೆ ಪೂರಕವಾಗಿ ಪಾಣಿನಿಯ ಗಣಪಾಠದಲ್ಲಿ ಆಂಭಿ, ಭಗಲ ಎಂಬ ಹೆಸರುಗಳೂಬರುತ್ತವೆ. ಇದರಿಂದ ಪಾಣಿನಿ ಕ್ರಿ.ಪೂ ನಾಲ್ಕನೆಯ ಶತಮಾನಕ್ಕಿಂತ ಹಿಂದಿನವನೆಂದು ಹೇಳಲು ಸಾಧ್ಯವೇ ಇಲ್ಲಎನ್ನುವ ವಾದವಿದೆ. ಅದಲ್ಲದೆ ಪತಂಜಲಿಯ ವ್ಯಾಕರಣ ಮಹಾಭಾಷ್ಯ ಕ್ರಿ.ಪೂ ಎರಡನೆಯ ಶತಮಾನದಲ್ಲಿರಚಿತವಾದುದೆಂದು ಹೇಳುವುದರಿಂದ ಪಾಣಿನಿ ಕ್ರಿಪೂ 400ಕ್ಕಿಂತ ಈಚಿನವನಾಗಿರಲೂ ಸಾಧ್ಯವಿಲ್ಲ. ಹೀಗೆಯೇವಿಚಾರಮಾಡಿ ಕೀತ್, ವೀಲರ್, ಮ್ಯಾಕ್ಸ್ ಮುಲ್ಲರ್ ಮುಂತಾದವರು ಪಾಣಿನಿಯ ಕಾಲ ಸುಮಾರು ಕ್ರಿ.ಪೂ 350 ಇರಬೇಕೆಂದು ಅಲ್ಲಿಗೆ ತಂದು ನಿಲ್ಲಿಸಿದ್ದಾರಾದರೂ ಗೋಲ್ಡ್ ಸ್ಟಕರ್ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ, ಭಂಡಾರ್ಕರ್ ಕ್ರಿ.ಪೂ ಐದನೆಯ ಶತಮಾನಕ್ಕಿಂತ ಈಚಿನವನಿರಬೇಕೆಂದೂ ಬೆಳ್ವಲ್ಕರ್ ಅವರು ಕ್ರಿ.ಪೂ 700ರಿಂದ 600 ರೊಳಗಿರಬೇಕೆಂದೂ ನಾಮಾಶ್ರಯೀ ಅವರು ಕ್ರಿ.ಪೂ 2400 ರಲ್ಲಿದ್ದಿರಬೇಕೆಂದೂ ವಿ ಎಸ್.ಅಗ್ರವಾಲಾ ಕ್ರಿ.ಪೂ480ರಿಂದ 410 ರೊಳಗಿರಬೇಕೆಂದೂ ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ.
ಪಾಣಿನಿಯ ವ್ಯಾಕರಣ ಸೂತ್ರಾತ್ಮಕವಾಗಿದೆ. ಅದರಲ್ಲಿ ಒಟ್ಟು 3,981 ಸೂತ್ರಗಳಿವೆ. ಈ ಎಲ್ಲ ಸೂತ್ರಗಳೂಒಂದೊಂದರಲ್ಲಿಯೂ ನಾಲ್ಕು ನಾಲ್ಕು ಪಾದಗಳುಳ್ಳ ಎಂಟು ಅಧ್ಯಾಯಗಳಾಗಿ ವಿಭಾಗಿಸಲ್ಪಟ್ಟಿವೆ. ಆದ್ದರಿಂದ ಈವ್ಯಾಕರಣ ಗ್ರಂಥಕ್ಕೆ ಅಷ್ಟಾಧ್ಯಾಯಿ ಎಂಬ ಹೆಸರೇ ಬಳಕೆಯಲ್ಲಿದೆ. ಅಷ್ಟಕ, ಪಾಣಿನೀಯ ವೃತ್ತಿ ಸೂತ್ರ, ಅಕಾಲಕವ್ಯಾಕರಣ, ಶಾಲಾತುರೀಯತಂತ್ರ ಎಂಬುದು ಈ ಅಷ್ಟಾಧ್ಯಾಯಿಯ ಇತರ ಹೆಸರುಗಳು.
ಪಾಣಿನಿಯ ಕಾಲದಲ್ಲಿ ಸಂಸ್ಕೃತ ಆಡುಭಾಷೆಯಾಗಿತ್ತು. ಅಲ್ಲದೆ ಗ್ರಾಂಥಿಕ ಸಂಸ್ಕೃತ ಭಾಷೆಗೂ ವ್ಯಾವಹಾರಿಕ ಸಂಸ್ಕೃತಭಾಷೆಗೂ ಅಷ್ಟಾಗಿ ವ್ಯತ್ಯಾಸವಿರಲಿಲ್ಲ. ಈ ಭಾಷೆಗೇ ಲೌಕಿಕ ಭಾಷೆ ಎನ್ನುವುದು. ಇದು ವೇದಗಳ ವೈದಿಕ ಭಾಷೆಗಿಂತ ತುಂಬ ಭಿನ್ನವಾಗಿತ್ತು. ಈ ವೈದಿಕ ಮತ್ತು ಲೌಕಿಕ ಭಾಷೆಗಳೆರಡಕ್ಕೂ ಅನ್ವಯಿಸುವಂತೆ ಒಂದೆ ವ್ಯಾಕರಣವನ್ನುಶಬ್ದಾನುಶಾಸನ ಎನ್ನುವ ಹೆಸರಿನಲ್ಲಿ ರಚಿಸಿದ ಕೀರ್ತಿ ಸಲ್ಲುವುದು ಪಾಣಿನಿಯೊಬ್ಬನಿಗೆ ಮಾತ್ರ. ಅಲ್ಲದೆ ಈವರೆಗೆ ಉಪಲಬ್ಧವಾಗಿರುವ ಶಬ್ದಾನುಶಾಸನಗಳಲ್ಲಿ ಸಮಗ್ರವಾಗಿರುವುದು ಪಾಣಿನಿಯ ಅಷ್ಟಾಧ್ಯಾಯಿಯೊಂದೇ. ಇದರಲ್ಲಿನ ಸಾಂಕೇತಿಕ ಪರಿಶುದ್ಧತೆ ಮತ್ತು ಸೂತ್ರನಿರ್ಮಾಣ ಚಾತುರ್ಯ ಬೇರೆಲ್ಲೂ ಕಾಣಸಿಗುವುದಿಲ್ಲ.
ಪಾಣಿನಿಯೇ ತನಗಿಂತ ಹಿಂದಿನ ಹತ್ತು ವೈಯಾಕರಣಿಗಳನ್ನೂ ಪ್ರಾಂಚ, ಉದಂಚ, ಎಂಬ ಎರಡೂ ವ್ಯಾಕರಣಪದ್ಧತಿಗಳನ್ನೂ ಹೆಸರಿಸಿದ್ದಾನೆ. ಆಪಿಶಲಿ, ಕಾಶಕೃತ್ಸ್ನ ಎಂಬುವರು ಪಾಣಿನಿಗಿಂತ ಹಿಂದೆಯೇ ಪ್ರಸಿದ್ಧಿಪಡೆದಿದ್ದ ವೈಯಾಕರಣಿಕಗಳು. ಕಾಶ್ಯಪ, ಗಾರ್ಗ್ಯ, ಗಾಲವ, ಚಾಕ್ರವರ್ಮ, ಭಾರದ್ವಾಜ ಶಾಕಟಾಯನ, ಶಾಕಲ್ಯ, ಸೇನಕ, ಸ್ಫೋಟಾಯನರು ಉದಂಚರು. ಪಾಣಿನಿಗಿಂತ ಹಿಂದಿನವನಾದ ಯಾಸ್ಕನೂ ಔದುಂಬರಾಯಣ, ಔಪಮನ್ಯು, ಶಾಕಟಾಯನ ಮುಂತಾದ ವೈಯಾಕರಣಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಇವರೆಲ್ಲರಲ್ಲಿ ಶಾಕಟಾಯನನೇಪ್ರಧಾನನೆನ್ನಬಹುದು. ಆದರೆ ಅವನ ವ್ಯಾಕರಣ ಗ್ರಂಥ ಇಂದಿಗೂ ಉಪಲಬ್ಧವಾಗಿಲ್ಲ.
ಪಾಣಿನಿಗಿಂತ ಹಿಂದೆಯೇ ಆಪಿಶಲಿ ಮತ್ತು ಕಾಶಕ್ರತ್ಸ್ನರ ವ್ಯಾಕರಣಗಳು ಪ್ರಚಲಿತವಾಗಿದ್ದುವು. ಕಾಶಕೃತ್ಸ್ನವ್ಯಾಕರಣದಲ್ಲಿಮೂರು ಅಧ್ಯಾಯಗಳೂ, ಆಪಿಶಲಿ ವ್ಯಾಕರಣದಲ್ಲಿ ಎಂಟು ಅಧ್ಯಾಯಗಳೂ ಇದ್ದುವು. ಆಪಿಶಲಿ ವ್ಯಾಕರಣ ಕ್ಲಿಷ್ಟವಾದದ್ದು. ಕಾಶಕೃತ್ಸ್ನ ವ್ಯಾಕರಣ ಕಾತಂತ್ರ ವ್ಯಾಕರಣಕ್ಕೆ ಮೂಲವಾಗಿದ್ದಂತೆ, ಆಪಿಶಲಿಯ ಅಷ್ಟಾಧ್ಯಾಯಿ ಪಾಣಿನಿಯಅಷ್ಟಾಧ್ಯಾಯಿಗೆ ಮೂಲವೆನಿಸಿಕೊಂಡಿದೆ. "ವಿಭಕ್ತ್ಯಂತಂ ಪದಂ" ಎಂಬ ಆಪಿಶಲಿಯ ಸೂತ್ರವೇ "ಸುಪ್ತಿಙಂತಂ ಪದಂ" ಎಂದು ಪಾಣಿನಿಯಿಂದ ರೂಪಾಂತರಗೊಂಡಿರುವುದು. ಆಪಿಶಲಿಯೇ ಪಂಚಪಾದಿ ಉಣಾದಿ ಸೂತ್ರಕರ್ತಾ ಎಂಬುದುಅಭಿಜ್ಞರ ಮತ. ಪಾಣಿನಿಯ ಪ್ರತ್ಯಾಹಾರಸೂತ್ರಗಳಿಗೂ ಆಪಿಶಲಿಯೇ ಮಾರ್ಗದರ್ಶಿ ಎಂದು ತೋರುತ್ತದೆ. ಹೀಗೆಸಂಸ್ಕೃತವ್ಯಾಕರಣ ಗ್ರಂಥಗಳಲ್ಲಿ ಆಪಿಶಲಿ ಮೂಲವಾದ ಪಾಣಿನೀಯ ಪದ್ಧತಿ ಮತ್ತು ಕಾಶಕೃತ್ಸ್ನ ಮೂಲವಾದಕಾತಂತ್ರಪದ್ಧತಿ ಎಂಬ ಎರಡು ಪದ್ಧತಿಗಳು ಕಂಡುಬರುತ್ತವೆ. ಚಾಂದ್ರ, ಜೈನೇಂದ್ರ, ಸರಸ್ವತೀ ಕಂಠಾಭರಣಗಳುಪಾಣಿನೀಯ ಪದ್ಧತಿಗೂ ಹೈಮ ಶಬ್ಬಾನುಶಾಸನ, ಮುಗ್ಧಬೋಧ, ಸಂಕ್ಷಿಪ್ತಸಾರ, ಸಾರಸ್ವತ, ಸುಪದ್ಮ, ಪ್ರಯೋಗರತ್ನಮಾಲಾಗಳು ಕಾತಂತ್ರಪದ್ಧತಿಗೂ ಸೇರಿದುವು. ಕಾಲಕ್ರಮದಲ್ಲಿ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ತಮಗೆಕಂಡುಬಂದ ಕೆಲವು ಲೋಪದೋಷಗಳನ್ನು ಕ್ರಮಪಡಿಸುವುದಕ್ಕಾಗಿಯೂ ಕೆಲವು ಕಡೆ ಕ್ಲಿಷ್ಟವಾದ ಸೂತ್ರಗಳ ಅರ್ಥವನ್ನುವಿವರಿಸುವುದಕ್ಕಾಗಿಯೂ ಅನಾವಶ್ಯಕವಾದುವನ್ನು ಪರಿಹರಿಸುವುದಕ್ಕಾಗಿಯೂ ಹೆಚ್ಚು ಲಾಘವವನ್ನುಸಾಧಿಸುವುದಕ್ಕಾಗಿಯೂ ಕಾತ್ಯಾಯನ, ಭಾರದ್ವಾಜ, ಸುನಾಗ ಮುಂತಾದವರು ಪಾಣಿನಿಯ ಸೂತ್ರಗಳಿಗೆ ವಾರ್ತಿಕಎಂಬ ಅಡಕವಾದ ಟಿಪ್ಪಣಿಗಳನ್ನು ಬರೆದರು. ಇವರಲ್ಲಿ ಕಾತ್ಯಾಯನನೇ ಪ್ರಮುಖ. ಇವನಿಗೆ ವರರುಚಿ ಎಂಬುದುಅಂಕಿತನಾಮ. ಕಾತ್ಯಾ ಎಂಬ ವಂಶದವನಾದುದರಿಂದ ಕಾತ್ಯಾಯನ ಎಂಬ ಹೆಸರೂ ರೂಢಿಯಲ್ಲಿದೆ. ಇವನನ್ನೇವಾರ್ತಿಕಾಚಾರ್ಯ, ವೃತ್ತಿಕಾರ ಎನ್ನುವುದು. ಈ ಕಾತ್ಯಾಯನನ ವಾರ್ತಿಕವನ್ನು ಆಧಾರವಾಗಿಟ್ಟುಕೊಂಡು ಪಾಣಿನಿಯಸೂತ್ರಗಳನ್ನು ಅರ್ಥೈಸಿಕೊಂಡು ವ್ಯಾಕರಣ ಮಹಾಭಾಷ್ಯವನ್ನು ಅನಂತರ ರಚಿಸಿದವ ಪತಂಜಲಿ. ಸಂಸ್ಕೃತವ್ಯಾಕರಣದಲ್ಲಿ ಈತನದೇ ಕೊನೆಯ ಮಾತೆಂದು ಈಗಲೂ ಪರಿಗಣಿಸಲಾಗುತ್ತಿದೆ. ಪಾಣಿನಿ, ವರರುಚಿ, ಪತಂಜಲಿ-ಈಮೂವರನ್ನೂ ವ್ಯಾಕರಣ ಶಾಸ್ತ್ರದಲ್ಲಿ ಧುರೀಣರಾದ ಮುನಿತ್ರಯರೆಂದು ಭಾವಿಸಲಾಗಿದೆ. ಈ ಮೂವರೂ ಮುನಿಗಳೇ ಆಗಿದ್ದರೆಂಬುದು ಸಾಂಪ್ರದಾಯಿಕ ನಂಬಿಕೆ.
ಪಾಣಿನಿಯ ಸೂತ್ರಗಳಿಗೆ ರಚಿತವಾಗಿರುವ ಟೀಕೆಗಳಲ್ಲಿ ಅತ್ಯಂತ ಪ್ರಾಚೀನವೂ ಪ್ರಧಾನವೂ ಆದುದು ಕಾಶಿಕಾವೃತ್ತಿ. ಇದನ್ನು ಜಯಾದಿತ್ಯ, ವಾಮನ ಎಂಬ ಇಬ್ಬರು ಜೈನಪಂಡಿತರು ಕ್ರಿ.ಶ. ಏಳನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿಸಿದರು ಎಂದು ತಿಳಿದು ಬರುತ್ತದೆ. ಪಾಣಿನಿಯ ಅಷ್ಟಾಧ್ಯಾಯಿ ಸೂತ್ರಗಳ ಮೂಲಕ ವ್ಯಾಕರಣಶಾಸ್ತ್ರ ಅಭ್ಯಸಿಸುವುದು ಇತ್ತೀಚಿನವರೆಗೂ ತುಂಬ ಕಷ್ಟಕರವಾಗಿತ್ತು. ಕ್ರಿ.ಶ. ಹದಿನೇಳನೆಯ ಶತಮಾನದಲ್ಲಿ ಭಟ್ಟೋಜಿ ದೀಕ್ಷಿತ ಬೇರೆ ಬೇರೆಪ್ರಕರಣಗಳಿಗೆ ಸಂಬಂಧಿಸಿದ ಸೂತ್ರಗಳನ್ನೆಲ್ಲ ಒಟ್ಟುಗೂಡಿಸಿ ಸಿದ್ಧಾಂತ ಕೌಮುದಿಯನ್ನು ರಚಿಸಿದ ಮೇಲೆ ಅದು ತುಂಬ ಜನಪ್ರಿಯವಾಯಿತು. ಸಿದ್ಧಾಂತಕೌಮುದಿಯ ಮೂಲಕವಾಗಿಯೇ ಶಾಸ್ತ್ರಾಭ್ಯಾಸ ಮಾಡುವ ಕ್ರಮ ಆರಂಭವಾಯಿತು.

ಪಾಣಿನಿಯ ಕುರಿತಾಗಿ ಇನ್ನೊಂದು ಕಥೆ ಹೀಗೆ ಹೇಳಲ್ಪಟ್ಟಿದೆ.

ಶಿವನಿಗೆ ಅನೇಕ ಶ್ರೇಷ್ಟರಾದ ಗಣಗಳ ಸಮೂಹವೇ ಇದ್ದಿತ್ತು. ಅವರಲ್ಲಿ ಪುಷ್ಪದಂತನೆನ್ನುವವನು ಕೂಡಾ ಒಬ್ಬ. ಆತ ಒಮ್ಮೆ ತಿಳಿಯದೇ ತಪ್ಪು ಮಾಡುತ್ತಾನೆ. ಆಗ ಪಾರ್ವತಿ ಕೋಪಗೊಳ್ಳುತ್ತಾಳೆ. ಕೋಪಗೊಂಡ ಪಾರ್ವತಿ ಶಾಪ ನೀಡುತ್ತಾಳೆ. ಆ ಶಾಪದ ಪರಿಣಾಮ ಪುಷ್ಪದಂತನು ಭೂಲೋಕದಲ್ಲಿ ವರರುಚಿ ಎನ್ನುವ ಹೆಸರಿನಿಂದ ಹುಟ್ಟುತ್ತಾನೆ. ವರರುಚಿಗೆ ಇನ್ನೊಂದು ಹೆಸರಿರುವುದು ಕಾತ್ಯಾಯನ ಎಂದು. ವರರುಚಿ ಪಾಟಲೀಪುತ್ರದಲ್ಲಿ ಉಪಾಧ್ಯಾಯ ವರ್ಷನೆನ್ನುವವನ ಬಳಿ ಸಕಲ ಶಾಸ್ತ್ರವಿದ್ಯೆಗಳನ್ನು ಕಲಿಯುತ್ತಾನೆ. ಹಾಗೆಯೇ ಅಲ್ಲಿಯೇ ಉಪಕೋಶ ಅನ್ನುವವಳನ್ನುವಿವಾಹವಾಗಿ ಪಾಟಲೀಪುತ್ರದಲ್ಲಿಯೇ ನೆಲೆಸುತ್ತಾನೆ. ಅದೇ ಕಾಲಕ್ಕೆ ಪಾಣಿನಿ ಎನ್ನುವ ಮಂದ ಬುದ್ಧಿಯವನೊಬ್ಬ ವರ್ಷನ(ವರರುಚಿ) ಶಿಷ್ಯನಾಗಿ ಬಂದು ಸೇರಿಕೊಳ್ಳುತ್ತಾನೆ. ಅವನ ಮಂದಬುದ್ಧಿಯನ್ನು ದಿನೆ ದಿನೇ ಸಹಿಸಲು ಅಸಾಧ್ಯವಾದಾಗ ವರರುಚಿಯ ಪತ್ನಿ ಅವನನ್ನು ಮನೆಯಿಂದ ಓಡಿಸುತ್ತಾಳೆ. ಇದರಿಂದ ಖಿನ್ನನಾದ ಪಾಣಿನಿ ಹಿಮಾಲಯಕ್ಕೆ ತಪಸ್ಸಿಗೆ ತೆರಳುತ್ತಾನೆ. ಅಲ್ಲಿ ಶಿವನನ್ನು ಮೆಚ್ಚಿಸಿ. ಎಲ್ಲಾ ವಿದ್ಯೆಗಳನ್ನೂ ಕರಗತ ಮಾಡಿಕೊಂಡು ಮರಳಿ ಪಾಟಲೀಪುತ್ರಕ್ಕೆ ಬಂದು ತನ್ನ ಮೊದಲ ಗುರುವಾಗಿದ್ದ ವರರುಚಿಯನ್ನು ವಾದಕ್ಕೆ ಕರೆದು ಏಳು ದಿನಗಳ ಕಾಲ ವಾದ ಮಾಡುತ್ತಾನೆ. ಪಾಣಿನಿ ಮತ್ತು ವರರುಚಿ ವಾದ ಮಾಡುತ್ತಾ 7 ದಿನ ಕಳೆಯುತ್ತದೆ, ಎಂಟನೇ ದಿನ ವರರುಚಿ ಪಾಣಿನಿಯನ್ನು ಗೆಲ್ಲುತ್ತಾನೆ. ಆದರೆ ಅಷ್ಟರಲ್ಲಿ ಶಿವನು ಮೇಲಿನಿಂದ ಹೂಂಕರಿಸುತ್ತಾನೆ. ವರರುಚಿಯಲ್ಲಿದ್ದ ಐಂದ್ರವ್ಯಾಕರಣವೆಲ್ಲಾ ನಷ್ಟವಾಗಿ ವರರುಚಿ ಸೋತು ಪಾಣಿನಿಯೇ ಗೆಲ್ಲುತ್ತಾನೆ. ಇದೊಂದು ಕಲ್ಪಿತ ಕಥೆಯಾಗಿರಬಹುದು, ದಂತ ಕಥೆಯಾಗಿದ್ದರೂ ಸಹ ಪಾಣಿನಿಗಿಂತ ಪೂರ್ವದಲ್ಲೂ ಇನ್ನೊಂದು ವ್ಯಾಕರಣ ಪ್ರಬೇಧ ಇದ್ದದ್ದು ತಿಳಿದು ಬರುತ್ತದೆ. ಆದರೆ ಪಾಣಿನಿಯ ವ್ಯಾಕರಣವೇ ಮುಂದೆ ಪ್ರಮಾಣ ಗ್ರಂಥವಾಗುತ್ತಾ ಮಾಹೇಶ್ವರ ಸೂತ್ರಗಳೆನ್ನುವ ಹದಿನಾಲ್ಕು ಸೂತ್ರಗಳಿಂದ ಅಷ್ಟಾಧ್ಯಾಯಿಯಾಗಿ ಸರ್ವಮಾನ್ಯವಾಗುತ್ತದೆ. 

ಸಂಸ್ಕೃತ ಸಾಹಿತ್ಯ ಇತಿಹಾಸದಲ್ಲಿ ಕ್ರಿಸ್ತ ಪೂರ್ವದಲ್ಲಿ ಯಾಜ್ಞವಲ್ಕ್ಯ, ಬೌಧಾಯನ, ಕಾಟ್ಯಾಯನ, ಆಪಸ್ತಂಬ, ಪಿಂಗಲ, ಪಾಣಿನಿ ಹೀಗೆ ಸಾಹಿತ್ಯಕಾರರು, ಸ್ಮೃತಿಕಾರರು - ಭಾಷ್ಯಕಾರರು, ವಯ್ಯಾಕರಣಿಗಳ ದಂಡು ನಮಗೆ ಸಿಗುತ್ತದೆ. ಅವುಗಳಲ್ಲಿ ಪಾಣಿನಿಯೇ ಅತ್ಯಂತ ಗಂಭೀರವಾದ ಮಾರ್ಗವನ್ನು ಕರುಣಿಸಿದ ಅಂದರೆ ಅದು ಅತಿಶಯವಲ್ಲ. ಅಸ್ತವ್ಯಸ್ತವಾದ ಪದಬಳಕೆಯ ಕ್ರಮಕ್ಕೆ ಹದಿನಾಲ್ಕು ಸೂತ್ರಗಳನ್ನು ಹಾಕಿ ಒಂದು ವ್ಯವಸ್ಥಿತ ಪದ್ಧತಿಯನ್ನು ತೋರಿಸಿಕೊಟ್ಟದ್ದು ಪಾಣಿನಿಯ ದೊಡ್ದ ಕೊಡುಗೆ. ಅದನ್ನು ಅಳವಡಿಸಿಕೊಂಡು ಸಂಸ್ಕೃತ ಭಾಷಾ ಲೋಕ ಅಂದಿನಿಂದ ಇಂದಿನವರೆಗೆ ತನ್ನದೇ ಆದ ದೊಡ್ದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಒಂದು ದೇಶದ ರಾಜ ತಾನು ಕವಿಯಾಗಿ ಮಾರ್ಗದರ್ಶಕನಾಗಿ ಉತ್ತಮ ಆಡಳಿತಗಾರನಾಗಿ ಇದ್ದರೆ ಆ ದೇಶ ಎಂದೂ ಸಹ ದುರ್ಭಿಕ್ಷದಿಂದ ಇರಲು ಸಾಧ್ಯವೇ ಇಲ್ಲ ಅನ್ನುವುದಕ್ಕೆ 11- 12 ನೇ ಶತಮಾನದ ಭೋಜನೇ ಉದಾಹರಣೆ. ಸಾಹಿತ್ಯದ ಮೇಲೆ ಮಾತ್ರವಲ್ಲದೇ ಸಂಸ್ಕೃತ ಭಾಷಾ ಶಾಸ್ತ್ರದ ಮೇಲೂ ಸಹ ಆತ ಪ್ರಭುತ್ವದ ಜೊತೆಗೆ ಆಸಕ್ತಿ ಹೊಂದಿದ್ದ. ಸಾಮಾನ್ಯರೂ ಸಹ ವ್ಯಾಕರಣ ಬದ್ಧರಾಗಿ ಮುಂದಿನ ಪೀಳಿಗೆಗೆ ಭಾಷೆಯನ್ನು ಜೀವಂತ ಇಡಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ವ್ಯಾಕರಣಕ್ಕೆ ಸಂಬಂಧಿಸಿ ನಾಲ್ಕು ಶಾಸನಗಳನ್ನು ಬರೆಸಿದ ಅದು ಕೂಡಾ ಸಾರ್ವಜನಿಕರು ಹೆಚ್ಚಾಗಿರುವ ಕಡೆ ಅದನ್ನು ಬರೆಸಿದ ಅದುವೇ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯದ ಸರ್ಪಬಂಧ ಶಾಸನ.
*****


ಪಾಣಿನಿಯ ಕುರಿತಾಗಿ ಕಥೆ 

ಗುರುಕುಲದಲ್ಲಿ ದಡ್ಡ ಶಿಖಾಮಣಿ ಬಾಲಕನೊಬ್ಬ ಅಧ್ಯಯನ ಮಾಡುತ್ತಿದ್ದ. ಒಮ್ಮೆ ಪಾಠ ಒಪ್ಪಿಸುವಲ್ಲಿ ತಪ್ಪು ಮಾಡಿದ್ದಕ್ಕೆ ಗುರುಗಳು, ಬೆತ್ತ ಪ್ರಹಾರಕ್ಕಾಗಿ ಕೈಚಾಚಲು ಹೇಳಿದರು. ಬಾಲಕ ಹಾಗೆಯೇ ಮಾಡಿದ. ಅವನ ಕೈನೋಡಿದ ತಕ್ಷಣ, ಗುರುಗಳು ತಮ್ಮ ಕೈಯನ್ನು ಹಿಂದಕ್ಕೆಳೆದುಕೊಂಡರು. ಯಾಕೆಂದರೆ, ಬಾಲಕನ ಕೈಯಲ್ಲಿ ವಿದ್ಯಾರೇಖೆಯೇ ಇರಲಿಲ್ಲ! ಆಗ
ಗುರುಗಳು “ನಿನ್ನ ಕೈಯಲ್ಲಿ ವಿದ್ಯಾರೇಖೆಯೇ ಇಲ್ಲ. ನಿನ್ನನ್ನು ದಂಡಿಸಿಯೂ ಪ್ರಯೋಜನವಿಲ್ಲ. ಮನೆಗೆ ಹೋಗು" ಎಂದುಬಿಟ್ಟರು.

ಬಾಲಕ ಅತ್ಯಂತ ದುಃಖತಪ್ತನಾಗಿ ಮನೆಗೆ ಬರುತ್ತಿರುವಾಗ, ಕೆಲವು ಹೆಂಗಳೆಯರು ಬಾವಿಕಟ್ಟೆಯಲ್ಲಿ ನೀರು ಸೇದುತ್ತಿರುವುದನ್ನು ನೋಡಿದ. ಹೆಂಗಸರು ನೀರು ಸೇದಿ, ಕೊಡ ಇಡುವ ಜಾಗದಲ್ಲಿ ಹೊಂಡ ಸೃಷ್ಟಿಯಾಗಿತ್ತು. ಅದನ್ನು ಕಂಡ ಬಾಲಕ- “ಬಾವಿ ಕಟ್ಟೆ ಕಟ್ಟುವಾಗಲೇ ಹೀಗೆ ಕೊರೆದು ಕಟ್ಟಿದ್ದಾರೆಯೇ?’ ಎಂದು ಕೇಳಿದ.
ಅವರು “ಇಲ್ಲ, ಕಟ್ಟುವಾಗ ಸರಿಯಾಗಿಯೇ ಕಟ್ಟಿದ್ದರು. ದಿನವೂ ಕೊಡವನ್ನು ಇಟ್ಟು ಇಟ್ಟು ಹೀಗಾಗಿದೆ" ಎಂದರು. ಆಗ ಬಾಲಕನಿಗೆ ಒಂದು ಯೋಚನೆ ಬಂತು. ಕಡು ಕಠಿಣ ಕಲ್ಲೇ ಹೀಗೆ ಬದಲಾಗಿರಬೇಕಾದರೆ, ನಾನು ಪ್ರಯತ್ನಪಟ್ಟರೆ ವಿದ್ಯೆ ಒಲಿಯುವುದಿಲ್ಲವೇ ಅನಿಸಿತು. ಆದರೆ, ತನಗೆ ವಿದ್ಯಾರೇಖೆಯೇ ಇಲ್ಲವೆಂದು ಗುರುಗಳು ಹೇಳಿದ ಮಾತು ನೆನಪಾದಾಗ, ಹರಿತವಾದ ಕತ್ತಿಯಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಮರಳಿ ಬಂದ.

ಗುರುಗಳು ಸಿಟ್ಟಿನಿಂದ- “ನಿನಗೆ ವಿದ್ಯಾರೇಖೆಯೇ ಇಲ್ಲ. ಇಲ್ಲಿಗೆ ಬರಬೇಡ ಎಂದಿದ್ದನಲ್ಲ" ಎಂದರು. ಆತ, “ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ" ಎಂದನು. ಗುರುಗಳು ಅಚ್ಚರಿಯಿಂದ, “ಏನು, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದೆಯಾ?" ಎಂದು ಬಾಲಕನ ಕೈ ನೋಡುತ್ತಾರೆ. ವಿದ್ಯಾರೇಖೆ ಇರುವಲ್ಲಿ ಕೈ ಸಿಗಿದಿರುವುದನ್ನು ಕಂಡು ಅವರ ಕಣ್ತುಂಬಿ ಬರುತ್ತದೆ. ಆಗ ಅವರು ಪ್ರೀತಿಯಿಂದ, “ಮಗು, ಸಹಜವಾಗಿ ಇರಬೇಕಾದ ವಿದ್ಯಾರೇಖೆ ಇಲ್ಲವಾದ್ದರಿಂದ ಶಿವನನ್ನು ಮೊರೆ ಹೋಗು" ಎಂದು ಹುಡುಗನನ್ನು ತಪಸ್ಸಿಗೆ ಹಚ್ಚುತ್ತಾರೆ. ಬಾಲಕನ ಕಠೋರ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗುತ್ತಾನೆ. ಆದರೆ, ಒಂದಕ್ಷರವನ್ನೂ ಮಾತನಾಡದೆ ತನ್ನ ಡಮರುಗವನ್ನು 14 ಸಾರಿ ಬಾರಿಸುತ್ತಾನೆ. ಆಗ 14 ನಾದಗಳು ಹೊರಹೊಮ್ಮಿದವು. ಅದನ್ನು ಆಧರಿಸಿ, ಸಂಸ್ಕೃತ- ವ್ಯಾಕರಣ ಶಾಸ್ತ್ರ ರಚನೆ ಮಾಡಿದ ಆ ಬಾಲಕನೇ ಪಾಣಿನಿ ಮಹರ್ಷಿ.
**********


No comments:

Post a Comment