SEARCH HERE

Tuesday 1 January 2019

ಶ್ರೀನಿವಾಸ ಕಲ್ಯಾಣ ಚರಿತ್ರೆ ಪಠಣ srinivasa kalyana charitre pathana vaishakha shukla dashami





day 1 

ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
🙏🙇‍♂
ಶ್ರೀ ಹರಿ ವಾಯು ಗುರುಗಳು ಹಾಗು  ಸಕಲಹರಿದಾಸರ ಪಾದಗಳಿಗೆ ಮತ್ತು ನನ್ನ  ಹಿರಿಯರಿಗೆ ಮತ್ತು ಇಲ್ಲಿ ಇರುವ ಎಲ್ಲಾ ಹಿರಿಯರ ಚರಣಾರವಿಂದಗಳಲ್ಲಿ ಭಕ್ತಿ ಪೂರ್ವಕವಾಗಿ  ಪ್ರಾರ್ಥಿಸಿ  ನಮಸ್ಕರಿಸಿ
ನಿರ್ವಿಘ್ನವಾಗಿ  ಈ ಹತ್ತು ದಿನ ಶ್ರೀನಿವಾಸ ಕಲ್ಯಾಣ ಚರಿತ್ರೆ ಯನ್ನು ಶ್ರವಣ ಮತ್ತು ಪಠಣವನ್ನು ನಡೆಸಿಕೊಡಲು ಶ್ರೀ ಹರಿ ವಾಯು ಗುರುಗಳಲ್ಲಿ ಪ್ರಾರ್ಥನೆ ಮಾಡಿಕೊಳ್ಳುವೆ..
🙏🙏
  ಶ್ರೀನಿವಾಸನು ಸಕಲ ಸನ್ಮಂಗಳಪ್ರದನಾದ ಸರ್ವೋತ್ತಮನಾದ ದೇವರು...
ಸಕಲ ಪುರಾಣಾದಿಗಳು ಆ ಶ್ರೀನಿವಾಸನೇ ಜಗಜನ್ಮಾದಿಕಾರಣನಾದ ಸಕಲ ಗುಣಪೂರ್ಣನಾದ,ದೋಷವಿದೂರನಾದ,ಸರ್ವ ಸ್ವತಂತ್ರ ನಾದ,ರಮಾ ಬ್ರಹ್ಮ ರುದ್ರ, ಇಂದ್ರಾದಿ,ದೇವತೆಗಳಿಂದ,ಋಷಿ ಮುನಿಗಳಿಂದ,ಅವನ ದಾಸರಿಂದ ಸದಾ ಪೂಜೆಗೊಂಬುವ,ಚತುರ್ವಿಧ ಪುರುಷಾರ್ಥ ಪ್ರದನಾದ ,ಆ ವೆಂಕಟೇಶ ನನ್ನು ಅವನ ಮಹಾತ್ಮೆಯನ್ನು ತಿಳಿದು ಜ್ಞಾನ ಪೂರ್ವಕವಾಗಿ ಅವನನ್ನು ಆರಾಧಿಸುವದರಿಂದ ಸುಪ್ರಸನ್ನನಾದ ಶ್ರೀ ಹರಿಯು ಸಮಸ್ತ ಕಾಮನೆಗಳನ್ನು,ಸನ್ಮಂಗಳವನ್ನು ಇತ್ತು ಕರುಣಿಸಿ ಕಾಪಾಡುವವ ಅಂತ ಸಾರುತ್ತಿವೆ..
ವೈಶಾಖ ಮಾಸದ ಪ್ರಾರಂಭದ ಈ  ಶುಭದಿನದಲ್ಲಿ ಮಹಾಮಹಿಮನಾದ ಪದ್ಮಾವತಿಯ ಪತಿಯ ಕಲ್ಯಾಣ ಮಹೋತ್ಸವ ವನ್ನು(ವೈಶಾಖ ಶುದ್ದ ದಶಮಿ ಸ್ವಾಮಿ ಕಲ್ಯಾಣವಾದ ದಿನ.)
ತನ್ನ ಮದುವೆಗೆ ತಾನೇ ದಿನವನ್ನು ನಿಶ್ಚಿತ ಮಾಡಿಕೊಂಡ,ಮತ್ತು ಅದರ ಹಿನ್ನೆಲೆ ನಿರೂಪಿಸುವ ಭವಿಷ್ಯೊತ್ತರ ಪುರಾಣಾಂತರ್ಗತವಾದ ವೆಂಕಟೇಶ ಮಹಾತ್ಮೆ ಯನ್ನು ತಿಳಿಸುವ ಪುಟ್ಟ ಪ್ರಯತ್ನ.

ಪುಣ್ಯ ಭೂಮಿಯಾದ ಭರತವರ್ಷದಲ್ಲಿ  ಮನುಕುಲದ ಉದ್ದಾರ ಕ್ಕಾಗಿ ಪರಮ ಕೃಪಾಳುಗಳಾದ ಭಗವಾನ್ ಶ್ರೀ ವೇದವ್ಯಾಸ ದೇವರು ಅನೇಕ ಪುರಾಣಗಳನ್ನು ರಚಿಸಿ ಮಹೋದುಪಕಾರ ಮಾಡಿದ್ದಾರೆ. ಅದರಲ್ಲಿ ಭವಿಷ್ಯೊತ್ತರಪುರಾಣದಲ್ಲಿ ಶ್ರೀ ವೆಂಕಟೇಶ ಮಹಾತ್ಮೆ ಯನ್ನು ಹೇಳಿದ್ದಾರೆ.

ಒಮ್ಮೆ ಶೌನಕರು ಸೂತ ಮುನಿಗಳ ಬಳಿ ಬಂದು
ಹಿಂದೆ ನಿಮ್ಮಿಂದ ಅನೇಕ ಭಗವಂತನ ಮಹಿಮೆಯನ್ನು ಸಾರುವ ವಿಷಯಗಳನ್ನು ತಿಳಿದು ಸುಕೃತಿಗಳಾಗಿದ್ದೇವೆ..
ಇವಾಗ ವೆಂಕಟಾಚಲಪತಿಯಾದ ಶ್ರೀ ಹರಿಯ ಮಹಿಮೆಯನ್ನು ಕೇಳಲು ಆಶಿಸಿದ್ದೇವೆ.ಅದನ್ನು ತಿಳಿಸಬೇಕು ಎಂದು ಕೇಳಲು,
ಅವಾಗ ಸೂತರು ಹೇಳುತ್ತಾರೆ.
ಮುನಿವರ್ಯರೆ!! ಬಹಳ ಆನಂದದಾಯಕವಾದ ಪ್ರಶ್ನೆ ಯನ್ನು ಕೇಳಿದ್ದೀರಿ.
ಶ್ರೀ ವೇದವ್ಯಾಸ ದೇವರು ನನಗೆ ಉಪದೇಶ ಮಾಡಿದ ಕ್ರಮದಲ್ಲಿ ನಿಮಗೆ ಹೇಳುತ್ತೇನೆ ಕೇಳಿ.

ಪೂರ್ವದಲ್ಲಿ ಧರ್ಮಿಷ್ಟನಾದ ಜನಕ ರಾಜನು ಧರ್ಮದಿಂದ ರಾಜ್ಯಭಾರ ಮಾಡುತ್ತಾ ಇದ್ದ ನು. ಅವನಿಗೆ ಕುಶಕೇತುವೆಂಬ ತಮ್ಮ ಇದ್ದನು.ಅವನ‌ಪತ್ನಿ ಬಹು ಪತಿವ್ರತೆಯು.ಆ ದಂಪತಿಗಳಿಗೆ ಮೂರು ಜನ ಪುತ್ರಿ ಯರು.ಜನಕರಾಜನಿಗೆ ಜಾನಕಿ ಎಂಬ ನಾಮದಿಂದ ಕರೆಯಲ್ಪಡುವ ಜಗನ್ಮಾತೆ ಪುತ್ರಿಯಾಗಿದ್ದಾಳೆ.
ಹೀಗೆ ಜನಕರಾಜನು ಪತ್ನಿ ಪುತ್ರಿ ಮತ್ತು ಸಹೋದರನ ಜೊತೆಯಲ್ಲಿ ಆನಂದವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು.
ಒಂದು ದಿನ ರಾಜನ ಮನಸ್ಸಿನಲ್ಲಿ ನಾನು ಸರ್ವದಾ ಸುಖವಾಗಿಯೇ ಇರಬೇಕು.. ದುಃಖ ಗಳನ್ನು ಕಣ್ಣಿನಿಂದ ನೋಡಬಾರದು ಎಂದು ಅಪೇಕ್ಷೆ ಪಟ್ಟನು..
ಅವನ ಅಪೇಕ್ಷೆ ಪಟ್ಟಿದ್ದು ಶಾಸ್ತ್ರ ಸಮ್ಮತವಲ್ಲವಾದುದರಿಂದ ಭಗವಂತನು ಅವನಿಗೆ ದುಃಖ ಪ್ರದರ್ಶನ ಮಾಡಿದನು.
ಜನಕರಾಜನ ತಮ್ಮ ಕುಶಕೇತು ಮರಣ ಹೊಂದಿದ. ಅವನ ಪತ್ನಿ ಸಹ ಅವನ ಜೊತೆಗೆ ಸಹಗಮನ ಮಾಡಿದಳು.
ಅನಾಥರಾದ ಮಕ್ಕಳನ್ನು ಕಂಡು  ಕಡು ದುಃಖಿತನಾದ ಜನಕರಾಜನು ಅನ್ನಾಹಾರಗಳನ್ನು ತ್ಯಜಿಸಿ ದನು.
ಆಗ ದೈವಯೋಗದಿಂದ ಕುಲಪುರೋಹಿತರು,
ವಾಮದೇವ ಮುನಿಗಳ ಸಹೋದರರು ಆದ ಶತಾನಂದರು ಮಿಥಿಲೆಗೆ ಬಂದರು.ಅರ್ಘ್ಯ ಪಾದಾದಿಗಳಿಂದ ಅವರನ್ನು ಪೂಜಿಸಿ ಸತ್ಕರಿಸಿ ತನಗೆ ಪ್ರಾಪ್ತ ವಾದ ದುಃಖ ವನ್ನು ಅವರ ಬಳಿ ಹೇಳಿಕೊಂಡನು.
ಆವಾಗ ಶತಾನಂದರು ಹೇಳುತ್ತಾರೆ..
ರಾಜನ್ ಕಲಿಯುಗದಲ್ಲಿ ವೆಂಕಟಗಿರಿ ಮಹಾತ್ಮೆ ಯನ್ನು ಶ್ರವಣ ಮಾಡುವದರಿಂದ ಸರ್ವಪಾಪವು ಪರಿಹಾರವಾಗುವದು..
ನಿನ್ನ ಶತೃನಾಶ,ಪುತ್ರಿ ಯರ ವಿವಾಹ, ಸಕಲ ಶ್ರೇಯಸ್ಸು ಗಳು ಅದರ ಶ್ರವಣದಿಂದ ದೊರಕುತ್ತವೆ.
ಈ ಪರ್ವತಕ್ಕೆ ಕೃತಯುಗದಲ್ಲಿ ವೃಷಭಾಚಲವೆಂದು,
ತ್ರೇತಾಯುಗ ದಲ್ಲಿ ಅಂಜನಾಚಲವೆಂದು,
ದ್ವಾಪರದಲ್ಲಿ ಶೇಷಾಚಲವೆಂದು, ಕಲಿಯುಗದಲ್ಲಿ ವೆಂಕಟಾಚಲವೆಂದು ಯುಗಭೇದದಿಂದ ಹೆಸರುಂಟಾಗಿದೆ.ಅಂತ ಹೇಳುತ್ತಾರೆ.
ಆ ಪರ್ವತಕ್ಕೆ ನಾಲ್ಕು ಹೆಸರುಗಳು ಬಂದ ಹಿನ್ನೆಲೆ ನಂತರ ತಿಳಿಯೋಣ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಒಂದೊಂದು ಯುಗಗೆ ಒಂದೊಂದು ಪೆಸರು|
ಚಂದವಾಗಿಪ್ಪವು ಪೊಗಳಿದವರಿಗೀಗಾ|
ನಂದವೇ ಕೊಡುತಲಿ ಅತಿಶಯವೆನಿಸಿ ವಸುಂಧರದದೊಳಗೆ ಸುಲಭವಾಗಿದೆ ಕೇಳಿ|

*****


day 2

✍ಹಿಂದಿನ ಸಂಚಿಕೆಯಲ್ಲಿ ಶತಾನಂದರು ಜನಕ ಮಹಾರಾಜನಿಗೆ ಶ್ರೀ ವೆಂಕಟಗಿರಿಯ ಮಹಾತ್ಮೆ ಶ್ರವಣ ಮಾಡುವದರಿಂದ  ಅವನ ದುಃಖ ಪರಿಹಾರವಾಗಿ ಮಂಗಳವಾಗುತ್ತದೆ ಅಂತ ಹೇಳುತ್ತಾರೆ.
ಅದಕ್ಕೆ ಯುಗಭೇದದಿಂದ ನಾಲ್ಕು ಹೆಸರು ಬಂದ ಬಗೆಯನ್ನು ಹೇಳುತ್ತಾರೆ.
ಕೃತಯುಗದಲ್ಲಿವೃಷಭಾಚಲ
ತ್ರೇತಾಯುಗದಲ್ಲಿ ಅಂಜನಾಚಲ,
ದ್ವಾಪರಯುಗದಲ್ಲಿ ಶೇಷಾಚಲ,
ಕಲಿಯುಗದಲ್ಲಿ
ವೆಂಕಟಾಚಲವೆಂದು, ಹೇಳುತ್ತಾರೆ.
ಅದಕ್ಕೆ ಜನಕನು
ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು ಕೇಳಿದಾಗ
ಅದಕ್ಕೆ ಶತಾನಂದರು
ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸ ನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು.
ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ.
ಅವಾಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರಮಾಡುವೆನೆಂದು
ಹೇಳುತ್ತಾನೆ.
ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥ ದಲ್ಲಿ ಸ್ನಾನ ಮಾಡಿ ,ಅವನ ಬಳಿಯಿರುವ ನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ,ಪೂಜೆ ಮುಗಿದ ಮೇಲೆ ,ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀ ಹರಿಗೆ ಸಮರ್ಪಣೆ ಮಾಡುತ್ತಾ ಇದ್ದ.
ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು.
ಈ ರೀತಿಯಲ್ಲಿ ೫ ಸಹಸ್ರ ವರ್ಷ ಗಳ ಕಾಲ ಪೂಜೆ ಯನ್ನು ಮಾಡಿದನು..
ಸರಿಯಾಗಿ ೫ಸಹಸ್ರ ವರ್ಷಗಳಾಗುವ ಸಮಯಕ್ಕೆ ಶ್ರೀ ಹರಿ  ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ..
ಭಗವಂತನ ದರ್ಶನ ದಿಂದ ಆನಂದ ತಡೆಯಲಾರದೆ ಮೂರ್ಛೆ ತಾಳುತ್ತಾನೆ.
ನಂತರ ಎಚ್ಚರವಾದ ಮೇಲೆ  ಭಗವಂತನ ಬಳಿ ಹೀಗೆಂದು ಕೇಳುತ್ತಾನೆ.
ಹೇ ನಾರಾಯಣ!! ನೀನು ದೋಷ ರಹಿತನು,.
ರಮಾ,ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವನು ಮತ್ತು ಎಲ್ಲರಿಗಿಂತ ಅತ್ಯುತ್ತಮ ನಾದವನು ಆಗಿದ್ದೀಯಾ.
ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆ ಉಂಟಾಗಿದೆ.ಅದನ್ನು ನಡೆಸಿಕೊಡಲು ಕೇಳುತ್ತಾನೆ.
ಭಗವಂತನು ತಥಾಸ್ತು! ಅಂತ ಹೇಳಿ ಅವನ
 ಜೊತೆಯಲ್ಲಿ  ಯುದ್ಧ ವನ್ನು ಮಾಡುತ್ತಾನೆ.
ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ.
ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರ ವನ್ನು ಪ್ರಯೋಗ ಮಾಡಲು ಸಿದ್ದನಾಗುತ್ತಾನೆ.
ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ
ಸ್ವಾಮಿ! ನಿನ್ನ ಚಕ್ರದ ಪ್ರಭಾವ ಕೇಳಿದ್ದೇನೆ.ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ..
ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಅಂತ ಪ್ರಾರ್ಥನೆ ಮಾಡಿದ..
ಅವಾಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರ ದಿಂದ ಅವನನ್ನು ಸಂಹರಿಸಿ,ಮುನಿಗಳ ಕಷ್ಟ ವನ್ನು ಪರಿಹರಿಸಿದನು.. ಹಾಗಾಗಿ ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಅಂತ ಹೆಸರು ಬಂದಿತು. ಅಂತ ಹೇಳುತ್ತಾರೆ.

(೨)ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠ ನಾದ ಕೇಸರಿಯ
ಪತ್ನಿಯಾದ ಅಂಜನಾ ದೇವಿಯು ಪುತ್ರ ಸಂತಾನಕ್ಕಾಗಿ  ಮತಂಗ ಮುನಿಗಳ ಆದೇಶದಂತೆ  ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥ ಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿ   ಆಚರಿಸಿ  ವಾಯುದೇವರ  ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು..
ಹಾಗಾಗಿ ಇದು ಅಂಜನಾದ್ರಿ ಅಂತ ಹೆಸರು ಬಂದಿತು.
(೩)ದ್ವಾಪರ ಯುಗದಲ್ಲಿ ಒಮ್ಮೆ ಶ್ರೀ ಹರಿಯು ಲಕ್ಷ್ಮೀ ದೇವಿಯ ಜೊತೆಯಲ್ಲಿ ವೈಕುಂಠ ದಲ್ಲಿ ಏಕಾಂತದಲ್ಲಿ ಇದ್ದನು.
ಅಂತಃ ಪುರದ ಬಾಗಿಲು ಕಾಯಲು ಶೇಷದೇವನ ನೇಮಿಸಿ ಯಾರನ್ನು ಒಳಗಡೆ ಬಿಡಬಾರದೆಂದು ಆಜ್ಞೆ ಮಾಡಿದ್ದನು.
ಭಗವಂತನ ದರುಶನಕ್ಕೆ ವಾಯುದೇವರು ಬಂದಾಗ ಶೇಷದೇವನು ಸುವರ್ಣದಂಡ ಹಿಡಿದು ವೈಕುಂಠ ಪುರದ ಬಾಗಿಲನ್ನು ಭಗವಂತನ ಅಪ್ಪಣೆ ಯಂತೆ ಕಾಯುತ್ತಿದ್ದರು..
ವಾಯುದೇವರಿಗೆ ಒಳಗಡೆ ಬಿಡುವುದಿಲ್ಲ.
ಕಾರ್ಯ ನಿಮಿತ್ತವಾಗಿ ಬಂದಿದ್ದೇನೆ ತಡೆಯಬೇಡ!! ಅಂತ ವಾಯುದೇವರು ಹೇಳಿದರು ಸಹ,
ಭಗವಂತನ ಆಜ್ಞೆಯಂತೆ ಯಾರನ್ನು ಒಳಗಡೆ ಬಿಡುವುದಿಲ್ಲ. ನೀನು ಹೋಗಕೂಡದು ಅಂತ ಹೇಳುತ್ತಾರೆ.
ಅದಕ್ಕೆ ವಾಯುದೇವರು
ಹಿಂದೆ ನಡೆದ ಜಯ ವಿಜಯರ ದೃಷ್ಟಾಂತ ಹೇಳಿ ಭಗವಂತನ ದರುಶನಕ್ಕೆ ಅಡ್ಡಿ ಮಾಡಿದ ಅವರ ಘಟನೆ ಯನ್ನು ನೆನಪು ಮಾಡಿಕೊಡುತ್ತಾರೆ..
ಆದರು ಸಹ ಶೇಷದೇವನು ಕೋಪದಿಂದ 
ಸಕಲ ಜೀವ ನಿಯಾಮಕರಾದ ಮುಖ್ಯ ಪ್ರಾಣದೇವರನ್ನು ನಿಂದಿಸುತ್ತಾ
ಎಲೈ !!ವಾಯುದೇವ !!ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇರುವಿಯೆಲ್ಲ?ನಿನಗೆ ಬದುಕುವ ಅಪೇಕ್ಷೆ ಇಲ್ಲವೇನು??
ಕೇಳು! ನನ್ನ ಶಕ್ತಿ ಸಾಮರ್ಥ್ಯ ದ ಬಗ್ಗೆ ಈ ಪ್ರಪಂಚದಲ್ಲಿ ನನಗೆ ಸರಿ ಸಮಾನರಾದವರು ಯಾರು ಇಲ್ಲ .
ಮೇಲಾಗಿ ಸದಾ ಶ್ರೀ ಹರಿಗೆ ಹಾಸಿಗೆಯಾಗಿ ಅವನ ಅಂತಪುರದಲ್ಲಿ ಇರುವವನು.ಅಂತ
ತನ್ನ ಬಗ್ಗೆ ತಾನೇ ಸ್ವಪ್ರಶಂಶೆ ಮಾಡಿಕೊಂಡ ಶೇಷದೇವನಿಗೆ ವಾಯುದೇವರು ಈ ರೀತಿ ಹೇಳುತ್ತಾರೆ.
ಹೇ ಶೇಷದೇವನೇ! ಅರಮನೆಯಲ್ಲಿ ಇರುವ  ಬೆಕ್ಕು ಸಹ ರತ್ನ ಮಂಚದಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿರುವ ಅರಸನ ಜೊತೆ ಮಲಗಿದ್ದ  ಮಾತ್ರ ಕ್ಕೆ ಪಟ್ಟದ ಆನೆಗೆ ಸಮವಾದೀತೇ??
ಮಹಾರಾಜನ ಸೇವೆಗೆ ಇರುವ ಸೇವಕನು  ಅರಸನ ಹಾಸಿಗೆಯಲ್ಲಿ ಕುಳಿತು ಪಾದ ಸೇವೆ ಮಾಡುತ್ತಾ ಇದ್ದರೆ ಅವನು ಅರಸನಿಗೆ ಸಮವಾಗುತ್ತಾನೆಯೆ??..
ಅದು ಅವನ ದೊಡ್ಡಸ್ತಿಕೆಯೆ ??
ರಾಜಕುಮಾರನು ಅರಸನ ಮಂಚವೇರಿಲ್ಲ ಅಂದ ಮಾತ್ರ ಅವನು ರಾಜಕುಮಾರ ಅಲ್ಲ ಅಂತ ಹೇಳಲು ಸಾಧ್ಯವೇ??.
ದೊಡ್ಡವರ ಬಳಿ ಇದ್ದಾಗ ಈ ರೀತಿಯ ಅಹಂಕಾರ ವರ್ತನೆ ಸಲ್ಲದು ಅಂತ ವಾಯುದೇವರು ಉಪದೇಶ ಮಾಡುತ್ತಾರೆ.
ಇವರಿಬ್ಬರ ಗದ್ದಲವನ್ನು ಕೇಳಿ ಲಕ್ಷ್ಮೀ ದೇವಿಯು ಭಗವಂತನ ಹತ್ತಿರ ವಿಷಯವನ್ನು ಅರುಹುವಳು.
ಆವಾಗ ಶ್ರೀಹರಿಯು ಹೊರಗಡೆ ಬಂದು 
ಶೇಷ !!ಏಕಿಂತು ಕೂಗಾಡುತ್ತಿರುವೆ!!ಇಲ್ಲಿ ಯಾರಾದರು ಬೇರೆಯವರು ಬಂದಿದ್ದಾರೆಯೇ?? ಎಂದು ಪ್ರಶ್ನಿಸಲು
ಅದಕ್ಕೆ ಶೇಷದೇವನು
ಪ್ರಭು ಮಲಯಾಚಲವಾಸಿಯು,
ಬಹು ಗರ್ವಿಷ್ಟನು, ದುರಭಿಮಾನಿಯು,
ಆದ ವಾಯುದೇವನು ಆಡಬಾರದ ಮಾತುಗಳನ್ನು ಆಡುತ್ತಾ ಇದ್ದಾನೆ.
ಅದಕ್ಕಾಗಿ ಈ ಕಲಹಎಂದು ಹೇಳುತ್ತಾನೆ..
ಭಗವಂತನು ಬಂದು ನಿಂತಿದ್ದು ಕಂಡು ವಾಯುದೇವರು ಭಕ್ತಿ ಇಂದ ನಮಸ್ಕರಿಸಿ ವಿನೀತರಾಗಿ ನಿಂತರು..
ಭಗವಂತನು ಮುಖ್ಯ ಪ್ರಾಣನನ್ನು ಕಂಡು ಕುಮಾರ!! ಪವಮಾನ!!
ಅತಿ ದುರಭಿಮಾನಿಯಾದ ಆ ಶೇಷನೊಡನೆ ನಿನಗೇಕೆ ಕಲಹ??ಎಂದು ಮಧುರವಾಣಿ ಇಂದ ನುಡಿದನು.
ಇದನ್ನು ಕಂಡು ಶೇಷದೇವನಿಗೆ ಬಹು ಅಸಮಾಧಾನವಾಯಿತು.
ಅಹಂಕಾರದಿಂದ ತಾನು ಮಹಾನ್ ಶಕ್ತಿ ಶಾಲಿ.ನನಗೆ ಸಮಾನರಾದವರು ಈ ಮೂರು ಲೋಕದಲ್ಲಿ ಸಹಾ ಯಾರು ಇಲ್ಲ ಎಂದು ಹೇಳುವನು.
ಅದಕ್ಕೆ ಭಗವಂತನು
ಶೇಷ !!ಬರಿಯ ಮಾತಿನಿಂದ ಯಾರೊಬ್ಬರೂ ಸಮರ್ಥ ಅಂತ ಎನಿಸುವದಿಲ್ಲ..
ಕೃತಿ ಇಂದ ಅವರ ಶಕ್ತಿ ಸಾಮರ್ಥ್ಯ ನೋಡಿ ಅವರ ಸಾಮರ್ಥ್ಯವನ್ನು ನೋಡಿ ಹೇಳಬಹುದು..
ಆದ್ದರಿಂದ ನಿಮ್ಮ ಇಬ್ಬರಿಗೂ ಪರೀಕ್ಷೆ ಇಡುವೆನು..
ಇಲ್ಲಿ ಉತ್ತರ ದಿಕ್ಕಿನಲ್ಲಿ ಮೇರುಪರ್ವತ ರಾಜಕುಮಾರನಾದ ಆನಂದಾದ್ರಿ ಬೆಟ್ಟ ವಿದೆ.ನೀನು ನಿನ್ನ ದೇಹವೆಂಬ ಹಗ್ಗ ದಿಂದ ಅದನ್ನು  ಬಿಗಿಯಾಗಿ ಸುತ್ತು ವರೆದು ಕುಳಿತಿಕೊ.ವಾಯುದೇವ ಅದನ್ನು ಹಾರಿಸಿಕೊಂಡು ಹೋಗಲಿ.ಅದರಿಂದ ಯಾರು ಶ್ರೇಷ್ಠ ರು ಅಂತ ತಿಳಿಯುತ್ತದೆ ಅಂತ ಆಜ್ಞೆ ಮಾಡಿದನು.
ಅದರಂತೆ
ಶೇಷದೇವನು ತಾನೇ ಶಕ್ತಿ ಶಾಲಿ.ತನ್ನ ಸಮ ಯಾರು ಇಲ್ಲ ಎನ್ನುವ ಅಹಂಭಾವದಿಂದ ಆ ಪರ್ವತಕ್ಕೆ ಸುತ್ತಲೂ ಬಿಗಿಯಾಗಿ ತನ್ನ ದೇಹವನ್ನು ಸುತ್ತಿ ನಿಂತನು..
ಸಮಸ್ತ ದೇವತೆಗಳು ಆಗಸದಲ್ಲಿ ನಿಂತು ಈ ದೃಶ್ಯ ವನ್ನು ನೋಡಲು ನಿಂತರು.
ವಾಯುದೇವರು ಆನಂದಗಿರಿಯ ಸಮೀಪಕ್ಕೆ ಬಂದು ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಾ ತಮ್ಮ ಪಾದದ ಕಿರು ಬೆರಳಿನಿಂದ ಆನಂದಾದ್ರಿಯ ಸ್ಪರ್ಶವನ್ನು ಮಾಡುತ್ತಾರೆ..
ಏನಾಶ್ಚರ್ಯ!!
ಬರಿಯ ವಾಯು ದೇವರ ಕಿರುಬೆರಳಿನ ಸ್ಪರ್ಶದ ಮಾತ್ರ ದಿಂದಲೇ ಆ ಪರ್ವತವು ಆದಿಶೇಷನ ಸಹಿತವಾಗಿ  ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನದಷ್ಟು ದೂರದವರೆಗೆ ವೇಗವಾಗಿ ಹೋಯಿತು.
ತನ್ನ ಪುತ್ರ ನಿಗೆ ಬಂದ ಗತಿಯನ್ನು ಕಂಡು ಮೇರು ಪರ್ವತವು ವಾಯುದೇವರ ಬಳಿಬಂದು ಪ್ರಾರ್ಥನೆ ಮಾಡಲು
ಕರುಣಾಶಾಲಿಗಳಾದ ವಾಯುದೇವರು ಆನಂದಾದ್ರಿ ಪರ್ವತವನ್ನು  ಶೇಷ ದೇವನ ಸಹಿತವಾಗಿ  ನದಿಯ ದಡದ ಮೇಲೆ ಇರಿಸಿದರು..
ಆಗ ಸಮಸ್ತ ದೇವತೆಗಳು ಬಲ, ಜ್ಞಾನ, ಮತ್ತು ಶ್ರೀ ಹರಿಯಲ್ಲಿ ಭಕ್ತಿ ಇವುಗಳಲ್ಲಿ ನೋಡಲಾಗಿ ವಾಯುದೇವರೆ ಶ್ರೇಷ್ಠ. ಶೇಷದೇವನು ಅಲ್ಲ ಅಂತ. ನಿರ್ಣಯ ಮಾಡುತ್ತಾರೆ.
ಶೇಷದೇವನ ಗರ್ವ ಪರಿಹಾರವಾಗಿ ಅವರಲ್ಲಿ ಇದ್ದ ಅಜ್ಞಾನ, ಅಹಂಕಾರ ಇಳಿದು ಹೋಗಿ
ಜಗತ್ಪ್ರಾಣನಾದ,
ಜೀವೊತ್ತಮರು ಆದ ಶ್ರೀ ಮುಖ್ಯ ಪ್ರಾಣದೇವರನ್ನು ಅವಹೇಳನ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ಅವರಿಗೆ ನಮಸ್ಕರಿಸಿ
ನಾನು ಮಾಡಿದ ನಿಂದಾರೂಪ ಕಾರ್ಯವನ್ನು ಕ್ಷಮಿಸಿ
ಅಂತ ಪ್ರಾರ್ಥನೆ ಮಾಡುತ್ತಾರೆ.
ಆಗ ವಾಯುದೇವರು ಕರುಣಾಳುಗಳು,ಯಾರಲ್ಲಿಯು ದ್ವೇಷವಿಲ್ಲದವರು  ಶೇಷದೇವನ ಅಪರಾಧವನ್ನು ಕ್ಷಮಿಸಿ, ಅನುಗ್ರಹ ಮಾಡಿ
"ಶೇಷದೇವ ! ಇದೆಲ್ಲಾ ಶ್ರೀ ಹರಿಯ ಇಚ್ಚೆಯ ಪ್ರಕಾರ ನಡೆದಿದೆ.ಮುಂದೆ ಈ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡುವನು.ಅದರಿಂದ ನಿನ್ನ ಹೆಸರು ಸಹ ಪ್ರಖ್ಯಾತ ವಾಗುವದು ಅಂತ ಹೇಳಿ" ಅವರನ್ನು ಆನಂದಗೊಳಿಸಿದರು.
ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು.ಎಂದು ಶತಾನಂದರು ಜನಕನಿಗೆ ಹೇಳಿದರು.

******

*day 3

(ವೆಂಕಟಗಿರಿ ಮಹಾತ್ಮೆ ಇಂದು ಅವಶ್ಯಕ ಪಾರಾಯಣ ಮಾಡಬೇಕು)
 ✍ಹಿಂದಿನ ಎರಡು ಸಂಚಿಕೆಗಳಲ್ಲಿ 
ಶತಾನಂದರು ಜನಕರಾಜನಿಗೆ ವೆಂಕಟಗಿರಿಯ ಮಹಾತ್ಮೆ ಹೇಳುತ್ತಾ ಆ ಪರ್ವತಕ್ಕೆ ಯುಗ ಭೇದ ದಿಂದ,ವೃಷಭಾಚಲ ಅಂಜನಾಚಲ,ಶೇಷಾಚಲ ಎಂದು ಹೆಸರು ಬಂದ ಹಿನ್ನೆಲೆ ಯನ್ನು ಹೇಳುತ್ತಾ ನಂತರ ಕಲಿಯುಗದಲ್ಲಿ ಅದಕ್ಕೆ ವೆಂಕಟಾಚಲ ಎನ್ನುವ ಹೆಸರು ಹೇಗೆ ಬಂತು ಅನ್ನುವದನ್ನು ಮುಂದೆ ಹೇಳುತ್ತಾರೆ.
ಜನಕ ಮಹಾರಾಜ!! ಕಲಿಯುಗದಲ್ಲಿ ಇದಕ್ಕೆ ವೆಂಕಟಾಚಲವೆಂದು ಹೆಸರು ಬರಲು ಕಾರಣವಾದ ಸಂಗತಿಯನ್ನು ಹೇಳುತ್ತೇನೆ ಕೇಳು.
ಹಿಂದೆ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಪುರಂದರನೆಂಬ ಬ್ರಾಹ್ಮಣ ನಿದ್ದನು.ಅವನಿಗೆ ಮಾಧವ ಎಂಬ ಮಗನಿದ್ದನು.
ಅವನ ಪತ್ನಿ ಚಂದ್ರ ರೇಖೆ.
ವೇದವೇದಾಂಗ ಪಾರಂಗತನು,ಸದಾಚಾರ ರತನು ಆದ ಮಾಧವನು ಒಂದು ದಿನ ಪತ್ನಿಯೊಂದಿಗೆ ದಿವಾ ಸಂಗಮವನ್ನು ಅಪೇಕ್ಷಿತ ಪಡಲು ಅದಕ್ಕೆ ಅವನ ಪತ್ನಿಯು ಅದು ಯೋಗ್ಯವಲ್ಲ ಈ ಸಮಯದಲ್ಲಿ ಅಂತ ಬಹು ಹಿತನುಡಿಗಳನ್ನು ಹೇಳಿದರು ಮಾಧವನು ಒಪ್ಪದೇ ವಿಹಾರಕ್ಕೆ ಕರೆದನು.
ಆಗ ಅವನ ಪತ್ನಿಯು  ಧರ್ಭೆ ತರುವ ನೆಪದಲ್ಲಿ ನೀವು ನದಿಯ ಕಡೆ ಹೋಗಿ ನಾನು ನೀರಿನ ನೆಪದಿಂದ ಬರುತ್ತೇನೆ ಎಂದು ಹೇಳಿ ಅದರಂತೆ ಬಂದಳು.
ಅದೇ ಸಮಯದಲ್ಲಿ ವನದಲ್ಲಿ ಶ್ವೇತ ವಸ್ತ್ರ ಧಾರಿಣಿಯಾಗಿಯು, ಸುಂದರಿಯು ಆದ ಕುಂತಳಾ ಎಂಬ ಚಂಡಾಲ ಕನ್ಯೆ ಯನ್ನು ಮಾಧವನು ನೋಡಿ ಅವಳಲ್ಲಿ ಮೋಹಗೊಳ್ಳುವನು.
ಅವಳಲ್ಲಿ ಅನುರಕ್ತನಾದ ಮಾಧವನು ಹೆಂಡತಿಯು ಬಂದದ್ದು ನೋಡಿ
ಪ್ರಿಯೆ!! ನಿನ್ನ ಪತಿಭಕ್ತಿಯನ್ನು ಪರೀಕ್ಷೆ ಮಾಡಲು ಇಲ್ಲಿ ಗೆ ಬರಹೇಳಿದ್ದು.ನಿನ್ನ ಭಕ್ತಿ ಯನ್ನು ಕಂಡು ಸಂತೋಷವಾಗಿದೆ. ನೀನಿನ್ನು ಮನೆಗೆ ತೆರಳು ಎಂದು ಹೇಳಲು  ಹರ್ಷಿತಳಾದ ಅವಳು ಮನೆಗೆ ತೆರಳಿದಳು.
ನಂತರ ಪತ್ನಿ ಹೋಗಿದ್ದ ನೋಡಿ ಆ ಕುಂತಳೆಯ ಬಳಿ ಸಾರಿ ತನ್ನ ಆಸೆಯನ್ನು ಅವಳಿಗೆ ತಿಳಿಸುವನು.
ಅವಳಾದರು ಅನೇಕ ಧರ್ಮ ಶಾಸ್ತ್ರ ,ನೀತಿ, ತತ್ವಗಳನ್ನು, ಹೇಳಿ
ಚಂಡಾಲ ಸ್ತ್ರೀ ಯ ಸಂಗಮ ನಿನಗೆ ವಿಹಿತ ವಲ್ಲವೆಂದು ಹೇಳಿದರು ಮಾಧವನು ಕಾಮಾಂಧನಾಗಿ ಅವಳನ್ನು ಬಲಾತ್ಕರಿಸುತ್ತಾನೆ.
ಆಗ ಕುಂತಳೆಯು ಅವನಿಗೆ "ಇಂದಿನಿಂದ ನೀನೆ ನನ್ನ ಪತಿ ನಿನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಚಂಡಾಲ ಕರ್ಮವನ್ನು ಸ್ವೀಕರಿಸು" ಅಂತ ಹೇಳಿದಳು.
ವಿಧಿಯಿಂದ ಪ್ರೇರಿತನಾದ ವೇದಪಂಡಿತನಾದ ಮಾಧವನು ಅವಳ ಮೇಲಿನ ಮೋಹದಿಂದ ತನ್ನ ಯಜ್ನೋಪವಿತವನ್ನು ಕಿತ್ತು ಎಸೆದು,ತಲೆಯನ್ನು ಬೋಳಿಸಿಕೊಂಡು,ಮಾಂಸ ಮಧ್ಯ ವನ್ನು ಸೇವಿಸುತ್ತಾ ಅವಳ ಜೊತೆಯಲ್ಲಿ ವಾಸ ಮಾಡಿದ.
ಹೀಗೆ ಅವಳ ಅಂಗ ಸಂಗ ಮಾಡಿ ಹನ್ನೆರಡು ವರ್ಷಗಳ ಕಾಲ ಸಂಸಾರವನ್ನು ಅವಳ ಜೊತೆಯಲ್ಲಿ ಮಾಡುತ್ತಾನೆ.
ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸನು ಅನ್ನುವಂತೆ
ಈ ದೇಹವು ಅಶಾಶ್ವತ ವಾದ್ದರಿಂದ ಕುಂತಳೆಯು ಕೃಷ್ಣ ವೇಣಿ ತೀರದಲ್ಲಿ ಇರುವಾಗ ಮರಣ ಹೊಂದಿದಳು..
ಪ್ರಿಯಕರಳ ಮರಣದಿಂದ
ದುಃಖ ದಿಂದ ಮಾಧವನು ಹುಚ್ಚು ಹಿಡಿದವನಂತೆ ಅಲೆಯುತ್ತಾ ಉತ್ತರ ದೇಶದ ರಾಜರು ಶೇಷಾಚಲ ಯಾತ್ರೆ ಹೊರಟಿರುವದನ್ನು ನೋಡಿ ಅವರ ಜೊತೆಯಲ್ಲಿ ತಾನು ಹೊರಡುತ್ತಾನೆ.
ಅವರು ಉಂಡು ಉಳಿಸಿದ ಎಂಜಲನ್ನವನ್ನು ತಿನ್ನುತ್ತಾ ದೈವಯೋಗದಿಂದ ಶೇಷಾಚಲ ಪರ್ವತಕ್ಕೆ ಬರುತ್ತಾನೆ.
ಆ ರಾಜರು ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಭಕ್ತಿ ಯಿಂದ ತೀರ್ಥ ಕ್ಷೇತ್ರದ ಪದ್ದತಿಯ ಪ್ರಕಾರ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನ ಮಾಡುತ್ತಾರೆ.
ಮಾಧವನು ಸಹ ಅವರಂತೆ ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಶಿರೋ ಮುಂಡನ ಮಾಡಿಸಿಕೊಂಡು  ತನ್ನ ಪಿತೃಗಳಿಗೆ  ಮಣ್ಣಿನಿಂದ ಪಿಂಡ ಪ್ರಧಾನ ಮಾಡಿದನು.
ಪೂರ್ವಜನ್ಮದಲ್ಲಿ ಮಾಡಿದ ಸುಕೃತದ ಫಲವೋ ಅವನ ಪಾಪಗಳೆಲ್ಲ ಪರಿಹಾರವಾಯಿತು.
ಆದುದರಿಂದ ಯಾರೇ ಆಗಲಿ ಭಕ್ತಿ ಇಂದ ಕಪಿಲ ತೀರ್ಥ ದಲ್ಲಿ ಅವಗಾಹನ ಮಾಡಿ ಸ್ನಾನ ಮಾಡಿದರೆ ಅವರ ಪಾಪ ರಾಶಿ ನಾಶವಾಗುವದು..
ಅನಾದಿಯು ಪುಣ್ಯ ಪ್ರದವು ಆದ ಶೇಷಾದ್ರಿ ಯಲ್ಲಿ ಮಾಧವನು ಮಣ್ಣಿನಿಂದ ಮಾಡಿದ ಪಿಂಡ ಪ್ರಧಾನ ಮಾಡಿದ್ದಕ್ಕಾಗಿ ಅವನ ಪಿತೃಗಳು ಶ್ರೀ ಹರಿಯ ಕೃಪೆ ಇಂದ ಶಾಶ್ವತವಾದ ಸುಖವನ್ನು ಪಡೆದರು..
ಮರುದಿನ‌ರಾಜನ ಪರಿವಾರ ಆ ಬೆಟ್ಟವನ್ನು ಏರುವಾಗ  
ಇವನು ಸಹ ಅವರನ್ನು ಅನುಸರಿಸಿ ಬೆಟ್ಟದ ತುದಿಯ ಭಾಗಕ್ಕೆ ಬಂದಾಗ ,
ಆ ಪರ್ವತದ ಸ್ಪರ್ಶ ಮಾತ್ರ ದಿಂದ ಅವನ ಪಾಪರಾಶಿಯೆಲ್ಲವು ಸುಟ್ಟು ಬೂದಿಯಾಯಿತು..
"ಹೇಗೆ ನೊಣವನ್ನು ನುಂಗಿದವನು ವಾಂತಿ ಮಾಡುವನೊ", ಅದರಂತೆ ಅವನ ಹೊಟ್ಟೆ ಯಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು..
ವೆಂಕಟಗಿರಿಯ ಮಹಿಮೆ ಇಂದ ಅವನ ದೇಹದಿಂದ ಉದ್ಬವಿಸಿದ ಒಂದಾನೊಂದು ಬೆಂಕಿಯು ಪ್ರಜ್ವಲಿಸಿ   ಅಂತ್ಯಜಳಾದ ಸ್ತ್ರೀ ಸಂಗಮ, ಮದ್ಯ , ಮಾಂಸ ,ಭಕ್ಷಣದಿಂದ ಬಂದ ಪಾಪ ಇವುಗಳನ್ನು ಸುಟ್ಟು ಹಾಕಿತು..
ಆಗ ಬಂದ ದುರ್ವಾಸನೆ ಯ ದಟ್ಟ ಹೊಗೆ ಸಕಲ ಲೋಕಗಳಿಗು ತಲುಪಿತು.
ತನ್ನ ಪಾಪವನ್ನು ವೆಂಕಟಗಿರಿಯ ಮಹಿಮೆ ಇಂದ ಕಳೆದುಕೊಂಡ ಮಾಧವನಿಗೆ ಅನುಗ್ರಹ ಮಾಡಲು ಸಕಲ ದೇವತೆಗಳು ,ಬ್ರಹ್ಮ ರುದ್ರಾದಿ ದೇವತೆಗಳು ತಮ್ಮ ಕಾಂತಿಯಿಂದ ಅಲ್ಲಿ ಗೆ ಆಗಮಿಸಿದರು..
ದೇವತೆಗಳು ಅವನ ಮೇಲೆ ಪುಷ್ಪ ವೃಷ್ಟಿಯನ್ನು ಕರೆದರು.
ವೇದ ಪ್ರತಿಪಾದ್ಯನು ಕಾಂತಿ ಸಂಪನ್ನ ನು, ಸರಸ್ವತಿ ದೇವಿಯ ಪತಿಯಾದ ಭಗವಂತನ ನಾಭಿ ಕಮಲದಿಂದ ಜನಿಸಿದ ಬ್ರಹ್ಮ ದೇವನು ಮಾಧವನ ಸಮೀಪಕ್ಕೆ ಬಂದು ಅವನ ತಲೆಯನ್ನು ಸ್ಪರ್ಶಿಸಿ ಇಂತೆಂದು ಹೇಳುತ್ತಾರೆ..
ವತ್ಸ!!ಮಾಧವ!!ನಿನ್ನ ಪಾಪಗಳು ಪರಿಹಾರವಾದವು.ನೀನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ಶ್ರೀ ವರಾಹ ರೂಪಿಯಾದ ಆ ಶ್ರೀ ಹರಿಯನ್ನು ಧ್ಯಾನಿಸುತ್ತಾ ನಿನ್ನ ದೇಹವನ್ನು ತ್ಯಜಿಸು...
ಮುಂದೆ  ಪಾಂಡವರ ದೌಹಿತ್ರರ ವಂಶದಲ್ಲಿ ನೀನು ಜನಿಸಿ ಅತ್ಯಂತ ಕೀರ್ತಿ ಸಂಪನ್ನನಾಗಿ ಮಹಾರಾಜ ನಾಗಿ ರಾಜ್ಯ ಭಾರವನ್ನು ಮಾಡುತ್ತೀಯಾ..
ಸುಧರ್ಮರಾಜನ ಮಗನಾಗಿ ಆಕಾಶರಾಜನೆಂಬ ಹೆಸರಿನಿಂದ ದಕ್ಷಿಣ ದೇಶದಲ್ಲಿ ಇರುವ ತೋಂಡದೇಶಕ್ಕೆ ಅಧಿಪತಿಯಾಗುವೆ..
ಎಲೈ !!ಮಾಧವನೇ ನಿನ್ನ ಭಾಗ್ಯವೇನೆಂದು ಹೇಳಲಿ!!
ಲೋಕಕ್ಕೆ ಹಾಗು ನನಗು ಜನನಿಯಾದ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿನಗೆ ಮಗಳಾಗಿ ಬರುವಳು..
ಸಕಲ ಜಗತ್ತಿನ ಹಾಗು ನನಗೆ ಸಹ ಪ್ರಭುವಾದ ,ನನ್ನ ಪಿತನಾದ ಆ ದೇವ ದೇವನಾದ ಶ್ರೀ ಮನ್ ನಾರಾಯಣನು ನಿನಗೆ ಅಳಿಯನಾಗುವನು..
ಬಹುಕಾಲ ರಾಜ್ಯದ ಭಾರವನ್ನು ಮಾಡಿಅನಂತರ ಮೋಕ್ಷ ವನ್ನು ಪಡೆಯುತ್ತೀಯೇ ಅಂತ ಹೇಳಿ ವರವನ್ನು ಕರುಣಿಸಿ ಆಶೀರ್ವಾದ ಮಾಡಿ ಬ್ರಹ್ಮ ದೇವರು ಅದೃಶ್ಯ ರಾದರು.
ಮಾಧವನ ಸಕಲ ಪಾಪವನ್ನು ಹರಣ ಮಾಡಿದ್ದರಿಂದ ಆ ಪರ್ವತಕ್ಕೆ ವೆಂಕಟಾಚಲ ವೆಂದು ಸಕಲ ದೇವತೆಗಳು ಹೆಸರನ್ನು ಇಟ್ಟರು..
ಪಾಪವನ್ನು ಸುಡುವದರಿಂದ, ಪಾಪ ದಹನ ಶಕ್ತಿ ಯುಕ್ತ ವಾದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಹೆಸರು ಬಂದಿತು.
ಎಲೈ ಜನಕ ರಾಜನೇ! ಪ್ರಾತಃ ಕಾಲದಲ್ಲಿ ಯಾರು ಈ ವೆಂಕಟಗಿರಿಯನ್ನು ಸ್ತುತಿಸುವರೋ,ಕೀರ್ತಿಸುವರೋ ಅಂಥವರಿಗೆ ದೊರಕುವ ಸುಕೃತ ಫಲವನ್ನು ಹೇಳುವೆನು  ಕೇಳು.
ಸಮಗ್ರಭೂಮಿ,ಗಂಗಾನದಿ ,ರಾಮಸೇತುಗಳ ಯಾತ್ರೆ ಮಾಡಿದರೆ ಎಷ್ಟು ಫಲವೋ ಅದಕ್ಕೆ ಸಾವಿರ ಪಟ್ಟು ಫಲವು ಅಧಿಕ ಪುಣ್ಯ ವು ಬರುವದು.
ಬಹು ಪುಣ್ಯ ಕರವಾದ ಮಂಗಳಕರವಾದ ಈ ವೆಂಕಟಗಿರಿಯ ಮಹಾತ್ಮೆ ಯನ್ನು ನಿನಗೆ ಹೇಳಿದ್ದೇನೆ. *ಇದನ್ನು ಶ್ರವಣ, ಪಾರಾಯಣ ವನ್ನು ಭಕ್ತಿ ಇಂದ ಮಾಡಿದರೆ ಶುಭ ಪ್ರದವಾಗುವದು ಎಂದು ಹೇಳಿದರು.
ಇಂತು ಭವಿಷ್ಯೊತ್ತರ ಪುರಾಣದ ಶ್ರೀ ವೆಂಕಟೇಶ ಮಹಾತ್ಮೆ ಯ ಚತುರ್ಯುಗಗಳ ಮಹಿಮೆಯನ್ನು ವರ್ಣನೆ ಮಾಡುವ ಮೊದಲನೆಯ ಅಧ್ಯಾಯ ಮುಗಿದಿದು..
ಇದನ್ನು ಕೇಳಿ ಸಂತುಷ್ಟನಾದ ಜನಕನು  ಆನಂದಾದ್ರಿ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡಿದ ಬಗೆಯನ್ನು ಕೇಳುತ್ತಾನೆ.
ನಾಳೆ ಅದರ ಬಗ್ಗೆ ತಿಳಿಸುವ ಪ್ರಯತ್ನ.
🙏ಶ್ರೀ ಕೃಷ್ಣಾ ರ್ಪಣ ಮಸ್ತು🙏
 ಈ ಗಿರಿ ಯಾತ್ರಿಯಾ ಮಾಡಿದ ಜನರಿಗೆ|
ನಾಗಶಯನ ವಿಜಯವಿಠ್ಠಲ ವೆಂಕಟ ಒಲಿವಾ||
🙏ಅ.ವಿಜಯವಿಠ್ಠಲ🙏

******


day4
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಹಿಂದಿನ ಅಧ್ಯಾಯ ದಲ್ಲಿ ಚತುರ್ಯುಗದಲ್ಲಿ ವೆಂಕಟಗಿರಿಗೆ ಬಂದ ನಾಲ್ಕು ಹೆಸರುಗಳ ಕಾರಣ ಮುಂತಾದವನ್ನು ಕೇಳಿದ ಜನಕ‌ಮಹಾರಾಜನು ಅತೀ ಸಂತುಷ್ಟನಾಗಿ 
ಸ್ವಾಮಿ!! ಹಿಂದೆ ನೀವು ವಾಯುದೇವರು ಶೇಷದೇವನಿಗೆ ಭಗವಂತನು ಇಲ್ಲಿ ಬಂದು ವಾಸ ಮಾಡುತ್ತಾನೆ ಅಂತ ಹೇಳಿದ್ದೀರಿ..
ಯಾವ ಕಾರಣದಿಂದಾಗಿ ಭಗವಂತ ವೈಕುಂಠ ವನ್ನು ಬಿಟ್ಟು ಇಲ್ಲಿ ನೆಲೆಸಿದ??ಅದರಂತೆ ಆಕಾಶರಾಜನ ಚರಿತ್ರೆ,ಮತ್ತು ಸಾಕ್ಷಾತ್ ಮಹಾಲಕ್ಷ್ಮೀ ದೇವಿಯು ಅವನಿಗೆ ಹೇಗೆ ಮಗಳಾದಳು??ಭಗವಂತನು ಆಕಾಶರಾಜನಿಗೆ ಹೇಗೆ ಅಳಿಯನಾದ?? ಕತೆಯನ್ನು ದಯವಿಟ್ಟು ಅದರ ಬಗ್ಗೆ ತಿಳಿಸಬೇಕು ಅಂತ ಕೇಳಿಕೊಂಡನು.
ಅದಕ್ಕೆ ಶತಾನಂದರು 
ಹೇ ರಾಜನ್!! ಕೇಳು! ಪೂರ್ವದಲ್ಲಿ ಸಕಲ ಮುನಿಶ್ರೇಷ್ಟರು ಗಂಗಾನದಿಯ ತಟದಲ್ಲಿ ಒಂದು ಶ್ರೇಷ್ಠ ವಾದ ಯಜ್ಞ ವನ್ನು ಆಚರಿಸಿದರು..
ಆ ಯಾಗ ನಡೆಯುವ ಸುಸಂಧರ್ಭದಲ್ಲಿ ದೇವರ್ಷಿಯಾದ ನಾರದರು ಅಲ್ಲಿಗೆ ಆಗಮಿಸಿ ಕಶ್ಯಾಪಾದಿ ಋಷಿಗಳನ್ನು ನೋಡಿ ಈ ಉತ್ತಮವಾದ ಯಜ್ಞ ವನ್ನು ಯಾವ ಉದ್ದೇಶದಿಂದ ಮಾಡುವಿರಿ??ಈ ಯಜ್ಞಕ್ಕೆ ದೇವತೆ ಯಾರು?? ಮತ್ತು ಈ ಯಜ್ಞ ದ ಫಲವನ್ನು ಯಾವ ಸರ್ವೋತ್ತಮ ದೇವತೆಗೆ ಅರ್ಪಿಸುವಿರಿ?? ಶ್ರೀಹರಿಗೋ??ವಾರಿಜೋದ್ಬವನಿಗೋ??ಅಥವಾ ಶಂಕರನಿಗೋ??ಅಂತ ಕೇಳಿದಾಗ
ಸಕಲ ಮುನಿಗಳಲ್ಲಿ ಇದರ ಬಗ್ಗೆ ಚರ್ಚೆ ಯಾಗಿ ನಿಜ ಇದನ್ನು ಯಾರಿಗೆ ಅರ್ಪಿಸಬೇಕು ಅಂತ ವಿಚಾರಿಸಿ ಕೊನೆಗೆ ಸಾಧ್ಯವಾಗದೇ ಋಷಿಗಳ ಸಮೂಹದಲ್ಲಿ ಶ್ರೇಷ್ಠ ರಾದ ಭೃಗು ಮುನಿಗಳ ಹತ್ತಿರ ಬಂದು ಸ್ವಾಮಿ ಭೃಗುಮುನಿಗಳೇ!!ದೇವತೆಗಳಲ್ಲಿ ಉತ್ತಮನಾದ ಪರಮ ಪುರುಷನು ಯಾರೆಂದು ತಿಳಿದು ಬರಲು ದಯಮಾಡಿ ಹೊರಡಿರಿ ಎಂದು ಕೋರಿದರು..
ಆಗ ಭೃಗು ಮುನಿಗಳು ಅವರ ಕೋರಿಕೆಯನ್ನು ಮನ್ನಿಸಿ ಸರ್ವೋತ್ತಮ ದೇವತೆ ಯಾರೆಂದು ತಿಳಿಯಲು ಕಮಲ ಮಂದಿರನಾದ ಸತ್ಯಲೋಕದಲ್ಲಿ ಸರಸ್ವತಿ ಸಮೇತ ನಾಗಿ ಇರುವ ಬ್ರಹ್ಮ ದೇವರ ಬಳಿ ಬಂದರು..
ಆ ಸಮಯದಲ್ಲಿ ನಾಲ್ಕು ಮುಖಗಳಿಂದ ಬ್ರಹ್ಮ ದೇವರು ವೇದಘೋಷವನ್ನು ಮಾಡುತ್ತಾ ಇದ್ದರು..
ಅವರಿಗೆ ಭಕ್ತಿ ಇಂದ ನಮಸ್ಕರಿಸಿ ದರು ಸಹ 
ಬ್ರಹ್ಮ ದೇವರು ಭೃಗು ಋಷಿಗಳ ಕಡೆ ಗಮನ ಹರಿಸಲಿಲ್ಲ.
ನೋಡಿದರು, ಮಾತನಾಡಿಸದೆ ಸುಮ್ಮನೆ ಮೌನ ವಹಿಸಿದರು..
ಶ್ರೀ ಹರಿ ಸರ್ವೋತ್ತಮ ಸಿದ್ದಾಂತ ಸ್ಥಾಪಿಸಲೋಸುಗ ಅವರು ಸುಮ್ಮನೆ ಸರಸ್ವತಿ ದೇವಿಯರೊಡನೆ ಧ್ಯಾನಾಸಕ್ತರಾಗಿ ಕುಳಿತಿದ್ದರು.
ಇದನ್ನು ಕಂಡ ಭೃಗು ಮುನಿಗಳು  ಬ್ರಹ್ಮ ದೇವನು ಸ್ವಲ್ಪ ಅಜ್ಞಾನ ಉಳ್ಳವನಾಗಿದ್ದಾನೆ, ಆದ್ದರಿಂದ ಇವನು ಸರ್ವೋತ್ತಮ ದೇವತೆ ಅಲ್ಲವೆಂದು ತಿಳಿದು ಕಲಿಯುಗದಲ್ಲಿ ಇವರ ಪೂಜೆ ಆಗದಿರಲಿ ಎಂದು ಶಾಪವನ್ನು ಕೊಟ್ಟು ಮುಂದೆ ಕೈಲಾಸ ಪರ್ವತಕ್ಕೆ ಬರುವರು.
ಭೃಗುಋಷಿಗಳು ಸತ್ಯಲೋಕದಿಂದ ಕೈಲಾಸ ಪರ್ವತಕ್ಕೆ ಹೋದಾಗ 
ಅಲ್ಲಿ ರುದ್ರದೇವರು ತಮ್ಮ ಪತ್ನಿಯಾದ ಪಾರ್ವತಿದೇವಿಯರೊಂದಿಗೆ ಏಕಾಂತದಲ್ಲಿದ್ದರು...
ಅಲ್ಲಿಯು ಸಹ ರುದ್ರದೇವರು "ಶ್ರೀಹರಿಯೇ ಸರ್ವೋತ್ತಮ"ನೆಂದು ತಮ್ಮಿಂದಲೂ ಸ್ಥಾಪಿಸಬೇಕೆಂದು ಭೃಗುಋಷಿಗಳು ಬಂದದ್ದನ್ನು ನೋಡದಂತೆ ನಟಿಸಿ,ಅವರ ಯೋಗ-ಕ್ಷೇಮವನ್ನು ವಿಚಾರಿಸದೆ,ತಮ್ಮ ಪತ್ನಿಯೊಡನೆಯಿರುವ ಏಕಾಂತಕ್ಕೆ ಭಂಗ ತಂದಿರುವಿರೆಂದು ಋಷಿಗಳಿಗೆ ತಮ್ಮ ತ್ರಿಶೂಲದಿಂದ ಸಂಹರಿಸಲು ಹೋದಂತೆ ನಟಿಸಿದಾಗ,
ಅಗ ಭೃಗು ಋಷಿಗಳು ಕೋಪದಿಂದ "ಭೋಗಾಸಕ್ತರಾದ ನಿಮಗೆ ಇನ್ನು ಮುಂದೆ ಭೂ-ಲೋಕದಲ್ಲಿ ನಿಮ್ಮ ಮೂರ್ತಿಯನ್ನು ಪೂಜಿಸದೆ  ಲಿಂಗ ಪೂಜೆಯಾಗಲಿ"ಎಂದು ಶಾಪವನ್ನು ಕೊಡುತ್ತಾರೆ. ಅವರು ಕೊಟ್ಟು ಶಾಪವನ್ನು ತೆಗೆದುಕೊಂಡು ಪರಮ ವೈಷ್ಣವಾಗ್ರೇಸರಾದ ಹಾಗು ಮನೋನಿಯಾಮಕರಾದ ರುದ್ರದೇವರೆ ವೈಕುಂಠ ಲೋಕಕ್ಕೆ ಹೋಗುವಂತೆ ಭೃಗುಋಷಿಗಳಿಗೆ ಮನಃ ಪ್ರೇರಿಸಿದರು..
ಆ ನಂತರ ವೈಕುಂಠಕ್ಕೆ ಬಂದರು.
ಅಲ್ಲಿ ಶ್ರೀ ಮನ್ನಾರಾಯಣನು ಶೇಷಮಂಚದಲ್ಲಿ ಸುಪ್ಪತ್ತಿಗೆ ಮೇಲೆ ನಿದ್ರಾ ವಶದವನಂತೆ ನಟನೆ ಮಾಡುತ್ತಾ ಪವಡಿಸಿದ್ದನು.ಇದನ್ನು ಕಂಡ ಭೃಗು ಋಷಿಗಳು ಪರಮ ಕೋಪದಿಂದ ಶ್ರೀ ಹರಿಯ ವಕ್ಷಸ್ಥಳಕ್ಕೆ ತಮ್ಮ ಪಾದದಿಂದ ತಾಡನೆ ಮಾಡಿದರು..
ತಕ್ಷಣ ರಮಾಪತಿಯು ಮೇಲೆದ್ದು ತಾನು ಅಪರಾಧ ಮಾಡಿದವನಂತೆ ಕ್ಷಮೆ ಯಾಚಿಸುತ್ತಾ 
"ಯಾಕೆನ್ನ ಮೇಲೆ ಇಷ್ಟು ಸಿಟ್ಟು?? ನೀ ಬೇಕಾದ್ದು ಕೇಳು ಕೊಡುವೆನು ಕಾಲಕಾಲಕ್ಕೆ...
ಸುಮ್ಮನೆ ಯಾರಿಗು ತಿಳಿಸದೇ ನನ್ನ ಮನೆಗೆ ಬಂದು ಒದ್ದ ಕಾರಣವೇನು??ನನ್ನ ವಜ್ರ ಕಠಿಣವಾದಂತಹ ಎದೆಗೆ ಒದ್ದು ನಿಮ್ಮ ಮೃದುವಾದ ಕೋಮಲವಾದ ಪಾದ ಎಷ್ಟು ನೊಂದಿತೋ ನಾನರಿಯೇ!! ಅಂತ ಹೇಳಿ 
 ಭೃಗು ಋಷಿಗಳ ನ್ನು ಅರ್ಘ್ಯ ಪಾದಾದಿಗಳಿಂದ ಸತ್ಕರಿಸಿ ಆ  ಪಾದೋದಕ ವನ್ನು ತಾನು ಶಿರಸ್ಸಿನಲ್ಲಿ ಧರಿಸಿ,ತನ್ನ ಪತ್ನಿಯಾದ ರಮಾದೇವಿಯರಿಗು ಪ್ರೋಕ್ಷಣೆ ಮಾಡಿ, ಮನೆಯಲ್ಲಿ ಎಲ್ಲಾ ಕಡೆಗೆ,ತನ್ನ ಸಕಲ ಪರಿವಾರದವರಿಗು ಪ್ರೋಕ್ಷಣೆಯನ್ನು ಶ್ರೀ ಹರಿಯು ಮಾಡುತ್ತಾನೆ.
ಬಂದ ಕಾರ್ಯವಾಗಿದ್ದನ್ನು ತಿಳಿದು ಭೃಗು ಋಷಿಗಳು ಭೂಲೋಕಕ್ಕೆ ಬಂದು 
ಶ್ರೀ ಹರಿಯೇ ಸರ್ವೋತ್ತಮ ನೆಂದು ಹೇಳಿ ಇದು ಸತ್ಯ ಅಂತ ಎಲ್ರಿಗು ಉಪದೇಶ ವನ್ನು ಮಾಡಿದರು..
ಶ್ರೀ ಹರಿಯು ಸಕಲ ದೇವತಾ ಸಾರ್ವಭೌಮ ನು.ನಂತರ ಲಕ್ಷ್ಮೀ ದೇವಿಯರು ತಾರತಮ್ಯ ದಲ್ಲಿ ಕಿರಿಯಳು.ಆ ನಂತರ ಸಕಲ ದೇವತಾ ಪರಿವಾರ ತಾರತಮ್ಯ ದಲ್ಲಿ ಬರುತ್ತಾರೆ ಅಂತ  ಹೇಳಿ ಪರಮ ಪುರುಷನಾದ ಆ ಶ್ರೀ ಹರಿಗೆ ಯಜ್ಞ ಫಲವನ್ನು ಸಮರ್ಪಣೆ ಮಾಡಿದರು.

🙏ಶ್ರೀ ಕೃಷ್ಣಾರ್ಪಣ ಮಸ್ತು🙏

********


day 5
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
🙏🙇‍♂
ಇತ್ತ ಭೃಗು ಋಷಿಗಳು ವೈಕುಂಠ ದಿಂದ ಹೊರಟು ಹೋದ ಮೇಲೆ, ಏಕಾಂತದಲ್ಲಿ ರಮಾದೇವಿಯ ಜೊತೆಯಲ್ಲಿ  ಭಗವಂತನು ಇರುವಾಗ 
ಮಹಾಲಕ್ಷ್ಮಿ ದೇವಿಯು
"ಜಗನ್ನಿಯಾಮಕನಾದ, ದೇವೋತ್ತಮನಾದ ಪ್ರಭುವೇ, ನಾನು ನಿನ್ನನ್ನು ತೊರೆದು ಹೋಗುವೆನು.
ನಿನ್ನ ಶ್ರೀವತ್ಸ ಸದಾ ಎನ್ನ ಆಲಿಂಗನವನ್ನು ಮಾಡಿಕೊಂಡಿರುವದು.
ಅಂತಹ ಸ್ಥಳ ಭೂಸುರನಿಂದ ಪಾದದಿಂದ ಸ್ಪರ್ಶವಾಗಿದೆ.ಹಾಗಾಗಿ ನಾನು ಇಲ್ಲಿ ಇರುವುದಿಲ್ಲ..
ಎಲ್ಲರಿಗಿಂತ ಉತ್ತಮನು ನೀನು ಎಂದುಇಲ್ಲಿ ಇದ್ದೆ. ನಿನಗೆ  ಭಕ್ತ ವತ್ಸಲ ಎಂಬ ಬಿರುದು ಬೇಕಾಗಿತ್ತು ಅಂದರೆ ಈ ತರ ಮಾನವ ಚರಣವನ್ನು ಎದೆಯಲ್ಲಿ ಧರಿಸುವದು ಸರಿಯೇ!! ಕರವೀರಪುರಕ್ಕೆ ಹೋಗುತ್ತೇನೆ ಅಂತ ಹೇಳಿ ಜಗನ್ಮಾತೆ ಯು ಪ್ರೇಮ ಕಲಹವನ್ನು ಮಾಡಿ (ಕಲಹ ಮಾಡಿದಂತೆ  ನಟಿಸಿ)ವೈಕುಂಠ ಪುರವನ್ನು ಬಿಟ್ಟು ಕರವೀರಪುರಕ್ಕೆ ಬರುತ್ತಾಳೆ..
ಅವಿಯೋಗಿಗಳು ಅವರು...
ಅವರಿಬ್ಬರಿಗೂ ವಿಯೋಗ ಎನ್ನುವುದು ಯಾವ ಕಾಲಕ್ಕೆ ಸಹ ಇಲ್ಲ.
ಭಾವಿ ಲೋಕ ಕಲ್ಯಾಣಕ್ಕಾಗಿಯು, ಭಗವಂತನ ಸಂಕಲ್ಪ ಮಹತ್ವವನ್ನು ಜಗತ್ತಿನಲ್ಲಿ ತೋರಿಸಲು ವೈಕುಂಠ ದಿಂದ ತನ್ನ ತವರು ಮನೆಯಾದ ಕರವೀರಪುರಕ್ಕೆ ದಯ ಮಾಡಿಸಿದಳು..

ಭಗವಂತನಿಗೆ ಸದಾ ಆಭರಣವಾಗಿ,ಅವನ ಎದೆಯಲ್ಲಿ ಸದಾ ವಾಸ ಮಾಡುವಂತಹವಳು ಲಕ್ಷ್ಮೀ ದೇವಿಯು.. ..
ಹೇಗೆ ಸೂರ್ಯನಿಗು ಅವನ ಕಿರಣಗಳಿಗು ಹೇಗೆ ಅವಿಭಾಜ್ಯ ಸಂಭಂದವಿದೆಯೋ ಅಂತೆಯೇ ಶ್ರೀ ಲಕ್ಷ್ಮೀ ನಾರಾಯಣರ ನಡುವೆಯೂ ಇದೆ..
ಒಂದು ರೂಪದಿಂದ ಭಗವಂತನ ಜೊತೆಯಲ್ಲಿ ಇದ್ದು,
 ಇನ್ನೊಂದು ರೂಪದಿಂದ
ಭಗವಂತನ ಜೊತೆಯಲ್ಲಿ ಪ್ರೇಮ ಕಲಹವಾಡಿದ ರಮಾದೇವಿ ಭೂಲೋಕಕ್ಕೆ ಬಂದಳು..
ಹೇಗೆ ಸಮುದ್ರ ಮಥನ ಸಮಯದಲ್ಲಿ ಒಂದು ರೂಪದಿಂದ ವೈಕುಂಠ ದಲ್ಲಿ ಇದ್ದಳೊ, ಅದೇ ರೀತಿಯಲ್ಲಿ ಇನ್ನೊಂದು ರೂಪದಿಂದ ಸಮುದ್ರ ದಲ್ಲಿ ಕಾಣಿಸಿಕೊಂಡಳೊ ಹಾಗೇ ಸದಾ ಭಗವಂತ ನ ಬಿಟ್ಟು ಒಂದು ಕ್ಷಣವು ಲಕ್ಷ್ಮಿ ದೇವಿ ಇರುವುದಿಲ್ಲ..

ರಮಾದೇವಿ ಬಿಟ್ಟು ಹೋದದ್ದಕ್ಕೆ ಭಗವಂತನು  ಪತ್ನಿ ವಿಯೋಗ ವಾಯಿತೆಂದು, ನಟಿಸಿದ ಹೊರತು ನಿಜವಾಗಿಯೂ ಅವರಿಬ್ಬರಿಗೂ ಎಂದಿಗು ವಿಯೋಗ ಇಲ್ಲ.
ಒಟ್ಟಾರೆ ತಿಳಿದು ಕೊಳ್ಳುವ ದು ಇಷ್ಟೇ. 
ಒಂದು ರೂಪದಿಂದ ವೈಕುಂಠ ದಲ್ಲಿ ವಿಷ್ಣು ವನ್ನು ಸೇವಿಸುತ್ತಾ ಇನ್ನೊಂದು ರೂಪದಿಂದ ರಮಾದೇವಿ ಭೂಲೋಕಕ್ಕೆ ಬಂದಳು ಅಂತ ಚಿಂತನೆ ಮಾಡಬೇಕು.

ಸಾಮಾನ್ಯ ಸ್ತ್ರೀ ಯಂತೆ,ಕಲಹಮಾಡಿಕೊಂಡು ಭಗವಂತನ ಬಿಟ್ಟು ಹೋದಳು ಅಂತ ಚಿಂತನೆ ಮಾಡಬಾರದು. ಮಹಾ ದೋಷ ಬರುತ್ತದೆ.

 ಅಸುರೀ ಜನ ಮೋಹಕ್ಕಾಗಿ ಈ ರೀತಿಯಾಗಿ ಪ್ರೇಮ ಕಲಹವನ್ನು ಮಾಡಿ ಭೂಲೋಕಕ್ಕೆ ಜಗನ್ಮಾತೆ ಬರುತ್ತಾಳೆ.

೨೮,‌ನೆಯ ದ್ವಾಪರಯುಗದ ಕೊನೆಯ ಭಾಗದಲ್ಲಿ ಕಲಿಯುಗದಲ್ಲಿ ಮಹಾಲಕ್ಷ್ಮಿ ಯು ಕರವೀರಪುರಕ್ಕೆ ತೆರಳಿದ ಮೇಲೆ 
ಭಗವಂತನು ಸಿರಿ ಇಲ್ಲದ ವೈಕುಂಠ ಸರಿ ಬಾರದು ಎನಗೆ, ಏನು ಮಾಡಲಿ !!ನನ್ನ ಕಣ್ಣಿಗೆ ವೈಕುಂಠ ಅರಣ್ಯ ದಂತೆ ತೋರುತ್ತಿದೆ!!...
ಎಲ್ಲಿ ಹೋಗಲಿ?? ಅಂತ ಚಿಂತೆ ಮಾಡುವರಂತೆ, ನಟಿಸುತ್ತಾ
ಯಾವುದೇ ಚಿಂತೆ, ಸಂತಾಪ, ಮುಂತಾದ ದೋಷ ವಿದೂರನಾಗಿದ್ದರು, ಸ್ವರಮಣನಾದ ಶ್ರೀ ಹರಿಯು  ರಮಾದೇವಿ ಯ ವಿರಹ ದುಃಖವನ್ನು ತಾಳದವನಂತೆ ನಟಿಸುತ್ತಾ ಆಜ್ಞ ಜನರನ್ನು ಮೋಹಗೊಳಿಸುತ್ತಾ ,ವೈಕುಂಠ ವನ್ನು ಬಿಟ್ಟು ಸುವರ್ಣಮುಖಿ ನದಿಯ ತಟದಲ್ಲಿ ಹಿಂದೆ ವಾಯುದೇವರು ಶೇಷದೇವನ ಗರ್ವಭಂಗವನ್ನು ಮಾಡಿದ ಶೇಷಾಚಲಕ್ಕೆ ಬಂದು ಸ್ವಾಮಿ ಪುಷ್ಕರಣಿ ತೀರದಲ್ಲಿ ಹುಣಿಸೇ ಮರದ ಬುಡದಲ್ಲಿ ಇರುವ ವಲ್ಮೀಕದಲ್ಲಿ ಅವಿತುಕೊಂಡು ರಹಸ್ಯ ವಾಗಿ ವಾಸಮಾಡತೊಡಗಿದನು.

ಭಕ್ತರ ಮೂಲಕ ಸಾಧನೆ, ನಡೆಯುವಂತೆ ಮಾಡಿ ಆ ಪ್ರಯುಕ್ತ ಪುಣ್ಯ, ಮತ್ತು ಕೀರ್ತಿಗಳಿಂದ, ಅವರನ್ನು ಅವರವರ ಯೋಗ್ಯತೆನುಗುಣವಾಗಿ ಅನುಗ್ರಹ ಮಾಡುವದೇ, ಭಗವಂತನ ಎಲ್ಲಾ ಅವತಾರಗಳ ಹಿನ್ನೆಲೆ..

ನಿತ್ಯ ಲಕ್ಷ್ಮೀ ಯನ್ನು ಹೊಂದಿದ್ದು ,ತನಗಾಗಿ ಹೊಂದಬೇಕಾದದ್ದು, ಮಾಡಬೇಕಾದದ್ದು ,ಏನು ಇಲ್ಲವಾದರು ಭಗವಂತನು ಲಕ್ಷ್ಮೀ ದೇವಿ,ಬ್ರಹ್ಮ, ರುದ್ರಾದಿ ದೇವತೆಗಳು, ಶುಕಾಚಾರ್ಯರು,ಆಕಾಶರಾಜ,ಬಕುಲಾ ದೇವಿ,ಮುಂತಾದ ಭಕ್ತರಿಂದ ಆಯಾ ಸಾಧನೆ ಮಾಡಿಸಿ, ಪುಣ್ಯ, ಮತ್ತು ಸತ್ಕೀರ್ತಿಗಳಿಂದ, ಅವರಿಗೆ ಅನುಗ್ರಹ ಮಾಡಬೇಕೆಂಬ ಸಂಕಲ್ಪ ದಿಂದ ವೆಂಕಟೇಶ ನಾಗಿ ವೆಂಕಟಾದ್ರಿ ಗೆ ಬಂದನು..

ಈ ಪರ್ವತದ ವರ್ಣನೆ.👇
"ಈ ವೆಂಕಟಾಚಲವೇ ಶ್ರೀ ಶೇಷದೇವರ ಮುಖವು",
"ನೃಸಿಂಹಾಚಲವೇ (ಅಹೋಬಲ ಪರ್ವತವೇ)ಮಧ್ಯಭಾಗ"
"ಬಾಲದಂತಿರುವ ಕೊನೆಯ ಭಾಗವೇ ಶ್ರೀಶೈಲ ಪರ್ವತವು".
ಇಂತಹ ಶೇಷಾಚಲವು ಪುಣ್ಯ ಪ್ರದವಾಗಿದೆ.ಅದರ ವರ್ಣನೆ ಬಲು ರಮಣೀಯ.
ಅನೇಕ ಜಾತಿಯ ಗಿಡ ಮರಗಳಿಂದ,ಫಲ ಪುಷ್ಪ ಗಳಿಂದ, ವೃಕ್ಷ ಭರಿತವಾದ ಪರ್ವತ ಅದು.ಅನೇಕ ಜಾತಿಯ ಪಕ್ಷಿಗಳು, ಮೃಗಗಳು ಮತ್ತು ಅನೇಕ ಬಗೆಯ ಹೂ ಬಳ್ಳಿ ಗಳು ಹೀಗೆ ಅದರಲ್ಲಿ ಅಲಂಕೃತ ವಾಗಿದೆ.
ಇಂತಹ ಮನೋಹರವಾದ ನಯನಾನಂದವಾದ ಸಕಲ ವೃಕ್ಷ, ಸಂಪತ್ತನ್ನು ಹೊಂದಿದ ವೆಂಕಟಾಚಲಕ್ಕೆ ಸ್ವಾಮಿ ಆಗಮಿಸಿ ಹತ್ತು ಸಾವಿರ ವರ್ಷಗಳ ಕಾಲ ಹುತ್ತದಲ್ಲಿ ವಾಸ ಮಾಡಿದನು..
"ಇಲ್ಲಿ ಇರುವ ವೃಕ್ಷಗಳೇ ದೇವತೆಗಳ  ಸಮೂಹವು.",
ಮೃಗಗಳೇ ಮುನಿಶ್ರೇಷ್ಟರು.,
ಪಕ್ಷಿ ಗಳೇ ಪಿತೃದೇವತೆಗಳು.
ಅಲ್ಲಿ ಇರುವ ಸಕಲ ಕಲ್ಲು ಬಂಡೆಗಳೇ ಸಕಲ ಯಕ್ಷ ಕಿನ್ನರರು ಎಂದು ತಿಳಿಯಬೇಕು.
ಮೇರು ಪರ್ವತನ ಕುಮಾರನಾದ 
ಕಾಂತಿ ಸಂಪನ್ನವಾದ ಈ ವೆಂಕಟಾಚಲದ ಹಾಗು 
ಶ್ರೀ ಹರಿಯ ಮಹಿಮೆಯನ್ನು ಬ್ರಹ್ಮ ಮುಂತಾದ ದೇವತೆಗಳು ಮಾತ್ರ ಬಲ್ಲರು ಹೊರತು ಅಲ್ಪಶಕ್ತರಾದ ನಮ್ಮಂತಹ ಮಾನವರು ತಿಳಿಯಲು ಅಶಕ್ಯ...
🙏🙏
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ ಯ ಶೇಷಗಿರಿ ಪರ್ವತದ ವರ್ಣನೆ ಎಂಬ ಎರಡನೆಯ ಅಧ್ಯಾಯ ಮುಗಿದಿದು.

🙏ಶ್ರೀ ಕೃಷ್ಣಾ ರ್ಪಣಮಸ್ತು🙏
*******



day6

ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
 ✍ಶತಾನಂದರು ಜನಕರಾಜನ ಪ್ರಾರ್ಥನೆ ಯಂತೆ ಭಗವಂತನು ಭೂಲೋಕಕ್ಕೆ ಬಂದ ಬಗ್ಗೆ ಮತ್ತು ವೆಂಕಟ ಗಿರಿಯ ಮಹಿಮೆಯನ್ನು ಹೇಳಿ ಮುಂದೆ ಅಲ್ಲಿ ಇರುವ ತೀರ್ಥಾದಿಗಳ ವೈಶಿಷ್ಟ್ಯ ಹಾಗು ಮುಂದಿನ ಕತೆಯನ್ನು ನಿರೂಪಣೆ ಮಾಡುತ್ತಾರೆ.
ಎಲೈ !ರಾಜನೇ ಕೇಳು
ಶ್ರೀ ವೆಂಕಟ ಗಿರಿಯ ಮೇಲ್ಭಾಗದಲ್ಲಿ ಸ್ವಾಮಿ ಪುಷ್ಕರಣಿ ಎಂಬ ಪವಿತ್ರ ತೀರ್ಥವು ವಿರಾಜಿಸುತ್ತಿದೆ.ಅದು ಬಹು ಉತ್ತಮ ವಾದ ತೀರ್ಥವು..
ಸಕಲ ಜಲಚರಗಳಿಂದ ಅದುಕೂಡಿದೆ.ಸಕಲ ನದಿ ತೀರ್ಥಗಳಿಂದ ಕೂಡಿದ ಆ ಪುಷ್ಕರಣಿ ಯಲ್ಲಿ ಸ್ನಾನ ಮಾಡುವವರು ಕೃತಾರ್ಥರು ಮತ್ತು ಪುಣ್ಯ ಶಾಲಿಗಳು..
ಸೂರ್ಯನು ಧನು ರಾಶಿಯಲ್ಲಿ ಇರುವಾಗ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಅರುಣೋದಯ ಕಾಲದಲ್ಲಿ ಸಮಸ್ತ ದೇವತೆಗಳು, ಋಷಿಗಳು ಪರಮ ಮಂಗಳಕರವಾದ ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಲು ಅಪೇಕ್ಷಿತ ಪಡುತ್ತಾರೆ..
ಅಂದಮೇಲೆ ಮಾನವರು ಸ್ನಾನ ಮಾಡುವದು ಅವಶ್ಯಕ ಎಂದು ಬೇರೆ ಹೇಳಬೇಕಾಗಿಲ್ಲ.
ಶ್ರೀ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಬ್ರಾಹ್ಮಣರು ಪಿತೃಗಳ ತೃಪ್ತಿ ಗಾಗಿ ಶ್ರಾದ್ಧ ತರ್ಪಣಾದಿ ಕರ್ಮಗಳನ್ನು ನೆರವೇರಿಸಿದರೆ ಅಂತಹವರ ಪಿತೃಗಳು ಸಂತುಷ್ಟರಾಗಿ ಶ್ರೀ ಹರಿಯ ವೈಕುಂಠ ಲೋಕದಲ್ಲಿ ನರ್ತಿಸುವರು..
ಒಂದು ವೇಳೆ ಅವರು ನೆರವೇರಿಸದಿದ್ದಲ್ಲಿ ಭಗವಂತನ ಅನುಗ್ರಹದಿಂದ ದೊರಕಿದ ಮಾನವ ಜನ್ಮದಿಂದ ಪ್ರಯೋಜನ ವೇನು??..
ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ??..
ಆ ಪವಿತ್ರ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಮಾನವರು ಭಾಗ್ಯ ಶಾಲಿಗಳಾಗುವರು.

ಹಿಂದೆ ಶಂಕನೆಂಬ ರಾಜನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿದ ಮಾತ್ರ ದಿಂದಲೇ ಸ್ವರ್ಗಲೋಕವನ್ನು ಪಡೆದನು..


ಪೂರ್ವ ದಲ್ಲಿ ನಾರಾಯಣ ನೆಂಬ ಹೆಸರಿನ ಅಂಗಿರಸರಿಗೆ ಪುತ್ರ ನಾದ ಭೂಸುರನು ಸ್ನಾನ ಮಾಡಿದರ ಫಲದಿಂದ ಭಗವಂತನ ದರುಶನ ವಾಗಿ ಮೋಕ್ಷ ವನ್ನು ಪಡೆದನು..


ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವನು ಸಹ ಇಲ್ಲಿ ಬಂದು ಸ್ನಾನ ಮಾಡಿದ ಫಲದಿಂದ ರಾವಣನ ಸಂಹಾರ ಮಾಡಿ ಸೀತಾದೇವಿ ಯನ್ನು ಪಡೆದನು.

ಇಂತು ಶುಭಕರವಾದ ಸ್ವಾಮಿ ಪುಷ್ಕರಣಿ  ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ವಾಗಿ ಕಂಗೊಳಿಸುತ್ತದೆ.
ಆ ಸ್ವಾಮಿ ಪುಷ್ಕರಣಿಯ ಪಶ್ಚಿಮ ದಿಕ್ಕಿನಲ್ಲಿ ತನ್ನ ಸತಿಯಾದ ಭೂದೇವಿಯನ್ನು ಆಲಂಗಿಸಿಕೊಂಡು ವರಾಹರೂಪಿಯಾದ ಶ್ರೀಹರಿ ಅಶ್ವತ್ಥ ವೃಕ್ಷ ದಿಂದ ಶೋಭಿಸುವ ಆ ಸ್ಥಳ ದಲ್ಲಿ ವಿರಾಜಿಸಿದ್ದಾನೆ..
ಮೂರು ಕೋಟಿ ಸಂಖ್ಯೆಯ ವಿವಿಧ ತೀರ್ಥ ಗಳಿಗೆ ಈ ವೆಂಕಟ ಗಿರಿಯು ಮಾತೃ ಸ್ಥಾನವಾಗಿದೆ..
ಇಂತಹ ಶ್ರೇಷ್ಠ ವಾದ ವೆಂಕಟಾಚಲಕ್ಕೆ ಬಂದು ಸ್ವಾಮಿಯು ಇದು  ವೈಕುಂಠಕ್ಕಿಂತ ಮಿಗಿಲೆಂದೂ ತೋರಿಸಲೋಸುಗ ಅಲ್ಲಿ ವಿಹಾರ ಮಾಡುತ್ತಾ ಇದ್ದನು. ಇಂತು ತಿರುಗಾಡುತ್ತಿರುವ ಶ್ರೀ ರಮಾ ಪತಿಯು ರಹಸ್ಯ ವಾಗಿ ವಾಸಿಸಲು ಸರಿಯಾದ ಜಾಗವು ದೊರಕಲಿಲ್ಲ ವಲ್ಲಾ ಎಂದು ಯೋಚಿಸುತ್ತಿರುವಾಗ ಸ್ವಾಮಿ ಪುಷ್ಕರಣಿಯ ದಕ್ಷಿಣ ಭಾಗದಲ್ಲಿ ನಿರ್ಮಲವು,ದೇವತಾ ಯೊಗ್ಯವು ಆದ ಹುಣಸೇಮರದ ಅಡಿಯಲ್ಲಿ ಇರುವ ಒಂದು ಹುತ್ತವನ್ನು ಕಂಡು ಜಗತ್ ಪ್ರಭು ವಾದ ಭಗವಂತನು ಇದೇ ತಾನು ಗುಪ್ತ ವಾಗಿರಲು ಯೋಗ್ಯವಾದ ಸ್ಥಳವೆಂದು ಆಲೋಚಿಸಿ ಆ ಹುತ್ತದಲ್ಲಿ ಮರೆಯಾದನು..
ಇಂತು ಭಗವಂತನು ೧೦,೦೦೦ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದ ನು.
🙏🙏🙇‍♂
 ಸ್ವಾಮಿ ಪುಷ್ಕರಣಿ ಯ ಹುಟ್ಟು.
ಹಿಂದೆ ಸರಸ್ವತಿ ದೇವಿಯು ತಾನು ಗಂಗಾದಿ ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ಳಾಗಬೇಕೆಂದು ಬ್ರಹ್ಮಾವರ್ತದಲ್ಲಿ ತಪಸ್ಸು ಆಚರಣೆ ಮಾಡುತ್ತಾ ಇದ್ದಳು.
ಆಗ ಪುಲಸ್ತ್ಯ ಅಲ್ಲಿ ಗೆ ಬಂದನು.ಪುಲಸ್ತ್ಯನು ತನ್ನ ಮಗನೆಂದು ಸರಸ್ವತಿ ದೇವಿಯು ಉದಾಸೀನ ಭಾವದಿಂದ ಇದ್ದುದ್ದನ್ನು ಕಂಡು ಪುಲಸ್ತ್ಯನು 
"ನೀನು ಯಾವ ಉದ್ದೇಶದಿಂದ ತಪಸ್ಸು ಮಾಡುತ್ತಾ ಇರುವೆ ಅದು ಸಫಲವಾಗದೇ ಹೋಗಲಿ" ಅಂತ ಶಾಪ ಕೊಟ್ಟನು.
ಅವಾಗ ಸರಸ್ವತಿ ದೇವಿಯು ಸಹ ನಿನ್ನ ವಂಶದಲ್ಲಿ ರಾಕ್ಷಸರೇ ಹುಟ್ಟಲಿ ಅಂತ ಶಾಪ ಕೊಟ್ಟಳು.
ಆ ನಂತರ  ಪುನಃ ಸರಸ್ವತಿ ದೇವಿಯು ತಪಸ್ಸು ಆಚರಿಸಿ ಭಗವಂತನ ಸಾಕ್ಷತ್ಕಾರ ಮಾಡಿಕೊಂಡು ಅವನಲ್ಲಿ ತನ್ನ ನಿರಂತರ ಸಾನಿಧ್ಯ ಬೇಡಿದಳು.
ಗಂಗಾ ನದಿಗಿಂತ ಶ್ರೇಷ್ಠ ವಾದ ಸ್ಥಾನ ವನ್ನು ಫಲಿಸದೇ ಹೋಗಲಿ ಅಂತ ಶಾಪ ಬಂದ ಬಗೆ ಹೇಳಿದಾಗ
ಅದಕ್ಕೆ ಭಗವಂತನು 
ನದಿಗಳಲ್ಲಿ ಶ್ರೇಷ್ಠ ತೆ ಬೇಡ ಅಂತ ಶಾಪ ಇದೆ ಹೊರತು ಪುಷ್ಕರಣಿ ಯಲ್ಲಿ ಅಲ್ಲ.ನೀನು ಶೇಷಗಿರಿ ಪರ್ವತಕ್ಕೆ ಹೋಗು.ಆ ಗಿರಿಯ ದಕ್ಷಿಣ ಭಾಗ ದಲ್ಲಿ ಸುಖವಾಗಿ ನೆಲೆಸು.
ನಾನು ಸಹ ನಿನ್ನ ಪಕ್ಕದಲ್ಲಿ ವಾಸ ಮಾಡುವೆ ಅಂತ ಹೇಳುವನು.
ಇದು ಸ್ವಾಮಿ ಪುಷ್ಕರಣಿ ತೀರ್ಥ ದ ಹಿನ್ನೆಲೆ.

🙏🙏🙇‍♂🙇‍♂


******



day7

ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||.
🙏
ಹಿಂದಿನ ಸಂಚಿಕೆಯಲ್ಲಿ ಭಗವಂತನು ಭೂಲೋಕಕ್ಕೆ ಬಂದು ವೆಂಕಟಗಿರಿಯಲ್ಲಿ ಇರುವ ಸ್ವಾಮಿ ಪುಷ್ಕರಣಿ ತಟದಲ್ಲಿ ಇರುವ ಹುತ್ತದಲ್ಲಿ ಗುಪ್ತ ವಾಗಿ ವಾಸ ಮಾಡುತ್ತಾನೆ.
ಹೀಗೆ ದ್ವಾಪರಯುಗ ಕಳೆದು ೨೮ನೆಯ ಕಲಿಯುಗದಲ್ಲಿ ಕೆಲ ಸಂವತ್ಸರಗಳು ಗತಿಸಿದ ನಂತರ ನಾಗಕನ್ನಿಕೆಯ ಉದರದಲ್ಲಿ ಚೋಳರಾಜನೆಂಬ ಒಬ್ಬ ರಾಜೋತ್ತಮನು ಜನಿಸಿದನು. ಅವನು ಪುಣ್ಯ ಪ್ರದವಾದ ಆ ಭೂಭಾಗ ದಲ್ಲಿ ಸಕ್ರಮವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು. ಅವನ ರಾಜ್ಯ ವು ಕಾಲಕಾಲಕ್ಕೆ ಮಳೆ ಬೆಳೆಗಳಿಂದ ಸಮೃದ್ಧವಾಗಿ ಇತ್ತು.
ಹೀಗಿರುವಾಗ ಲಕ್ಷ್ಮೀ ದೇವಿಯು ಲೋಕ ವಿಡಂಬನಾರ್ಥವಾಗಿ ತನ್ನ ಪತಿಯನ್ನು ಹುಡುಕುವ ಪ್ರಯುಕ್ತ ಮತ್ತು ಭಗವಂತನ ಸೇವೆಗಾಗಿ ಗೊಲ್ಲತಿಯ ವೇಷ ಧರಿಸಿ ಬ್ರಹ್ಮ ದೇವರನ್ನು, ಆಕಳನ್ನಾಗಿಯು ಮತ್ತು ರುದ್ರ ದೇವರನ್ನು ಕರುವನ್ನಾಗಿ ಮಾಡಿಕೊಂಡು ಚೋಳರಾಜನ ಅರಮನೆಗೆ ಬರುತ್ತಾಳೆ. 
ಬಂದಂತಹ ಗೊಲ್ಲತಿಯನ್ನು ನೋಡಿ ರಾಜನು 
"ಈ ಆಕಳು ಕರುವಿನ ಬೆಲೆ ಎಷ್ಟು" ಎಂದು ಕೇಳಿದಾಗ ಅದಕ್ಕೆ ರಮಾದೇವಿಯು
ಇದನ್ನು ನಿನಗೆ ಉಚಿತವಾದ ಮೌಲ್ಯಕ್ಕೆ  ಮಾರುತ್ತೇನೆ.ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗು ಸಂಪತ್ತಿನ ಒಡತಿಯಾದ ನನಗೆ ನಿನ್ನ ಧನವು ಬೇಡ.ಆದರೆ ಒಂದು ಶರತ್ತು.ಮಾಮೂಲಿ ಆಕಳಲ್ಲ,ಇದು
ಹತ್ತರಲ್ಲಿ ಹನ್ನೊಂದು ಅಂತ ಪಾಲನೆ ಮಾಡುವ ಹಾಗಿಲ್ಲ. ಚೆನ್ನಾಗಿ ಪಾಲಿಸಬೇಕು.
ಈ ಆಕಳು ಕೇಳಿದಷ್ಟು ಹಾಲನ್ನು ಕರೆಯುತ್ತದೆ.
ಇದರ ಹಾಲನ್ನು ಕುಡಿದವರಿಗೆ ರೋಗ ರುಜಿನಗಳ ಭಯವಿಲ್ಲ.
ಈ ಹಾಲನ್ನು ತನ್ನ ಸ್ವಂತಕ್ಕೆ ಬಳಸಬಾರದು.
ಹಾಗೇನಾದರು ಬಳಸುವೆ ಅಂದರೆ ಬೇರೆ ಕಡೆ ಮಾರಲು ಹೋಗುತ್ತೇನೆ.
ಈ ಗೋವಿನ ಹಾಲನ್ನು ಭಗವಂತನಿಗೆ ಗೊಸ್ಕರವೇ ಮೀಸಲಿಡಬೇಕು.ಇದೇ ಇದರ ಬೆಲೆ.ಅಂತ ಹೇಳಿದಾಗ, 
ಆ ಶರತ್ತಿಗೆ ರಾಜ ಒಪ್ಪಿ ಒಪ್ಪಂದಕ್ಕೆ ಬರುವನು.ನಂತರ ಅವನಿಗೆ ಕೊಟ್ಟು ರಮಾದೇವಿ ಕೊಲ್ಹಾಪುರ ಕ್ಕೆ ಹೊರಡುವಳು.
ಭಗವಂತನ ಅನುಗ್ರಹದಿಂದ ಬ್ರಹ್ಮದೇವನಿಗೆ ಬ್ರಹ್ಮ ಪದವಿ ಮತ್ತು ರುದ್ರಾದಿ ಗಳಿಗೆ ಮೋಕ್ಷ ವನ್ನು ಕೊಡುವವಳಿಗೆ ಅವರನ್ನು ಆಕಳು ಕರುವನ್ನು ಮಾಡುವದು ರಮಾದೇವಿ ಗೆ ಅಸಾಧ್ಯ ವಾದ ಕಾರ್ಯವಲ್ಲ.
ಮೇಲಾಗಿ ಬ್ರಹ್ಮ ದೇವರು ಜೇಷ್ಠ ರು ಹಾಗಾಗಿ ಅವರನ್ನು ಆಕಳ ರೂಪದಿಂದ ಮತ್ತು ರುದ್ರ ದೇವರಿಗೆ ಕರುವನ್ನು ಮಾಡಿದಳು.
ಹೀಗಿರುವಾಗ ಬ್ರಹ್ಮ ದೇವರು ಗೋ ರೂಪದಿಂದ ಅ ರಾಜನ ಎರಡುಸಾವಿರ ಗೋವುಗಳ ಹಿಂಡಿನಲ್ಲಿ ಸೇರಿಕೊಂಡು ಭಗವಂತನು ಇರುವ ಸ್ಥಳವನ್ನು ಹುಡುಕಿಕೊಂಡು ಹೊರಟರು.
      ತಾಯಿಯ ಆಜ್ಞೆಯಂತೆ ಆಕಳು-ಕರು ವೇಷ ಧಾರಿಗಳಾದ ಬ್ರಹ್ಮ-ರುದ್ರದೇವರು ಜಗತ್ಪತಿಯನ್ನು ಹುಡುಕುವ ಹಾಗೆ ನಟಿಸುತ್ತ, ಸ್ವಾಮಿಯು ಕುಳಿತಿರುವ ಹುತ್ತಿನಲ್ಲಿಗೆ ಬಂದು,ಆ ಹುತ್ತಿನಲ್ಲಿರುವ ತನ್ನ ಮತ್ತು ಜಗತ್ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡುತ್ತಾ,ರಾಜನ ಮನೆಯವರಿಗೆ ಹಾಲನ್ನು ಕೊಡದ ಹಾಗಾಯಿತು..

ಇಲ್ಲಿ "ಗೋ"ಎಂದರೆ ಸರ್ವ ವೇದ ಮಂತ್ರಗಳೆಂದರ್ಥ,
"ಕ್ಷೀರ"ಎಂದರೆ ಸರ್ವ ವೇದಗಳಿಂದ ಪ್ರತಿಪಾದ್ಯನಾದ ಎಲ್ಲರಿಂದಲೂ,ಎಲ್ಲಾ ಕಾಲಗಳಲ್ಲಿಯು ನವರಸ ಭರಿತವಾದ ನವವಿಧ ಭಕ್ತಿಯು, ಧ್ಯಾನಕ್ಕೆ ಮಾಧ್ಯಮವಾಗಿ ಬಿಂಬಾಪರೋಕ್ಷವನ್ನು ಉಣಿಸುವ  ಅಮೃತ ರಸವೆಂದರ್ಥ..
ಈ ರಸವನ್ನು ಜಗತ್ಸ್ವಾಮಿಗೆ ಒಂದು ಬಿಟ್ಟು ಬೇರೆಯವರು ಅನರ್ಹರು ಎಂಬ ಉದ್ದೇಶದಿಂದ ಆಕಳ ರೂಪದಿಂದಯಿರುವ ಬ್ರಹ್ಮದೇವರು ರಾಜನ ಮನೆಯಲ್ಲಿ ಒಂದು ದಿನವು ಹಾಲು ಕೊಡುವುದಿಲ್ಲ..
 ಆ ಹುತ್ತಕ್ಕೆ ಅದರಲ್ಲಿ ಅಡಗಿರುವ ಸ್ವಾಮಿಗೆ ತನ್ನ ಕೆಚ್ಚಲು ಹಾಲಿನಿಂದ ಧಾರಾಕಾರವಾಗಿ ಅಭಿಷೇಕ ವನ್ನು ಮಾಡಿ ಹೋಗುತ್ತಾ ಇದ್ದರು..
ಬ್ರಹ್ಮ ದೇವರು ಆಕಳ ರೂಪದಿಂದ ಬಂದು ಚೋಳರಾಜನ ಅರಮನೆಯಲ್ಲಿದ್ದುಕೊಂಡೆ ಅಲ್ಲಿರುವ ಬೇರೆ ಹಸುವಿನೊಂದಿಗೆ ಬೆರೆತು, ಪರಮಾತ್ಮನಿಗೆ ನಿತ್ಯದಲ್ಲಿಯೂ ಕ್ಷೀರಾಭಿಷೇಕವನ್ನು ಮಾಡತೊಡಗಿದರು.ಆದ ಕಾರಣ ಮನೆಯಲ್ಲಿ  ಚೋಳರಾಜನಿಗೆ ಒಂದು ದಿವಸವು ಕೂಡಾ ಹಾಲನ್ನು ಕೊಡದಂತಾಯಿತು.ಆಗ ಚೋಳರಾಜನ ಪತ್ನಿಯು ಗೋಪಾಲಕನನ್ನು ಕರೆದು "ಅದರ ಕ್ಷೀರವನ್ನು ನೀನೇ ಕುಡಿಯುತ್ತಿಯೋ?ಅಥವಾ ಬೇರೆ ಯಾರಿಗಾದರು ಕೊಡುತ್ತಿಯೋ?"ಎಂದು ಕೋಪಿಸಿಕೊಂಡು ಅವನಿಗೆ ದಂಡಿಸಿ ಬೆದರಿಸಿದಳು.ಅದಲ್ಲದೆ ಇದೆ ರೀತಿಯು ಮುಂದುವರಿಸಿದರೆ ನಿನ್ನನ್ನು ಉಗ್ರವಾಗಿ ದಂಡಿಸಬೇಕಾಗುವದೆಂದು ಗದರಿಸಿದಳು.
     ಆಗ ಮರುದಿನ ಗೋ- ಪಾಲಕನು ಆ ಹಸುವಿನ ಹಿಂದೆಯೆ ಹೋಗಿ,ಪ್ರತಿನಿತ್ಯ ಹಾಲು ಕರೆಯುವಂತೆ ಕರೆಯುವದನ್ನು ಕಂಡು,ಕುಪಿತನಾಗಿ ಹಸುವನ್ನು ತನ್ನಲ್ಲಿರುವ ಕೊಡಲಿಯಿಂದ ಹೊಡೆಯಲು ಹೋದಾಗ ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವು| ಇಂದಿರಾ ರಮಣಗರ್ಪಿಸಲು| 
ಎಂಬಂತೆ ಹಸುವಿನ ರೂಪದಿಂದಿರುವ ಬ್ರಹ್ಮದೇವರನ್ನು ರಕ್ಷಿಸಿ,ಆಕಳಿಗೆ ಬೀಳುವ ಕೊಡಲಿ ಪ್ರಹರವನ್ನು ತಾನೆ ಸ್ವತಃ ತೆಗೆದುಕೊಂಡನು..
ಆಗ ದೇವರ ತಲೆಯಿಂದ ಸಪ್ತ ತಾಳ ಪ್ರಮಾಣದಷ್ಟುರಕ್ತವು ಚಿಲುಮೆಯಾಗಿ ಹರಿಯ ತೊಡಗಿತು.ಇಲ್ಲಿ ತಾಳ ಎಂಬ ಅಳತೆಯು "ಒಂದು ಮೊಳ,ಪ್ರಾದೇಶ ಪ್ರಮಾಣ  ಮಾತ್ರವೆಂದು ತಿಳಿಯುವದು".
ಆ ರಕ್ತದ ಚಿಲುಮೆಯನ್ನು ಕಂಡ ಗೋಪಾಲಕನು ಮೂರ್ಛಿತನಾಗಿ ಬಿದ್ದು ಅಲ್ಲಿಯೆ ಅಸು ನೀಗಿದನು..
ಇದನ್ನು ಕಂಡ ಹಸುವು ಅರಮನೆಗೆ ಬಂದು ಚೋಳರಾಜನನ್ನು ಆ ಬೆಟ್ಟಕ್ಕೆ ಕರೆದೊಯ್ದು ,ನಡೆದ ವೃತ್ತಾಂತವನ್ನು ವೆಂಕಟೇಶನಿಂದಲೇ ತಿಳಿಸಿತು.
ಆಗ ಪ್ರಭುವಾದ ಸ್ವಾಮಿಯು ತನ್ನ ಭಕ್ತರಿಗಾದ ಅವಮಾನವನ್ನು ಸಹಿಸಲಾರದೆ ಚೋಳರಾಜನಿಗೆ 
"ನೀನು ಮಾಡಿದ ಅಪರಾಧಕ್ಕೆ ಪಿಶಾಚಿ ಜನ್ಮವನ್ನು ತಾಳು"ಎಂದು ಶಾಪವನ್ನಿತ್ತನು.ಆಗ ರಾಜನು ಈ ಶಾಪದಿಂದ ನಮಗೆ ಹೇಗೆ ಮುಕ್ತಿಯೆಂದು ಕೇಳಿದಾಗ ಒಂದು ವರವನ್ನು ಕೊಟ್ಟನು.ಅದೆನೆಂದರೆ 
ಮುಂದೆ ಇಲ್ಲಿ ಆಕಾಶರಾಜನು ಬಂದಾಗ, ಪದ್ಮಾವತಿಯೆಂಬ ಲಕ್ಷ್ಮೀ ಸ್ವರೂಪಳಾದ ಕನ್ಯೆಯನ್ನು ನನಗೆ ಪಾಣಿಗ್ರಹಣ ಮಾಡುವನು. ಆಗ ರಾಜನು ನನಗೆ ಒಂದು ಶತಭಾರದ ಕಿರಿಟವನ್ನು ದಾನ ಮಾಡುವ.ಅದನ್ನು ಪ್ರತಿ ಶುಕ್ರವಾರದಂದು ಧರಿಸಿದಾಗ ನನ್ನ ಕಣ್ಣಲ್ಲಿ ನೀರು ಬರುವವು.ಆಗ ನಿನಗೆ ನನ್ನಿಂದ ಸಂತೋಷ ಉಂಟಾಗುತ್ತದೆಂದು ಹೇಳಿ"ವರವನ್ನು ಕೊಟ್ಟು ಉದ್ಧರಿಸಿದನು.

🙏ಶ್ರೀ ಕೃಷ್ಣಾರ್ಪಣ ಮಸ್ತು🙏

******


day 8

ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಗೋ ರೂಪದಲ್ಲಿ ಇದ್ದ ಬ್ರಹ್ಮ ದೇವರು ಭಗವಂತನಿಗೆ ಹಾಲನ್ನು ಕರೆಯುವುದು ಕಂಡು ಗೋಪಾಲಕನು ಹುತ್ತ ದಲ್ಲಿ ಯಾವುದೋ ಪಿಶಾಚಿ ಇರಬೇಕು. ಅದು ಗೋವನ್ನು ವಶಪಡಿಸಿಕೊಂಡು ಅದರಿಂದ ಹಾಲನ್ನು ಈ ರೀತಿಯಲ್ಲಿ ತೆಗೆದುಕೊಳ್ಳುತ್ತದೆ.
ಗೋವಿನ ಅಪರಾಧ ಏನು ಇಲ್ಲ ಅಂತ ತಿಳಿದುಕೊಂಡು 
ಎಲೈ ಪಿಶಾಚಿ ಯೇ !!ಹೊರಗೆ ಬಾ..ನೀನು ಬರದಿದ್ದರೆ ನಿತ್ಯ ನಿನಗೆ ಹಾಲನ್ನು ಕೊಡುವ ಆಕಳನ್ನು ಸಂಹಾರ ಮಾಡುವೆ ಅಂತ ಕೋಪದಿಂದ ಕೊಡಲಿಯನ್ನು ಎತ್ತಿ ಸಂಹರಿಸಲು ಹೋದಾಗ *ಅವಾಗ್ಗೆ ಭಗವಂತನು ತನ್ನ ಭಕ್ತರಲ್ಲಿ ಇರುವ ವಾತ್ಸಲ್ಯ ವನ್ನು ತೋರಿಸುತ್ತಾ, 
ತನ್ನ ಸ್ವಾರ್ಥ ದಿಂದ ಯಾವ ಮನುಷ್ಯ ನು ನನ್ನ ಭಕ್ತನನ್ನು ಕಣ್ಣಿನ ಎದುರಿಗೆ ಕೊಲ್ಲಲು ಪಡುತ್ತಾಇರುವದನ್ನು ಕಂಡು ನೋಡಿ ಸುಮ್ಮನೆ ಇರುವನೊ ಅಂಥವನು ಸೂರ್ಯ ಚಂದ್ರ ಇರುವವರೆಗು ನರಕವನ್ನು ಅನುಭವಿಸುವನು..
ನೀಚನಾದ ಈ ದನಗಾಹಿಯು ನನಗೆ ಹಾಲು ಕೊಡುವ ಕಾರಣದಿಂದಾಗಿ ಈ ಗೋವನ್ನು  ಅನ್ಯಾಯವಾಗಿ ಕೊಲ್ಲಲು ಸಿದ್ದನಾಗಿದ್ದಾನೆ.
ಒಂದೇ ಒಂದು ತುಳಸಿದಳ ದಿಂದ ನನ್ನನ್ನು ಭಕ್ತಿಯಿಂದ ಪೂಜಿಸಿದರು ಸಾಕು ಅಂತಹ ಭಕ್ತರನ್ನು ಕಾಪಾಡುವೆಎಂದು ನನ್ನ ಪ್ರತಿಜ್ಞೆ ಇದೆ.
ಹೀಗಿರುವಾಗ ನನ್ನ ಮಗನಾದ ಬ್ರಹ್ಮದೇವನು ನನ್ನ ಅಚ್ಛಿನ್ನ ಭಕ್ತನಾಗಿರುವನು.ಮತ್ತು ಗೋವಿನ ರೂಪ ಧರಿಸಿ ನನ್ನ ಸೇವೆ ಮಾಡಲು ಬಂದಿರುವನು.ಮೇಲಾಗಿ ನನ್ನ ಪುತ್ರ ನು.ಹಾಗಾಗಿ ಅವನ ರಕ್ಷಣೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ ಭಗವಂತನು ಆ ಕೊಡಲಿಯ ಪೆಟ್ಟಿಗೆ ತನ್ನ ಶಿರವನ್ನು ಒಡ್ಡಿ ಆ ಪೆಟ್ಟು ಸ್ವೀಕಾರ ಮಾಡಿದನು.
ಕಠಿಣವಾದ ಕುಠಾರದಿಂದ ಹೊಡೆಯಿಸಿಕೊಂಡ ಶ್ರೀನಿವಾಸನ ತಲೆಯು ತೀಕ್ಷ್ಣ ವಾದ ಆ ಕೊಡಲಿಯ ಹೊಡೆತದಿಂದ ಭಿನ್ನ ವಾಯಿತು.
ಶ್ರೀನಿವಾಸನ ತಲೆಯೊಡೆದು ಏಳು ತಾಳೆಯ ಮರದಷ್ಟು ಎತ್ತರಕ್ಕೆ ರಕ್ತ ವು ಚಿಮ್ಮಿತು.
ಭಗವಂತನ ಶರೀರ ಅಚ್ಛೇದ್ಯ ಹಾಗು ಅಭೇದ್ಯವಾಗಿದ್ದು ಯಾರು ಸೀಳಲು ಸಾಧ್ಯವಿಲ್ಲ.. 
ಇವನ ಎಡಗಾಲಿನ ಅಂಗುಷ್ಟದ ಉಗುರು ನೂರು ಕೋಟಿ ಯೋಜನ ದಪ್ಪ ಇರುವ ಬ್ರಹ್ಮಾಂಡದ ಕಠಾಹವನ್ನು ಸೀಳಿದ್ದರು ಅದು ಬಗ್ಗಿಹೋದ ಬಗ್ಗೆ ದಾಖಲೆ ಇಲ್ಲ.ಹೀಗಿರುವಾಗ ತಲೆಯನ್ನು ಸೀಳುವದು ಹೇಗೆ??
ನೇರವಾಗಿ ವೈಕುಂಠ ದಿಂದ ಬಂದ ಅಪ್ರಾಕೃತನಿಗೆ ಪ್ರಾಕೃತ ಶರೀರ ದಂತೆ ರಕ್ತ ಬರುವದು ಹೇಗೆ??
ಇದೆಲ್ಲಾ ಅವನ ನಟನೆ.ಅವನು ಅಪ್ರಾಕೃತನಾದರು ಪ್ರಾಕೃತ ರಕ್ತ ವನ್ನು ಆ ಕಾಲದಲ್ಲಿಸೃಷ್ಟಿಸಿ  ತನ್ನ ಸ್ವರೂಪದ  ಬಗ್ಗೆ ಅಯೋಗ್ಯ ವ್ಯಕ್ತಿ ಗಳಿಗೆ ತಪ್ಪು ಕಲ್ಪನೆ ಉಂಟಾಗಿಸುವದು ಮತ್ತು ಯೋಗ್ಯ ವ್ಯಕ್ತಿಗಳು ತನ್ನ ಈ ವಿಡಂಬನೆಯ ಲೀಲಾ ವೈಭವವನ್ನು ಅನುಭವಿಸುವಂತೆ ಮಾಡುವದು ಇದರ ಉದ್ದೇಶ.
ಈ ಹಿನ್ನೆಲೆ ಯಲ್ಲಿ ವೆಂಕಟೇಶ ನು ಗೋಪಾಲನ ಕೊಡಲಿನ ಏಟಿಗೆ ತನ್ನ ತಲೆಗೆ ಗಾಯವಾದಂತೆ ನಟಿಸಿದನು.
ಭಗವಂತನ ತಲೆಯಿಂದ ಬಂದ ರಕ್ತ ವನ್ನು ನೋಡಿ ಗೋಪಾಲಕನು ಮರಣ ಹೊಂದಿದನು.
ಗೋಪಾಲಕನು ಮೃತಿಹೊಂದಿದ್ದನ್ನು ಕಂಡು ಆ ಗೋವು ಬೆಟ್ಟ ದಿಂದ ಇಳಿದು ಚೋಳರಾಜನ ಬಳಿಗೆ ಬಂದು ಅತಿ ದುಃಖದಿಂದ ಹೊರಳಾಡಹತ್ತಿತು.ಅವಾಗ್ಗೆ ರಾಜನು ದೂತನನ್ನು ಆಕಳ ಹಿಂದೆ ಕಳುಹಿಸಿ ಏನಾಗಿದೆಎಂದು ನೋಡಿ ಬರಲು ಕಳುಹಿಸಿದನು.ಆ ದೂತನು ಪರ್ವತಕ್ಕೆ ಹೋಗಿ,ಅಲ್ಲಿ ಹುತ್ತದಿಂದ  ರಕ್ತ ಹರಿಯುತ್ತಾ ಇರುವುದನ್ನು ಕಂಡು ಬಂದು ರಾಜನಿಗೆ ಹೇಳುತ್ತಾನೆ.
ತಕ್ಷಣ ಚೋಳರಾಜನು ಮೇನೆಯಲ್ಲಿ ಕುಳಿತು ಆ ಪರ್ವತಕ್ಕೆ ಆಗಮಿಸಿದ. ನೋಡಿ ಆಶ್ಚರ್ಯಕರವಾಗಿ ಯಾರು ಇದನ್ನು ಮಾಡಿರಬಹುದು ಅಂತ  ತನ್ನಲ್ಲಿ ಮಾತನಾಡುತ್ತಾ ಇರುವಾಗ 
ಹುತ್ತದಿಂದ ಹಾವು ಹೇಗೆ ಹೊರ ಬರುವದು ಅದೇ ರೀತಿ ಯಲ್ಲಿ ಸರಸರಸನೇ ಶ್ರೀನಿವಾಸ ಬಂದನು.
ತನ್ನ ಶಿರಸ್ಸಿನ ಮೇಲೆ ಅಂಗೈಯನ್ನು ಇಟ್ಟು ಕೊಂಡು ಗಾಯವನ್ನು ಒತ್ತುತ್ತಾ ಕಣ್ಣೀರು ಸುರಿಸುತ್ತಾ ನುಡಿದ.
ಎಲವೋ ಪಾಪಿ !!ಚೋಳರಾಜನೆ ಕೇಳು.
ಮಂದಮತಿಯೇ, ಮಧಾಂದನಾಗಿರುವೆಯಲ್ಲ.
ತಂದೆ ತಾಯಿಗಳಿಲ್ಲ ,ಬಂಧು ಬಳಗವಿಲ್ಲ ,ನನಗೆ....
ಸದಾ ಎಡತೊಡೆಯ ಮೇಲೆ ಒಪ್ಪುವ ಎನ್ನ ಮಡದಿಯು ಎನ್ನನ್ನು ಬಿಟ್ಟು ಸಿಟ್ಟು ಮಾಡಿಕೊಂಡು ದೂರ ನಡೆದಳು..
ಪತ್ನಿ ಪುತ್ರ ರಿಂದ ಬಿಡಲ್ಪಟ್ಟಿರುವ ನನಗೆ ನಿನ್ನ ಗೋಪಾಲಕನು ನನ್ನ ತಲೆಯನ್ನು ಕೊಡಲಿಯಿಂದ ಒಡೆದನು.ಈ ಅಘಾತದಿಂದ ನನಗೆ ದುಃಖ ವಾಗುವಂತೆ ಮಾಡಿದ ನೀನು ಪಿಶಾಚಿ ಯಾಗು ಅಂತ ಶಾಪವನ್ನು ಕೊಡುತ್ತಾನೆ
ಶ್ರೀ ಹರಿಯ ಶಾಪವನ್ನು ಪಡೆದ ಚೋಳರಾಜನು ಮೂರ್ಚಿತನಾಗಿ ಧರಾಶಾಯಿಯಾಗಿ ಬಿದ್ದನು.ಕೆಲ ಸಮಯದ ನಂತರ ಪರಮಾತ್ಮನ ಬಳಿ ಪ್ರಾರ್ಥನೆ ಮಾಡಿದನು.
ನಾ ಮಾಡಿದ ತಪ್ಪು ಆದರು ಏನು??
ಯಾಕೆ ಶಾಪವನ್ನು ಕೊಟ್ಟಿದ್ದು??ಇದರಿಂದ ವಿಮುಕ್ತಿ ಹೇಗೆ??ಅಂತ ಕೇಳಿದಾಗ ಅದಕ್ಕೆ ಭಗವಂತನು ಹೇಳುತ್ತಾನೆ.
ಎಲೈ !!ರಾಜನೇ ಕೇಳು!! ನನ್ನ ಶಾಪವು ಎಂದಿಗು ಹುಸಿಯಾಗದು..
ಯಾವ ಯಜಮಾನನು  ತನ್ನಹೆಂಡತಿ ಮಕ್ಕಳು  ಕಾರ್ಯವನ್ನು ಮಾಡುವಾಗ ಧರ್ಮ, ಅಧರ್ಮಗಳನ್ನು ವಿಚಾರ ಮಾಡುವದಿಲ್ಲವೋ  ಅವನು ಅವನ ಹೆಂಡತಿ ಮಕ್ಕಳು ಮಾಡಿದ ಪಾಪಕ್ಕೆ ಗುರಿಯಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಸೇವಕನು ಮಾಡಿದ ತಪ್ಪಿಗೆ ಯಜಮಾನ ಹೊಣೆಯಾಗುವನು..
ಇದರ ಅಭಿಪ್ರಾಯ ಇಷ್ಟೇ.
ನೀನು ನನ್ನ ಭಕ್ತನೆಂದು ತಿಳಿದು ಲಕ್ಷ್ಮೀ ದೇವಿಯು  ಗೋ ರೂಪದಲ್ಲಿದ್ದ ಬ್ರಹ್ಮ ರುದ್ರಾದಿಗಳನ್ನ  ನೀಡಿದರೆ  ಅದನ್ನು ನಿನ್ನ ಹೆಂಡತಿಯು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು, ಬಲವಂತವಾಗಿ ಆ ಆಕಳ ಹಾಲನ್ನು ಕರೆದುಕೊಂಡು ತನ್ನ ಮಗನಿಗೆ ಬಳಸಿದಳು.
ಈ ಮೂಲಕ ರಮಾದೇವಿ ಹೇಳಿದ  ಮಾತು
ಭಗವಂತನಿಗೆ ಗೊಸ್ಕರವೇ ಇದರ ಹಾಲನ್ನು ಬಳಸಬೇಕೆಂದು ಹೇಳಿದ ಮಾತನ್ನು ಉಲ್ಲಂಘನೆ ಮಾಡಿದಳು.
ನಂತರ ಹಾಲು ಕೊಡದೆ ಇದ್ದುದ್ದನ್ನು ನೋಡಿ ಗೋಪಾಲಕನಿಗೆ ತಾಡನೆ ಮಾಡಿದಾಗ,ಅವನು ಗೋವನ್ನು ಕೊಲ್ಲುವ ದುರ್ಭುದ್ದಿ ಬರುತ್ತದೆ..
ನೀನಾದರು ಸಹ ಗೋವು ಹಾಲನ್ನು ಏಕೆ ಕೊಡಲಿಲ್ಲ!! ಅಂತ ವಿಚಾರಣೆ ಮಾಡಲಿಲ್ಲ. ಹೀಗಾಗಿ ನೀನು ಪರೋಕ್ಷವಾಗಿ ಕಾರಣವಾಗಿರುವೆ. 
ಆದ್ದರಿಂದ ರುದ್ರ ದೇವರ ಪರಿವಾರದಲ್ಲಿ ಒಬ್ಬನಾಗು ಅಂದರೆ ಪಿಶಾಚಿ ಯಾಗು ಅಂತ ಶಾಪ ಕೊಟ್ಟಿದ್ದು.
ಆದರು ನೀನು ಮಾಮೂಲಿನ ಪಿಶಾಚಿ ಯಂತೆ ರಕ್ತ ಮಾಂಸ ತಿನ್ನುವ ಬೇರೆ ಪಿಶಾಚಿ ಗಳ ಹಾಗೆ ನಿನಲ್ಲ.ಇದು ನಾನು ಮಾಡುವ ಅನುಗ್ರಹ.
ಈ ಪಿಶಾಚಿ ರೂಪವು ಕಲಿಯುಗ ಪೂರ್ತಿ ಇರುತ್ತದೆ. 
ಮುಂದೆ ಆಕಾಶರಾಜ ನು ಎಂಬ ರಾಜನು ಜನಿಸಿ ಅವನ ಮಗಳನ್ನು ನನಗೆ ಕೊಟ್ಟು ಕನ್ಯಾದಾನ ಮಾಡುವನು.ಆ ಸಮಯದಲ್ಲಿ ವರದಕ್ಷಿಣೆ ರೂಪವಾಗಿ ಎರಡು ಸಾವಿರ ತೊಲೆಗಳಷ್ಟು ತೂಕವಿರುವ ನವರತ್ನ ಖಚಿತವಾದ ಕಿರೀಟ ವನ್ನು ಕೊಡುವನು.
ನಾನದನ್ನು ಶುಕ್ರವಾರ ಧರಿಸುವೆನು. ಆ ಸಮಯದಲ್ಲಿ ನನ್ನ ಕಣ್ಣಿಂದ ಆನಂದಾಶ್ರು ಬರುವದು.ಅದನ್ನು ನೋಡಿದ ನಿನಗೆ ಸುಖವುಂಟಾಗುವದು.
ಆ ಸಂಧರ್ಭದಲ್ಲಿ ಆರು ಘಳಿಗೆ ನಿನಗೆ ಸುಖ ವುಂಟಾಗುವದು ಅಂತ ಹೇಳಿ ಚೋಳರಾಜನಿಗೆ ಸಮಾಧಾನ ಮಾಡುವನು.
ಆರು ಘಳಿಗೆ ಅಂದರೆ ದೇವ ಮಾನದ ಆರು ಘಳಿಗೆ.
ಶನಿವಾರದಿಂದ ಹಿಡಿದು ಗುರುವಾರದವರೆಗು ಆರು ದಿನ ಪರ್ಯಂತ ಸುಖವು ವ್ಯಾಪಿಸಿರುತ್ತದೆ..
ಶುಕ್ರವಾರ ಪುನಃ ಕಿರೀಟವನ್ನು ಧರಿಸುವನು. ಅಂತು ಜೀವನ ಪೂರ್ತಿಯಾಗಿ ಚೋಳರಾಜನಿಗೆ ಸುಖವನ್ನು ಅನುಭವಿಸುವಂತೆ ಮಾಡಿದ್ದಾನೆ.
 ಚೋಳರಾಜನಿಗೆ ಶಾಪವನ್ನು ಕೊಟ್ಟು ಭಗವಂತನು ಅದರ ಪರಿಹಾರವನ್ನು ಹೇಳುತ್ತಾನೆ.
ಅದೇ ಸಮಯದಲ್ಲಿಯೇ *ಶ್ರೀನಿವಾಸ ನಿಗೆ ವರಾಹರೂಪಿ ಪರಮಾತ್ಮನ ಭೇಟಿಯಾಯಿತು...
ನಡೆದ ವೃತ್ತಾಂತವನ್ನು ವರಾಹ ದೇವರಿಗೆ ತಿಳಿಸಿದನು ಅವರಿಬ್ಬರ ಪರಸ್ಪರ ಸಂಭಾಷಣೆ ನಡೆಯಿತು.ಲೋಕ ಶಿಕ್ಷಣಾರ್ಥವಾಗಿ ಶ್ರೀನಿವಾಸ ನು ವರಾಹರೂಪಿ ಪರಮಾತ್ಮನಿಂದ ತಾನು ನೆಲೆಸುವ ಸ್ಥಳವನ್ನು ಸ್ವೀಕರಿಸಿದ ಪ್ರಯುಕ್ತ
"ನನಗಿಂತ ಮೊದಲು ಪೂಜೆ-ನೈವೇದ್ಯಾದಿ ಸರ್ವ ಪೂಜಾದಿ ಗೌರವಾದಿಗಳು ನಿನಗೆ ಆಗಲೆಂದು ವಚನವಿತ್ತು ಅಲ್ಲಿಯೆ ನೆಲಿಸಿದನು.

day 9

ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಹಿಂದಿನ ಸಂಚಿಕೆಯಲ್ಲಿ ಚೋಳರಾಜನಿಗೆ ಶಾಪವನ್ನು ಕೊಟ್ಟು ಭಗವಂತನು ಅದರ ಪರಿಹಾರವನ್ನು ಹೇಳುತ್ತಾನೆ.
ಅದೇ ಸಮಯದಲ್ಲಿಯೇ ಶ್ರೀನಿವಾಸ ನಿಗೆ ವರಾಹರೂಪಿ ಪರಮಾತ್ಮನ ಭೇಟಿಯಾಯಿತು,ನಡೆದ ವೃತ್ತಾಂತವನ್ನು ವರಹಾ ದೇವರಿಗೆ ತಿಳಿಸಿದನು. ಅವರಿಬ್ಬರ ಪರಸ್ಪರ ಸಂಭಾಷಣೆ ನಡೆಯಿತು.ಲೋಕ ಶಿಕ್ಷಣಾರ್ಥವಾಗಿ ಶ್ರೀನಿವಾಸ ನು ವರಾಹರೂಪಿ ಪರಮಾತ್ಮನಿಂದ ತಾನು ನೆಲೆಸುವ ಸ್ಥಳವನ್ನು ಸ್ವೀಕರಿಸಿದ ಪ್ರಯುಕ್ತ
"ನನಗಿಂತ ಮೊದಲು ಪೂಜೆ-ನೈವೇದ್ಯಾದಿ ಸರ್ವ ಪೂಜಾದಿ ಗೌರವಾದಿಗಳು ನಿನಗೆ ಆಗಲೆಂದು ವಚನವಿತ್ತು ಅಲ್ಲಿಯೆ ನೆಲಸಿದನು.ಆಗ ವರಾಹದೇವನು ಶ್ರೀನಿವಾಸನ ಶುಶ್ರೂಶೆ ಪ್ರಯುಕ್ತ ತನ್ನಲ್ಲಿರುವ ಬಕುಲಮಾಲಿಕ ಎಂಬ ತಾಯಿಯ ಸ್ವರೂಪದಂತಿರುವ ಹೆಣ್ಣು ಮಗಳನ್ನು ಶ್ರೀನಿವಾಸ ನೊಂದಿಗೆ ಕಳುಹಿಸಿಕೊಟ್ಟನು.
ನಂತರ ಗೋಪಾಲಕನಿಂದಾದ ತಲೆಯ ಪೆಟ್ಟನ್ನು ಅತ್ತಿ-ಎಕ್ಕೆ ಮುಂತಾದ ವನಸ್ಪತಿಗಳ ಮುಖಾಂತರ ಗುಣವಾದಂತೆ ನಟಿಸಿ,ತನ್ನ ತಾಯಿಯ ಸ್ಥಾನದಲ್ಲಿರುವ ಬಕುಲಮಾಲಿಕೆಗೆ ತನ್ನ. ಪರಿಚಯವನ್ನು ಹೇಳಿ,ಅವಳ ವೃತ್ತಾಂತವನ್ನು ಲೋಕ ವಿಡಂಬನಾರ್ಥವಾಗಿ ತಿಳಿದುಕೊಂಡನು.
 ಒಮ್ಮೆ ಆಕಾಶ ರಾಜನು ಸಂತಾನ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಟಿ ಯಾಗವನ್ನು ಮಾಡಲು ಯಾಗ ಸ್ಥಳ ಶುದ್ಧ ಮಾಡಲೋಸುಗ ಸುವರ್ಣ ನಿರ್ಮಿತ ನೇಗಿಲಿನಿಂದ ಭೂಮಿಯನ್ನು ಉಳುತ್ತಿರುವಾಗ ಆ ಸ್ಥಳದಲ್ಲಿ ತಾವರೆಯಲ್ಲಿ ಮಲಗಿದ್ದ ಕೂಸು ಸಿಗುತ್ತದೆ. . ಮಕ್ಕಳಿಲ್ಲದೇ ಅಸಂತುಷ್ಟನಾದ  ರಾಜನು ಮಗುವನ್ನು ತನ್ನ ಪಟ್ಟದರಸಿಗೆ ತಂದೊಪ್ಪಿಸಿ ಮಗುವು ಕಮಲದಲ್ಲಿ ದೊರಕಿರುವುದರಿಂದ "ಪದ್ಮಾವತಿ"ಯೆಂದು ನಾಮಕರಣ ಮಾಡಿದರು..
 ಪದ್ಮಾವತಿಯು ಪ್ರಾಪ್ತವಯಸ್ಕಳಾದಾಗ ಒಮ್ಮೆ ಗೆಳತಿಯರೊಡನೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಅಲ್ಲಿಗೆ ಬಂದ ನಾರದಮಹರ್ಷಿಗಳು ಅವಳ ಹಸ್ತ ಸಾಮುದ್ರಿಕಾ ಮುಖೇನ "
ಶ್ರೀಮನ್ನಾರಾಯಣನೆ  ನಿನ್ನ ಪತಿಯಾಗುವನೆಂದು ಭವಿಷ್ಯವನ್ನು ನುಡಿಯುವರು..
    ಇದಾದ ನಂತರ ಪದ್ಮಾವತಿಯು ಮತ್ತೊಮ್ಮೆ ತನ್ನ ಸಖಿಯರೊಂದಿಗೆ ಉದ್ಯಾನವನದಲ್ಲಿ ವಿಹರಿಸಲು ಹೋದಾಗ,ಇತ್ತಕಡೆ ಶ್ರೀನಿವಾಸನು ಬೇಟೆಗೆ ಕಾಡಿಗೆ ಬಂದಾಗ ಒಂದು ಆನೆಯನ್ನು ಬೆನ್ನಟ್ಟಿಕೊಂಡು ಹೋದನು.ಆಗ ಆನೆಯು ಸಖಿಯರಿದ್ದ ಉದ್ಯಾನವನದಲ್ಲಿ ಪ್ರವೇಶಿಸಿ ಪದ್ಮಾವತಿಯೆಂಬ ಕನ್ಯೆಗೆ ವಂದಿಸಿ ಮುಂದೆ ಹೋಯಿತು.ಆಗ ಅಲ್ಲಿ ಪರಸ್ಪರ ಪದ್ಮಾವತಿಯ ವೆಂಕಟೇಶನ ಭೇಟಿಯಾಯಿತು.
      ಆನೆಯನ್ನು ಕಂಡು ಹೆದರಿದ ಪದ್ಮಾವತಿ ಮತ್ತು ಅವರ ಸಖಿಯರ ಗುಂಪಿನ ಬಳಿಗೆ ವೆಂಕಟೇಶನು ಕುದುರೆ ಏರಿ ಅವರ ಬಳಿಗೆ ಬಂದನು.ಆಗ ವೆಂಕಟೇಶನು ಹಾಗು ಪದ್ಮಾವತಿಯು ಪರಸ್ಪರ ಅವರವರ ಕುಲಗೋತ್ರಗಳನ್ನು ತಿಳಿಸಿದರು.ತನ್ನ ಮೇಲೆ ಪ್ರೇಮವನ್ನು ತೋರಿಸಿದ ವೆಂಕಟೇಶ್ವರನ ಮೇಲೆ ಪದ್ಮಾವತಿಗೆ ಕೋಪ ಬಂದಂತೆ ನಟಿಸಿದಳು. ಇದರ ಅಂತರಂಗ ಮರ್ಮವನ್ನರಿಯದ ಸಖೀಯರು ಕೋಪಿಸಿಕೊಂಡು ಕುದುರೆಗೆ ಕಲ್ಲನ್ನು ಎಸೆದರು.ಆಗ ಪದ್ಮಾವತಿ ಯು ತಾನೇ ಸ್ವತಃ ವೆಂಕಟೇಶ್ವರನಿಗೆ ಕಲ್ಲನ್ನು ಎಸೆದಳು. ಆಗ ಕುದುರೆಯು ಅಲ್ಲಿಯೇ ಮರಣ ಹೊಂದಿತು.ಶ್ರೀನಿವಾಸನಿಗೆ ತಲೆಯು ಒಡೆಯಿತು.
ಇದರ ಗುಹ್ಯಾರ್ಥವೆನೆಂದರೆ
"ವರದೋ ವಾಯು ವಾಹನ" ಎಂಬಂತೆ ವಾಯುದೇವರು ಜಗದೊಡೆಯನಾದ ನಾರಾಯಣನು ಪತ್ನಿಯ ಸಂಗಡವಿರುವಾಗ ನನ್ನ ಕೆಲಸ ಏನು ಇಲ್ಲವೆಂದು,ವಾಹನರಾಗಿ ಬಂದಿದ್ದ ವಾಯುದೇವರು ಸಖಿಯರ ಕೋಪವನ್ನು ನಿಮಿತ್ತ ಮಾಡಿಕೊಂಡು ಅಲ್ಲಿಂದ ಅದೃಶ್ಯ ರಾದರು..
      ಪದ್ಮಾವತಿ ವರ್ತನೆಯಿಂದ ಶ್ರೀನಿವಾಸನು ವ್ಯಥೆಗೊಂಡಂತೆ ನಟನೆ ಮಾಡುವ.,
ಮನೆಗೆಬಂದು ಮುಸುಗು ಹೊದ್ದು ಮಲಗಿದ್ದ ಮಗನನ್ನು ಕಂಡು ತಾಯಿ ಆತಂಕದಿಂದ ವಿಚಾರಿಸಲು, ಬಕುಲಾದೇವಿಯೊಡನೆ ಅಲ್ಲಿ ನಡೆದ,ವೃತ್ತಾಂತವನ್ನು ತಿಳಿಸಿ ಪದ್ಮಾವತಿಯ ಪೂರ್ವ ಚರಿತ್ರೆಯನ್ನು ತಿಳಿಸಿದನು.
ರಾವಣನು ಹಿಂದೆ ವೇದವತಿಯ ರೂಪದಲ್ಲಿದ್ದ ಲಕ್ಷ್ಮೀಯನ್ನು ಮೋಹಿಸಲು ಹೋಗಿ,ತನ್ನ ವಂಶ ಸ್ತ್ರೀ-ಅಪಹರಣದಿಂದಲೇ ನಾಶವಾಗುವಂತೆ ಶಾಪವನ್ನು ಪಡೆದಿದ್ದನು.ಆ ವೇದವತಿಯು ತನ್ನ ರಕ್ಷಣೆಗೋಸ್ಕರ ಅಗ್ನಿಯಲ್ಲಿ ಪ್ರವೇಶ ಮಾಡಿದಳು.ರಾವಣನು ಸೀತಾಪಹರಣ ಕಾಲದಲ್ಲಿ ಅಗ್ನಿ ದೇವನು ವೇದವತಿಯೇ ಸೀತೆಯಾಗಿರುವಳೆಂದು ಬೋಧಿಸಿ ವೇದವತಿಯನ್ನೆ ರಾವಣನಿಗೆ ಅರ್ಪಿಸಿ ನಿಜವಾದ ಸೀತೆಯನ್ನು ತನ್ನಲ್ಲಿಯೇ ಉಳಿಸಿಕೊಂಡು ಕೆಲಕಾಲ ಜಗನ್ಮಾತೆಗೆ ಸೇವೆಮಾಡಿದನು..ರಾವಣನ ಸಂಹಾರವಾದ ಬಳಿಕ ನಿಜವಾದ ಸೀತೆಯನ್ನು ರಾಮನಿಗೆ ಒಪ್ಪಿಸಲು ಬಂದಾಗ,ಸೀತೆಯು ತನ್ನ ಪತಿಯಾದ ರಾಮದೇವರಿಗೆ ನಿಜವಾದ ಐತಿಹ್ಯವನ್ನು ತಿಳಿಸಿ,ವೇದವತಿಯನ್ನು ವಿವಾಹವಾಗಲು ಕೇಳಿಕೊಂಡಳು.
ಆಗ ಏಕಪತ್ನಿ ವೃತಸ್ಥನಾದ ನಾನು ನಿನ್ನ ಇಚ್ಛೆಯನ್ನು ಮುಂದೆ ಇಪ್ಪತ್ತೆಂಟನೆ ಕಲಿಯುಗದಲ್ಲಿ ಪೂರ್ತಿಗೊಳಿಸುವೆನೆಂದು ಹೇಳಿದ ವಚನವನ್ನು ಸ್ಮರಣೆಗೆ ತಂದುಕೊಂಡ. ಪದ್ಮಾವತಿಯು ಶ್ರೀನಿವಾಸನ ಸ್ಮರಣೆಯಲ್ಲಿ ನಿರತಳಾಗಿ,ತನ್ನ ತಂದೆ-ತಾಯಿಗೆ, ಬಂಧು-ಬಾಂಧವರಿಗೆ ಹಾಗೂ ಸಖಿಯರಿಗೆ ಮನೋರೋಗ ಬಾಧೆಗೆ ಪೀಡಿತಳಾದಂತೆ ವರ್ತಿಸಿದಳು.
 ಆಕಾಶರಾಜ ಮಾತ್ತು ಧರಣಿದೇವಿಯು ಮಗಳ ವೇದನೆಯನ್ನು ನೋಡಲಾಗದೆ ದೇವಗುರುಗಳಾದ ಬೃಹಸ್ಪತ್ತ್ಯಾಚಾರ್ಯರೊಂದಿಗೆ ತಮ್ಮ ಸಂಕಟ ಹೇಳಿಕೊಂಡಾಗ,ಅದನ್ನರಿತ ಅವರು ಮನೋನಿಯಾಮಕರಾದ ಪರಮ ವೈಷ್ಣವರಾದ ರುದ್ರದೇವರಾರಾಧನೆ ಮಾಡಲು ಹೇಳಿದರು..ಗುರುಗಳ ಸಲಹೆಯಂತೆ ರಾಜನು ಅಲ್ಲಿರುವ ಅಗಸ್ತೇಶ್ವರನ ದೇವಾಲಯಕ್ಕೆ ತಮ್ಮ ಪರಿಚಾರಕಿಯರ ಮೂಲಕ ಪೂಜೆಗೆಂದು ಕಳುಹಿಸಿದನು.ಇತ್ತಕಡೆ ಶ್ರೀನಿವಾಸನು ಬಕುಲಮಾಲಿಕೆಯನ್ನು ಆಕಾಶರಾಜನ ಪಟ್ಟಣಕ್ಕೆ ಕಳುಹಿಸಿ ಕೊಟ್ಟಿದ್ದನು.ಆಗ ರಾಜನ ಸೇವಕಿಯರ ಗುಂಪಿನ ಭೇಟಿಯು ಬಕುಲಮಾಲಿಕೆಗೆ ಆಗಿ,ಇದ್ದ ವೃತ್ತಾಂತ ತಿಳಿಸಿದಳು.
ಅಷ್ಟರ ಮಧ್ಯ ವೇಳೆಯಲ್ಲಿ ಶ್ರೀನಿವಾಸನು ಕೊರವಂಜಿಯ ವೇಷವನ್ನು ಧರಿಸಿ ಬ್ರಹ್ಮದೇವರನ್ನು ಕೂಸು ಮಾಡಿಕೊಂಡು, ರುದ್ರದೇವರನ್ನು ಊರುಗೋಲಾಗಿ ಮಾಡಿಕೊಂಡು,ಬ್ರಹ್ಮಾಂಡವನ್ನೇ ಬುಟ್ಟಿಯನ್ನಾಗಿ ಮಾಡಿಕೊಂಡು ಆಕಾಶರಾಜನ ಅರಮನೆಗೆ ಬಂದು ಪದ್ಮಾವತಿಯ ಭವಿಷ್ಯವನ್ನು ಹೇಳುವುದರೊಂದಿಗೆ ಬಕುಲಮಾಲಿಕೆಯ ಕಾರ್ಯವು ಬೇಗನೆ ಸಿದ್ಧಿಸುವಂತೆ  ಅವರ ಮನದಲ್ಲಿ ಮೂಡಿಸಿ ಆಕೆಯು ತಂದ ವರನಿಗೆ ಕನ್ಯಾದಾನ ಮಾಡಲು ಭಾಷೆ ತೆಗೆದುಕೊಂಡು ತನ್ನ ಸ್ವ-ಸ್ಥಾನಕ್ಕೆ ಬಂದನು.ರಾಜನಾಜ್ಞೆಯಂತೆ ಅಗಸ್ತೇಶ್ವರ ದೇವಾಲಯಕ್ಕೆ ಹೋದ ಸೇವಕಿಯರ ಸಂಗಡ ಬಂದ ಬಕುಲಮಾಲಿಕೆಯನ್ನು ಕಂಡು ಕೊರವಂಜಿಯ ಮಾತು  ನಿಜವಾಯಿತೆಂದು ಸಂತೋಷಪಟ್ಟರು.

🙏ಶ್ರೀ ಕೃಷ್ಣಾ ರ್ಪಣ ಮಸ್ತು🙏


day 10

ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಆಕಾಶರಾಜನು ಬಕುಲದೇವಿಯು ಬಂದುದನ್ನು ಕಂಡು ಗುರುಗಳಾದ ಬೃಹಸ್ಪತ್ತ್ಯಾಚಾರ್ಯರನ್ನು,
ಶುಕಾಚಾರ್ಯರನ್ನು ಬರಮಾಡಿಕೊಂಡು ವಿವಾಹ ಸಂಸ್ಕಾರಕ್ಕೆ ಅವಶ್ಯವಾಗಿ ಬೇಕಾಗುವ ಘಟಿತಾರ್ಥ ನಿರ್ಣಯಗಳನ್ನು ತಮ್ಮ ಕುಲಗೋತ್ರಾ-ಬಕುಲಮಾಲಿಕೆಯ ಕುಲ-ಗೋತ್ರಾದಿಗಳನ್ನು ಕೂಡಿಸಿ ನೋಡುವುದರ ಮೂಲಕ ನಿಶ್ಚಯ ಪತ್ರವನ್ನು ಬರೆಯಲು ನಿರ್ಧರಿಸಿ,ಆ ಪತ್ರನ್ನು ಶ್ರೀನಿವಾಸನಿಗೆ ತಲುಪಿಸಲು ಶುಕಾಚಾರ್ಯರಿಗೆ ವಿಜ್ಞಾಪಿಸಿದನು.ಅದರಂತೆ ರಾಜನು ತಮ್ಮಬಂಧು-ಬಾಂಧವರನ್ನು ಕೂಡಿಕೊಂಡು,ತಮ್ಮ ಕುಲ ಗುರುಗಳ ಸಮ್ಮುಖದಲ್ಲಿ ವಿವಾಹ ನಿಶ್ಚಯ ಪತ್ರ ಬರೆದು ಶುಕಾಚಾರ್ಯರೊಂದಿಗೆ ಶ್ರೀನಿವಾಸದೇವರಿಗೆ ಕಳುಹಿಸಿಕೊಟ್ಟನು.
ಅದನ್ನು ಶುಕಾಚಾರ್ಯರು ತಮ್ಮ ಶಿರಸ್ಸಿನಲ್ಲಿಟ್ಟಕೊಂಡು ಸ್ವಾಮಿಗೆ ತಲುಪಿಸಿ,ಇಲ್ಲಿಯ ಒಪ್ಪಿಗೆಯನ್ನು ರಾಜನಿಗೆ ಹೇಳಿ,ಮುಂದಿನ ವಿವಾಹ ಕಾರ್ಯಾರಂಭಗಳನ್ನು ಮಾಡಲು ಅನುಮತಿ ಕೊಟ್ಟರು.
ಆ ನಂತರ ಶ್ರೀನಿವಾಸನು ತನ್ನ ತಾಯಿಯಾದ ಬಕುಳೆಗೆ 
ನನಗೀ ವಿವಾಹವು ಬೇಡವೆನಿಸಿದೆ.ನನಗೆ ಯಾರು ಬಂಧು, ಬಳಗ ಇಲ್ಲ.ಏಕಾಂಗಿ ನಾನು. ಮದುವೆ ನಿಬ್ಬಣಕ್ಕೆ ನಾವಿಬ್ಬರೇ ಹೋಗುವದು ಸರಿಯೇ!!.ಆಕಾಶರಾಜ ಮಹಾರಾಜ. ಅವನಿಗೆ ಬಂಧು ಬಳಗ ಎಲ್ಲಾ ಇದೆ.ಬಂಧು ಬಳಗ ಇಲ್ಲದ ನಾನು ಹೇಗೆ ಸಂಬಂಧ ಬೆಳೆಸಲಿ??ಅದಕ್ಕೆ ಚಿಂತೆ ಆಗಿದೆ ಎಂದು ಸಾಮಾನ್ಯ ಮಾನವನಂತೆ ನಟಿಸುತ್ತಾ ಹೇಳಿದ.
ಅದಕ್ಕೆ ಬಕುಳೆಯು 
ಇದೆಂತಹ ಮಾತು!!ನಿನ್ನಂತಹ ಪುರುಷರು ಸುಳ್ಳು ಹೇಳಬಾರದು..
ನೀನು ಹೇಳುವದೆಲ್ಲ ಸುಳ್ಳು. 
ನೀನು ಜಗತ್ಕುಟುಂಬಿ. ರಮಾ,ಬ್ರಹ್ಮ ರುದ್ರಾದಿ ದೇವತೆಗಳೇ ನಿನಗೆ ಪರಿವಾರ.ಜಗತ್ತಿನ ಸುಜೀವರೆಲ್ಲರೂ ನಿನ್ನ ಬಂಧುಗಳು.ಇಂತಹ ನೀನು ನಾನು ಒಬ್ಬೊಂಟಿಗ.ನನಗಾರು ಇಲ್ಲ ಅಂತ ಏಕೆ ನಟಿಸುವಿ??..
ನಿನ್ನ ಕಪಟನಾಟಕವನ್ನು ಸಾಕುಮಾಡು.ಬ್ರಹ್ಮ,ವಾಯು,ರುದ್ರಾದಿ ದೇವತೆಗಳನ್ನು, ಮತ್ತು ನಿನ್ನ ಸೊಸೆಯರು,ಮೊಮ್ಮಕ್ಕಳು, ಮರಿ ಮಕ್ಕಳು ಇವರೆನೆಲ್ಲ ಸ್ಮರಿಸು ಅಂತ ಪ್ರಾರ್ಥನೆ ಮಾಡಿದಾಗ ತಕ್ಷಣ ಗರುಡ,ಶೇಷರನ್ನು ಸ್ಮರಿಸಿದನು.
ಅವರಿಬ್ಬರೂ ಬಂದ ಕೂಡಲೆ ಗರುಡನಿಗೆ ಬ್ರಹ್ಮ ದೇವರನ್ನು,ಶೇಷನಿಗೆ ರುದ್ರ ದೇವರನ್ನು ನನ್ನ ವಿವಾಹ ಕಾರ್ಯಕ್ರಮಕ್ಕೆ ಬರಲು ಅವರ ಮುಖಾಂತರ ಪತ್ರ ಮುಖೇನ ಆಹ್ವಾನವನ್ನು ನೀಡಿದನು.
ಬ್ರಹ್ಮ ದೇವರು ತನ್ನ ತಂದೆಯು ಬರೆದ ಪತ್ರ ವನ್ನು ಓದಿ ಕೇಳಿ ತನ್ನ ಸತಿಯರಾದ ಸರಸ್ವತಿ, ಗಾಯತ್ರಿ, ಸಾವಿತ್ರಿ ದೇವಿಯರೊಡನೆ ,ತನ್ನ ಮಕ್ಕಳು ಮೊಮ್ಮಕ್ಕಳು ಅವರ ಪರಿವಾರದೊಡನೆ ಶೇಷಗಿರಿ ಕಡೆ ಪಯಣ ಬೆಳೆಸಿದನು.
ಅದೇ ಕಾಲಕ್ಕೆ ವಾಯುದೇವರು ಭಾರತಿದೇವಿಯರ ಸಹಿತವಾಗಿ,ರುದ್ರದೇವರು ಪಾರ್ವತಿ ಸಹಿತವಾಗಿ ಇಂದ್ರಾದಿ ದೇವತೆಗಳು ತಮ್ಮ ಪತ್ನಿಯರು ಸಮೇತವಾಗಿ, ಸಕಲ ಋಷಿಗಳು ಅವರ ಪರಿವಾರ ಸಮೇತರಾಗಿ ವೆಂಕಟಾದ್ರಿ ಗೆ ಬಂದರು.
ಭಗವಂತನನ್ನು ಕಂಡು ಬ್ರಹ್ಮ ದೇವನು ಪಾದಕ್ಕೆ ಎರಗಿದಾಗ ಪ್ರೀತಿಯಿಂದ ಆಲಂಗಿಸಿ 
ಕುಮಾರ!! ನಿನಗೆ ಮಂಗಳವಾಗಲಿ.ಬಹುಕಾಲವಾದ ಮೇಲೆ ನನ್ನ ನೋಡಲು ಬಂದಿರುವೆಯಲ್ಲ.ಒಮ್ಮೆ ಯಾದರು ನನ್ನನ್ನು ನೋಡಬೇಕು ಎಂಬ ಕೂತುಹಲ ನಿನಗೆ ಬರಲಿಲ್ಲ ವಲ್ಲ!ಇವಾಗ ಬಂದೆಯಲ್ಲ! ಅದೇ ದೊಡ್ಡದು. ನಿನ್ನನ್ನು ಬಿಟ್ಟು ನನಗೆ ಜಗತ್ತಿನಲ್ಲಿ ಯಾವುದು ಇಲ್ಲ ಅಂತ ಕಣ್ಣೀರು ಹಾಕುತ್ತಾ ಆಲಂಗಿಸಿಕೊಂಡನು..
ಸಕಲ ದೇವತೆಗಳು ಈ ಲೀಲೆಯನ್ನು ನೋಡಿ ಆನಂದ ಭರಿತರಾದರು.
ಆನಂತರ ಮಗನನ್ನು ಕೂಡಿಸಿಕೊಂಡು ಹಿಂದೆ ನಡೆದ ವಿಷಯವನ್ನು ಹೇಳಿ ನನ್ನ ಸಲುಹಿದ ಈ ತಾಯಿ ಯಾದ ಬಕುಳೆಗೆ ನಮಸ್ಕಾರ ಮಾಡು ಎಂದು ಹೇಳುತ್ತಾನೆ.

ಆ ಸಮಯದಲ್ಲಿ ಸಕಲ ವಾಧ್ಯಗಳ ಧ್ವನಿ ಕೇಳಲು ಬಂದವರು ಯಾರು?? ಎಂದು ಕೇಳಲು
ಜಿಂಕೆಯನ್ನು ಏರಿಕೊಂಡು ಸುವಾಸನೆಯನ್ನು ಬೀರುತ್ತಾ ಭಾರತಿಪತಿಯಾದ ಮುಖ್ಯ ಪ್ರಾಣದೇವರು ತಮ್ಮ ಸತಿಯಾದ ಭಾರತಿದೇವಿಯರೊಡನೆ ಅಲ್ಲಿಗೆ ಬರುತ್ತಾರೆ..
ತನ್ನ ಮಗನಾದ ವಾಯುದೇವರ ಆಗಮನದಿಂದ ಸಂತಸ ಗೊಂಡಂತೆ ನಟಿಸಿದ.ನಂತರ ಕೆಲ ಕ್ಷಣದಲ್ಲಿ ರುದ್ರ ದೇವರು ಸಹ ಅಲ್ಲಿ ಗೆ ಬರುತ್ತಾರೆ.ಹೀಗೆ ಸಕಲ ದೇವತಾ ಪರಿವಾರದವರು ಬಂದಾಗ ಸಂತೋಷ ದಿಂದ ಎಲ್ಲರನ್ನೂ ಆದರಿಸಿ ಭಗವಂತನು ಸತ್ಕಾರ ಮಾಡುತ್ತಾನೆ.
ನಂತರ ದೇವಶಿಲ್ಪಿಯಾದ ವಿಶ್ವ ಕರ್ಮನ ಮೇಲೆ ಸಿಟ್ಟು ಬಂದಂತೆ ನಟಿಸಿ ಆನಂತರ ಅನುಗ್ರಹಿಸಿ ಇಂದ್ರದೇವರ ಮುಖಾಂತರ ನಾರಾಯಣ ಪುರದಲ್ಲಿ ಉಳಿದುಕೊಳ್ಳಲು ದೊಡ್ಡ ಸೌಧವನ್ನು ನಿರ್ಮಿಸಿದನು.ಸಕಲ ದೇವತೆಗಳಿಗೆ ಅವರವರ ಯೋಗ್ಯತೆ ಅನುಗುಣವಾಗಿ ಕಾರ್ಯವನ್ನು ಒಪ್ಪಿಸಿದನು.
ವಿವಾಹಾಂಗವಾಗಿ ಪುಣ್ಯಾಹ,ನಾಂದೀ ಮುಂತಾದ ಶುಭಕಾರ್ಯಗಳನ್ನು ಮಾಡುವ ಸಮಯದಲ್ಲಿ ತನ್ನ ಪತ್ನಿ ಯಾದ ಲಕ್ಷ್ಮೀ ದೇವಿಯನ್ನು ನೆನೆಸಿ ಕೊಂಡು  ಸಾಮಾನ್ಯ ಮಾನವನಂತೆ ಶೋಕಿಸತೊಡಗಿದ..
ನಂತರ ಬ್ರಹ್ಮ ದೇವನ ಕುರಿತು
ಸಿರಿ ಇಲ್ಲದ ಸಭೆಯು ಸರಿಬಾರದಯ್ಯ.ಗಗನದಲ್ಲಿ ನಕ್ಷತ್ರಗಳು ,ಚಂದ್ರ ಇಲ್ಲದೇ ಹೇಗೆ ಶೋಭಿಸದೋ,ಮರಗಳು ಇಲ್ಲದ ಅರಣ್ಯ,ರೆಕ್ಕೆ ಇಲ್ಲದ ಪಕ್ಷಿಗಳು, ಅದೇ ರೀತಿ ಲಕ್ಷ್ಮೀ ದೇವಿ ಇಲ್ಲದ ಈ ಸಭೆ ಶೋಭಿಸದು ಅಂತ ಹೇಳಿದನು.
ಅದಕ್ಕೆ ರುದ್ರ ದೇವನು ಭಗವಂತನಿಗೆ ಹೇಳುವರು. ನೀನು ಸ್ವರಮಣನು,ಸಂಗ ರಹಿತನು.ಕ್ಲೇಶವೆಂಬುವದೇ ನಿನ್ನ ಬಳಿ ಇಲ್ಲ.ಯಾಕೆ ಈ ರೀತಿಯಲ್ಲಿ ಕಣ್ಣೀರು ಹಾಕುವದು?? ಅಂತ ಕೇಳಿದಾಗ
ನೀನಿನ್ನು ಬಾಲಕ!!.ನಿನಗೇನು ತಿಳಿಯದು.ಪ್ರಳಯ ಕಾಲದಲ್ಲಿ ನನ್ನ ಜೊತೆಯಲ್ಲಿ ನನಗೆ ಹಾಸಿಗೆಯಾಗಿ,ಆಭರಣವಾಗಿ ಗೆಳತಿಯಾಗಿ ನನ್ನೊಡನೆ ಸದಾ ಇರುವಂತಹ ಲಕ್ಷ್ಮೀ ಯನ್ನು ಬಿಟ್ಟು ನನಗೆ ಇರಲು ಆಗುವುದಿಲ್ಲ ಅಂತ ಹೇಳಿ
ಸೂರ್ಯದೇವನನ್ನು ಕರೆದು ಕೊಲ್ಹಾಪುರಕ್ಕೆ ಲಕ್ಷ್ಮೀ ಯನ್ನು ಕರೆತರಲು ಹೇಳುತ್ತಾನೆ.
ಅದಕ್ಕೆ ಸೂರ್ಯನು 
ನಾನು ಕರೆದರೆ ಹೇಗೆ ಜಗನ್ಮಾತೆ ಬರುವಳು ಪ್ರಭು!!?? ಎನ್ನುವನು.ಅದಕ್ಕೆ ಭಗವಂತನು ಯುಕ್ತಿಯನ್ನು ಹೇಳುವ..
ನೀನು ಕಣ್ಣೀರು ಸುರಿಸುತ್ತಾ,ಒರೆಸಿಕೊಳ್ಳುತ್ತಾ ರಮಾದೇವಿಯ ಮನೆ ಬಾಗಿಲಲ್ಲಿ ನಿಂತು ಕರೆದಾಗ ಬಂದು ಸಮಾಧಾನ ಮಾಡುವಳು..
ಅವಾಗ ನೀನು
 ತಾಯಿ! ನಿನ್ನ ಪತಿಯಾದ ನಾರಾಯಣ ನು ಹಾಸಿಗೆ ಹಿಡಿದು ಮಲಗಿದ್ದಾನೆ.ಬದುಕುವನೋ ಅಥವಾ ಇಲ್ಲವೊ ತಿಳಿಯದು ಬಹಳ ಅಶಕ್ತನಾಗಿದ್ದಾನೆ ಬೇಗ ಹೊರಡು ಅಂತ ಅವಸರಿಸು.. ಎಂದು ಹೇಳುವನು.
ಅದಕ್ಕೆ ಸೂರ್ಯನು 
ಸ್ವಾಮಿ!! ಸಕಲಲೋಕಗಳಲ್ಲಿಯು ಸರ್ವಜ್ಞೆಯಾದ ಸಕಲವನ್ನು ತಿಳಿದ ಆ ತಾಯಿ ನನ್ನ ಮಾತನ್ನು ಹೇಗೆ ನಂಬುವಳು??
ಯಾವಾತನ ನಾಮ ಸ್ಮರಣೆ ಇಂದ ಸಕಲ ರೋಗ ನಿವಾರಣೆ ಆಗುವದೋ ಅವನು ರೋಗಗ್ರಸ್ಥ ಅಂತ ಹೇಳಿದರೆ ತಾಯಿ ನಂಬುವಳೇ?? ಎಂದಾಗ ವತ್ಸ!!ಸೂರ್ಯನೇ ಚಿಂತಿಸಬೇಡ.ನನ್ನ ಮಾಯೆಇಂದ ಲಕ್ಷ್ಮೀ ದೇವಿಯು ಮೋಹಿತಳಾಗಿ ನಿನ್ನ ಜೊತೆ ಬರುವಳು ಎಂದು ಹೇಳಿ ರಥವನ್ನು ಕೊಟ್ಟು ಕಳುಹಿಸುವನು.
ಅದರಂತೆ ಲಕ್ಷ್ಮೀ ದೇವಿಯು
ಶ್ರೀಹರಿಯ ಆದೇಶದಂತೆ ದೇಶ ಕಾಲಗಳಿಗೆ ತಕ್ಕಂತೆ ಶ್ರೀ ಹರಿಯ ಆಚರಣೆಗೆ ತಕ್ಕಂತೆ ತಾನು ಸಹ ಅವನ ಮಾತನ್ನು ನಂಬಿದವಳಂತೆ ನಟಿಸುತ್ತಾ ಶೀಘ್ರವಾಗಿ ರಥದಲ್ಲಿ ಕುಳಿತು ಬರುವಳು.
ರಮಾದೇವಿ ಬಂದ ವಿಚಾರವನ್ನು ತಿಳಿದು ಭಗವಂತನು ಅಶಕ್ತನು, ರೋಗಗ್ರಸ್ತ ನು ಆದವನಂತೆ ಆಕಾರಧರಿಸಿ ತನ್ನ ಬಲತೋಳನ್ನು ಬ್ರಹ್ಮ ದೇವನಮೇಲೆ,ಎಡತೋಳನ್ನು ರುದ್ರ ದೇವನ ಮೇಲೆ ಇಟ್ಟು ಕೊಂಡು ಮೆಲ್ಲಗೆ ಹೆಜ್ಜೆಗಳನ್ನು ಇಡುತ್ತಾ ಬಂದನು..
ತನಗೆ ಬೇಕಾದ ಹಾಗೆ ರೂಪಧಾರಣೆ ಮಾಡುವ ಭಗವಂತನ ಈ ನಾಟಕವು ಸಕಲ ದೇವತೆಗಳಿಗು ಋಷಿಗಳಿಗು ಆಶ್ಚರ್ಯಕರವಾಗಿ ತೋರಿತು.
ಬಂದ ರಮಾದೇವಿ ಈ ರೂಪ ವನ್ನು ಕಂಡು ಭಗವಂತನಿಗೆ ನಮಸ್ಕರಿಸಿ ಅವನನ್ನು ಆಲಂಗಿಸಿಕೊಂಡಳು.ಕೆಲ ಕ್ಷಣದಲ್ಲಿ ಭಗವಂತನುಅತೀ ಪುಷ್ಟಿ ಉಳ್ಳವನಾಗಿ ಸುಂದರವಾಗಿ ಪತ್ನಿ ಸಮೇತ ಸಿಂಹಾಸನದ ಮೇಲೆ ಕುಳಿತನು. ವಿವಾಹಕ್ಕೆ ಅತಿ ಮುಖ್ಯವಾಗಿ ಬೇಕಾಗುವ ದ್ರವ್ಯರಾಶಿ ನಾಲ್ಕು ಲಕ್ಷ ಸುವರ್ಣವನ್ನು ಕುಬೇರನಿಂದ ಸಾಲವಾಗಿತೆಗೆದುಕೊಂಡನು.ನಂತರ ವಿವಾಹ ಸಂಸ್ಕಾರಕ್ಕೆ ಪೂರಕವಾದ ಸುರಗಿಯ, ಮಂಗಳಸ್ನಾನ,ಅಲಂಕಾರ ಮಾಡಿಕೊಂಡು ,ಮಂಟಪ-ಕುಲದೇವತಾ ಸ್ಥಾಪನೆಯನ್ನು ಶ್ರೀವರಾಹಸ್ವಾಮಿಯ ಗುಡಿಯಲ್ಲಿ ಪ್ರತಿಷ್ಠಾಪಿಸಿ,ತಾನೇ ತನ್ನ ಕುಲದೈವವೆಂದು ಹೇಳಿಕೊಂಡ ಅಹೋಬಲ ಶ್ರೀಲಕ್ಷ್ಮೀ ನರಸಿಂಹದೇವರಿಗೆ  ಭೂರಿಭೋಜನದ ಅಡುಗೆಯನ್ನು ಸಮರ್ಪಣೆ ಮಾಡಿ,ದೇವತೆಗಳಿಗೆ ಭೂರಿ  ಭೋಜನಾದಿಗಳನ್ನು ಮಾಡಿಸಿ,ದೇವತೆಗಳ ಸಂಗಡ ಆಕಾಶರಾಜನ ಪಟ್ಟಣಕ್ಕೆ ತನ್ನ ಬಂಧು-ಬಾಂಧವರ ಜೊತೆಗೂಡಿ ಬಂದು ನವಮಿ ದಿನ ಅಂದರೆ ವಿವಾಹಕ್ಕೆ ಹಿಂದಿನ ದಿನದಲ್ಲಿ ಆತಿಥ್ಯ ಸ್ವೀಕಾರ ಮಾಡುವನು. .
ಶ್ರೀನಿವಾಸದೇವರು ಆಕಾಶರಾಜನಿಂದ ದಿಬ್ಬಣ ಪೂಜೆಯನ್ನು ಮುಗಿಸಿಕೊಂಡು,ರಾಜಗೃಹಕ್ಕೆ ಬಂದು, ಆ ರಾತ್ರಿಯ ಆದರ-ಆತಿಥ್ಯಗಳನ್ನು ಸ್ವಿಕರಿಸಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಂಡು 
ಮರುದಿನ ವೈಶಾಖ ಶುದ್ಧ ದಶಮಿಯಂದು ಬ್ರಹ್ಮಾದಿ ಸರ್ವ ದೇವತೆಗಳ ಅಧಿಷ್ಠಾನದಲ್ಲಿ ಬೃಹಸ್ಪತ್ತ್ಯಾಚಾರ್ಯಾದಿ ಅನೇಕ ಋಷಿಮುನಿಗಳ ಅಧ್ವರ್ಯದಲ್ಲಿ "ದೇವಾಗ್ನಿ ದ್ವಿಜ ಸನ್ನಿಧೌ"ಎಂದು ಮುಂದಿನ ಜನಾಂಗದ ಅನುಕರಣೆಗೊಸ್ಕರ ನಮಗೆ ವಿವಾಹದ ಕ್ರಮ ತಿಳಿಸಲೋಸುಗ ಶ್ರೀಪದ್ಮಾವತಿಯನ್ನು ಶ್ತೀಶ್ರೀನಿವಾಸದೇವರು ಪಾಣಿಗ್ರಹಣವನ್ನು ಮಾಡಿಕೊಂಡು,ಮಾವನೊಂದಿಗೆ ಎಲ್ಲಾ ಗೌರವಾದಿಗಳನ್ನು ಸ್ವಿಕರಿಸಿ ಅಗಸ್ತ್ಯಾಶ್ರಮಕ್ಕೆ ಬಂದು ಆರು ತಿಂಗಳುಗಳ ಕಾಲ ಅಲ್ಲಿಯೇ ಇದ್ದು ನಂತರ ಬೆಟ್ಟವನ್ನೇರಿ ತನ್ನ ಸ್ವಸ್ಥಾನವನ್ನು ಅಲಂಕರಿಸಿ ಅಂದಿನಿಂದ ಇಂದಿಗೂ ಭಕ್ತರನ್ನು ಉದ್ದರಿಸುತ್ತ ವೆಂಕಟಾದ್ರಿಯಲ್ಲಿ ನೆಲಸಿರುವನು..
ಶತಾನಂದರು ಜನಕರಾಜನಿಗೆ  ಈ ಶ್ರೀನಿವಾಸ ಕಲ್ಯಾಣವನ್ನು ಶ್ರವಣ ಮಾಡಿದರ ಫಲವನ್ನು ಹೇಳುತ್ತಾರೆ.
ಕೋಟಿ ಕನ್ಯಾದಾನ ಮಾಡಿದ ಫಲ,ಭೂದಾನ ಮಾಡಿದ ಫಲ, ಈ ಕಥೆಯನ್ನು ಕೇಳುವದರಿಂದ ಬರುವದು..
ಇದನ್ನು ಶ್ರವಣ ಮಾಡಿಸಿದವರಿಗು,ಕಥೆಯನ್ನು ಹೇಳಿದವರಿಗು,ಕೇಳಿದವರಿಗು ಸಹ ಸಮಸ್ತ ಅಭೀಷ್ಟಗಳು ನೆರವೇರುತ್ತದೆ..
ಸರ್ವರಿಗು ಇದರಿಂದ ಮಂಗಳುಂಟಾಗುವದು.ಅಂತ ಹೇಳಿ ಮಂಗಳವನ್ನು ಆಚರಿಸಿದರು..
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ  ಸಂಪೂರ್ಣ ವಾದುದು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
  ಶ್ರೀ ಹರಿ ವಾಯು ಗುರುಗಳ ಮತ್ತು ಶ್ರೀ ಅಪ್ಪಾವರ ಅನುಗ್ರಹ ಬಲದಿಂದ  ಈ ಹತ್ತು ದಿನ ಶ್ರೀನಿವಾಸ ಕಲ್ಯಾಣ ಕತೆಯು ನಿರ್ವಿಘ್ನವಾಗಿ, ನನ್ನಿಂದ ಬರೆಸಲ್ಪಟ್ಟಿತು..
🙏ಶ್ರೀಕೃಷ್ಣಾರ್ಪಣ ಮಸ್ತು🙏
ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ|
ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟ||

🙏ಅ.ವಿಜಯವಿಠ್ಠಲ🙏

*****
ಶ್ರೀನಿವಾಸ ಕಲ್ಯಾಣ ವಿಸ್ತಾರವಾದ ವಿವರಣೆ|

ಆಕಾಶರಾಜನು ಸಮಸ್ತ ಚತುರಂಗ ಬಲವನ್ನು ಮುಂದಿಟ್ಟುಕೊಂಡು ಮಗನಾದ ವಸುಧಾನನನ್ನು ಮುಂದೆ ಮಾಡಿಕೊಂಡು ತನ್ನ ಸಹೋದರ ತೋಂಡಮಾನ ಮಿತ್ರರು ಬಂಧು ಗಳ ಪರಿವಾರ ದೊಂದಿಗೆ ಪುರೋಹಿತ ಸಹಿತವಾಗಿ ಅಲಂಕೃತವಾದ ಐರಾವತವನ್ನು ಮುಂದೆ ಇಟ್ಟುಕೊಂಡು ಹೊರಟನು.
ಇಂದ್ರನ ಐರಾವತವು ರತ್ನ ಕಂಬಳಿ ಇಂದ ಅಲಂಕೃತ ವಾಗಿ,ಘಂಟೆಗಳ ಮಾಲೆಯಿಂದ ಸಿಂಗರಿಸಿದ,ಮೇಘದಂತೆ ಗಂಭೀರ ಘರ್ಜನೆ ಮಾಡುವ,ಕಿವಿಗೆ ಚಾಮರವನ್ನು ಕಟ್ಟಿದ ನಾಲ್ಕು ದಂತಗಳಿರುವ ಐರಾವತ ವನ್ನು ಮುಂದೆ ಮಾಡಿಕೊಂಡು ವಿಶ್ವಕರ್ಮನಿಂದ ನಿರ್ಮಿತವಾದ ಶ್ರೀನಿವಾಸ ನ ಬಿಡಾರಕ್ಕೆ ಬಂದನು.
ಹತ್ತು ಸಾವಿರ ಕಂಬಗಳಿಂದ ದೇದಿಪ್ಯಮಾನವಾಗಿ ಅವನ ಬಿಡಾರ ಕಂಗೊಳಿಸುತ್ತಾ ಇತ್ತು.
ಆ ಮಹಾಸಭೆಯಲ್ಲಿ ಬ್ರಹ್ಮಾದಿ ಸಕಲ ದೇವತೆಗಳು, 
ವಿಶ್ವಾಮಿತ್ರ, ಭಾರದ್ವಾಜ, ವಸಿಷ್ಠ, ಗೌತಮ,ಭೃಗು ಅತ್ರಿ,ಪುಲಸ್ಯ,ವಾಲ್ಮೀಕಿ ಮುಂತಾದ ಮಹರ್ಷಿಗಳು
ವೈಖಾಸನರು ದೂರ್ವಾಸರು,ಮಾರ್ಕಂಡೇಯ ಗಾಲವ,ದಧೀಚಿ,ಚ್ಯವನ,ಸನಕ ಸನಂದನರು,ಮೊದಲಾದ ಭಗವಂತನ ಭಕ್ತರು ಜಟಾ ಕಿರೀಟ ಧರಿಸಿ ಕೃಷ್ಣಾಜಿನ ವಸ್ತ್ರ ಧಾರಿಗಳಾಗಿ ತಮ್ಮ ತಮ್ಮ ಆಸನಗಳಲ್ಲಿ ಕುಳಿತಿದ್ದರು.
ಅವರ ಮಧ್ಯಭಾಗದಲ್ಲಿ ಶ್ರೀನಿವಾಸ ರತ್ನ ಗಂಬಳಿಯ ಮೇಲೆ ಕುಳಿತಿದ್ದನು..ಆತನ ಸಮೀಪದಲ್ಲಿ ಬ್ರಹ್ಮ ದೇವನು ಕರ ಜೋಡಿಸಿ ಕುಳಿತಿದ್ದನು.
ಆಕಾಶರಾಜನು ವರನಾದ ಶ್ರೀನಿವಾಸ ನನ್ನು ಕರೆದುಕೊಂಡು ಹೋಗಲು ಕುಲಪುರೋಹಿತರಾದ ಬೃಹಸ್ಪತಿ ಯನ್ನು ಮುಂದೆ ಮಾಡಿಕೊಂಡು ಆ ಸಭೆಗೆ ಬಂದನು.
ಬಂದಂತಹ ಆಕಾಶರಾಜನ ಕಂಡು ತಟ್ಟನೆ ಆಸನದಿಂದ ಎದ್ದು ಸ್ವಾಗತಿಸಿ ಆಲಂಗಿಸಿಗೊಂಡು ವಯೋವೃದ್ದರಾದ ನೀವು ನನ್ನ ಕರೆದೊಯ್ಯುವ ಬದಲು ನಿಮ್ಮ ಮಗನನ್ನು ಕಳುಹಿಸಿದರೆ ಸಾಕಾಗಿತ್ತು ಎಂದನು.
ತಕ್ಷಣ ಆಕಾಶರಾಜನು ಪುರೋಹಿತ ರ ಅಪ್ಪಣೆ ಕೇಳಿದಾಗ  ಬೃಹಸ್ಪತಿ ಆಚಾರ್ಯರು 
ಅಮ್ಮ! ಧರಣಿದೇವಿ ವಸಿಷ್ಠ ರ ಪತ್ನಿಯಾದ ಅರುಂಧತಿ ಯನ್ನು ಮುಂದೆ ಇಟ್ಟುಕೊಂಡು ಶ್ರೀನಿವಾಸ ನಿಗೆ ಪೂಜೆಯನ್ನು ಮಾಡುವವಳಾಗು ಎನ್ನಲು
ಅದರಂತೆ ಧರಣಿದೇವಿಯು ಮಾಡಲು ಸಕಲರು ಭಗವಂತನಿಗೆ ಪೂಜೆ ಮಾಡುವ ಭಾಗ್ಯ ಸಿಕ್ಕ ಧರಣಿ ದೇವಿಯನ್ನು ಹೊಗಳಿದರು.
ನಂತರ ಶ್ರೀನಿವಾಸ ಆನೆಯ ಮೇಲೆ ಕುಳಿತಾಗ
ಸಪತ್ನಿ ಸಮೇತರಾಗಿ ಬ್ರಹ್ಮಾದಿ ದೇವತೆಗಳು,ಸಕಲ ಋಷಿ ಮುನಿಗಳು ೪೯ಮರುತ್ತುಗಳು,ಅಷ್ಟ
ವಸುಗಳು,ಏಕಾದಶ ರುದ್ರ ರು ,ದ್ವಾದಶಾದಿತ್ಯರು ಇವರುಗಳಿಂದ ಕೂಡಿದವನಾಗಿ ಆಕಾಶರಾಜನು ನಿರ್ಮಿಸಿದ ಕಲ್ಯಾಣಮಂಟಪಕ್ಕೆ ಬಂದನು.
 ನಂತರ ಅಲ್ಲಿ ನಿರ್ಮಾಣ ಮಾಡಿಸಿದ್ದ ನವರತ್ನ ಮಯ ಸಿಂಹಾಸನದಲ್ಲಿ ಭಗವಂತ ಆಸೀನನಾದನು.ಅವನ ಸುತ್ತಲೂ ಬ್ರಹ್ಮಾದಿ ದೇವತೆಗಳು ಆಸೀನರಾದರು.
ಪತ್ನಿ ಸಮೇತವಾಗಿ ಆಕಾಶರಾಜ  ಸಂಕಲ್ಪ ವನ್ನು ಮಾಡಿ ಸ್ವಾಮಿ ಪುಷ್ಕರಣಿ ಜಲವನ್ನು ಧಾರಾಕಾರವಾಗಿ ಭಗವಂತನ ಪಾದಗಳಿಗೆ ಹಾಕುತ್ತಾ ಇರಲು,ಪುರೋಹಿತರು ಸಹಸ್ರ ಶೀರ್ಷಾ ಪುರುಷ ಎಂದು ಮಂತ್ರ ಪಠಣ ಮಾಡುತ್ತಾ ಇರಲು.ಆ ಪಾದೋದಕವನ್ನು ಆಕಾಶರಾಜನು ತನ್ನ ಶಿರದಲ್ಲಿ ಧರಿಸಿದನು.ನಂತರ ತನ್ನ ಪತ್ನಿ ಪುತ್ರ ಹಾಗು ಸಕಲ ಬಂಧುಗಳು,ತನ್ನ ಅರಮನೆಯಲ್ಲಿ ಎಲ್ಲಾ ಕಡೆ ಪ್ರೋಕ್ಷಣೆ ಮಾಡಿ ಕೃತಾರ್ಥನಾದನು.
ನಂತರ ಅನೇಕ ಉಡುಗೊರೆಗಳನ್ನು ಶ್ರೀನಿವಾಸ ನಿಗೆ ಅರ್ಪಿಸಿದ. ಇದಾದ ಮೇಲೆ  ಪದ್ಮಾವತಿ ದೇವಿಯು ಅಲಂಕೃತ ಳಾಗಿ ವೇದಿಕೆ ಮೇಲೆ ಬಂದಾಗ ಜೀರಿಗೆ ಬೆಲ್ಲವನ್ನು ಕೈಗೆ ಕೊಟ್ಟು ಅಕ್ಕಿ ಯ ರಾಶಿಯ ಮೇಲೆ ನಿಲ್ಲಿಸಿದರು.
ನಂತರ ಪಶ್ಚಿಮ ಅಭಿಮುಖವಾಗಿ ಇದ್ದ ಶ್ರೀನಿವಾಸ ಪೂರ್ವಾಭಿಮುಖವಾಗಿ, ಪದ್ಮಾವತಿ ಯನ್ನು ಪಶ್ಚಿಮ ಅಭಿಮುಖವಾಗಿ ನಿಲ್ಲಿಸಿ ದರ್ಭೆಇಂದ ವಧುವಿನ ಹಣೆಯನ್ನು ಒರೆಸಿ ಆಚೆ ಬಿಸಾಡಿ ಅನಿಷ್ಟ ಪರಿಹಾರ ಕ್ರಿಯೆಯನ್ನು ಮಾಡಿದರು.
ನಂತರ ಮಂಗಳವಾದ್ಯಗಳು ಮೊಳಗಿದವು.ಮಂಗಳಾಷ್ಟಕ ಮುಗಿದ ಮೇಲೆ ಅಂತಃಪಟವನ್ನು ವಸಿಷ್ಠ ರು ಸೆಳೆದರು.ಆಗ ಶ್ರೀನಿವಾಸ ಪದ್ಮಾವತಿಯರು ಪರಸ್ಪರ ವಾಗಿ ಜೀರಿಗೆ ಬೆಲ್ಲ,ಅಕ್ಷತೆ ಕಾಳುಗಳನ್ನು ಎರಚಿಕೊಂಡರು.
ನಂತರ  ಪುರೋಹಿತರು ಮಹೂರ್ತ ನಿರೀಕ್ಷಣೆ ಮಾಡಿ ಮಂಗಳಾಷ್ಟಕವನ್ನು ಪಠಣ ಮಾಡಿ ಸುಮಹೂರ್ತೆ ಸಾವಧಾನ| ಸುಲಗ್ನಾ ಸಾವಧಾನ|| ಎಂದು ಹೇಳುತ್ತಾ ಗಂಟೆ ಯನ್ನು ಬಾರಿಸಿದರು.
ಬೃಹಸ್ಪತಿ ಯು ವಧುವಿನ ಪ್ರವರವನ್ನು ಹೇಳಿದ ಹಾಗೆ ಆಕಾಶರಾಜನು ಹೇಳುವನು.
ಅತ್ರಿ ಗೊತ್ರದಲ್ಲಿ ಜನಿಸಿರುವ,ಸುವೀರರಾಜನ ಮರಿಮಗಳಾದ, ಸುಧರ್ಮರಾಜನ ಮೊಮ್ಮಗಳಾದ,ಆಕಾಶರಾಜನ ಮಗಳಾದ ಕಮಲದಂತೆ ಕಣ್ಣು ಉಳ್ಳವಳಾದ ಪದ್ಮಾವತಿ ಎಂಬ ಸಾಲಂಕೃತ ಅಲಂಕಾರ ಗೊಂಡ ಕನ್ಯೆ ಯನ್ನು ನಿನಗೆ ಕನ್ಯಾದಾನವಾಗಿ ನೀಡುತ್ತಾ ಇರುವೆನು ಸ್ವೀಕರಿಸು ಎಂದು ಹೇಳಿದನು..ನಂತರ ವಧೂ ವರರ ಮಧ್ಯದಲ್ಲಿ ರತ್ನ ಮಯ ಶಾಲನ್ನು ಅಡ್ಡಹಿಡಿದರು.
ಗಂಡಿನ ಕಡೆಯ ಪುರೋಹಿತ ರಾದ ವಸಿಷ್ಠ ರು ವರನ ಪ್ರವರವನ್ನು ಉಚ್ಚಾರಣೆ ಮಾಡಿದರು.
ಅದರಂತೆ ಶ್ರೀನಿವಾಸ ಹೇಳುವನು.
ಯಯಾತಿ ಮಹಾರಾಜನ ಮರಿ ಮಗನಾದ,ಶೂರಸೇನ ರಾಜನ ಮೊಮ್ಮಗ ನಾದ,ವಸುದೇವನ ಪುತ್ರನು ಆದ,ವಸಿಷ್ಠ ಗೋತ್ರದವನಾದ ಶ್ರೀನಿವಾಸ ನೆಂಬ ನಾಮಧೇಯವುಳ್ಳ ನಾನು ನಿನ್ನ ಇಂದ ಕನ್ಯಾದಾನವಾಗಿ ಕೊಡಲ್ಪಡುತ್ತಿರುವ ಈ ಕನ್ಯೆಯನ್ನು ಸ್ವೀಕಾರ ಮಾಡುತ್ತಾ ಇದ್ದೇನೆ.
ನಂತರ ಆಕಾಶರಾಜನು ಸುಗಂಧ,ವಸ್ತ್ರ, ಲೇಪನಾದಿಗಳಿಂದ ಶ್ರೀನಿವಾಸ ನನೆ ಪೂಜಿಸಿ ವಾಸುದೇವನ ಕರ ಕಮಲದಲ್ಲಿ ಕಂಕಣವನ್ನು ಕಟ್ಟಿದನು.
ಬೃಹಸ್ಪತಿ ಆಚಾರ್ಯರು ಪದ್ಮಾವತಿ ಕರಾಂಬುಜದಲ್ಲಿ ಕಂಕಣ ಬಂಧನ ಮಾಡಿದರು.
ಆ ನಂತರದಲ್ಲಿ ದೇವದೇವನಾದ ಶ್ರೀನಿವಾಸ ನಿಂದ ಪೂಜೆ ಮಾಡಲ್ಪಟ್ಟ ಮಾಂಗಲ್ಯಸೂತ್ರಕ್ಕೆ  ರಾಜನು ತಮ್ಮ ಮನೆಯದಾದ ಕರಿಮಣಿಗಳನ್ನು ಸೇರಿಸಿ,ಅದನ್ನು ಪೂಜಿಸಿದರು..
ಅರುಂಧತಿ ವಸಿಷ್ಠ ಮೊದಲಾದವರು ಆ ಮಾಂಗಲ್ಯ ವನ್ನು ಮುಟ್ಟಿ ಪವಿತ್ರವಾದ ಆ ಮಂಗಳ ಸೂತ್ರವನ್ನು ಶ್ರೀನಿವಾಸನು
ಮಾಂಗಲ್ಯಂ ತಂತುನಾನೇನ| 
ಜಗಜ್ಜೀವನ ಹೇತುನಾ|
ಕಂಠೇ ಬಧ್ನಾಮಿ ಸುಭಗೆ ಚಿರಂಜೀವ ಮಯಾ ಸಹ|
ಜಗತ್ತಿನ ಜೀವನಕ್ಕೆ ಕಾರಣವಾಗಿರುವ ಈ ಮಂಗಳಸೂತ್ರವನ್ನು ಎಲೈ ಪದ್ಮಾವತಿ ನಿನ್ನ ಕೊರಳಲ್ಲಿ ಕಟ್ಟುತ್ತೇನೆ. 
ನೀನು ನನ್ನ ಸಹಧರ್ಮಿಣಿಯಾಗಿ ನನ್ನ ಜೊತೆಯಲ್ಲಿ ಚಿರಕಾಲ ಬಾಳು ಎಂಬ 
ಈ ಮಂತ್ರವನ್ನು ಹೇಳಿ ಶ್ರೀನಿವಾಸ ನು ಪದ್ಮಾವತಿ ಕೊರಳಲ್ಲಿ ಮಂಗಳಸೂತ್ರವನ್ನು ಕಟ್ಟಿದನು.
ಆ ಬಳಿಕ ವಿವಾಹಕ್ಕೆ ಸಂಭಂದಿಸಿದ ಎಲ್ಲಾ ಸಕಲ ಕಾರ್ಯಕಲಾಪಗಳನ್ನು ಪುರೋಹಿತರು ಪೂರ್ಣಗೊಳಿಸಿದರು.
ಮಂಗಳಂ ಮಂಗಳಂ|
ಒದಗಿ ಮಹೂರ್ತಕ್ಕೆ ಬಂದವಗೆ|
ಸದಯ ಹೃದಯನಾಗಿರುವವಗೆ|
ಮುದದಿಂದಲಿ ಶ್ರೀ ಪದುಮಾವತಿಯಳ ಮದುವೆ| 
ಮಾಡಿಕೊಂಡ ಮದುಮಗಗೆ| ಮಂಗಳಂ
ಬೆಟ್ಟದೊಡೆಯನ ಈ ವಿಶಿಷ್ಟ ಕತೆಯನ್ನು 
ಬಹಳ ನಿಷ್ಠೆ ಯಲಿ ಕೇಳಿದರೆ ಎಷ್ಟು ಪೇಳಲಿ ಫಲವ|
ಕಷ್ಟ ದೂರಾಗುವದು,ಕಟ್ಟುವದು ಕಲ್ಯಾಣ ,ದುಷ್ಟ ಗ್ರಹ ಗಳ ಬಾಧೆ ಬಿಟ್ಟು ಓಡುವದು|
ಕಷ್ಟದಲಿ ಪುತ್ರಕಾಮೇಷ್ಟಿ ಯಾಗ ಮಾಡಿದ ಫಲವು,ಇಷ್ಟರಿಂದಲೆ ಕೊಡುವ ಇಷ್ಟದಾಯಕ ಹರಿಯು|
ಕೊಟ್ಟು ಸಲಹುವ ಮತ್ತೆ ತುಷ್ಟನಾಗುತ ಕರೆದ ಅಭೀಷ್ಟವನು ಕೊಡುವ ಎಲ್ಲಾ ಕೊಟ್ಟು ಬಿಡುವನು ಮುಕ್ತಿ ಕಟ್ಟ ಕಡೆಗೆ.||

🙏ಶ್ರೀ ಕೃಷ್ಣಾರ್ಪಣ ಮಸ್ತು🙏
********

ಶ್ರೀನಿವಾಸನ ಋಣಪತ್ರದ ಪೂರ್ಣ ಪಾಠ.
✍✍
ಸಾಲವನ್ನು ಸ್ವೀಕರಿಸುವವನು ಶ್ರೀನಿವಾಸ. ಕೊಡುವವನು ಧನಸ್ವಾಮಿ ಕುಬೇರ.
ಕಲಿಯುಗದಲ್ಲಿ ತನ್ನ ಸ್ವಂತ ವಿವಾಹ ಕಾರ್ಯ ನಿಮಿತ್ತವಾಗಿ (ಕಲ್ಯಾಣಕ್ಕಾಗಿ) ಸಾಲ ಸ್ವೀಕರಿಸಲಾಗಿದೆ.
ವಿಲಂಬಿ  ನಾಮಸಂವತ್ಸರದ, ವೈಶಾಖಮಾಸದ, ಶುಕ್ಲಪಕ್ಷದ, ಸಪ್ತಮಿ ದಿನದಂದು, ಬರೆದುಕೊಟ್ಟದ್ದು ಏನೆಂದರೆ 
ತ್ರೇತಾಯುಗದ ರಾಮಾವತಾರದ ಕಾಲದಲ್ಲಿ ಭೂಮಿಯಲ್ಲಿ ಇಟ್ಟಿದ್ದ ದ್ರವ್ಯರಾಶಿಯ ಮಧ್ಯದಲ್ಲಿ ೧೪ಲಕ್ಷ ರಾಮನ ಮುದ್ರೆಯು ಇರುವ ಸುವರ್ಣ ರಾಮ ಟಂಕಿ ವರಹಗಳನ್ನು (ನಾಣ್ಯಗಳು) ಸಾಲ ನೀಡಲಾಗಿದೆ.ಬಡ್ಡಿ ಯ ಉದ್ದೇಶ ದಿಂದ ನೀಡಲಾಗಿದೆ.
ಬಡ್ಡಿ ಸಹಿತ ಮೂಲ ಧನವನ್ನು ನೀಡಲು ಅಂಗೀಕರಿಸಿ  
ಶ್ರೀನಿವಾಸನು ಆ ಹಣವನ್ನು
  ಪಡೆದಿರುತ್ತಾನೆ
ವಿವಾಹ ವರ್ಷದಿಂದ ಹಿಡಿದು ಸಾವಿರ ವರ್ಷಗಳ ಒಳಗಾಗಿ ಹದಿನಾಲ್ಕು ಲಕ್ಷ ರಾಮಟಂಕಿ ವರಹಗಳ ಸಾಲವನ್ನು ಹಿಂತಿರುಗಿಸಬೇಕು..

ಚತುರ್ಮುಖ ಬ್ರಹ್ಮ ದೇವ ಮೊದಲ ಸಾಕ್ಷಿ.
ರುದ್ರ ದೇವ ಎರಡನೇ ಸಾಕ್ಷಿ.
ಸ್ವಾಮಿ ಪುಷ್ಕರಣಿ ದಡದಲ್ಲಿ ಬೆಳೆದಿರುವ ಅಶ್ವತ್ಥ ವೃಕ್ಷ ಮೂರನೆಯ ಸಾಕ್ಷಿ.
ಹೀಗೆ ಸಾಲಪತ್ರವನ್ನು ಬ್ರಹ್ಮದೇವನಿಂದ ನಿಂದ ಬರೆಸಿದ ಶ್ರೀನಿವಾಸ.

ಇಲ್ಲಿ ಬ್ರಹ್ಮ ದೇವ ಮೊದಲನೆಯ ಸಾಕ್ಷಿ ಏಕೆಂದರೆ ಸಾಲ ತೆಗೆದುಕೊಳ್ಳುತ್ತಾ ಇರುವವನ ದೊಡ್ಡ ಮಗ ಅವನೇ ಆಗಿದ್ದರಿಂದ ಮೊದಲ ಸಾಕ್ಷಿ.

ಎರಡನೇ ಸಾಕ್ಷಿ ರುದ್ರ ದೇವ.ಇವನು ಸಾಲ ತೆಗೆದುಕೊಂಡ ಶ್ರೀನಿವಾಸನ ಮೊಮ್ಮಗ. ಹಾಗಾಗಿ ಎರಡನೇ ಸಾಕ್ಷಿ.

ಅಂದರೆ ತಂದೆ ಮಾಡಿದ ಸಾಲವನ್ನು ತಂದೆ ತೀರಿಸದೇ ಹೋದರೆ ಮಗ ,ಮೊಮ್ಮಗ ಅದರ ಹೊಣೆಯನ್ನು ಹೊತ್ತಿರುತ್ತಾರೆ.
ಆದ್ದರಿಂದ ಕುಬೇರ ನಿಗೆ ಚಿಂತೆ ಇಲ್ಲ.

ಮತ್ತು 
ಮೂರನೆಯ ಸಾಕ್ಷಿ ಅಶ್ವತ್ಥ ವೃಕ್ಷ.
ಇದರಲ್ಲಿ ಸಾಕ್ಷಾತ್ ಭಗವಂತ ಸನ್ನಿಹಿತ ವಾಗಿರುವನು.
ಮತ್ತು 
ಅಶ್ವತ್ಥ ವೃಕ್ಷ ದಲ್ಲಿ ತ್ರಿಮೂರ್ತಿಗಳು ಇರುವದರಿಂದ
ಮೂಲದಲ್ಲಿ ಬ್ರಹ್ಮ ದೇವನು
ಮಧ್ಯದಲ್ಲಿ ವಿಷ್ಣು ವು ಮತ್ತು ಆಗ್ರದಲ್ಲಿ ಶಿವನು ಇರುವದರಿಂದ ಅದು ಮೂರನೆಯ ಸಾಕ್ಷಿ.

ಮೇಲಾಗಿ ಲೋಕ ವ್ಯವಹಾರದಿಂದ ಸಾಕ್ಷಿ ಗಳು ಒಂದೇ ಕಡೆ ವಾಸವಾಗಿರಬೇಕು ಅನ್ನುವ ನಿಯಮಇದೆ.
ಹಾಗಾಗಿ ಮೂರನೆಯ ಸಾಕ್ಷಿ ಅಶ್ವತ್ಥ ವೃಕ್ಷ.
🙏🙏🙏🙏

ಸಿರಿಯ ತನದಲಿ ನೋಡೆ ಶ್ರೀಕಾಂತನು|

ಲಕ್ಷ್ಮೀ ಪತಿ ಯಾದರು ಅಸುರೀ ಜನ ಮೋಹನಕ್ಕಾಗಿ ಈ ರೀತಿಯಾಗಿ ಸ್ವಾಮಿ ನಟನೆಯನ್ನು ಮಾಡುತ್ತಾನೆ.
🙏
ತಿಳಿಯದೋ ನಿನ್ನಾಟ ತಿರುಪತಿ ಯ ವೆಂಕಟ🙏

🙏ಶ್ರೀ ಕೃಷ್ಣಾರ್ಪಣ ಮಸ್ತು🙏

******
" ಶ್ರೀ ಶ್ರೀನಿವಾಸ "
ಈದಿನ - 21.05.2021 ಪರಮ ಪವಿತ್ರವಾದ ಶುಭದಿನ.
ಜಗದೊಡೆಯ ಶ್ರೀ ಶ್ರೀನಿವಾಸ ಮತ್ತು ಜಗನ್ಮಾತೆ ಶ್ರೀ ಪದ್ಮಾವತೀದೇವಿಯರ ಕಲ್ಯಾಣದ ಶುಭದಿನ.
ಬ್ರಹ್ಮ ರುದ್ರಾದಿ ವಂದ್ಯ೦ ತ್ವಾ೦ 
ಭಜೇ ವೇಂಕಟನಾಯಕಮ್ ।
ನಿವಾರಯಾಶ್ವಾನಿಷ್ಟಾನಿ 
ಸಾಧಯೇಷ್ಟಾನಿ ಮಾಧವ ।।
ರಚನೆ : 
ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : 
ವೆಂಕಟನಾಥ
" ಸರ್ವೋತ್ತಮ ಶ್ರೀ ಶ್ರೀನಿವಾಸ ದಯಾನಿಧೇ "
ವೆಂಕಟ ರಮಣಾ ಬಂದು ಸಲಹಯ್ಯಾ ।
ಸಂಕಟ ಹರಣ ಶ್ರೀನಿವಾಸ ಧೊರೆ ।। ಪಲ್ಲವಿ ।।
ವೇದಾಂತವೇದ್ಯ ವೇದಾಂತನುತ - ಶ್ರೀ ಮಾಧವಾ ।
ವೇದಸ್ತೇಯಾರಿ ವೇದ ಪೂಜಿತ - ಶ್ರೀ ಅಚ್ಯುತಾ ।। ಚರಣ ।।
ವೇದಾತ್ಮಿಕಾ ವಲ್ಲಭನೇ - ಶ್ರೀ ರಂಗಯ್ಯಾ ।
ವೇದೋದ್ಭವೆ ಉದ್ಧಾರಕ - ಶ್ರೀ ಕೃಷ್ಣಯ್ಯಾ ।। ಚರಣ ।।
ಎಂಟಾನೆ ಬಿಡಿಸಿ ಎಂಟು ಭಾಗ್ಯವ ಕೊಡೋ - ಶ್ರೀ ಹೃಷಿಕೇಶಾ ।
ಎಂಟಕ್ಷರ ಯೆನ್ನ ನಾಲಿಗೆಯಲಿ ನಲಿಸೋ - ಶ್ರೀ ನಾರಾಯಣಾ ।। ಚರಣ ।।
ಏಕಮೂರ್ತಿಯಲಿ ಏಕ ಭಕ್ತಿಯ ನೀಡೋ - ಶ್ರೀ ಶ್ರೀಧರಾ ।
ಏಕಾತ್ಮನೇ ಯೆನಗೆ ದಯ ಪಾಲಿಸೋ - ಶ್ರೀ ಗೋವಿಂದಾ ।। ಚರಣ ।।
ಯಂತ್ರವಾಹಕನೇ ಯಂತ್ರಾರೂಢನೇ - ಶ್ರೀ ಜನಾರ್ದನಾ ।
ಯಂತ್ರೋದ್ಧಾರಕ ಪ್ರಿಯ ವೆಂಕಟನಾಥ - ಶ್ರೀ ಉಪೇಂದ್ರಾ ।। ಚರಣ ।।
ವಿವರಣೆ :
" ವೇದಾಂತ ವೇದ್ಯ "
ಉಪನಿಷತ್ತುಗಳಿಂದ ತಿಳಿಯತಕ್ಕವನು ( ಶ್ರೀ ಮಹಾವಿಷ್ಣು )
" ವೇದಾಂತನುತ "
ಉಪನಿಷತ್ತುಗಳಿಂದ ಸ್ತುತಿಸಲ್ಪಡುವವನು ( ಶ್ರೀ ಹರಿ )
" ವೇದಸ್ತೇಯಾರಿ "
ವೇದಗಳನ್ನು ಕದ್ದ ತಮನೆಂಬ ದೈತ್ಯನನ್ನು ಕೊಂದ ಶ್ರೀ ಹರಿಯ ಮತ್ಸ್ಯ ರೂಪ.
" ವೇದ ಪೂಜಿತ "
ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಪೂಜಿಸಲ್ಪಡುವವನು ( ಶ್ರೀ ಜಗನ್ನಾಥ )
" ವೇದಾತ್ಮಿಕಾ ವಲ್ಲಭ "
ವೇದಾಭಿಮಾನಿಯಾದ ಶ್ರೀ ಮಹಾಲಕ್ಷ್ಮೀ ರಮಣ ( ಶ್ರೀ ನಾರಾಯಣ )
" ವೇದೋದ್ಭವೆ "
ಯಜ್ಞ ವೇದಿಯಿಂದ ಉದ್ಭವಿಸಿದ ದ್ರೌಪದೀ ದೇವಿಯರು.
" ಎಂಟಾನೆ ಬಿಡಿಸಿ "
ಅಷ್ಟ ಮದಗಳನ್ನು ಬಿಡಿಸಿ 
( ಅಷ್ಟ ಮದಗಳು - ಧನ, ಕುಲ, ವಿದ್ಯೆ,ರೂಪ, ಯೌವನ, ಬಲ, ಪರಿವಾರ, ಅಧಿಕಾರ )
" ಎಂಟು ಭಾಗ್ಯವ ಕೊಡೋ "
ಆನೆ, ಕುದುರೆ, ಪಲ್ಲಕ್ಕಿ, ಛತ್ರ, ಚಾಮರ, ಸೈನ್ಯ, ಕೋಶ, ರಾಜ್ಯ ಮೊದಲಾದ ಭಾಗ್ಯ
" ಎಂಟಕ್ಷರ "
ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರವನ್ನು ಯೆನ್ನ ನಾಲಿಗೆಯಲ್ಲಿ ಹರಿಸೋ
" ಏಕಮೂರ್ತಿ "
ಸರ್ವೋತ್ತಮನಾದ ಶ್ರೀಮನ್ನಾರಾಯಣ
" ಏಕಭಕ್ತಿ "
ಶ್ರೀ ಹರಿ ಸರ್ವೋತ್ತಮನೆಂಬ ಏಕೋಪಾಸನೆ
" ಏಕಾತ್ಮನೇ "
" ಸರ್ವರ ಅಂತರ್ಯಾಮಿ ( ಶ್ರೀ ಹರಿ )
" ಯಂತ್ರವಾಹಕ "
ಬದುಕೆಂಬ ಯಂತ್ರವನ್ನು ನಡೆಸುವವನು ( ಶ್ರೀ ಮಹಾವಿಷ್ಣು )
" ಯಂತ್ರಾರೂಢ "
ಶ್ರೀ ಮಹಾವಿಷ್ಣು  [ ಶ್ರೀ ಜನಾರ್ದನ ]
ಶ್ರೀ ಪದ್ಮಾವತೀ ಶ್ರೀನಿವಾಸ ಪರಮಾನುಗ್ರಹ ಮಾಡಲೆಂದು ಪ್ರಾರ್ಥಿಸುವಾ.... 
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****

ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಂ||

ಇಂದು ಜಗದೊಡೆಯನಾದ ಶ್ರೀ ಶ್ರೀನಿವಾಸ ದೇವರು ಪದ್ಮಾವತಿಯನ್ನು ವರಿಸಿದ ಪರಮ ಪವಿತ್ರ ದಿನ.

 ವೈಶಾಖ ಮಾಸ ಶುದ್ಧ ದಶಮಿ, ಆಕಾಶರಾಜ ತನ್ನ ಸುಪುತ್ರಿ ಶ್ರೀಪದ್ಮಾವತಿ ದೇವಿಯನ್ನು ಜಗದಾನಂದಕಾರಕನಾದ ಶ್ರೀಹರಿಗೆ ಕನ್ಯಾದಾನ ಮಾಡಿದ ದಿನ. ಜಗನ್ನಾಟಕ ಸೂತ್ರಧಾರಿಯಾದ ಸಕಲ ದೇವತೆಗಳಿಂದ ಸೇವಿತನಾದ ಭೂ ವೈಕುಂಠಪತಿ ಜಗನ್ಮಾತೆಯನ್ನು ಪರಿಣಯ ಮಾಡಿಕೊಂಡು ತನ್ನ ಹೃತ್ಕಮಲದಲ್ಲಿ ಧಾರಣೆ ಮಾಡಿದ ಸುದಿನ.

ತನ್ನ ಕಲ್ಯಾಣದ ಮೂಲಕ ಭಕ್ತರ ಸಲಹಲೆಂದೇ ಭೂಲೋಕದಲ್ಲಿ ಜಗನ್ಮಾತೆಯನ್ನು ಪರಿಣಯ ಮಾಡಿಕೊಂಡ ಪರಮಾತ್ಮನನ್ನು ಈ ಶುಭದಿನ ನೆನೆಯೋಣ..

ಬ್ರಹ್ಮ ರುದ್ರಾದಿ ವಂದ್ಯಂ ತ್ವಾಂ 
ಭಜೇ ವೇಂಕಟನಾಯಕಮ್ ।
ನಿವಾರಯಾಶ್ವಾನಿಷ್ಟಾನಿ 
ಸಾಧಯೇಷ್ಟಾನಿ ಮಾಧವ ।।

ಶ್ರೀಯಃಪತಿ ಸದಾ ಕರುಣೆ ತೋರಲಿ...🙏🙏🙏

ಶ್ರೀಶ ಚರಣಾರಾಧಕ
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ
ಆನೇಕಲ್..
****

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ವೈಶಾಖ ಶುದ್ಧ ದಶಮಿ

ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡೆ
ಸುಲಭದೇವ ರದೇವ ವಿಜಯವಿಠ್ಠಲ ವೆಂಕಟಾ

ಎನ್ನುವ ಶ್ರೀ ವಿಜಯದಾಸಾರ್ಯರ ಮಾತಿನಂತೆ ಲೋಕ ಕಲ್ಯಾಣಕ್ಕಾಗಿಯೇ ಶ್ವೇತದ್ವೀಪದ ನಾರಾಯಣ ಇಳಿದು ಬಂದು ಏಳು ಬೆಟ್ಟದಮೇಲೆನಿಂತು ನಮ್ಮ ಕಲಿಯುಗ ಪ್ರತ್ಯಕ್ಷ ದೈವನಾಗಿ, ಲಕ್ಷ್ಮೀದೇವಿಯರನ್ನು ಸದಾ ಹೃದಯದಲ್ಲಿ ನೆಲಸಿಕೊಂಡು, ಬೇಡಿದ ವರಗಳ ನೀಡುತ್ತ, ಭಕ್ತರನು ಸಲಹುತ್ತಿರುವನು.. ಆ ಶ್ರೀನಿವಾಸನಿಗೆ ನಿತ್ಯ ಕಲ್ಯಾಣ ಮಹೋತ್ಸವ ನಡೆಯುವದೂ ಲೋಕ ಕಲ್ಯಾಣಾರ್ಥಕ್ಕಾಗಿಯೆ ಎನ್ನುವುದು ಜಗದ್ವಿದಿತ ... ಭಕ್ತಜನಪರಿಪಾಲನ ಆ ಕಲ್ಯಾಣ ಮಹೋತ್ಸವ ನೋಡುವುದೇ ಸಂಭ್ರಮ. ಆ ಮುದ್ದು ಶ್ರೀನಿವಾಸ ಸದಾ ನಮ್ಮ ಎಲ್ಲರನ್ನು ,ಆರೋಗ್ಯ , ಸೌಭಾಗ್ಯ ಭಾಗ್ಯ ಸ್ಥಿರವಾಗಿರುವಂತೆ ಸಲಹಲಿ..

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೆ
ಶ್ರೀಮದ್ವೇಂಕಟನಾಥಾಯ
ಶ್ರೀನಿವಾಸಾಯಾತೇನಮಃ//

ಹಾಗೆಯೆ...  
ಶ್ರೀ ಶೇಷದಾಸಾರ್ಯರ  ಉತ್ತರಾರಾಧನೆಯ ಶುಭಸ್ಮರಣೆಗಳು....

 ಶ್ರೀ ಶ್ಯಾಮಸುಂದರದಾಸರ ಉತ್ತರಾರಾಧನೆಯ ಶುಭವಂದನೆಗಳು.... 

ದಾಸದ್ವಯರ ಅಂತರ್ಗತ ಕಲ್ಯಾಣ ಶ್ರೀನಿವಾಸನು ತನ್ನ ಅಡಿದಾವರೆಗಳಲ್ಲಿ ನಮಗೆ ಠಾವನ್ನು (ಜಾಗವನ್ನು) ನೀಡಿ ಸಲಹಲಿ ಎಂದು 
ಪ್ರಾರ್ಥನೆ ಮಾಡುತ್ತಾ...

ನಾದನೀರಾಜನದಿಂ ದಾಸಸುರಭಿ 🙏🏽
***




1 comment:

  1. ಅದ್ಭುತ ಸಾಧನೆ ನಿಮ್ಮ ಈ ಸೇವೆ , ಶ್ರೀನಿವಾಸನು ನಿಮ್ಮನ್ನು ಸದಾಕಾಯುವನು.

    ReplyDelete