SEARCH HERE

Friday 1 October 2021

ಮಹಾಲಯ ಶ್ರಾದ್ಧ ಕಾರ್ಯ ಮಾಡಲು ಯಾರು ಅರ್ಹರು

 ಯಾರು ಅರ್ಹರು ಮಹಾಲಯ ಕಾರ್ಯ ಮಾಡಲು?


ಸಾಮಾನ್ಯವಾಗಿ ನಮ್ಮಲ್ಲೊಂದು ಅನುಕೂಲ ಶಾಸ್ತ್ರ ಮುಂದುವರಿದಿದೆ. "ನಿಮ್ಮ ಮನೆಯಲ್ಲಿ ಯಾವಾಗ ಮಹಾಲಯ?" ಉತ್ತರ- "ಅದು ನಮ್ಮ ಕುಟುಂಬದ ತರವಾಡು ಮನೆಯಲ್ಲಿ ಆಗುತ್ತದೆ.ಹಾಗಾಗಿ ನಾವೆಲ್ಲ ಮಾಡೋದಿಲ್ಲ.ಹೇಳಿಗೆ ಮಾಡಿದರೆ ಹೋಗ್ತೇವೆ,ಮಂತ್ರಾಕ್ಷತೆ ಪಡೆಯುತ್ತೇವೆ. ಕೆಲವೊಮ್ಮೆ ಹೇಳಿಗೆ ಇಲ್ಲದಿದ್ದರೂ ಹೋಗುವವರಿದ್ದಾರೆ.ಇದಕ್ಕೆಲ್ಲ ಹೇಳಿಗೆ ಬೇಕಾಗಿಲ್ಲ" ಎಂಬುದು ಒಂದು ವಾಡಿಕೆಯಲ್ಲಿ ನಡೆದುಕೊಂಡು ಬಂದಿದೆ.

ಇದು ಸರಿಯಾದದ್ದೇ? ಶಾಸ್ತ್ರ ಸಮ್ಮತವೇ? ಎಂಬ ಪ್ರಶ್ನೆ.


ಸಕೃಣ್ಮಯ ಮಹಾಲಯ ಶ್ರಾದ್ಧವು ಸಾಂವತ್ಸರಿಕವಾಗಿ ಮಾಡಿಕೊಂಡು ಬರುವಂತದ್ದು. ಇದನ್ನು ಯಾರು ಮಾಡಲೇ ಬೇಕು ಎಂಬುದಕ್ಕೊಂದು ನಿರ್ಣಯವಿದೆ.ಅನೇಕ ಗ್ರಂಥಗಳಲ್ಲಿ ಈ ಬಗ್ಗೆ ವಿವರಣೆ ಇದೆ.ನಿರ್ಣಯ ಸಿಂಧು,ಧರ್ಮ ಸಿಂಧು ಇತ್ಯಾದಿ ಗ್ರಂಥಗಳಲ್ಲಿ ಸವಿಸ್ತಾರ ವಿವರಣೆಗಳಿವೆ.


ಇದು ಉಭಯ ಕುಲದ ಪಿತೃಗಳ ಶ್ರಾದ್ಧ.ಅಂದರೆ ಎರಡು ಗೋತ್ರಗಳ ಪಿತೃಗಳ ಶ್ರಾದ್ಧ.ಎರಡು ಗೋತ್ರ ಎಂದರೆ ಒಂದನೆಯದ್ದು ತಂದೆಯ ವಂಶ.ಎರಡನೆಯದ್ದು ತಾಯಿಯ ವಂಶ.ನಮ್ಮ ಜನ್ಮಕ್ಕೆ ಇವರೇ ಕಾರಣರು.ದೇಹ ಪ್ರಧಾನ ತಂದೆಯದ್ದಾದರೆ,ಅದರ ಪೋಷಣೆ ಮಾಡಿ ಭೂಮಿಗೆ ಇಳಿಸುವುದು ತಾಯಿ.ಆ ತಾಯಿಯು ಅವರ ವಂಶದ ದೇಹ ಪಡೆದವಳು.ತಂದೆಯೂ ಅವರ ವಂಶದ ದೇಹವಾದರೂ ಅದಕ್ಕೆ ಕಾರಣ ತಂದೆಯ ಮಾತೃ ವಂಶ.ಹಾಗಾಗಿ ಮಹಾಲಯದಲ್ಲಿ ಉಭಯ ಕುಲದ ಪಿತೃಗಳಿಗೆ ಪ್ರಾಧಾನ್ಯತೆ.ಇದರ ಜತೆಗೆ ಬಂಧು ಭಗಿನಿ ಸಹೋದರ ಇತ್ಯಾದಿಗಳೂ ವಂಶಕ್ಕೆ( ಉಭಯ ಕುಲಕ್ಕೆ) ಸಂಬಂಧಿಸಿದವರಿಗೆ ಪಿಂಡ ತರ್ಪಣಾದಿಗಳಿವೆ.

ಇನ್ನೊಂದು ಜಿಜ್ಞಾಸೆ ಎಂದರೆ ನಮ್ಮ ಮೂಲ ತರವಾಡಿನಲ್ಲಿ ನಡೆಯುತ್ತದೆ ಎಂದರೆ ಯಾರಾಗುತ್ತಾರೆ ಉಭಯ ಕುಲ ಪಿತೃಗಳು? ಮಹಾಲಯ ಮಾಡುವ ಕತೃವಿನ ಉಭಯ ಕುಲಕ್ಕೇ ಹೋಗುತ್ತದೆಯಲ್ಲದೆ ಬೇರಾರಿಗೂ ಸಲ್ಲುವುದಿಲ್ಲ.ಒಂದು ಕುಟುಂಬದಲ್ಲಿ ಅನೇಕ ಉಭಯ ಕುಲ ಗೋತ್ರಗಳು ಸೇರಿರ್ತಾವೆ.ಅವರೆಲ್ಲರನ್ನೂ ಒಂದೇ ಕಡೆ  ಮಹಾಲಯ ಶ್ರಾದ್ದದಲ್ಲಿ ಕರೆಯಲಾಗದು.ಅದೇನಿದ್ದರೂ ಬಂಧು ಪಿಂಡ ತರ್ಪಣದಲ್ಲೇ  ಆಗುತ್ತದೆಯೇ ವಿನಃ,ಪ್ರಧಾನ ಪಿಂಡಗಳಾಗದು. 

ಒಂದು ತಾಯಿಗೆ ನಾಲ್ಕು ಗಂಡು ಮಕ್ಕಳಿದ್ದರೆ,ಅದರಲ್ಲಿ ಒಬ್ಬನು ಮಹಾಲಯ ಮಾಡಿದರೆ ಉಭಯ ಕುಲಕ್ಕೆ ಸಲ್ಲುತ್ತದೆ. ಹಾಗಾಗಿ ಆ ಸಹೋದರರೆಲ್ಲ ಮಾಡಬೇಕಾಗಿಲ್ಲ. ಅವರ ನಂತರದಲ್ಲಿ ಆ ಪೀಳಿಗೆಗಳು ಬೇರೆ ಬೇರೆ ಮಾಡಬೇಕು.ಅಂದರೆ ಮಾತೃವಂಶದ ಆಧಾರದಲ್ಲೇ ಉಭಯ ಕುಲ ಪಿತೃಗಳಾಗುತ್ತಾರೆ. ಇನ್ನೊಂದೆಡೆ ತಾಯಿ ಇರುವಲ್ಲಿಯ ವರೆಗೆ ( ತಂದೆ ಗತಿಸಿದ್ದರೂ) ಮಹಾಲಯ ಮಾಡುವಂತಿಲ್ಲ.ಯಾಕೆಂದರೆ ಪಿತೃ ಸ್ಥಾನಕ್ಕೆ ಸಪತ್ನಿ ಸ್ಥಾನಕ್ಕೆ ಪಿಂಡ ಇಡುವಂತಿಲ್ಲ. ಅಂದರೆ ಮಹಾಲಯದಲ್ಲಿ ಸಪತ್ನೀಕರಿಗೆ ಮಾತ್ರ ಪಿಂಡದಾನ ಆಗಬೇಕು. ಚಿಕ್ಕಪ್ಪ ಗತಿಸಿದ್ದು,ಚಿಕ್ಕಮ್ಮ ಇದ್ದರೆ ಚಿಕ್ಕಪ್ಪನಿಗೆ ಪಿಂಡ ಹಾಕುವಂತಿಲ್ಲ.ಇಬ್ಬರೂ ಗತಿಸಿದ್ದರೆ ಮಾತ್ರ ಸಪತ್ನೀಕ ಕನಿಷ್ಟ  ಪಿತರೌ ಎಂದು ಎರಡು ಪಿಂಡ ದಾನ ಆಗಬೇಕು. ಇದುವೇ ಮಹಾಲಯದ ನಿಜವಾದ ನಿರ್ಣಯ ಆಗುತ್ತದೆ ಎಂಬುದು ಗ್ರಂಥೋಲ್ಲೇಕ.


ಅರ್ಥ ಇಷ್ಟೆ. ಕನ್ಯಾ ಮಾಸದಲ್ಲಿ ಪೀತೃಗಳು ಸ್ವರ್ಗಕ್ಕೆ ಹೋಗುವ ಸಮಯ.ರವಿ ಚಂದ್ರರ ಮದ್ಯದ ಆಕಾಶವೇ ಸ್ವರ್ಗ. ಆ ಸಮಯದಲ್ಲಿ ಸಪತ್ನೀಕ ಪಿತೃಗಳಿಗೆ ಪಿಂಡ ತರ್ಪಣಾದಿ ಮಾಡಿದರೆ ಅವರು ಸಪತ್ನೀಕವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ನಿಯಮ. ಕೆಲವೊಮ್ಮೆ ಕೆಲವರು ಒಂದು ಪ್ರಶ್ನೆ ಕೇಳಬಹುದು.ಮದುವೆಯೇ ಆಗದವರಿದ್ದರೆ ಎಂದು.ಅದಕ್ಕೆ ಸನ್ಯಾಸೀ ಮಹಾಲಯ( ಬ್ರಹ್ಮಚಾರಿ) ಇದೆ.ಆದಿನ ಪಿಂಡ ಹಾಕಬೇಕು.ಅಥವಾ ಆ ಮೃತರಿಗೆ ತ್ರಿಪಿಂಡೀಕರಣ ಶ್ರಾದ್ಶ ಮಾಡಿದಲ್ಲಿ ಅವರಿಗೆ ಸಾಯುಜ್ಯ ಪ್ರಾಪ್ತಿಯಾಗುತ್ತದೆ.ಅಂತವರಿಗೆ ಸಾಂವತ್ಸರಿಕ ಶ್ರಾದ್ಧ,ಮಹಾಲಯ ಶ್ರಾದ್ಧ ಬೇಕಾಗಿಲ್ಲ. ಉತ್ತರ ಕ್ರಿಯೆಯಲ್ಲಿ ಸಪಿಂಡೀಕರಣ ಕ್ರಿಯೆ ಆದವರಿಗೆ ಸಾಂವತ್ಸರಿಕ ಮತ್ತು ಮಹಾಲಯವನ್ನು ಅವರ ಪೀಳಿಗೆಗಳು ಮಾಡಲೇ ಬೇಕು.

***



No comments:

Post a Comment