SEARCH HERE

Friday 1 October 2021

ರಾಹುಕಾಲ ಗುಳಿಕಕಾಲ ಯಮಗಂಡ ಕಾಲಗಳ ಅರ್ಥ ಔಚಿತ್ಯ

 ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡ ಕಾಲಗಳ ಅರ್ಥ ಔಚಿತ್ಯ ಮತ್ತು ಪ್ರಾಮುಖ್ಯತೆ 


🌟 ನಮ್ಮ ಹಿಂದೂ ಧರ್ಮದಲ್ಲಿ ಮುಖ್ಯವಾದ ಕೆಲಸ - ಕಾರ್ಯಗಳಿಗೆ ಮತ್ತು ಹಬ್ಬಗಳಾಚರಣೆಗೆ ಮುಹೂರ್ತ ನೋಡುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡ ಪದ್ಧತಿ. ನಮ್ಮವರು ಇಂದಿಗೂ ಹಬ್ಬ, ಮದುವೆ, ಗೃಹಪ್ರವೇಶ, ಮುಂಜಿವೆ ಮುಂತಾದ ಶುಭಕಾರ್ಯಗಳಿಗೆ ಮುಹೂರ್ತ ನೋಡುತ್ತಾರೆ. 


🌟 ಕಾಲಗಳ ಮಹತ್ವ ಗೊತ್ತಿದ್ದವರು ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಲೇ ಹೋಗುತ್ತಿರುತ್ತಾರೆ. ಸಮಯ ನೋಡಿಕೊಂಡು ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸಾಗುತ್ತವೆ ಎಂಬ ಗುಟ್ಟು ಬಹಳಷ್ಟು ಜನರಿಗೆ ಗೊತ್ತಿಲ್ಲ. 


ರಾಹು ಕಾಲ 


🌟 ಸಾಮಾನ್ಯವಾಗಿ ರಾಹುಕಾಲವು ವಾರದ ಒಂದೊಂದು ದಿನ ಸರಿಸುಮಾರು ಒಂದೇ ಸಮಯದಲ್ಲಿರುತ್ತದೆ.


🌟 ರಾಹುಕಾಲಕ್ಕೆ "ವಿಷಘಳಿಗೆ" ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮುಖ್ಯವಾದ ಕೆಲಸಗಳಿಗೆ ಹೊರಡದಿರುವುದು ಸೂಕ್ತ. ಏಕೆಂದರೆ ಯಾವ ಉದ್ದೇಶ ಇಟ್ಟುಕೊಂಡು ನಾವು ಈ ವೇಳೆಯಲ್ಲಿ ಹೊರಟಿರುತ್ತೇವೆಯೋ ಅದು ಯಶಸ್ಸಾಗುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೇ ಬಂದಿದೆ. ರಾಹುಕಾಲದಲ್ಲೇನಾದರೂ ಹೋದಿರೆನ್ನಿ, ಆಗಬೇಕಾದ ಕೆಲಸ ಲೇಟಾಗುತ್ತದೆ ಅಥವಾ ಏನಾದರೂ ಅಡೆತಡೆ ಬರುತ್ತದೆ ಇಲ್ಲವೇ ಆಗೋದೇ ಇಲ್ಲ. ಈ ಸಮಯದಲ್ಲಿ ಹಣದ ವ್ಯವಹಾರ ಮಾಡುವುದು ಕೂಡ ಸೂಕ್ತವಲ್ಲ. ಉದಾಹರಣೆಗೆ ಖರೀದಿ, ಸಾಲ ಕೊಡುವುದು-ಪಡೆಯುವುದು, ಮತ್ತಿತರೆ. ಇನ್ನು ಕೆಲವೊಂದು ಮಹತ್ವದ ಮಾತುಕತೆಗಳನ್ನು ಕೂಡ ರಾಹುಕಾಲದಲ್ಲಿ ಮಾಡದಿರುವುದು ಸೂಕ್ತ. ಏಕೆಂದರೆ ಮಾತುಕತೆಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದಿಲ್ಲ.


🌟 ಪ್ರತಿನಿತ್ಯ ಕೇವಲ ಒಂದೂವರೆ ಗಂಟೆಗಳಷ್ಟಿರುವ ರಾಹುಕಾಲವು, ರಾಹುದೋಷ ನಿವಾರಣಾ ಪೂಜೆಗೆ ಮತ್ತು ಮಾತೆ ದುರ್ಗಾದೇವಿಯ ಆರಾಧನೆಗೆ ತುಂಬಾ ಸೂಕ್ತ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ರಾಹುಕಾಲ ನಮಗೆ ಲಾಭವನ್ನೂ ತರುತ್ತದೆ. ಹೇಗೆಂದರೆ ನಮಗೇನಾದರೂ ಕೆಲಸ ಆಗದಿರುವ ಹಾಗೆ ಮಾಡಬೇಕೆಂದರೆ, ತೊಂದರೆಗಳಿಂದ ನಮಗೆ ಖುಷಿಯಾಗಬೇಕೆಂದರೆ ರಾಹುಕಾಲವನ್ನು ಆಯ್ಕೆ ಮಾಡಿಕೊಳ್ಳಬೇಕು. 


ಗುಳಿಕ ಕಾಲ 


🌟 ಗುಳಿಕ ಕಾಲವೂ ಕೂಡ ಪ್ರತಿನಿತ್ಯ ವಾರದಲ್ಲೊಂದೊಂದು ದಿನ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 3 ರಿಂದ 4-30ರವರೆಗೆ ಗುಳಿಕ ಕಾಲ. ಆದರೆ, ಉಳಿದ ದಿನ ಬೇರೆ ಬೇರೆ ಸಮಯದಲ್ಲಿರುತ್ತದೆ ಎಂಬುದು ಗಮನದಲ್ಲಿರಿಸಿಕೊಂಡಿರಬೇಕು. ಈ ಗುಳಿಕ ಕಾಲದ ವಿಶೇಷವೇನೆಂದರೆ ಈ ಸಮಯದಲ್ಲಿ ಮಾಡಿದ ಕೆಲಸ ಕಾರ್ಯಗಳು ಪುನಃ ಮರುಕಳಿಸುತ್ತವೆ ಎಂಬ ನಂಬಿಕೆ ಹಿಂದಿನಿಂದ ಬಂದಿದೆ. 


🌟 ಈ ಸಮಯದಲ್ಲಿಯೇ ಸಾಮಾನ್ಯವಾಗಿ ಗೃಹಪ್ರವೇಶ, ಹೊಸ ವಾಹನ ಮತ್ತು ಬಂಗಾರ ಖರೀದಿ ಮಾಡುತ್ತಾರೆ. ಏಕೆಂದರೆ ಇದರಿಂದ ಮತ್ತೆ ಹೊಸ ಮನೆ ಗೃಹಪ್ರವೇಶ ಮತ್ತು ವಾಹನ, ಬಂಗಾರ ಖರೀದಿ ಯೋಗ ಬರುತ್ತದೆ ಎಂಬ ನಂಬಿಕೆ. 


🌟 ಆದರೆ, ಗುಳಿಕ ಕಾಲದಲ್ಲಿ ಮೃತ ವ್ಯಕ್ತಿಯ ಶರೀರವನ್ನು ಮನೆಯಿಂದ ಮಸಣಕ್ಕೆ ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗೂ ಅಂತ್ಯಕ್ರಿಯೆ ನಡೆಸುವ ಹಾಗಿಲ್ಲ. ಇದಕ್ಕರ್ಥ ನಿಮಗೆ ಗೊತ್ತಾಗಿರಬಹುದು. ಗೊತ್ತಾಗದವರಿಗೆ ಗುಳಿಕ ಕಾಲದಲ್ಲಿ ಮಾಡಿದ ಕೆಲಸ - ಕಾರ್ಯಗಳು ಮರುಕಳಿಸುತ್ತವೆ ಎಂಬುದನ್ನು ನೆನಪಿಸಬೇಕಾಗುತ್ತದೆ


ಯಮಗಂಡ ಕಾಲ 


🌟 ಯಮಗಂಡ ಕಾಲವೂ ಪ್ರತಿನಿತ್ಯ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 12-00 ರಿಂದ 1-30 ರವರೆಗೆ. ಉಳಿದ ದಿನಗಳು ಬೇರೆ ಬೇರೆ ಸಮಯದಲ್ಲಿರುತ್ತದೆ. ಇದು ಯಾವುದೇ ಕೆಲಸಗಳನ್ನು ಅಂತ್ಯಗೊಳಿಸಬೇಕೆಂದರೆ ಉತ್ತಮ ಸಮಯ. ಈ ಸಮಯಕ್ಕೆ "ಸಾವಿನ ಸಮಯ" ಎಂದೂ ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮೃತ ಶರೀರದ ಅಂತ್ಯಕ್ರಿಯೆ, ತಿಥಿಯಾಚರಣೆ, ಶೋಕಾಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಾಗಿಲ್ಲ. ಮಾಡಿದಿರೆನ್ನಿ. ಆ ಕೆಲಸಕ್ಕೆ "ಎಳ್ಳು ನೀರು ಬಿಟ್ಟಂಗೆ!"


🌟 ಈ ಸಮಯದಲ್ಲಿ ಯಾವುದೇ ಮಾತುಕತೆ, ಹಣದ ವ್ಯವಹಾರ, ಖರೀದಿ ಮಾಡುವ ಹಾಗಿಲ್ಲ. ಮಾಡಲು ಹೋದರೆ ಅದು ಯಶಸ್ಸೂ ಆಗಲ್ಲ, ಅಲ್ಲದೇ ಅದೇ ಕೊನೆಯೂ ಕೂಡ ಆಗುತ್ತದೆ. ಮುಂದೆ ಆ ಯೋಗವೂ ಬರುವುದಿಲ್ಲ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.


🌟 ಅಲ್ಲದೇ ಉಲ್ಲಾಸ, ಉತ್ಸಾಹ ಕಳೆದುಕೊಂಡು ಬೇಸರಪಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಯಮಗಂಡ ಕಾಲದಲ್ಲಿ ಮುಖ್ಯವಾದ ಕೆಲಸಕ್ಕೆ ಹೋಗುವುದನ್ನು ಮತ್ತು ಮಾತುಕತೆಗಳನ್ನು ತಪ್ಪಿಸಬೇಕು. ಯಾವುದೇ ವಿಷಯವನ್ನಾಗಲಿ ಅದಕ್ಕೊಂದು ಅಂತ್ಯ ಹಾಡಬೇಕೆಂದರೆ ಯಮಗಂಡ ಕಾಲ ಸೂಕ್ತ. 

ಸಂಗ್ರಹಿತ

***


No comments:

Post a Comment