ರೋಗಾನುಭವವೆಲ್ಲಾ ಉಗ್ರ ತಪವು- ಶ್ರೀ ವಿಜಯಪ್ರಭುಗಳು
ರೋಗ ಎಂದರೆ ವ್ಯಾಧಿ, ಜಾಡ್ಯ ಎಂದು ಅರ್ಥ.
ರೋಗ ಅಥವಾ ವ್ಯಾಧಿಯು ನಾಲ್ಕುವಿಧ.
1.ಆಗಂತುಕ
2. ಶಾರೀರ
3. ಮಾನಸ
4. ಸ್ವಾಭಾವಿಕ
1.ಅಪಘಾತದಿಂದ ಉಂಟಾಗುವ ರೋಗವು ಆಗಂತುಕ.
2. ಆಹಾರ ಪಾನೀಯಗಳ ದೋಷದ ಕಾರಣ ವಾತ ಪಿತ್ತ ಕಫ ಶೋಣಿತಾದಿಗಳ ವೈಷಮ್ಯದಿಂದ ಉಂಟಾಗುವುದು ಶಾರೀರ.
ಕೋಪ ದುಃಖ ಭಯ ಈರ್ಷ್ಯೆ ಮಾತ್ಸರ್ಯ ಕಾಮ ಲೋಭ ಮುಂತಾದವುಗಳು ಮಾನಸವ್ಯಾಧಿಗಳು.
ಹಸಿವು, ಬಾಯಾರಿಕೆ, ಮುಪ್ಪು, ನಿದ್ರೆ ಮೊದಲಾದವುಗಳು ಸ್ವಾಭಾವಿಕವ್ಯಾಧಿಗಳು.
ಇವುಗಳು ಒಟ್ಟಾಗಿ ಕೆಲವು ಜನ್ಮಾಂತರಗಳಿಂದಲೂ ಕೆಲವು ಕರ್ಮಗಳಿಂದಲೂ ಕೆಲವು ಎರಡರಿಂದಲೂ ಉಂಟಾಗುತ್ತವೆ.
ಜನ್ಮಾಂತರದಿಂದ ಬಂದ ರೋಗವು ಆದಿ ಎನೆಸಿದರೆ ಈ ಜನ್ಮದಿಂದ ಮಾಡಿದ ಕರ್ಮದಿಂದ ಬಂದ ರೋಗಕ್ಕೆ ವ್ಯಾಧಿ ಎನ್ನುತ್ತಾರೆ.
ವ್ಯಾಧಿಃ ತಪ್ಯತೇ ಎನ್ನುವ ಶೃತಿ ವಾಕ್ಯದಂತೆ ವ್ಯಾಧಿಯು ಒಂದು ತಪ್ಪಸ್ಸ.
ಶ್ರೀವಿಜಯದಾಸಾರ್ಯರು ರೋಗಾನುಭವವೆಲ್ಲಾ ಉಗ್ರ ತಪವು ಎಂದು ಹೇಳಿದ್ದಾರೆ. ತಪ ಶಬ್ಧದ ನೋಡುವುದಾದರೆ
ತಪ ಅಂದರೆ ಮೊದಲ ಅರ್ಥ ತಪ ಸಂತಾಪೇ ಅಂತ ಒಂದು ಅರ್ಥ. ಅಂದರೆ ತಾಪವನ್ನುಂಟುಮಾಡುವುದು, ಸುಡುವುದು ಅಂತ.
ಎರಡನೆಯ ಅರ್ಥ ತಪ ಅಂದರೆ ತಪ ಐಶ್ವರ್ಯೇ ಅಂದರೆ ದೇಹವನ್ನು ನಿಯಮದಿಂದ ದಂಡಿಸಿ ತಪಸ್ಸು/ಧ್ಯಾನ ಮಾಡುವುದು.
ಮೂರನೆಯ ಅರ್ಥ ತಪ- ದಾಹೇ ಅಂದರೆ ದಹಿಸು, ಸುಡು.
ನಾಲ್ಕನೆಯ ಅರ್ಥ ತಪ-ಆಲೋಚನ ಅಂದರೆ ವಿಚಾರ ಮಾಡುವುದು, ಮನನ ಮಾಡುವುದು.
ತಪ ಶಬ್ಧಕ್ಕೆ ಹೀಗೆ ನಾನಾ ಅರ್ಥಗಳು.
ಅನುಭವ ಎಂದರೆ ಬುದ್ಧಿ, ಜ್ಞಾನ, ತಿಳುವಳಿಕೆ, ಮನವರಿಕೆಯಾದದ್ದು, ಮನಸ್ಸಿಗೆ ಚೆನ್ನಾಗಿ ತಿಳಿದಿರುವುದು ಹೀಗೆ ಅನೇಕಾರ್ಥಗಳಿವೆ.
ಕಲಿಯುಗದಲ್ಲಿ ಸಾಧನೆ ಮಾಡುವುದೇ ದೊಡ್ಡ ಕಷ್ಟ. ಅದರಲ್ಲಿಯೂ ತಪಸ್ಸಂತೂ ಅಸಾಧ್ಯವೇ ಸರಿ. ಮನುಷ್ಯನಿಗೆ ರೋಗ ಬಂದಾಗ ಎಲ್ಲೂ ಹೋಗದೇ ಒಂದೇ ಕಡೆ ಇರ್ತ್ತಾನೆ. ಆ ಸಮಯವನ್ನಾದರೂ ತಪಸ್ಸೂ ಎಂದು ಅನುಸಂಧಾನ ಮಾಡು, ಆ ರೀತಿ ಮಂಚದ ಮೇಲೆ ಮಲಗಿಯಾದರೂ ಬಿಡದೇ ಪರಮಾತ್ಮನ ಸ್ಮರಣೆ ಮಾಡಿ ಎಂದು ಶ್ರೀವಿಜಯಪ್ರಭುಗಳು ನಮಗೆ ತಿಳಿಸಿಕೊಡ್ತಾರೆ...
ರೋಗ ಬಂದ ಸಮಯದಲ್ಲಿ ಹೀಗಾಯಿತಲ್ಲವೇ. ಎದ್ದು ನಡಿಯೋಕ್ಕೆ ಆಗ್ತಿಲ್ಲ, ಕುಳಿತು ಸಂಧ್ಯಾವಂದನಾದಿ ಪೂಜೆಗಳೂ ಆಗುತ್ತಿಲ್ಲ. ಊಟ ಸರಿಯಾಗಿ ಹೋಗುತ್ತಿಲ್ಲ. ಏನೂ ಕೆಲಸಮಾಡುತ್ತಿಲ್ಲ ಎಂದು ದಿಗಿಲಾಗಿ ಕುಳಿತು ಬಂದರೋಗದ ಕುರಿತೇ ಚಿಂತೆ ಮಾಡುತ್ತಿಲಿರಬಾರದು ಆ ಬಂದ ರೋಗವನ್ನೂ ತಪಸ್ಸನ್ನಾಗಿ ಬದಲಾಯಿಸಿಕೊಳ್ಳಬೇಕು ಎಂದು ಹೇಳುತ್ತಾರೆ ನಮ್ಮ ಶ್ರೀ ವಿಜಯಪ್ರಭುಗಳು. ಅಂದರೆ ಇದ್ದ ಸ್ಥಿತಿಯಲ್ಲೇ ಭಗವಂತನ ಭಗವದ್ಭಕ್ತರ ಕುರಿತು ಶ್ರವಣ ಮಾಡಿದ ಚರಿತ್ರೆಗಳು, ಮಹಿಮೆಗಳ ಚಿಂತನೆ, ಅವರ ಕುರಿತು ಇರುವ ಕೃತಿ, ಸುಳಾದಿಗಳ ಪಾರಾಯಣಗಳನ್ನು ಮಾಡುವುದೂ ಕೂಡ ತಪಸ್ಸೇ. ಈ ತಪಸ್ಸನ್ನು ಮಾಡಿದರೆ ಮತ್ತೊಂದು ತಪದ ಪರಿಣಾಮ ಆಗುತ್ತದೆ. ಅಂದರೆ ನಮ್ಮ ಪಾಪಗಳು ಸುಡುತ್ತವೆ.
ರೋಗಬಂದಾಗ ಅದರದ್ದೇ ಯೋಚನೆಯನ್ನ ಬಿಟ್ಟು, ಸಂಸಾರದಲ್ಲಿ ಬಿದ್ದಾಗ, ಆ ಕೆಲಸ ಈ ಕೆಲಸ ಎಂದು ಓಡಾಡುತ್ತಿದ್ದೇನೆ. ಅಂತದ್ದರಲ್ಲಿ ಈ ರೋಗ ಬಂದಿದೆ. ಮಲಗೇ ಇರುವ ಪರಿಸ್ಥಿತಿ ಬಂದಿದೆ ಸ್ವಾಮೀ. ಇದೆಲ್ಲವೂ ನಿನ್ನ ಪ್ರಸಾದವೆ ಎಂದು ಪರಮಾತ್ಮನನ್ನು ನೆನೆದು. ಮಲಗಿದ್ದ ಜಾಗದಲ್ಲಿಯೇ ಭಗವಂತನ ಧ್ಯಾನ, ಪರಮಾತ್ಮನ ಕಥೆಗಳ ಶ್ರವಣ .ಚಿಂತನೆ, ಸ್ಮರಣೆ ಮಾನಸಿಕವಾಗಿಯೇ ಮಾಡುತ್ತೇವಲ್ವಾ ಅದೇ ತಪಸ್ಸು. ಇದರ ದೃಷ್ಟಾಂತವೆಂದರೆ ದಶರಥಮಹಾರಾಜರು ರಾಮಚಂದ್ರದೇವರ ವಿಯೋಗದಿಂದ ಮರಣವನ್ನು ಸಮೀಪಿಸುತ್ತಾರೆ. ಆರುದಿವಸದಕಾಲ ಅವರು ಶ್ರೀರಾಮದೇವರ ಚಿಂತನೆಯನ್ನು ಮಾಡುತ್ತ ಬದುಕಿದ್ದಾಗ ಪಟ್ಟ ನೋವನ್ನೆಲ್ಲವನ್ನೂ ಕಳೆದುಕೊಳ್ಳುತ್ತಾರೆ.ವಾಲ್ಮೀಕಿಮಹರ್ಷಿಗಳು ಇದನ್ನು ದಾಖಲಿಸುತ್ತಾರೆ.
ಭೀಷ್ಮಾಚಾರ್ಯರಿಗೆ ಒಂದೊಂದು ರೋಮಕ್ಕೂ ಅರ್ಜುನನಲ್ಲಿಯ ಬ್ರಹ್ಮದೇವರ ಬತ್ತಳಿಕೆಯಲ್ಲಿಯ ಬಾಣಗಳು ನೆಟ್ಟಿವೆ. ಆ ಸ್ಥಿತಿಯಲ್ಲಿಯೂ ಸಹ ನೋವನ್ನು ಸಹಿಸುತ್ತಾ ಪಾಂಡವರಿಗೆ ಉಪದೇಶಗಳನ್ನು ಮಾಡಿದರು. ಇದೇ ನಿಜವಾದ ತಪ ಆಲೋಚನೆ.
ಹಾಗೆಯೇ ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಎನ್ನುವ ಕೃತಿಯಿಂದ ಪರಮಾತ್ಮನನ್ನು ಸ್ತುತಿಮಾಡುವ ಮೂಲಕ ಶ್ರೀ ಗೋಪಾಲದಾಸಾರ್ಯರು ಶ್ರೀ ಜಗನ್ನಾಥದಾಸಾರ್ಯರ ಉದರಶೂಲಿಯನ್ನು ನಿರ್ಮೂಲ ಮಾಡಿದ್ದನ್ನು ಕೇಳುತ್ತೇವೆ. ಹೀಗೆ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದ್ದವೆ. ಶ್ರೀ ಶೇಷದಾಸಾರ್ಯರು ತಮ್ಮ ಶಿಷ್ಯರ ರೋಗಪರಿಹಾರಕ್ಕಾಗಿ ಆಪತ್ತು ಪರಿಹಾರ ಉಗಾಭೋಗಗಳನ್ನು ರಚಿಸಿದ್ದೂ ನೋಡುತ್ತೇವೆ. ರೋಗನೀಡಿದ್ದವನೇ ಪರಿಹಾರಮಾಡುತ್ತಾನೆ ಎಂದು ಆತನನ್ನೇ ಸ್ಮರಿಸಿದ್ದಲ್ಲಿ ರೋಗದಿಂದ ಕಿಂಚಿತ್ ಉಪಶಮನವಾದರೂ ಆಗುತ್ತದೆ. ಶ್ರೀ ಹುಚ್ಚಾಚಾರ್ಯರ ಜೀವನದಲ್ಲಿಯೂ ನೋಡಿದ್ದೇವೆ. ಅವಸಾನಕಾಲದಲ್ಲಿ ಶ್ರೀ ಹುಚ್ಚಾಚಾರ್ಯರು ಶಿಷ್ಯರನ್ನು ಕರಿಸಿ ಭಗವಂತನ ಚಿಂತನೆ ಮಾಡಿಸಿ ಸುಖಪಡುತ್ತಿದ್ದರಂತೆ ಹೊರತು ಕಣ್ಣು ಕಾಣುತ್ತಿಲ್ಲ, ನಡಿಯಲಾಗುತ್ತಿಲ್ಲ ಹೀಗೆಲ್ಲ ಚಿಂತೆಯೇ ಪಡಲಿಲ್ಲ ಅವರು. ಹಾಗೆಯೇ ಶ್ರೀ ಗುರುಗೋವಿಂದವಿಠಲ ದಾಸಾರ್ಯರು ತಮ್ಮ ಕೊನೆಯ ಕಾಲದಲ್ಲಿ ಭಗವದ್ಭಕ್ತರು ತಮ್ಮನ್ನು ನೋಡಲು ಬಂದಾಗ ಅವರಿಂದ ಕೃತಿಗಳನ್ನು ಕೇಳಿ ಶ್ರವಣ ಮಾಡುತ್ತಿದ್ದರಂತೆ. ತಾಯಿ ಹರಪನಳ್ಳಿ ಭೀಮವ್ವನವರ ದೀರ್ಘಕೃತಿಯನ್ನು ಪೂರ್ಣ ಕೇಳಿ ಆಲಿಸಿ ಆನಂದಪಡುತ್ತಿದ್ದರಂತೆ. ಹೀಗೆ ಮಹಾನುಭಾವರ ಚರಿತ್ರೆಗಳು ದೃಷ್ಟಾಂತವಾಗಿ ನಿಲ್ಲುತ್ತವೆ.
ಹೀಗಾಗಿ ರೋಗವನ್ನು ತಪವನ್ನಾಗಿ ಮಾಡಿಕೊಂಡು ಭಗವತ್ ಚಿಂತನೆಯಲ್ಲಿ ಯಾರು ಕಳೆಯುತ್ತಾರೆಯೋ ಅವರನ್ನು ಪರಮಾತ್ಮ ಕಾರುಣ್ಯದಿಂದ ನೋಡುತ್ತಾನೆ ಎಂಬುದನ್ನು ಹೇಳುತ್ತಾ...
ವ್ಯಾಧಿ ಬಾರದೋ ದೇಹಬಾಧೆ ತಟ್ಟದೋ
ಆದಿದೇವನ ಸುಪ್ರಸಾದವಾಹುದೋ
ಶ್ರೀ ಕಲ್ಲೂರು ಸುಬ್ಬಣಾಚಾರ್ಯರು ಪರಮಾದ್ಭುತವಾಗಿ ಒಂದೇಮಾತಿನಲ್ಲಿ ಹೇಳಿಬಿಟ್ಟಿದ್ದಾರೆ. ಹರಿಗುರುಸ್ಮರಣೆ ಮಾಡಿದ್ದಲ್ಲಿ ರೋಗವೇ ಬರುವುದಿಲ್ಲ. ಅಕಸ್ಮಾತ್ ಬಂದರೂ ಸಹ ಶ್ರೀವಿಜಯಪ್ರಭುಗಳನ್ನು ಆಶ್ರಿಯಿಸಿದಾಗ ಆ ರೋಗದ ಬಾಧೆಯೂ ಇರುವುದಿಲ್ಲ ಎಂದು. ಕಷ್ಟ, ರೋಗ ಬಂದಾಗ ಜೈ ವಿಜಯರಾಯ, ಜೈ ವಿಜಯರಾಯ, ಜೈ ವಿಜಯರಾಯ. ಅಂತ ಸ್ಮರಣೆ ಮಾಡೋಣ.
ಆ ರೋಗ, ಕಷ್ಟ ಖಂಡಿತ ದೂರವಾಗುತ್ತದೆ. ಇದು ಅನುಭವಸಿದ್ಧಮಾತು. ರೋಗಬಾರದಂತೆ ಹರಿಗುರುಸ್ಮರಣೆ ಮಾಡೋಣ. ರೋಗಬಂದರೆ ಅದು ಕರ್ಮಾನುಸಾರೇಣ ಎಂದು ತಿಳಿದು, ಆ ರೋಗದ ಸಮಯವನ್ನೂ ಭಗವತ್ ಚಿಂತನೆಯಲ್ಲಿ ಕಳೆಯೋಣ, ಕಳೆಯುವಂತೆ ಮನೋನಿಯಾಮಕರಾದ ಶ್ರೀ ರುದ್ರದೇವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಭೈಷ್ಮೀಸತ್ಯಾ ಸಮೇತ ಶ್ರೀ ಕೃಷ್ಣಪರಮಾತ್ಮನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..
ಜೈ ವಿಜಯರಾಯ
by smt. padma sirish
***
No comments:
Post a Comment