SEARCH HERE

Friday 9 April 2021

ಪ್ರಶ್ನೋತ್ತರಮಾಲಿಕಾ - ಶಂಕರ ಭಗವತ್ಪಾದರವರಿಂದ prashnottara malika by shankaracharya


ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ
ಪ್ರಶ್ನೋತ್ತರಮಾಲಿಕಾ , ಬದುಕಿನಲ್ಲಿ ಏನನ್ನು
ಮಾಡಬೇಕು , ಏನನ್ನು ಮಾಡಬಾರದೆಂದು ಬಹಳ
ಸುಂದರ , ಸರಳವಾಗಿ ತಿಳಿಸುತ್ತದೆ..
ಈ ಲೇಖನವನ್ನು ತಪ್ಪದೇ ಓದಿ..
ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..?
ಪೂಜ್ಯರೇ ಜೀವನದಲ್ಲಿ
ಏನನ್ನು ಅನುಸರಿಸಬೇಕು ?
ಉತ್ತರ - *ಗುರುವಚನಮ್*
ಜೀವನದಲ್ಲಿ ಗುರು-ಹಿರಿಯರ
ಮಾತನ್ನು ಅನುಸರಿಸಬೇಕು.
ಪ್ರಶ್ನೆ - ಕಃ ಪಥ್ಯತರಃ ?
ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ?
ಉತ್ತರ - *ಧರ್ಮಃ*
ಧರ್ಮವೇ ಹಿತಕರವಾದದ್ದು.
ಪ್ರಶ್ನೆ - ಕಿಮ್ ವಿಷಮ್ ?
ಯಾವುದು ವಿಷ ?
ಉತ್ತರ - *ಅವಧೀರಣಾ ಗುರುಷು*
ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ.
ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ?
ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ
ಯಾವುದು ?
ಉತ್ತರ - *ಸ್ವಪರಹಿತಾಯ ಉದ್ಯತಂ ಜನ್ಮ* ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ
ಜೀವನವನ್ನು ತೊಡಗಿಸಿಕೊಳ್ಳುವುದು.
ಪ್ರಶ್ನೆ - ಕೇ ಚ ದಸ್ಯವಃ ?
ಕಳ್ಳರು ಯಾರು ?
ಉತ್ತರ - *ವಿಷಯಾಃ*
ಸುಖಪಭೋಗ
ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ
ಮನಸನ್ನು
ಅಪಹರಿಸುತ್ತವೆ )
ಪ್ರಶ್ನೆ - ಕೋ ವೈರೀ ?
ನಮ್ಮ ಶತ್ರು ಯಾರು ?
ಉತ್ತರ - *ಯಸ್ತು ಅನುದ್ಯೋಗಃ*
ನಿರುದ್ಯೋಗವೇ ನಮ್ಮ ಶತ್ರು.
ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ?
ಶ್ರೇಷ್ಠತೆಯ ಮೂಲ ಯಾವುದು ?
ಉತ್ತರ - *ಯತ್ ಏತತ್ ಅಪ್ರಾರ್ಥನಮ್ ನಾಮ* ಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ
ಶ್ರೇಷ್ಠತೆ
ಪ್ರಶ್ನೆ - ಕಿಮ್ ದುಃಖಮ್ ?
ದುಃಖವೆಂದರೇನು..?
ಉತ್ತರ - *ಅಸಂತೋಷಃ*
ಸಂತೋಷವನ್ನು ಕಳೆದುಕೊಂಡಾಗಿನ ಅವಸ್ಥೆ.
ಪ್ರಶ್ನೆ - ಕಿಮ್ ಜಾಡ್ಯಮ್ ?
ಆಲಸ್ಯತನವು ಯಾವುದು ?
ಉತ್ತರ - *ಪಾಠತೋSಪಿ ಅನಭ್ಯಾಸಃ*
ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು , ಅಧ್ಯಯನ
ಮಾಡದಿರುವುದು.
ಪ್ರಶ್ನೆ - ನಲಿನೀ-ದಲ-ಗತ-ಜಲವತ್-ತರಲಂ 
ಕಿಮ್ ?
ಕಮಲದ ಎಲೆಯ ಮೇಲಿನ ನೀರಿನಂತೆ
ಚಂಚಲವಾದದ್ದು ಯಾವುದು ?
ಉತ್ತರ - *ಯೌವ್ವನಂ - ಧನಂ ಚ ಆಯುಃ*
ತಾರುಣ್ಯ,ಸಂಪತ್ತು ಮತ್ತು ಆಯುಷ್ಯ
ಇವು ಕಮಲದ ಎಲೆ ಮೇಲಿನ ನೀರಿನಂತೆ
ಚಂಚಲವಾದವುಗಳು.
ಪ್ರಶ್ನೆ - ಕಿಮ್ ಚ ಅನರ್ಘಮ್ ?
ಬೆಲೆ ಕಟ್ಟಲಾಗದ್ದು ಯಾವುದು ?
ಉತ್ತರ - *ಯದವಸರೇ ದತ್ತಮ್*
ಸರಿಯಾದ ಸಮಯದಲ್ಲಿ ಸತ್ಪಾತ್ರರಿಗೆ ದಾನ ಮಾಡಿದ್ದು.
ಪ್ರಶ್ನೆ - ಆಮರಣಾತ್ ಕಿಮ್ ಶಾಲ್ಯಮ್ ?
ಸಾಯುವವರೆಗೂ ಬಾಣದಂತೆ
ಚುಚ್ಚುತ್ತಲೇ ಇರುವುದು ಯಾವುದು ?
ಉತ್ತರ - *ಪ್ರಚ್ಛನ್ನಂ ಯತ್ ಕೃತಂ ಪಾಪಮ್*
ಬಚ್ಚಿಟ್ಟುಕೊಂಡ ಪಾಪಕಾರ್ಯ
ಸಾಯುವವರೆಗೂ ಬಾಣದಂತೆ
ಚುಚ್ಚತ್ತಲೇ ಇರುತ್ತದೆ .
ಪ್ರಶ್ನೆ - ಕುತ್ರ ವಿಧೇಯೋ ಯತ್ನಃ ?
ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ?
ಉತ್ತರ - *ವಿದ್ಯಾಭ್ಯಾಸೇ ಸದೌಷಧೇ ದಾನೇ*
ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ
ಮತ್ತು ದಾನ ಮಾಡುವಲ್ಲಿ ಪ್ರಯತ್ನ
ಮಾಡಬೇಕು..
ಪ್ರಶ್ನೆ - ಕೇನ ಜಿತಂ ಜಗದೇತತ್ ?
ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ?
ಉತ್ತರ - *ಸತ್ಯ-ತಿತಿಕ್ಷಾವತಾ ಪುಂಸಾ*
ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು ಈ
ಜಗತ್ತನ್ನು ಗೆಲ್ಲುತ್ತಾನೆ.
ಪ್ರಶ್ನೆ - ಕಸ್ಯ ವಶೇ ಪ್ರಾಣಿಗಣಃ ?
ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?
ಉತ್ತರ - *ಸತ್ಯ-ಪ್ರಿಯಭಾಷಿಣೋ ವಿನೀತಸ್ಯ*
ಪ್ರಾಣಿ
ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ
ವಿನಯಶಾಲಿಯ ವಶದಲ್ಲಿ ಇರುತ್ತದೆ.
ಪ್ರಶ್ನೆ - ಕ್ವ ಸ್ಥಾತವ್ಯಮ್ ?
ಎಲ್ಲಿ ಸ್ಥಿರವಾಗಿ ನಿಲ್ಲಬೇಕು ?
ಉತ್ತರ - *ನ್ಯಾಯ್ಯೇ ಪಥಿ ದೃಷ್ಟ - ಅದೃಷ್ಟ -*
*ಲಾಭಾಢ್ಯೇ*
ದೃಷ್ಟ ಮತ್ತು ಅದೃಷ್ಟ
(ಕಂಡು ಕಾಣದ )ಲಾಭದಿಂದ ಸಮೃದ್ಧವಾದ
ನ್ಯಾಯಯುತವಾದ
ಮಾರ್ಗದಲ್ಲಿ ಸದಾ ನಿಲ್ಲಬೇಕು.
ಪ್ರಶ್ನೆ - ಕಿಮ್ ದಾನಮ್ ?
ದಾನವು ಯಾವುದು ?
ಉತ್ತರ - *ಅನಾಕಾಂಕ್ಷಮ್*
ಪ್ರತಿಫಲವನ್ನು ಬಯಸದೇ ಮಾಡಿದ
ದಾನವೇ ನಿಜವಾದ ದಾನವು .
ಪ್ರಶ್ನೆ - ಕಿಮ್ ಮಿತ್ರಮ್ ?
ನಿಜವಾದ ಮಿತ್ರನು ಯಾರು ?
ಉತ್ತರ - *ಯೋ ನಿವಾರಯತಿ ಪಾಪಾತ್*
ಪಾಪ ಕಾರ್ಯಗಳನ್ನು ಮಾಡದಂತೆ
ತಡೆಯುವನು ನಿಜವಾದ ಮಿತ್ರನು.
ಪ್ರಶ್ನೆ - ಕಿಮ್ ಶೋಚ್ಯಮ್ ?
ದುಃಖಕರವಾದುದು ಯಾವುದು ?
ಉತ್ತರ - *ಕಾರ್ಪಣ್ಯಮ್*
ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು..
ಪ್ರಶ್ನೆ - ಕಃ ಪರಿಹರ್ಯೋ ದೇಶಃ ?
ಎಂತಹ ದೇಶದಿಂದ ದೂರ ಇರಬೇಕು ?
ಉತ್ತರ - *ಪಿಶುನಯುತೋ ಲುಬ್ಧಭೂಪಶ್ಚ*
ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ
ರಾಜನುಳ್ಳ ದೇಶವನ್ನು ತೊರೆಯಬೇಕು.
ಪ್ರಶ್ನೆ - ಇಹ ಭುವನೇ ಕೋ ಶೋಚ್ಯಃ ?
ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ?
ಉತ್ತರ - *ಸತ್ಯಪಿ ಭುವನೇ ಯೋ ನ ದಾತಾ*
ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ.
ಪ್ರಶ್ನೆ - ಕಿಮಹರ್ನಿಶಂ ಅನುಚಿಂತ್ಯಮ್ ?
ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?
ಉತ್ತರ - *ಭಗವಚ್ಚರಣಮ್ ನ ಸಂಸಾರಃ*
ಹಗಲಿರುಳು ಪರಮಾತ್ಮನ ಚರಣದ ಚಿಂತೆ
ಮಾಡಬೇಕೇ ವಿನಃ ಸಂಸಾರವನ್ನಲ್ಲ .
ಪ್ರಶ್ನೆ - ಕಿಮ್ ಸಂಪಾದ್ಯಂ ಮನುಜೈಃ ?
ಮಾನವರು ಏನನ್ನು ಸಂಪಾದಿಸಬೇಕು ?
ಉತ್ತರ - *ವಿದ್ಯಾ , ವಿತ್ತಮ್ , ಬಲಂ , ಯಶಃ, ಪುಣ್ಯಮ್*
ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ
ಮತ್ತು ಪುಣ್ಯಗಳನ್ನು ಸಂಪಾದಿಸಬೇಕು .
ಪ್ರಶ್ನೆ - ಕಃ ಸರ್ವಗುಣವಿನಾಶೀ ?
ಎಲ್ಲ
ಗುಣಗಳನ್ನು ನಾಶಪಡಿಸುವಂಥಹದು ಯಾವುದು ?
ಉತ್ತರ - *ಲೋಭಃ*
ಲೋಭವು ಸರ್ವ ಗುಣಗಳನ್ನು ನಾಶ
ಪಡಿಸುವಂತಹದು.
ಪ್ರಶ್ನೆ - ಶತ್ರುಶ್ಚ ಕಃ ?
ವೈರಿಯು ಯಾರು ?
ಉತ್ತರ - *ಕಾಮಃ*
ಕಾಮವೇ ವೈರಿಯು .
ಪ್ರಶ್ನೆ - ಕಾ ಸುರಕ್ಷ್ಯಾ
ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ?
ಉತ್ತರ - *ಕೀರ್ತಿಃ , ಪತಿವ್ರತಾ , ನೈಜಬುದ್ಧಿಶ್ಚ*
ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ
ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ .
ಪ್ರಶ್ನೆ - ಕಾ ಕಲ್ಪವೃಕ್ಷಃ ಲೋಕೇ ?
ಜಗತ್ತಿನ್ನಲ್ಲಿ ಕಲ್ಪವೃಕ್ಷ ಯಾವುದು ?
(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ವೃಕ್ಷ)
ಉತ್ತರ - *ಸಚ್ಛಿಷ್ಯಾರ್ಪಿತ ವಿದ್ಯಾ*
ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು
ಜಗತ್ತಿನಲ್ಲಿ ಕಲ್ಪವೃಕ್ಷವಾಗುತ್ತದೆ.
ಪ್ರಶ್ನೆ - ಪಾತಕಂ ಚ ಕಿಮ್ ?
ಪಾತಕವು ಯಾವುದು ?
ಉತ್ತರ - *ಹಿಂಸಾ*
ಹಿಂಸೆಯೇ(ಕ್ರೂರತೆ) ಪಾತಕವು.
ಪ್ರಶ್ನೆ - ಸಂಭಾವಿತಸ್ಯ ಮರಣಾತ್ ಅಧಿಕಂ ಕಿಮ್ ?
ಒಳ್ಳೆಯವನಿಗೆ ಸಾವಿಗಿಂತಲೂ
ಹೆಚ್ಚು ದುಃಖದಾಯಕ ಯಾವುದು ?
ಉತ್ತರ - *ದುರ್ಯಶೋ ಭವತಿ*
ಅಪಕೀರ್ತಿಯು ಮರಣಕ್ಕಿಂತಲೂ
ಹೆಚ್ಚು ದುಃಖದಾಯಕ.
ಪ್ರಶ್ನೆ - ಕೋ ವರ್ಧತೇ ?
ಯಾರು ಪ್ರಗತಿ ಯನ್ನು ಹೊಂದುತ್ತಾರೆ ?
ಉತ್ತರ - *ವಿನೀತಃ*
ವಿನಮ್ರ ನಾದವನು (ವಿನಯಶಾಲಿಯು )
ಪ್ರಗತಿಯನ್ನು ಹೊಂದುತ್ತಾನೆ .
ಪ್ರಶ್ನೆ - ಕಿಮ್ ಭಾಗ್ಯಂ ದೇಹವತಾಮ್ ?
ದೇಹಿಗಳಿಗೆ (ಮನುಷ್ಯರಿಗೆ)
ಭಾಗ್ಯವು ಯಾವುದು ?
ಉತ್ತರ - *ಆರೋಗ್ಯಮ್*
ಆರೋಗ್ಯವೇ ಭಾಗ್ಯವು .
ಪ್ರಶ್ನೆ - ಕೋ ಜಗದ್ಭರ್ತಾ ?
ಜಗತ್ತಿನ ಸಂರಕ್ಷಕನ್ಯಾರು ?
ಉತ್ತರ - *ಸೂರ್ಯಃ*
ಸೂರ್ಯ.
ಪ್ರಶ್ನೆ - ಸರ್ವೇಷಾಂ ಕೋ ಜೀವನಹೇತುಃ ?
ಎಲ್ಲರ ಬದುಕಿಗೆ ಕಾರಣನು ಯಾರು ?
ಉತ್ತರ - *ಸ ಪರ್ಜನ್ಯಃ*
ಪರ್ಜನ್ಯನು (ಮಳೆ ) ಎಲ್ಲರ ಬದುಕಿಗೆ ಕಾರಣನು .
ಪ್ರಶ್ನೆ - ಕಃ ಶೂರಃ ?
ಶೂರನು ಯಾರು ?
ಉತ್ತರ - *ಯೋ ಭೀತತ್ರಾತಾ*
ಭೀತನಾದವನನ್ನು ಕಾಪಾಡುವವನು ಶೂರನು .
ಪ್ರಶ್ನೆ - ತ್ರಾತಾ ಚ ಕಃ ?
ಮತ್ತೆ ಕಾಪಾಡುವವನು ಯಾರು ?
ಉತ್ತರ - *ಸ ಗುರುಃ*
ಗುರುವೇ ಕಾಪಾಡುವವನು.
ಪ್ರಶ್ನೆ - ಪ್ರತ್ಯಕ್ಷದೇವತಾ ಕಾ ?
ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ?
ಉತ್ತರ - *ಮಾತಾ*
ತಾಯಿಯೇ ಪ್ರತ್ಯಕ್ಷ ದೇವತೆಯು .
ಪ್ರಶ್ನೆ - ಪೂಜ್ಯೋ ಗುರುಶ್ಚ ಕಃ ?
ಪೂಜ್ಯ ಗುರುವು ಯಾರು ?
ಉತ್ತರ - *ತಾತಃ*
ತಂದೆಯೇ ಪೂಜ್ಯ ಗುರುವು .
ಪ್ರಶ್ನೆ - ಪಾತ್ರಂ ಕಿಮ್ ಅನ್ನದಾನೇ ?
ಅನ್ನದಾನಕ್ಕೆ ಅರ್ಹನಾರು ?
ಉತ್ತರ - *ಕ್ಷುಧಿತಮ್*
ಹಸಿದವನು ಅನ್ನದಾನಕ್ಕೆ ಅರ್ಹನು .
*ಲೋಕಾಃ ಸಮಸ್ತಾಃ ಸುಖಿನೋ ಭವಂತು.*
ಜೀವನದಲ್ಲಿ ಇಷ್ಟು ಪ್ರಶ್ನೆಗಳಿಗೆ ಉತ್ತರ
ಕಂಡುಕೊಂಡರೆ ಸಾಕು..
ತತ್ವಜ್ಞಾನವನ್ನರಿಯಲು
ಇನ್ನ್ಯಾವ ಶಾಸ್ತ್ರ-ಪುರಾಣಗಳ ಅಗತ್ಯತೆಯಿಲ್ಲ..


No comments:

Post a Comment