SEARCH HERE

Tuesday 1 January 2019

ವಿಷ್ಣುಪುರಾಣ vishnu purana karma bhoomi bharata india


ಶ್ರೀವಿಷ್ಣುಪುರಾಣ
ಸಂಚಿಕೆ - 404

ಶ್ರೀಮನ್ನಾರಾಯಣಾಯ ನಮ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
******
ದ್ವಿತೀಯಾಂಶ:

ದ್ವಾದಶೋಧ್ಯಾಯ:
******
ಜ್ಞಾನಂ ವಿಶುದ್ಧಂ ವಿಮಲಂ ವಿಶೋಕಮಶೇಷಲೋಭಾದಿನಿರಸ್ತ ಸಂಗಮ್|
ಏವಂ ಸದೇಕಂ ಪರಮ: ಪರೇಶ: ಸ ವಾಸುದೇವೋ ನ ಯತೋನ್ಯದಸ್ತಿ||44||

ಸದ್ಭಾವ ಏವಂ ಭವತೋ ಮಯೋಕ್ತೋ ಜ್ಞಾನಂ ಯಥಾ ಸತ್ಯಮಸತ್ಯಮನ್ಯತ್|
ಏತತ್ತು ಯತ್ ಸಂವ್ಯವಹಾರಭೂತಮ್ ತತ್ರಾಪಿ ಚೋಕ್ತಂ ಭುವನಾಶ್ರಿತಂ ತೇ||45||

ಯಜ್ಞ: ಪಶುರ್ವಹ್ನಿರಶೇಷಋತ್ವಿಕ್ ಸೋಮ: ಸುರಾ: ಸ್ವರ್ಗಮಯಶ್ಚ ಕಾಮ:|
ಇತ್ಯಾದಿಕರ್ಮಾಶ್ರಿತಮಾರ್ಗದೃಷ್ಟಂ ಭೂರಾದಿಭೋಗಾಶ್ಚ ಫಲಾನಿ ತೇಷಾಮ್||46||

ಯಚ್ಚೈತದ್ಭುವನಗತಂ ಮಯಾ ತವೋಕ್ತಂ ಸರ್ವತ್ರ ವ್ರಜತಿ ಹಿ ತತ್ರ ಕರ್ಮವಶ್ಯ:|
ಜ್ಞಾತ್ವೈವಂ ಧ್ರುವಮಚಲಂ ಸದೈಕರೂಪಂ ತತ್ ಕುರ್ಯಾದ್ವಿಶತಿ ಹಿ ಯೇನ ವಾಸುದೇವಮ್||47||

ಇತಿ ಶ್ರೀವಿಷ್ಣುಪುರಾಣೇ ದ್ವಿತೀಯೇಂಶೇ ದ್ವಾದಶೋಧ್ಯಾಯ:||

ಈ ವಿಜ್ಞಾನವು ಪರಿಶುದ್ಧವೂ ನಿರ್ಮಲವೂ  ಶೋಕರಹಿತವೂ ಆದದ್ದು. 
ಲೋಭಾದಿ ದೋಷರಹಿತವಾಗಿ ನಿ:ಸಂಗವಾದದ್ದು. 
ಹೀಗೆ ಸದ್ರೂಪವೂ ಏಕವೂ ಆದ ವಿಜ್ಞಾನವೇ ಪರಮನೂ ಪರೇಶನೂ ಆದ ವಾಸುದೇವ ಎನ್ನಿಸಿಕೊಂಡಿದೆ. 
ಆ ವಾಸುದೇವನಿಗಿಂತ ಬೇರೆ ಯಾವ ವಸ್ತುವೂ ಇಲ್ಲ. 

ಜ್ಞಾನ ಒಂದೇ ಸತ್ಯ, ಉಳಿದದ್ದು ಅಸತ್ಯ ಎಂಬ ಈ ಪರಮಾರ್ಥವನ್ನು ನಾನು ನಿನಗೆ ಹೇಳಿದ್ದೇನೆ. 
ಇನ್ನು ಕೇವಲ ವ್ಯವಹಾರ ಗೋಚರವಾಗಿ ಭುವನತ್ರಯದ ವಿಷಯವೇನುಂಟು ಅದನ್ನು ಕುರಿತು ಸಹ ಹೇಳಿದ್ದೇನೆ. 

ಅಲ್ಲದೇ ಕರ್ಮಮಾರ್ಗಕ್ಕೆ ಸಂಬಂಧಿಸಿದಂತೆ ಯಜ್ಞ, ಪಶು, ಅಗ್ನಿ, ಋತ್ವಿಜರು, ಸೋಮ, ದೇವತೆಗಳು, ಸ್ವರ್ಗರೂಪವಾದ ಕಾಮನೆ, ಈ ಕರ್ಮಗಳಿಗೆ ದೊರಕತಕ್ಕ ಭೂಲೋಕಾದಿ ಫಲಬೋಗಗಳು - ಇವೆಲ್ಲವನ್ನೂ ಹೇಳಿದ್ದೇನೆ. 

ಮೈತ್ರೇಯ, ಲೋಕಗತವಾದ ಯಾವ ಯಾವುದನ್ನು ಹೇಳಿದೆನೋ ಅದೆಲ್ಲವೂ ಕರ್ಮವನ್ನು ಮಾಡಿ ಕರ್ಮಾಧೀನನಾದವನಿಗೆ ಲಭಿಸತಕ್ಕದ್ದು. 
ಇದೆಲ್ಲವನ್ನೂ ಮಾನವನು ಸರಿಯಾಗಿ ತಿಳಿದುಕೊಂಡು (ಕರ್ಮಮಾರ್ಗದಿಂದ ವಿರಕ್ತನಾಗಿ), ಶಾಶ್ವತನೂ ಅಚಲನೂ ಸದಾ ಏಕರೂಪನೂ ಆದ ವಾಸುದೇವನಲ್ಲಿ ಸೇರಿ ಹೋಗುವುದು ಹೇಗೋ ಹಾಗೆ ಆಚರಿಸಬೇಕು. 

ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಹನ್ನೆರಡನೆಯ ಅಧ್ಯಾಯ ಮುಗಿಯಿತು. 
******

ಸಂಚಿಕೆ - 403

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ವಸ್ತ್ವಸ್ತಿ ಕಿಂ ಕುತ್ರ ಚಿದಾದಿಮಧ್ಯಪರ್ಯಂತಹೀನಂ ಸತತೈಕರೂಪಮ್|
ಯಚ್ಚಾನ್ಯಥಾತ್ವ ದ್ವಿಜ ಯಾತಿ ಭೂಯೋ ನ ತತ್ತಥಾ ತತ್ರ ಕುತೋ ಹಿ ತತ್ತ್ವಮ್||41||

ಮಹೀ ಘಟತ್ವಂ ಘಟತ: ಕಪಾಲಿಕಾ ಕಪಾಲಿಕಾ ಚೂರ್ಣರಜಸ್ತತೋಣು:|
ಜನೈ: ಸ್ವಕರ್ಮಸ್ತಿಮಿತಾತ್ಮನಿಶ್ಚಯೈರಾಲಕ್ಷ್ಯತೇ ಬ್ರೂಹಿ ಕಿಮತ್ರ ವಸ್ತು||42||

ತಸ್ಮಾನ್ನ ವಿಜ್ಞಾನಮೃತೇಸ್ತಿ ಕಿಂಚಿತ್ ಕ್ವಚಿತ್ಯದಾಚಿದ್ದ್ವಿಜ ವಸ್ತುಜಾತಮ್|
ವಿಜ್ಞಾನಮೇಕಂ ನಿಜಕರ್ಮಭೇದವಿಭಿನ್ನ ಚಿತ್ತೈರ್ಬಹುಧಾಭ್ಯುಪೇತಮ್||43||

ಮೈತ್ರೇಯ, ಆದಿ, ಮಧ್ಯ, ಅಂತಗಳಿಲ್ಲದೆ ಸತತವಾಗಿ ಏಕರೂಪನಾಗಿರುವ ಯಾವುದಾದರೊಂದು ಪದಾರ್ಥವು ಈ ಜಗತ್ತಿನಲ್ಲಿ ಎಲ್ಲಾದರೂ ಇದೆಯೇನು? 
ಯಾವುದು ಮೊದಲಿನಂತಿರದೆ ಪರಿಣಾಮ ಹೊಂದುತ್ತದೆಯೋ, ಆ ಮೇಲೆ ಇರುವುದೇ ಇಲ್ಲವೋ ಅದರಲ್ಲಿ ವಾಸ್ತವಿಕವಾದ ಸತ್ಯವೆಲ್ಲಿ ಇದ್ದೀತು? 

ನೋಡು, ಮೊದಲು ಮಣ್ಣು, ಆಮೇಲೆ ಗಡಿಗೆ, ಗಡಿಗೆಯಿಂದ ಕಪಾಲ, ಕಪಾಲ ಒಡೆದ ಪುಡಿ, ಪುಡಿಯಿಂದ ಪರಮಾಣು, ಇದೆಲ್ಲವೂ ತಮ್ಮ ಕರ್ಮಬಂಧಗಳಿಗೆ ಒಳಗಾಗಿ ಯಾರಿಗೆ ಆತ್ಮಜ್ಞಾನ ಉಂಟಾಗಿಲ್ಲವೋ ಆ ಜನರಿಗೆ ಗೋಚರಿಸುತ್ತದೆ. ಮಣ್ಣು ಮೊದಲಾದ ಈ ವಸ್ತುಗಳಲ್ಲಿ ಪರಮಾರ್ಥವಾದ ವಸ್ತು ಯಾವುದು? ಹೇಳು. 

ಆದ್ದರಿಂದ, ಮೈತ್ರೇಯ, ವಿಜ್ಞಾನದ ಹೊರತಾಗಿ ಇನ್ನೊಂದು ವಸ್ತು ಎಲ್ಲಿಯೂ ಇಲ್ಲ. ತಮ್ಮ ತಮ್ಮ ಕರ್ಮಾನುಗುಣವಾಗಿ ಚಿತ್ತಭೇದವುಳ್ಳ ಜನರಿಂದ ಒಂದೇ ವಿಜ್ಞಾನವು (ಘಟ, ವೃಕ್ಷ, ಮೃಗ, ಮನುಷ್ಯ) ಎಂದು ನಾನಾ ಪ್ರಕಾರವಾಗಿ ತಿಳಿಯಲ್ಪಡುತ್ತಿದೆ. 

********

🔯🔔 ಸಂಚಿಕೆ - 402🔔🔯
********

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ಯದಂಬು ವೈಷ್ಣವ: ಕಾಯಸ್ತತೋ ವಿಪ್ರ ವಸುಂಧರಾ|
ಪದ್ಮಾಕಾರಾ ಸಮುದ್ಭೂತಾ ಪರ್ವತಾಬ್ದ್ಯಾದಿ ಸಂಯುತಾ||37||

ಜ್ಯೋತೀಂಷಿ ವಿಷ್ಣುರ್ಭುವನಾನಿ ವಿಷ್ಣುರ್ವನಾನಿ ವಿಷ್ಣುರ್ಗಿರಯೋ ದಿಶಶ್ಚ|
ನದ್ಯ: ಸಮುದ್ರಾಶ್ಚ ಸ ಏವ ಸರ್ವಂ ಯದಸ್ತಿ ಯನ್ನಾಸ್ತಿ ಚ ವಿಪ್ರವರ್ಯ||38||

ಜ್ಞಾನಸ್ವರೂಪೋ ಭಗವಾನ್ಯತೋಸಾವಶೇಷಮೂರ್ತಿರ್ನ ತು ವಸ್ತುಭೂತ:|
ತತೋ ಹಿ ಶೈಲಾಬ್ಧಿಧರಾದಿಭೇದಾಂಜಾನೀಹಿ ವಿಜ್ಞಾನವಿಜೃಂಭಿತಾನಿ||39||

ಯದಾ ತು ಶುದ್ಧಂ ನಿಜರೂಪಿ ಸರ್ವಂ ಕರ್ಮಕ್ಷಯೇ ಜ್ಞಾನಮಪಾಸ್ತದೋಷಮ್|
ತದಾ ಹಿ ಸಂಕಲ್ಪತರೋ: ಫಲಾನಿ ಭವಂತಿ ನೋ ವಸ್ತುಷು ವಸ್ತುಭೇದಾ:||40||

ಭಗವಾನ್ ವಿಷ್ಣುವಿನ ಶರೀರವಾದ ಯಾವ ಜಲ ಉಂಟೋ, ಅದರಿಂದ ಪರ್ವತ, ಸಮುದ್ರಸಹಿತವಾದ ಕಮಲಾಕೃತಿಯ ಈ ಪೃಥ್ವಿ ಹುಟ್ಟಿದೆ. 

ಮೈತ್ರೇಯ, ಜ್ಯೋತಿಗಳೆಲ್ಲವೂ ವಿಷ್ಣು;
ಲೋಕಗಳೆಲ್ಲವೂ ವಿಷ್ಣು;
ವನಗಳೂ ವಿಷ್ಣು;
ಗಿರಿಗಳೂ ದಿಕ್ಕುಗಳೂ ವಿಷ್ಣುವೇ. 
ನದಿಗಳೂ ಸಮುದ್ರಗಳೂ ಎಲ್ಲವೂ ಆತನೇ; 
ಇರುವುದೂ, ಈಗ ಇಲ್ಲದಿರುವುದೂ ಎಲ್ಲವೂ ವಿಷ್ಣುವೇ. 

ಭಗವಾನ್ ವಿಷ್ಣು ಜ್ಞಾನಸ್ವರೂಪನಾಗಿದ್ದಾನೆ.
ಆದ್ದರಿಂದ ಆತನು ಸರ್ವವಸ್ತುಗಳ ರೂಪವನ್ನು ತಳೆದಿದ್ದಾನೆ ಅಷ್ಟೆ.
ವಿಷ್ಣುವು ಪರಿಚ್ಛಿನ್ನವಾದ ಒಂದು ವಸ್ತುವಲ್ಲ.
ಆದ್ದರಿಂದ, ಬೆಟ್ಟ, ಕಡಲು, ಭೂಮಿ ಮೊದಲಾದ ನಾನಾ ಭೇದಗಳೆಲ್ಲವೂ ವಿಜ್ಞಾನದ ವಿಜ್ರಂಭಣೆಗಳು ಮಾತ್ರ ಎಂದು ತಿಳಿ. 
(ವಿಜ್ಞಾನದ ವಿಜ್ರಂಭಣೆಗಳು = ಜ್ಞಾನಸ್ವರೂಪನಾದ ಭಗವಂತನ ಮಾಯಾ ಲೀಲೆಗಳು, ಅಜ್ಞಾನಕಲ್ಪಿತಗಳು.)

ಕರ್ಮಕ್ಷಯವಾದ ಮೇಲೆ ಯಾವನ ಪರಿಶುದ್ಧವೂ ಸತ್ಯವೂ ಸರ್ವಾತ್ಮಕವೂ ದೋಷರಹಿತವೂ ಆದ ಜ್ಞಾನ ಉದಯಿಸುವುದೋ, ಆಗ ಸಂಕಲ್ಪವೃಕ್ಷದ ಫಲಗಳಾದ ಈ ಪದಾರ್ಥಭೇದಗಳು ಯಾವುವೂ ಇರುವುದಿಲ್ಲ.‌

********


🔯🔔 ಸಂಚಿಕೆ - 401🔔🔯

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ವರುಣಾಶ್ಚಾರ್ಯಮಾ ಚೈವ ಪಶ್ಚಿಮೇ ತಸ್ಯ ಸಕ್ಥಿನೀ|ಶಿಶ್ನ: ಸಂವತ್ಸರಸ್ತಸ್ಯ ಮಿತ್ರೋಪಾನಂ ಸಮಾಶ್ರಿತ:||33||

ಪುಚ್ಛೇಗ್ನಿಶ್ಚ ಮಹೇಂದ್ರಶ್ಚ ಕಶ್ಯಪೋಥ ತತೋ ಧ್ರುವ:|
ತಾರಕಾ ಶಿಸುಮಾರಸ್ಯ ನಾಸ್ತಮೇತಿ ಚತುಷ್ಟಯಮ್||34||

ಇತ್ಯೇಷ ಸನ್ನಿವೇಶೋಯಂ ಪೃಥಿವ್ಯಾ ಜ್ಯೋತಿಷಾಂ ತಥಾ|
ದ್ವೀಪಾನಾಮುದಧೀನಾಂ ಚ ಪರ್ವತಾನಾಂ ಚ ಕೀರ್ತಿತ:||35||

ವರ್ಷಾಣಾಂ ನದೀನಾಂ ಚ ಯೇ ಚ ತೇಷು ವಸಂತಿ ವೈ|
ತೇಷಾಂ ಸ್ವರೂಪಮಾಖ್ಯಾತಂ ಸಂಕ್ಷೇಪ: ಶ್ರೂಯತಾಂ ಪುನ:||36||

ವರುಣ ಮತ್ತು ಆರ್ಯಮರು ಶಿಶುಮಾರದ ಹಿಂಗಾಲಿನ ತೊಡೆಗಳು. ಸಂವತ್ಸರವು ಅದರ ಶಿಶ್ನ. ಮಿತ್ರನು ಅದರ ಅಪಾನ ದೇಶದಲ್ಲಿ ಇದ್ದಾನೆ. 

ಶಿಶುಮಾರದ ಪುಚ್ಛ ಭಾಗದಲ್ಲಿ ಅಗ್ನಿ, ಮಹೇಂದ್ರ, ಕಶ್ಯಪ, ಮತ್ತು ಧ್ರುವ - ಎಂಬ ತಾರೆಗಳಿವೆ. ಈ ನಾಲ್ಕು ತಾರೆಗಳು ಯಾವಾಗಲೂ ಅಸ್ತವಾಗುವುದಿಲ್ಲ. 

ಈ ಪ್ರಕಾರವಾಗಿ ಪೃಥ್ವಿ, ಜ್ಯೋತಿಗಳು, ದ್ವೀಪಗಳು, ಸಮುದ್ರಗಳು, ಪರ್ವತಗಳು, ವರ್ಷಗಳು, ನದಿಗಳು ಮತ್ತು ಅಲ್ಲಲ್ಲಿ ವಾಸಮಾಡತಕ್ಕ ಜೀವಿಗಳು - ಇವೆಲ್ಲವುಗಳ ಸ್ವರೂಪವನ್ನು ಹೇಳಲಾಯಿತು. 
ಮೈತ್ರೇಯ, ಒಟ್ಟಿನಲ್ಲಿ ಇದರ ಸಂಕ್ಷೇಪವೇನೆಂಬುದನ್ನು ಕೇಳು. 

********


🔯🔔 ಸಂಚಿಕೆ - 400🔔🔯
********

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ಅಲಾತಚಕ್ರವದ್ಯಾಂತಿ ವಾತಚಕ್ರೇರಿತಾನಿ ತು|
ಯಸ್ಮಾಜ್ಜ್ಯೋತೀಂಷಿ ವಹತಿ ಪ್ರವಹಸ್ತೇನ ಸ ಸ್ಮೃತ:||28||

ಶಿಶುಮಾರಸ್ತು ಯ: ಪ್ರೋಕ್ತ: ಸ ಧ್ರುವೋ ಯತ್ರ ತಿಷ್ಠತಿ|
ಸನ್ನಿವೇಶಂ ಚ ತಸ್ಯಾಪಿ ಶೃಣುಷ್ವ ಮುನಿಸತ್ತಮ||29||

ಯದಹ್ನಾ ಕುರುತೇ ಪಾಪಂ ತಂ ದೃಷ್ಟ್ವಾ ನಿಶಿಮುಚ್ಯತೇ|
ಯಾವಂತ್ಯಶ್ಚೈವ ತಾರಾಸ್ತಾ: ಶಿಶುಮಾರಾಶ್ರಿತಾ ದಿವಿ||30||

ತಾವಂತ್ಯೇವ ತು ವರ್ಷಾಣಿ ಜೀವತ್ಯಭ್ಯಧಿಕಾನಿ ಚ|
ಉತ್ತಾನಪಾದಸ್ತಸ್ಯಾಥೋ ವಿಜ್ಞೇಯೋ ಹ್ಯುತ್ತರೋ ಹನು:||31||

ಯಜ್ಞೋಧರಶ್ಚ ವಿಜ್ಞೇಯೋ ಧರ್ಮೋ ಮೂರ್ಧಾನಮಾಶ್ರಿತ:|
ಹೃದಿ ನಾರಾಯಣಾಶ್ಚಾಸ್ತೇ ಅಶ್ವಿನೌ ಪೂರ್ವಪಾದಯೋ:||32||

ವಾಯುಚಕ್ರದಿಂದ ತಳ್ಳಲ್ಪಡುವ ಜ್ಯೋತಿಗಳು ಕೊಳ್ಳಿಯ ಚಕ್ರದಂತೆ ಸುತ್ತುತ್ತವೆಯಾದ್ದರಿಂದ ಆ ವಾಯುವಿಗೆ ಪ್ರವರವೆಂದು ಹೆಸರು. 

ಮೈತ್ರೇಯ, ಧ್ರುವನು ನೆಲೆಸಿರುವ ಶಿಶುಮಾರದ ಚಕ್ರದ ವಿಷಯವನ್ನು ಹಿಂದೆ ಹೇಳಿದೆನಷ್ಟೆ; ಶಿಶುಮಾರದ ಸಂನಿವೇಶವೇನೆಂಬುದನ್ನು ಆಲಿಸು.

ಯಾವ ರಾತ್ರಿ ಮಾನವನು ಶಿಶುಮಾರನನ್ನು ನೋಡುತ್ತಾನೋ ಅಂದಿನ ಹಗಲು ಆತನು ಮಾಡಿದ ಪಾಪದಿಂದ ಮುಕ್ತನಾಗುತ್ತಾನೆ. ‌
ಗಗನದಲ್ಲಿ ಎಷ್ಟು ತಾರೆಗಳಿವೆಯೋ ಅವೆಲ್ಲವೂ ಶಿಶುಮಾರವನ್ನು ಆಶ್ರಯಿಸಿಕೊಂಡಿವೆಯಷ್ಟೆ. 

ಆ ತಾರೆಗಳಷ್ಟು ದೀರ್ಘಕಾಲ ಆ ಮಾನವನು ಜೀವಿಸುತ್ತಾನೆ. 
ಉತ್ತಾನಪಾದ ನಕ್ಷತ್ರವು ಶಿಶುಮಾರದ ಮೇಲ್ದವಡೆ ಎಂದು ತಿಳಿಯಬೇಕು. 

ಯಜ್ಞನಕ್ಷತ್ರವು ಕೆಳದವಡೆ. 
ಧರ್ಮನಕ್ಷತ್ರವು ಶಿಶುಮಾರನ ಶಿರಸ್ಸನ್ನು ಆಶ್ರಯಿಸಿ ನಿಂತಿದೆ. 
ಹೃದಯದಲ್ಲಿ ನಾರಾಯಣನಿದ್ದಾನೆ. 
ಶಿಶುಮಾರನ ಎದುರಿನ ಎರಡು ಪಾದಗಳಲ್ಲಿ ಅಶ್ನಿನೀ ದೇವತೆಗಳಿದ್ದಾರೆ.‌

********


🔯🔔 ಸಂಚಿಕೆ - 399🔔🔯

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ತಥಾ ಕೇತುರಥಸ್ಯಾಶ್ವಾ ಅಪ್ಯಷ್ಟೌ ವಾತರಂಹಸ:|
ಪಲಾಲಧೂಮವರ್ಣಾಭಾ ಲಾಕ್ಷಾರಸನಿಭಾರುಣಾ:||23||

ಏತೇ ಮಯಾ ಗ್ರಹಾಣಾಂ ವೈ ತವಾಖ್ಯಾತಾ ರಥಾ ನವ|
ಸರ್ವೇ ಧ್ರುವೇ ಮಹಾಭಾಗ ಪ್ರಬದ್ಧಾ ವಾಯುರಶ್ಮಿಭಿ:||24||

ಗ್ರಹರ್ಕ್ಷತಾರಾಧಿಷ್ಣ್ಯಾನಿ ಧ್ರುವೇ ಬದ್ಧಾನ್ಯಶೇಷತ:|
ಭ್ರಮಂತ್ಯುಚಿತಚಾರೇಣ ಮೈತ್ರೇಯಾನಿಲರಶ್ಮಿಭಿ:||25||

ಯಾವಂತ್ಯಶ್ಚೈವ ತಾರಾಸ್ತಾಸ್ತಾವಂತೋ ವಾತರಶ್ಮಯ:|
ಸರ್ವೇ ಧ್ರುವೇ ನಿಬದ್ಧಾಸ್ತೇ ಭ್ರಮಂತೋ ಭ್ರಾಮಯಂತಿ ತಮ್||26||

ತೈಲಾಪೀಡಾ ಯಥಾ ಚಕ್ರಂ ಭ್ರಮಂತೋ ಭ್ರಾಮಯಂತಿ ವೈ|
ತಥಾ ಭ್ರಮಂತಿ ಜ್ಯೋತೀಂಷಿ ವಾತವಿದ್ಧಾನಿ ಸರ್ವಶ:||27||

ಕೇತುವಿಗೆ ವಾಯುವೇಗವುಳ್ಳ ಎಂಟು ಅಶ್ವಗಳಿವೆ. ಅವುಗಳಲ್ಲಿ ಕೆಲವು ಹೊಟ್ಟುಹುಲ್ಲಿನಂತೆ ಮಾಸಲು ಕಪ್ಪಾಗಿಯೂ ಕೆಲವು ಲಾಕ್ಷಾರಸದಂತೆ ಕೆಂಪಾಗಿಯೂ ಇವೆ. 

ಮೈತ್ರೇಯ, ಈ ರೀತಿಯಲ್ಲಿ ಗ್ರಹಗಳ ಒಂಬತ್ತು ರಥಗಳ ವಿಷಯವನ್ನು ನಾನು ನಿನಗೆ ಹೇಳಿದ್ದೇನೆ.‌ ಇವೆಲ್ಲವೂ ವಾಯುರಶ್ಮಿಗಳಿಂದ ಧ್ರುವನಕ್ಷತ್ರದಲ್ಲಿ ನಿಬದ್ಧವಾಗಿವೆ. 

ಮೈತ್ರೇಯ, ಸಮಸ್ತ ಗ್ರಹಗಳೂ ಅಶ್ವಿನ್ಯಾದಿ ನಕ್ಷತ್ರಗಳೂ ತಾರೆಗಳೂ ವಾಯುರಶ್ಮಿಗಳಿಂದ ಧ್ರುವನಲ್ಲಿ ಬಂಧಿಸಲ್ರಟ್ಟು ತಮಗೆ ಉಚಿತವಾದ ಗತಿಯಲ್ಲಿ ಸುತ್ತುತ್ತಿವೆ. 

ಈ ಬಗೆಯಲ್ಲಿ ಎಷ್ಟು ತಾರಾಗಣಗಳಿವೆಯೋ ಅಷ್ಟು ವಾಯುರಶ್ಮಿಗಳಿವೆ. ಅವೆಲ್ಲವೂ ಧ್ರವನಲ್ಲಿ ನಿಬದ್ಧವಾಗಿದ್ದು ಸ್ವಯಂ ತಿರುಗುತ್ತ ಧ್ರವನನ್ನೂ ತಿರುಗಿಸುತ್ತವೆ. 

ಎಣ್ಣೆಗಾಣ ತಿರುಗಿಸತಕ್ಕವರು ಸ್ವತ: ತಾವೂ ತಿರುಗುತ್ತ ಗಾಣದ ಚಕ್ರಗಳನ್ನು ಹೇಗೆ ತಿರುಗಿಸುತ್ತಾರೋ, ಹಾಗೆ ತಾರಾದಿ ಜ್ಯೋತಿಗಳು ವಾತರಶ್ಮಿಗಳಿಂದ ಬಂಧಿಸಲ್ಪಟ್ಟು ತಿರುಗುತ್ತವೆ. 

********

 
🔯🔔 ಸಂಚಿಕೆ - 398🔔🔯

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ಅಷ್ಟಾಭಿ: ಪಾಂಡುರೈರ್ಯಿುಕ್ತೋ ವಾಜಿಭಿ: ಕಾಂಚನೋ ರಥ:|
ತಸ್ಮಿಂಸ್ತಿಷ್ಠತಿ ವರ್ಷಾಂತೇ ರಾಶೌ ರಾಶೌ ಬೃಹಸ್ಪತಿ:||19||

ಆಕಾಶಸಂಭವೈರಶ್ವೈ: ಶಬಲೈ: ಸ್ಯಂದನಂ ಯುತಮ್|
ತಮಾರುಹ್ಯ ಶನೈರ್ಯಾತಿ ಮಂದಗಾಮೀ ಶನೈಶ್ವರ:||20||

ಸ್ವರ್ಭಾನೋಸ್ತುರಗಾ ಹ್ಯಷ್ಟೌ ಭೃಂಗಾಭಾ ಧೂಸರಂ ರಥಮ್|
ಸಕೃದ್ಯುಕ್ತಾಸ್ತು ಮೈತ್ರೇಯ ವಹಂತ್ಯವಿರತಂ ಸದಾ||21||

ಆದಿತ್ಯಾನ್ನಿಸ್ಸೃತೋ ರಾಹು: ಸೋಮಂ ಗಚ್ಛತಿ ಪರ್ವಸು|
ಆದಿತ್ಯಮೇತಿ ಸೋಮಾಚ್ಚ ಪುನ: ಸೌರೇಷು ಪರ್ವಸು||22||

ಬಿಳಿಯ ಬಣ್ಣದ ಎಂಟು ಅಶ್ವಗಳನ್ನು ಹೂಡಿದ ಸುವರ್ಣರಥವು ಬೃಹಸ್ಪತಿಗಿದೆ. ವರ್ಷಾಂತದಲ್ಲಿ ಬೃಹಸ್ಪತಿಯು ಆ ರಥದಲ್ಲಿ ಕುಳಿತು ಬೇರೆ ಬೇರೆ ರಾಶಿಗಳಲ್ಲಿ ಉಪಸ್ಥಿತನಾಗುತ್ತಾನೆ. 

ಆಕಾಶಸಂಭೂತಗಳೂ ಚಿತ್ರವರ್ಣದವೂ ಆದ ಅಶ್ವಗಳಿಂದ ಯುಕ್ತವಾದ ರಥದಲ್ಲಿ ಕುಳಿತು ಮಂದಗಾಮಿಯಾದ ಶನೈಶ್ಚರನು ಮೆಲ್ಲಗೆ ಪ್ರಯಾಣ ಮಾಡುತ್ತಾನೆ. 

ರಾಹುವಿನ ಕುದುರೆಗಳು ಎಂಟು. ಅವು ದುಂಬಿಗಳಂತೆ ಕಪ್ಪು. ರಥವು ಮಾಸಲು ಕಪ್ಪು, ಮೈತ್ರೇಯ, ಒಮ್ಮೆ ಹೂಡಿದ ಆ ಕುದುರೆಗಳು ನಿರಂತರವಾಗಿ ಚಲಿಸುತ್ತ ಇರುತ್ತವೆ. 

ಈ ರಾಹು ಪೂರ್ಣಿಮೆಗಳಲ್ಲಿ ಸೂರ್ಯನಿಂದ ಹೊರಟು ಚಂದ್ರನ ಬಳಿಗೆ ಹೋಗುತ್ತಾನೆ. ಸೌರಪರ್ವಗಳಲ್ಲಿ ಎಂದರೆ ಅಮಾವಾಸ್ಯೆಗಳಲ್ಲಿ ಆತನು ಚಂದ್ರನಿಂದ ಹೊರಟು ಸೂರ್ಯನ ಬಳಿಗೆ ಹೋಗುತ್ತಾನೆ.‌

********


🔯🔔 ಸಂಚಿಕೆ - 397🔔🔯

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ಏವಂ ದೇವಾನ್ ಸಿತೇ ಪಕ್ಷೇ ಕೃಷ್ಣಪಕ್ಷೇ ತಥಾ ಪಿತೃನ್|
ವೀರುಧಶ್ಚಾಮೃತಮಯೈ: ಶೀತೈರಪ್ಪರಮಾಣುಭಿ:||14||

ವಿರುಧೌಷಧಿನಿಷ್ಪತ್ತ್ಯಾ ಮನುಷ್ಯಪಶುಕೀಟಕಾನ್|
ಆಪ್ಯಾಯಯತಿ ಶೀತಾಂಶು: ಪ್ರಾಕಾಶ್ಯಾಹ್ಲಾದನೇನ ತು||15||

ವಾಯ್ವಗ್ನಿದ್ರವ್ಯಸಂಭೂತೋ ರಥಶ್ಚಂದ್ರಸುತಸ್ಯ ಚ|
ಪಿಶಂಗೈಸ್ತುರಗೈರ್ಯುಕ್ತ: ಸೋಷ್ಟಾಭಿರ್ವಾಯುವೇಗಿಭಿ:||16||

ಸವರೂಥ: ಸಾನುಕರ್ಷೋ ಯುಕ್ತೋ ಭೂಸಂಭವೈರ್ಹಯೈ:|
ಸೋಪಾಸಂಗಪತಾಕಸ್ತು ಶುಕ್ರಸ್ಯಾಪಿ ರಥೋ ಮಹಾನ್||17||

ಅಷ್ಟಾಶ್ವ: ಕಾಂಚನ: ಶ್ರೀಮಾನ್ ಭೌಮಸ್ಯಾಪಿ ರಥೋ ಮಹಾನ್|
ಪದ್ಮರಾಗಾರುಣೈರಶ್ವೈ: ಸಂಯುಕ್ತೋ ವಹ್ನಿಸಂಭವೈ:||18||

ಹೀಗೆ ಚಂದ್ರನು ಶುಕ್ಲಪಕ್ಷದಲ್ಲಿ, (ಯಾಗದ್ವಾರಾ) ದೇವತೆಗಳನ್ನೂ, ಕೃಷ್ಣಪಕ್ಷದಲ್ಲಿ (ಶ್ರಾದ್ಧದ್ವಾರಾ) ಪಿತೃಗಳನ್ನೂ ಆಪ್ಯಾಯನಗೊಳಿಸುತ್ತಾನೆ. 

ಅಮೃತಮಯವೂ ಶೀತಲವೂ ಆದ ಜಲಕಣಗಳಿಂದ ಬಳ್ಳಿ ಸಸ್ಯ ಮೊದಲಾದವನ್ನು ಉತ್ಪಾದಿಸುವುದರಿಂದಲೂ ಪ್ರಕಾಶ ಸಂತೋಷಗಳನ್ನು ಉಂಟುಮಾಡುವುದರಿಂದಲೂ ಮನುಷ್ಯ ಪಶು ಕೀಟಗಳನ್ನೂ ಸಹ ಆಪ್ಯಾಯನಗೊಳಿಸುತ್ತಾನೆ. 

ಚಂದ್ರಸುತನಾದ ಬುಧನ ರಥವು ವಾಯು ಮತ್ತು ಅಗ್ನಿಮಯದ್ರವ್ಯಗಳಿಂದ ರಚಿತವಾಗಿದೆ. ಗೋರೋಚನ ಬಣ್ಣದ ವಾಯುವೇಗವುಳ್ಳ ಎಂಟು ಕುದುರೆಗಳನ್ನು ಅದಕ್ಕೆ ಹೂಡಲಾಗಿದೆ. 

ರಥದ ರಕ್ಷಣಾರ್ಥವಾದ ಲೋಹದ ಆವರಣದಿಂದಲೂ ಮೂಕಿಮರದಿಂದಲೂ ಕೂಡಿ, ಬತ್ತಳಿಕೆ ಪತಾಕೆಗಳಿಂದ ಯುಕ್ತವಾಗಿ, ಭೂದೇವಿಯಿಂದ ಜನಿಸಿದ ಕುದುರೆಗಳಿಂದ ಯುಕ್ತವಾದ ಮಹಾರಥವು ಶುಕ್ರನಿಗಿದೆ. 

ಕುಜನ ಮಹಾರಥವು ಎಂಟು ಕುದುರೆಗಳಿಂದ ಯುಕ್ತವಾಗಿದ್ದು ಸುವರ್ಣಮಯವಾಗಿ ಶೋಭಿಸುತ್ತದೆ. ಆ ರಥದ ಕುದುರೆಗಳು ಅಗ್ನಿಜನ್ಯಗಳಾಗಿದ್ದು ಪದ್ಮರಾಗದಂತೆ ಕೆಂಪಾಗಿವೆ. 

********


🔯🔔 ಸಂಚಿಕೆ - 396🔔🔯

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ಅಪ್ಸು ತಸ್ಮಿನ್ನಹೋರಾತ್ರೇ ಪೂರ್ವಂ ವಿಶತಿ ಚಂದ್ರಮಾ:|
ತತೋ ವೀರುತ್ಸು ವಸತಿ ಪ್ರಯಾತ್ಯರ್ಕಂ ತತ: ಕ್ರಮಾತ್||9||

ಛಿನತ್ತಿ ವಿರುಧೋ ಯಸ್ತು ವೀರುತ್ಸಂಸ್ಥೇ ನಿಶಾಕರೇ|
ಪತ್ರಂ ವಾ ಪಾತಯತ್ಯೇಕಂ ಬ್ರಹ್ಮಹತ್ಯಾಂ ಸ ವಿಂದತಿ||10||

ಸೋಮಂ ಪಂಚದಶೇ ಭಾಗೇ ಕಿಂಚಿಚ್ಛಿಷ್ಟೇ ಕಲಾತ್ಮಕೇ|
ಅಪರಾಹ್ಣೇ ಪಿತೃಗಣಾ ಜಘನ್ಯಂ ಪರ್ಯುಪಾಸತೇ||11||

ಪಿಬಂತಿ ದ್ವಿಕಲಾಕಾರಂ ಶಿಷ್ಟಾ ತಸ್ಯ ಕಲಾ ತು ಯಾ|
ಸುಧಾಮೃತಮಯಾ ಪುಣ್ಯಾ ತಾಮಿಂದೋ: ಪಿತರೋ ಮುನೇ||12||

ನಿಸ್ಸೃತಂ ತದಮಾವಾಸ್ಯಾಂ ಗಭಸ್ತಿಭ್ಯ: ಸುಧಾಮೃತಮ್|
ಮಾಸಂ ತೃಪ್ತಿಮವಾಪ್ಯಾಗ್ರ್ಯಾಂ ಪಿತರ: ಸಂತಿ ನಿರ್ವೃತಾ:|
ಸೌಮ್ಯಾ ಬರ್ಹಿಷದಶ್ಚೈವ ಅಗ್ನಿಷ್ವಾತ್ತಾಶ್ಚ ತೇ ತ್ರಿಧಾ||13||

ಅಮಾವಾಸ್ಯೆಯಂದು ಅಹೋರಾತ್ರಗಳಲ್ಲಿಯೂ ಚಂದ್ರನು ಮೊದಲು ನೀರನ್ನು ಪ್ರವೇಶಿಸಿ ಅನಂತರ ಗಿಡ-ಮರ-ಬಳ್ಳಿಗಳಲ್ಲಿದ್ದು ಆಮೇಲೆ ಸೂರ್ಯನನ್ನು ಸೇರುತ್ತಾನೆ. 

ಆದ್ದರಿಂದ ಆ ದಿನ ಯಾವಾತನು ಗಿಡ-ಮರ-ಬಳ್ಳಿಗಳನ್ನು ಕತ್ತರಿಸುತ್ತಾನೋ ಅಥವಾ ಒಂದು ಎಲೆಯನ್ನು ಉದುರಿಸುತ್ತಾನೋ ಅವನು ಬ್ರಹ್ಮಹತ್ಯಾ ದೋಷಕ್ಕೆ ಒಳಗಾಗುತ್ತಾನೆ. 

ಚಂದ್ರನ ಹದಿನೈದನೆಯ ಕಲಾಭಾಗವು ಸ್ವಲ್ಪ ಉಳಿದಿರುವಾಗ ಆ ಕ್ಷೀಣ ಚಂದ್ರನನ್ನು (ಅಮಾವಾಸ್ಯೆಯ) ಅಪರಾಹ್ನದಲ್ಲಿ ಪಿತೃಗಣಗಳು ಮತ್ತುತ್ತಾರೆ.‌ 

ಎರಡು ಕಲೆಗಳು ಮಾತ್ರ ಉಳಿದಿರುವ ಚಂದ್ರನ ಸುಧಾಮಯವಾದ ಒಂದು ಪುಣ್ಯಕಲೆಯನ್ನು ಪಿತೃಗಳು ಕುಡಿದು ಬಿಡುತ್ತಾರೆ. 

ಹೀಗೆ ಅಮಾವಾಸ್ಯೆಯ ದಿನ ಚಂದ್ರರಶ್ಮಿಗಳಿಂದ ಹೊರಟ ಸುಧೆಯನ್ನು ಕುಡಿಯುವ ಪಿತೃದೇವತೆಗಳು ಒಂದು ತಿಂಗಳವರೆಗೆ ತೃಪ್ತರಾಗಿರುತ್ತಾರೆ. 

ಆ ಪಿತೃದೇವತೆಗಳು ಸೌಮ್ಯ, ಬರ್ಹಿಷದ, ಅಗ್ನಿಷ್ವಾತ್ತರೆಂದು ಮೂರು ಪ್ರಕಾರವಾಗಿದ್ದಾರೆ.‌

********

🔯🔔 ಸಂಚಿಕೆ - 395🔔🔯

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ಕ್ರಮೇಣ ಯೇನ ಪೀತೋಸೌ ದೇವೈಸ್ತೇನ ನಿಶಾಕರಮ್|
ಆಪ್ಯಾಯಯತ್ಯನುದಿನಂ ಭಾಸ್ಕರೋ ವಾರಿತಸ್ಕರ:||5||

ಸಂಭೃತಂ ಚಾರ್ಧಮಾಸೇನ ತತ್ಸೋಮಸ್ಥಂ ಸುಧಾಮೃತಮ್|
ಪಿಬಂತಿ ದೇವಾ ಮೈತ್ರೇಯ ಸುಧಾಹಾರಾ ಯತೋಮರಾ:||6||

ತ್ರಯಸ್ತ್ರಿಂಶತ್ಸಹಸ್ರಾಣಿ ತ್ರಯಸ್ತ್ರಿಂಶಚ್ಛತಾನಿ ಚ|
ತ್ರಯಸ್ತ್ರಿಂಶತ್ತಥಾ ದೇವಾ: ಪಿಬಂತಿ ಕ್ಷಣದಾಕರಮ್||7||

ಕಲಾದ್ವಯಾವಶಿಷ್ಟಸ್ತು ಪ್ರವಿಷ್ಟ: ಸೂರ್ಯಮಂಡಲಮ್|
ಅಮಾಖ್ಯರಶ್ಮೌ ವಸತಿ ಅಮಾವಾಸ್ಮಾ ತತ: ಸ್ಮೃತಾ:||8||

ದೇವತೆಗಳು ಚಂದ್ರನನ್ನು ಯಾವ ಪ್ರಕಾರವಾಗಿ ಕುಡಿಯುವರೋ ಅದೇ ಪ್ರಕಾರ ದಿನಕ್ಕೆ ಒಂದೊಂದು ಕಲೆಯಂತೆ ಜಲಾಪಹಾರಿಯಾದ ಸೂರ್ಯನು ಆತನನ್ನು ಆಪ್ಯಾಯನಗೊಳಿಸುತ್ತಾನೆ. 

ಈ ಪ್ರಕಾರದಲ್ಲಿ, ಮೈತ್ರೇಯ, ಅರ್ಧಮಾಸದಲ್ಲಿ ತುಂಬಿಕೊಳ್ಳುವ ಚಂದ್ರನಲ್ಲಿರುವ ಸುಧಾಮೃತವನ್ನು ದೇವತೆಗಳು ಪುನ: ಕುಡಿಯುತ್ತಾರೆ. ಏಕೆಂದರೆ, ದೇವತೆಗಳ ಆಹಾರ ಸುಧೆಯಾಗಿರುತ್ತದೆ. 

ಒಟ್ಟು ಮೂವತ್ತು ಮೂರು ಸಾವಿರದ ಮೂವತ್ತು ಮೂರು ನೂರ ಮೂವತ್ತು ಮೂರು (33333) ದೇವತೆಗಳು ಹೀಗೆ ಚಂದ್ರನ ಅಮೃತವನ್ನು ಪಾನಮಾಡುತ್ತಾರೆ. 

ಎರಡು ಕಲೆಗಳು ಮಾತ್ರ ಉಳಿದಾಗ ಚಂದ್ರನು ಸೂರ್ಯಮಂಡಲವನ್ನು ಪ್ರವೇಶಿಸಿ ಸೂರ್ಯನ "ಅಮಾ" ಎಂಬ ಕಿರಣದಲ್ಲಿ ವಾಸಮಾಡುತ್ತಾನೆ. ಆದ್ದರಿಂದ ಆ ತಿಥಿಗೆ ಅಮಾವಾಸ್ಯೆಯೆಂದು ಹೆಸರು. 

********


🔯🔔 ಸಂಚಿಕೆ - 394🔔🔯

ದ್ವಿತೀಯಾಂಶ:

ದ್ವಾದಶೋಧ್ಯಾಯ:
********
ಶ್ರೀಪರಾಶರ ಉವಾಚ:-

ರಥಸ್ತ್ರೀಚಕ್ರ: ಸೋಮಸ್ಯ ಕುಂದಾಭಾಸ್ತಸ್ಯ ವಾಜಿನ:|
ವಾಮದಕ್ಷಿಣತೋ ಯುಕ್ತಾ ದಶ ತೇನ ಚರತ್ಯಸೌ||1||

ವೀಥ್ಯಾಶ್ರಯಾಣಿ ಋಕ್ಷಾಣಿ ಧ್ರುವಾಧಾರೇಣ ವೇಗಿನಾ|
ಹ್ರಾಸವೃದ್ಧಿಕ್ರಮಸ್ತಸ್ಯ ರಶ್ಮಿನಾಂ ಸವಿತುರ್ಯಥಾ||2||

ಅರ್ಕಸ್ಯೇವ ಹಿ ತಸ್ಯಾಶ್ವಾ: ಸಕೃದ್ಯುಕ್ತಾ ವಹಂತಿ ತೇ|
ಕಲ್ಪಮೇಕಂ ಮುನಿಶ್ರೇಷ್ಠ ವಾರಿಗರ್ಭಸಮುದ್ಭವಾ:||3||

ಕ್ಷೀಣಂ ಪೀತಂ ಸುರೈ: ಸೋಮಮಾಪ್ಯಾಯಯತಿ ದೀಪ್ತಿಮಾನ್|
ಮೈತ್ರೇಯೈಕಕಲಂ ಸಂತಂ ರಶ್ಮಿನೈಕೇನ ಭಾಸ್ಕರ:||4||

ಪರಾಶರರು ಹೇಳಿದರು:-

ಚಂದ್ರನ ರಥಕ್ಕೆ ಮೂರು ಚಕ್ರಗಳುಂಟು. ರಥದ ಎಡಬಲಗಳಲ್ಲಿ ಮಲ್ಲಿಗೆಯ ಹೂವಿನಂತೆ ಬಿಳಿಯ ಬಣ್ಣದ ಹತ್ತು ಕುದುರೆಗಳನ್ನು ಹೂಡಲಾಗಿದೆ. ಆ ರಥದಲ್ಲಿ ಚಂದ್ರನು ಸಂಚರಿಸುತ್ತಾನೆ. 

ಧ್ರುವನಕ್ಷತ್ರದ ಆಧಾರದಿಂದ ನಿಂತಿರುವ ವೇಗಶಾಲಿಯಾದ ಆ ರಥದಲ್ಲಿ ಚಂದ್ರನು ನಾಗವೀಥಿಯಲ್ಲಿರುವ ಅಶ್ವಿನ್ಯಾದಿ ನಕ್ಷತ್ರಗಳನ್ನು ಸೂರ್ಯನಂತೆ ಕ್ರಮಿಸುತ್ತಾನೆ. ಹಾಗೆಯೇ ಕಿರಣಗಳಿಗೆ ಬಿಗಿತ ಮತ್ತು ಶೈಥಿಲ್ಯಗಳುಂಟು. 

ಮೈತ್ರೇಯ, ಜಲಮಧ್ಯದಿಂದ ಹುಟ್ಟಿರುವ ಚಂದ್ರನ ಅಶ್ವಗಳು, ಸೂರ್ಯನ ಅಶ್ವಗಳಂತೆ ಒಮ್ಮೆ ಹೂಡಲ್ಪಟ್ಟರೆ ಒಂದು ಕಲ್ಪಪರ್ಯಂತ ರಥವನ್ನು ಎಳೆಯುತ್ತವೆ. 


ದೇವತೆಗಳು ಕುಡಿದ ಮೇಲೆ ಏಕಕಲಾಮಾತ್ರನಾಗಿ (ಉಳಿದಿದ್ದ ಎರಡು ಕಲೆಗಳಲ್ಲಿ ಒಂದನ್ನು ಅಮಾವಾಸ್ಯೆಯ ದಿನ ಪಿತೃಗಳು ಕುಡಿಯುವುದರಿಂದ ಚಂದ್ರನಲ್ಲಿ ಏಕಕಲೆ ಉಳಿದಿರುತ್ತದೆ.) ಉಳಿಯುವ ಚಂದ್ರನನ್ನು ದೀಪ್ತಿಶಾಲಿಯಾದ ಸೂರ್ಯನು ಮತ್ತೆ ತನ್ನ  ಒಂದು ಕಿರಣವನ್ನು ವೃದ್ಧಿಗೊಳಿಸುತ್ತಾನೆ.‌



🔯🔔 ಸಂಚಿಕೆ - 393🔔🔯

ದ್ವಿತೀಯಾಂಶ:

ಏಕಾದಶೋಧ್ಯಾಯ:
********
ಸೂರ್ಯರಶ್ಮಿ: ಸುಷುಮ್ನಾ ಯಸ್ತರ್ಪಿತಸ್ತೇನ ಚಂದ್ರಮಾ:|
ಕೃಷ್ಣಪಕ್ಷೇಮರೈ: ಶಶ್ವತ್ ಪ್ರೀಯತೇ ವೈ ಸುಧಾಮಯ:||22||

ಪೀತಂ ತಂ ದ್ವಿಕಲಂ ಸೋಮಂ ಕೃಷ್ಣಪಕ್ಷಕ್ಷಯೇ ದ್ವಿಜ|
ಪಿಬಂತಿ ಪಿತರಸ್ತೇಷಾಂ ಭಾಸ್ಕರಾತ್ತರ್ಪಣಂ ತಥಾ||23||

ಆದತ್ತೇ ರಶ್ಮಿಭಿರ್ಯಂತು ಕ್ಷಿತಿಸಂಸ್ಥಂ ರಸಂ ರವಿ:|
ತಮುತ್ಸೃಜತಿ ಭೂತಾನಾಂ ಪುಷ್ಟ್ಯರ್ಥಂ ಸಸ್ಯವೃದ್ಧಯೇ||24||

ತೇನ ಪ್ರೀಣಾತ್ಯಶೇಷಾಣಿ ಭೂತಾನಿ ಭಗವಾನ್ ರವಿ:|
ಪಿತೃದೇವ ಮನುಷ್ಯಾದೀನೇವಮಾಪ್ಯಾಯಯತ್ಯಸೌ||25||

ಪಕ್ಷತೃಪ್ತಿಂ ತು ದೇವಾನಾಂ ಪಿತೃಣಾಂ ಚೈವ ಮಾಸಿಕೀಮ್|
ಶಶ್ಚತ್ತೃಪ್ತಿಂ ಚ ಮರ್ತ್ಯಾನಾಂ ಮೈತ್ರೇಯಾರ್ಕ: ಪ್ರಯಚ್ಛತಿ||26||

ಇತಿ ಶ್ರೀವಿಷ್ಣುಪುರಾಣೇ ದ್ವಿತೀಯೇಂಶೇ ಏಕಾದಶೋಧ್ಯಾಯ:||

ಸುಷುಮ್ನೆಯೆಂಬ ಸೂರ್ಯರಶ್ಮಿಯು ಶುಕ್ಲಪಕ್ಷದಲ್ಲಿ ಚಂದ್ರನನ್ನು ವರ್ಧಿಸುತ್ತದೆ. 
ಕೃಷ್ಣಪಕ್ಷದಲ್ಲಿ ಆ ಸುಧಾಮಯನಾದ ಚಂದ್ರನನ್ನು ಒಂದೊಂದು ಕಲೆಯಾಗಿ ದೇವತೆಗಳು ಕುಡಿಯುತ್ತಾರೆ. 

ಕಡೆಗೆ ಆತನಲ್ಲಿ ಎರಡು ಕಲೆಗಳು ಉಳಿದಾಗ ಕೃಷ್ಣಪಕ್ಷದಲ್ಲಿ (ಚತುರ್ದಶಿಯು ಕಳೆದ ಮೇಲೆ) ಎರಡು ಕಲೆಗಳುಳ್ಳ ಚಂದ್ರನನ್ನು ಪಿತೃಗಳು ಕುಡಿಯುತ್ತಾರೆ. 
ಹೀಗೆ ಸೂರ್ಯನಿಂದ ಪಿತೃಗಳು ಆಪ್ಯಾಯನಗೊಳ್ಳುತ್ತಾರೆ. 

ಸೂರ್ಯನು ತನ್ನ ರಶ್ಮಿಗಳಿಂದ ಭೂಮಿಯಲ್ಲಿರುವ ಜಲವನ್ನು ಹೀರಿಕೊಂಡು, ಪ್ರಾಣಿಗಳ ಪುಷ್ಟಿಗಾಗಿ ಸಸ್ಯಗಳು ಬೆಳೆಯಲೆಂದು ಆ ಜಲವನ್ನು ಮಳೆಯ ರೂಪದಲ್ಲಿ ವಿಸರ್ಜಿಸುತ್ತಾನೆ. 

ಅದರಿಂದ ಭಾಗವಾನ್ ಸೂರ್ಯದೇವನು ಸಮಸ್ತ ಪ್ರಾಣಿವರ್ಗವನ್ನೂ ಆಪ್ಯಾಯನಗೊಳಿಸುತ್ತಾನೆ. 
ಈ ಪ್ರಕಾರ ಸೂರ್ಯನಿಂದ ಪಿತೃ-ದೇವ-ಮನುಷ್ಯಾದಿಗಳ ಅಪ್ಯಾಯನವು ನಡೆಯುತ್ತದೆ. 

ಮೈತ್ರೇಯ, ಈ ರೀತಿಯಲ್ಲಿ ಸೂರ್ಯನು ದೇವತೆಗಳಿಗೆ ಒಂದು ಪಕ್ಷಕಾಲದ ತೃಪ್ತಿಯನ್ನೂ ಪಿತೃಗಳಿಗೆ ತಿಂಗಳಿಗೊಮ್ಮೆ ಮಾಸಿಕ ತೃಪ್ತಿಯನ್ನೂ ಮಾನವರಿಗೆ ನಿತ್ಯತೃಪ್ತಿಯನ್ನೂ ಉಂಟು ಮಾಡುತ್ತಾನೆ. 

ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಹನ್ನೊಂದನೆಯ ಅಧ್ಯಾಯ ಮುಗಿಯಿತು. 

********


🔯🔔 ಸಂಚಿಕೆ - 392🔔🔯

ದ್ವಿತೀಯಾಂಶ:

ಏಕಾದಶೋಧ್ಯಾಯ:
********
ಸ್ತುವಂತಿ ಚೈನಂ ಮುನಯೋ ಗಂಧರ್ವೈರ್ಗೀಯತೇ ಪುರ:|
ನೃತ್ಯಂತೋಪ್ಸರಸೋ ಯಾಂತಿ ತಸ್ಯ ಚಾನು ನಿಶಾಚರಾ:||16||

ವಹಂತಿ ಪನ್ನಗಾ ಯಕ್ಷೈ: ಕ್ರೀಯತೇಭೀಷುಸಂಗ್ರಹ:|
ವಾಲಖಿಲ್ಯಾಸ್ತಥೈವೈನಂ ಪರಿವಾರ್ಯ ಸಮಾಸತೇ||17||

ನೋದೇತಾ ನಾಸ್ತಮೇತಾ ಚ ಕದಾಚಿಚ್ಛಕ್ತಿರೂಪಧೃಕ್|
ವಿಷ್ಣುರ್ವಿಷ್ಣೋ: ಪೃಥಕ್ ತಸ್ಯ ಗಣಸ್ಸಪ್ತವಿಧೋಪ್ಯಯಮ್||18||

ಸ್ತಂಭಸ್ಥದರ್ಪಣಸ್ಯೇವ ಯೋಯಮಾಸನ್ನತಾಂ ಗತ:|
ಛಾಯಾದರ್ಶನಸಂಯೋಗಂ ಸ ತಂ ಪ್ರಾಪ್ನೋತ್ಯಥಾತ್ಮನ:||19||

ಏವಂ ಸಾ ವೈಷ್ಣವೀ ಶಕ್ತಿರ್ನೈವಾಪೈತಿ ತತೋ ದ್ವಿಜ|
ಮಾಸಾನುಮಾಸಂ ಭಾಸ್ವಂತಮಧ್ಯಾಸ್ತೇ ತತ್ರ ಸಂಸ್ಥಿತಮ್||20||

ಪಿತೃದೇವ ಮನುಷ್ಯಾದೀನ್ ಸ ಸದಾಪ್ಯಾಯಯನ್ ಪ್ರಭು:|
ಪರಿವರ್ತತ್ಯಹೋರಾತ್ರಕಾರಣಂ ಸವಿತಾ ದ್ವಿಜ||21||

ಆದಿತ್ಯನನ್ನು ಋಷಿಗಳು ಸ್ತುತಿಸುತ್ತಾರೆ; 
ಆದಿತ್ಯನ ಎದುರಿಗೆ ಗಂಧರ್ವರು ಹಾಡುತ್ತ ಇರುತ್ತಾರೆ;
ಅಪ್ಸರೆಯರು ನೃತ್ಯ ಮಾಡುತ್ತಾರೆ; 
ರಾಕ್ಷಸರು ಹಿಮ್ಮೇಳದಲ್ಲಿ ಹೋಗುತ್ತಾರೆ; 
ಉರಗರು ರಥವನ್ನು ನಡೆಸಲು ಅಣಿ ಮಾಡುತ್ತಾರೆ;
ಯಕ್ಷರು ಕುದುರೆಗಳ ಲಗಾಮನ್ನು ಹಿಡಿಯುತ್ತಾರೆ;
ವಾಲಿಖಿಲ್ಯರು ಆದಿತ್ಯನ ಸುತ್ತಲೂ ಪರಿವಾರವಾಗಿ ಇರುತ್ತಾರೆ.

ವೇದತ್ರಯ ಶಕ್ತಿರೂಪವನ್ನು ಧರಿಸಿ ಸೂರ್ಯಸ್ವರೂಪನಾಗಿರುವ ಈ ವಿಷ್ಣು ಉದಯಿಸುವುದೂ ಇಲ್ಲ, ಅಸ್ತಂಗತನಾಗುವುದೂ ಇಲ್ಲ. ಮೇಲ್ಕಂಡ ಸಪ್ತವಿಧಗಣಗಳು ಆತನಿಗಿಂತ ಪೃಥಕ್ ಆಗಿ ಇದ್ದು ಸದಾ ಇರುತ್ತವೆ. 

ಒಂದು ಕಂಬದಲ್ಲಿ (Stand) ಇರುವ ಕನ್ನಡಿಗೆ ಸಮೀಪಕ್ಕೆ ಹೋದವನ ನೆರಳು ಆ ಕನ್ನಡಿಯಲ್ಲಿ ಹೇಗೆ ನಿಶ್ಚಲವಾಗಿ ಇದ್ದೇ ಇರುವುದೋ ಹಾಗೆ ವೈಷ್ಣವೀ ಶಕ್ತಿಯೂ ಸೂರ್ಯಮಂಡಲದಲ್ಲಿ ನೆಲೆಸಿರುತ್ತದೆ.‌

ಅದೇ ಪ್ರಕಾರ ಪ್ರತಿಯೊಂದು ಮಾಸದಲ್ಲಿಯೂ ರಥಸ್ಥನಾದ ಸೂರ್ಯನಲ್ಲಿ ವೈಷ್ಣವೀ ಶಕ್ತಿಯು ಪ್ರತಿಬಿಂಬಿತವಾಗಿರುತ್ತದೆ. 

ಮೈತ್ರೇಯ, ಪ್ರಭುವಾದ ಸೂರ್ಯನು ಪಿತೃ-ದೇವ-ಮನುಷ್ಯರನ್ನು ಆಪ್ಯಾಯನಗೊಳಿಸುತ್ತ ಅಹೋರಾತ್ರಗಳಲ್ಲಿ ಸದಾ ಸಂಚರಿಸುತ್ತ ಇರುತ್ತಾನೆ. 
********

🔯🔔 ಸಂಚಿಕೆ - 390🔔🔯

ದ್ವಿತೀಯಾಂಶ:

ಏಕಾದಶೋಧ್ಯಾಯ:
********
ಶ್ರೀಪರಾಶರ ಉವಾಚ:

ಮೈತ್ರೇಯ ಶ್ರೂಯತಾಮೇತದ್ಯದ್ಭವಾನ್ಪರಿಪೃಚ್ಛತಿ|
ಯಥಾ ಸಪ್ತಗಣೇಪ್ಯೇಕ: ಪ್ರಾಧಾನ್ಯೇನಾಧಿಕೋ ರವಿ:||6||

ಸರ್ವಶಕ್ತಿ: ಪರಾ ವಿಷ್ಣೋರ್ಋಗ್ಯಜು:ಸಾಮಸಂಜ್ಞಿತಾ|
ಸೈಷಾ ತ್ರಯೀ ತಪತ್ಯಂಹೋ ಜಗತಶ್ಚ ಹಿನಸ್ತಿ ಯಾ||7||

ಸೈಷಾ ವಿಷ್ಣು: ಸ್ಥಿತ: ಸ್ಥಿತ್ಯಾಂ ಜಗತ: ಪಾಲನೋದ್ಯತ:|
ಋಗ್ಯಜು:ಸಾಮಭೂತೋಂತ: ಸವಿತುರ್ದ್ವಿಜ ತಿಷ್ಠತಿ||8||

ಮಾಸಿ ಮಾಸಿ ರವಿರ್ಯೋ ಯಸ್ತತ್ರ ತತ್ರ ಹಿ ಸಾ ಪರಾ|
ತ್ರಯೀಮಯೀ ವಿಷ್ಣುಶಕ್ತಿರವಸ್ಥಾನಂ ಕರೋತಿ ವೈ||9||

ಋಚ: ಸ್ತುವಂತಿ ಪೂರ್ವಾಹ್ನೇ ಮಧ್ಯಾಹ್ನೇಥ ಯಜೂಂಷಿ ವೈ|
ಬೃಹದ್ರಥಂತರಾದೀನಿ ಸಾಮಾನ್ಯಹ್ನ: ಕ್ಷಯೇ ರವಿಮ್||10||

ಅದಕ್ಕೆ ಪರಾಶರರು ಹೇಳಿದರು:-

ಮೈತ್ರೇಯ, ನೀನು ಪ್ರಶ್ನೆ ಮಾಡಿದುದಕ್ಕೆ ಉತ್ತರವನ್ನು ಕೇಳು. 
ಆ ಸಪ್ತಗಣದಲ್ಲಿ ಸೂರ್ಯನೇ ಪ್ರಧಾನನಾದವನು. 

ಋಗ್ಯಜು:ಸ್ಸಾಮಗಳೆಂಬ ಹೆಸರುಳ್ಳ ವೇದತ್ರಯಿಯೆಂಬ ವಿಷ್ಣುವಿನ ಪರಾಶಕ್ತಿಯು ಸೂರ್ಯನಲ್ಲಿದ್ದು ಬೆಳಗುತ್ತಿದೆ. ಜಗತ್ತಿನ ಪಾಪವನ್ನು ಹೋಗಲಾಡಿಸಲು ಸಮರ್ಥವಾಗಿದೆ.‌

ಋಗ್ಯಜು:ಸಾಮಸ್ವರೂಪನಾದ ವಿಷ್ಣುವೇ ಸ್ಥಿತಿ ಕಾಲದಲ್ಲಿ ಜಗತ್ತನ್ನು ಪಾಲಿಸಬೇಕೆಂದು, ಸೂರ್ಯಮಂಡಲದ ನಡುವೆ ಇರುತ್ತಾನೆ. 

ಪ್ರತಿಮಾಸದಲ್ಲಿಯೂ ಯಾವ ಯಾವ ಹೆಸರಿನ ಆದಿತ್ಯನಿರುವನೋ ಅವನಲ್ಲಿ ತ್ರಯೀರೂಪವಾದ ವಿಷ್ಣುಶಕ್ತಿಯು ನೆಲೆಸಿರುತ್ತದೆ. 

ಪ್ರಾತ:ಕಾಲದಲ್ಲಿ ಋಕ್ಕುಗಳೂ, ಮಧ್ಯಾಹ್ನದಲ್ಲಿ ಯಜುಸ್ಸುಗಳೂ, ಸಾಯಂಕಾಲದಲ್ಲಿ ಬೃಹದ್ರಥಂತರಾದಿಸಾಮಗಳೂ ಸೂರ್ಯನನ್ನು ಸ್ತುತಿಸುತ್ತವೆ. 
********

🔯🔔 ಸಂಚಿಕೆ - 388🔔🔯

ದ್ವಿತೀಯಾಂಶ:

ದಶಮೋಧ್ಯಾಯ:
********
ಮಾಸೇಷ್ವೇತೇಷು ಮೈತ್ರೇಯ ವಸಂತ್ಯೇತೇ ತು ಸಪ್ತಕಾ:|
ಸವಿತುರ್ಮಂಡಲೇ ಬ್ರಹ್ಮನ್ ವಿಷ್ಣುಶಕ್ತ್ಯುಪಬೃಂಹಿತಾ:||19||

ಸ್ತುವಂತಿ ಮುನಯ: ಸೂರ್ಯಂ ಗಂಧರ್ವೈರ್ಗೀಯತೇ ಪುರ:|
ನೃತ್ಯಂತ್ಯಪ್ಸರಸೋ ಯಾಂತಿ ಸೂರ್ಯಸ್ಯಾನು ನಿಶಾಚರಾ:||20||

ವಹಂತಿ ಪನ್ನಗಾ ಯಕ್ಷೈ: ಕ್ರಿಯತೇಭಿಷುಸಂಗ್ರಹ:|
ವಾಲಖಿಲ್ಯಾಸ್ತಥೈವೈನಂ ಪರಿವಾರ್ಯ ಸಮಾಸತೇ||21||

ಸೋಯಂ ಸಪ್ತಗಣ: ಸೂರ್ಯಮಂಡಲೇ ಮುನಿಸತ್ತಮ|
ಹಿಮೋಷ್ಣವಾರಿವೃಷ್ಟೀನಾಂ ಹೇತು: ಸ್ವಸಮಯಂ ಗತ:||22||

ಇತಿ ಶ್ರೀವಿಷ್ಣುಪುರಾಣೇ ದ್ವಿತೀಯೇಂಶೇ ದಶಮೋಧ್ಯಾಯ:||

ಮೈತ್ರೇಯ, ಈ ಎಲ್ಲ ಮಾಸಗಳಲ್ಲಿ ಈಗಾಗಲೇ  ಹೇಳಿದಂತೆ ಏಳು ಏಳು ಜನರು ವಿಷ್ಣುಶಕ್ತಿಯಿಂದ ಸಂದೀಪ್ತರಾಗಿ ಸೂರ್ಯಮಂಡಲದಲ್ಲಿ ನೆಲೆಸಿರುತ್ತಾರೆ.

ಒಂದೊಂದು ಮಾಸದಲ್ಲಿ ಒಬ್ಬೊಬ್ಬರಂತೆ ಋಷಿಗಳು ಸೂರ್ಯನನ್ನು ಸ್ತುತಿಸುತ್ತಾರೆ.
ಗಂಧರ್ವರು ಎದುರಿಗೆ ಹಾಡುತ್ತಾರೆ.
ಅಪ್ಸರೆಯರು ನರ್ತಿಸುತ್ತಾರೆ.
ರಾಕ್ಷಸರು ಹಿಮ್ಮೇಳದಲ್ಲಿ ಹೋಗುತ್ತಾರೆ.
ಸರ್ಪಗಳು ರಥದ ಸಾಗಾಣಿಕೆಗೆ ಅಣಿ ಮಾಡಿಕೊಡುತ್ತವೆ.
ಯಕ್ಷರು ಲಗಾಮುಗಳನ್ನು ಹಿಡಿಯುತ್ತಾರೆ.
ಮತ್ತು ವಾಲಖಿಲ್ಯರೆಂಬ ಋಷಿಗಳು ರಥದ ಸುತ್ತಲೂ ನೆರೆದಿರುತ್ತಾರೆ.

ಮೈತ್ರೇಯ, ಸೂರ್ಯರಥಕ್ಕೆ ಸಂಬಂಧಿಸಿದ ಈ ಸಪ್ತಗಣವು ತಮ್ಮ ತಮ್ಮ ಸಮಯದಲ್ಲಿ ಚಳಿ, ಉಷ್ಣತೆ, ಜಲವೃಷ್ಟಿ - ಇವುಗಳಿಗೆ ಕಾರಣವಾಗುತ್ತದೆ.

ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಹತ್ತನೆಯ ಅಧ್ಯಾಯ ಮುಗಿಯಿತು.
********

🔯🔔 ಸಂಚಿಕೆ - 387🔔🔯
********

ದ್ವಿತೀಯಾಂಶ:

ದಶಮೋಧ್ಯಾಯ:
********
ಅಂಶಕಾಶ್ಯಪತಾರ್ಕ್ಷ್ಯಾಸ್ತು ಮದಾಪದ್ಮಸ್ತಥೋರ್ವಶೀ|
ಚಿತ್ರಸೇನಸ್ತಥಾ ವಿದ್ಯುನ್ಮಾರ್ಗಶೀರ್ಷೇಧಿಕಾರಿಣ:||13||

ಕ್ರತುರ್ಭಗಸ್ತಥೋರ್ಣಾಯು: ಸ್ಛೂರ್ಜ: ಕರ್ಕೋಟಕಸ್ತಥಾ|
ಅರಿಷ್ಟನೇಮಿಶ್ಚೈವಾನ್ಯಾ ಪೂರ್ವಚಿತ್ತಿರ್ವರಾಪ್ಸರಾ:||14||

ಪೌಷಮಾಸೇ ವಸಂತ್ಯೇತೇ ಸಪ್ತ ಭಾಸ್ಕರಮಂಡಲೇ|
ಲೋಕಪ್ರಕಾಶನಾರ್ಥಾಯ ವಿಪ್ರವರ್ಯಾಧಿಕಾರಿಣ:||15||

ತ್ವಷ್ಟಾಥ ಜಮದಗ್ನಿಶ್ಚ ಕಂಬಲೋಥ ತಿಲೋತ್ತಮಾ|
ಬ್ರಹ್ಮೋಪೇತೋಥ ಋತಜಿದ್ ಧೃತರಾಷ್ಟ್ರೋಥ ಸಪ್ತಮ:||16||

ಮಾಘಮಾಸೇ ವಸಂತ್ಯೇತೇ ಸಪ್ತ ಮೈತ್ರೇಯ ಭಾಸ್ಕರೇ|
ಶ್ರೂಯತಾಂ ಚಾಪರೇ ಸೂರ್ಯೇ ಫಾಲ್ಗುನೇ ನಿವಸಂತಿಯೇ||17||

ವಿಷ್ಣುರಶ್ವತರೋ ರಂಭಾ ಸೂರ್ಯವರ್ಚಾಶ್ಚ ಸತ್ಯಜಿತ್|
ವಿಶ್ವಾಮಿತ್ರಸ್ತಥಾ ರಕ್ಷೋ ಯಜ್ಞೋಪೇತೋ ಮಹಾಮುನೇ||18||

ಮಾರ್ಗಶೀರ್ಷ ಮಾಸದಲ್ಲಿ ಅಂಶ (ಆದಿತ್ಯ), ಕಾಶ್ಯಪ (ಋಷಿ), ತಾರ್ಕ್ಷ್ಯ (ಯಕ್ಷ), ಮಹಾಪದ್ಮ (ಸರ್ಪ), ಊರ್ವಶೀ (ಅಪ್ಸರೆ), ಚಿತ್ರಸೇನ (ಗಂಧರ್ವ), ವಿದ್ಯುತ್ (ರಾಕ್ಷಸ) - ಇವರು ಅಧಿಕಾರಿಗಳಾಗಿ ಸೂರ್ಯನ ರಥದಲ್ಲಿ ಇರುತ್ತಾರೆ.

ಪೌಷಮಾಸದಲ್ಲಿ ಕ್ರತು (ಋಷಿ), ಭಗ (ಆದಿತ್ಯ), ಊರ್ಣಾಯು (ಗಂಧರ್ವ), ಸ್ಛೂರ್ಜ (ರಾಕ್ಷಸ), ಕರ್ಕೋಟಕ (ಸರ್ಪ), ಅರಿಷ್ಟನೇಮಿ (ಯಕ್ಷ), ಪೂರ್ವಚಿತ್ತಿ (ಅಪ್ಸರೆ) - ಇವರು ಲೋಕ ಪ್ರಕಾಶನಕ್ಕೋಸ್ಕರ ಅಧಿಕಾರಿಗಳಾಗಿ ಸೂರ್ಯಮಂಡಲದಲ್ಲಿ ಇರುತ್ತಾರೆ.

ಮಾಘಮಾಸದಲ್ಲಿ ತ್ವಸ್ಟಾ (ಆದಿತ್ಯ), ಜಮದಗ್ನಿ (ಋಷಿ), ಕಂಬಲ (ಸರ್ಪ), ತಿಲೋತ್ತಮಾ (ಅಪ್ಸರೆ), ಬ್ರಹ್ಮೋಪೇತ (ರಾಕ್ಷಸ), ಋತಜಿತ್ (ಯಕ್ಷ), ಧೃತರಾಷ್ಟ್ರ (ಗಂಧರ್ವ) - ಇವರು ಸೂರ್ಯನ ರಥದಲ್ಲಿ ಇರುತ್ತಾರೆ.

ಮೈತ್ರೇಯ, ಫಾಲ್ಗುಣ ಮಾಸದಲ್ಲಿ ಸೂರ್ಯಮಂಡಲದಲ್ಲಿ ಇರತಕ್ಕವರ ಹೆಸರನ್ನು ಕೇಳು.
ವಿಷ್ಣು (ಆದಿತ್ಯ), ಅಶ್ವತರ (ಸರ್ಪ), ರಂಭಾ (ಅಪ್ಸರೆ), ಸೂರ್ಯವರ್ಚ (ಗಂಧರ್ವ), ಸತ್ಯಜಿತ್ (ಯಕ್ಷ), ವಿಶ್ವಾಮಿತ್ರ (ಋಷಿ), ಯಜ್ಞೋಪೇತ (ರಾಕ್ಷಸ) - ಇವರು ಇರುತ್ತಾರೆ.
********


🔯🔔 ಸಂಚಿಕೆ - 386🔔🔯

ದ್ವಿತೀಯಾಂಶ:

ದಶಮೋಧ್ಯಾಯ:
********
ಇಂದ್ರೋ ವಿಶ್ವಾವಸು: ಸ್ರೋತ ಏಲಾಪುತ್ರಸ್ತಥಾಂಗಿರಾ:|
ಪ್ರಮ್ಲೋಚಾ ಚ ನಭಸ್ಯೇತೇ ಸರ್ಪಿಶ್ಚಾರ್ಕೇ ವಸಂತಿ ವೈ||9||

ವಿವಸ್ವಾನುಗ್ರಸೇನಶ್ಚ ಭೃಗುರಾಪೂರಣಸ್ತಥಾ|
ಅನುಮ್ಲೋಚಾ ಶಂಖಪಾಲೋ ವ್ಯಾಘ್ರೋ ಭದ್ರಪದೇ ತಥಾ||10||

ಪೂಷಾವಸುರುಚಿರ್ವಾತೋ ಗೌತಮೋಥ ಧನಂಜಯ:|
ಸುಷೇಣೋನ್ಯೋ ಘೃತಾಚೀ ಚ ವಸಂತ್ಯಾಶ್ವಯುಜೇ ರವೌ||11||

ವಿಶ್ವಾವಸುರ್ಭರದ್ವಾಜ: ಪರ್ಜನ್ಯೈರಾವತೌ ತಥಾ|
ವಿಶ್ವಚೀ ಸೇನಜಿಚ್ಚಾಪ: ಕಾರ್ತಿಕೇ ಚ ವಸಂತಿ ವೈ||12||

ಶ್ರಾವಣಮಾಸದಲ್ಲಿ  ಇಂದ್ರ (ಆದಿತ್ಯ), ವಿಶ್ವಾವಸು (ಗಂಧರ್ವ), ಸ್ರೋತ (ಯಕ್ಷ), ಏಲಾಪುತ್ರ (ಸರ್ಪ), ಅಂಗೀರಸ್ (ಋಷಿ) , ಪ್ರಮ್ಲೋಚಾ (ಅಪ್ಸರೆ), ಸರ್ಪಿ (ರಾಕ್ಷಸ) - ಇವರು ಸೂರ್ಯನ ರಥದಲ್ಲಿ ಇರುತ್ತಾರೆ.

ಭಾದ್ರಪದಮಾಸದಲ್ಲಿ ವಿವಸ್ವಾನ್ (ಆದಿತ್ಯ), ಉಗ್ರಸೇನ (ಗಂಧರ್ವ), ಭೃಗು (ಋಷಿ), ಆಪೂರಣ (ಯಕ್ಷ), ಅನುಮ್ಲೋಚ (ಅಪ್ಸರೆ), ಶಂಖಪಾಲ (ಸರ್ಪ), ವ್ಯಾಘ್ರ (ರಾಕ್ಷಸ) - ಇವರು ಸೂರ್ಯನ ರಥದಲ್ಲಿ ಇರುತ್ತಾರೆ.

ಆಶ್ವಯುಜಮಾಸದಲ್ಲಿ ಪೂಷ (ಆದಿತ್ಯ), ವಸುರುಚಿ (ಗಂಧರ್ವ), ವಾತ (ರಾಕ್ಷಸ), ಗೌತಮ (ಋಷಿ), ಧನಂಜಯ (ಸರ್ಪ), ಸುಷೇಣ (ಯಕ್ಷ), ಘೃತಾಚೀ (ಅಪ್ಸರೆ) - ಇವರು ಸೂರ್ಯನ ರಥದಲ್ಲಿ ಇರುತ್ತಾರೆ.

ಕಾರ್ತಿಕಮಾಸದಲ್ಲಿ ವಿಶ್ವಾವಸು (ಗಂಧರ್ವ), ಭರದ್ವಾಜ (ಋಷಿ), ಪರ್ಜನ್ಯ (ಆದಿತ್ಯ), ಐರಾವತ (ಸರ್ಪ), ವಿಶ್ವಾಚೀ (ಅಪ್ಸರೆ), ಸೇನಜಿತ್ (ಯಕ್ಷ), ಆಪ (ರಾಕ್ಷಸ) - ಇವರು ಸೂರ್ಯನ ರಥದಲ್ಲಿ ಇರುತ್ತಾರೆ.
********

🔯🔔 ಸಂಚಿಕೆ - 377🔔🔯

ದ್ವಿತೀಯಾಂಶ:

ಅಷ್ಟಮೋಧ್ಯಾಯ:
********
ಯಸ್ಯಾಮಿಷ್ಟ್ವಾ ಮಹಾಯಜ್ಞೈರ್ಯಜ್ಞೇಶಂ ಪುರುಷೋತ್ತಮಮ್|
ದ್ವಿಜ ಭೂಪಾ: ಪರಾಂ ಸಿದ್ಧಿಮವಾಪುರ್ದಿವಿ ಚೇಹ ಚ||120||

ಸ್ನಾನಾದ್ವಿಧೂತಪಾಪಾಶ್ಚ ಯಜ್ಞಲೈರ್ಯತಯಸ್ತಥಾ|
ಕೇಶವಾಸಕ್ತಮನಸ: ಪ್ರಾಪ್ತಾ ನಿರ್ವಾಣಮುತ್ತಮಮ್||121||

ಶ್ರುತಾಭಿಲಷಿತಾ ದೃಷ್ಟಾ ಸ್ಪೃಷ್ಟಾ ಪೀತಾವಗಾಹಿತಾ|
ಯಾ ಪಾವಯತಿ ಭೂತಾನಿ ಕೀರ್ತಿತಾ ಚ ದಿನೇ ದಿನೇ||122||

ಗಂಗಾ ಗಂಗೇತಿ ಯೈರ್ನಾಮ ಯೋಜನಾನಾಂ ಶತೇಷ್ವಪಿ|
ಸ್ಥಿತೈರುಚ್ಚಾರಿತಂ ಹಂತಿ ಪಾಪಂ ಜನ್ಮತ್ರಯಾರ್ಜಿತಮ್||123||

ಯತ: ಸಾ ಪಾವನಾಯಾಲಂ ತ್ರಯಣಾಂ ಜಗತಾಮಪಿ|
ಸಮುದ್ಭೂತಾ ಪರಂ ತತ್ತು ತೃತೀಯಂ ಭಗವತ್ಪದಮ್||124||

ಇತಿ ಶ್ರೀವಿಷ್ಣುಪುರಾಣೇ ದ್ವಿತೀಯೇಂಶೇ ಅಷ್ಟಮೋಧ್ಯಾಯ:|

ಗಂಗಾತೀರದಲ್ಲಿ, ಮೈತ್ರೇಯ, ಅನೇಕ ಭೂಪಾಲರು ಮಹಾಯಜ್ಞಗಳಿಂದ ಯಜ್ಞಾಧಿಪನಾದ ಪುರುಷೋತ್ತಮನನ್ನು ಅರ್ಚಿಸಿ ಇಹಪರಗಳಲ್ಲಿ ಶ್ರೇಷ್ಠವಾದ ಸಿದ್ಧಿಯನ್ನು ಪಡೆದಿದ್ದಾರೆ.

ಅದರ ಜಲದಲ್ಲಿ ಸ್ನಾನ ಮಾಡಿದ್ದರಿಂದ ನಿಷ್ಪಾಪರಾದ ಯತಿಗಳು ಕೇಶವನಲ್ಲಿ ದೃಢಚಿತ್ತವನ್ನಿಟ್ಟು ಉತ್ತಮವಾದ ಮೋಕ್ಷವನ್ನು ಪಡೆದಿದ್ದಾರೆ.

ಪ್ರತಿದಿನ ಶ್ರವಣ, ಇಚ್ಛೆ, ದರ್ಶನ, ಸ್ಪರ್ಶನ, ಪಾನ, ಸ್ನಾನ ಅಥವಾ ಕೀರ್ತನದಿಂದಲೂ ಸಹ ಗಂಗೆಯು ಜನರನ್ನು ಪವಿತ್ರಗೊಳಿಸುತ್ತಾಳೆ.

ನೂರು ಯೋಜನಗಳ ದೂರದಲ್ಲಿದ್ದರೂ ಸಹ ಯಾರು 'ಗಂಗಾ ಗಂಗಾ' ಎಂದು ನಾಮೋಚ್ಚಾರಣೆ ಮಾಡುತ್ತಾರೋ ಅವರು ಮೂರು ಜನ್ಮಗಳಲ್ಲಿ ಆರ್ಜಿಸಿದ ಪಾಪವನ್ನಾದರೂ ಗಂಗೆಯು ವಿನಾಶಗೊಳಿಸುತ್ತಾಳೆ.

ಮೂರು ಲೋಕಗಳನ್ನೂ ಪಾವನಗೊಳಿಸಲು ಸಮರ್ಥಳಾದ ಗಂಗೆಯು ಎಲ್ಲಿಂದ ಉದ್ಭವಿಸಿದಳೋ ಅದು ಭಗವಂತನ ತೃತೀಯ ಪರಮಪದವಾಗಿದೆ.


ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಎಂಟನೆಯ ಅಧ್ಯಾಯ ಮುಗಿಯಿತು. 
*********



🔯🔔 ಸಂಚಿಕೆ - 375🔔🔯

ದ್ವಿತೀಯಾಂಶ:

ಅಷ್ಟಮೋಧ್ಯಾಯ:
********
ವಾಮಪಾದಾಂಬುಜಾಂಗುಷ್ಟನಖಸ್ರೋತೋವಿನಿರ್ಗತಾಮ್|
ವಿಷ್ಣೋರ್ಬಿಭರ್ತಿ ಯಾಂ ಭಕ್ತ್ಯಾ ಶಿರಸಾಹರ್ನಿಶಂ ಧ್ರುವ:||111||

ತತ: ಸಪ್ತರ್ಷಯೋ ಯಸ್ಯಾ: ಪ್ರಾಣಾಯಾಮಪರಾಯಣಾ:|
ತಿಷ್ಠಂತಿ ವೀಚಿಮಾಲಾಭಿರುಹ್ಯಮಾನಜಟಾ ಜಲೇ||112||

ವಾರ್ಯೋಘೈ: ಸಂತತೈರ್ಯಸ್ಯಾ: ಪ್ಲಾವಿತಂ ಶಶಿಮಂಡಲಮ್|
ಭೂಯೋಧಿಕತರಾಂ ಕಾಂತಿಂ ವಹತ್ಯೇತದುಹಕ್ಷಯೇ||113||

ಮೇರುಪೃಷ್ಠೇ ಪತತ್ಯುಚ್ಚೈರ್ನಿಷ್ಕ್ರಾಂತಾ ಶಶಿಮಂಡಲಾತ್|
ಜಗತ: ಪಾವನಾರ್ಥಾಯ ಪ್ರಯಾತಿ ಚ ಚತುರ್ದಿಶಮ್||114||

ಸೀತಾ ಚಾಲಕನಂದಾಚ ಚಕ್ಷುರ್ಭದ್ರಾ ಚ ಸಂಸ್ಥಿತಾ|
ಏಕೈವ ಯಾ ಚತುರ್ಭೇದಾ ದಿಗ್ಭೇದಗತಿಲಕ್ಷಣಾ||115||

ವಿಷ್ಣುವಿನ ವಾಮಪದಕಮಲದ ಅಂಗುಷ್ಠನಖವೆಂಬ ಸ್ರೋತಸ್ಸಿನಿಂದ ಉದ್ಭವಿಸಿದ ಗಂಗೆಯನ್ನು ಧ್ರುವನು ಅಹರ್ನಿಶವೂ ಭಕ್ತಿಯಿಂದ ಶಿರಸ್ಸಿನಲ್ಲಿ ಧರಿಸಿದ್ದಾನೆ.‌

ಅನಂತರ ಸಪ್ತರ್ಷಿಗಳು ಪ್ರಾಣಾಯಾಮ ಮಾಡುತ್ತಾ ನದೀತರಂಗಗಳಿಂದ ಸಳೆಯಲ್ಪಡುವ ಜಟೆಯುಳ್ಳವರಾಗಿ ಗಂಗೆಯ ಜಲದಲ್ಲಿ ನಿಂತಿರುತ್ತಾರೆ.

ಚಂದ್ರಮಂಡಲವು ಕ್ಷಯವಾದರೂ ಗಂಗಾಜಲದಿಂದ ಸದಾ ಆರ್ದ್ರವಾಗಿ ಮತ್ತೆ ಅಧಿಕತರವಾದ ಕಾಂತಿಯನ್ನು ಪಡೆಯುತ್ತದೆ.

ಚಂದ್ರಮಂಡಲದಿಂದ ಹೊರಟು ಮೇರುಪರ್ವತದ ಮೇಲೆ ಎತ್ತರದಿಂದ ಜಗತ್ತನ್ನು ಪಾವನಗೊಳಿಸುವುದಕ್ಕಾಗಿ ಧುಮುಕಿ (ನಾಲ್ಕು ಕವಲುಗಳಾಗಿ) ನಾಲ್ಕು ದಿಕ್ಕಿಗೂ ಹರಿಯುತ್ತದೆ.

ನಾಲ್ಕು ದಿಕ್ಕುಗಳಿಗೆ ಹರಿಯುವ ಒಂದೇ ಗಂಗಾನದಿಯು ಸೀತಾ, ಅಲಕನಂದಾ, ಚಕ್ಷು, ಭದ್ರಾ ಎಂಬ ಹೆಸರುಗಳಿಂದ ನಾಲ್ಕು ಭೇದಗಳನ್ನು ಪಡೆದಿದೆ.‌
********


🔯🔔 ಸಂಚಿಕೆ - 374🔔🔯

ದ್ವಿತೀಯಾಂಶ:

ಅಷ್ಟಮೋಧ್ಯಾಯ:
********
ಯಸ್ಮಿನ್ಪ್ರತಿಷ್ಠಿತೋ ಭಾಸ್ವಾನ್ ಮೇಢೀಭೂತ: ಸ್ವಯಂ ಧ್ರುವ:|
ಧ್ರುವೇ ಚ ಸರ್ವಜ್ಯೋತೀಂಷಿ ಜ್ಯೋತಿ:ಷ್ವಂಭೋ ಮುಚೋ ದ್ವಿಜ||106||

ಮೇಘೇಷು ಸಂಗತಾ ವೃಷ್ಟಿರ್ವೃಷ್ಟೇ: ಸೃಷ್ಟೇಶ್ಚ ಪೋಷಣಮ್|
ಆಪ್ಯಾಯನಂ ಚ ಸರ್ವೇಷಾಂ ದೇವಾದೀನಾಂ ಮಹಾಮುನೇ||107||

ತತಶ್ಚಾಜ್ಯಾಹುತಿದ್ವಾರಾ ಪೋಷಿತಾಸ್ತೇ ಹವಿರ್ಭುಜ:|
ವೃಷ್ಟೇ: ಕಾರಣತಾಂ ಯಾಂತಿ ಭೂತಾನಾಂ ಸ್ಥಿತಯೇ ಪುನ:||108||

ಏವಮೇತತ್ಪದಂ ವಿಷ್ಣೋಸ್ತೃತೀಯಮಮಲಾತ್ಮಕಮ್|
ಆಧಾರಭೂತಂ ಲೋಕಾನಾಂ ಪ್ರಯಾಣಾಂ ವೃಷ್ಟಿಕಾರಣಮ್||109||

ತತ: ಪ್ರಭವತಿ ಬ್ರಹ್ಮನ್ ಸರ್ವಪಾಪಹರಾ ಸರಿತ್|
ಗಂಗಾ ದೇವಾಂಗನಾಂಗಾನಾಮನುಲೇಪನಪಿಂಜರಾ||110||

ಎಲ್ಲ ಜ್ಯೋತಿಗಳಗೂ ಆಧಾರಸ್ತಂಭವಾದ ತೇಜಸ್ವಿ ಧ್ರುವನು ಈ ವಿಷ್ಣುಪದದಲ್ಲಿ ಪ್ರತಿಷ್ಠಿತನಾಗಿದ್ದಾನೆ.‌ ಈ ಧ್ರುವನನ್ನು ಆಶ್ರಯಿಸಿಕೊಂಡು ಗ್ರಹ ನಕ್ಷತ್ರಗಳೂ, ಅವುಗಳನ್ನು ಆಶ್ರಯಿಸಿಕೊಂಡು ಮೇಘಗಳೂ ಇವೆ.

ಮೇಘಗಳಲ್ಲಿ ವೃಷ್ಟಿ ಇದೆ. ವೃಷ್ಟಿಯಿಂದ ಸೃಷ್ಟಿಯ ಪೋಷಣೆಯಾಗುತ್ತದೆ. ಸಮಸ್ತ ದೇವಾದಿಗಳಿಗೆ ಆಪ್ಯಾಯನವಾಗುತ್ತದೆ.

(ಸೃಷ್ಟಿಯ ಪೋಷಣೆಯಾದ್ದರಿಂದ) ಆಜ್ಯಾಹುತಿಗಳ ದ್ವಾರಾ ಸಂಪ್ರೀತರಾದ ದೇವತೆಗಳು ಪ್ರಾಣಿಗಳ ರಕ್ಷಣೆಗಾಗಿ ಮತ್ತೆ ವೃಷ್ಟಿಗೆ ಕಾರಣರಾಗುತ್ತಾರೆ.

ನಿರ್ಮಲವಾದ ಈ ತೃತೀಯ ವಿಷ್ಣುಪದವು ಈ ಪ್ರಕಾರದಲ್ಲಿ ವೃಷ್ಟಿಗೆ ಕಾರಣವಾಗಿ ಮೂರು ಲೋಕಗಳಿಗೂ ಆಧಾರಭೂತವಾಗಿದೆ.

ಮೈತ್ರೇಯ, ಈ ವಿಷ್ಣುಪದದಿಂದ ಸರ್ವಪಾಪಹಾರಿಯೂ ದೇವಾಂಗನೆಯರು ಸ್ನಾನ ಮಾಡುವುದರಿಂದ ಅವರ ಅನುಲೇಪನ ಸಂಬಂಧದಿಂದ ಸ್ವರ್ಣವರ್ಣೆಯೂ ಆದ ಗಂಗಾನದಿ ಉತ್ಪನ್ನಳಾಗಿದ್ದಾಳೆ.
********


🔯🔔 ಸಂಚಿಕೆ - 362🔔🔯
********

ದ್ವಿತೀಯಾಂಶ:

ಅಷ್ಟಮೋಧ್ಯಾಯ:
********
ತಥಾ ನಿಶಾಯಾಂ ರಾಶೀನಾಂ ಪ್ರಮಾಣೈರ್ಲಘುದೀರ್ಘತಾ|
ದಿನಾದೇರ್ದೀರ್ಘಹ್ರಸ್ವತ್ವಂ ತದ್ಧೋಗೇನೈವ ಜಾಯತೇ||47||

ಉತ್ತರ ಪ್ರಕ್ರಮೇ ಶೀಘ್ರಾ ನಿಶಿ ಮಂದಾ ಗತಿರ್ದಿವಾ|
ದಕ್ಷಿಣೇ ತ್ವಯನೇ ಚೈವ ವಿಪರೀತಾ ವಿವಸ್ವತ:||48||

ಉಷಾ ರಾತ್ರಿ: ಸಮಾಖ್ಯಾತಾ ವ್ಯುಷ್ಟಿಶ್ಚಾಪ್ಯುಚ್ಯತೇ ದಿನಮ್|
ಪ್ರೋಚ್ಯತೇ ಚ ತಥಾ ಸಂಧ್ಯಾ ಉಷಾವ್ಯುಷ್ಟ್ಯೋರ್ದದಂತರಮ್||49||

ಸಂಧ್ಯಾಕಾಲೇ ಚ ಸಂಪ್ರಾಪ್ತೇ ರೌದ್ರೇ ಪರಮದಾರುಣೇ|
ಮಂದೇಹಾ ರಾಕ್ಷಸಾ ಘೋರಾ: ಸೂರ್ಯಮಿಚ್ಛಂತಿ ಖಾದಿತುಮ್||50||

ರಾತ್ರಿ ದೀರ್ಘವಾಗಿದೆ ಹ್ರಸ್ವವಾಗಿದೆ ಎಂಬ ಭೇದಕ್ಕೆ ರಾಶಿಗಳ ಪರಿಮಾಣಗಳೇ ಕಾರಣ. ದಿನ ರಾತ್ರಿಗಳ ದೀರ್ಘತ್ವ-ಹ್ರಸ್ವತ್ವಗಳು ರಾಶಿಭೋಗದ ಕಾಲಪ್ರಮಾಣದಿಂದ ಆಗುತ್ತವೆ. 

ಉತ್ತರಾಯಣದಲ್ಲಿ ಸೂರ್ಯಗತಿ ರಾತ್ರಿಯಲ್ಲಿ ಮಂದ, ಹಗಲಿನಲ್ಲಿ ಶೀಘ್ರ. ದಕ್ಷಿಣಾಯನದಲ್ಲಿ ಇದಕ್ಕೆ ವಿಪರೀತವಾಗಿ ರಾತ್ರಿಯಲ್ಲಿ ಶೀಘ್ರ, ಹಗಲಿನಲ್ಲಿ ಮಂದ. 

ರಾತ್ರಿಯು ಉಷಾ ಎಂದೂ ಹಗಲು ವ್ಯುಷ್ಟಿ ಎಂದೂ ವೇದದಲ್ಲಿ ಹೇಳಲ್ಪಟ್ಟಿದೆ. ಇವೆರಡರ ಮಧ್ಯಕಾಲಕ್ಕೆ ಸಂಧ್ಯಾ ಎಂದು ಹೆಸರು. 

ಸಂಧ್ಯಾಕಾಲವು ಪರಮದಾರುಣವೂ ರೌದ್ರವೂ ಆದದ್ದು. ಆ ಸಮಯದಲ್ಲಿ ಮಂದೇಹರೆಂಬ ಘೋರರಾಕ್ಷಸರು ಸೂರ್ಯನನ್ನು ಭಕ್ಷಿಸಲು ಬಯಸುತ್ತಾರೆ. 
********


🔯🔔 ಸಂಚಿಕೆ - 382🔔🔯

ದ್ವಿತೀಯಾಂಶ:

ನವಮೋಧ್ಯಾಯ:
********
ಯುಗ್ಮರ್ಕ್ಷೇಷು ಚ ಯತ್ತೋಯಂ ಪತತ್ಯರ್ಕೋಜ್ಝಿತಂ  ದಿವ:|
ತತ್ಸೂರ್ಯರಶ್ಮಿಭಿ: ಸರ್ವಂ ಸಮಾದಾಯ ನಿರಸ್ಯತೇ||,17||

ಉಭಯಂ ಪುಣ್ಯಮತ್ಯರ್ಥಂ ನೃಣಾಂ ಪಾಪಭಯಾಪಹಮ್|
ಆಕಾಶಗಂಗಾಸಲಿಲಂ ದಿವ್ಯಂ ಸ್ನಾನಂ ಮಹಾಮುನೇ||18||

ಯತ್ತು ಮೇಘೈ: ಸಮುತ್ಸೃಷ್ಟಂ ವಾರಿ ತತ್ಪ್ರಾಣಿನಾಂ ದ್ವಿಜ|
ಪುಷ್ಣಾತ್ಯೋಷಧಯ: ಸರ್ವಾ ಜೀವನಾಯಾಮೃತಂ ಹಿ ತತ್||19||

ತೇನ ವೃದ್ಧಿಂ ಪರಾಂ ನೀತ: ಸಕಲಶ್ಚೌಷಧೀಗಣ:|
ಸಾಧಕ: ಫಲಪಾಕಾಂತ: ಪ್ರಜಾನಾಂ ದ್ವಿಜ ಜಾಯತೇ||20||

ತೇನ ಯಜ್ಞಾನ್ಯಥಾಪ್ರೋಕ್ತಾನ್ಮಾನವಾ: ಶಾಸ್ತ್ರಚಕ್ಷುಷ:|
ಕುರ್ವಂತ್ಯಹರಹಸ್ತೈಶ್ಚ ದೇವಾನಾಪ್ಯಾಯಯಂತಿ ತೇ||21||

ರೋಹಿಣೀ ಮುಂತಾದ ಸಮ ನಕ್ಷತ್ರಗಳಲ್ಲಿ ಸುರಿಯುವ ಜಲವು ನೇರವಾಗಿ ಸೂರ್ಯಕಿರಣಗಳು ಹೀರಿ ಸುರಿಸಿದ ಆಕಾಶಗಂಗೆ ಜಲ.

ಈ ಉಭಯ ಜಲವೂ ಅತ್ಯಂತ ಪುಣ್ಯಕರವಾದದ್ದು. ಮನುಷ್ಯರಿಗೆ ಪಾಪಭಯವನ್ನು ನಿವಾರಿಸತಕ್ಕದ್ದು. ಮೈತ್ರೇಯ, ಆಕಾಶಗಂಗಾಜಲ ಸ್ನಾನವು ದಿವ್ಯಸ್ನಾನವೆನಿಸುತ್ತದೆ.

ಇನ್ನು ಮೇಘಗಳಿಂದ ಸುರಿಯಲ್ಪಟ್ಟ ಜಲವು ಪ್ರಾಣಿಗಳ ಜೀವನಕ್ಕಾಗಿ ಸಮಸ್ತ ಸಸ್ಯಗಳನ್ನೂ ಪೋಷಿಸುತ್ತದೆ. ಈ ಜಲವು ಅಮೃತವೇ ಸರಿ.

ಆದುದರಿಂದ ಬೆಳೆಯುವ ಸಮಸ್ತ ಸಸ್ಯಗಣವೂ ಫಸಲನ್ನು ನೀಡಿ ಒಣಗುತ್ತ ಪ್ರಾಣಿಗಳ ಉತ್ಪತ್ತಿ ಪೋಷಣೆಗಳಿಗೆ ಸಾಧಕವಾಗಿದೆ.

ಈ ಧ್ಯಾನಗಳಿಂದ ಶಾಸ್ತ್ರವಿದರಾದ ಮಾನವರು ಶಾಸ್ತ್ರೋಕ್ತ ಯಜ್ಞಗಳನ್ನಾಚರಿಸಿ ಪ್ರತಿದಿನವೂ ದೇವತೆಗಳನ್ನು ಆಪ್ಯಾಯನಗೊಳಿಸುತ್ತಾರೆ.
********

🔯🔔 ಸಂಚಿಕೆ - 343🔔🔯

ದ್ವಿತೀಯಾಂಶ:

ಸಪ್ತಮೋಧ್ಯಾಯ:
********
ಶ್ರೀಮೈತ್ರೇಯ ಉವಾಚ:

ಕಥಿತಂ ಭೂತಲಂ ಬ್ರಹ್ಮನ್ ಮಮೈತದಖಿಲಂ ತ್ವಯಾ|
ಭೂವರ್ಲೋಕಾದಿಕಾನ್ ಲೋಕಾನ್ ಶ್ರೋತುಮಿಚ್ಛಾಮ್ಯಹಂ ಮುನೇ||1||

ತಥೈವ ಗ್ರಹಸಂಸ್ಥಾನಂ ಪ್ರಮಾಣಾನಿ ಯಥಾತಥಾ|
ಸಮಾಚಕ್ಷ್ವ ಮಹಾಭಾಗ ತನ್ಮಹ್ಯಂ ಪರಿಪೃಚ್ಛತೇ||2||

ಶ್ರೀಪರಾಶರ ಉವಾಚ:

ರವಿಚಂದ್ರಮಸೋರ್ಯಾವನ್ಮಯೂಖೈರವಭಾಸ್ಯತೇ|
ಸಸಮುದ್ರಸರಿಚ್ಛೈಲಾ ತಾವತೀ ಪೃಥಿವೀ ಸ್ಮೃತಾ||3||

ಯಾವತ್ ಪ್ರಮಾಣಾ ಪೃಥಿವೀ ವಿಸ್ತಾರಪರಿಮಂಡಲಾತ್|
ನಭಸ್ತಾವತ್ ಪ್ರಮಾಣಂ ವೈ ವ್ಯಾಸಮಂಡಲತೋ ದ್ವಿಜ||4||

ಭೂಮೇರ್ಯೋಜನಲಕ್ಷೇ ತು ಸೌರಂ ಮೈತ್ರೇಯ ಮಂಡಲಮ್|
ಲಕ್ಷಾದ್ದಿವಾಕರಸ್ಯಾಪಿ ಮಂಡಲಂ ಶಶಿನ: ಸ್ಥಿತಮ್||5||

ಮೈತ್ರೇಯರು ಹೇಳುತ್ತಾರೆ:-

ಮಹರ್ಷಿಗಳೇ, ನೀವು ನನಗೆ ಸಮಸ್ತ ಭೂಮಂಡಲದ ವೃತ್ತಾಂತವನ್ನೂ ಹೇಳಿದಿರಿ. ಭುವರ್ವೋಕ ಮೊದಲಾದ ಲೋಕಗಳ ವಿಷಯವನ್ನು ಕೇಳಲಪೇಕ್ಷಿಸುತ್ತೇನೆ. 
ಹಾಗೆಯೇ ಗ್ರಹಗಳ ಸ್ಥಾನ, ಪ್ರಮಾಣ ಮೊದಲಾದ್ದನ್ನೂ ತಿಳಿಸಿರಿ - ಎಂದರು.

ಪರಾಶರರು ಹೇಳಿದರು:-

ಸೂರ್ಯ ಚಂದ್ರರ ಕಿರಣಗಳು ಎಷ್ಟು ದೂರದ ವರೆಗೆ ಪ್ರಕಾಶಿಸುತ್ತವೆಯೋ ಅಷ್ಟು ದೂರದವರೆಗೆ ಸಮುದ್ರ ನದೀ ಶೈಲಗಳಿಂದ ಕೂಡಿದ ಪ್ರದೇಶವು ಪೃಥಿವಿಯೆನಿಸಿಕೊಂಡಿದೆ. (ಭೂರ್ಲೋಕ).

ಪೃಥ್ವಿಯು ಎಷ್ಟು ಅಗಲ ಸುತ್ತಳತೆಗಳುಳ್ಳದ್ದೋ ಮೇಲೆ ಅಷ್ಟು ದೂರದ ಆಕಾಶಪ್ರದೇಶವು ಭುವರ್ಲೋಕವೆನಿಸಿಕೊಳ್ಳುತ್ತದೆ. 

ಭೂಮಿಗೆ ಲಕ್ಷಯೋಜನ ದೂರದಲ್ಲಿ ಸೂರ್ಯಮಂಡಲವಿದೆ. ಸೂರ್ಯನಿಂದ ಲಕ್ಷಯೋಜನ  ದೂರದಲ್ಲಿ ಚಂದ್ರಮಂಡಲವಿದೆ‌ 
********


ಈ ಸಪ್ತಮೋಧ್ಯಾಯದಲ್ಲಿ ಒಟ್ಟು 44 ಶ್ಲೋಕಗಳಿವೆ. 
ಭೂರ್ಲೋಕಾದಿ ಸಪ್ತ ಊರ್ಧ್ವಲೋಕಗಳ ವೃತ್ತಾಂತ, "ವಿಷ್ಣುವೇ ವಿಶ್ವಕಾರಣ" ವಿಷಯ ವಿವರಣೆ ಈ ಅಧ್ಯಾಯದಲ್ಲಿದೆ.

******

🔯🔔 ಸಂಚಿಕೆ - 342🔔🔯
********

ದ್ವಿತೀಯಾಂಶ:

ಷಷ್ಠೋಧ್ಯಾಯ:
********
ಜ್ಞಾನಮೇವ ಪರಂ ಬ್ರಹ್ಮ ಜ್ಞಾನಂ ಬಂಧಾಯ ಚೇಷ್ಯತೇ|
ಜ್ಞಾನಾತ್ಮಕಮಿದಂ ವಿಶ್ವಂ ನ ಜ್ಞಾನಾದ್ವಿದ್ಯತೇ ಪರಮ್||48||

ವಿದ್ಯಾವಿದ್ಯೇತಿ ಮೈತ್ರೇಯ ಜ್ಞಾನಮೇವೋಷಧಾರಯ||49||

ಏವಮೇತನ್ಮಯಾಖ್ಯಾತಂ ಭವತೋ ಮಂಡಲಂ ಭುವ:|
ಪಾತಲಾನಿ ಚ ಸರ್ವಾಣಿ ತಥೈವ ನರಕಾ ದ್ವಿಜ||50||

ಸಮುದ್ರಾ: ಪರ್ವತಾಶ್ಚೈವ ದ್ವೀಪಾ ವರ್ಷಾಣಿ ನಿಮ್ನಗಾ:|
ಸಂಕ್ಷೇಪಾತ್ಸರ್ವಮಾಖ್ಯಾತಂ ಕಿಂ ಭೂಯ: ಶ್ರೋತುಮಿಚ್ಛಸಿ||51||

ಇತಿ ಶ್ರೀವಿಷ್ಣುಪುರಾಣೇ ದ್ವಿತೀಯೇಂಶೇ ಷಷ್ಠೋಧ್ಯಾಯ:||

ಜ್ಞಾನಾತ್ಮಕವಾದ ಪರಬ್ರಹ್ಮವೇ ಪರಮಾರ್ಥ. ಜ್ಞಾನವೇ ಪರಬ್ರಹ್ಮ. ಅವಿದ್ಯೋಪಾಧಿಯಿಂದ ಜ್ಞಾನವೇ ಸಂಸಾರಬಂಧಕ್ಕೆ ಕಾರಣ. 

ಈ ವಿಶ್ವವು ಬರಿಯ ಜ್ಞಾನಾತ್ಮಕವಾದುದ್ದು. ಜ್ಞಾನಕ್ಕಿಂತ ಬೇರೆಯಾದದ್ದು ಇಲ್ಲ. ವಿದ್ಯೆ, ಅವಿದ್ಯೆಗಳು, ಮೈತ್ರೇಯ, ಜ್ಞಾನವೆಂದೇ ತಿಳಿ. 

ಈ ರೀತಿಯಾಗಿ ನಿನಗೆ ಭೂಮಂಡಲ, ಸಮಸ್ತ ಪಾತಾಳಭೇದಗಳು, ನರಕಗಳು - ಇವುಗಳ ವಿಷಯವಾಗಿ ಹೇಳಿದ್ದೇನೆ. 

ಸಮುದ್ರ, ಪರ್ವತ, ದ್ವೀಪ, ವರ್ಷ, ನದಿ - ಇವೆಲ್ಲವನ್ನೂ ಸಂಕ್ಷೇಪವಾಗಿ ತಿಳಿಸಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ? 

ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಆರನೆಯ ಅಧ್ಯಾಯ ಮುಗಿಯಿತು. 
********

🔯🔔 ಸಂಚಿಕೆ - 341🔔🔯
********

ದ್ವಿತೀಯಾಂಶ:

ಷಷ್ಠೋಧ್ಯಾಯ:
********
ಮನ:ಪ್ರೀತಿಕರ: ಸ್ವರ್ಗೋ ನರಕಸ್ತದ್ವಿಪರ್ಯಯ:|
ನರಕಸ್ವರ್ಗಸಂಜ್ಞೇ ವೈ ಪಾಪಪುಣ್ಯೇ ದ್ವಿಜೋತ್ತಮ||44||

ವಸ್ತ್ವೇಕಮೇವ ದು:ಖಾಯ ಸುಖಾಯೇರ್ಷ್ಯಾಗಮಾಯ ಚ|
ಕೋಪಾಯ ಚ ಯತಸ್ತಸ್ಮಾದ್ವಸ್ತು ವಸ್ತ್ವಾತ್ಮಕಂ ಕುತ:||45||

ತದೇವ ಪ್ರೀತಯೇ ಭೂತ್ವಾ ಪುನರ್ದು:ಖಾಯ ಜಾಯತೇ|
ತದೇವ ಕೋಪಾಯ ಯತ: ಪ್ರಸಾದಾಯ ಚ ಜಾಯತೇ||46||

ತಸ್ಮಾದ್ ದು:ಖಾತ್ಮಕಂ ನಾಸ್ತಿ ನ ಚ ಕಿಂಚಿತ್ಸುಖಾತ್ಮಕಮ್|
ಮನಸ: ಪರಿಣಾಮೋಯಂ ಸುಖದು:ಖಾದಿಲಕ್ಷಣ:||47||

ಮನಸ್ಸಿಗೆ ಸಂತೋಷಕರವಾದದ್ದೇ ಸ್ವರ್ಗ, ಅದಕ್ಕೆ ವಿಪರೀತವಾಗಿ ದು:ಖಕರವಾದದ್ದೇ ನರಕ. 
ಪಾಪಕ್ಕೆ ನರಕವೆಂದೂ ಪುಣ್ಯಕ್ಕೆ ಸ್ವರ್ಗವೆಂದೂ ಹೆಸರು. 

ಒಂದೇ ಪದಾರ್ಥವು ಸುಖಕ್ಕೂ ಕಾರಣವಾಗುತ್ತದೆ; 
ದು:ಖ, ಅಸೂಯೆ, ಕೋಪಗಳಿಗೂ ಕಾರಣವಾಗುತ್ತದೆ. 
ಹೀಗಿರುವಾಗ ಯಾವ ಪದಾರ್ಥವು ನಿಯತ ಸ್ವಭಾವವುಳ್ಳ ವಸ್ತುವಾಗಿದೆ?

ಅದೇ ಪ್ರೀತಿಗೆ ಕಾರಣವಾಗಿದ್ದು ಮತ್ತೆ ದು:ಖಕ್ಕೆ ಕಾರಣವಾಗುತ್ತದೆ. ಅದೇ ವಸ್ತು ಕೋಪಕ್ಕೆ ಕಾರಣವಾಗಿ ಮತ್ತೆ ಪ್ರಸನ್ನತೆಗೆ ಕಾರಣವಾಗುತ್ತದೆ. 

ಆದ್ದರಿಂದ, ಮೈತ್ರೇಯ, ಸುಖಾತ್ಮಕವಾದ ವಸ್ತುವೂ ಇಲ್ಲ, ದು:ಖಾತ್ಮಕವಾದ ವಸ್ತುವೂ ಇಲ್ಲ. 
ಸುಖ-ದು:ಖಾದಿಗಳೆಂಬುದೆಲ್ಲ ಕೇವಲ ಮನಸ್ಸಿನ ಪರಿಣಾಮ. 
********

🔯🔔 ಸಂಚಿಕೆ - 340🔔🔯
********

ದ್ವಿತೀಯಾಂಶ:

ಷಷ್ಠೋಧ್ಯಾಯ:
********
ಪ್ರಾತರ್ನಿಶಿ ತಥಾ ಸಂಧ್ಯಾಮಧ್ಯಾಹ್ನಾದಿಷು ಸಂಸ್ಮರನ್|
ನಾರಾಯಣಮವಾಪ್ನೋತಿ ಸದ್ಯ: ಪಾಪಕ್ಷಯಾನ್ನರ:||39||

ವಿಷ್ಣುಸಂಸ್ಮರಣಾತ್ ಕ್ಷೀಣಸಮಸ್ತಕ್ಲೇಶ ಸಂಚಯ:|
ಮುಕ್ತಿಂ ಪ್ರಯಾತಿ ಸ್ವರ್ಗಾಪ್ತಿಸ್ತಸ್ಯ ವಿಘ್ನೋನುಮೀಯತೇ||40||

ವಾಸುದೇವೇ ಮನೋ ಯಸ್ಯ ಜಪಹೋಮಾರ್ಚನಾದಿಷು|
ತಸ್ಯಾಂತರಾಯೋ ಮೈತ್ರೇಯ ದೇವೇಂದ್ರತ್ವಾದಿಕಂ ಫಲಮ್||41||

ಕ್ವ ನಾಕಪೃಷ್ಠಗಮನಂ ಪುನರಾವೃತ್ತಿಲಕ್ಷಣಮ್|
ಕ್ವ ಜಪೋ ವಾಸುದೇವೇತಿ ಮುಕ್ತಿಭೀಜಮನುತ್ತಮಮ್||42||

ತಸ್ಮಾದಹರ್ನಿಶಂ ವಿಷ್ಣುಂ ಸಂಸ್ಮರನ್ ಪುರುಷೋ ಮುನೇ|
ನ ಯಾತಿ ನರಕಂ ಮರ್ತ್ಯ: ಸಂಕ್ಷೀಣಾಖಿಲಪಾತಕ:||43||

ಪ್ರಾತ:ಕಾಲ, ಸಾಯಂಕಾಲ, ಮಧ್ಯಾಹ್ನ, ರಾತ್ರಿಗಳಲ್ಲಿ ಶ್ರೀಮನ್ನಾರಾಯಣನನ್ನು ಧ್ಯಾನ ಮಾಡತಕ್ಕವನು ಶೀಘ್ರವಾಗಿ ಪಾಪಗಳನ್ನು ಕ್ಷಯಿಸಿಕೊಳ್ಳುತ್ತಾನೆ. 

ವಿಷ್ಣುಸ್ಮರಣೆಯಿಂದ ಸಮಸ್ತ ಪಾಪಸಂಚಯವೂ ನಾಶವಾಗಲಾಗಿ, ಮನುಷ್ಯನು ಮೋಕ್ಷವನ್ನೈದುತ್ತಾನೆ. ಆತನಿಗೆ ಸ್ವರ್ಗಪ್ರಾಪ್ತಿಯು ವಿಘ್ನವೆಂದು ತಿಳಿಯಲ್ಪಟ್ಟಿದೆ. 

ಯಾವಾತನಿಗೆ ಜಪ ಹೋಮ ಅರ್ಚನಾದಿಗಳನ್ನು ಮಾಡುವಾಗ ಚಿತ್ತವು ವಾಸುದೇವನಲ್ಲಿ ನೆಲೆಸಿರುತ್ತದೆಯೋ, ಆತನಿಗೆ ದೇವೇಂದ್ರಪದವಿ ಮೊದಲಾದದ್ದು ಸಹ ವಿಘ್ನವೆಂದೇ ಗಣ್ಯವಾಗುತ್ತದೆ. 

ಪುನರ್ಜನ್ಮದ ಆವೃತ್ತಿಚಕ್ರಕ್ಕೆ ಎಸೆಯುವ ಸ್ವರ್ಗಪ್ರಾಪ್ತಿ ಎಲ್ಲಿ? ಶ್ರೇಷ್ಠವಾದ ಮುಕ್ತಿಬೀಜವೆನಿಸುವ 'ವಾಸುದೇವ' ಎಂಬ ಜಪವೆಲ್ಲಿ? 

ಆದ್ದರಿಂದ ಮೈತ್ರೇಯ, ಅಹೋರಾತ್ರವೂ ವಿಷ್ಣುವನ್ನು ಸ್ಮರಿಸುತ್ತಿದ್ದರೆ ಸಮಸ್ತ ಪಾಪವೂ ಕ್ಷಯಿಸುವುದರಿಂದ ಮಾನವನು ನರಕಕ್ಕೆ ಹೋಗುವದಿಲ್ಲ. 
********


🔯🔔 ಸಂಚಿಕೆ - 331🔔🔯
********
ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಐದನೆಯ ಅಧ್ಯಾಯವು ಮುಗಿಯಿತು.

ದ್ವಿತೀಯಾಂಶ:

ಪಂಚಮೋಧ್ಯಾಯ:
********
ಯದಾ ವಿಜೃಂಭತೇನಂತೋ ಮದಾಘೂರ್ಣಿತಲೋಚನ:|
ತದಾ ಚಲತಿ ಭೂರೇಷಾ ಸಾಬ್ಧಿತೋಯಾ ಸಕಾನನಾ||23||

ಗಂಧರ್ವಾಪ್ಸರಸ: ಸಿದ್ಧಾ: ಕಿನ್ನರೋರಗಚಾರಣಾ:|
ನಾಂತಂ ಗುಣಾನಾಂ ಗಚ್ಛಂತಿ ತೇನಾನಂತೋಯಮವ್ಯಯ:||24||

ಯಸ್ಯ ನಾಗವಧೂಹಸ್ತೈರ್ಲೇಪಿತಂ ಹರಿಚಂದನಮ್|
ಮುಹು: ಶ್ವಾಸಾನಿಲಾಪಾಸ್ತಂ ಯಾತಿ ದಿಕ್ಷೂದವಾಸತಾಮ್||25||

ಯಮಾರಾಧ್ಯ ಪುರಾಣರ್ಷಿರ್ಗರ್ಗೋ ಜ್ಯೋತೀಂಷಿ ತತ್ತ್ವತ:|
ಜ್ಞಾತವಾನ್ ಸಕಲಂ ಚೈವ ನಿಮಿತ್ತಪಠಿತಂ ಫಲಮ್||26||

ತೇನೇಯಂ ನಾಗವರ್ಯೇಣ ಶಿರಸಾ ವಿಧೃತಾ ಮಹೀ|
ಬಿಭರ್ತಿ ಮಾಲಾಂ ಲೋಕಾನಾಂ ಸದೇವಾಸುರಮಾನುಷಾಮ್||27||

ಇತಿ ಶ್ರೀವಿಷ್ಣುಪುರಾಣೇ ದ್ವಿತೀಯೇಂಶೇ ಪಂಚಮೋಧ್ಯಾಯ:||

ಮದದಿಂದ ನೇತೃಗಳನ್ನು ಅಲ್ಲಾಡಿಸುತ್ತ ಅನಂತನು ಯಾವಾಗ ಆಕಳಿಸುತ್ತಾನೋ ಆಗ ಸಮುದ್ರಾರಣ್ಯಸಹಿತವಾದ ಈ ಪೃಥ್ವಿ ಅಲ್ಲಾಡುತ್ತದೆ! 

ಗಂಧರ್ವರೂ, ಅಪ್ಸರೆಯರೂ, ಸಿದ್ಧರೂ, ಕಿನ್ನರೋಗಚಾರಣರೂ ಸಹ ಈತನ ಗುಣಗಳ ಅಂತವನ್ನು ಕಂಡಿಲ್ಲವಾದ್ದರಿಂದ ಈತನು ಅವ್ಯಯನಾದ ಅನಂತನೆನಿಸಿದ್ದಾನೆ. 

ನಾಗವಧುಗಳು ಈ ಅನಂತಮೂರ್ತಿಗೆ ಹರಿಚಂದನವನ್ನು ಲೇಪಿಸುತ್ತಾರೆ. ಅದು ಅನಂತನ ಶ್ವಾಸಾನಿಲದಿಂದ ಒಣಗಿದ ಸುಗಂಧಚೂರ್ಣವಾಗಿ ದಿಗ್ದಿಗಂತಗಳಿಗೆ ಹಾರಿಹೋಗುತ್ತದೆ. 

ಪುರಾಣ ಋಷಿಯಾದ ಗರ್ಗನು ಈ ಆದಿಶೇಷನನ್ನು ಆರಾಧಿಸಿ ನಕ್ಷತ್ರಾದಿಜ್ಯೋತಿರ್ಮಂಡಲದ ತತ್ತ್ವವನ್ನೂ ಶಕುನಗಳಿಂದಾಗುವ ಸಕಲ ಪಾಪಗಳನ್ನೂ ಅರಿತುಕೊಂಡನು. 

ಅಂತಹ ನಾಗಶ್ರೇಷ್ಠನಾದ ಆದಿಶೇಷನಿಂದ ಈ ಪೃಥ್ವಿಯು ಧರಿಸಲ್ಪಟ್ಟಿದೆ. ದೇವಾಸುರಮನುಷ್ಯರಿಂದ ಸಹಿತವಾದ ಲೋಕಗಳ ಮಾಲೆಯನ್ನು ಆತನು ಧರಿಸಿದ್ದಾನೆ. 

ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಐದನೆಯ ಅಧ್ಯಾಯವು ಮುಗಿಯಿತು. 
********


🔯🔔 ಸಂಚಿಕೆ - 299🔔🔯

ದ್ವಿತೀಯಾಂಶ:

ತೃತೀಯೋಧ್ಯಾಯ:
********
ಶ್ರೀಪರಾಶರ ಉವಾಚ:

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್|
ವರ್ಷಂ ತದ್ಭಾರತಂ ನಾಮ ಭಾರತೀ ಯತ್ರ ಸಂತತಿ:||1||

ನವಯೋಜನಸಹಸ್ರೋ ವಿಸ್ತಾರೋಸ್ಯ ಮಹಾಮುನೇ|
ಕರ್ಮಭೂಮಿರಿಯಂ ಸ್ವರ್ಗಮಪವರ್ಗಂ ಚ ಗಚ್ಛತಾಮ್||2||

ಮಹೇಂದ್ರೋ ಮಲಯ: ಸಹ್ಯ: ಶುಕ್ತಿಮಾನೃಕ್ಷಪರ್ವತ:|
ವಿಂಧ್ಯಶ್ಚ ಪಾರಿಯಾತ್ರಶ್ಚ ಸಪ್ತಾತ್ರ ಕುಲಪರ್ವತಾ:||3||

ಅತ: ಸಂಪ್ರಾಪ್ಯತೇ ಸ್ವರ್ಗೋ ಮುಕ್ತಿಮಸ್ಮಾತ್ ಪ್ರಯಾಂತಿ ವೈ|
ತಿರ್ಯಕ್ತ್ವಂ ನರಕಂ ಚಾಪಿ ಯಾಂತ್ಯತ: ಪುರುಷಾ ಮುನೇ||4||

ಇತ: ಸ್ವರ್ಗಶ್ಚ ಮೋಕ್ಷಶ್ಚ ಮಧ್ಯಂ ಚಾಂತಶ್ಚ ಗಮ್ಯತೇ|
ನ ಖಲ್ವನ್ಯತ್ರ ಮರ್ತ್ಯಾನಾಂ ಕರ್ಮಭೂಮೌ ವಿಧೀಯತೇ||5||

ಪರಾಶರರು ಹೇಳಿದರು:-

ಸಮುದ್ರಕ್ಕೆ ಉತ್ತರದಲ್ಲಿ ಮತ್ತು ಹಿಮಾಲಯದ ದಕ್ಷಿಣದಲ್ಲಿ ಇರತಕ್ಕ ದೇಶಕ್ಕೆ ಭಾರತ ವರ್ಷವೆಂದು ಹೆಸರು. ಭರತನ ಸಂತತಿ ಇಲ್ಲಿ ನೆಲೆಸಿದೆ. 

ಇದು ಒಂಬತ್ತು ಸಾವಿರ ಯೋಜನಗಳ ವಿಸ್ತಾರ/ಸುತ್ತಳತೆ ಉಳ್ಳದ್ದು. ಸ್ವರ್ಗವನ್ನು ಮತ್ತು ಮೋಕ್ಷವನ್ನು ಸೇರತಕ್ಕವರಿಗೆ ಭಾರತವರ್ಷವು ಕರ್ಮಭೂಮಿಯಾಗಿದೆ. 

ಮಹೇಂದ್ರ, ಮಲಯ, ಸಹ್ಯ, ಶುಕ್ತಿಮಾನ್, ಋಕ್ಷ, ವಿಂಧ್ಯ, ಪಾರಿಯಾತ್ರ - ಇವು ಏಳು ಇಲ್ಲಿರುವ ಕುಲಪರ್ವತಗಳು. 

ಮೈತ್ರೇಯ, ಈ ಕರ್ಮಭೂಮಿಯಿಂದ ಸ್ವರ್ಗವು ಪ್ರಾಪ್ತವಾಗುತ್ತದೆ. ಇಲ್ಲಿಂದಲೇ ಮುಕ್ತಿಯನ್ನೈದುತ್ತಾರೆ. ತಿರ್ಯಗ್ಯೋನಿಯನ್ನು ನರಕವನ್ನು ಪಡೆಯುವುದು ಇಲ್ಲಿಂದಲೇ. 

ಇಲ್ಲಿಂದಲೇ ಕರ್ಮಾನುಸಾರವಾಗಿ ಸ್ವರ್ಗ, ಮೋಕ್ಷ, ಅಂತರಿಕ್ಷಲೋಕ, ಪಾತಾಳಾದಿ ಎಲ್ಲವೂ ದೊರೆಯುತ್ತದೆ. ಮಾನವರಿಗೆ ಭಾರತ ವರ್ಷವನ್ನು ಬಿಟ್ಟು ಬೇರೆ ಎಲ್ಲಿಯೂ ಕರ್ಮವು ವಿಹಿತವಲ್ಲ. 
********


ತೃತೀಯ ಅಧ್ಯಾಯದಲ್ಲಿ ಒಟ್ಟು 28 ಶ್ಲೋಕಗಳಿವೆ. 

ಭಾರತಾದಿ ನವಖಂಡಗಳ ವಿಭಾಗದ ವಿವರಣೆ ಇರುತ್ತದೆ. 
*****

🔯🔔 ಸಂಚಿಕೆ - 300🔔🔯
********

ದ್ವಿತೀಯಾಂಶ:

ತೃತೀಯೋಧ್ಯಾಯ:

********
ಭಾರತಸ್ಯಾಸ್ಯ ವರ್ಷಸ್ಯ ನವಭೇದಾನ್ನಿಶಾಮಯ|
ಇಂದ್ರದ್ವೀಪ: ಕಸೇರುಶ್ಚ ತಾಮ್ರಪರ್ಣೋ ಗಭಸ್ತಿಮಾನ್||6||

ನಾಗದ್ವೀಪಸ್ತಥಾ ಸೌಮ್ಯೋ ಗಂಧರ್ವಸ್ತ್ವಥ ವಾರುಣ:|

ಅಯಂ ತು ನವಮಸ್ತೇಷಾಂ ದ್ವೀಪ: ಸಾಗರಸಂವೃತ:||7||

ಯೋಜನಾನಾಂ ಸಹಸ್ರಂ ತು ದ್ವೀಪೋಯಂ ದಕ್ಷಿಣೋತ್ತರಾತ್|

ಪೂರ್ವೇ ಕಿರಾತಾ ಯಸ್ಯಾಂತೇ ಪಶ್ಚಿಮೇ ಯವನಾ: ಸ್ಥಿತಾ:||8||

ಬ್ರಾಹ್ಮಣಾ: ಕ್ಷತ್ರಿಯಾ: ವೈಶ್ಯಾ ಮಧ್ಯೇ ಶೂದ್ರಾಶ್ಚ ಭಾಗಶ:|

ಇಜ್ಯಾಯುಧವಣಿಜ್ಯಾದ್ಯೈರ್ವರ್ತಯಂತೋ ವ್ಯವಸ್ಥಿತಾ:||9||

ಶತದ್ರುಚಂದ್ರಭಾಗಾದ್ಯಾ ಹಿಮವತ್ಪಾದನಿರ್ಗತಾ:|

ವೇದಸ್ಮೃತಿಮುಖಾದ್ಯಶ್ಚ ಪಾರಿಯಾತ್ರೋದ್ಭವಾ ಮುನೇ||10||

ಈ ಭಾರತ ದೇಶದಲ್ಲಿ ಒಂಬತ್ತು ವಿಭಾಗಗಳಿವೆ. ಅವನ್ನು ಕೇಳು:-

ಇಂದ್ರದ್ವೀಪ,  ಕಸೇರು,  ತಾಮ್ರಪರ್ಣ,  ಗಭಸ್ತಿಮಾನ್,  ನಾಗದ್ವೀಪ,  ಸೌಮ್ಯ,  ಗಂಧರ್ವ,  ವಾರುಣ ಮತ್ತು ಭಾರತವರ್ಷ. 
ಅವುಗಳಲ್ಲಿ ಒಂಬತ್ತನೇಯ ಈ ದ್ವೀಪವಾದರೋ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. 

ಈ ಭಾರತವರ್ಷವು ದಕ್ಷಿಣೋತ್ತರವಾಗಿ ಒಂದು ಸಾವಿರ ಯೋಜನವಿದೆ. ಇದರ ಪೂರ್ವದಲ್ಲಿ ಕಿರಾತರೂ ಪಶ್ಚಿಮದಲ್ಲಿ ಯವನರೂ ವಾಸವಾಗಿದ್ದಾರೆ. 


ಮಧ್ಯದಲ್ಲಿರತಕ್ಕವರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ - ಎಂದು ನಾಲ್ಕು ವಿಭಾಗವಾಗಿದ್ದಾರೆ. ಯಜ್ಞ, ಶಸ್ತ್ರಧಾರಣ, ವಾಣಿಜ್ಯ - ಮುಂತಾದ ವೃತ್ತಿಗಳನ್ನು ನಡೆಸುತ್ತ ಇವರು ವ್ಯವಸ್ಥಿತರಾಗಿದ್ದಾರೆ. 


ಶತದ್ರು,  ಚಂದ್ರಭಾಗ - ಮೊದಲಾದ ನದಿಗಳು ಹಿಮಾಲಯದ ತಪ್ಪಲಿನಲ್ಲಿ ಹೊರಟಿವೆ. ವೇದಸ್ಮೃತಿ ಮುಂತಾದ ನದಿಗಳು ಪಾರಿಯತ್ರ ಪರ್ವತದಿಂದ ಹರಿಯುತ್ತವೆ. 

********

ಭಾರತದೇಶವನ್ನು ಕರ್ಮಭೂಮಿ, ಜ್ಞಾನಭೂಮಿ, ತಪೋಭೂಮಿ, ಯೋಗಭೂಮಿ, ಇತ್ಯಾದಿಗಳಿಂದ ಕರೆಯಲಾಗಿದೆ. 
ಇಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಸಮಾನವಾಗಿ ಸ್ವೀಕರಿಸಲಾಗಿದೆ. 
ಪರಿಶುದ್ಧವಾದ ಕರ್ಮದಿಂದ ಚಿತ್ತಶುದ್ಧಿ, ಚಿತ್ತಶುದ್ಧಿಯಿಂದ ಪರಮಾರ್ಥ ಸಾಧನೆ, ಮೋಕ್ಷ ಎಂಬುದು ಭಾರತ ದೇಶದ್ದೇ ವಿಶೇಷ. 
ಇದು ಬೇರೆಡೆ ಇರುವುದಿಲ್ಲ.
******


🔯🔔 ಸಂಚಿಕೆ - 301🔔🔯

ದ್ವಿತೀಯಾಂಶ:

ತೃತೀಯೋಧ್ಯಾಯ:

********
ನರ್ಮದಾ ಸುರಸಾದ್ಯಾಶ್ಚ ನದ್ಯೋ ವಿಂಧ್ಯಾದ್ರಿನಿರ್ಗತಾ:|
ತಾಪೀಪಯೋಷ್ಣೀನಿರ್ವಿಂಧ್ಯಾ ಪ್ರಮುಖಾ ಋಕ್ಷಸಂಭವಾ:||11||

ಗೋದಾವರೀಭೀಮರಥೀಕೃಷ್ಣವೇಣ್ಯಾದಿಕಾಸ್ತಥಾ|

ಸಹ್ಯಪಾದೋದ್ಭವಾ ನದ್ಯ: ಸ್ಮೃತಾ: ಪಾಪಭಯಾಪಹಾ:||12||

ಕೃತಮಾಲಾತಾಮ್ರಪರ್ಣೀಪ್ರಮುಖಾ ಮಲಯೋದ್ ಭವಾ:|

ತ್ರಿಸಾಮಾ ಚಾರ್ಯಕುಲ್ಯಾದ್ಯಾ ಮಹೇಂದ್ರಪ್ರಭವಾ: ಸ್ಮೃತಾ:||13||

ಋಷಿಕುಲ್ಯಾಕುಮಾರಾದ್ಯಾ: ಶುಕ್ತಿಮತ್ಪಾದಸಂಭವಾ:|

ಆಸಾಂ ನದ್ಯುಪನದ್ಯಶ್ಚ ಸಂತ್ಯನ್ಯಾಶ್ಚ ಸಹಸ್ರಶ:||14||

ನರ್ಮದಾ, ಸುರಸಾ - ಮೊದಲಾದ ನದಿಗಳು ವಿಂಧ್ಯ ಪರ್ವತದಿಂದ ಹುಟ್ಟಿವೆ. ತಾಪೀ, ಷಯೋಷ್ಣೀ, ನಿರ್ವಿಂಧ್ಯಾ - ಮೊದಲಾದುವು ಋಕ್ಷಗಿರಿಸಂಭೂತವಾದವು. 


ಗೋದಾವರೀ, ಭೀಮರಥೀ, ಕೃಷ್ಣವೇಣೀ - ಮೊದಲಾದುವು ಸಹ್ಯ ಪರ್ವತಶ್ರೇಣಿಯಿಂದ ಹರಿಯುತ್ತಿರುವ ಪುಣ್ಯ ನದಿಗಳು. 


ಕೃತಮಾಲಾ, ತಾಮ್ರಪರ್ಣೀ - ಮುಂತಾದುವು ಮಲಯ ಗಿರಿಗಳಿಂದಲೂ; 

ತ್ರಿಸಾಮಾ, ಆರ್ಯಕುಲ್ಯಾ - ಮುಂತಾದುವು ಮಹೇಂದ್ರ ಗಿರಿಯಿಂದಲೂ;
ಋಷಿಕುಲ್ಯಾ, ಕುಮಾರ - ಮುಂತಾದುವು ಶುಕ್ತಿಮತ್ ಪರ್ವತದಿಂದಲೂ ಹುಟ್ಟಿ ಹರಿಯುವ ನದಿಗಳು. 
ಅಲ್ಲದೆ ಇತರ ನದಿಗಳೂ ಉಪನದಿಗಳೂ ಸಾವಿರಾರು ಇವೆ. 
********

🔯🔔 ಸಂಚಿಕೆ - 302🔔🔯

ದ್ವಿತೀಯಾಂಶ:

ತೃತೀಯೋಧ್ಯಾಯ:

********
ತಾಸ್ಮಿಮೇ ಕುರುಪಾಂಚಾಲಾ ಮಧ್ಯದೇಶಾದಯೋ ಜನಾ:|
ಪೂರ್ವದೇಶಾದಿಕಾಶ್ಚೈವ ಕಾಮರೂಪನಿವಾಸಿನ:||15||

ಪುಂಡ್ರಾ: ಕಲಿಂಗಾ ಮಗಧಾ ದಕ್ಷಿಣಾದ್ಯಾಶ್ಚ ಸರ್ವಶ:|

ತಥಾಪರಾಂತಾ ಸೌರಾಷ್ಟ್ರಾ: ಶೂರಾಭೀರಾಸ್ತಥಾರ್ಬುದಾ:||16||

ಕಾರೂಷಾ ಮಾಲವಾಶ್ಚೈವ ಪಾರಿಯಾತ್ರನಿವಾಸಿನ:|

ಸೌವೀರಾ: ಸೈಂಧವಾ ಹೂಣಾ: ಸಾಲ್ವಾ: ಕೋಸಲವಾಸಿನ:||17||

ಆಸಾಂ ಪಿಬಂತಿ ಸಲಿಲಂ ವಸಂತಿ ಸಹಿತಾ: ಸದಾ|

ಸಮೀಪತೋ ಮಹಾಭಾಗ ಹೃಷ್ಟಪುಷ್ಪಜನಾಕುಲಾ:||18||

ಆ ನದೀತೀರಗಳಲ್ಲಿ ಕುರು, ಪಾಂಚಾಲ, ಮಧ್ಯದೇಶ ನಿವಾಸಿಗಳೂ; ಕಾಮರೂಪ ಮುಂತಾದ ಪೂರ್ವದೇಶ ವಾಸಿಗಳೂ; ಪುಂಡ್ರ, ಕಲಿಂಗ, ಮಗಧ, ಮತ್ತು ಅನ್ಯ ದಾಕ್ಷಿಣಾತ್ಯರೂ ಇದ್ದಾರೆ. 

ಅಪರಾಂತ, ಸೌರಾಷ್ಟ್ರ, ಶೂರ, ಅಭೀರ, ಅರ್ಬುದರೂ ಇದ್ದಾರೆ. 

ಕಾರೂಷ, ಮಾಲವ, ಪಾರಿಯಾತ್ರ, ನಿವಾಸಿಗಳೂ; ಸೌವೀರ, ಸೈಂಧವ, ಹೂಣ, ಸಾಲ್ವ, ಕೋಸಲವಾಸಿಗಳೂ; ಆರಾಮ ಅಂಬಷ್ಠ, ಪಾರಸೀಕ ಮೊದಲಾದವರೂ ಈ ಭರತಖಂಡದಲ್ಲಿ ಇದ್ದಾರೆ. 


ಇವರೆಲ್ಲರೂ ಜೊತೆಯಾಗಿ ವಾಸಮಾಡುತ್ತ ಹಿಂದೆ ಹೇಳಿದ ನದಿಗಳ ಜಲವನ್ನು ಕುಡಿಯುತ್ತ ಇದ್ದಾರೆ. ಈ ಜನಪದಗಳಲ್ಲಿ ಇರತಕ್ಕ ಪ್ರಜೆಗಳು ಹೃಷ್ಟಪುಷ್ಟರಾಗಿದ್ದಾರೆ. 

********

🔯🔔 ಸಂಚಿಕೆ - 303🔔🔯

ದ್ವಿತೀಯಾಂಶ:

ತೃತೀಯೋಧ್ಯಾಯ:

********
ಚತ್ವಾರಿ ಭಾರತೇ ವರ್ಷೇ ಯುಗಾನ್ಯತ್ರ ಮಹಾಮುನೇ|
ಕೃತಂ ತ್ತೇತಾ ದ್ವಾಪರಂಚ ಕಲಿಶ್ಚಾನ್ಯತ್ರ ಚ ಕ್ವಚಿತ್||19||

ತಪಸ್ತಪ್ಯಂತಿ ಮುನಯೋ ಜುಹ್ಯತೇ ಚಾತ್ರ ಯಜ್ವಿನ:|

ದಾನಾನಿ ಚಾತ್ರ ದೀಯಂತೇ ಪರಲೋಕಾರ್ಥಮಾದರಾತ್||20||

ಪುರುಷೈರ್ಯಜ್ಞಪುರುಷೋ ಜಂಬೂದ್ವೀಪೇ ಸದೇಜ್ಯತೇ|

ಯಜ್ಞೈರ್ಯಜ್ಞಮಯೋ ವಿಷ್ಣುರನ್ಯದ್ವೀಷೇಷು ಚಾನ್ಯಥಾ||21||

ಅತ್ರಾಪಿ ಭಾರತಂ ಶ್ರೇಷ್ಠಂ ಜಂಬೂದ್ವೀಪೇ ಮಹಾಮುನೇ|

ಯತೋ ಹಿ ಕರ್ಮಭೂರೇಷಾ ಹ್ಯತೋನ್ಯಾ ಭೋಗಭೂಮಯ:||22||

ಅತ್ರಜನ್ಮಸಹಸ್ರಾಣಾಂ ಸಹಸ್ರೈರಪಿ ಸತ್ತಮ|

ಕದಾಚಿಲ್ಲಬತೇ ಜಂತುರ್ಮಾನುಷ್ಯಂ ಪುಣ್ಯಸಂಚಯಾತ್||23||

ಮೈತ್ರೇಯ, ಈ ಭಾರತ ವರ್ಷದಲ್ಲಿ ಕೃತ, ತ್ರೇತಾ, ದ್ವಾಪರ, ಕಲಿ - ಎಂಬ ನಾಲ್ಕು ಯುಗಗಳು ಪ್ರವರ್ತಿಸುತ್ತವೆ. 

ಇವು ಬೇರೆ ಇನ್ನೆಲ್ಲಿಯೂ ಇಲ್ಲ. 

ಇಲ್ಲಿ ಪರಲೋಕಾರ್ಥವಾಗಿ ನಿಷ್ಠೆಯಿಂದ ಮುನಿಗಳು ತಪಸ್ಸನ್ನಾಚರಿಸುತ್ತಾರೆ. 

ಯಾಜಕರು ಯಜ್ಞ ಮಾಡುತ್ತಾರೆ. 
ದಾನಿಗಳು ದಾನ ಮಾಡುತ್ತಾರೆ. 

ಜಂಬೂದ್ವೀಪದಲ್ಲಿ ಯಜ್ಞಪುರುಷನಾದ ವಿಷ್ಣು ಯಜ್ಞಾದಿದ್ವಾರಾ ಸದಾ ಅರ್ಚಿಸಲ್ಪಡುತ್ತಿದ್ದಾನೆ. ಅನ್ಯದ್ವೀಪಗಳಲ್ಲಿ ಬೇರೊಂದು ಪ್ರಕಾರದಿಂದ ಪೂಜಿಸಲ್ಪಡುತ್ತಾನೆ. 


ಮೈತ್ರೇಯ, ಜಂಬೂ ದ್ವೀಪದಲ್ಲಿಯೂ ಭಾರತ ವರ್ಷವು ಸರ್ವಶ್ರೇಷ್ಠವಾದುದು. ಏಕೆಂದರೆ, ಇದು ಕರ್ಮಭೂಮಿ. ಉಳಿದವು ಭೋಗ ಭೂಮಿಗಳು. 


ಎಷ್ಟೋ ಸಾವಿರಾರು ಜನ್ಮಗಳು ಕಳೆದ ಮೇಲೆ, ಸಂಗ್ರಹಿಸಿದ ಪುಣ್ಯಬಲದಿಂದ, ಯಾವಾಗಲೋ ಒಮ್ಮೆ ಭರತಖಂಡದಲ್ಲಿ ಜೀವಿಗೆ ಮನುಷ್ಯಜನ್ಮ ಬರುತ್ತದೆ. 

********


🔯🔔 ಸಂಚಿಕೆ - 305🔔🔯

ದ್ವಿತೀಯಾಂಶ:

ಚತುರ್ಥೋಧ್ಯಾಯ:

********
ಶ್ರೀಪರಾಶರ ಉವಾಚ:

ಕ್ಷಾರೋದೇನ ಯಥಾ ದ್ವೀಪೋ ಜಂಬೂಸಂಜ್ಞೋಭಿವೇಷ್ಟಿತ:|

ಸಂವೇಷ್ಟ್ಯ ಕ್ಷಾರಮುದಧಿಂ ಪ್ಲಕ್ಷದ್ವೀಪಸ್ತಥಾ ಸ್ಥಿತ:||1||

ಜಂಬೂದ್ವೀಪಸ್ಯ ವಿಸ್ತಾರ ಶತಸಾಹಸ್ರಸಮ್ಮಿತ:|

ಸ ಏವ ದ್ವಿಗುಣೋ ಬ್ರಹ್ಮನ್ ಪ್ಲಕ್ಷದ್ವೀಪ ಉದಾಹೃತ:||2||

ಸಪ್ತ ಮೇಧಾತಿಥೇ: ಪುತ್ರಾ: ಪ್ಲಕ್ಷದ್ವೀಪೇಶ್ವರಸ್ಯ ವೈ|

ಜ್ಯೇಷ್ಠ: ಶಾಂತಹಯೋ ನಾಮ ಶಿಶಿರಸ್ತದನಂತರ:||3||

ಸುಖೋದಯಸ್ತಥಾನಂದ: ಶಿವ: ಕ್ಷೇಮಕ ಏವ ಚ|

ಧ್ರುವಶ್ಚ ಸಪ್ತಮಸ್ತೇಷಾಂ ಪ್ಲಕ್ಷದ್ವೀಪೇಶ್ವರಾ ಹಿ ತೇ||4||

ಪರಾಶರರು ಹೇಳಿದರು:-


ಜಂಬೂದ್ವೀಪವು ಹೇಗೆ ಲವಣಸಮುದ್ರದಿಂದ ಆವೃತವಾಗಿದೆಯೋ ಹಾಗೆ ಪ್ಲಕ್ಷದ್ವೀಪವು ಲವಣಸಮುದ್ರವನ್ನು ಸುತ್ತಲೂ ಆವರಿಸಿಕೊಂಡಿದೆ. 


ಜಂಬೂದ್ವೀಪದ ವಿಸ್ತಾರ ಒಂದು ಲಕ್ಷ ಯೋಜನ. ಅದರ ಎರಡರಷ್ಟು ಅಂದರೆ ಎರಡು ಲಕ್ಷ ಯೋಜನ ವಿಸ್ತಾರವುಳ್ಳದ್ದು ಪ್ಲಕ್ಷದ್ವೀಪ. 


ಆ ದ್ವೀಪಕ್ಕೆ ಒಡೆಯನಾದ ಮೇಧಾ ತಿಥಿಗೆ ಏಳು ಮಂದಿ ಪುತ್ರರಿದ್ದರು. ಅವರಲ್ಲಿ ಶಾಂತಹಯನೆಂಬವನು ಜ್ಯೇಷ್ಠ. ಅವನ ಒತ್ತಿನವನು ಶಿಶಿರ. 


ಆ ಮೇಲೆ ಸುಖೋದಯ, ಆನಂದ, ಶಿವ, ಕ್ಷೇಮಕ ಎಂಬುವರು. ಧ್ರುವನೆಂಬುವನು ಏಳನೆಯವನು. ಇವರೆಲ್ಲರೂ ಪ್ಲಕ್ಷದ್ವೀಪ ವಿಭಾಗಕ್ಕೆ ಅಧಿಪತಿಗಳಾದರು.  

********



ಸಂಚಿಕೆ - 321

ದ್ವಿತೀಯಾಂಶ:

ಚತುರ್ಥೋಧ್ಯಾಯ:

********
ತಾವದೇವ ಚ ವಿಸ್ತೀರ್ಣ: ಸರ್ವತ: ಪರಿಮಂಡಲ:|
ಪುಷ್ಕರದ್ವೀಪವಲಯಂ ಮಧ್ಯೇನ ವಿಭಜನ್ನಿವ||77||

ಸ್ಥಿತೋಸೌ ತೇನ ವಿಚ್ಛಿನ್ನಂ ಜಾತಂ ತದ್ವರ್ಷಕದ್ವಯಮ್|

ವಲಯಾಕಾರಮೇಕೈಕಂ ತಯೋರ್ವರ್ಷಂ ತಥಾ ಗಿರಿ:||78||

ದಶವರ್ಷಸಹಸ್ರಾಣಿ ತತ್ರ ಜೀವಂತಿ ಮಾನವಾ:|

ನಿರಾಮಯಾ ವಿಶೋಕಾಶ್ಚ ರಾಗದ್ವೇಷಾದಿವರ್ಜಿತಾ:||79||

ಅಧಮೋತ್ತಮೌ ನ ತೇಷ್ವಾಸ್ತಾಂ ನ ವಧ್ಯವಧಕೌ ದ್ವಿಜ|

ನೇರ್ಷ್ಯಾಸೂಯಾ ಭಯಂ ದ್ವೇಷೋ ದೋಷೋ ಲೋಭಾದಿಕೋ ನ ಚ||80||

ಈ ಪರ್ವತವು ಎತ್ತರದಷ್ಟೇ ದೂರ ಸುತ್ತಲೂ ಹರಡಿಕೊಂಡು ಪುಷ್ಕರದ್ವೀಪವೆಂಬ ಗೋಳವನ್ನು ಎರಡಾಗಿ ವಿಭಾಗಿಸುತ್ತದೆಯೋ ಎಂಬಂತೆ ಕಾಣುತ್ತದೆ. 


ಆದ್ದರಿಂದ ಅಲ್ಲಿರುವ ಎರಡು ವರ್ಷಗಳು ವಿಭಕ್ತವಾಗಿವೆ. ಈ ವರ್ಷಗಳೂ ಪರ್ವತವೂ ವಲಯಾಕಾರವಾಗಿವೆ. 


ಅಲ್ಲಿ ಮಾನವರು ರಾಗದ್ವೇಷ ಶೋಕಾದಿಗಳಿಂದ ವರ್ಜಿತರಾಗಿ ಹತ್ತುಸಾವಿರ ವರ್ಷಗಳವರೆಗೆ ಆರೋಗ್ಯದಿಂದ ಬಾಳುತ್ತಾರೆ. 


ಆ ದ್ವೀಪದಲ್ಲಿ, ಮೈತ್ರೇಯ, ಉಚ್ಚನೀಚರೆಂಬ ಭೇದವಿಲ್ಲ, ವಧ್ಯರೂ ವಧಕರೂ ಇಲ್ಲ. ಈರ್ಷೆ, ಅಸೂಯೆ, ಭಯ, ದ್ವೇಷಗಳಾಗಲಿ ಲೋಭಾದಿದೋಷಗಳಾಗಲಿ ಇಲ್ಲ. 

********


🔯🔔 ಸಂಚಿಕೆ - 322🔔🔯

ದ್ವಿತೀಯಾಂಶ:

ಚತುರ್ಥೋಧ್ಯಾಯ:

********
ಮಹಾವೀರಂ ಬಹಿರ್ವರ್ಷಂ ಧಾತಕೀಖಂಡಮಂತಮ:|
ಮನಸೋತ್ತರಶೈಲಸ್ಯ ದೇವದೈತ್ಯಾದಿಸೇವಿತಮ್||81||

ಸತ್ಯಾನೃತೇ ನ ತತ್ರಾಸ್ತಾಂ ದ್ವೀಪೇ ಪುಷ್ಕರಸಂಜ್ಞಿತೇ|

ನ ತತ್ರ ನದ್ಯ: ಶೈಲಾ ವಾ ದ್ವೀಪೇ ವರ್ಷದ್ವಯಾನ್ವಿತೇ||82||

ತುಲ್ಯವೇಷಾಸ್ತು ಮನುಜಾ ದೇವಾಸ್ತತ್ರೈಕರೂಪಿಣ:|

ವರ್ಣಾಶ್ರಮಾಚಾರಹೀನಂ ಧರ್ಮಾಚರಣವರ್ಜಿತಮ್||83||

ತ್ರಯೀ ವಾರ್ತಾ ದಂಡನೀತಿಶುಶ್ರೂಷಾರಹಿತಂ ಚ ಯಾತ್|

ವರ್ಷದ್ವಯಂ ತು ಮೈತ್ರೇಯ ಭೌಮ: ಸ್ವರ್ಗೋಯಮುತ್ತಮ:||84||

ಮಾನಸೋತ್ತರ ಶೈಲದ ಹೊರಭಾಗದಲ್ಲಿ ಮಹಾವೀರವರ್ಷವೂ ಒಳಭಾಗದಲ್ಲಿ ಧಾತಕೀಖಂಡ ವರ್ಷವೂ ಇವೆ. ದೇವದೈತ್ಯಾದಿಗಳು ಅಲ್ಲಿ ವಾಸವಾಗಿದ್ದಾರೆ. 


ಪುಷ್ಕರ ದ್ವೀಪದಲ್ಲಿ ಸತ್ಯ-ಅನೃತ ಎಂಬ ದ್ವಂದ್ವಗಳಿಲ್ಲ. ಎಲ್ಲರೂ ಸತ್ಯವನ್ನೇ ನುಡಿಯುತ್ತಾರೆ. ದೇಶದ್ವಯಗಳಿಂದ ಕೂಡಿದ ಆ ದ್ವೀಪದಲ್ಲಿ ನದಿಗಳಾಗಲಿ ಪರ್ವತಗಳಾಗಲಿ ಇಲ್ಲ. 


ಅಲ್ಲಿರುವ ಮನುಷ್ಯರೂ ದೇವತೆಗಳೂ ಸಮಾನವೇಷದವರೂ ಸಮಾನರೂಪದವರೂ ಆಗಿದ್ದಾರೆ. ವರ್ಣಾಶ್ರಮ ವಿಭಾಗವಾಗಲಿ ಧರ್ಮಕಾರ್ಯದ ಅನುಷ್ಠಾನವಾಗಲಿ ಅಲ್ಲಿಲ್ಲ. 


ವೇದತ್ರಯ, ಕೃಷಿ, ವಾಣಿಜ್ಯಗಳು, ದಂಡನೀತಿ, ಶುಶ್ರೂಷೆ - ಎಂಬಿವು ಆ ದ್ವೀಪದಲ್ಲಿ ಇಲ್ಲ. ಆ ಎರಡು ವರ್ಷಗಳು ಭೂಮಿಯಲ್ಲಿ ಇರುವ ಉತ್ತಮ ಸ್ವರ್ಗಗಳು. 

********

🔯🔔 ಸಂಚಿಕೆ - 324🔔🔯

ದ್ವಿತೀಯಾಂಶ:

ಚತುರ್ಥೋಧ್ಯಾಯ:

********
ಪಯಾಂಸಿ ಸರ್ವದಾ ಸರ್ವಸಮುದ್ರೇಷು ಸಮಾನಿ ವೈ|
ನ್ಯೂನಾತಿರಿಕ್ತಾ ತೇಷಾಂ ಕದಾಚಿನ್ನೈವ ಜಾಯತೇ||89||

ಸ್ಥಾಲೀಸ್ಥಮಗ್ನಿಸಂಯೋಗಾದುದ್ರೇಕಿ ಸಲಿಲಂ ಯಥಾ|

ತಥೇಂದುವೃದ್ಧೌ ಸಲಿಲಮಂಭೋಧೌ ಮುನಿಸತ್ತಮ||90||

ಅನ್ಯೂನಾನತಿರಿಕ್ತಾಶ್ಚ ವರ್ಧಂತ್ಯಾಪೋ ಹ್ರಂಸತಿ ಚ|

ಉದಯಾಸ್ತಮನೇಷ್ವಿಂದೋ: ಪಕ್ಷಯೋ: ಶುಕ್ಲಕೃಷ್ಣಯೋ:||91||

ದಶೋತ್ತರಾಣಿ ಪಂಚೈವ ಹ್ಯಂಗುಲಾನಾಂ ಶತಾನಿ ವೈ|

ಅಪಾಂ ವೃದ್ಧಿಕ್ಷಯೌ ದೃಷ್ಟೌ ಸಾಮುದ್ರೀಣಾಂ ಮಹಾಮುನೇ||92||

ಭೋಜನಂ ಪುಷ್ಕರದ್ವೀಪೇ ತತ್ರ ಸ್ವಯಮುಪಸ್ಥಿತಮ್|

ಷಡ್ರಸಂ ಭುಂಜತೇ ವಿಪ್ರ ಪ್ರಜಾ: ಸರ್ವಾ: ಸದೈವ ಹಿ||93||

ಎಲ್ಲ ಸಮುದ್ರಗಳಲ್ಲಿಯೂ ಸರ್ವದಾ ಒಂದೇ ಅಳತೆಯಲ್ಲಿ ನೀರಿರುತ್ತದೆ. ಅದರಲ್ಲಿ ನ್ಯೂನಾತಿರೇಕಗಳೂ ಯಾವಾಗಲೂ ಆಗುವುದಿಲ್ಲ. 


ಬೆಂಕಿಯನ್ನು ಹೊತ್ತಿಸಿದಾಗ ಪಾತ್ರೆಯಲ್ಲಿರುವ ನೀರು ಹೇಗೆ ಉಕ್ಕುತ್ತದೆಯೋ ಹಾಗೆ ಚಂದ್ರನು ವರ್ಧಿಸಿದಾಗ ಸಮುದ್ರದ ನೀರು ಉಕ್ಕುತ್ತದೆ. (ಹೆಚ್ಚುವುದಿಲ್ಲ). 


ಶುಕ್ಲಕೃಷ್ಣ ಪಕ್ಷಗಳಲ್ಲಿ ಚಂದ್ರನು ಉದಯಿಸಿದಾಗ ಸಮುದ್ರ ಜಲವು ಉಕ್ಕುತ್ತದೆ. ಅಸ್ತಮಾನವಾದಾಗ ಇಳಿಯುತ್ತದೆ. ಆದರೆ ಸಮುದ್ರಜಲವು ಹೆಚ್ಚುವುದೂ ಇಲ್ಲ; ಕಡಿಮೆಯಾಗುವುದೂ ಇಲ್ಲ. 


ಮೈತ್ರೇಯ, ಸಮುದ್ರಜಲದ ವೃದ್ಧಿಕ್ಷಯಗಳು ಐದುನೂರು ಹತ್ತು ಅಂಗುಲಗಳಷ್ಟು ಮಾತ್ರವೇ ಕಂಡುಬಂದಿವೆ. 


ಪುಷ್ಕರದ್ವೀಪದಲ್ಲಿ ಭೋಜನವು ತಾನಾಗಿ ಉಪಸ್ಥಿತವಾಗುತ್ತದೆ. ಸಕಲ ಪ್ರಜೆಗಳೂ ಸದಾ ಷಡ್ರಸೋಪೇತವಾದ ಭೋಜನವನ್ನು ಊಟಮಾಡುತ್ತಾರೆ. 

********

🔯🔔 ಸಂಚಿಕೆ - 326🔔🔯

ದ್ವಿತೀಯಾಂಶ:

ಪಂಚಮೋಧ್ಯಾಯ:
********
ಶ್ರೀಪರಾಶರ ಉವಾಚ:

ವಿಸ್ತಾರ ಏಷ ಕಥಿತ: ಪೃಥಿವ್ಯಾ ಭವತೋ ಮಯಾ|
ಸಪ್ತತಿಸ್ತು ಸಹಸ್ರಾಣಿ ದ್ವಿಜೋಚ್ಛ್ರಾಯೋಪಿ ಕಥ್ಯತೇ||1||

ದಶಸಾಹಸ್ರಮೇಕೈಕಂ ಪಾತಾಲಂ ಮುನಿಸತ್ತಮ|
ಅತಲಂ ವಿತಲಂ ಚೈವ ನಿತಲಂ ಚ ಗಭಸ್ತಿಮತ್|
ಮಹಾಖ್ಯಂ ಸುತಲಂ ಚಾಗ್ರ್ಯಂ ಪಾತಾಲಂ ಚಾಪಿ ಸಪ್ತಮಮ್||2||

ಶುಕ್ಲಕೃಷ್ಣರುಣಾ: ಪೀತಾ: ಶರ್ಕರಾ: ಶೈಲಕಾಂಚನಾ:|
ಭೂಮಯೋ ಯತ್ರ ಮೈತ್ರೇಯ ವರಪ್ರಸಾದಮಂಡಿತಾ:||3||

ತೇಷು ದಾನವದೈತೇಯಾ ಯಕ್ಷಾಶ್ಚ ಶತಶಸ್ತಥಾ|
ನಿವಸಂತಿ ಮಹಾನಾಗಜಾತಯಶ್ಚ ಮಹಾಮುನೇ||4||

ಸ್ವರ್ಲೋಕಾದಪಿ ರಮ್ಯಾಣಿ ಪಾತಾಲಾನೀತಿ ನಾರದ:|
ಪ್ರಾಹ ಸ್ವರ್ಗಸದಾಂ ಮಧ್ಯೇ ಪಾತಾಲೇಭ್ಯೋ ಗತೋ ದಿವಿ||5||

ಪರಾಶರರು ಹೇಳಿದರು:-

ಮೈತ್ರೇಯ, ಈ ಭೂಮಂಡಲದ ವಿಸ್ತಾರವನ್ನು ಹೇಳಿದ್ದಾಗಿದೆ. ಇದರ ಎತ್ತರ (ದಪ್ಪ) ಎಪ್ಪತ್ತು ಸಾವಿರ ಯೋಜನಗಳೆಂದು ಉಕ್ತವಾಗಿದೆ. 

ಪಾತಾಳ ಭೇದಗಳಲ್ಲಿ ಒಂದೊಂದೂ ಹತ್ತುಸಾವಿರ ಯೋಜನಗಳ ಅಂತರದಲ್ಲಿವೆ.‌ 
ಅವು ಯಾವುವೆಂದರೆ:-
ಅತಳ, ವಿತಳ, ನಿತಳ, ಗಭಸ್ತಿಮಾನ್, ಮಹಾತಳ, ಸುತಳ ಮತ್ತು ಪಾತಾಳ. 
ನೆಲಗಳು ಬಿಳುಪು, ಕಪ್ಪು, ಕೆಂಪು, ಹಳದಿ ಬಣ್ಣದವು. 
ಕೆಲವು ನೆಲಗಳು ಮರಳು, ಕಲ್ಲು, ಸುವರ್ಣಮಯಗಳಾಗಿವೆ. 
ಉತ್ತಮವಾದ ಪ್ರಾಸಾದಗಳು ಅಲ್ಲಿವೆ. 

ಅವುಗಳಲ್ಲಿ ದೈತ್ಯದಾನವರೂ ಯಕ್ಷರೂ ದೊಡ್ಡ ದೊಡ್ಡ ನಾಗಜಾತಿಯವರೂ ವಾಸಮಾಡುತ್ತಾರೆ. 
ಒಮ್ಮೆ ನಾರದರು ಪಾತಾಳದಿಂದ ಸ್ವರ್ಗಲೋಕಕ್ಕೆ ಹೋಗಿ ದೇವತೆಗಳೆದುರಿಗೆ "ಸ್ವರ್ಗಲೋಕಕ್ಕಿಂತ ಪಾತಾಳಲೋಕಗಳು ರಮ್ಯವಾಗಿವೆ!" ಎಂದು ಹೇಳಿದರು. 
(ಅತಳ ವಿತಲಾದಿಗಳೆಲ್ಲಕ್ಕೂ ಪಾತಾಳವೆಂದು ವ್ಯವಹಾರವಿದೆ.) 
********





No comments:

Post a Comment