SEARCH HERE

Tuesday 1 January 2019

ಗಯಾ ಶ್ರಾದ್ಧ ಮಹಿಮಾ gaya shraddha mahima


ಗಯಾ ಎಂಬುವನು ಒಬ್ಬ ರಾಕ್ಷಸ. ಇವನು ಶ್ರೀ ಮಹಾವಿಷ್ಣುವಿನ ಭಕ್ತ. ವಿಶೇಷವಾಗಿ ಶ್ರೀ ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿ ಬೇರಾರಿಂದಲೂ ಜಯಿಸಲಶಕ್ಯವಾದ ಶಕ್ತಿಯನ್ನು ಪಡೆದಿದ್ದನು.

ರಾಕ್ಷಸತ್ವ ಗುಣದಿಂದ ಕೊಡಿದ್ದುದರಿಂದ ತಪಃಶಕ್ತಿಯನ್ನು ಪಡೆದಿದ್ದರೂ ರಜೋ ಗುಣ ಭೂಯಿಷ್ಠನಾಗಿ, ಅಹಂಕಾರದಿಂದ ಮೆರೆಯುವ ದೇವತೆಗಳನ್ನೂ ಬಿಡದೇ ಬಿಡದಂತೆ ಎಲ್ಲರಿಗೂ ನಾನಾ ರೀತಿಯಾದ ತೊಂದರೆಯನ್ನು ಉಂಟು ಮಾಡುತ್ತಿದ್ದನು. ಇವನ ಹಿಂಸೆಯನ್ನು ಸಹಿಸಲಾರದೇ ದೇವತೆಗಳು ಶ್ರೀ ಚತುರ್ಮುಖ ಬ್ರಹ್ಮದೇವರಲ್ಲಿ ಏನಾದರೂ ಮಾಡಿ ನಾಶಪಿಡಿಸಬೇಕೆಂದು ಮೊರೆಯಿಟ್ಟರು.
ಆಗ ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರನಾದ ಇವನನ್ನು ತಾನು ಏನೂ ಮಾಡಲಾರನೆಂದರಿತು ಶ್ರೀ ಮಹಾವಿಷ್ಣುವಿನಲ್ಲೇ ಮೊರೆ ಹೋಗಿ. ಇದಕ್ಕೆ ಒಂದು ಉಪಾಯವನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ.
ಆಗ ಶ್ರೀ ಮಹಾವಿಷ್ಣುವು ತನ್ನ ಭಕ್ತನಾದ ಗಯಾಸುರನ ವಿಷಯದಲ್ಲಿ ವಿಶೇಷವಾದ ಕೃಪೆಯಿಂದ ಕೂಡಿದವನಾನಿ, ತನ್ನಲ್ಲಿ ಶರಣು ಹೋದ ಶ್ರೀ ಚತುರ್ಮುಖ ಬ್ರಹ್ಮಾದಿಗಳಿಗೂ ಅನುಗ್ರಹ ಮಾಡುವ ಸಲುವಾಗಿ ಶ್ರೀ ಮಹಾವಿಷ್ಣುವು ಒಬ್ಬ ಬ್ರಾಹ್ಮಣನ ವೇಷವನ್ನು ಧರಿಸಿ, ಗಯಾಸುರನ ಬಳಿ ಹೋಗಿ ತಾನು ಒಂದು ಮಹತ್ತರವಾದ ವೈಷ್ಣವ ಯಜ್ಞವನ್ನು ಮಾಡಬೇಕೆಂದು ಅದಕ್ಕೆ ಸ್ಥಳವಾವುದೂ ಸಿಗದಿರುವುದರಿಂದ, ಎಲೈ ಗಯನೇ ನೀನೆ ಅಂಥಹ ಸ್ಥಳವೊಂದನ್ನು ತೋರಿಸಿ ಕೊಡಬೇಕೆಂದು ಹೇಳಿದನು!
ಆಗ ಶ್ರೀಮಹಾವಿಷ್ಣು ಭಕ್ತನಾದ ಗಯನು ವೈಷ್ಣವ ಯಾಗಕ್ಕೆ ತನ್ನ ದೇಹವನ್ನೇ ಅರ್ಪಿಸುವುದಾಗಿ ತೀರ್ಮಾನಿಸಿ ತನ್ನ ಎದೆಯ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿ ಅಲ್ಲಿಯೇ ಶ್ರೀಮಹಾವಿಷ್ಣು ಪ್ರೀತಿಗಾಗಿ ಈ ವೈಷ್ಣವ ಯಜ್ಞವನ್ನು ಮಾಡಬಹುದೆಂದು ಹೇಳಿ ಮಲಗಿದನು.
ಆ ಕೂಡಲೇ ಶ್ರೀ ಚತುರ್ಮುಖ ಬ್ರಹ್ಮದೇವರು ಅವನ ಎದೆಯ ಮೇಲೆ ಹಾಸುಗಲ್ಲನ್ನೊಂದು ಇಟ್ಟು ಅದರ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿದರು. ಆಗ ಗಯನ ಉಸಿರಾಟದ ಕಾರಣ ಯಜ್ಞ ಕುಂಡವು ಅಲಗಾಡಿತು. ಅದನ್ನು ಕಂಡ ಶ್ರೀ ಬ್ರಹ್ಮದೇವರು, ಕುಂಡವನ್ನು ಸ್ಥಿರಗೊಳಿಸಬೇಕೆಂದು ಶ್ರೀ ಹರಿಯಲ್ಲಿ ಪ್ರಾರ್ಥಿಸಿದನು.
ಅದೇ ಸಮಯದಲ್ಲಿ ತನ್ನ ಮೇಲಿನ ಭಕ್ತಿಯಿಂದ ದುಷ್ಟವಾದ ರಾಕ್ಷಸ ಜನ್ಮದಲ್ಲಿ ಹುಟ್ಟಿದ್ದರೂ ತನ್ನ ಮರಣವನ್ನೇ ಲಕ್ಷ್ಯ ಮಾಡದೇ ಯಜ್ಞಾರ್ಥವಾಗಿ ತನ್ನ ದೇಹವನ್ನೇ ಅರ್ಪಿಸಿದ ತನ್ನ ಭಕ್ತನಿಗೆ ಶಾಶ್ವತವಾದ ವೈಕುಂಠ ಲೋಕವನ್ನೇ ಅನುಗ್ರಹಿಸಿ ಕೊಡಬೇಕೆಂದು ತೀರ್ಮಾನಿಸಿ ತನ್ನ ಬಲ ಪಾದವನ್ನು ಅವನ ಎದೆಯ ಮೇಲಿರುವ ಯಜ್ಞ ಕುಂಡದಲ್ಲಿಟ್ಟು ನಿಂತು ಕೊಂಡನು!
ತನ್ನ ನಿಜ ಸ್ವರೂಪವನ್ನು ತೋರಿಕೊಂಡನು. ಆ ಕೂಡಲೇ ಶ್ರೀ ಪರಮಾತ್ಮನ ಸಂಸರ್ಗದಿಂದ ಸತ್ವ ಗುಣ ಭೂಯಿಷ್ಠನಾದ ಗಯಾಸುರನು ಶ್ರೀ ಹರಿಯನ್ನು ಕಂಡು ಅವನಲ್ಲಿ ಬೇಡುತ್ತಾನೆ.
" ಸ್ವಾಮಿ! ನಾನು ಇಷ್ಟುದಿನ ಮಾಡಿದ ತಪಸ್ಸಿನ ಫಲವು ಇಂದು ಲಭಿಸಿತು. ನನಗೆ ಇಂದು ನೀವು ಮುಕ್ತೈಶ್ವರ್ಯವನ್ನು ಕರುಣಿಸಿ ಕೊಡಿ. ನಿಮ್ಮ ಪಾದದಿಂದ ಅಂಕಿತವಾಗಿರುವ ಸ್ಥಳವು " ಗಯಾ ಕ್ಷೇತ್ರ " ವೆಂದು ಪ್ರಸಿದ್ಧಿಗೆ ಬರಲಿ! ನಿಮ್ಮ ಪಾದದ ಅಂಕನವು ಎಂದೆಂದಿಗೂ ಅಳಿಯದಂತೆ ನಿಮ್ಮ ಸಂಪೂರ್ಣ ಸನ್ನಿಧಾನದಿಂದ ಇಲ್ಲಿರಲಿ. ನನಗೆ ಮಾತ್ರವಲ್ಲದೆ ಯಾವುದೇ ಚೇತನವನ್ನು ಉದ್ಧೇಶಿಸಿ ಯಾರೇ " ಪಿಂಡ ದಾನ " ಮಾಡಿದರೂ ಅವರೆಲ್ಲರಿಗೂ ನೀವು ಮುಕ್ತಿಯನ್ನು ಅನುಗ್ರಹಿಸಿರಿ.
ಇಲ್ಲಿ ವಾಸಿಯುವ ನನ್ನ ವಂಶದ ಬ್ರಾಹ್ಮಣರನ್ನು ಅಸುರನ ವಂಶದವರೆಂದು ಯಾರೊಬ್ಬರೂ ತಿರಸ್ಕರಿಸದೇ ಅವರಿಗೆ ಮನ್ನಣೆ ನೀಡಿ ಅವರನ್ನೇ ಶ್ರಾದ್ಧದಲ್ಲಿ ನಿಮಂತ್ರಿತರಾಗಿ ವರಿಸಿ ಪಿತೃಗಳ ಉದ್ಧೇಶ್ಯವಾಗಿ ಶ್ರಾದ್ಧ ಮಾಡಲಿ. ಇದರಿಂದ ಪಿತೃಗಳು ಸಂತುಷ್ಟರಾಗಲಿ. ಉದ್ಧಿಷ್ಟರಾದ ಚೇತನರು ಮುಕ್ತಿಯನ್ನು ಪಡೆಯಲಿ. ಈ ನನ್ನ ವಂಶದ ಬ್ರಾಹ್ಮಣರಿಗೆ ಶ್ರಾದ್ಧಾನ್ನ ಭೋಜನ ಮಾಡಿದ ದೋಷವು ತಟ್ಟದಿರಲಿ.
ನಾನು ತಲೆಯಿಟ್ಟಿರುವ ಸ್ಥಳವು " ಗಯಾ ಶಿರಸ್ " ಎಂದು ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಲಿ. ಇಲ್ಲಿ ಪಿತೃಗಳನ್ನು ಉದ್ಧೇಶಿಸಿ ಮಾಡಿದ ಪಿಂಡ ದಾನಗಳು ಪಿತೃಗಳಿಗೆ ಸಂತೋಷವನ್ನುಂಟು ಮಾಡಲಿ "
ಎಂದು ವರವನ್ನು ಬೇಡಿದನು. ಆ ಕೂಡಲೇ ಶ್ರೀ ಮಹಾವಿಷ್ಣುವು " ತಥಾಸ್ತು " ( ಹಾಗೆ ಆಗಲಿ ) ಎಂದು ಅನುಗ್ರಹಿಸಿ ತಕ್ಷಣದಲ್ಲಿ ಮುಕ್ತಿಯನ್ನೂ ಅನುಗ್ರಹಿಸಿದನು.
ಆದುದರಿಂದ ಈ ಕ್ಷೇತ್ರದಲ್ಲಿ ಮೃತಿ ಹೊಂದಿರುವ ಯಾವುದೇ ಚೇತನರನ್ನು ಉದ್ಧೇಶಿಸಿ ಶ್ರಾದ್ಧ, ಪಿಂಡ ದಾನಗಳನ್ನು ಮಾಡಿದರೂ ಅವರಿಗೆ " ಮುಕ್ತಿ ಸಿದ್ಧ " ಅಂತೆಯೇ ಪಿತೃಗಳೂ ವಿಶೇಷವಾದ ಸಂತೋಷವನ್ನು ಹೊಂದುತ್ತಾರೆ.
ಜೀವಂತವಾಗಿರುವ ಚೇತನರು ಪೂರ್ವದಲ್ಲಿ ತಾವು ಅನೇಕ ಜನ ಗಂಡು ಮಕ್ಕಳನ್ನು ಪಡೆದುಕೊಳ್ಳಬೇಕೆಂದು ಇಚ್ಛಿಸುತ್ತಿದ್ದರು. ಏಕೆಂದರೆ ಅವರಲ್ಲಿ ಒಬ್ಬರಾದರೂ ತನ್ನ ಮರಣಾ ನಂತರ " ಗಯಾ ಕ್ಷೇತ್ರ " ಕ್ಕೆ ಹೋಗಿ ತನಗೆ ಮುಕ್ತಿ ಸಿಗಲೆಂದು ಪಿಂಡದಾನ ಮಾಡುವಂತಾಗಲಿ ಎಂದು...
ಶ್ರೀ ವಾಲ್ಮಿಕೀ ರಾಮಾಯಣದ ಆಯೋಧ್ಯ ಕಾಂಡದಲ್ಲಿ....
" ಏಷ್ಟವ್ಯಾ: ಬಹವಃ ಪುತ್ರಾ: ಯದ್ಯೇಕೋSಪಿ ಗಯಾ೦ ವ್ರಜೇತ್ ।।
ಶ್ರೀಮನ್ಮಹಾಭಾರತಡಾ ಆದಿ ಪರ್ವದಲ್ಲಿ 235, ವನ ಪರ್ವದಲ್ಲಿ 83, ವಾಯು ಪುರಾಣದಲ್ಲಿ 106 ಶ್ಲೋಕಗಳಲ್ಲಿ ಗಯಾ ಶ್ರಾದ್ಧದ ಮಹಿಮೆಯ ವಿಷಯ ಹೇಳಲ್ಪಟ್ಟಿದೆ.
ಶ್ರೀ ವಾಯುಪುರಾಣದಲ್ಲಿ " ಗಯಾ ಶ್ರಾದ್ಧದ ಮಹಿಮೆ " ಹೀಗಿದ.
ಗಯಾನಾಮ್ನಾ ಗಯಾಖ್ಯಾತಾ ಕ್ಷೇತ್ರಂ ಬ್ರಹ್ಮಾಭಿಕಾಂಕ್ಷಿತಂ ।
ಕಾಂಕ್ಷ೦ತಿ ಪಿತರಃ ಪುತ್ರಾನ್ ನರಕಾದ್ಭಯ ಭೀರವಃ ।।

ಗಯಾ೦ ಯಸ್ಯಾತಿ ಯಃ ಪುತ್ರ : ಸ ನಸ್ತ್ರಾತಾ ಭವಿಷ್ಯತಿ ।
ಗಯಾ ಪ್ರಾಪ್ತ೦ ಸುತಂ ದೃಷ್ಟ್ವಾ ಪಿತೃಣಾಮುತ್ಸವೋ ಭವೇತ್ ।।
ಪದ್ಭ್ಯಾಮಪಿ ಜಲಂ ಷ್ಟ್ರುಟ್ವಾಸೋsಸ್ಮಭ್ಯ೦ ಕಿಂ ನ ದಾಸ್ಯತಿ ।
ಗಯಾ೦ಗತ್ವಾನ್ನದಾತಾ ಯಃ ಪಿತರಸ್ತೇನ ಪುತ್ರಿಣಃ ।।

ಪಕ್ಷತ್ರಯ ನಿವಾಸೀ ಚ ಪುನತ್ಯಾಸಪ್ತಮಂ ಕುಲಮ್ ।
ಬ್ರಹ್ಮಹತ್ಯಾ ಸುರಾಪಾನಂ ಸ್ತೇಯ೦ ಗುರ್ವಂಗನಾಗಮಃ ।।

ಪಾಪಂ ತತ್ಸಂಗಜಂ ಸರ್ವಂ ಗಯಾಶ್ರಾದ್ಧಾದ್ವಿನಶ್ಯತಿ ।

ಆತ್ಮಜೋsಪ್ಯನ್ಯಜೋ ವಾಪಿ ಗಯಾ ಭೂಮೌ ಯದಾ ತದಾ ।।

ಯನ್ನಾಮ್ನಾಪಾತಯೇತ್ಪಿಂಡಂ ತನ್ನಯೇದ್ಬ್ರಹ್ಮಶಾಶ್ವತಂ ।

ನಾಮ ಗೋತ್ರೇ ಸಮುಚ್ಚಾರ್ಯ ಪಿಂಡಪಾತನಮೀಕ್ಷತೇ ।।

ಯೇನಕೇನಾಪಿ ಕಸ್ಮೈ ಚಿತ್ ಸಯಾತಿ ಪರಮಾಂ ಗತಿಮ್ ।।

ಗಯಾ ಎಂಬ ಹೆಸರಿನಿಂದ ಪ್ರಸಿದ್ಧವಾದ ಕ್ಷೇತ್ರವಾದರೋ ಶ್ರೀ ಬ್ರಹ್ಮಾದಿ ದೇವತೆಗಳಿಂದ ಇಚ್ಛಿಸಲ್ಪಟ್ಟುದಾಗಿದೆ. ( ತಾವು ಮಾಡಿರುವ ಕೆಟ್ಟ ಕರ್ಮಗಳ ಫಲವಾಗಿ ತಮಗೆ ಸಂಭವಿಸಬಹುದಾದ ನರಕಾದಿ ಲೋಕಗಳಿಂದ ಭಯಕ್ಕೆ ಒಳಗಾದ ಮೃತಿ ಹೊಂದಿದ ಪಿತೃಗಳಾದರೋ ತನ್ನ ಮಕ್ಕಳು " ಗಯೆ " ಗೆ ಹೋಗಿ ಅಲ್ಲಿ ತನಗೆ ಪಿಂಡ ದಾನವನ್ನು ಮಾಡಬೇಕೆಂದು ಇಚ್ಛಿಸುತ್ತಾರೆ.
ಯಾವ ಮಗನು ಗಯೆಗೆ ಹೋಗಿ ನಮ್ಮನ್ನುದ್ಧೇಶಿಸಿ ಪಿಂಡ ದಾನವನ್ನು ಮಾಡುತ್ತಾನೆಯೋ ಅವನೇ ನಮಗೆ ರಕ್ಷಕನಾಗಿರುತ್ತಾನೆ ಎಂಬ ಅಭಿಪ್ರಾಯದಿಂದ ಗಯೆಗೆ ಹೋದ ಮಗನನ್ನು ಕಂಡು ಪಿತೃಗಳು ಹರ್ಷ ಚಿತ್ತರಾಗುತ್ತಾರೆ.
ಕಾಲಿಂದಲಾದರೂ ( ಗಯೆಯಲ್ಲಿರುವ ಫಲ್ಗು ನದಿಯ ) ತೀರ್ಥವನ್ನು ಸ್ಪರ್ಶಿಸಿದವನು ನಮಗೆ ಏನನ್ನೂ ತಾನೇ ಕೊಡಲಾರ. ಗಯೆಗೆ ಹೋಗಿ ಮೃತರಾದ ಪಿತೃಗಳನ್ನುದ್ಧೇಶಿಸಿ ಅನ್ನ ದಾನವನ್ನು ಮಾಡುತ್ತಾರೆಯೋ, ಆ ಪುತ್ರನಿಂದಲೇ ಮೃತರಾದವರು ಪುತ್ರನನ್ನು ಹೊಂದಿದ ಭಾಗ್ಯವನ್ನು ಪಡೆದವರಾಗಿ " ಪುತ್ರೀ " ಎಂಬ ಶಬ್ದಕ್ಕೆ ಅರ್ಹರಾಗುತ್ತಾರೆ.
ಗಯಾ ಕ್ಷೇತ್ರದಲ್ಲಿ ಮೂರು ಪಕ್ಷಗಳು ವಾಸವಾಗಿದ್ದು - ಅನ್ನ ಶ್ರಾದ್ಧ, ಹಿರಣ್ಯ ಶ್ರಾದ್ಧ ಅಥವಾ ಆಮ ಶ್ರಾದ್ಧ ಅಥವಾ ತರ್ಪಣ ರೂಪದಲ್ಲಿ ತೀರ್ಥ ಶ್ರಾದ್ಧವನ್ನಾದರೂ ಮಾಡುವವನು ತನ್ನ ಹಿಂದಿನ ಏಳು ತಲೆಮಾರಿನ ಪಿತೃಗಳನ್ನು - ಅವರ ಪಾಪ ಕರ್ಮಗಳಿಂದ ಬಿಡಿಸಿ ಶುದ್ಧಿ ಗೊಳಿಸುತ್ತಾನೆ!
ಗಯಾ ಶ್ರಾದ್ಧ ಮಾಡುವವನಿಗೂ ಮತ್ತು ಅವನ ವಂಶದಲ್ಲಿ ಜನಿಸಿ ಮೃತಿ ಹೊಂದಿದವರಿಗೂ ಸಂಭವಿಸಿದ ಬಹಳ ಘೋರವಾದ ಬ್ರಹ್ಮಹತ್ಯಾ, ಸುರಾಪಾನ, ಸ್ವರ್ಣಸ್ತೇಯ, ತಾಯಿಯೇ ಮೊದಲಾದ ಹಿರಿಯ ಸ್ತ್ರೀಯರೊಡನೆ ಲೈಂಗಿಕ ಸಂಬಂಧ ಇವೇ ಮೊದಲಾದ ಪಾಪಗಳು ಗಯಾ ಶ್ರಾದ್ಧ ಮಾಡುವುದರಿಂದ ನಾಶವಾಗುತ್ತದೆ.
ತನ್ನ ಸ್ವಂತ ಮಗನೇ ಆಗಲೀ ಅಥವಾ ಬೇರಾರ ಮಗನೇ ಆಗಲೀ ಮೃತಿ ಹೊಂದಿದ ಯಾವ ಚೇತನನ ಗೋತ್ರ, ಹೆಸರನ್ನು ಹೇಳಿ ಯಾವಾಗ ಗಯಾ ಕ್ಷೇತ್ರದಲ್ಲಿ ಪಿಂಡ ದಾನ ಮಾಡುತ್ತಾನೆಯೋ ಆ ಕ್ಷಣದಲ್ಲಿಯೇ ಅವನು ಕೊಟ್ಟ ಪಿಂಡಕ್ಕೆ ಪಾತ್ರನಾದ ಚೇತನನು ಬ್ರಹ್ಮ ಸಾಯುಜ್ಯವನ್ನು ಪಡೆಯುತ್ತಾನೆ.
*****


ಗಯಾ.....#ವಿಷ್ಣುಪಾದ

 ಗಯಾ ಕ್ಷೇತ್ರದಲ್ಲಿ ಪಿತೃಗಳಿಗೆ ಪಿಂಡದಾನ ಮಾಡಿದರೆ ಅವರಿಗೆ ಸ್ವರ್ಗ ಲೋಕ ಪ್ರಾಪ್ತಿಯಾಗುವದು ಇದು ಪದ್ಮಪುರಾಣದಲ್ಲಿ ಉಲ್ಲೇಖವಿದೆ . ಅಷ್ಟೇ ಅಲ್ಲ  ಪುರಾಣದಲ್ಲೂ ಈ ರೀತಿ ಉಕ್ತವಾಗಿದೆ . ಹಾಗಾದರೆ ಈ ಗಯಾಕ್ಕೆ ಯಾಕಷ್ಟು ಮಹತ್ವ , ಈ ಗಯಾ ಯಾರು ?

 ಫಲ್ಗು ನದಿ ದಂಡೆಯ ಮೇಲೆ ಸ್ಥಿತವಾಗಿರು ಈ ನಗರ  ಬಿಹಾರ ರಾಜ್ಯದಲ್ಲಿದೆ.....
ಹುಟ್ಟಿದ ಮಕ್ಕಳಲ್ಲಿ ಒಬ್ಬನಾದರೂ ಗಯದಲ್ಲಿ ಶ್ರಾದ್ಧಮಾಡಿ ತನ್ನ ತಂದೆಗೆ ಸ್ವರ್ಗ ಪ್ರಾಪ್ತಿಯಾಗುವಂತೆ ಮಾಡಬೇಕೆಂದು ರಾಮಾಯಣದಲ್ಲಿ ಹೇಳಿದೆ. ಈ ಕ್ಷೇತ್ರದಲ್ಲಿ ಶ್ರಾದ್ಧ ನಡೆಸಿದವನ ವಂಶದ ನೂರು ಜನ ಪಿತೃಗಳಿಗಲ್ಲದೆ ಅವನಿಗೂ ಶಾಶ್ವತ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಪುರಾಣದಿಂದ  ತಿಳಿಸುತ್ತದೆ. ಈ ನಂಬಿಕೆಗೆ ಹಿನ್ನಲೆಯಾಗಿರುವ ಕಥೆ ಗಯ ಮಹಾತ್ಮ್ಯೆಯಲ್ಲಿ ಹೀಗಿದೆ:


ವಿಷ್ಣುವಿನ ಪರಮ ಭಕ್ತನಾದ ಗಯನೆಂಬ ಅಸುರ ಒಮ್ಮೆ ಕೋಲಾಹಲ ಪರ್ವತದ ಮೇಲೆ ಕಠಿಣ ತಪಸ್ಸನ್ನಾಚರಿಸಿದ. ಇದರಿಂದ ದೇವತೆಗಳೆಲ್ಲ ಖಿನ್ನರಾಗಿ ವಿಷ್ಣು ಮಹೇಶ್ವರರ ಬಳಿಗೆ ಹೋದರು. ವಿಷ್ಣು ದೇವತೆಗಳೊಡನೆ ಗಯಕ್ಕೆ ಬಂದು ಗಯ ಪರಿಶುದ್ಧನೆಂಬ ವಿಚಾರ ತಿಳಿದು, ಅವನನ್ನು ಸ್ಪರ್ಶಿಸಿದವರು ವೈಕುಂಠವನ್ನು ಸೇರಲಿ ಎಂಬುದಾಗಿ ವರ ನೀಡಿದ. ಅಂದಿನಿಂದ ಜನ ಗಯನನ್ನು ಸ್ಪರ್ಶಿಸಿ ಸ್ವರ್ಗಲಾಭ ಪಡೆಯತೊಡಗಿದರು. ಇದರಿಂದ ಯಮನ ರಾಜ್ಯ ಬರಿದಾಗಿ ಅವನಿಗೆ ಕೆಲಸವಿಲ್ಲದಂತಾಯಿತು. ಅನಂತರ ವಿಷ್ಣುವಿನ ಸಲಹೆಯಂತೆ ಬ್ರಹ್ಮ ಗಯನನ್ನು ಸಮೀಪಿಸಿ ಅವನ ಪವಿತ್ರ ದೇಹದ ಮೇಲೆ  ಲೋಕ ಕಲ್ಯಾಣಕ್ಕಾಗಿ ಯಾಗ ಮಾಡಬೇಕೆಂಬ ಸಂಕಲ್ಪವನ್ನು ಅವನಲ್ಲಿ ವಿಜ್ಞಾಪನೆ ಮಾಡಿಕೊಂಡ. ಇದಕ್ಕೆ ಗಯ ಮರುಮಾತನಾಡದೆ ಸಮ್ಮತಿಯನ್ನಿತ್ತ. ಯಾಗಕರ್ಮಗಳನ್ನು ನಡೆಸಲು ಬ್ರಹ್ಮ ಋತ್ವಿಜರಾದ ಮಾನಸಪುತ್ರರನ್ನು ಸೃಷ್ಟಿಸಿದ. ಅವರು ಗಯನ ಶಿರ ಉತ್ತರದ ಕಡೆಗಿರುವಂತೆಯೂ ಪಾದಗಳು ದಕ್ಷಿಣದ ಕಡೆಗಿರುವಂತೆಯೂ ಮಾಡಿ ಅವನ ದೇಹದ ಮೇಲೆ ಯಜ್ಞವನ್ನು ವಿಜೃಂಭಣೆಯಿಂದ ನಡೆಸಿದರು. ಯಜ್ಞಸಮಾರಂಭದ ಕೊನೆಯಲ್ಲಿ ಗಯನ ತಲೆ ಅಲುಗಾಡತೊಡಗಿತು. ವಿಶೇಷವಾದ ಧರ್ಮಶಿಲೆಯೊಂದನ್ನು ತಂದು ಗಯನ ತಲೆಯ ಬಳಿ ಇಡಬೇಕೆಂದು ಆಗ ಬ್ರಹ್ಮ ಯಮನಿಗೆ ಸೂಚಿಸಿದ. ಆದರೂ ಗಯ ನಿಶ್ಚಲನಾಗಲಿಲ್ಲ. ದೇವತೆಗಳೆಲ್ಲ ಶಿಲೆಯ ಬಳಿ ನಿಂತರೂ ತಲೆಯ ಅಲುಗಾಟ ನಿಲ್ಲಲಿಲ್ಲ. ಕೊನೆಗೆ ವಿಷ್ಣುವೇ ಗದಾಧಾರಿಯಾಗಿ ಗಯನ ಶಿರದ ಬಳಿ ಪ್ರತ್ಯಕ್ಷನಾದಾಗ ತಲೆ ಅಲುಗಾಡುವುದು ನಿಂತಿತು. ಮಹಾವಿಷ್ಣುವಿನ ದರ್ಶನ ಲಾಭದಿಂದ ಕೃತಾರ್ಥನಾದ ಗಯ ತನಗೆ ವಿಷ್ಣುವಿನ ಆಜ್ಞೆಯೊಂದೇ ಸಾಕಾಗಿತ್ತೆಂದೂ ನುಡಿದ .. ಗಯನ ಭಕ್ತಿಗೆ ಮೆಚ್ಚಿದ ವಿಷ್ಣು ಅವನಿಗೆ ವರಪ್ರಸಾದವನ್ನು ನೀಡಿ ತಾನೇ ಮೊದಲ್ಗೊಂಡು ಸಮಸ್ತ ದೇವತೆಗಳಿಗೂ ಅವನ ಶಿರದ ಬಳಿ ಶಾಶ್ವತವಾಗಿ ನಿಂತಿರುವಂತಾಗಿ ಆ ಸ್ಥಳ ಗಯನ ಹೆಸರಿನಿಂದ ಶೋಭಿಸಲೆಂದು ಮತ್ತು ಯಾರು ಈ ಸ್ಥಳದಲ್ಲಿ ಪಿತೃಗಳಿಗೆ ಪಿಂಡಪ್ರಧಾನ ಮಾಡುತ್ತಾರೊ ಅವರಿಗೆ ಮೊಕ್ಷ ದೊರಕಲಿ ಎಂದು ಅನುಗ್ರಹಿಸಿದ. ಅಂದಿನಿಂದ ಅದು ಗಯ ಕ್ಷೇತ್ರವೆಂದು ಪ್ರಸಿದ್ಧವಾಯಿತು,
****

ಗಯಾ ಕ್ಷೇತ್ರವನ್ನು ಕುರಿತು : 
(ಸಂಗ್ರಹ)

 ಗಯಾಭಿಧಮಿದಂ ಕ್ಷೇತ್ರಂ ಶ್ರಯೇ ಶ್ರೇಯಸ್ಕರಂ ನೃಣಾಮ್ ।
 ನ ಯತ್ರ ಸಹತೇ ಜಾತು ಕ್ರಿಯಾ ಜನ್ಮಾಂತರಕ್ರಿಯಾಮ್ ॥

 ಅರ್ಥ :- ಮನುಷ್ಯರಿಗೆ ಪುಣ್ಯಕಾರವಾದ ಈ ಗಯೆ ಎಂಬ ಹೆಸರಿನ ಕ್ಷೇತ್ರವನ್ನು  ಆಶ್ರಯಿಸುವನು ; ಎಂದಾದರೂ ಒಮ್ಮೆ ಮಾಡಲ್ಪಡುವ ಪಿಂಡದಾನಾದಿರೂಪ ಪಿತೃ ಕಾರ್ಯವೂ, ಜನ್ಮಾಂತರದಲ್ಲಿ ಮಾಡಬೇಕಾದ ಪಿತೃಕಾರ್ಯವನ್ನು ಸಹಿಸುವುದಿಲ್ಲ.

ಗಯಾಕ್ಷೇತ್ರದಲ್ಲಿ ಪಿಂಡದಾನಾದಿರೂಪ ಪಿತೃಕಾರ್ಯವನ್ನು ಒಂದು ಸಲ ಮಾಡಿದರೂ ಸಹ, ಪಿತೃಗಳಿಗೆ ವೈಕುಂಠಲೋಕವು ಲಭಿಸುವುದು, ಆದ್ದರಿಂದಲೇ ಇದು ತುಂಬಾ ಅತಿಶಯಾ ಪುಣ್ಯಕರವಾದ ಕ್ಷೇತ್ರ ಎಂದು ಭಾವ.

ಗಯಾ ಕ್ಷೇತ್ರವು ಭರತಖಂಡದ ಅತ್ಯಂತ ಪ್ರಸಿದ್ಧ ಕ್ಷೇತ್ರಗಳಲ್ಲೊಂದು. ಪಿತೃ ಕಾರ್ಯಕ್ಕೆ ವಿಹಿತವಾದ "ತ್ರಿಸ್ಥಲ" ಗಳಲ್ಲಿ ಇದೂ ಒಂದು. ಪುತ್ರನ ಲಕ್ಷಣತ್ರಯಗಳಲ್ಲಿ ಗಯಾ ಕ್ಷೇತ್ರ ಪಿಂಡಪ್ರದಾನ ಮಾಡುವುದೂ ಒಂದು ಎಂದು ಶಾಸ್ತ್ರಗಳು ಸಾರಿವೆ .ಒಬ್ಬನಾದರೂ ಗಯಾ ಯಾತ್ರೆಯನ್ನು ಮಾಡಿ ಅಲ್ಲಿ ಪಿತೃಗಳಿಗೋಸ್ಕರ ಪಿಂಡ ಸಮರ್ಪಣೆ ಮಾಡಲಿ ಎಂಬ ಕಾರಣಕ್ಕಾಗಿ ಬಹು ಸಂಖ್ಯಾತ ಪಡೆಯುವಷ್ಟರ ಮಟ್ಟಿಗೆ ಮನುಷ್ಯನ ಜೀವನದಲ್ಲಿ ಈ ಕ್ಷೇತ್ರಕ್ಕೆ ಮಹತ್ವವಿದೆ.

ಫಲ್ಗುಣೀ ನದಿಯ ತೀರದಲ್ಲಿರುವ ಈ ಕ್ಷೇತ್ರದಲ್ಲಿ ಒಂದು (ಅಕ್ಷಯ)ವಟವೃಕ್ಷವೂ, 'ಧರ್ಮವತೀ' ಎಂಬ ಶಿಲೆಯಮೇಲೆ ವಿಷ್ಣುಪಾದವೂ ಇದೆ. ಈ ಮೂರು ಕ್ಷೇತ್ರಗಳಲ್ಲಿ ಪಿತೃಕಾರ್ಯವು ವಿಹಿತವಾಗಿವೆ. ಫಲ್ಗುಣಿ ನದಿಯ ಮತ್ತೊಂದು ತೀರದಲ್ಲಿ ರಾಮಗಯೆ ಎಂದು ಪ್ರಸಿದ್ಧವಾದ ಕ್ಷೇತ್ರವಿದೆ. ರಾಮದೇವರು ಲೋಕಶಿಕ್ಷಣಕ್ಕಾಗಿ ದಶರಥನಿಗೋಸ್ಕರ ಶ್ರಾದ್ಧ ಮಾಡಿದ ಸ್ಥಳ ಎಂಬುದು ಅದರ ಪೌರಾಣಿಕ ಹಿನ್ನೆಲೆ. ಭಗವಂತನು ' ಬುದ್ಧ' ರೂಪದಿಂದ ಅವತರಿಸಿದ ಸ್ಥಳ ಎಂದು ಇದನ್ನು ಪುರಾಣಗಳು ತಿಳಿಸುತ್ತವೆ. ಶ್ರೀಮದಾಚಾರ್ಯರ ಮಹಾಭಾರತತಾತ್ಪರ್ಯನಿರ್ಣಯದಲ್ಲೂ ಈ ಉಲ್ಲೇಖ ಬಂದಿದೆ.
👇👇👇👇
 ಕ್ಷೇತ್ರೇ ಗಯಾಖ್ಯೇs ಸ್ಯ ಶಿಶುಂ ಪ್ರಜಾತಂ 
 ಸಂಪ್ರಾಸ್ಯ ದೂರೇsತ್ರ ಬಭೂವಃ ವಿಷ್ಣುಃ ॥

ಗಯೆಯಲ್ಲಿ "ತೀರ್ಥ" ವಿಲ್ಲದ ಸ್ಥಳವೇ ಇಲ್ಲ ಎಂದೂ ವಾಯುಪುರಾಣವು ವರ್ಣಿಸಿದೆ.👇👇
 ಗಯಾಯಾಂ ನ ಹಿ ತಾತ್ ಸ್ಥಾನಂ ಯತ್ರ ತೀರ್ಥಂ ನ ವಿದ್ಯತೇ ॥
ಇದರ ವರ್ಣನೆಯು ಮಹಾಭಾರತದಲ್ಲಿ ಬಂದಿದೆ.

ಮಹಾಭಾರತಾದಿ ಆಕರಗ್ರಂಥಗಳಲ್ಲೆಲ್ಲ ಉಲ್ಲೇಖವಾಗಿರುವ ಈ ಕ್ಷೇತ್ರದ ವಿಶೇಷ ಮಹಾತ್ಮ್ಯವು ' ವಾಯುಪುರಾಣ ' ದಲ್ಲಿ ಬಂದಿದೆ.
ಧರ್ಮನ ಮಗಳಾದ ಧರ್ಮವತಿಯು ಕಾರಣಾಂತರಗಳಿಂದ ತನ್ನ ಪತಿಯಾದ ಮರೀಚಿ ಮುನಿಗಳ ಶಾಪಕ್ಕೆ ಗುರಿಯಾಗಿ ಶಿಲಾರೂಪದಲ್ಲಿ ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿ, ಪ್ರತ್ಯಕ್ಷರಾದ ನಾರಾಯಾಣಾದಿ ದೇವತೆಗಳ ಸಕಲದೇವತಾಸನ್ನಿಧಾನವೂ ತನ್ನಲ್ಲಿರುವಂತೆ ವರವನ್ನು ಪಡೆದುಕೊಂಡಳು. ಗಯಾಸುರನೆಂಬ ಅಸುರನು ಅಪೂರ್ವ ತಪಸ್ಸು ಮಾಡಿ ನಾರಾಯಣನಿಂದ ತನ್ನ ದೇಹವು ಸಕಲತೀರ್ಥಗಳಿಗಿಂತಲೂ ಹೆಚ್ಚು ಪವಿತ್ರವಾಗಲಿ ಎಂದು ವರವನ್ನು ಪಡೆದು ಅನಂತರವೂ ತಪಸ್ಸನ್ನು ನಿಲ್ಲಿಸದೆ ಹೋದಾಗ, 
ದೇವತೆಗಳ ಪ್ರಾರ್ಥನೆಯಂತೆ ಬ್ರಹ್ಮದೇವರು ಅವನ ಬಳಿ ಬಂದು ಅವನ ದೇಹವನ್ನೇ ಯಜ್ಞ ಭೂಮಿಯನ್ನಾಗಿ ಮಾಡಿಕೊಂಡು ಯಜ್ಞವೊಂದನ್ನು ಮಾಡಿದರಂತೆ ; ಯಜ್ಞ ಮುಗಿದಮೇಲೆ ಅವನು ಪುನಃ ಮೇಲೇಳಲು ತೊಡಗಿದಾಗ ; ಅವನ ದೇಹದ ಮೇಲೆ ಆ 
"ಧರ್ಮವತೀ" ಶಿಲೆಯನ್ನು ಇರಿಸದರಂತೆ ; ಆಗಲೂ ಅವನು ಏಳತೊಡಗಿದಾಗ ಶ್ರೀವಿಷ್ಣುವು ಆ ಶಿಲೆಯ ಮೇಲೆ ಊರಿದ ಪಾದವೇ 
"ವಿಷ್ಣುಪಾದ"ವೆನ್ನಿಸಿತು. ಶ್ರೀ ಹರಿಯು ಗಧಾದರನೆಂಬ ರೂಪದಿಂದ ಅಲ್ಲಿ ನೆಲೆಸಿದನು. 
ಈ  ಕ್ಷೇತ್ರದಲ್ಲಿ ಮಾಡುವ ಪಿಂಡಸಮರ್ಪಣೆಯು ಪಿತೃಗಳ ಸಕಲಪಾಪವನ್ನು ಪರಿಹರಿಸಿ ಸದ್ಗತಿಗೆ ಕಾರಣವಾಗುವುದು.

🙏 ಶ್ರೀ ಕೃಷ್ಣಾರ್ಪಣಮಸ್ತು 🙏
***








No comments:

Post a Comment