SEARCH HERE

Tuesday 1 January 2019

ಗೌರೀ ಸ್ವರ್ಣಗೌರೀ ವ್ರತ gouri swarna gowri vruta bhadrapada shukla triteeya



ಸ್ವರ್ಣಗೌರೀ ವ್ರತ    GOURI HABBA 

ಮನೆಯಲ್ಲಿ ಈ ಆಡಿಯೋ ಹಾಕುತ್ತ ಗೌರೀ ಪೂಜೆ / ವೃತ ಮಾಡಿರಿ
ps: ಮೊದಲೇ ಒಂದು ಸಲ ಆಡಿಯೋ (audio) ಕೇಳಿ ಎಲ್ಲ ಸಾಮಗ್ರಿಗಳನ್ನು ಇಟ್ಟುಕೊಳ್ಳಿರಿ. 


ಗೌರೀ ಹಬ್ಬ/ವೃತದ ಪೂಜೆಯ ಪೂರ್ಣ ಆಡಿಯೋ ಲಿಂಕ್ ಇಲ್ಲಿದೆ  
click 👇👇
           ಸ್ವರ್ಣ ಗೌರಿ ವೃತ MP3 


ಭಾದ್ರಪದ ಚೌತಿ ಗಣಪತಿ ವೃತ 👇👇
    02. click ಗಣೇಶ ಗಣಪತಿ ವಿನಾಯಕ ವೃತ MP3 


ಸ್ವರ್ಣಗೌರೀ ವ್ರತ   
                    ಶ್ರೀ ಸ್ವರ್ಣ ಗೌರಿ ವ್ರತ  ಹೆಸರೇ ಸೂಚಿಸುವಂತೆ  ಸ್ವರ್ಣ ಅಂದರೆ ಬಂಗಾರ ; ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ  ಗೌರಿ  ಎಂದು ಅರ್ಥ.  ಅಂತಹ  ಜಗನ್ಮಾತೆಯಾದ ಗೌರಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷ  ತೃತೀಯ ತಿಥಿಯಂದು  ಷೋಡಶೋಪಚಾರದಿಂದ ಪೂಜಿಸಬೇಕು .ಈ ಹಬ್ಬವನ್ನು ಹೆಣ್ಣುಮಕ್ಕಳು ಮುತ್ತೈದೆಯರು  ಪ್ರಾಚೀನ ಕಾಲದಿಂದಲೂ  ಆಚರಿಸುತ್ತಾ  ಬಂದಿದ್ದಾರೆ .

                           ಈ ಹಬ್ಬದ ಆಚರಣೆಯ ರೀತಿ ಹೀಗಿದೆ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು  ಪಾಡ್ಯ   ತಿಥಿಯಂದು  ಅಭ್ಯಂಜನ ಮಾಡಿ , ಮೊರದ ಬಾಗಿನಕ್ಕೆ ಅಣಿಯಾದ  ಮೊರವನ್ನು ಶುಭ್ರಗೊಳಿಸಿ  ಅದಕ್ಕೆ ಅರಿಶಿನ,ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು ,ತೆಂಗಿನಕಾಯಿ,ಬಳೆಬಿಚ್ಚೋಲೆ,ಕನ್ನಡಿ ,ಬಳೆಗಳು ,೫ ಬಗೆಯ ಹಣ್ಣುಗಳು ,ರವಿಕೆ ಕಣ ,ತಾಯಿಗೆ ಹಾಗೆ ಅತ್ತಿಗೆ ,ನಾದಿನಿಯರಿಗೆ  ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು  (ಯಥಾ ಶಕ್ತಿ ಏನಾದರು ಕೊಡಬಹುದು ) ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು .ನಂತರ ಮನೆಯನ್ನು ಶುಚಿಗೊಳಿಸಿ  ರಂಗವಲ್ಲಿ ಹಾಕಿ ,ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,ಗೌರಿ ಮೂರ್ತಿಯನ್ನು ಶೃಂಗರಿಸಿ ,ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು  ಅಲಂಕರಿಸಬೇಕು . ಪತ್ರೆಗಳನ್ನು ,ಹೂವುಗಳನ್ನು ,ಹೂವಿನ ಮಾಲೆಗಳನ್ನು ಕಟ್ಟಿ , ೫ ತೆಂಗಿನಕಾಯಿ  ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ,ಚಂದನ,ಅಡಿಕೆ,ದಶಾಂಗಂ ,೫ ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ,ಗೆಜ್ಜೆವಸ್ತ್ರಗಳು ,೧೬ ಎಳೆಯ ಗೆಜ್ಜೆವಸ್ತ್ರ ಹಾಗೆ ೧೬ ಎಳೆ  ದೋರ  ಗ್ರಂಥಿಗಳನ್ನು ತಯಾರಿಸಬೇಕು ಅದಕ್ಕೆ ೧೬ ಗಂಟನ್ನು ಹಾಕಿ ದೋರವನ್ನು ಸಿದ್ಧ ಪಡಿಸಬೇಕು . ಪಂಚಾಮೃತ ಅಭಿಷೇಕ ,ಮಧುಪರ್ಕ ,ಮಂಗಳಾರತಿ ಬತ್ತಿಗಳು . ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ ೨ ತೆಂಗಿನಕಾಯಿಗಳು  ನಾಲ್ಕು ವಿಳ್ಳೆ ದೆಲೆ ,ಅಡಿಕೆಗಳು ,ದಕ್ಷಿಣೆ,  ಸ್ವಲ್ಪ ಅಕ್ಕಿ ಅದನ್ನು  ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ  ಉಪಯೋಗಿಸಬೇಕು  .

   ಕಲಶದ  ವಿಧಾನ :
                                                                                                                                                             ಇನ್ನು ಕೆಲವರು  ಮರಳಗೌರಿಯನ್ನು ,ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ . ಅವರವರ ಸಂಪ್ರದಾಯದಂತೆ  ಜಗನ್ಮಾತೆಯನ್ನು ಸ್ಥಾಪಿಸಿ  ಪೂಜೆ ಮಾಡಬೇಕು . ಹಾಗೆಯೇ ಕಲಶದಲ್ಲಿ ಗಂಗೆಯನ್ನು ಅದಕ್ಕೆ ೫ ವಿಳ್ಳೆದೆಲೆಯನ್ನು ಇಟ್ಟು  ಹಾಗೆ ಯಾವುದಾದರು ಹಣ್ಣನ್ನು ಕಳಸದಲಿ ಇಡಬೇಕು ಕಲಶದ  ಸುತ್ತ ಬಿಳಿ ಸುಣ್ಣ  ಹಚ್ಚಿ
ಅದಕ್ಕೆ ೪ ಕಡೆ  ಅರಿಶಿನ ಕುಂಕುಮ ಹಚ್ಚಬೇಕು . ಒಂದು ತಟ್ಟೆಯಲ್ಲಿ ಹಳದಿ ( ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು ) ವಸ್ತ್ರವನ್ನು ಹಾಸಿ , ಎರೆಡು  ವಿಳ್ಳೆದೆಲೆಯ   ಜೊತೆ ಎರೆಡು  ಬಟ್ಳಡಿಕೆ ಇಟ್ಟು  ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು  ಜೊತೆಯಲ್ಲಿ ಸಿದ್ಧಪಡಿಸಿದ    ಕಲಶವನ್ನು    ಸ್ಥಾಪನೆ ಮಾಡಬೇಕು .
                     ಇನ್ನು ಉಪ್ಪಕ್ಕಿ ಇಡುವ  ಸಂಪ್ರದಾಯವಿದ್ದರೆ   ತೊಗರಿಬೇಳೆ ಮತ್ತೆ ಅಕ್ಕಿಯನ್ನು   ಬಳಸಿ ೩ ಬಾರಿ ಈ ಕೆಳಕಂಡ  ಮಂತ್ರದಿಂದ  ಉಪ್ಪಕ್ಕಿ ಇಡಬೇಕು - " ಅತ್ತೆ ಆಜ್ಞೆ ಇರಲಿ ,ಮಾವನ ಆಜ್ಞೆ ಇರಲಿ ,ಗಂಡನ ಆಜ್ಞೆ ಇರಲಿ ಸ್ವರ್ಗಕ್ಕೆ ಹೋದರು ಸವತಿ ಕಾಟ  ಬೇಡ ( ಇಲ್ಲದಿರಲಿ )".
                      ಮೊರದ  ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು  ಶ್ರದ್ಧಾಪೂರ್ವಕವಾಗಿ ಹೇಳಿ  ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು  ಹೇಳಿಕೆಯಿದೆ .

"ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ  ಮಯಾದತ್ತಾಣಿ ಸೂರ್ಪಾಣಿ  ಗೃಹಾಣೇಮಾನಿ  ಜಾನಕಿ '.

                     ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು . ಅದಕ್ಕೆ ಬೇಕಾಗುವ ಸಾಮಾಗ್ರಿಗಳು : ತೆಂಗಿನಕಾಯಿ,(ತೆಂಗಿನಕಾಯಿ ಇಲ್ಲದಿದ್ದಲ್ಲಿ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ )ಬೆಲ್ಲದಚ್ಚು ,ಬಳೆ  ಬಿಚ್ಚೋಲೆ , ವಿಳ್ಳೆ ದೆಲೆಗಳು ,ಅಡಿಕೆಗಳು,ದಕ್ಷಿಣೆ,ಸೀರೆ ,ಎರೆಡು ರವಿಕೆ ಕಣಗಳು ,ಹಣ್ಣುಗಳಾದ  ದಾಳಿಂಬೆ ,ಛೇಪೆ ಹಣ್ಣು ,ಸೀತಾ ಫಲ ,ಸಪೋಟ ,ಮೂಸಂಬಿ ,ಕಿತ್ತಳೆ ಫಲ . ನಂತರ ಮಂಗಳಾರತಿ ಮಾಡಿ  ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು . ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ  ಸೇವಿಸಬೇಕು .
 ಶ್ರೀ ಸ್ವರ್ಣಗೌರಿ ವ್ರತ ಮತ್ತು ಕಥಾ ಶ್ರವಣ -
*****

‌🌹ಸ್ವರ್ಣ ಗೌರಿ ವ್ರತ:
ತಿಳಿದಿರಲಿ ಈ ಸಂಗತಿಗಳು.🌹

🌹ಶ್ರಾವಣಮಾಸದ ವೈಭವದ ಲಕ್ಷ್ಮೀಪೂಜೆಯ ನಂತರ ಬರುವ ಭಾದ್ರಪದ ಮಾಸದ ಗೌರೀ ಹಬ್ಬ ವಿಶೇಷತೆಗಳಲ್ಲಿ ಒಂದು.🌹

ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ
ಪ್ರಾಚೀನ ಕಾಲದ ವಿಧಿ, ಸಂಪ್ರದಾಯ, ನಿಯಮಗಳನ್ನು ಗಮನಿಸಿದರೆ ಸ್ತ್ರೀಯರೇ ಪ್ರತ್ಯೇಕವಾಗಿ, ಸ್ವತಂತ್ರವಾಗಿ ಆಚರಿಸಬಹುದಾದ ಯಾವ ಆಚರಣೆಗಳೂ ಕಂಡುಬರುವುದಿಲ್ಲ. ಆಕೆ ಗೃಹಿಣಿಯಾಗಿ ಪತ್ನಿಯ ಸ್ಥಾನದಲ್ಲಿ ಕುಳಿತು ಪತಿಯೊಂದಿಗೆ ಯಜ್ಞ, ಯಾಗ, ಪೂಜೆ, ವ್ರತಗಳಲ್ಲಿ ಸಹಭಾಗಿಯಾಗಬಹುದಷ್ಟೇ

ಸಂಸ್ಕೃತಿ, ಪುರಾಣ, ಇತಿಹಾಸಗಳ ಕಾಲದಲ್ಲಿ ಸಮಷ್ಟಿಹಿತ ಚಿಂತನೆಯ ದೃಷ್ಟಿಯಿಂದ ನಡೆದಿರಬಹುದಾದ ವಿಶಿಷ್ಟ ವೈಚಾರಿಕತೆಯ ಪರಿಣಾಮವಾಗಿ ಗೃಹಿಣಿಯರೇ ಪತಿಯ ಅನುಮತಿ ಪಡೆದು ಸ್ವತಂತ್ರವಾಗಿ ಆಚರಿಸಬಹುದಾದ ವ್ರತಾಚರಣೆ ಪ್ರಾರಂಭವಾದವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಸ್ವರ್ಣಗೌರಿ ವ್ರತ, ಹರಿತಾಲಿಕಾ ವ್ರತ, ಮಂಗಳಗೌರಿ ವ್ರತ ಮುಂತಾದವು ಸ್ತ್ರೀಯರಿಗೇ ಮೀಸಲಾದ ವ್ರತಗಳು.

ವ್ರತಗಳು ಸುಲಭ, ಸರಳ, ಇವುಗಳಿಂದ ಇಷ್ಟ ದೈವವನ್ನು ಒಲಿಸಿಕೊಳ್ಳಬಹುದು. ಸ್ವರ್ಣಗೌರಿ ವ್ರತವೂ ಮಹಿಳೆಯರು ಬಹು ಸಂಭ್ರಮ, ಭಕ್ತಿಯಿಂದ ಮಾಡುವಂತಹದ್ದು. ಭಾದ್ರಪದ ಶುದ್ಧ ಚತುರ್ಥಿತಯುತ ತದಿಗೆಯ ದಿನವೇ ನಡೆಸಬೇಕು. ವ್ರತ ಅಂದರೆ ನಿಯಮ. ಶ್ರದ್ಧೆ, ಭಕ್ತಿ, ದೃಢಸಂಕಲ್ಪ, ದಾನ, ದಕ್ಷಿಣೆ, ಉಪವಾಸ ಅಥವಾ ಮಿತಾಹಾರ ಮುಖ್ಯವಾಗಿರುತ್ತದೆ. ಗೃಹಿಣಿಯರು ಸ್ವತಃ ಸಂಕಲ್ಪ ಮಾಡಿ ಅಕ್ಷಯ ಸೌಭಾಗ್ಯ ಧರ್ಮಾರ್ಥಕಾಮ ಚತುರ್ವಿಧ ಪುರುಷಾರ್ಥ ಸಿದ್ಧಿಗಾಗಿ, ಪುತ್ರ ಪೌತ್ರಾದಿ ಧನ ಧಾನ್ಯ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.
 
ಯಾರು ಈ ಸ್ವರ್ಣ ಗೌರಿ?
ಸುವರ್ಣ ಬಣ್ಣದ ಗೌರಿ ಶಿವನ ಅರ್ಧಾಂಗಿ. ಆಕೆ ಜಗದ್ವಂದ್ಯಳು. ದಕ್ಷ ಮಹಾರಾಜನ ಮಗಳಾಗಿ ಹುಟ್ಟಿ ಶಿವನ ಮಡದಿಯಾದ ದಾಕ್ಷಾಯಿಣಿ, ತವರಿನಲ್ಲಿ ತಂದೆ ಮಾಡುವ ಯಾಗಕ್ಕೆ ಬಂದು ಅಪಮಾನಿತಳಾಗುತ್ತಾಳೆ. ಯಜ್ಞಕುಂಡದಲ್ಲೇ ಪ್ರಾಣತ್ಯಾಗ ಮಾಡಿದ ಆಕೆ ಹುಟ್ಟಿದ್ದು ಮಹಾ ಶಿವಭಕ್ತನಾದ ಹಿಮವಂತ ಮತ್ತು ಆತನ ಪುಣ್ಯ ವಲ್ಲಭೆ ಮೇನಾದೇವಿಯರಿಗೆ ಮಗಳಾಗಿ! ಗಿರಿಜೆ ಶಿವಲಿಂಗ ದರ್ಶನ ಮಾಡಿಯೇ ಕಣ್ತೆರೆದವಳು. ಮುಂದಿನ ಅವಳ ಕತೆ ರೋಚಕವಾಗಿದೆ.
 
ಗೌರಿ-ಶಂಕರ ವಿವಾಹ
ಶಿವಭಕ್ತೆಯಾಗಿಯೇ ಬೆಳೆದ ಗೌರಿ. ನಾರದರ ಸಲಹೆಯಂತೆ ಹೇಮಕೂಟದಲ್ಲಿ ತಪೋಯೋಗದಲ್ಲಿರುವ ಶಿವನ ಬಳಿ, ತನ್ನ ಸಖಿಯರಾದ ಜಯ-ವಿಜಯರ ಜೊತೆ ಬಂದು ಶಿವನ ಅರ್ಚನೆಗೆ ತೊಡಗುತ್ತಾಳೆ. ತಾರಕಸುರನ ವಧೆಗಾಗಿ ಕುಮಾರ ಸಂಭವವಾಗಬೇಕು. ಶಿವ ಗಿರಿಜೆಗೆ ಒಲಿಯಬೇಕು. ಗೌರಿಯ ತಪೋನಿಷ್ಠೆ ಅಚಲವಾದುದು. ವಟುವೇಷ ಧರಿಸಿ ಅವಳ ಪರೀಕ್ಷೆಗೆ ಬಂದ ಶಿವನದೇ ಪರೀಕ್ಷೆಯಾಯಿತು. ಗಿರಿಜೆಗಾಗಿ ಕಾಮನನ್ನು ಬದುಕಿಸಿದ. ಮೂರು ಲೋಕ ಮೆಚ್ಚುವಂತೆ, ಲೋಕಕಲ್ಯಾಣವಾಗುವಂತೆ ಗೌರೀ ಶಂಕರರ ವಿವಾಹವಾಯಿತು. ಶಿವನು ಸ್ವಯಂಭೂ, ಶಕ್ತಿ ಹಲವು ರೂಪ, ಜನ್ಮ ತಾಳಿ ಪರಶಿವನನ್ನೇ ಸೇರುವುದು ಅರ್ಥಪೂರ್ಣ.                           ‌
ಎಲ್ಲಾ ಮಹಿಳೆಯರಿಗೂ ಆದರ್ಶ ಈ ಗೌರಿ
ಆನೆಮೊಗದ ತನ್ನ ಮಗ ಲೋಕವಂದಿತನಾಗಬೇಕೆಂದು ವರ ಪಡೆದವಳು ಗೌರಿ. ವಿರೂಪಾಕ್ಷನನ್ನು ತನ್ನ ಮನದಿಚ್ಛೆಯಂತೆ ಕಠಿಣ ತಪಸ್ಸಿನಿಂದ ಪತಿಯಾಗಿ ಪಡೆದು, ತಾರಕಾಸುರನನ್ನು ಸಂಹರಿಸುವ ಸ್ಕಂದನನ್ನು ಪುತ್ರನಾಗಿ ಬೆಳೆಸಿ, ತನ್ನ ಮೈ ಮಣ್ಣಿನಿಂದಲೇ ಮುದ್ದಿನ ಮಗನನ್ನು ಸೃಷ್ಟಿಸಿ, ಅವನು ಪತಿಯಿಂದ ಹತನಾದಾಗ ಮತ್ತೆ ಪ್ರಾಣಶಕ್ತಿ ನೀಡಿ, ಮಗನು ಬದುಕುವಂತೆ ಮಾಡಿಸಿ, ವಿರೂಪನಾದ ಮಗನು ಮಹಾಮಹಿಮನಾಗುವಂತೆ ಮಾಡಿದ ಗೌರಿ, ಸುವರ್ಣದ ಗೌರಿ, ಸ್ವರ್ಣಗೌರಿ ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯಳು. ಪುರುಷರಿಗೂ ಮಾನ್ಯಳು. ಅವಳ ಭಕ್ತರನ್ನು ಶಿವನೇ ಕಾಯುತ್ತಾನೆ.
 
ಗೌರೀ ವ್ರತ ಯಾಕೆ?
ಶಿವನ ಅರ್ಧಾಂಗಿ ಪಾರ್ವತಿ ಹರತಾಳಿಕಾ ಉಪವಾಸ ಮಾಡುತ್ತಾ 'ಅಪರ್ಣಾ' ಎಂದು ಕರೆಸಿಕೊಂಡು ಯಶಸ್ವಿಯಾಗಿ ಶಿವನನ್ನು ಪಡೆದಳು ಎನ್ನುವ ಕಥೆಯಿದೆ. ಅಂಥ ಹಠಸಾಧನೆಯ ಗೌರಿಯನ್ನು ಪೂಜಿಸಿದರೆ ತಾವೂ ಬದುಕಿನ ನೆಮ್ಮದಿಯನ್ನು ಪಡೆಯಬಹುದು ಎಂಬ ಬಯಕೆಯಿಂದ ಮಹಿಳೆಯರು ವ್ರತಾಚರಣೆ ಮಾಡುತ್ತಾರೆ.
 
ಷೋಡಶೋಪಚಾರ
ಷೋಡಶೋಪಚಾರಗಳು ಅಂದರೆ ಹದಿನಾರು ಬಗೆಯ ಉಪಚಾರಗಳು. ಅಭೀಷೇಕ, ಸ್ನಾನ, ಗಂಧ, ಅರಿಶಿನ ಕುಂಕುಮ, ವಸ್ತ್ರ, ಒಡವೆ, ಮಾಂಗಲ್ಯ, ಕಜ್ಜಲ, ಕಂಕಣ ಹೀಗೆ ಮಂಟಪದಲ್ಲಿ ಆಸೀನಳಾದ ಗೌರಿಗೆ ಉಪಚಾರಗಳು ನಡೆದು ಕೊನೆಗೆ ಸಿಹಿಯೊಂದಿಗೆ ಆಕೆಯನ್ನು ಸಂತೃಪ್ತಿಗೊಳಿಸುವುದು.
 
ಗೌರಿ ಅಲಂಕಾರ
ಈ ಎಲ್ಲಾ ಉಪಚಾರಗಳಲ್ಲೇ ಅತ್ಯಂತ ಖುಷಿ ಕೊಡುವ ಉಪಚಾರವೆಂದರೆ ಗೌರಿಯ ಅಲಂಕಾರ. ಅಲಂಕಾರ, ಸ್ತ್ರೀಯರಿಗೆ ಪರಮಾಪ್ತ, ಸೇವಂತಿಕಾ, ಬಕುಳ, ಚಂಪಕ, ಪುನ್ನಾಗ, ಜಾಜಿ, ಕರವೀರ, ಮಲ್ಲಿಕಾ ಎನ್ನುವ ಹೂಗಳೊಂದಿಗೆ ಬಣ್ಣ ಬಣ್ಣದ ಹಲವು ಹೂವುಗಳು ಈ ಗೌರಿಹಬ್ಬಕ್ಕೇ ವಿಶೇಷವಾಗಿ ಪ್ರಕೃತಿಯಲ್ಲಿ ದೊರೆತು ಗೌರಿಯ ಮುಡಿಯೇರುವುದನ್ನು ನೋಡುವಾಗ ಪ್ರಾಯಶಃ ಈಗ ಪೂಜೆ ಪರಿಪೂರ್ಣವಾಯಿತು ಎಂದೆನ್ನಿಸುವುದು ಸತ್ಯ. ‌  ‌    ‌    ‌    

ಬಾಗಿನ ಕೊಡುವುದು                                                             ಬಾಗಿನ ಎಂದರೆ ದಾನ, ಹಾರೈಕೆ
ಕೊಡುಕೊಳ್ಳುವಿಕೆಯ ಬಾಗಿನವೂ ಗೌರಿಹಬ್ಬದ ವೈಶಿಷ್ಟ್ಯವೇ. ಸಮೃದ್ಧಿ, ನೆಮ್ಮದಿಯನ್ನು ಪರಸ್ಪರ ಹಾರೈಸುತ್ತಾ ನೀಡುವ ಬಾಗಿನ ದಾನವೂ ಹೌದು, ಹಾರೈಕೆಯೂ ಹೌದು.
 
ಹಿಂದಿನ ದಿನವೇ ವ್ರತ ಆರಂಭ
ಯಾವುದೇ ವ್ರತವಾಗಲಿ ಹಬ್ಬವಾಗಲಿ ಹಿಂದಿನ ದಿನವೇ ನಿಜವಾಗಿ ಆರಂಭವಾಗುತ್ತದೆ. ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ವ್ರತದ ಹಿಂದಿನ ದಿನ ರಾತ್ರಿಯೇ ನಾಳೆ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿ ಉಪವಾಸ ಅಥವಾ ಫಲಾಹಾರ ಇಲ್ಲವೇ ಅಲ್ಪಾಹಾರ ಮಾಡಿ ವ್ರತದ ಪ್ರಧಾನ ದೇವರನ್ನು ಧ್ಯಾನಿಸುತ್ತಾ ನಿದ್ರಿಸಬೇಕು. ಗೌರಿಹಬ್ಬ ಅಥವಾ ಸ್ವರ್ಣಗೌರಿ ವ್ರತವೂ ಈ ನಿಯಮಕ್ಕೆ ಹೊರತಾಗಿಲ್ಲ.         ‌   ‌    ‌   ‌   ‌    ‌   ‌   ‌                                                              
ನಸುಕಿನಲ್ಲೇ ವ್ರತಕ್ಕೆ ತಯಾರಿ
ವ್ರತದ ದಿನ ನಸುಕಿನಲ್ಲೆದ್ದು, ಬಾಗಿಲನ್ನು ರಂಗವಲ್ಲಿಯಿಂದ ಸಿಂಗರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಮುಡಿಯಿಂದ ಅಡಿಯವರೆಗೂ ಮಿಂದು ಮಡಿಯ ಬಟ್ಟೆ ಉಟ್ಟುಕೊಂಡು ಹಣೆಗೆ ವಿಭೂತಿ ಕುಂಕುಮ ಮುಂತಾದವುಗಳನ್ನಿಟ್ಟುಕೊಂಡು ಪೂಜಿಸಲು ಸಿದ್ಧರಾಗಬೇಕು. ನದಿಯು ಸಮೀಪದಲ್ಲಿ ಇಲ್ಲದಿದ್ದರೆ ಮನೆಯಲ್ಲಿಯೇ ತಣ್ಣಿರಿನಿಂದ ಸ್ನಾನ ಮಾಡಬಹುದು. ಆರೋಗ್ಯವನ್ನು ಗಮನಿಸಿ ಸ್ನಾನಕ್ಕೆ ಬೆಚ್ಚಗಿನ ನೀರನ್ನೂ ಬಳಸಬಹುದು.
 
ಗೌರಿಪೂಜೆಗೂ ಮುನ್ನ...
ಪರಿಶುದ್ಧವಾದ ಪೂಜೆಯ ಸ್ಥಾನದಲ್ಲಿ ಫಲ-ಪುಷ್ಪಗಳಿಂದ ಅಲಂಕೃತವಾದ ಮಂಟಪದಲ್ಲಿ ಕಲಶವನ್ನು ಅಥವಾ ಹೊಂಬಣ್ಣದ ಶ್ರೀಗೌರಿಯ ಮೂರ್ತಿಯನ್ನು ಇಡಬೇಕು. ಬಾಳೆ ಎಲೆಯ ಮೇಲೆ ಅಕ್ಕಿಯ ರಾಶಿಯನ್ನು ಹರಡಿ ಅದರ ಮೇಲೆ ಲಭ್ಯವಿರುವ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಪಾತ್ರೆಯನ್ನು ಇಟ್ಟು ನೀರನ್ನು ತುಂಬಬೇಕು. ಅದರ ಮೇಲೆ ಕನಿಷ್ಠ ಐದು ಎಲೆಗಳಿರುವ ಮಾವಿನ ಚಿಗುರನ್ನು ಇಟ್ಟು, ಮೇಲಿನಿಂದ ತೆಂಗಿನಕಾಯಿ ವಸ್ತ್ರ ಬಳೆ ಮುಂತಾದವುಗಳನ್ನಿಟ್ಟು ಅಲಂಕರಿಸಬೇಕು.    ‌     ‌    ‌       ‌   ‌   ‌    ‌                                                                      
ಗೌರಿ ಪೂಜೆ ಹೇಗೆ ?
ಪೂಜೆಯನ್ನು ಎರಡು ಬಗೆಯಲ್ಲಿ ಮಾಡಬಹುದು. ಅನುಕೂಲವಿದ್ದರೆ ಮಂತ್ರಗಳನ್ನು ಉಚ್ಚರಿಸುತ್ತಾ ಪೂಜಿಸಬಹುದು. ಶ್ರೀ ಗೌರ್ಯೈ ನಮಃ ಎಂದೋ, ಹೇಳುತ್ತಾ ಆವಾಹನೆ, ಆಸನ, ಪಾದ್ಯ, ಅರ್ಘ್ಯ, ಅಭಿಷೇಕ, ಗಂಧ, ಪುಷ್ಪ, ಅಕ್ಷತೆ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣೆ ನಮಸ್ಕಾರ ಪ್ರಾರ್ಥನೆಗಳನ್ನು ಮಾಡಬಹುದು.

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
ಎಂಬ ಸ್ತೋತ್ರವನ್ನು ಆವರ್ತಿಸಬಹುದು. ಅದಲ್ಲದಿದರೆ ಭಕ್ತಿಯಿಂದ, ಗೌರಿಯನ್ನು ಸ್ತುತಿಸುವ ಹಾಡನ್ನು ಹಾಡುತ್ತಾ ಪೂಜಿಸಬಹುದು.     ‌      ‌  ‌   ‌    ‌     ‌     ‌                                                                                  
ವ್ರತಾಚರಣೆ ಹೇಗೆ ?
ಭಾದ್ರಪದಮಾಸದ ಶುಕ್ಲಪಕ್ಷದ ತದಿಗೆಯಂದು ವ್ರತ ಆಚರಿಸಬೇಕು. ಅಂದು ಸೂರ್ಯೋದಯ ಸಮಯದಲ್ಲಿ ತದಿಗೆ ತಿಥಿ ಇರಬೇಕು. ಗಣೇಶನ ಪೂಜೆಗೆ ನಿಯತವಾಗಿರುವ ಚತುರ್ಥಿ ತಿಥಿಯ ಯೋಗವನ್ನು ಗೌರಿದೇವಿಯು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ತೃತೀಯಯೊಡನೆ ಚತುರ್ಥಿಯೋಗವು ಕೂಡಿಬಂದರೆ ಅಂದೇ ಗೌರಿಹಬ್ಬವನ್ನು ಆಚರಿಸಬೇಕು. ಗೌರಿ ದೇವಿಯನ್ನು ಹೃದಯದಲ್ಲಿ ಧ್ಯಾನಮಾಡಿ ಆನಂತರ ಹೊರಗೆ ಪೂಜಿಸಬೇಕು.      ‌    ‌  
                                                                         
ಗೌರಿ ಪ್ರತಿಮೆ
ಗೌರಿದೇವಿಯ ಸುವರ್ಣಪ್ರತಿಮೆ ಅಥವಾ ಕಲಶ ಅಥವಾ ಹರಿದ್ರಾ (ಅರಿಶಿನದ) ಅಥವಾ ಶುದ್ಧ ನದಿಯಿಂದ, ಸರೋವರದಿಂದ ಸಂಗ್ರಹಿಸಿದ ಮರಳು ಹಾಗೂ ಮಣ್ಣು ಮುಂತಾದವುಗಳಲ್ಲಿ ದೇವಿಯನ್ನು ಅವಾಹಿಸಿ ಪೂಜಿಸಬಹುದಾಗಿದೆ.      ‌     ‌     ‌    ‌    ‌                 ‌                                    
ಘಂಟಾನಾದ ಸಹಿತ ಪೂಜೆ
ಘಂಟಾನಾದ ಸಹಿತ ಪೂಜೆಯ ಪ್ರಾರಂಭ, ಆಚಮನ, ಸಂಕಲ್ಪ, ಕಳಶಪೂಜೆ, ಮಹಾಗಣಪತಿ ಪೂಜೆ, ಸ್ವರ್ಣಗೌರಿ ದೇವತಾ ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಧ್ಯಾನಿಸಬೇಕು. ಪುಷ್ಪಾಕ್ಷತೆಗಳಿಂದ ಆಕೆಯನ್ನು ಆವಾಹಿಸಿ ರತ್ನ ಸಿಂಹಾಸನವನ್ನು ಸಮರ್ಪಿಸಬೇಕು. ಹೊಸ ದಾರವನ್ನು ಪೂಜೆ ಮತ್ತು ಧಾರಣೆಗಾಗಿ ಇರಿಸಿಕೊಳ್ಳಬೇಕು. ಪಾದ್ಯ, ಅರ್ಘ್ಯ, ಅಚಮನ, ಮಧುಪರ್ಕ, ಪಂಚಾಮೃತಸ್ನಾನ, ಶುದ್ದೋದಕಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ ಕುಂಕುಮ ಇತ್ಯಾದಿ ಸೌಭಾಗ್ಯ ದ್ರವ್ಯಗಳು ಮತ್ತು ಪುಷ್ಪ ಇವುಗಳನ್ನು ಜಗನ್ಮಾತೆಗೆ ಸಮರ್ಪಿಸಬೇಕು.

ಶೋಡಶ ನಾಮ
ಹದಿನಾರು ನಾಮಗಳಿಂದ ಪೂಜೆ -
ದೇವಿಗೆ ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆ, ನಾಮಪೂಜೆಗಳನ್ನು ಸಲ್ಲಿಸಿ, ದಾರದ 16 ಗ್ರಂಥಿಗಳಿಗೂ ಕ್ರಮವಾಗಿ ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌಮಾರಿ, ಭದ್ರಾ, ವಿಷ್ಣುಸೋದರಿ, ಮಂಗಳದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರ ಪತ್ನಿ, ದಾಕ್ಷಾಯಣಿ, ಕೃಷ್ಣವೇಣಿ, ಭವಾನಿ, ಲೋಲೇಕ್ಷಣಾ, ಮೇನಕಾತ್ಮಜಾ ಎಂಬ ಹದಿನಾರು ನಾಮಗಳಿಂದ ಪೂಜೆಯನ್ನು ಸಲ್ಲಿಸಬೇಕು. ಅಷ್ಟೋತ್ತರ ಶತದಿವ್ಯನಾಮಗಳಿಂದ ಪೂಜೆಯನ್ನು ಸಲ್ಲಿಸಿ ಧೂಪ, ದೀಪ, ನೈವೇದ್ಯ, ತಾಂಬೂಲ, ಫಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಬೇಕು.
 
ನೈವೇದ್ಯ ಹೇಗಿರಬೇಕು ?
ದೇವಿಯ ನೈವೇದ್ಯಕ್ಕೆ ಸಮರ್ಪಿಸಬೇಕಾದ ವಿಶೇಷದ್ರವ್ಯ ಹರಿದ್ರಾನ್ನ, ಮುದ್ಗಾನ್ನ. ಇಷ್ಟಾರ್ಥವನ್ನು ಸಲ್ಲಿಸಬೇಕೆಂದು ದೇವಿಯನ್ನು ಪ್ರಾರ್ಥಿಸಿ ಆಕೆಯ ಅನುಮತಿಯಿಂದ ಮೇಲೆ ಹೇಳಿದ ಪೂಜಿತವಾದ ಹದಿನಾರು ಗಂಟುಗಳುಳ್ಳ ದಾರವನ್ನು ಧರಿಸಬೇಕು. ವ್ರತಸಂಪೂರ್ತಿಗಾಗಿ ಶ್ರೇಷ್ಠದ್ವಿಜರಿಗೂ, ಸುವಾಸಿನಿಯರಿಗೂ ಪಕ್ವಾನ್ನವೇ ಮುಂತಾದ ಉಪಾಯನಗಳನ್ನು ದಾನ ಮಾಡಬೇಕು. ದೇವಿಗೆ ಛತ್ರ ಚಾಮರ, ನೃತ್ಯ, ವಾದ್ಯ, ಆಂದೋಳಿಕಾ ಮತ್ತು ಇತರ ಉಪಚಾರಗಳನ್ನು ಸಮರ್ಪಿಸಿ ಆಕೆಯ ಪ್ರೀತಿ ಪ್ರಸನ್ನತೆಗೆ ಪ್ರಾರ್ಥಿಸಬೇಕು.
  ‌                                                                    
ಗೌರಿ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ

ಹೆಣ್ಣುಮಕ್ಕಳಿಗೆ ಹಬ್ಬಗಳೆಂದರೆ ಖುಷಿಯೂ ಒತ್ತಡವೂ ಏಕಕಾಲಕ್ಕೆ. ಶ್ರಾವಣದಲ್ಲಂತೂ ಹಬ್ಬಗಳದ್ದೇ ಕಾರುಬಾರು. ಅಷ್ಟಿದ್ದೂ ಭಾದ್ರಪದದ ಗೌರಿಹಬ್ಬ ಮಾತ್ರ ಒಂದು ಮುಷ್ಠಿ ಹೆಚ್ಚು ಆಪ್ತ. ಏಕೆಂದರೆ ಗೌರಿಯ ಸಂಸಾರದಲ್ಲಿ ನಮ್ಮ ಸಂಸಾರದ ನೆರಳೂ ಕಾಣುತ್ತದೆ ಎಂದೋ, ಗೌರಿಯಂತೇ ಕುಟುಂಬದ ಜವಾಬ್ದಾರಿ ತನ್ನ ಹೆಗಲ ಮೇಲಿರುತ್ತದೆ ಎಂದೋ, ಒಟ್ಟಿನಲ್ಲಿ ಗೌರಿಯಂಥ doದ್ದೇ ಬದುಕು ನಮ್ಮದೂ ಎನ್ನುವ ಕಾರಣಕ್ಕೆ ಈ ಹಬ್ಬವೆಂದರೆ ಹೆಂಗೆಳೆಯರಿಗೆ ಹೆಚ್ಚು ಪ್ರೀತಿ.

🙏🏻🙏_
******

ಮುತೈದೆ ದೇವತೆಯರು ೧೬ ಜನರು

ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..

ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..

ಸೀರೆ ಸೆರಗಿನಲ್ಲಿಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ.

ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಹೇಳುತ್ತಾರೆ..

ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ.

ಈ ೧೬ ದೇವತೆಗಳು ನಿತ್ಯಸುಮಂಗಲಿಯರು

ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು.

ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ.

೧೬ ಅರಿಸಿನ ದಾರ,

೧೬ ಗಂಟುಗಳು,

೧೬ ಬಾಗಿನ,

೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ.


ಸ್ವರ್ಣಗೌರೀ ವ್ರತದಲ್ಲಿ ಹದಿನಾರು ಎಳೆ ಹಾಗೂ ಗ್ರಂಥಿ(ಗಂಟು)ಗಳಿಂದ ಕೂಡಿದ ದಾರವನ್ನು ಸ್ತ್ರೀಯರು ಧರಿಸುವ ರೂಢಿ ಇದೆ.
ಇದಕ್ಕೆ ಕಾರಣವೇನು? ಏನು ಈ ಹದಿನಾರು ಸಂಖ್ಯೆಯ ವಿಶೇಷ?

ಸಮಾಧಾನ:-

ಇಡೀ ಸೃಷ್ಟಿಯು ಪುರುಷ ಹಾಗೂ ಪ್ರಕೃತಿ ಸ್ವರೂಪವಾದುದು.

ಶ್ರೀಸ್ವರ್ಣಗೌರೀಯು ಪ್ರಕೃತಿ ಮಾತೆ. ಇವಳ ಅನುಗ್ರಹದಿಂದಲೇ ಸಮಸ್ತ ಸೃಷ್ಟಿಯೂ ವಿಸ್ತಾರವಾಗಿ ಬೆಳೆಯುವುದು.

ಹೀಗೆ ಸೃಷ್ಟಿ ವಿಸ್ತಾರವಾಗುವ ಕೊನೆ ಕೊನೆಯ ಹಂತಗಳಾದ ಸೂಕ್ಷ್ಮರೂಪವಾದ ಪಂಚತನ್ಮಾತ್ರೆಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧ) ಇವುಗಳು ವ್ಯಕ್ತವಾಗುವ ಪೃಥ್ವಿ, ಅಪ್ಪು(ನೀರು), ತೇಜಸ್ಸು(ಅಗ್ನಿ), ವಾಯು, ಆಕಾಶಗಳೆಂಬ ಪಂಚಭೂತಗಳು ಹಾಗೂ ಪಂಚಕರ್ಮೇಂದ್ರಿಯಗಳು ಇವಿಷ್ಟೂ ಸೇರಿ 15 ತತ್ತ್ವಗಳು ಹಾಗೂ ಮನಸ್ಸು ಸೇರಿ 16 ತತ್ತ್ವಗಳಿಗೂ ಶ್ರೀದೇವೀಯೇ ಅಧಿಷ್ಟಾತ್ರಿ.

ದಾರದಲ್ಲಿರುವ 16 ಎಳೆಗಳು ನಮ್ಮನ್ನು ಪರಮಾತ್ಮ ತತ್ತ್ವದತ್ತ ಕರೆದೊಯ್ಯುವ ನಾಡೀಮಾರ್ಗಗಳ ಪ್ರತೀಕ. ಗ್ರಂಥಿ(ಗಂಟು)ಗಳು ಮೇಲೆ ಹೇಳಿರುವ ತತ್ತ್ವಗಳ ಪ್ರತೀಕವಾದುವು.

ಪ್ರಕೃತಿ ಮಾತೆಯಾದ ಸ್ವರ್ಣಗೌರೀಯು ಮೂಲದಲ್ಲಿ ಸ್ವರ್ಣ(ಬಂಗಾರ)ವರ್ಣದಲ್ಲಿ ಬೆಳಗುವವಳಾದ್ದರಿಂದ ಅವಳ ಅನುಗ್ರಹವನ್ನು ಬಯಸಿ ಧರಿಸುವ 16 ಎಳೆಗಳುಳ್ಳ ದಾರಕ್ಕೆ ಅರಿಷಿಣವನ್ನು ಹಚ್ಚಿ ಧರಿಸುವ ರೂಢಿಯಿದೆ.
****

ರ್ಣಗೌರಿ ವ್ರತ ಆಚರಣೆ - ಕೆಲವು ಮಾಹಿತಿಗಳು

ಶ್ರೀಮದಾಚಾರ್ಯರು ಅನುವ್ಯಾಖ್ಯಾನ ಗ್ರಂಥದಲ್ಲಿ ಪಾರ್ವತಿ ಪರಮೇಶ್ವರರ ಚಿಂತನ ಕ್ರಮ :
ಉಮಾ ವೈ ವಾಕ್ ಸಮುದ್ದಿಷ್ಟಾ ಮನೋ ರುದ್ರ ಉದಾಹೃತ: |
ತದೇತನ್ಮಿಥುನಂ ಜ್ಞಾತ್ವಾ ನ ದಾಂಪತ್ಯಾದ್ ವಿಹೀಯತೇ ||
ವಾಕ್ ಎಂಬ ಉಮೆ ಮತ್ತು ಮನಸ್ ಎಂಬ ರುದ್ರ ಇವರೀರ್ವರ ಜೊತೆಯಾಗಿರುವುದನ್ನು ಚಿಂತನೆ ಮಾಡುವುದರಿಂದ ದಾಂಪತ್ಯದಿಂದ ಎಂದೂ ವಿಯೋಗವಾಗುವುದಿಲ್ಲ
 
* ೧.ಸ್ವರ್ಣ ಗೌರಿ ಯಾರು* ?
ಉತ್ತರ : ಪಾರ್ವತಿ ದೇವಿ.
ಸ್ವರ್ಣಗೌರಿ ವ್ರತವನ್ನು ಎಂದು ಆಚರಿಸಬೇಕು ?
ಉತ್ತರ : ಭಾದ್ರಪದ ಶುಕ್ಲ ತೃತೀಯ

೨. ಭಾದ್ರಪದ ಶುಕ್ಲ ತೃತೀಯ ಗೌರಿಯ ಜನ್ಮದಿನವಾ ಅಥವಾ ಏನು ವಿಶೇಷ ?
ಉತ್ತರ: ಘೋರ ತಪವಾಚರಿಸಿ ಶಿವನ ವರಿಸಿ ಕೈಲಾಸವಾಸಿಯಾದ ಪಾರ್ವತಿಗೆ ಒಮ್ಮೆ ತನ್ನ ತವರುಮನೆಗೆ ಬರುವ ಬಯಕೆಯಾಯಿತು. ಹಿಮವಂತನ ಮಗಳಾಗಿ ಜನಿಸಿ ಹಿಮಾಲಯವನ್ನೇ ತನ್ನ ತವರಾಗಿ ಪಡೆದಿದ್ದಳು. ರುದ್ರದೇವರ ಅನುಮತಿ ಪಡೆದು ಭೂಲೋಕಕ್ಕೆ ಬಂದ ದಿನವೇ ಭಾದ್ರಪದ ಶುಕ್ಲ ತೃತೀಯ
 
೩. ಹಿರಿಯರು ಏಕೆ ಸ್ವರ್ಣ ಗೌರಿ ಎಂದಿದ್ದಾರೆ ?                           ಉತ್ತರ: ಸ್ವರ್ಣಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಬಣ್ಣದಲ್ಲಿ ಹೊಳೆಯುವ ಗೌರಿಯ ಪೂಜಿಸುವುದು ಎಂದರ್ಥ.

೪. ಪಾರ್ವತಿಗೆ ಈ ಹೆಸರು ಬಂದಿದ್ದು ಹೇಗೆ ?                 
ಉತ್ತರ :  ಮತ್ಸ್ಯ ಪುರಾಣದಲ್ಲಿ ಪಾರ್ವತಿ ದೇವಿಗೆ ಗೌರಿ ಹೆಸರು ಬಂದ ಕಥೆಯಿದೆ. ಪಾರ್ವತಿ ಮೂಲತಃ ಕಪ್ಪು ಬಣ್ಣದವಳಾಗಿರುತ್ತಾಳೆ. ಒಮ್ಮೆ ರುದ್ರದೇವರು ಪಾರ್ವತಿಯನ್ನು “ಕಾಳಿ” ಎಂದು ಸಂಬೋಧಿಸುತ್ತಾರೆ. ಕಾಳಿ ಎಂಬ ಪದ ಕತ್ತಲು ಮತ್ತು ಕಪ್ಪು ಬಣ್ಣವನ್ನು ಹೇಳುತ್ತದೆ. ಪಾರ್ವತಿ ಕಾಳಿ ಎಂದು ಕರೆಯಲ್ಪಟ್ಪದ್ದನ್ನು ಅವಹೇಳನ ಎಂದು ಭಾವಿಸಿ ಬ್ರಹ್ಮನ ಕುರಿತು ತಪಸ್ಸು ಮಾಡಿ ತನ್ನ ಬಣ್ಣವನ್ನು ಬದಲಿಸುವಂತೆ ಕೋರಿದಳು. ಅವಳ ತಪಸ್ಸಿಗೆ ಮೆಚ್ಚಿದ ಚತುರ್ಮುಖನು ಹಾಗೆಯೇ ಅವಳ ವರ್ಣವನ್ನು ಬದಲಿಸಿದನು. ಹೀಗೆ ಬದಲಾದ ಬಣ್ಣದಿಂದ ಬಂದ ಹೆಸರು ಗೌರಿ ಅರ್ಥಾತ್ ಬಿಳಿ ಬಣ್ಣ ಅಥವಾ ಸುಂದರ.

೫. ಗೌರಿ ಪೂಜೆಗೆ ಕೇವಲ ಗೌರಿಯ ಮುಖವನ್ನೇ ಏಕೆ ರಚಿಸಿರುತ್ತಾರೆ ?
ಉತ್ತರ : ಶಿವನಿಗೆ ಲಿಂಗದಲ್ಲಿ ಮಾತ್ರ ಪೂಜಿಸುವಂತೆ ಗೌರಿಯನ್ನು ಮುಖದಲ್ಲಿ ಮಾತ್ರ ಪೂಜಿಸುವ ಸಂಪ್ರದಾಯವಿದೆ.
 
೬. ಈ ದಿನ ಮರದ ಬಾಗಿನ ಕೊಡುವ ಕಾರಣವೇನು ?
ಉತ್ತರ : ಗೌರಿ (ಪಾರ್ವತಿ) ಕೈಲಾಸವಾಸಿ. ಈ ದಿನ ಕೈಲಾಸದಿಂದ ತನ್ನ ತವರಾದ ಹಿಮಾಲಯಕ್ಕೆ ಬರುತ್ತಾಳೆ. ತನ್ನ ತವರಿಗೆ ಬಂದ ಗೌರಿ ಮುತ್ತೈದೆಯರ ರೂಪದಲ್ಲಿ ನಮ್ಮ ಮನೆಗೆ ಬಂದಿರುವಳು ಎಂದು ಭಾವಿಸಿ ಮರದ ಬಾಗಿನ ಕೊಡುವ ಸಂಪ್ರದಾಯವಿದೆ.

೭. *ಗೌರಿ ಪೂಜೆಗೆ ಮುನ್ನ ಅವಳ ಮಗ ಗಣೇಶನ ಪೂಜೆ ಕೂಡ ಮಾಡಬೇಕಾ ?
ಉತ್ತರ: ಖಂಡಿತ. ಯಾವುದೇ ಪೂಜೆಯ ವಿಘ್ನನಿವಾರಣೆಗಾಗಿ ಗಣೇಶನ ಪೂಜಿಸಬೇಕು.

೮. ಗೌರಿ ಪೂಜೆಗೆ ಮುನ್ನ ಅವಳ ಮಗ ಗಣೇಶನ ಪೂಜೆ ಕೂಡ ಮಾಡಬೇಕಾ ?
ಉತ್ತರ: ಖಂಡಿತ. ಯಾವುದೇ ಪೂಜೆಯ ವಿಘ್ನನಿವಾರಣೆಗಾಗಿ ಗಣೇಶನ ಪೂಜಿಸಬೇಕು.

೯. ಗೌರಿಯ ಕುರಿತಾದ ಇತರ ವ್ರತಗಳಾವುವು ?
ಸ್ವರ್ಣಗೌರಿ ವ್ರತ – ಭಾದ್ರಪದ ಶುಕ್ಲ ತೃತೀಯ ;                    ಮಂಗಳಗೌರಿ ವ್ರತ – ಶ್ರಾವಣ ಮಾಸದ ಪ್ರತಿ ಮಂಗಳವಾರ ;  ಉಮಾ ಮಹೇಶ್ವರ ವ್ರತ – ಭಾದ್ರಪದ ಶುದ್ಧ ಹುಣ್ಣಿಮೆ ರಾತ್ರಿ ಪೂಜಾ ;                                                  ಷೋಡಶಗೌರಿ ವ್ರತ – ಶ್ರಾವಣ ಶುಕ್ಲ ತೃತೀಯ ಮತ್ತು ಭಾದ್ರಪದ ಶುಕ್ಲ ತೃತೀಯ ;                                   ಗಜಗೌರಿ ವ್ರತ 

೧೦. ಪಾರ್ವತಿದೇವಿಯ ಕೆಲವು ಪ್ರಸಿದ್ಧ ನಾಮಗಳು :
ಅಂಬಿಕಾ ; ಭ್ರಮರಾಂಬಿಕಾ ; ಗೌರಿ ; ದುರ್ಗಾ ; ಶಂಕರೀ; ಭದ್ರಾ; ಮಂಗಳ; ದೇವಿ ; ವಿಶಾಲಾಕ್ಷಿ ; ಸತಿದೇವಿ ; ದಾಕ್ಷಾಯಣಿ; ಉಮಾ ; ಗಿರಿಜಾ ; ಹೈಮವತಿ ; ಮೇನಕಾತ್ಮಜ ; ಅರ್ಪಣಾ ; ಮಾಹೇಶ್ವರಿ; ಭವಾನಿ ; ಶಿವಾನಿ ; ರುದ್ರಾಣಿ ; ಮೃಡಾಣಿ; ಕಾತ್ಯಾಯಿನಿ ; ಅನ್ನಪೂರ್ಣ
೧೧. ಮರದ ಬಾಗಿನದಲ್ಲಿ ಹಾಕಬೇಕಾದ ಪದಾರ್ಥಗಳು :
ಉತ್ತರ: ಜೊತೆ ಮೊರ – ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಬೇಕು.
ಧಾನ್ಯಗಳು – ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ, ಬೆಲ್ಲದ ಅಚ್ಚು, ಉಪ್ಪು, ತೆಂಗಿನಕಾಯಿ, ಹಣ್ಣು, ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ
ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು – ಗೆಜ್ಜೆವಸ್ತ್ರ, ಶ್ರೀಗಂಧ,  ಇತ್ಯಾದಿ ಇಡುತ್ತಾರೆ.
ಮರದ ಬಾಗಿನದಲ್ಲಿ ಉಪಯೋಗಿಸುವ ಎಲ್ಲಾ ಪದಾರ್ಥಗಳಲ್ಲೂ ವಿಶೇಷ ದೇವತಾ ಸಾನ್ನಿಧ್ಯವಿರುತ್ತದೆ.

12. ಮರದ ಬಾಗಿನ ಪದಾರ್ಥದಲ್ಲಿ ಇರುವ ದೇವತಾ ಸಾನ್ನಿಧ್ಯ:
ಮರದ ಬಾಗಿನದ ೧೬ ಪದಾರ್ಥಗಳಲ್ಲಿ ಸನ್ನಿಹಿತವಿರುವ ರೂಪಗಳು ಇಂತಿವೆ.
ಅರಿಶಿನದಲ್ಲಿ ಗೌರಿ, ಕುಂಕುಮದಲ್ಲಿ ಪದ್ಮ, ಸಿಂಧೂರದಲ್ಲಿ ಶಚಿ, ಕನ್ನಡಿಯಲ್ಲಿ ಮೇಧಾ; ಬಾಚಣಿಗೆ -, ಸಾವಿತ್ರಿ, ಕಾಡಿಗೆಯಲ್ಲಿ – ವಿಜಯಾ, ಅಕ್ಕಿಯಲ್ಲಿ ಜಯಾ, ತೊಗರೀಬೇಳೆ – ದೇವಸೇನಾ, ಉದ್ದಿನಬೇಳೆ – ಸ್ವಾಹಾ, ತೆಂಗಿನಕಾಯಿ – ಸ್ವಧಾ ; ವಿಳ್ಳದೆಲೆ – ಲೋಕಮಾತಾ, ಅಡಿಕೆ – ಶಾಂತಿ; ಫಲ – ಫುಷ್ಠಿ, ಬೆಲ್ಲ – ಧೃತೀ, ವಸ್ತ್ರ -ತುಷ್ಟೀ, ಹೆಸರುಬೇಳೆ – ಪಾರ್ವತಿ.
 
13. ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹಿರಿಯರು ಹೇಳುತ್ತಾರೆ.
 
ಕೊಡುವವರು ಹೀಗೆ ಹೇಳಬೇಕು :
ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ‌
 
ತೆಗೆದುಕೊಳ್ಳುವವರು :
ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ಮಯಾ
ಅಂತ ಹೇಳಿ ತೆಗೆದುಕೊಳ್ಳಬೇಕು…
 
14. ಮರದ ಬಾಗಿನ ಕೊಡುವವರು ಯಾರಿಗೆ ಕೊಡಬೇಕು ?
ಉತ್ತರ: ಧರ್ಮನಿಷ್ಠೆಯಲ್ಲಿರುವ , ಏಕಾದಶಿ ಆಚರಣೆ ಮಾಡುವ, ಮುಟ್ಟು ಮೈಲಿಗೆ ಆಚರಿಸುವ,  ದೇವತಾ ಪೂಜೆ ಪುನಸ್ಕಾರ ಮಾಡುವವರಿಗೆ ಕೊಟ್ಟಾಗ ಅವರ ಆಶೀರ್ವಾದ ಫಲಕಾರಿಯಾಗುತ್ತದೆ.

|| nAham kartA hariH kartA ||
****

ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು.

Haldi Packet

Kumkum Packet
Gejje vastra
Hoovu Bathi
Adike – Betel Nuts
Jaggery
Sugar
Rice
All dals
Salt
Silk or any other texture Saree
Blouse Piece
Bangles
Small Mirror, Comb
Kobbari Battilu
Rava
Tamarind

೧. ಅರಿಸಿನ: ಗೌರಿದೇವೀ.
೨. ಕುಂಕುಮ:ಮಹಾಲಕ್ಷ್ಮೀ
೩. ಸಿಂಧೂರ: ಸರಸ್ವತೀ
೪. ಕನ್ನಡಿ: ರೂಪಲಕ್ಷ್ಮೀ.
೫. ಬಾಚಣಿಗೆ:ಶೃಂಗಾರಲಕ್ಷ್ಮೀ.
೬. ಕಾಡಿಗೆ:ಲಜ್ಜಾಲಕ್ಷ್ಮೀ.
೭. ಅಕ್ಕಿ:ಶ್ರೀ ಲಕ್ಷ್ಮೀ.
೮. ತೊಗರಿಬೇಳೆ :ವರಲಕ್ಷ್ಮೀ
೯. ಉದ್ದಿನಬೇಳೆ:ಸಿದ್ದಲಕ್ಷ್ಮೀ
೧೦ ತೆಂಗಿನಕಾಯಿ:ಸಂತಾನಲಕ್ಷ್ಮೀ
೧೧. ವೀಳ್ಯದ ಎಲೆ:ಧನಲಕ್ಷ್ಮೀ
೧೨. ಅಡಿಕೆ:ಇಷ್ಟಲಕ್ಷ್ಮೀ
೧೩. ಫಲ(ಹಣ್ಣು): ಜ್ಞಾನಲಕ್ಷ್ಮೀ
೧೪. ಬೆಲ್ಲ:ರಸಲಕ್ಷ್ಮೀ
೧೫. ವಸ್ತ್ರ:ವಸ್ತ್ರಲಕ್ಷ್ಮೀ
೧೬. ಹೆಸರುಬೇಳೆ: ವಿದ್ಯಾಲಕ್ಷ್ಮೀ
*******

ದಾನಗಳು ಮತ್ತು ಫಲಗಳು

೧. ಅರಿಸಿನ ದಾನ :
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ :
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ:
ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೪. ಕನ್ನಡೀ(ರೂಪಲಕ್ಷ್ಮೀ) :
ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

೫. ಬಾಚಣಿಗೆ :
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

೬. ಕಾಡಿಗೆ :
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

೭. ಅಕ್ಕಿ :
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

೮. ತೊಗರಿಬೇಳೆ :
ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

೯. ಉದ್ದಿನ ಬೇಳೆ :
ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

೧೦. ತೆಂಗಿನಕಾಯಿ :
ಇಷ್ಟಾರ್ಥಸಿದ್ಧಿಯಾಗುತ್ತದೆ.. ,
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

೧೧. ವೀಳ್ಯದೆಲೆ :
ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

೧೨. ಅಡಿಕೆ :
ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

೧೩. ಫಲದಾನ :
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

೧೪. ಬೆಲ್ಲ (ರಸಲಕ್ಷ್ಮೀ) :
ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..
ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

೧೫. "ವಸ್ತ್ರಲಕ್ಷ್ಮೀ" :
ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

೧೬. "ಹೆಸರುಬೇಳೆ" : ವಿದ್ಯಾಲಕ್ಷ್ಮೀ -
ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ.
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..

ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌
Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..
*********


" ಸ್ವರ್ಣಗೌರೀ ವ್ರತ ಕಥಾ "

" ಸೂತ ಉವಾಚ "


ಭಾದ್ರಪದ ಶುದ್ಧ ತೃತೀಯಾ ದಿನದಂದು ಹಸ್ತಾ ನಕ್ಷತ್ರವಿರುವ ದಿನದಂದು " ಸ್ವರ್ಣಗೌರೀ ವ್ರತ " ವನ್ನು ಆಚರಿಸಬೇಕು. ಹಸ್ತಾ ನಕ್ಷತ್ರ ಒಂದು ಮುಹೂರ್ತವಿದ್ದರೂ ಆ ದಿನವೇ ವ್ರತಾಚರಣೆಗೆ ಪ್ರಶಸ್ತ. ಹಸ್ತಾ ನಕ್ಷತ್ರವಿಲ್ಲದಿದ್ದರೂ ಪರವಾಗಿಲ್ಲ!

ಭಾದ್ರಶುಕ್ಲತೃತೀಯಾ೦ ಕುರ್ಯಾದ್ ಗೌರೀ ವ್ರತಂ ಮುನೇ ।
ಮೂಹೂರ್ತಮಾತ್ರಮಪಿ ಚೇದ್ ದಿನೇ ಗೌರೀ ವ್ರತೇ ಪರಾ ।।
ಭಾದ್ರಪದ ಶುಕ್ಲ ತೃತೀಯಾ ಚ ಹಸ್ತಾ ನಕ್ಷತ್ರ ಸಂಯುತಾ ।
ಹಸ್ತೇನ ರಹಿತಾ ಚಾsಪಿ ಸಾ ಶ್ರೇಷ್ಠಾ ವೃತಕಾರಿಣಾ ।।

ಪಾರ್ವತೀದೇವಿಯು ಶ್ರೀ ರುದ್ರದೇವರನ್ನೇ ವರಿಸಲೆಂದು ಈ ವ್ರತವನ್ನು ಮಾಡಿ ಶ್ರೀ ರುದ್ರದೇವರನ್ನು ರುದ್ರಾ೦ತರ್ಯಾಮಿಯಾದ ಶ್ರೀ ನೃಸಿಂಹದೇವರನ್ನು ಮೆಚ್ಚಿಸಿದ್ದರಿಂದ " ಗೌರೀ ವ್ರತ " ವೆಂದು ಹೆಸರಾಯಿತು.

ಶ್ರೀ ಶೌನಕ ಮಹರ್ಷಿಗಳು......

ವ್ರತವನ್ನು ಗೌರೀದೇವಿಯು ಯಾವ ಫಲಾಪೇಕ್ಷೆಯಿಂದ ಮಾಡಿದಳು?
ಈ ವ್ರತವನ್ನು ಯಾರ್ಯಾರು ಆಚರಿಸಿದರು?
ಈ ವ್ರತಕ್ಕೆ " ಸ್ವರ್ಣಗೌರೀ ವ್ರತ " ವೆಂದು ಹೆಸರು ಬರಲು ಕಾರಣವೇನು?

ಎಂದು ಪ್ರಶ್ನಿಸಿದರು.

ಆಗ ಶ್ರೀ ಸೂತ ಮಹರ್ಷಿಗಳು...

ಹಿಂದೆ ಶ್ರೀ ರುದ್ರದೇವರು, ದಕ್ಷ ಪ್ರಜಾಪತಿ ಹಾಗೂ ಪ್ರಸೂತೆಯಲ್ಲಿ ಜನಿಸಿದ 16 ಸ್ತ್ರೀ ಸಂತಾನದಲ್ಲಿ ಒಬ್ಬಳಾದ ಸತೀದೇವಿಯನ್ನು ವಿವಾಹವಾದರು.

ದಕ್ಷ ಪ್ರಜಾಪತಿಯಾದರೂ, ತಾರತಮ್ಯದಲ್ಲಿ ಜ್ಯೇಷ್ಠರಾದ ತನ್ನ ಅಳಿಯರಾದ ಶ್ರೀ ರುದ್ರದೇವರನ್ನೇ ಅವಮಾನ ಮಾಡಲು ಯಾಗವನ್ನು ಮಾಡಿದನು. ಆ ಯಾಗಕ್ಕೆ ಆಹ್ವಾನವಿರದಿದ್ದರೂ ತಂದೆಯ ಮನೆಗೆ ಸತೀದೇವಿಯು ಹೋಗಿ ತಂದೆಯಿಂದ ಅವಮಾನಿತಳಾದಳು.

ಶ್ರೀ ಮಹಾರುದ್ರದೇವರಿಗೆ ಯಜ್ಞದಲ್ಲಿ ಭಾಗವಿಲ್ಲದ್ದನು ಕಂಡು ತಂದೆಯನ್ನು ಪ್ರಶ್ನಿಸಿದಳು ಕಪಾಲಮಾಲಿ, ಸ್ಮಶಾನ ವಾಸಿಯಾದ ರುದ್ರನಿಗೆ ಮಂಗಳಕರವಾದ ಯಜ್ಞದಲ್ಲಿ ಭಾಗವಿಲ್ಲವೆಂದು ದಕ್ಷನು ನೀಡಿದ ಉತ್ತರದಿಂದ ನೊಂದು ಯೋಗಾಗ್ನಿಯಿಂದ ತನ್ನನ್ನೇ ದಹಿಸಿಕೊಂಡು ಮುಂದೆ ಪರ್ವತರಾಜನ ಮಗಳಾಗಿ " ಪಾರ್ವತೀ " ಹೆಸರಿನಿಂದ ಜನಿಸಿದಳು!!

" ಶ್ರೀಮದ್ಭಾಗವತದ ಹಿನ್ನೆಲೆಯಲ್ಲಿ ಶ್ರೀ ಪಾರ್ವತೀದೇವಿಯ ವೃತ್ತಾ೦ತ "


ಶ್ರೀ ಚತುರ್ಮುಖ ಬ್ರಹ್ಮದೇವರು ದಕ್ಷನನ್ನು ನವಪ್ರಜೇಶ್ವರಿಗಧ್ಯಕ್ಷ ಸ್ಥಾನದಲ್ಲಿ ಅಭಿಷಿಕ್ತರನ್ನಾಗಿಸಿದರು. ಆದರಿಂದ ದಕ್ಷನು ದುರಹಂಕಾರದಿಂದ ಪೂರಿತನಾದನು. ಪೂರ್ವ ವೈರವನ್ನು ಬಿಡಲಿಲ್ಲ. ಕರ್ಮರತನಾಗಿ " ವಾಜಪೇಯ " ಎಂಬ ಯಜ್ಞವನ್ನು ಮಾಡಿದನು ಮತ್ತೆ ಬೃಹಸ್ಪತೀ ಸವನವನ್ನು ಮಾಡಲೆಣಿಸಿ ಬ್ರಹರ್ಷಿ - ದೇವರ್ಷಿ ಗಣವನ್ನೂ; ಪಿತೃ ದೇವತೆಗಳನ್ನೂ ಕರೆಯಿಸಿದನು. ಸ್ವಸ್ತಿ ವಾಚನವನ್ನೋದಿ ಎಲ್ಲರೂ ಯಜ್ಞ ಪತ್ನಿಯರು ನೆರೆದಿದ್ದ ಕಾಲದಲ್ಲಿ ಯಜ್ಞಾಹುತಿಗಳನ್ನು ನೀಡುತ್ತಾ ದಕ್ಷನು ಕುಳಿತಿದ್ದನು.

ಆಕಾಶದಲ್ಲಿ ವಿಮಾನಗಳಲ್ಲಿ ಪೋಗುವ ದೇವ ಸುಂದರಿಯರು ತಮ್ಮ ಪತಿಗಳಿಂದಾಡುವ ವಚನಗಳನ್ನು ಕೇಳಿ ಪಟ್ಟು ಪೀತಾಂಬರವನ್ನುಟ್ಟು ಕಾಸಿನ ಸರವನ್ನಿಟ್ಟು ಲೋಲಲೋಚನೆಯರಾಗಿ ಮಣಿಕುಂಡಲಾಲಂಕೃತರಾದ ಅಮರಾಂಗನೆಯರ ಸಂಭ್ರವನ್ನು ನೋಡಿ ಉತ್ಸುಕದಿಂದ ಪತಿಯನ್ನು ಸೇರಿ ಸತೀದೇವಿಯು ಮಾತನಾಡಿದಳು...

ಪ್ರಜಾಪತೇ! ನಿಮ್ಮ ಮಾವನ ಮನೆಯಲ್ಲಿ ಮಖದ ಮಹೋತ್ಸವವು ನಡೆದಿದೆಯಂತೆ. ನಾವು ಪೋಗೋಣವೇ? ಅದಕ್ಕಾಗಿಯೇ ಆಹ್ವಾನಿತರಾಗಿ ಅಮರರು ಪೋಗುತ್ತಿರುವವರು ನೋಡು. ಬಂಧು ದರ್ಶನವಾಗಲೆಂದು ನನ್ನ ಭಗನಿಯರೂ; ಬಾವಂದಿರೂ ಯಜ್ಞಶಾಲೆಗೆ ಬರುವರು. ನಾನೂ ನಿಮ್ಮೊಡನೆ ಪೋಗಿ ಅವರಂತೆ ಉಡುಗೋರೆಯನ್ನು ತೆಗೆದುಕೊಳ್ಳಪೇಕ್ಷಿಸುವುದು ತಪ್ಪೇ?

ಬಾ! ಅಲ್ಲಿ ಅಕ್ಕತಂಗಿಯರು ಎಲ್ಲರಕ್ಕಿಂತಲೂ ನನ್ನ ತಾಯಿ ನನ್ನನ್ನು ಕಂಡೊಡನೆ ಅಂತಃಕರಣವು ಕರಗಲು ಕರೆದು ಬಿಗಿದಪ್ಪುವರು. ಎಷ್ಟು ದಿನವಾಯಿತವರನ್ನೂ; ತನ್ನವರನ್ನೂ ನೋಡಿ. ಧ್ವಜವು ಹಾರುತ್ತಿರಲು ಮಹಾ ಸಂಭ್ರಮದಿಂದ ಋಷಿಗಳು ಸೇರಿ ನಡೆಸುವ ಯಜ್ಞವನ್ನಾದರೂ ನೋಡಿ ಬರೋಣ! ಏನು ಮಾತಾಡದಿರುವಿ ಸುಂದರಾ? ಹರಿ ಇಚ್ಛೆಯಿಂದ ನಿರ್ಮಿತವಾದೀ ಗುಣತ್ರಯಾತ್ಮಕ ಜಗವನ್ನು ಶ್ರೀಶಾನುಗ್ರಹದಿಂದ ಚೆನ್ನಾಗಿ ತಿಳಿದಿರುವ ನಿನಗೆ ನೋಡಬೇಕೆಂಬುದಿಲ್ಲ?

ಆದರೆ ನಾನು ಸ್ತ್ರೀಯು. ತತ್ತ್ವಜ್ಞಾನವೆನಗಿಷ್ಟಿಲ್ಲ. ಪ್ರಾಣನಾಥ! ನನ್ನ ಜನ್ಮ ಭೂಮಿಯನ್ನು ನೋಡಬೇಕೆನಿಸಿದೆ. ದೀನಳಾಗಿ ಬೇಡುವ ನನ್ನ ಈ ಕೋರಿಕೆಯನ್ನೀಡೇರಿಸು. ನೋಡಿ ಸುರಾ ವನಿತೆಯರು ಅಲಂಕೃತರಾಗಿ ಪತಿ ಸಹಿತರಾಗಿ ಪೋಗುತ್ತಿರುವುದನ್ನು ನೋಡು!

ನೀಲಕಂಠ! ಹಂಸಪಾಂಡುರವಾದ ಅವರ ವಿಮಾನಾವಲಿಯಿಂದ ಆಕಾಶವೇ ನಿಬಿಡವಾಗಿದೆ. ನಾನು ಮಗಳಲ್ಲವೇ? ದಕ್ಷನೆನ್ನ ತಂದೆಯಲ್ಲವೇ? ಅವನ ಮನೆಯಲ್ಲಿ ಮಹೋತ್ಸವವಾಗುತ್ತಿರಲು ಮಗಳಾದ ನನ್ನ ದೇಹವಿಲ್ಲಿ ನಿಲ್ಲುವುದೇ? ಕರೆಯದಿದ್ದರೂ ಸೌಹಾರ್ದವನ್ನೆಣಿಸಿ ಗಂಡನ ಮನೆಗೆ ಹೆಣ್ಣೂ; ಗುರು ಮಂದಿರಕ್ಕೆ ಶಿಷ್ಯನೂ; ತಂದೆಯ ತೌರಿಗೆ ಮಕ್ಕಳೂ ಹೋಗಬೇಕೆಂದು ನೀತಿ ಕೋವಿದರು ಪೇಳುವರು. ಇಷ್ಟಾಗಿ ದೀನತೆಯಿಂದ ಕೇಳುವ ನನ್ನಲ್ಲಿ ಪ್ರಸನ್ನನಾಗು!

ಹೇ ದೇವಶ್ರೇಷ್ಠಾ! ಪೂಜ್ಯನಾದ ನೀನೆನ್ನ ವಾಂಛೆಯನ್ನು ಕೈಗೂಡಿಸು. ಧರ್ಮವನ್ನು ಚೆನ್ನಾಗಿ ತಿಳಿದ ಸರ್ವಜ್ಞನಿರುವೆ. ನಾ ಕೇಳಿದುದೇನಧರ್ಮವೇ? ಅನುಗ್ರಹಿಸು ಎಂದು ಪ್ರಿಯಳಾಡಿದ ಭಾಷಣವನ್ನು ಕೇಳಿ ನಸುನಕ್ಕು ಸುರಪ್ರಿಯನೂ! ವಿಶ್ವಸೃಡ್ಯಾಗದಲ್ಲಿ ದಕ್ಷನಾಡಿದ ವಾಗ್ಬಾಣಗಳ ಮಹಾಭೇದಿ ತೀಕ್ಷ್ಣತೆಯನ್ನು ನೆನೆದು ಮೆಲ್ಲನಿಂತು ನುಡಿದನು...

ಶೋಭನರಾತ್ರಿ! ದಕ್ಷಪುತ್ರೀ! ಕರೆಯದಿದ್ದರೂ ಬಂಧು ಜನರ ಮನೆಗೆ ಪೊಗಬೇಕೆಂದೇ ನಿಜವೇ ಅಹುದು. ಆದರೆ ಅವರೆಮ್ಮನ್ನು ದೋಷ ದೃಷ್ಟಿಯಿಂದ ನೋಡದಿರುವಾಗ ಆ ಮಾತು. ದುರಾಭಿಮಾನ ದೂಷಿತರಾಗಿ ಸಿಟ್ಟಿನಿಂದ ಕೂಡಿದವರಲ್ಲಿ ಹೋಗಬಾರದು. " ವಿದ್ಯಾ - ತಪಸ್ಸು - ಧನ - ಶರೀರ - ಸೌಂದರ್ಯ - ತಾರುಣ್ಯ - ಕುಲ " ಎಂಬ ಆರು ಸಜ್ಜನರಿಗೆ ಗುಣವೆನಿಸುವುವು. ದುಷ್ಟರಿಗವೇ ಮದ ಕಾರಣವಾಗುವುದು. ಮದವೇರಲು ಶಾಸ್ತ್ರ ಜನಿತ ಸ್ಮೃತಿಯು ನಾಶವಾಗುವುದು. ಅಭಿಮಾನದಿಂದ ಕಣ್ಣು ಕಾಣದಾಗಿ ಕುಮತಿಯು ಮಹಜ್ಜನರ ಪ್ರಭಾವವನ್ನೂ ನೋಡದೆ ಅವರನ್ನವಮಾನಿಸುವನು. ಇಂಥವರು ಸಜ್ಜನರಾದರೂ ಅವ್ಯವಸ್ಥಿತ ಚಿತ್ತರಾದ್ದರಿಂದ ಅವರ ಮನೆಗೆ ಹೋಗುವುದು ಉಚಿತವಲ್ಲ!

ಹುಬ್ಬನ್ನು ಮುಡಿದು ಕಣ್ಣನ್ನು ಕೆಂಪಾಗಿಸಿ ವಕ್ರಬುದ್ಧಿಯಿಂದ ಬಂದವರನ್ನು ನೋಡುವ ದುರಾತ್ಮರಲ್ಲಿ ನಮಗೇನು ಕೆಲಸ?

ನನ್ನವರೆನಿಸಿಕೊಂಡವರು ಕೊಂಕು ಬುದ್ಧಿಯಿಂದ ಕೆಟ್ಟ ಮಾತುಗಳನ್ನಾಡಿ ಮರ್ಮಭೇದನ ಮಾಡಿದ ವೇದನೆಯು ಯುದ್ಧರಂಗದಲ್ಲಿ ವಿಷದಿಗ್ಧ ಬಾಣಗಳಿಂದಾದ ವೇದನೆಗಿಂತಲೂ ಅಸಹ್ಯವಾದುದು. ನೀನೇನೋ ಸರ್ವಾಧಿಪತಿಯಾದ ದಕ್ಷನ ಪ್ರೀತಿಯ ಪುತ್ರಿಯೇ ಸರಿ! ಆದರೂ ನನ್ನಲ್ಲಿ ಅಕಾರಣ ದ್ವೇಷಿಯಾದ ದಕ್ಷನು ನನ್ನ ಪತ್ನಿಯಾಗಿರುವುದರಿಂದ ಸನ್ಮಾನಿಸುವುದಿಲ್ಲವೆಂದು ನಿನಗೂ ಗೊತ್ತಿದೆ.

ಅಸುರಾವೇಶದಿಂದ ನನ್ನ ಪುರುಷ ಬುದ್ಧೀ೦ದ್ರಿಯಾದಿ ಪ್ರೇರಕತ್ವ ರೂಪ ಮಹಾದೈಶ್ವರ್ಯವನ್ನು ಕಂಡು ಕುಡಿಯುತ್ತಿರುವನು. ಇಂಥಹಾ ಪದವಿಯು ತನಗಾಗಲಾರದೆಂದು ಅಸುರರು ಹರಿಯನ್ನಂತೆ ನಿಷ್ಕಾರಣವಾಗಿ ತನ್ನನ್ನು ದ್ವೇಷಿಸುತ್ತಿರುವ ದಕ್ಷನು ಹರಿಯ ದ್ವೇಷಿಯೇ ಸರಿ!

ಕೇಳಿಲ್ಲಿ! ಪ್ರತುದ್ಗಮನ; ವಿನಯ; ಅಭಿವಾದಗಳು ಉತ್ತಮರಿಗೆ. ಮಿತ್ರರಿಗೆ ಪ್ರತ್ಯುದ್ಗಮನವಷ್ಟೇ! ಅಧಮರಿಗಿವಾವೂ ಇಲ್ಲ. ಆದರೂ ಪ್ರಾಜ್ಞರು ಸ್ಟೋತ್ತಮರಲ್ಲಿರುವ ಶ್ರೀಶನಿಗೂ; ಸ್ವೋತ್ತಮರಿಗೂ ಶಿರಸಾ ನಮಿಸುವರು. ಸ್ವಾಧಮರಾದರೆ ಅಂತರ್ಯಾಮಿಗೆ ನಮಿಸಿ ಸುಮ್ಮನಿರುವುದು ಧರ್ಮ ಸೂಕ್ಷ್ಮವು. ದಕ್ಷನಿಗೀ ವಿವೇಕವಿಲ್ಲ!

ನನ್ನಿಂದ ಪ್ರತ್ಯುತ್ಥಾನದಿಗಳಿಂದ ಪೂಜಿಸಲರ್ಹನು ಶ್ರೀ ಚತುರ್ಮುಖ ಬ್ರಹ್ಮಾದಿ ಶರೀರ ಸ್ಥಿತನಾದ ಶ್ರೀ ಹರಿಯೇ! ಅವನು ಮಾಯಾವರಣಾದಿಗಳಿಂದ ರಹಿತನಾಗಿರುವನು. ಅಪ್ರಾಕೃತನಾಗಿರುವನು. ಅವನೇ ವ್ಯಾಪ್ತಿಯಿಂದ ಪೃಥುವ್ಯಾದಿಗಳಲ್ಲಿದ್ದು ಪ್ರಕಾಶಿತನಾದರೂ ಲೇಪ ರಹಿತನಾಗಿರುವನು. ಅಂಥಹಾ ಸರ್ವೇ೦ದ್ರಿಯ ಸ್ವಾಮಿಯಾದ ಶ್ರೀ ಬ್ರಹ್ಮ ಶರೀರಸ್ಥ ಶ್ರೀ ವಾಸುದೇವನನ್ನು ನಾನಾಗ ಚಿಂತಿಸುತ್ತಿದ್ದೆ. ದಕ್ಷಾ೦ತಃಸ್ಥತ ಶ್ರೀ ಹರಿಯೂ ಆದುದರಿಂದ ಸತ್ಕರಿಸಲ್ಪಟ್ಟಂತೆಯೇ ಆಯಿತು. ಹೀಗಿರುವಾಗ ದಕ್ಷನು ನನ್ನನ್ನು ದ್ವೇಷಿಸುವುದು ವಿನಾಕಾರಣವೇ ಸರಿ!

ರಜೋಗುಣ ಪ್ರಯುಕ್ತ ಮದ ದೂಷಿತನಾದ್ದರಿಂದಲೂ; ಶ್ರೀ ಹರಿ ಸನ್ನಿಧಾನ ವಿಶೇಷದಿಂದಲೂ; ಪ್ರತ್ಯುತ್ಥಾನದಿಗಗಳನ್ನು ಮಾವನಾದರೂ ಮಾಡದೆ ನಾನಿದ್ದುದೂ ಸರಿಯೇ! ನನ್ನ ದ್ವೇಷಿಯಾದ್ದರಿಂದ ನಿನ್ನ ತಂದೆಯಾದರೂ ದಕ್ಷನನ್ನು ನೋಡಲು ಹೋಗಬೇಡ. ಸತೀ! ಆ ವಿಶ್ವಸೃಡ್ಯಾಗದಲ್ಲಿ ದುರ್ವಚನಗಳನ್ನಾಡುವವನೂ, ನಿನ್ನನ್ನು ಸಂಭಾವಿಸನು. ನನ್ನ ಮಾತನ್ನು ಮನ್ನಿಸದೆ ಪೋದರೆ ಒಳ್ಳೆಯದಾಗದು. ಸಂಭಾವಿತರಿಗೆ ಸೃಜನಕೃತ ಪರಾಭವವು ದೇಹ ವಿಯೋಗಕ್ಕೆ ಮಿಗಿಲೆನಿಸುವುದು. ನೋಡಿನ್ನು ನಿನ್ನ ಮನ ಬಂದಂತೆ ಮಾಡು.

ಶ್ರೀಶೇಚ್ಛೆಯಂತಾಗಲಿ! ಇಷ್ಟು ಮಾತನ್ನು ನುಡಿದ ಶ್ರೀ ಶಂಕರನು ಮನಸಾ ಹೇಗಾದರೂ ಪತ್ನಿಯ ಅಂಗ ನಾಶವು ನಿಶ್ಚಿತವು. ಬೇಡವೆಂದರೆ ವಿಷಾಗ್ನಿ ಜಲಗಳಿಂದ; ಹೋಗೆಂದರೆ ಅಲ್ಲಿ ದಕ್ಷಾವಮಾನದಿಂದ ಸಾಯುವಳೆಂದು ತಿಳಿದು ನಿಟ್ಟುಸಿರು ಬಿಟ್ಟು ಸುಮ್ಮನಾದನು!

ಆದರೂ ಸತೀದೇವಿಯು ದಕ್ಷನ ಯಜ್ಞಕ್ಕೆ ಬಂದು ಅಲ್ಲಿ ಅವಮಾನಿತಳಾಗಿ ದೇಹ ತ್ಯಾಗ ಮಾಡಿದಳು. ದಕ್ಷನಾದರೂ ಮಗಳು ತನ್ನ ದೋಷ ನಿಮಿತ್ತದಿಂದ ಸತ್ತಿದ್ದನ್ನು ಕಂಡು ಹೋ! ಎಂದು ರೋಧಿಸಿ ಬಹು ಪಶ್ಚಾತ್ತಾಪ ತಪ್ತನಾದನು. ಅವನ ಅಸುರಾವೇಶ ಸರಿಯುತ್ತಾ ಬಂದಂತೆ ಜ್ಞಾನೋದಯವಾಯಿತು. ಇಂತೂ ದೇಹ ತ್ಯಾಗ ಮಾಡಿದ ಸತೀದೇವಿಯು ಹಿಮವದ್ರಾಜನ ಮಹಿಷಿಯಾದ ಮೇನಾದೇವಿಯಲ್ಲಿ ಪಾರ್ವತಿ ಎನಿಸಿ ಪುಟ್ಟಿ ಪುನಃ ಶಂಕರನ ಸತಿಯೇ ಆದಳು!

ಪರಮ ಪುರುಷನಾದ ಶ್ರೀ ಹರಿಯನ್ನು ಪೊಂದುವ ಲಕ್ಷ್ಮೀಯಂತೆ ಅನನ್ಯ ಭಾವನಳು. ಏಕ ಪತಿವ್ರತೆಯಾದ ಗಿರಿಜೆ ತಪವಂಗೈದು ಶಂಕರನರ್ಧಾ೦ಗಿಯಾದಳು. ದಕ್ಷಾಧ್ವರ ಧ್ವಂಸಿಯಾದ ಶಂಭುವಿನ ಪರಮ ಪವಿತ್ರ ಕಥೆಯನ್ನು ಮೈತ್ರೇಯರು ಉದ್ಧವನಿಂದ ಕೇಳಿ ತಿಳಿದದ್ದನ್ನು ವಿದುರನಿಗೆ ಹೇಳಿದರು.

ಆಯುರ್ವೃದ್ಧಿಕಾರಣವೂ; ಪಾಪ ನಿವಾರಕವೂ ಆ ಈ ಶಿವ ಲೀಲೆಯನ್ನು ನಿತ್ಯವೂ ಶ್ರದ್ಧೆಯಿಂದ ಕೇಳಲೂ - ಪೇಳಲೂ ಭಕ್ತಿ ಹೆಚ್ಚಿ ಅಹಂಕಾರ ಭಾವನೆಯು ನಶಿಸಿ; ಜ್ಞಾನೋದಯವಾಗುವುದು!!

ದಕ್ಷಸ್ಯ ದುಹಿತಾ ಪೂರ್ವಂ ಸತೀ ನಾಮೇತಿ ವಿಶ್ರುತಾ ।
ತೇನ ಮೇ ತ್ವಪಮಾನಶ್ಚ ಕೃತಂ ಲೋಕೇ ಚ ದೂಷಣಮ್ ।।
ತಸ್ಯ ಕೋಪೇನ ಮಹತಾ ತ್ವಯಾ ತ್ಯಕ್ತ೦ ಕಲೇವರಂ ।
ಹಿಮಾಚಲಸುತಾ ಜಾತಾ ಪಾರ್ವತೀತ್ಯೇವ ವಿಶ್ರುತಾ ।।

" ಸ್ವರ್ಣಗೌರೀ ವ್ರತ ಕಥಾ "

ಪಾರ್ವತಿಯು ಬಾಲ್ಯದಿಂದಲೂ ಶಿವನನ್ನೇ ಪತಿಯನ್ನಾಗಿ ಹೊಂದಲು ಶಿವಾಂತರ್ಯಾಮಿ ಮತ್ತು ಶಿವನ ಉಪಾಸ್ಯ ಮೂರ್ತಿ ಸೀತಾರಾಮನನ್ನು 12 ವರ್ಷಗಳ ಕಾಲ ಗಾಳಿಯನ್ನು ( ಹೊಗೆ ) ಸೇವಿಸಿ ತಪವನ್ನಾಚರಿಸಿದಳು. ಇದರಿಂದ ಸಂತುಷ್ಟನಾದ ಶಿವಾಂತರ್ಯಾಮಿಯು ಪಾರ್ವತಿಯನ್ನು ಅನುಗ್ರಹಿಸಿದನು.

ಈ ಮಧ್ಯದಲ್ಲಿ ಹಿಮಾಲಯನು ತನ್ನ ಮಗಳ ಪೂರ್ವೇತಿಹಾಸವನ್ನು ತಿಳಿಯದೇ ನಾರಾಯಣನಿಗೆ ಪಾರ್ವತಿಯನ್ನು ಕೊಡಲು ನಿಶ್ಚಯಿಸಿದನು. ಪಾರ್ವತಿಯಾದರೂ ಇದರಿಂದ ಖಿನ್ನಳಾಗಿ ಮನೆಯನ್ನು ತ್ಯಜಿಸಿ; ಕಾಡನ್ನು ಪ್ರವೇಶಿಸಿ; ಮರಳಿನಿಂದ ಲಿಂಗವನ್ನು ತಯಾರಿಸಿ ಭಕ್ತಿಯಿಂದ ಪೂಜಿಸಿದಳು. ಉಪವಾಸದಿಂದ ಇದ್ದು ರಾತ್ರಿ ಜಾಗರಣೆಯನ್ನು ಮಾಡಿ ಶಿವನನ್ನು ಮೆಚ್ಚಿಸಿದಳು. ಅಂದು ಭಾದ್ರಪದ ಶುಕ್ಲ ತೃತೀಯಾ ತಿಥಿಯಾಗಿತ್ತು.

ಭಾದ್ರಪದ ಶುಕ್ಲ ತೃತೀಯಾಯಾ೦ ಸಾ ಗತಾ ವನಮುತ್ತಮಂ ।
ಕೃತ್ವಾ ವಾಲುಕಲಿಂಗಂ ಚ ಪೂಜಯಾಮಾಸ ಪಾರ್ವತೀ ।।

ಹಿಮಾಲಯನಾದರೂ ಮಗಳನ್ನು ಸಂದರ್ಶಿಸಿ; ನಿನ್ನನ್ನು ಶಿವನಿಗೆ ಕೊಟ್ಟು ವಿವಾಹ ಮಾಡಿ ಕೊಡುವೆನು ಎಂದು ಸಂತೈಸಿ; ಶಿವನಿಗಾಗಿ ದೂತನನ್ನು ಕಳುಹಿಸಿ ಹಾಗೂ ಪಾರ್ವತಿಗೆ ಶಿವನೊಂದಿಗೆ ವಿವಾಹವನ್ನು ಮಾಡಿದನು. ಪಾರ್ವತಿಯು ಭಾದ್ರಪದ ಶುಕ್ಲ ತೃತೀಯಾದಂದು ಮಾಡಿದ ಶಿವನ ಕುರಿತ ತಪಸ್ಸಿನಿಂದ ಶಿವನ ಅರ್ಧಾ೦ಗಿಯಾದಳು. ಅಖಂಡ ಸೌಭಾಗ್ಯವನ್ನು ಪಡೆದಳು!

ಏತದ್ವ್ರತ ಪ್ರಭಾವೇನ ಮಾಮ ಚಾರ್ಧಾಸನಂ ಗತಾ ।
ಸೌಭಾಗ್ಯ೦ ಚ ತಯಾ ಪ್ರಾಪ್ತ೦ ವ್ರತರಾಜ ಪ್ರಭಾವಿತಃ ।।

ಅಂದಿನಿಂದ ಗೌರಿಯು ಮಾಡಿದ ವ್ರತವು ಲೋಕದಲ್ಲಿಯೂ ಪ್ರಚಾರವಾಗಿ ಅಖಂಡ ಸೌಭಾಗ್ಯಕ್ಕಾಗಿ ಉಮಾ ಮಹೇಶ್ವರರನ್ನು ಪೂಜಿಸುವುದು ರೂಢಿಯಲ್ಲಿದೆ.

ತದಾಪ್ರಭೃತಿ ಲೋಕೇಷು ವ್ರತಮೇತತ್ ಪ್ರಕಾಶಿತಮ್ ।
ಭಾದ್ರಪದ ಶುಕ್ಲ ತೃತೀಯಾಯಾ೦ ಕಾರ್ಯ೦ ಸೌಭಾಗ್ಯ ಪ್ರಾಪ್ತಯೇ ।।

ಅಂದು ಪೂಜೆಯ ಮೊದಲು ಏನನ್ನೂ ತಿನ್ನದೇ ಭಕ್ತಿಯಿಂದ ಪೂಜಿಸಿ 16 ಗ್ರಂಥಿಗಳುಳ್ಳ ದಾರದಲ್ಲಿ ಉಮಾಮಹೇಶ್ವರರ ಅಂತರ್ಯಾಮಿಯಾಗಿರುವ ಶ್ರೀ ಲಕ್ಷ್ಮೀ ನರಸಿಂಹದೇವರನ್ನು ಆವಾಹಿಸಿ; ಪೂಜಿಸಿ; ದಂಪತಿಗಳನ್ನು ವಸ್ತ್ರಾದಿಗಳಿಂದ ಪೂಜಿಸಿ; ಭೋಜನಾದಿಗಳಿಂದ ತೃಪ್ತಿ ಪಡಿಸಿ; ತಾನೂ ಭುಂಜಿಸಬೇಕು.

ಈ ವ್ರತವನ್ನು ಚಂದ್ರಪ್ರಭರಾಜನು ತನ್ನ ಪತ್ನಿಯರಿಂದ ಮಾಡಿಸಿ ಸಾಂಸಾರಿಕ ಸುಖವನ್ನು ಪಡೆದನು.

ಸರಸ್ವತೀ ನದಿಯ ಮೇಲಿರುವ " ಸುವಿಲಾ " ಎಂಬ ನಗರದ ರಾಜನಾದ ಚಂದ್ರಪ್ರಭನು ಮಹಾದೇವಿ - ವಿಶಾಲ ಎಂಬ ರಾಣಿಯರೊಂದಿಗೆ ಸುಖಿಯಾಗಿದ್ದನು. ಮಹಾದೇವಿಯು ರಾಜನಿಗೆ ಅತ್ಯಂತ ಪ್ರಿಯಳಾಗಿದ್ದಳು.

ಒಂದುದಿನ ರಾಜನು ಬೇಟೆಗಾಗಿ ಕಾಡಿಗೆ ಹೋಗಿದ್ದನು. ಕಾಡಿನಲ್ಲಿ ಅಪ್ಸರೆಯರು " ಸ್ವರ್ಣಗೌರೀ ವ್ರತ " ವನ್ನು ಆಚರಿಸುತ್ತಿದ್ದರು. ರಾಜನು ಅವರನ್ನು ಕುರಿತು..

ಇದು ಯಾವ ವ್ರತ?
ಈ ವ್ರತಾಚರಣೆಯಿಂದ ಯಾವ ಫಲ ಹೊಂದ ಬಹುದು?

ಎಂದು ಪ್ರಶ್ನಿಸಿದನು.

ವಿಧಾನಂ ಕೀದೃಶಂ ವೃತಂ ಕಿಂ ಫಲಂ ವಿಸ್ತರಾನ್ಮಮ ।।

ಅಪ್ಸರೆಯರು ಹೀಗೆಂದರು..

ರಾಜನೇ! ಇದು ಸಕಲ ಸಾಂಸಾರಿಕ ಸುಖಗಳನ್ನೂ ನೀಡುವ ಹಾಗೂ ಸರ್ವ ಸಂಪತ್ತುಗಳನ್ನೂ ನೀಡುವ ವೃತವಾಗಿದೆ.

ರಾಜನು ಆ ವ್ರತವನ್ನು ಮಾಡುವ ವಿಧಾನವನ್ನು ಕೇಳಿದನು.

ಅಪ್ಸರೆಯರು ಆ ವ್ರತದ ಕುರಿತು ಹೀಗೆ ತಿಳಿಸಿದರು...

ಭಾದ್ರಪದ ಶುದ್ಧ ತೃತೀಯಾದಂದು ಪಾರ್ವತಿ ಹಾಗೂ ಮಹೇಶ್ವರರನ್ನೂ ಮತ್ತು ಅವರಂತರ್ಯಾಮಿ ಶ್ರೀ ಲಕ್ಷ್ಮೀ ನರಸಿಂಹದೇವರನ್ನು ಆವಾಯಿಸಿ; ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ನಂತರ 16 ಗಂಟುಗಳುಳ್ಳ ದಾರವನ್ನು ಪೂಜಿಸಿ ಕೈಗೆ ಕಟ್ಟಿ ಕೊಳ್ಳಬೇಕು. ಸ್ತ್ರೀಯರಾದರೂ ಎಡಗೈಗೆ ಮುಟ್ಟಿಸಿ ಬಲಗೈಗೆ ಕಟ್ಟಿ ಕೊಳ್ಳಬೇಕು ಅಥವಾ ಕಂಠದಲ್ಲಿಯೂ ಧರಿಸಬಹುದು.

ದೇವದೇವ ಸಮಾಗಚ್ಛ ಪ್ರಾರ್ಥಯೇsಹಂ ಜಗತ್ಪತೇ ।
ಇಮಾಂ ಮಯಾ ಕೃತಂ ಪೂಜಾ ಗೃಹಾಣಾ ಸುರಸತ್ತಮ ।।

ಹೀಗೆ ಆವಾಯಿಸಿ ಪಾರ್ವತೀ ಪರಮೇಶ್ವರರನ್ನು ಪೂಜಿಸಬೇಕು.

ಪಾರ್ವತೀ ಶಂಕರೌ ಪೂಜ್ಯೋ ಭಕ್ತ್ಯಾ ಪರಮಯಾ ಮುದಾ ।
ದೋರಕಂ ಷೋಡಶ ಗುಣಂ ಬಧ್ನಿಯಾದ್ದಕ್ಷಿಣೇ ಕರೇ ।।
ನರೋ, ವಾಮೇ ತು ನಾರೀಣಾ೦ ಗಲೇ ಬಂಧನಂ ಮತಂ ।।

ರಾಜನು ಅಪ್ಸರೆಯರು ತಿಳಿಸಿದಂತೆ ದೇವಿಯನ್ನು ಭಕ್ತಿಯಿಂದ ಪೂಜಿಸಿ ದಾರವನ್ನು ಬಲಗೈಗೆ ಕಟ್ಟಿಕೊಂಡು ಅರಮನೆಗೆ ಬಂದನು.

ಏವಂ ದೇವ್ಯಾ ವ್ರತಂ ಕೃತ್ವಾ ಆಜಗಾಮ ನಿಜಂ ಗೃಹಮ್ ।।

ರಾಜನ ಕೈಯಲ್ಲಿರುವ 16 ಗ್ರಂಥಿಗಳುಳ್ಳ ದಾರವನ್ನು ನೋಡಿದ ಜ್ಯೇಷ್ಠ ಭಾರ್ಯೆಯಾದ ಮಹಾದೇವಿಯು ಕೋಪಿಷ್ಠಳಾಗಿ ಅದನ್ನು ಕಿತ್ತು ಬಿಸಾಡಿದಳು. ಆ ದಾರವು ಒಣಗಿದ ಗಿಡದ ಮೇಲೆ ಬಿದ್ದಾಗ ಒಣಗಿದ ಗಿಡವೂ ಚಿಗುರಿತು.

ತ್ರೋಟಯಿತ್ವಾ ಚ ಚಕ್ಷೇಪ ಬಾಹ್ಯೇ ಶುಷ್ಯತರೂಪರಿ ।
ತೇನ ಸಂಸ್ಪೃಷ್ಟ ಮಾತ್ರೇಣ ತರು: ಪಲ್ಲವಿತೋsಭವೇತ್ ।।

ಎರಡನೆಯ ಹೆಂಡತಿಯಾದ ವಿಶಾಲೆಯು ದಾರದ ಮಹಿಮೆಯನ್ನು ತಿಳಿದು ತಾನೇ ಧರಿಸಿದಳು. ಇದರಿಂದ ರಾಜನ ಪ್ರೀತಿಗೆ ಪಾತ್ರರಾದಳು. ಜ್ಯೇಷ್ಠಳಾದರೂ ಗೌರಿಗೆ ಅಪಚಾರ ಮಾಡಿದ್ದರಿಂದ ರಾಜನಿಂದ ತ್ಯಜಿಸಲ್ಪಟ್ಟು ದುಃಖಿತಳಾದಳು. ಪಶ್ಚಾತ್ತಾಪ ದಗ್ಧಳಾಗಿ ಗೌರಿಯನ್ನು ಭಕ್ತಿಯಿಂದ ಪ್ರಾರ್ಥಿಸಿದಾಗ ಗೌರಿಯು ಪ್ರತ್ಯಕ್ಷಳಾದಳು.

ಮಹಾದೇವಿ ಎಂಬ ಜ್ಯೇಷ್ಠ ಭಾರ್ಯೆಯು ಗೌರಿಯನ್ನು ಹೀಗೆ ಪ್ರಾರ್ಥಿಸಿದಳು...

ಜಯ ದೇವಿ ನಮಸ್ತುಭ್ಯ೦ ಜಯ ಭಕ್ತ ವರಪ್ರದೇ ।
ಜಯ ಶಂಕರ ವಾಮಾಂಗೇ ಜಯ ಮಂಗಲ ಮಂಗಲೇ ।।

ನಂತರ ಗೌರೀದೇವಿ ವ್ರತವನ್ನು ಆಚರಿಸಿ ದಾರವನ್ನು ಧರಿಸಿ ತನ್ನ ಗಂಡನಿಂದ ಪುರಸ್ಕೃತಳಾದಳು. ಈ ಇತಿಹಾಸದಿಂದ ಈ ವ್ರತಾಚರಣೆಯಿಂದ ಪತಿಯ ಪ್ರೇಮವನ್ನೂ ಪಡೆಯಬಹುದೆಂದು ತಿಳಿಯುತ್ತದೆ.

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ
**********

#ಗೌರಿಯನ್ನು #ಪೂಜೆಗೆ #ಕರೆಯುವ #ಹಾಡು.

ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ
ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ || ಪ||

ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ
ಚಂದದಿ ಸಮರ್ಪಿಸುವೆನು ಪುಷ್ಪಫಲಗಳ||1||

ಮಂಗಳೆಂದು ಪಾಡುತ ಬೆಳಗುವೆನು ಆರುತಿ
ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ||2||

ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ
ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ ||3||

ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ
ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ ||4||

ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ
ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ||5||

ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ
ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ ||6||

ಶರಣು ಜನರ ಪೊರೆವ ಕಾರ್ಪರ ನಾರಸಿಂಹನ
ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ||7||

********

*******
#ಮರದ_ಬಾಗಿಣ
ಮರದ ಬಾಗಿಣಕ್ಕೆ ಯಾಕಷ್ಟು ಮಹತ್ವ  ಹೇಳುವೆ ಕೇಳಿ...
ಗೌರಿ ಹಬ್ಬಕ್ಕೆ  ಹರಿಸಿ ಮರದ ಬಾಗಿನ ಕೊಡುವುದು ಅಂದರೆ ಸುಮ್ಮನೆ ಅಲ್ಲ, ಅಂದರೆ ಮಹತ್ವ ಬಹಳವಿದೆ. ಫಲ ಕೂಡ ಅನಂತ ಅಷ್ಟೇ ಅಲ್ಲ ನಾವು ಕೊಡುವ ಮರದ ಬಾಗಿನ‌ ಯೋಗ್ಯರಾದವರಿಗೆ ಕೊಟ್ಟರೆ ಮಾತ್ರ ಫಲವಿದೆ .
ಬಡ ಬ್ರಾಹ್ಮಣನ ಹೆಂಡತಿ , ನಿಷ್ಠೆ ಯಲ್ಲಿ ಇರುವವಳು , ಮುಟ್ಟು ಮೈಲಿಗೆ ಆಚರಿಸುವವರು  ದಾನಧರ್ಮ ದ ಮಹತ್ವವನ್ನು ಅರಿತಿರುವವರು , ದೇವತಾ ಪೂಜೆ ಪುನಸ್ಕಾರ ಮಾಡುವವರಿಗೆ  ಕೊಟ್ಟಾಗ ಅವರ ಮಾಡುವ ಆಶಿರ್ವಾದ ದಿಂದ  ನಿಮ್ಮೇಲ್ಲ ಕಷ್ಟ ಪರಿಹಾರವಾಗಿ ಮನೆ ಅಭಿವೃದ್ಧಿ ಆಗುತ್ತದೆ , ಯಾಕೆಂದರೆ
ಮೊರದಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರ ತರಹ ಜೊತೆಯಲ್ಲಿ, ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿನ ಕೊಡುತ್ತಾರೆ. ಇನ್ನು ಕೆಲವು ಬಾಗಿಣವನ್ನು ಮನೆಯಲ್ಲಿ ಅತ್ತಿಗೆ , ನಾದಿನಿಯರಿಗೆ ಕೊಡುವುದು ಇರುತ್ತದೆ ಅದು ಅವರಿಗೆ ಕೊಡಬೇಕು ಕಾರಣ ಅವರು ಮನೆ ಮಗಳು ,ಅತ್ತಿಗೆ ತಾಯಿಗೆ ಸಮಾನ...

ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹೇಳಿಕೆಯಿದೆ. "

ಕೊಡುವವರು ಹೀಗೆ ಹೇಳಬೇಕು 

ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ‌

ತೆಗೆದು ಕೊಳ್ಳುವವರು 
 ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ಮಯಾ 
ಅಂತ ಹೇಳಿ ತೆಗೆದುಕೊಳ್ಳಬೇಕು...

#ಅರ್ಥ

ಬಾಗಿನ ಕೊಡುವರು ಸೀತಾದೇವಿ ಯಂತಿರುವ ನಿಮ್ಮಿಂದ ಈ ಭಾಗಿಣವು  ಸ್ವೀಕರಿಸಲ್ಪಟ್ಟಿತು ಎಂದು 
ಬಾಗಿನ ತೆಗೆದುಕೊಳ್ಳುವವರು ಸೀತಾದೇವಿ ಯಂತಿರುವ ತಮ್ಮಿಂದ ಮರದ  ಕೊಡಲ್ಪಟ್ಟಿತು ಎಂದು ಹೇಳಿ

#ದಾನಕೊಡುವಾಗಸರಿಯಾದದಿಕ್ಕಿನಲ್ಲಿಕೊಡಬೇಕು
ದಾನ ಕೊಡುವುದಕ್ಕೆ ಮತ್ತು ತೆಗೆದು ಕೊಳ್ಳುವುದಕ್ಕೆ ದಿಕ್ಕುಗಳ ಸೂಚನೆ.
ದಾನ ಕೊಡುವಾಗ ಮತ್ತು ತೆಗೆದುಕೊಳ್ಳುವಾಗ ಕೊಡುವವರು ಮತ್ತು ತೆಗೆದು
ಕೊಳ್ಳುವವರು ಯಾವ ದಿಕ್ಕಿನಲ್ಲಿ ಕುಳಿರುತ್ತಾರೆ ಎಂಬುದು ಮುಖ್ಯ.  ಅವರ
ಆಯುಷ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ.
ದಾನ ಕೊಡುವವರು ಪೂರ್ವಾಭಿಮುಖವಾಗಿಯೂ ತೆಗೆದು ಕೊಳ್ಳುವವರು
ಉತ್ತಾರಾಭಿಮುಖವಾಗಿರಬೇಕು.
ಇದರಿಂದ ಕೊಡುವವರಿಗೆ ದೀರ್ಘಾಯುಸ್ಸು ಮತ್ತು ತೆಗೆದುಕೊಳ್ಳುವವರಿಗೆ
ಪೂರ್ಣಾಯುಸ್ಸು ಲಬ್ಯವಾಗುತ್ತದೆ.
ಈ ಬಾಗಿಣ ಪದ್ಧತಿಗಳಲ್ಲಿ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿದೆ ಕೆಲವರು ತರಕಾರಿ ಕೊಡುತ್ತಾರೆ ಇನ್ನೂ ಕೆಲವು ಕಡೆ ಬರೀ ಧಾನ್ಯ ಮಾತ್ರ ಹಾಕುತ್ತಾರೆ ನಮ್ಮ ಉತ್ತರ ಕರ್ನಾಟಕದ ಕಡೆಗೆ ನಾವು ಎರಡು ತರಹದ ಬಾಗಿಣ ಕೊಡುತ್ತೇವೆ . 1 ಮಕರ ಸಂಕ್ರಾಂತಿ ಭೋಗಿ ಮತ್ತು ವ್ರತವನ್ನು ಪೂರ್ಣ ಮಾಡಿದಾಗ ಮರದ ಬಾಗಿಣ

ಸಂಕ್ರಾಂತಿ ಬೋಗಿಯಲ್ಲಿ ಎಲ್ಲ ತರದ  ತುಪ್ಪ  ಬೆಣ್ಣೆ ಅಕ್ಕಿ ಬೇಳೆ ಭೋಗದ ವಸ್ತುಗಳನ್ನು ಕೊಡುತ್ತೇವೆ  ಆದರೆ ವ್ರತದ ಸಂಕಲ್ಪದ ಮರದ ಬಾಗಿಣದಲ್ಲಿ ಬೆಳ್ಳಿ ಕಾಲುಂಗುರ  ಪಿಲ್ಲೆ , ಮಂಗಳಸೂತ್ರ ಅಂದರೆ ಕರಿಮಣಿ ಬಂಗಾರದ ತಾಳಿ ಕನ್ನಡಿ ಹಣಿಗೆ, ಕಾಡಿಗೆ ,ಬಳೆ ಕಾಯಿ ಸೀರೆ ಖಣ ಮತ್ತು ತೆಂಗಿನಕಾಯಿ ಅಕ್ಕಿ ತಾಂಬೂಲ ದಕ್ಷಿಣೆ ಇಷ್ಟು ಮಾತ್ರ ಹಾಕುತ್ತೇವೆ...ಗೌರಿ ಗಣೇಶನ ಹಬ್ಬದಲ್ಲಿ ಬಾಗಿಣ ಪದ್ಧತಿ ನಮ್ಮ ಉತ್ತರ ಕರ್ನಾಟಕದಲ್ಲಿ ಇಲ್ಲ ...ಅಲ್ಲದೆ  ನಾವು ಐದು, ಹನ್ನೊಂದು ದಿನ ಗಣಪತಿ ಇಟ್ಟು  ಪೂಜಿಸುತ್ತೇವೆ  ....ಆದರೆ ಮರದ ಬಾಗಿನಕ್ಕೆ ಬಹಳ ಮಹತ್ವವಿದೆ... ಒಂದು ಮರದ ಬಾಗಿನ ಬ್ರಹ್ಮಾಂಡ ದಾನ ಮಾಡಿದಷ್ಟು ಪುಣ್ಯವಿದೆ.
****

ಶ್ರೀಸ್ವರ್ಣಗೌರಿ ವ್ರತ

ಭಾದ್ರಪದ ಮಾಸದ ತದಿಗೆಯಂದು ಹಸ್ತಾ ನಕ್ಷತ್ರವಿರುವ ದಿನ, ಶ್ರೀಪಾರ್ವತಿದೇವಿಯನ್ನು ಸ್ವರ್ಣಗೌರಿ ಎಂದು ಪೂಜಿಸಲಾಗುತ್ತದೆ.
(ಆಗಸ್ಟ್ - 30- ಮಂಗಳವಾರ)

   ಗೌರಿ ಎಂದರೆ * ತಿಳಿಯಾದ ಬಿಳಿ ಬಣ್ಣ ಮಿಶ್ರಿತ ಸುವರ್ಣ (ಬಂಗಾರ) ವರ್ಣ ಎಂದರ್ಥ.*

 ಪಾರ್ವತಿ ದೇವಿ ಶಿವನನ್ನು ವರಿಸಲೆಂದು ಮಾಡಿದ ವ್ರತವಿದು. ಹಾಗಾಗಿ ಅತ್ಯಂತ ಫಲಪ್ರದವಾದ ವ್ರತವಾಗಿದೆ. ಈ ವ್ರತವನ್ನು ಕೇವಲ ಮಹಿಳೆಯರು ಮಾತ್ರ ಆಚರಿಸದೆ, ದಂಪತಿ ಒಟ್ಟಿಗೆ ಆಚರಣೆ ಮಾಡಿದರೆ ಫಲ ಹೆಚ್ಚು.

    ಹಿಂದೆ ಪರ್ವತರಾಜನು ತನ್ನ ಮಗಳನ್ನು ನಾರಾಯಣನಿಗೆ ಕೊಟ್ಟು ಮದುವೆ ಮಾಡಲು ಯೋಚಿಸಿದ.‌ಇದರಿಂದ ಮನನೊಂದ ಪಾರ್ವತಿ ಖಿನ್ನಳಾಗಿ ಮನೆ ಬಿಟ್ಟು ಕಾಡು ಸೇರಿದಳು. ಶಿವನನ್ನೇ ಪತಿಯನ್ನಾಗಿ ಪಡೆಯಬೇಕೆಂದು ಉದ್ದೇಶಿಸಿ ಮರಳಿನಿಂದ ಲಿಂಗವನ್ನು ತಯಾರಿಸಿ ಭಕ್ತಿಯಿಂದ ಪೂಜಿಸಿದಳು. ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಶಿವನನ್ನು ಮೆಚ್ಚಿಸಿದಳು. ಆ ದಿನವೇ ಭಾದ್ರಪದ ಶುಕ್ಲ ತೃತೀಯಾ ತಿಥಿ.

 ಈ ವ್ರತವನ್ನು ಮಾಡಿದ್ದರಿಂದ ಪಾರ್ವತಿ ದೇವಿ ಶಿವನನ್ನು ವರಿಸಿ ಅಖಂಡ ಸೌಭಾಗ್ಯ ವನ್ನು ಪಡೆದಳು. ಅಂದಿನಿಂದ ಸೌಭಾಗ್ಯಕ್ಕಾಗಿ ಈ ವ್ರತದ ಮೂಲಕ ಶ್ರೀಉಮಾ ಮಹೇಶ್ವರ ರನ್ನು ಪೂಜಿಸುವುದು ರೂಢಿಯಾಗಿದೆ.
 
ಗೌರಿ
 ಪರ್ವತ ರಾಜನ ಮಗಳಾದ ಪಾರ್ವತಿ ದೇವಿಯು ಸಹಜವಾಗಿ ಶ್ಯಾಮಲವರ್ಣದವಳು. ಈಕೆ ಶ್ರೀರುದ್ರದೇವರನ್ನು ಮದುವೆಯಾಗಬೇಕೆಂಬ ಬಯಕೆ ಹೊಂದಿರುತ್ತಾಳೆ. ಆದರೆ ಶಂಖ (ತಿಳಿ ಬಿಳಿ) ವರ್ಣದ ರುದ್ರದೇವರು ಕಪ್ಪು ವರ್ಣದ ಪಾರ್ವತಿಯನ್ನು ಮದುವೆಯಾಗಲು ಒಪ್ಪುವುದಿಲ್ಲ. ಆಗ ದೇವಿಯು ಬ್ರಹ್ಮನ ಕುರಿತು ತಪಸ್ಸು ಆಚರಿಸುತ್ತಾಳೆ. ಈಕೆಯ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವರು ಪಾರ್ವತಿದೇವಿಯನ್ನು ಅನುಗ್ರಹಿಸುತ್ತಾರೆ. ಆಗ ಆಕೆಯ ದೇಹದಲ್ಲಿದ್ದ ಕಪ್ಪುವರ್ಣ ಕಾಳಿ(ಕಪ್ಪು)ರೂಪವಾಗಿ, ದೇವಿ ತಿಳಿ ಬಂಗಾರದ ಬಣ್ಣ ಪಡೆದಳು. ಹಾಗಾಗಿ ಶ್ರೀ ಪಾರ್ವತಿ ದೇವಿಯನ್ನು ಸ್ವರ್ಣಗೌರಿ ಎನ್ನಲಾಗುತ್ತದೆ.

  ದೇವಿಯನ್ನು ಭಾದ್ರಪದ ಮಾಸ ತೃತೀಯ(ತದಿಗೆ)ದಂದು ಹಸ್ತಾ ನಕ್ಷತ್ರವಿರುವ ದಿನ ಶ್ರದ್ಧಾ, ಭಕ್ತಿಯಿಂದ ವಿಶೇಷವಾಗಿ ಪೂಜಿಸಬೇಕು.
 
 ಈ ದಿನ ಮುಂಜಾನೆ ಎದ್ದು ಶುಚಿರ್ಭೂತರಾಗಿ ಮನೆಯ ಮುಂಬಾಗಿಲು ಹಾಗೂ ದೇವರ ಮನೆಯ ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು. 
ದೇವರ ಮನೆಯಲ್ಲಾಗಲಿ, ಅಂಗಳದಲ್ಲಾಗಲಿ ಗೋಮಯ, ಗೋಮೂತ್ರದಿಂದ ಶುದ್ಧೀಕರಿಸಬೇಕು. ಆ ಜಾಗದಲ್ಲಿ ಮಂಟಪ ನಿರ್ಮಾಣ ಮಾಡಿ, ಅದರ ಮಧ್ಯೆ ಬಾಳೆ ಎಲೆ ಹರಡಿ  ಅದರ ಮೇಲೆ ಅಕ್ಕಿ ರಾಶಿ ಹಾಕಬೇಕು. ಎಂಟು ದಳದ ಪದ್ಮ ಬರೆದು ಮಧ್ಯದಲ್ಲಿ ಉಳ್ಳವರು ಬೆಳ್ಳಿ ಅಥವಾ ತಾಮ್ರ, ಹಿತ್ತಾಳೆ ತಂಬಿಗೆಯನ್ನು ಇಡಬೇಕು. ಮಂಗಳದ್ರವ್ಯದಿಂದ ಕೂಡಿದ ನೀರನ್ನು ತುಂಬಿ, ಮೇಲೆ ಮಾವಿನ ಎಲೆಗಳ ಗೊಂಚಲು ಹಾಗೂ ತೆಂಗಿನಕಾಯಿ ಇಡಬೇಕು. ತೆಂಗಿನಕಾಯಿಗೆ ಅರಿಸಿನ ಹಚ್ಚಿ ಅದರ ಮೇಲೆ ದೇವಿಯ ಮೊಗವನ್ನು  ಕುಂಕುಮದಿಂದ ಬರೆಯಬೇಕು.
 ಇದು ಸಾಧ್ಯವಾಗದಿದ್ದರೆ ಶುದ್ಧ ಮಣ್ಣು ಅಥವಾ ಅರಿಸಿನದಿಂದ ಮಾಡಿದ ಗೌರಿದೇವಿಯ ಮೂರ್ತಿಯನ್ನು ಇಟ್ಟು ಪೂಜಿಸಬಹುದು. 

  ದೇವಿಯನ್ನು ಷೋಡಶೋಪಚಾರದಿಂದ ಪೂಜಿಸಬೇಕು. ಮೊದಲಿಗೆ, ಅಕ್ಷಮಾಲಾಭಯಾಬ್ಜಾನಿ ಕರೈಃ ಶೂಲಂ ಚ ಬಿಭ್ರತೀಮ್| ಸ್ವರ್ಣರತ್ನಧರಾಂ ದೇವೀಂ ದಿವ್ಯಮೌಕ್ತಿಕಧಾರಿಣೀಮ್||

ಪೂರ್ಣೇಂದುವದನಾಂ ದೇವೀಂ ಕೋಟಿಸೂರ್ಯಸಮಪ್ರಭಾಮ್| ರತ್ನಸಂಯುಕ್ತಹಾರಾಂ ಚ ಬ್ರಹ್ಮಸೂತ್ರೇಣ ಶೋಭಿತಾಮ್||

ರುದ್ರಾಣೀಂ ರುದ್ರವಾಮಾಂಗೀಂ ಶಂಕರೀಂ ಲೋಕಶಂಕರೀಮ್| ಸಮಸ್ತಲೋಕಜನನೀಂ ಸ್ವರ್ಣಗೌರೀಂ ನಮಾಮ್ಯಹಮ್|| ಎಂದು ಧ್ಯಾನ ಮಾಡಬೇಕು.

 ಸಾಧ್ಯವಾಗದವರು 
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ|
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ|| ಎಂಬ ಮಂತ್ರದಿಂದ ದೇವಿಯನ್ನು ಭಕ್ತಿಯಿಂದ ಧ್ಯಾನಿಸಬೇಕು.

  ಧ್ಯಾನ, ಆವಾಹನ, ಆಸನ, ಅರ್ಘ್ಯ, ಪಾದ್ಯ, ಆಚಮನ,ಸ್ನಾನ, ಪಂಚಾಮೃತಾಭಿಷೇಕ ನಡೆಸಿ, ವಸ್ತ್ರ ಹಾಗೂ ಉಪವೀತ ಸಮರ್ಪಿಸಬೇಕು. ಗಂಧ, ಅರಿಶಿನ, ಕುಂಕುಮ ಅರ್ಪಿಸಿ, ಕಾಡಿಗೆ, ಕನ್ನಡಿ ಮತ್ತಿತರ ಅಲಂಕಾರಿಕ ಸಾಮಗ್ರಿಗಳು ಮತ್ತು ಮಂಗಳದ್ರವ್ಯಗಳನ್ನು ಇಟ್ಟು ಅರ್ಚಿಸಬೇಕು. ಹದಿನಾರು ಎಳೆಯ ದಾರ ಗಳನ್ನು ತೆಗೆದುಕೊಂಡು
ಹರಿನಾರು ಗ್ರಂಥಿ(ಗಂಟು) ಹಾಕಬೇಕು. ಈ ದಾರಗಳನ್ನು ದೇವಿಯ ಮುಂದಿಟ್ಟು ಪೂಜಿಸಬೇಕು.

   ನಾನಾ ವಿಧವಾದ ಭಕ್ಷ್ಯಗಳನ್ನು ದೇವಿಗೆ
ನೈವೇದ್ಯವಾಗಿ ಸಮರ್ಪಣೆ ಮಾಡಬೇಕು. ಚೆನ್ನಾಗಿ ಪಕ್ವವಾದ ಹಣ್ಣುಗಳನ್ನು ತಾಯಿಗರ್ಪಿಸಬೇಕು. ಮಹಾ ಮಂಗಳಾರತಿ ಮಾಡಿ ನಾನಾ ವಿಧವಾದ ಪತ್ರೆ, ಪುಷ್ಪಗಳನ್ನು ಸಮರ್ಪಿಸಿ, ನಮಿಸಿ ತಾಯಿಯನ್ನು ಬೇಡಬೇಕು. 
  
 ನಂತರ ದೇವದೇವ ಸಮಾಗಚ್ಛ ಪ್ರಾರ್ಥಯೇಅಹಂ ಜಗತ್ಪತೇ|
ಇಮಾಂ ಮಯಾ ಕೃತಾಂ ಪೂಜಾಂ ಗೃಹಾಣ ಸುರಸತ್ತಮ||
ಎಂದು ಪ್ರಾರ್ಥಿಸಬೇಕು.
 ಇದಾದ ಮೇಲೆ ದಾರವನ್ನು ತೆಗೆದುಕೊಂಡು ಪಾರ್ವತೀಶಂಕರೌ ಪೂಜ್ಯೌ ಭಕ್ತ್ಯಾ ಪರಮಯಾ ಮುದಾ|
ದೋರಕಂ ಷೋಡಶಗುಣಂ ಬಧ್ನೀಯಾದ್ ದಕ್ಷಿಣ ಕರೇ||
ಎಂದು ದಾರವನ್ನು ಕಟ್ಟಿಕೊಳ್ಳಬೇಕು.

 ನಂತರ ವಿಪ್ರರಿಗೆ ವಾಯನದಾನ ಹಾಗೂ ಸುಮಂಗಲಿಯರಿಗೆ ಬಾಗಿನ ನೀಡಿ, ಅವರ ಆಶೀರ್ವಾದ ಬೇಡಿ ಪಡೆಯಬೇಕು. 

  ಶ್ರೀಹರಿಯ ನುತಿಸುವುದಕೆ ಮತಿ ನೀಡೆಂದು,  ಮತಿ ಪ್ರೇರಕಳಾದ ಕರುಣಾಮಯಿ ಮಹಾತಾಯಿಯನ್ನು ಬೇಡೋಣ.

ಜಯ ದೇವೀ ನಮಸ್ತುಭ್ಯಂ ಜಯ ಭಕ್ತವರಪ್ರದೇ|
ಜಯ ಶಂಕರವಾಮಾಂಗೇ ಜಯ ಮಂಗಲಮಂಗಲೇ||

 ಸರ್ವರಿಗೂ ದೇವಿಯ ಅನುಗ್ರಹ ದೊರೆಯಲೆಂದು ಈ ಮೂಲಕ ಪ್ರಾರ್ಥಿಸುತ್ತೇನೆ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
****

No comments:

Post a Comment