SEARCH HERE

Friday 9 April 2021

ಅಗ್ನಿ agni fire god


read more at



ಅಗ್ನಿಯು ವಿರಾಟ್ ಪುರುಷನ ಮುಖದಿಂದ ಜನಿಸಿದವ. (ಭಾ. ಅಶ್ವ-111) ನೀರಿನಿಂದ ಜನಿಸಿದವ, ಚತುಮುಖನ ಕೋಪದಿಂದ ಜನಿಸಿದವ – ಹೀಗೆ ಅಗ್ನಿಯ ಜನನದ ಕುರಿತು ಹಲವಾರು ಐತಿಹ್ಯಗಳಿವೆ. ಋಗ್ವೇದದಲ್ಲಿನ ಮೊದಲ ದೇವತೆಯಾದ ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತೆ. ದಕ್ಷಬ್ರಹ್ಮನ ಕುವರಿಯಾದ ‘ಸ್ವಾಹಾ’ಳನ್ನು ಮದುವೆಯಾದವನು.

ವೇದವು, ‘ಅವನು ಬ್ರಹ್ಮಾಂಡರೂಪಿ ಯಜ್ಞದ ಪ್ರಕಾಶಕ, ಪ್ರವರ್ತಕ, ಸಮಯಾನುಸಾರ ಎಲ್ಲವನ್ನೂ ಪ್ರಾಪ್ತಗೊಳಿಸುವವನು’ ಎಂದು ಅಗ್ನಿಯ ಮಹತ್ವವನ್ನು ಬಣ್ಣಿಸುವುದು. ಅಗ್ನಿತತ್ತ್ವವು ಸೃಷ್ಟಿಕಾರಕ, ಸ್ಥಿತಿಕಾರಕ ಮತ್ತು ಲಯಕಾರಕ ಗುಣಗಳನ್ನು ಹೊಂದಿದೆ. ಸೂರ್ಯ ಜ್ಯೋತಿರ್ಯುಕ್ತನಾಗಿದ್ದಾನೆ. ಆದರೆ ಜ್ಯೋತಿರ್ಮಯ ಪ್ರಭುವು ಸೂರ್ಯನಿಗೂ ಸೂರ್ಯನಾಗಿದ್ದಾನೆ. ಜ್ಯೋತಿ ಅಥವಾ ಸೂರ್ಯಪ್ರಕಾಶವು ಅತ್ಯಂತ ಉಜ್ವಲವಾಗಿದ್ದು, ಪ್ರದೀಪ್ತತೆಯಿಂದ ಕೂಡಿದ್ದು, ಇದು ವಿಜ್ಞಾನಮಯ ಕೋಶದ ಆಧಾರವಾಗಿದೆ. ಅಗ್ನಿ ಅಥವಾ ತೇಜೋಮಯ ಪ್ರಕಾಶವು ಚಿತ್ಕೋಶದ ಆಧಾರತತ್ತ್ವವಾಗಿದೆ.

ಅಗ್ನಿಯು ಸರ್ವಶ್ರೇಷ್ಠನಾಗಿ ವಿಶ್ವದಲ್ಲಿ ನೆಲೆಸಿದ್ದಾನೆ. ಅಗ್ನಿಯು ವಿದ್ಯುತ್ ಗಿಂತಲೂ ಶ್ರೇಷ್ಠವಾಗಿದ್ದಾನೆ. ವಿದ್ಯುತ್ ಅಂಶದ ಪ್ರಧಾನ ದೇವತೆ ವಿಷ್ಣು. ಆನಂದಮಯಕೋಶದ ಒಡೆಯನೂ ವಿಷ್ಣುವೇ! ಆದರೆ ಅಗ್ನಿಯೇ ಪ್ರಮುಖ ಸ್ಥಾನದಲ್ಲಿದ್ದಾನೆ. ಉಪನಿಷತ್ತಿನಲ್ಲಿ ನಿರೂಪಿತವಾಗಿರುವ ‘ವಿದ್ಯುತ್ತೋ ಮಾನವಃ’ದಲ್ಲಿ (ವಿದ್ಯುನ್ಮಾನವ) ಇದು ಸ್ಪಷ್ಟವಾಗಿ ನಿರೂಪಿತವಾಗಿದೆ. ವಿಜ್ಞಾನದ ವಿಷಯದಲ್ಲಿ ಸೂರ್ಯ ಮತ್ತು ವಿಷ್ಣುವಿಗಿಂತಲೂ ಅಗ್ನಿಯೇ ಮೇಲು ಎನ್ನುವದು ವಿಶ್ವಸತ್ಯ. ವೇದತತ್ತ್ವ ಪ್ರಕಾಶವು ಸತ್ ಕೋಶದ ಆಧಾರವಾಗಿದೆ. ಯೋಗಶಾಸ್ತ್ರದಂತೆ ಹೆಬ್ಬೆರಳು ಅಗ್ನಿಯ ಪ್ರತೀಕ. ಅಂಗೈನಲ್ಲಿ ಎಲ್ಲ ತತ್ತ್ವಗಳೂ ಅಡಗಿವೆ. ತೋರುಬೆರಳು ವಾಯು, ಮಧ್ಯದ ಬೆರಳು ಆಕಾಶ, ಉಂಗುರಬೆರಳು ಭೂಮಿ, ಕಿರುಬೆರಳು ನೀರಿನ ಸಂಕೇತ. ಉಳಿದೆಲ್ಲ ಬೆರಳುಗಳಿಗಿಂತ ಹೆಬ್ಬೆರಳೇ ಶಕ್ತಿಶಾಲಿ.

ಅಗ್ನಿಯ ರಥವು ಘೃತಪೃಷ್ಠವುಳ್ಳವಾಗಿಯೂ, ವಾಯುಪ್ರೇರಿತವಾಗಿಯೂ, ಹೊಂಬಣ್ಣದಿಂದ ಕೂಡಿಯೂ, ಕ್ರಿಯಾಶಕ್ತಿಯುತವಾಗಿಯೂ ನಾನಾ ರೂಪವಾಗಿಯೂ ಸಂಕಲ್ಪಮಾತ್ರದಿಂದಲೇ ಯೋಜಿತವಾಗಿಯೂ ಇವೆ. ದ್ಯುಲೋಕದ ಶ್ಯೇನ (ಗಿಡುಗ) ಪಕ್ಷಿಯ ಸುವರ್ಣಮಯವಾದ ದಿವ್ಯರಥದಲ್ಲಿ ಕುಳಿತು ಅಗ್ನಿಯು ಯಜ್ಞಾರ್ಥವಾಗಿ ಇಳಿಯುತ್ತಾನೆ.

ದೇವ-ಮಾನವಾದಿಗಳೆಲ್ಲರ ವ್ಯವಹಾರಕ್ಕೂ ಮಾರ್ಗದರ್ಶಕನಾದ್ದರಿಂದ ಅಗ್ನಿ ಎಂಬ ಹೆಸರು ಅನ್ವರ್ಥವಾಗಿದೆ (ನಿರುಕ್ತ 7.14). ಅಂಗಾರದಿಂದ (ಕೆಂಡ) ಉತ್ಪನ್ನವಾಗುವುದರಿಂದ ‘ಅಂಗಿರಾ’ ಎನ್ನುವರು. ಅಗ್ನಿಗೆ ಹಲವಾರು ಹೆಸರುಗಳು! ಅಗ್ನಿದೇವನ ಸೂಕ್ತಗಳು, ಮಂತ್ರಗಳು, ಸಹಸ್ರನಾಮಗಳು ಇವೆ. ಅಗ್ನಿಯು ಹವ್ಯವಾಹನ, ಅನಲಸೇನ, ಸರ್ವಭಕ್ಷಕ ಎಂಬಿತ್ಯಾದಿ ಹೆಸರುಗಳಿಂದಲೂ ಪ್ರಸಿದ್ಧ. ಅಷ್ಟದಿಕ್ಪಾಲಕರಲ್ಲಿ ಅಗ್ನಿಯೂ ಒಬ್ಬ. ಪ್ರತಿ ಹೆಸರಿಗೂ ನಾನಾ ಅರ್ಥಗಳು ಇವೆ.

ಹದಿನೆಂಟು ಪುರಾಣಗಳಲ್ಲಿ ಅಗ್ನಿಪುರಾಣವೂ ಒಂದು. ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಈ ಪುರಾಣದಲ್ಲಿ ಕಾವ್ಯ-ನಾಟಕಗಳ ಲಕ್ಷಣಗಳು, ರಸವರ್ಣನೆಗಳು, ಮಂತ್ರ ಮತ್ತು ಮಂತ್ರವಿಧಾನಗಳು, ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ. ಅಗ್ನಿಯು ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನ. ಪೃಥಿವಿಗೆ ನಾಭಿರೂಪದ ಸಂರಕ್ಷಕ. ದ್ಯಾವಾಪೃಥಿವಿಗಳೆರಡಕ್ಕೂ ಅಧಿಪತಿ. ದಿವ್ಯಾಗ್ನಿಯು ರಾತ್ರಿಕಾಲದಲ್ಲಿ ಅಗ್ನಿರೂಪದಿಂದಲೂ ಪ್ರಾತಃಕಾಲ ಸೂರ್ಯರೂಪದಿಂದಲೂ ಪ್ರಕಾಶಿಸುತ್ತ ತನ್ನ ಲೋಕರಕ್ಷಣಾಕಾರ್ಯವನ್ನು ನಿರ್ವಹಿಸುತ್ತಾನೆ.

ಭೂಮಿಯು ಮೊದಲು ಅಗ್ನಿಗೋಲವಾಗಿತ್ತು. ತಣ್ಣಗಾಗುತ್ತ ಜೀವಿಯ ಸೃಷ್ಟಿಗೆ ಕಾರಣವಾಯಿತು. ಅಗ್ನಿಯು ನೀರಿನಿಂದ ಜನಿಸಿದ್ದರಿಂದ ಚಕ್ರದಂತೆಯೇ ತಿರುಗುವುದು. ಗುಡುಗು-ಸಿಡಿಲು ಬರದ ಹೊರತೂ ಮಳೆಯು ಬರದು. ಮಳೆ-ಅಗ್ನಿ ಪರಸ್ಪರ ಅವಲಂಬಿಗಳು!

ಶರೀರದಲ್ಲಿರುವುದು ಜಠರಾಗ್ನಿ. ನಾಲಗೆಯಲ್ಲಿ ಹರಿಯುವುದು ಲಾಲಾರಸ. ಇದು ಸರಿಯಾಗಿ ಕೆಲಸ ಮಾಡದಿದ್ದರೆ ಶರೀರವು ಆರೋಗ್ಯದಿಂದ ಇರಲಾರದು. ಭೂಮಿಯೊಳಗಿರುವ ಅಗ್ನಿಯು ಲಾವಾರಸ. ಪ್ರಕೃತಿಯಲ್ಲಿ ಏರುಪೇರಾದರೆ ಅಗ್ನಿಪರ್ವತವಾಗಿ ಸಿಡಿಯುವುದು. ಪ್ರಾಣಾಗ್ನಿಯು ಶರೀರವನ್ನು ಬಿಟ್ಟುಹೋದರೆ ಶರೀರವನ್ನೇ ಸುಡುವರು. ಅಗ್ನಿಪರ್ವತವೇ ಹೆಚ್ಚಾದರೆ ಭೂಮಿಯೇ ಲಯವಾಗಿ ಹೋಗುವುದು.

ನಾಗರಿಕತೆಯ ಮೂಲವೇ ಅಗ್ನಿಯ ಸಂಶೋಧನೆ. ಅಗ್ನಿಯನ್ನು ಕಂಡು ಮಾನವನು ಆಶ್ಚರ್ಯಪಟ್ಟ. ತನ್ನ ಬುದ್ಧಿಶಕ್ತಿಯಿಂದ ಅಗ್ನಿಯ ಪ್ರಯೋಜನವನ್ನು ವಿವಿಧ ಸ್ವರೂಪದಲ್ಲಿ ಪಡೆದ. ಮಾನವನು ಸೃಷ್ಟಿಸಿಕೊಂಡ ಎಲ್ಲ ಧರ್ಮಗಳಲ್ಲಿಯೂ ಅಗ್ನಿಯ ಮಹತ್ವವನ್ನು ಬಣ್ಣಿಸಲಾಗಿದೆ. ಭಾರತೀಯರಂತೆ ಜರತುಷ್ಟ್ರನ ಅನುಯಾಯಿಗಳು ಸೂರ್ಯನೊಂದಿಗೆ ಅಗ್ನಿಯನ್ನೂ ಪೂಜಿಸುತ್ತಾರೆ. ಗ್ರೀಕರು ಮೂಲನಗರದಿಂದ ತಮ್ಮ ವಸಾಹತುಗಳಿಗೆ ಬೆಂಕಿಯನ್ನೊಯ್ಯುತ್ತಿದ್ದರು. ರೋಮನ್ನರಲ್ಲಿ ಅಗ್ಗಷ್ಟಿಕೆಯ ದೇವತೆಯ ಪಂಥ ಪ್ರಬಲವಾಗಿದೆ. ಬೆಂಕಿ ತಂದ ದೇವನ ಕಥೆ ಗ್ರೀಕ್ ಪುರಾಣದಲ್ಲಿ ಬಹುಪ್ರಸಿದ್ಧವಾದದ್ದು. ಅಗ್ನಿ ನಾಲ್ಕು ಮೂಲವಸ್ತುಗಳಲ್ಲೊಂದೆಂದು ಗ್ರೀಕ್ ತತ್ತ್ವಜ್ಞಾನಿಗಳ ಅಭಿಮತ.

ಅಗ್ನಿಯ ಈ ವಿರಾಟ್ ಸ್ವರೂಪವನ್ನು ಕಂಡು ಹಿಂದುಗಳು ಕೃತಜ್ಞತೆಯಿಂದ ವೈಶ್ವದೇವವರ್ನ°ಸುವರು. ಇಂದಿಗೂ ಕೆಲವು ಸಮಾಜದವರು ನೀರನ್ನು ಭಕ್ತಿಯಿಂದ ಪೂಜಿಸುವರಲ್ಲದೆ ಮಿಂದು ಮಡಿಯುಟ್ಟು ಪಾಕಶಾಲೆಯಲ್ಲಿ ಅಗ್ನಿಯನ್ನು ಹೊತ್ತಿಸುವರು!

-By Anantha Vaidya, Yallapura

***
ಶ್ರೀ ಗುರುಭ್ಯೋ ನಮಃ    ‌       ‌       ‌                                           ‌       ‌                                                                                                     ತುಪ್ಪ ತಿಂದು ಅಜೀರ್ಣಕ್ಕೊಳಗಾದ ಅಗ್ನಿದೇವ ಖಾಂಡವವನ ದಹಿಸಿದ ಕಥೆ ಕೇಳಿದ್ದೀರಾ?

ಆಕಾಶ, ನೀರು, ಗಾಳಿ, ಭೂಮಿ ಸೇರಿದಂತೆ ಪಂಚಭೂತಗಳಲ್ಲಿ ಒಂದಾದ ಅಗ್ನಿಯನ್ನು ವಿವಾಹದಂತಹ ಧಾರ್ಮಿಕ ಕಾರ್ಯಗಳಲ್ಲಿ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಎಲ್ಲರಿಗೂ ಆರೋಗ್ಯ ಮತ್ತು ಐಶ್ವರ್ಯವನ್ನು ನೀಡುವ ಯಜ್ಞ ಅಗ್ನಿದೇವನ ಅನಾರೋಗ್ಯಕ್ಕೆ ಕಾರಣವಾದ ಕಥೆ ಇಲ್ಲಿದೆ.                     

ಸೃಷ್ಟಿಯ ಆರಂಭದಲ್ಲಿ ಮೊದಲು ಮಹಾವಿಷ್ಣುವಿನ ಹೊಕ್ಕಳಿನಿಂದ ಬ್ರಹ್ಮನ ಉದ್ಭವವಾಗುತ್ತದೆ. ಬ್ರಹ್ಮ ಸೃಷ್ಟಿಯ ವಿಸ್ತರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ. ನಂತರ ಬ್ರಹ್ಮನಿಗೆ ಅತ್ರಿ, ಆಂಗೀರಸ, ಪುಲಸ್ತ್ಯ, ಮಾರೀಚಿ , ಪುಲ್ಹ , ಕೃತು , ಭೃಗು, ವಸಿಷ್ಠ, ದಕ್ಷ ಮತ್ತು ನಾರದ ಎಂಬ ಹತ್ತು ಮಂದಿ ಮಕ್ಕಳು ಜನಿಸುತ್ತಾರೆ.
ಬ್ರಹ್ಮನ ಮನಸ್ಸಿನಿಂದ ಜನಿಸಿದ ಇವರನ್ನು ಬ್ರಹ್ಮ ಮಾನಸ ಪುತ್ರರೆನ್ನುತ್ತಾರೆ. ಇವರನ್ನು ಪ್ರಜಾಪತಿಗಳು ಎಂದು ಸಹ ಕರೆಯುತ್ತಾರೆ. ಮುಂದೆ ಇವರಲ್ಲಿ ಅಂಗೀರಸನ ಮಗ ಬೃಹಸ್ಪತಿ ಚಂದ್ರಮತಿಯನ್ನು ವರಿಸುತ್ತಾನೆ. ಇವರ ಮೊದಲ ಮಗ ಶನ್ಯು ಧರ್ಮ ಎಂಬುವನ ಮಗಳು ಸತ್ಯಾ ಎಂಬಾಕೆಯನ್ನು ಮದುವೆಯಾಗುತ್ತಾನೆ. ಶನ್ಯು ಮತ್ತು ಸತ್ಯಾರಿಗೆ ಜನಿಸಿದ ಮಗನೇ ಅಗ್ನಿ, ಅರ್ಥಾತ್ ಅಗ್ನಿದೇವ.
ನಾವೆಲ್ಲ ಈ ಅಗ್ನಿದೇವನ ಬಗ್ಗೆ ಹಲವು ಕುತೂಹಲಕಾರಿ ಕಥೆಗಳನ್ನು ಕೇಳಿರುತ್ತೇವೆ, ಆ ಅಗ್ನಿದೇವನ ಬಗ್ಗೆ ಪ್ರಮುಖ ವಿಷಯಗಳು ಇಲ್ಲಿವೆ. ಪಂಚಭೂತಗಳಲ್ಲಿ ಪ್ರಮುಖವಾಗಿ ಅಗ್ನಿ ಪುರಾಣಗಳ ಪ್ರಕಾರ ಎಂಟು ದಿಕ್ಕುಗಳಲ್ಲಿ ಒಂದೊಂದು ದಿಕ್ಕಿನ್ನು ಒಬ್ಬೊಬ್ಬ ದೇವತೆಗಳು ರಕ್ಷಿಸುತ್ತಾರೆ, ಆ ದೇವತೆಗಳನ್ನು ದಿಕ್ಪಾಲಕರು ಎನ್ನುತ್ತಾರೆ. ಅಂತೆಯೇ ಅಗ್ನಿದೇವ ಆಗ್ನೇಯ ದಿಕ್ಕಿನ್ನು ಆಳುತ್ತಾನೆ. ಆದ್ದರಿಂದಲೇ ಬಹುತೇಕ ಹಿಂದೂ ದೇವಾಲಯಗಳ ಆಗ್ನೇಯ ದಿಕ್ಕಿನಲ್ಲಿ ಅಗ್ನಿದೇವನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.

ಆಕಾಶ, ನೀರು, ಗಾಳಿ, ಭೂಮಿ ಸೇರಿದಂತೆ ಪಂಚಭೂತಗಳಲ್ಲಿ ಒಂದಾದ ಅಗ್ನಿಯನ್ನು ವಿವಾಹದಂತಹ ಧಾರ್ಮಿಕ ಕಾರ್ಯಗಳಲ್ಲಿ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ದೇವ ಪ್ರಮುಖ ಅಗ್ನಿದೇವ ದೇವತೆಗಳಲ್ಲಿ ಇಂದ್ರನ ನಂತರದ ಸ್ಥಾನ ಅಗ್ನಿಯದು. 1028 ಮಂತ್ರಗಳನ್ನು ಒಳಗೊಂಡ ಋಗ್ವೇದದಲ್ಲಿ 200 ಮಂತ್ರಗಳನ್ನು ಅಗ್ನಿದೇವನಿಗೆ ಸಮರ್ಪಿಸಲಾಗಿದೆ. ಅಲ್ಲದೇ ಉಪನಿಷತ್ತುಗಳು, ಪುರಾಣಗಳು ಸೇರಿದಂತೆ ಬಹುತೇಕ ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿಯೂ ಅಗ್ನಿದೇವನ ಬಗ್ಗೆ ವಿವರವಾದ ಉಲ್ಲೇಖಗಳಿವೆ.
ಅಗ್ನಿಯ ಜತ್ವೇದ ರೂಪವು ಹೋಮ ಹವನಗಳ ಹವಿಸ್ಸನ್ನು ದೇವತೆಗಳಿಗೆ ತಲುಪಿಸುತ್ತದೆ ಎಂಬ ನಂಬಿಕೆಯಿದೆ, ಆದ್ದರಿಂದ ಅಗ್ನಿಯನ್ನು ದೇವತೆಗಳು ಮತ್ತು ಮಾನವರ ನಡುವಿನ ಪ್ರಮುಖ ಕೊಂಡಿಯೆಂದು ನಂಬಲಾಗುತ್ತದೆ. ಮಾನವನ ಅಂತ್ಯಕ್ರಿಯೆಯಲ್ಲಿ ತನ್ನ ಜ್ವಾಲಾರೂಪದಿಂದ ದೇಹವನ್ನು ಸುಡುವ ಅಗ್ನಿಗೆ ದೇವತೆಗಳ ಸಾಲಿನಲ್ಲಿ ಮಹತ್ವದ ಸ್ಥಾನ ನೀಡಲಾಗುತ್ತದೆ.
ಅಗ್ನಿದೇವ ತುಪ್ಪ ತಿಂದ ಕಥೆ
ಎಲ್ಲರಿಗೂ ಆರೋಗ್ಯ ಮತ್ತು ಐಶ್ವರ್ಯವನ್ನು ನೀಡುವ ಯಜ್ಞ ಅಗ್ನಿದೇವನ ಅನಾರೋಗ್ಯಕ್ಕೆ ಕಾರಣವಾದ ಈ ಕಥೆ ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಾ. ಕೌರವರು ಮತ್ತು ಪಾಂಡವರ ನಡುವೆ ಸಾಮ್ರಾಜ್ಯ ಹಂಚಿಕೆಯಲ್ಲಿ ಸಾಕಷ್ಟು ಗೊಂದಲಗಳು ಇದ್ದ ದಿನಗಳವು. ಭವಿಷ್ಯದಲ್ಲಿ ಸಂಭವಿಸಬಹುದಾದ ಯುದ್ಧ ಹಾಗೂ ನಷ್ಟದ ಸಾಧ್ಯತೆಯ ದೃಷ್ಟಿಯಿಂದ ಹಸ್ತಿನಾವತಿಯನ್ನು ವಿಭಜಿಸಲಾಯಿತು, ಆದರೆ ಪಾಂಡವರಿಗೆ ಎಂದಿನಂತೆ ಮೋಸವಾಯಿತು. ಅದಾಗಲೇ ರಾಜಧಾನಿಯಾಗಿದ್ದ ಸಮೃದ್ಧ ಹಸ್ತಿನಾಪುರವನ್ನು ಕೌರವರಿಗೆ ಕೊಡಲಾಯಿತು.

ಅರಣ್ಯ ಪ್ರದೇಶವಾದ ಖಾಂಡವ ಪ್ರಸ್ಥವನ್ನು ಪಾಂಡವರಿಗೆ ಬಿಡಲಾಯಿತು. ಶ್ರಮಜೀವಿಗಳಾದ ಪಾಂಡವರು ಆ ಬಂಜರು ಭೂಮಿಯನ್ನೇ ಸಮೃದ್ಧ ಸಾಮ್ರಾಜ್ಯವನ್ನಾಗಿ ರೂಪಿಸಲು ತಯಾರಿ ನಡೆಸಿದ್ದರು. ಈ ಸಮಯದಲ್ಲಿ ಮೊದಲಿನಿಂದಲೂ ಪಾಂಡವರ ಪರ ಪ್ರೀತಿಯಿಂದಿದ್ದ ವಾಸುದೇವನು ಅವರಿಗೆ ಸಹಾಯಕ್ಕೆ ನಿಂತನು. ಈ ವಿಚಾರವಾಗಿ ಮಾತನಾಡುತ್ತ ಕೃಷ್ಣ ಮತ್ತು ಅರ್ಜುನ ಯಮುನಾ ನದಿ ತೀರದಲ್ಲಿ ವಿಹರಿಸುತ್ತಿದ್ದಾಗ, ಅಲ್ಲಿ ಒಬ್ಬ ಬಡ ಬ್ರಾಹ್ಮಣನನ್ನು ನೋಡುತ್ತಾರೆ. ಆ ಬ್ರಾಹ್ಮಣ ಅನಾರೋಗ್ಯದಿಂದ ಸಾಕಷ್ಟು ಬಳಲಿದ್ದ, ಅವನ ಮುಖ ಮಸುಕಾಗಿತ್ತು, ದೇಹ ಸೊರಗಿತ್ತು.
ಸೂಕ್ಷ್ಮವಾಗಿ ಗಮನಿಸಿದ ವಾಸುದೇವನಿಗೆ ಆ ಬ್ರಾಹ್ಮಣ ವೇಷ ಬದಲಿಸಿಕೊಂಡಿರುವುದು ಅಗ್ನಿದೇವನೆಂದು ಅರ್ಥವಾಗಿ ಹೋಯಿತು. ಅದನ್ನು ಅರ್ಜುನನಿಗೆ ಹೇಳಿದಾಗ ಅರ್ಜುನ ಭಕ್ತಿಯಿಂದ ಅಗ್ನಿದೇವನಿಗೆ ನಮಿಸಿ ಹೀಗೆ ವೇಷ ಬದಲಿಸಲು ಕಾರಣವೇನೆಂದು ಕೇಳುತ್ತಾನೆ. ಆಗ ಅಗ್ನಿದೇವ ದುಃಖ ತುಂಬಿದ ಧ್ವನಿಯಲ್ಲಿ ಎಲ್ಲರಿಗೂ ಸಮೃದ್ಧಿ ಮತ್ತು ಆರೋಗ್ಯವನ್ನು ನೀಡುವ ಯಜ್ಞದಿಂದಾಗಿ ತಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ. ಆದ್ದರಿಂದ ತನ್ನ ಬಳಲಿದ ರೂಪವನ್ನು ಮರೆಮಾಡಲು ವೇಷ ಬದಲಿಸಿದ್ದೇನೆ ಎಂದು ಹೇಳಿ ತನ್ನ ನಿಜ ರೂಪಕ್ಕೆ ಮರಳುತ್ತಾನೆ. ನಂತರ ಒಮ್ಮೆ ದೀರ್ಘವಾಗಿ ನಿಟ್ಟುಸಿರು ಬಿಟ್ಟು ತನ್ನ ಕಥೆಯನ್ನು ವಿವರವಾಗಿ ಹೇಳಲು ಪ್ರಾರಂಭಿಸಿದನು.
‌                                                                                                             ಬಹಳ ಹಿಂದೆ ಶ್ವೇತಕಿ ಎಂಬ ಅತ್ಯಂತ ಪ್ರಬಲ ರಾಜನಿದ್ದನು. ಅವನಿಗೆ ಯಜ್ಞಗಳನ್ನು ಮಾಡುವುದೇ ಒಂದು ಹುಚ್ಚಾಗಿತ್ತು. ಅವನು ನಿರಂತರವಾಗಿ ಯಜ್ಞವನ್ನು ಮಾಡುತ್ತಿದ್ದನು, ಇದರಿಂದಾಗಿ ಅವನ ಯಜ್ಞಗಳನ್ನು ಆಚರಣೆ ಮಾಡುತಿದ್ದ ಬ್ರಾಹ್ಮಣ ದಣಿದು ಹೋಗಿದ್ದನು. ಒಮ್ಮೆ ಶ್ವೇತಕಿ ನೂರು ವರ್ಷಗಳ ಕಾಲ ನಿರಂತರವಾದ ಮಹಾ ಯಜ್ಞವನ್ನು ಮಾಡಲು ನಿರ್ಧರಿಸಿದನು. ಇದರಿಂದ ಗಾಬರಿಗೊಂಡ ಆಸ್ಥಾನದ ಬ್ರಾಹ್ಮಣ ತನ್ನ ಆರೋಗ್ಯ ಸ್ಥಿತಿ ಸರಿ ಇಲ್ಲವೆಂದು ಇಷ್ಟು ದೀರ್ಘವಾದ ಯಜ್ಞದ ಆಚರಣೆ ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿಬಿಟ್ಟ. ಇದರಿಂದಾಗಿ ಶ್ವೇತಕಿ ತನ್ನ ಯಜ್ಞ ನೆರವೇರಿಸಿ ಕೊಡಲು ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸಿದನು. ಅವನ ತಪಸ್ಸಿನಿಂದ ಸಂತುಷ್ಟನಾದ ಪರಶಿವನು ಪ್ರತ್ಯಕ್ಷನಾಗಿ ಶ್ವೇತಕಿಯ ತಪಸ್ಸಿನ ಆಶಯ ಕೇಳಿದನು.

ಶ್ವೇತಕಿ ಶಿವನಿಗೆ ತನ್ನ ಮಹಾ ಯಾಗವನ್ನು ನಡಸಿಕೊಡಬೇಕೆಂದು ಹೇಳುತ್ತಾನೆ. ಇದರಿಂದ ಸ್ವಲ್ಪ ಗೊಂದಲಕ್ಕೊಳಗಾಗುವ ಶಿವನು ಸ್ವಲ್ಪ ಯೋಚಿಸಿ, ನಂತರ ಶ್ವೇತಕಿಯನ್ನು ಕುರಿತು 'ಯಜ್ಞದ ಆಚರಣೆ ನನ್ನ ಕೆಲಸವಲ್ಲ. ಆದರೆ ನೀನು ತುಂಬಾ ಕಷ್ಟಪಟ್ಟು ತಪಸ್ಸು ಮಾಡಿರುವೆ ಆದ್ದರಿಂದ ನಾನು ನಿನ್ನ ಯಜ್ಞವನ್ನು ನಡೆಸಿಕೊಡುತ್ತೇನೆ ಆದರೆ ಒಂದು ಷರತ್ತು, ನೀನು ಹನ್ನೆರಡು ವರ್ಷಗಳ ಕಾಲ ನಿಲ್ಲಿಸದೆ ನಿರಂತರವಾಗಿ ಅಗ್ನಿಗೆ ತುಪ್ಪವನ್ನು ನೈವೇದ್ಯವಾಗಿ ನೀಡಿದರೆ, ನಾನು ನಿನ್ನ ಯಜ್ಞಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ಹೊರಟು ಹೋಗುತ್ತಾನೆ.
ಶಿವನ ಷರತ್ತು ವಿಚಿತ್ರವಾಗಿದ್ದರೂ ಅದನ್ನು ಒಪ್ಪಿದ ಶ್ವೇತಕಿ, ಹಠಬಿಡದೆ ಸತತ ಹನ್ನೆರಡು ವರ್ಷಗಳ ಕಾಲ ಅಗ್ನಿದೇವನಿಗೆ ನಿರಂತರವಾಗಿ ತುಪ್ಪವನ್ನು ನೈವೇದ್ಯವಾಗಿ ನೀಡಿದನು. ಹನ್ನೆರಡನೇ ವರ್ಷದ ಕೊನೆಯಲ್ಲಿ, ಶಿವನು ಸಂತೋಷ ಪಟ್ಟು, ಮಹರ್ಷಿ ದುರ್ವಾಸನನ್ನು ಕರೆದು ಶ್ವೇತಕಿಯ ಯಜ್ಞವನ್ನು ಮಾಡಲು ಆದೇಶಿಸಿದರು. ದುರ್ವಾಸರಿಗೂ ಇದು ಕಷ್ಟದ ಕೆಲಸವಾಗಿತ್ತು, ಆದರೆ ಶಿವನ ಆಜ್ಞೆಯ ಮೇರೆಗೆ ಅವರು ಶ್ವೇತಕಿಯ ಯಜ್ಞವನ್ನು ಮಾಡಲೇಬೇಕಾಗಿತ್ತು. ಇದರಿಂದ ಶ್ವೇತಕಿಯ ಸಂಕಲ್ಪವೇನೋ ಈಡೇರಿತು, ಆದರೆ ಹನ್ನೆರಡು ವರ್ಷಗಳ ಕಾಲ ನಿರಂತರವಾಗಿ ಶ್ವೇತಕಿ ನೀಡಿದ ತುಪ್ಪ ಮತ್ತು ನೂರು ವರ್ಷಗಳು ದುರ್ವಾಸರು ನಡೆಸಿದ ಯಜ್ಞದ ತುಪ್ಪದಿಂದ ಅಗ್ನಿದೇವನ ಸ್ಥಿತಿ ಮಾತ್ರ ಗಂಭೀರವಾಯಿತು, ತಡೆಯಲಾಗದಷ್ಟು ಹೊಟ್ಟೆ ನೋವು ಆರಂಭವಾಯಿತು. ಈ ವಿಷಯವಾಗಿ ಅಗ್ನಿದೇವ ಬ್ರಹ್ಮನನ್ನು ಭೇಟಿಮಾಡಿ ತನ್ನ ನೋವನ್ನು ಹೇಳಿಕೊಂಡನು.

ಮಹಾವಿಷ್ಣುವಿನ ಅವತಾರವಾದ ವಾಸುದೇವನಿಂದ ನಿನ್ನ ನೋವಿಗೆ ಮುಕ್ತಿ ಸಿಗುವುದಾಗಿ ಬ್ರಹ್ಮದೇವ ಹೇಳಿದರು ಹಾಗಾಗಿ ನಿಮ್ಮನ್ನು ಅರಸಿ ಇಲ್ಲಿ ಬಂದಿದ್ದಾಗಿ ಕೃಷ್ಣ ಮತ್ತು ಅರ್ಜುನರಿಗೆ ಅಗ್ನಿದೇವ ಹೇಳುತ್ತಾನೆ. ಅವನ ಮಾತುಗಳನ್ನು ಕೇಳಿ ಮರುಗಿದ ವಾಸುದೇವ ಖಾಂಡವ ವನವನ್ನು ಕಡಿದು ತಮ್ಮ ಹೊಸ ರಾಜಧಾನಿಯನ್ನು ನಿರ್ಮಿಸುವ ಯೋಚನೆಯಲ್ಲಿದ್ದ ಅರ್ಜುನನಿಗೆ ಖಾಂಡವ ವನವನ್ನು ಅಗ್ನಿಗೆ ಆಹುತಿ ನೀಡಿ ಅವನ ಹೊಟ್ಟೆ ನೋವಿಗೆ ಮುಕ್ತಿ ನೀಡುವಂತೆ ಆಜ್ಞೆ ಮಾಡುತ್ತಾನೆ. ಕೃಷ್ಣನ ಮಾತಿನಂತೆ ಅರ್ಜುನ ಖಾಂಡವವನವನ್ನು ಆಹುತಿ ನೀಡುತ್ತಾನೆ. ಖಾಂಡವ ವನದ ಬೆಂಕಿಯಲ್ಲಿ ತಾನು ತಿಂದ ತುಪ್ಪವನ್ನೆಲ್ಲ ದಹಿಸುವ ಅಗ್ನಿದೇವ ಕೃಷ್ಣ ಮತ್ತು ಅರ್ಜುನರ ಸಹಾಯದಿಂದ ತನ್ನ ನೋವನ್ನು ನಿವಾರಿಸಿಕೊಳ್ಳುತ್ತಾನೆ.
***************




No comments:

Post a Comment