SEARCH HERE

Friday 1 February 2019

gopi chandana importance ಗೋಪೀಚಂದನದ ಮಹತ್ವ


The Gopichandana is closely interlinked with Krishna, Arjuna and his beloved Dwaraka. The Gopichandana was first found in a small pond which today is called Gopi Talab. This pond is 21 kms away from Dwaraka in Gujarat.

The Mahabharata war had just ended and the Pandavas had emerged victorious. Arjuna was puffed up with pride and thought he had a major role to play in the victory. Krishnarealised that he had to help Arjuna get rid of his “dhurankara”. He asked Arjuna to escort his queens to Bet Dwaraka. While on the way, Arjuna and the queens of Krishna were attacked by archers and warrior of the Kaba community. Though Arjuna put up a fierce fight, he was defeated. The queens, who were shocked at the turn of events, jumped into this pond and drowned. Since then, this pond is called Gopi Talab. The mud in and around the talab is called Gopichandana. It is due to this incident that the phrase “Kabe Arjuna luntiyo, wohi danush wohi ban” became famous. This chandana is believed to have miraculous and curative powers. Locals say it cures almost all types of skin diseases. Brahmins use the Gopichandana to adorn 12 parts of their body before commencing Sandhavandana.  When one applies gopichandana, it is believed to set into motion, the process of purifying a body. Once adorned, the gopichandana protects its wearer from all evil influences, mishaps and  diseases. It also soothes the body and mind.  The Garga Samhita, (Canto Six, Chapter 15) gives us a beautiful description of the gopichandana and its effects. It compares the adornment of Gopichandana, with bathing in the Ganga. The daily use of  Gopichandana is akin to bathing in all the sacred rivers and water tanks. This task is so sacred that it equals the performance of  a thousand Aswamedha Yajnas and a hundred Rajasuya Yajnas.

The Samhita says Gopichandana is twice as sacred as the mud of the Ganga and ten times more sacred than the dust of Panchavati-tirtha. It is equal to the dust of Vrindavana, the place of Krishna. It says if a person adorns himself with Gopichandana twice a day, he goes to Gokula, the abode of Lord Krishna. Even Yama, the God of Death cannot touch such a person. The Gopichandana is so powerful that it can wash away the sins of a person. The Samhita relates a story of a cruel king to illustrate this point. Even though the king committed many sins, it was washed away when his body came in contact with the Gopichandana from Dwaraka which had accidentally fallen on the place.

******

ಗೋಪೀಚಂದನದ ಮಹತ್ವ 

ಊರ್ಧ್ವಪುಂಡ್ರ

ಶ್ರೀ‍ಮಧ್ವಾಚಾರ್ಯರು ತಮ್ಮ “ ಕೃಷ್ಣಾಮೃತ ಮಹಾರ್ಣವ ” ಎಂಬ ಗ್ರಂಥದಲ್ಲಿ ಊರ್ಧ್ವಪುಂಡ್ರದ ಬಗೆಗೆ ವಿವರಣೆ ನೀಡಿದ್ದಾರೆ.

ಆಡುಭಾಷೆಯಲ್ಲಿ ಪುಂಡ್ರ ಎಂದರೆ ದೇಹದ ಮೇಲಿರುವ ಒಂದು ಚಿಹ್ನೆ. ಈ ಚಿಹ್ನೆಯು ಅದನ್ನು ಧರಿಸಿರುವವರ ಸಂಪ್ರದಾಯವನ್ನು ಸೂಚಿಸುತ್ತದೆ. ಈ ಚಿಹ್ನೆ ಅಥವಾ ಪುಂಡ್ರದ ಮತ್ತೊಂದು ಮೂಲ ಉದ್ದೇಶವೆಂದರೆ ಅನೀತಿ ಹಾಗೂ ಅಧಾರ್ಮಿಕತೆಯನ್ನು ತೊಡೆದು ಹಾಕುತ್ತದೆ. ಇಂದು ಊರ್ಧ್ವಪುಂಡ್ರ ಧಾರಣೆಯ ಅಂತರಾರ್ಥ. ಊರ್ಧ್ವಪುಂಡ್ರಧಾರಣೆಯಿಂದ “” ಆಂತರ್ಯ ಪುಂಡತನ ”” ತೊಲಗಿ ಗಾಂಭೀರ್ಯ, ಸದಾಚಾರ, ಸನ್ನಡತೆಗಳು ನೆಲೆಯೂರುತ್ತವೆ. “ಪುಂಡಂ ರಾಹಯತಿ ಇತಿ ಪುಂಡ್ರಂ ” ಎಂಬುದು ವಿಗ್ರಹವಾಕ್ಯ. ನೇರವಾಗಿ ಧರಿಸುವ ಪುಂಡ್ರವನ್ನು ಊರ್ಧ್ವಪುಂಡ್ರವೆಂದೂ, ಅಡ್ಡಲಾಗಿ ಧರಿಸುವುದನ್ನು ತಿರ್ಯಕ್‍ಪುಂಡ್ರವೆಂತಲೂ ಕರೆಯಲಾಗುತ್ತದೆ.

ಗೋಪೀಚಂದನ:

ಮಾಧ್ವ ಸಂಪ್ರದಾಯದಲ್ಲಿ ಊರ್ಧ್ವಪುಂಡ್ರವನ್ನು ಗೋಪೀಚಂದನದಲ್ಲಿ ದೇಹದ ಹನ್ನೆರಡು ಕಡೆಗಳಲ್ಲಿ ಧರಿಸಲಾಗುತ್ತದೆ.

ಅದರ ವಿವರಣೆ ಹೀಗಿದೆ:
1. ಹೊಟ್ಟೆಯ ಮೇಲೆ ಮೂರು ಪುಂಡ್ರಗಳನ್ನು ಧರಿಸುವುದರಿಂದ ತ್ರಿನಾಡಿಗಳಾದ ಇಡಾ, ಪಿಂಗಳಾ, ಸುಶುಮ್ನಾ ನಾಡಿಗಳ ಕುಂಡಲಿನೀ ಶಕ್ತಿಯು ವೃದ್ಧಿ ಹೊಂದುತ್ತದೆ. 
2. ಎದೆಯ ಮೇಲೆ ಎರಡು ಸ್ತನಗಳ ಮಧ್ಯದಲ್ಲಿ ಧರಿಸುವ ಕಮಲದಳದ ಆಕಾರದ ಪುಂಡ್ರವು ಹೃದಯಕಮಲವನ್ನು ಹಿಗ್ಗಿಸುತ್ತದೆ.
3. ಕತ್ತಿನ ಸುತ್ತಲೂ ನಾಲ್ಕು ಪುಂಡ್ರಗಳನ್ನು ಧರಿಸುವುದರಿಂದ ಅನಾಹತ ಮತ್ತು ವಿಶುದ್ಧಿ ಚಕ್ರಗಳ ಕುಂಡಲಿನೀ ಶಕ್ತಿಯು ಜಾಗೃತಗೊಂಡು ವಿಕಾಸಗೊಳ್ಳುತ್ತದೆ.
4. ಎರಡು ಭುಜಗಳ ಮೇಲೆ ಧರಿಸುವ ಪುಂಡ್ರದಿಂದ ಕೈಗಳ ಮೂಲಕ ಹರಿಯುವ ಪ್ರಾಣಶಕ್ತಿಯನ್ನು ಉದ್ದೀಪನಗೊಳಿಸಿ ಸಕ್ರಮಗೊಳಿಸುತ್ತದೆ.
5. ಹಣೆಯ ಮೇಲೆ ಧರಿಸುವ ಒಂದು ಪುಂಡ್ರವು ಆಜ್ಞಾಚಕ್ರದಿಂದ ಸಹಸ್ರಾರಚಕ್ರಕ್ಕೆ ಕುಂಡಲಿನೀಶಕ್ತಿಯ ಮೂಲಕ ಉದ್ದೀಪನಗೊಳಿಸುತ್ತದೆ.
6. ಬೆನ್ನಿನ ಕೆಳಭಾಗದಲ್ಲಿ ಧರಿಸುವ ಒಂದು ಪುಂಡ್ರದಿಂದ ಮೂಲಾಧಾರದಲ್ಲಿರುವ ಕುಂಡಲಿನೀಶಕ್ತಿಯನ್ನು ಜಾಗೃತಗೊಳಿಸುತ್ತದೆ.

ಗೋಪೀಚಂದನ ಲಿಪ್ತಾಂಗೋ ಯಂ ಯಂ ಪಶ್ಯತಿ ಚಕ್ಷುಶಾ |
ತಂ ತಂ ಶುದ್ಧಂ ವಿಜಾನೀಯತಿ ನಾತ್ರ ಕಾರ್ಯಾ ವಿಚಾರಣಾ || 221 || (ಕೃ.ಮ.)

ಗೋಪೀಚಂದನವನ್ನು ಧರಿಸಿರುವವನು ತನ್ನ ಕಣ್ಣುಗಳಿಂದ ಅವಲೋಕಿಸುವ ಸಮಸ್ತ ವಸ್ತುಗಳೂ ಶುದ್ಧಗೊಳ್ಳುತ್ತವೆ. ಆತನು ನೋಡಿದ ಕೂಡಲೇ ವಸ್ತುಗಳು ಶುದ್ಧಗೊಳ್ಳುತ್ತವೆಯೆಂಬುದಕ್ಕೆ ಯಾವುದೇ ಅನುಮಾನವು ಸಲ್ಲದು. ಹೀಗಿರುವ ಗೋಪೀಚಂದನವನ್ನು ಧರಿಸಿರುವ ವ್ಯಕ್ತಿಗೆ ಲಭಿಸುವ ಪುಣ್ಯದ ಬಗ್ಗೆ ಹೇಳಬೇಕಾದ್ದೇನಿದೆ?

ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ”ದಿಂದ ಆಯ್ದ ಕೆಲವು ಶ್ಲೋಕಗಳು ಇಂತಿವೆ:

ಅಶುಚಿರ್ಯಾ ಅಪಿ ಅನಾಚಾರೋ ಮನಸಾ ಪಾಪಂ ಆಚರೇತ್ |
ಶುಚಿರೇವ ಭವೇತ್ ನಿತ್ಯಂ ಊರ್ಧ್ವಪುಂಡ್ರಾಂಕಿತೋ ನರಃ ||217|| 

ಅಶುಚಿವಂತನಾದ, ಹೀನಕಾರ್ಯಗಳಲ್ಲಿ ಸದಾನಿರತನಾಗಿರುವ, ಕುತ್ಸಿತ ಮನಸ್ಸಿನವನಾಗಿದ್ದರೂ ಊರ್ಧ್ವಪುಂಡ್ರ ಧರಿಸಿದವನ ಎಲ್ಲ ಪಾಪಗಳೂ ನಿವಾರಣೆಗೊಂಡು ಆತನನ್ನು ಶುಚಿರ್ಭೂತನೆಂದು ಪರಿಗಣಿಸಬೇಕು.

ಊರ್ಧ್ವಪುಂಡ್ರ ವಿಹೀನಸ್ಯ ಸ್ಮಶಾನ ಸದೃಶಂ ಮುಖಂ |
ಅವಲೋಕ್ಯ ಮುಖಂ ತೇಷಾಂ ಆದಿತ್ಯಂ ಅವಲೋಕಯೇತ್ || 218 ||

ಊರ್ಧ್ವಪುಂಡ್ರವಿಲ್ಲದವನ ಮುಖವು ಸ್ಮಶಾನವಿದ್ದಂತೆ. ಅಂತಹವರ ಮುಖವನ್ನು ಅಕಸ್ಮಾತ್ ದರ್ಶಿಸಿದರೆ ಕೂಡಲೆ ಪ್ರಾಯಶ್ಚಿತ್ತಾರ್ಥದಲ್ಲಿ ಸೂರ್ಯನನ್ನು ಅವಲೋಕಿಸಬೇಕು.

ಯಜ್ಞೋ ದಾನಂ ತಪೋ ಹೋಮಃ ಸ್ವಾಧ್ಯಾಯಃ ಪಿತೃತರ್ಪಣಮ್ | 
ವ್ಯರ್ಥಮ್ ಭವತಿ ತತ್ಸರ್ವಂ ಊರ್ಧ್ವಪುಂಡ್ರಂ ವಿನಾ ಕೃತಮ್ || 219 ||     

ಯಜ್ಞ, ದಾನ, ತಪಸ್ಸು, ಹೋಮ, ಸ್ವಾಧ್ಯಾಯನ ಅಥವಾ ಪಿತೃತರ್ಪಣ ನೀಡುವ ಯಾವುದೇ ಧಾರ್ಮಿಕ ಕ್ರಿಯೆಗಳು ಊರ್ಧ್ವಪುಂಡ್ರವಿಲ್ಲದಿದ್ದರೆ ವ್ಯರ್ಥ ಅಥವಾ ಅರ್ಥಹೀನವಾಗುತ್ತವೆ. 

ಗೋಪೀಚಂದನವೆಂದರೇನು?

ಲಭ್ಯವಿರುವ ಮಾಹಿತಿಯಂತೆ ಇಂದಿನ ಗುಜರಾತ್ ರಾಜ್ಯದಲ್ಲಿರುವ ದ್ವಾರಕಾ ನಗರದಲ್ಲಿರುವ ಗೋಪಿಕುಂಜ್ ಎಂಬ ಕೊಳದಲ್ಲಿ ಕೆಲವು ಗೋಪಿಕಾ ಸ್ತ್ರೀಯರು ಮುಳುಗಿದರು. 'ಕುಂಜ್' ಎಂದರೆ ಕೊಳ ಎಂದರ್ಥ. ಈ ಕೊಳದ ತಳದಲ್ಲಿರುವ ಮಣ್ಣು ಗೋಪೀ ಚಂದನದ ಮೂಲವೆಂದು ಹೇಳಲಾಗುವುದು. ಮಹಾಭಾರತ ಯುದ್ಧದಲ್ಲಿ ಕೌರವರ ವಿನಾಶವಾದನಂತರ, ಪಾಂಡವರ ವಿಜಯಕ್ಕೆ ತಾನೇ ರೂವಾರಿಯೆಂದು ಅರ್ಜುನನು ಬೀಗುತ್ತಿದ್ದನು. ಇದು ಕೃಷ್ಣನ ಗಮನಕ್ಕೆ ಬಂದಿತು. 

ಅರ್ಜುನನಿಗೆ ಜ್ಞಾನವುಂಟುಮಾಡಲೆಂದು ಶ್ರೀಕೃಷ್ಣನು ತನ್ನ ಶಿಷ್ಯನಿಗೆ ಗೋಪಿಕಾಸ್ತ್ರೀಯರನ್ನು ವನವಿಹಾರಕ್ಕೆ ಕರೆದುಕೊಂಡು ಹೋಗಲು ಹೇಳಿದನು. ವನವಿಹಾರದ ಸಮಯದಲ್ಲಿ ಅರಣ್ಯವಾಸಿ ನಿಷಾದರು ಗೋಪಿಕಾ ಸ್ತ್ರೀಯರನ್ನು ಅವಹೇಳನ ಮಾಡಿದಾಗ ಅರ್ಜುನನು  ಅವರನ್ನು ಹೊಡೆದೋಡಿಸಲು ಪ್ರಯತ್ನಿಸಿದನು. ಆದರೆ, ನಿಷಾದರೆದುರು ಅರ್ಜುನನ ಶೌರ್ಯ ಕೆಲಸಕ್ಕೆ ಬರಲಿಲ್ಲ. ನಿಷಾದರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ಕೊಳವೊಂದರಲ್ಲಿ ಗೋಪಿಕಾಸ್ತ್ರೀಯರು ಹಾರಿಕೊಳ್ಳುತ್ತಾರೆ. ಈ ಕೊಳದ ತಳದಲ್ಲಿ ಹಾಗೂ ಸುತ್ತಮುತ್ತಲಿನ ಮಣ್ಣು ಗೋಪಚಂದನವೆಂದು ಪರಿಗಣಿಸಲ್ಪಟ್ಟಿದೆ. 

ಗೋಪೀಚಂದನದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಗರುಡಪುರಾಣ, ಪದ್ಮಪುರಾಣ, ವಾಸುದೇವ ಉಪನಿಷತ್ ಮತ್ತು ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ” ಮುಂತಾದ ಅನೇಕ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಗುಜರಾತ್ ರಾಜ್ಯದಲ್ಲಿರುವ ದ್ವಾರಕಾನಗರದಲ್ಲಿ ದೊರೆಯುವ ಒಂದು ವಿಶಿಷ್ಟ ಮಣ್ಣನ್ನು ಗೋಪೀಚಂದನವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡ ಪುರಾಣವು ಉಲ್ಲೇಖಿಸಿರುವಂತೆ ಗೋಪೀಚಂದನವು ದ್ವಾರಕಾ ಮೂಲದ ಮಣ್ಣಾಗಿರಬೇಕೆಂಬ ಯಾವುದೇ ನಿಯಮವಿಲ್ಲ. ಶುದ್ಧಗೊಳಿಸಿದ ಯಾವುದೇ ಮಣ್ಣು ಅಥವಾ ಪರಮಾತ್ಮನಿಗೆ ಅರ್ಪಿಸಲಾದ ಚಂದನವನ್ನು ಪುಂಡ್ರಕ್ಕೆಂದು ಬಳಸಬಹುದು. ಆದರೆ ಊರ್ಧ್ವಪುಂಡ್ರ ಧಾರಣೆ ಅನಿವಾರ್ಯ ಮತ್ತು ಅತ್ಯಾವಶ್ಯಕ.

ಬ್ರಹ್ಮಾಂಡಪುರಾಣವು ಗೋಪೀಚಂದನದ ಬಗ್ಗೆ ಹೆಚ್ಚಿನ ವಿವರಣೆ ನೀಡುತ್ತದೆ. ದ್ವಾರಕೆಯಲ್ಲಿ ದೊರೆಯುವ ಶ್ರೀ‍ಕೃಷ್ಣ, ಗೋಪಿಕಾಸ್ತ್ರೀಯರ ಪಾದಧೂಳಿಯಲ್ಲದೆ, ಪರ್ವತಶಿಖರಾಗ್ರಭಾಗದಲ್ಲಿ ದೊರೆಯುವ, ನದೀತೀರಗಳಲ್ಲಿ ದೊರೆಯುವ, ಮಾಧ್ವ ಯಾತ್ರಾಸ್ಥಳಗಳಿಂದ ತರಲಾದ, ಸಮುದ್ರತೀರದ, ಹುತ್ತದ ಅಥವಾ ಸರ್ಪಗಳ ಗೂಡಿನಿಂದ ತರುವ, ತುಳಸಿ ಸಸ್ಯದ ಬುಡದಿಂದ ತೆಗೆಯುವ ಮಣ್ಣುಗಳನ್ನೂ ಊರ್ಧ್ವಪುಂಡ್ರಕ್ಕೆ ಬಳಸಬಹುದಾಗಿದೆ.

ಕೆಲವು ಸಂದರ್ಭಗಳಲ್ಲಿ ಗೋಪೀಚಂದನವನ್ನು ಧರಿಸುವಂತಿಲ್ಲ. ಗೋಪೀಚಂದನವನ್ನು ದೈಹಿಕ ಪರಿಮಳ ಅಥವಾ ಸುಗಂಧದ್ರವ್ಯಸಾಧನವಾಗಿ ಸರ್ವಥಾ ಬಳಸುವಂತಿಲ್ಲ. ಯಾವುದೇ ಹುಟ್ಟು ಅಥವಾ ಸಾವಿನ ಹತ್ತುದಿನಗಳಲ್ಲಿ ಮೈಲಿಗೆ ಇರುವುದರಿಂದ ಗೋಪೀಚಂದನವನ್ನು ಬಳಸಬಾರದು. ಆದರೆ, ದೇವರಿಗೆ ಸಮರ್ಪಿಸಿದ ಗಂಧವನ್ನು ಬಳಸಬಹುದು.

ಗರ್ಗಸಂಹಿತೆಯು ಗೋಪೀಚಂದನಧಾರಣವನ್ನು ಗಂಗಾಸ್ನಾನಕ್ಕೆ ಸಮವೆಂದು ನಿರ್ದೇಶಿಸುತ್ತದೆ. ದಿನನಿತ್ಯದಲ್ಲಿ ಗೋಪೀಚಂದನವನ್ನು ಧರಿಸುವುದು ಜಗತ್ತಿನ ಎಲ್ಲ ಪವಿತ್ರ ನದೀದಡಗಳಲ್ಲಿ ಸ್ನಾನ ಮಾಡಿದಷ್ಟು ಪುಣ್ಯಕರ. ಗೋಪೀಚಂದನಧಾರಣೆಯು ಸಹಸ್ರ ಅಶ್ವಮೇಧಯಾಗ ಮತ್ತು ನೂರು ರಾಜಸೂಯ ಯಾಗಗಳನ್ನು ಮಾಡಿದ ಪುಣ್ಯಕ್ಕೆ ಸಮ. ಗೋಪೀಚಂದನವು ಗಂಗೆಯ ಒಡಲಿನಲ್ಲಿರುವ ಮಣ್ಣಿಗಿಂತ ಎರಡರಷ್ಟು ಮತ್ತು ಪಂಚವಟೀ ತೀರ್ಥದ ಮಣ್ಣಿಗಿಂತಲೂ ಹತ್ತರಷ್ಟು ಹೆಚ್ಚು ಪುಣ್ಯಕರವೆಂದು ಗರ್ಗಸಂಹಿತೆಯಲ್ಲಿ ಹೇಳಲಾಗಿದೆ. ದಿನಕ್ಕೆರಡು ಬಾರಿ ಗೋಪೀಚಂದನವನ್ನು ಶಾಸ್ತ್ರರೀತಿಯಲ್ಲಿ ಲೇಪಿಸಿಕೊಂಡರೆ ಗೋಕುಲಕ್ಕೆ ಪ್ರವೇಶ ದೊರೆಯುತ್ತದೆ.ಅಷ್ಟೇ ಅಲ್ಲದೆ, ಈ ರೀತಿಯಲ್ಲಿ ಗೋಪೀಚಂದನವನ್ನು ಲೇಪಿಸಿಕೊಳ್ಳುವವರೆಡೆಗೆ ಯಮಧರ್ಮನೂ ಸುಳಿಯಲಾರ. ಗೋಪೀಚಂದನಧಾರಣೆಯಿಂದ ಸಕಲಪಾಪಗಳೂ ನಾಶಹೊಂದುತ್ತವೆ ಎಂದು ಗರ್ಗರು ನುಡಿದಿದ್ದಾರೆ.
***


-

     ಜಗದ್ಗುರು ಮಧ್ವಾಚಾರ್ಯರು ಗೋಪಿಚಂದನದ ಮಹತ್ವವನ್ನು ಹೀಗೆ ತಿಳಿಸಿದ್ದಾರೆ .

ಯಜ್ಞೋ ದಾನಂ ತಪಶ್ಚೈವ ಸ್ವಾಧ್ಯಾಯಃ ಪಿತೃತರ್ಪಣಂ |
ವ್ಯರ್ಥಂ ಭವತಿ ತತ್ ಸರ್ವಮೂರ್ಧ್ವಪುಂಡ್ರಂ ವಿನಾ ಕೃತಮ್ ||
-  (ಕೃ.ಮ ೨೨೪)

ಗೋಪೀಚಂದನದಿಂದ ಊರ್ಧ್ವಪುಂಡ್ರವನ್ನು ಧರಿಸದೇ ಮಾಡಿದ ಯಜ್ಞ , ದಾನ , ತಪಸ್ಸು, ಸ್ವಾಧ್ಯಾಯ, ಪಿತೃತರ್ಪಣ ಮೊದಲಾದ ಎಲ್ಲವೂ ವ್ಯರ್ಥವೆನಿಸುವುದು. 

ಗೋಪೀಚಂದನಲಿಪ್ತಾಂಗೋ ಯಂ ಯಂ ಪಶ್ಯತಿ ಚಕ್ಷುಷಾ |
ತಂ ತಂ ಶುದ್ಧಂ ವಿಜಾನೀಯಾನ್ನಾತ್ರ ಕಾರ್ಯಾ ವಿಚಾರಣಾ ||
- (ಕೃ.ಮ ೨೨೫)

ಗೋಪೀಚಂದನವನ್ನು ಮೈಗೆ ಲೇಪಿಸಿಕೊಂಡವನು ಕಣ್ಣಿನಿಂದ ಯಾವುದನ್ನು ನೋಡುವನೋ ಅದೆಲ್ಲವನ್ನೂ ಶುದ್ಧ ಎಂದೇ ತಿಳಿಯಬೇಕು , ಈ ಬಗ್ಗೆ ವಿಚಾರ ಬೇಕಿಲ್ಲ.

ಶ್ರೀವಾದಿರಾಜರು ತೀರ್ಥಪ್ರಬಂಧದಲ್ಲಿ ಹೇಗೆ ವರ್ಣಿಸಿದ್ದಾರೆ :-

ಫಾಲೇ ಯಲ್ಲಿಖಿತಂ ಧುನೋತಿ ವಿವಿಧಾಂ ಲೇಖಾಂ ವಿಧಾತ್ರ ಕೃತಾಂ ಲೀಲಾರ್ಥಂ ತಿಲಕೀಕೃತಂ ವಿತನುತೇ ವಿದ್ವಲ್ಲಲಾಮಾಯಿತಾನ್ |
ಊರ್ಧ್ವಂ ಯಧ್ಧೃತಮುಚ್ಚಲೋಕಪದವೀಸೋಪಾನಮನ್ವೇತಿ ತದ್ ಗೋಪೀಚಂದನಮಂಜಸಾ ವಿಜಯತೇ ತಾಪತ್ರಯಧ್ವಂಸನಮ್ ||
- (ತೀ.ಪ್ರ ೯೭)

ಯಾವುದು ಲಲಾಟದಲ್ಲಿ ಲೇಪಿಸಿಕೊಳ್ಳಲ್ಪಟ್ಟಾಗ ಚತುರ್ಮುಖ ಬ್ರಹ್ಮದೇವರಿಂದ ಬರೆಯಲ್ಪಟ್ಟ ಜನನ ಮರಣ ಸ್ವರ್ಗ ನರಕಾದಿ ಸಂಪಾದಕವಾದ ಬರಹವನ್ನು ಅಳಸಿ ಹಾಕುವುದೋ, ಯಾವುದು ಅಲಂಕಾರಕ್ಕಾಗಿ ತಿಲಕವಾಗಿ ಧರಿಸಲ್ಪಟ್ಟಾಗ ವಿಧ್ವಚ್ಛ್ರೇಷ್ಠರನ್ನಾಗಿ ಮಾಡುವುದೋ, ಯಾವುದು ಊರ್ಧ್ವಪುಂಡ್ರವಾಗಿ ಧರಿಸಲ್ಪಟ್ಟಾಗ ಅತ್ಯುಚ್ಚಲೋಕವಾದ ವೈಕುಂಠಕ್ಕೆ ಕರೆದೊಯ್ಯುವ ಮೆಟ್ಟಿಲಾಗಿ ಆಗುವುದೋ , ಆಧ್ಯಾತ್ಮಿಕ ಆಧಿದೈವಿಕ ಆಧಿಭೌತಿಕವೆಂಬ ಮೂರುವಿಧವಾದ ಪಾಪಗಳನ್ನು ನಾಶಪಡಿಸುವಂತಹ ಗೋಪೀಚಂದನವು ತುಂಬಾ ಉತ್ಕೃಷ್ಟವಾಗಿದೆ. 

ಇದನ್ನೆ ಶ್ರೀ ಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ :-

ಮಂದನಾದರೂ ಸರಿಯೆ ಗೋಪೀಚಂದನ ಶ್ರೀಮುದ್ರೆಗಳ ನಲವಿಂದ ಧರಿಸುತ ಶ್ರೀತುಲಸಿ ಪದುಮಾಕ್ಷಿಸರಗಳನು |
ಕಂಧರದ ಮಧ್ಯದಲ್ಲಿ ಮುಕುಂದ ಶ್ರೀಭೂರಮಣ ತ್ರಿಜಗದ್ವಂದ್ಯ ಸರ್ವಸ್ವಾಮಿ ಮಳೆ ಕುಲದೈವವೆನೆ ಪೊರೆವ ||
 - ಶ್ರೀ ಜಗನ್ನಾಥದಾಸರು (ಹರಿಕಥಾಮೃತಸಾರ - ೧೬/೨೦)

    ರುದ್ರದೇವರು ಪಾರ್ವತಿಗೆ ಹೇಳುವ ಮಾತು ಪದ್ಮ ಪುರಾಣದಲ್ಲಿ

ಊರ್ಧ್ವಪುಂಡ್ರಂ ತು ಸರ್ವೇಷಾಂ ನ ನಿಷಿದ್ಧಂ ಕದಾಚನ |
ಧಾರೆಯೇತ್ ಕ್ಷತ್ರಿಯಾದ್ಯೋಪಿ ವಿಷ್ಣುಭಕ್ತೋ ಭವೇದ್ಯದಿ ||
 — ಪದ್ಮ ಪುರಾಣ

ಹಾಗಾಗಿ ಪ್ರತಿಯೊಬ್ಬರೂ ಹಣೆಯಮೇಲೆ ಗೋಪೀಚಂದನದಿಂದ ಊರ್ಧ್ವಪುಂಡ್ರವನ್ನು ಧಾರಣೆ ಮಾಡಲೇಬೇಕು.

||ಶ್ರೀ ಕೃಷ್ಣಾರ್ಪಣಮಸ್ತು||
****
ಸಹೃದಯರೇ 🙏,

ನೋಡಿ ವೇದಾಧಿಕಾರವಿಲ್ಲದ ಶೂದ್ರಾದಿ ಸಮಸ್ತ ಸ್ತ್ರೀಯರು ಹಣೆಯಲ್ಲಿ ಒಂದು ಊರ್ಧ್ವಪುಂಡ್ರವನ್ನು ಮಾತ್ರ ಧರಿಸತಕ್ಕದ್ದು.
 ವೈಶ್ಯ ನಾದವನು ಹಣೆ ಮತ್ತು ಎದೆಯ ಮೇಲೆ ಎರಡು ಪುಂಢ್ರಗಳನ್ನು , ಕ್ಷತ್ರಿಯ ನಿಗೆ    ಇವೆರಡರೊಂದಿಗೆ ಎರಡು ಬಾಹುಗಳಲ್ಲಿ (ಒಟ್ಟು ನಾಲ್ಕು) ಧರಿಸಬೇಕು. 
ಆದರೆ ಬ್ರಾಹ್ಮಣ ನಾದವನು ಲಲಾಟ (ಹಣೆ)ದಲ್ಲಿ ದಂಡದಂತಿರುವ ಪಂಢ್ರ, ಹೃದಯ(ಎದೆ)ದಲ್ಲಿ ಪದ್ಮಾಕಾರದಂತಿರುವ ಪುಂಢ್ರಗಳು, ನಾಭಿಯ ಮೇಲ್ಭಾಗ, ಎರಡು ಕುಕ್ಷಿಗಳು (ಹೊಟ್ಟೆಯ ಎಡಬಲಪಾರ್ಶ್ವಗಳು), ಕಂಠ, ಎರಡುಕರ್ಣ ಮೂಲಗಳು (ಎಡಬಲ ಕಿವಿಗಳ ಕೆಳಭಾಗ) , ಬಾಹುಗಳೆರಡು(ಎಡ ಬಲ ಭುಜಗಳು),  ಬೆನ್ನು (ಬೆನ್ನಿನ ಕೆಳಭಾಗದಲ್ಲಿ ಟೊಂಕದ ಮೇಲೆ), ಶಿರಸ್ಸು(ನೆತ್ತಿ) ಹೀಗೆ ದ್ವಾದಶ 12ಸ್ಥಾನಗಳಲ್ಲಿಯೂ ಚೂಪಾದ ತುದಿಯಿರುವ ದೀಪಜ್ವಾಲೆಯಂತಿರುವ  ಪುಂಢ್ರಗಳನ್ನೇ ಧರಿಸಬೇಕೆಂಬುದು ಇಂದಿನ ಸದ್ವಿಚಾರದ ಸಂದೇಶವಾಗಿದೆ. 
-by prasadacharya
*****

ನೋಡೀ ಈ ಲಲಾಟ ಅಂದರೆ ಹಣೆ ಯಲ್ಲಿ  ಧರಿಸುವ ದಂಡ ದಂತಿರುವ ಪುಂಡ್ರವು ನಾಸಾಗ್ರದಿಂದ ಕೇಶಪರ್ಯಂತವಾಗಿಯೇ ಧರಿಸಬೇಕು. ಅಲ್ಲದೇ ಧರಿಸುವಾಗ ಮಧ್ಯದಲ್ಲಿ ಶ್ರೀಹರಿ ಯ ಮಂದಿರವೆಂಬ ಅನುಸಂಧಾನದಿಂದ ಛಿದ್ರಮಾಡಿಕೊಳ್ಳಬೇಕೆಂಬುದು ನಮ್ಮ ಸಚ್ಛಾಸ್ತ್ರ ದ ಆದೇಶವಾಗಿದೆ. ಇಲ್ಲದಿರೆ ಈ ಛಿದ್ರರಹಿತ ಪುಂಡ್ರವು ಆ ವಿಷ್ಣು ವಿನಲ್ಲಿ ದ್ವೇಷಹುಟ್ಟಿಸಲು ಕಾರಣವಾಗುತ್ತದೆಯಲ್ಲದೇ ಯಾರೊಬ್ಬರ ಹಣೆಯಲ್ಲಿ ಈ ರೀತಿ ಕಂಡುಬರುತ್ತದೆಯೋ ಅದನ್ನು ಹೀನವಾದ ನಾಯಿಯಪಾದ ವೆಂದೇ ತಿಳಿಯಬೇಕು. ಇದು ಹರಿಮಂದಿರ ಸಹಿತವಾದ ಶ್ರೀವಿಷ್ಣುಪಾದ ವಲ್ಲವೇ ಅಲ್ಲವೆಂಬುದು ನಿಶ್ಚಯ ನಿಶ್ಚಯ ನಿಶ್ಚಯವಾಗುತ್ತದೆ ಎಚ್ಚರ.
  ಇಷ್ಟೇ ಅಲ್ಲದೇ ಹೀಗೆ ನಮ್ಮ ಶಾಸ್ತ್ರದಲ್ಲಿ ತಿಳಿಸಿದಂತೆಯೇ ಈ ಊರ್ಧ್ವಪುಂಡ್ರವನ್ನು  ಧರಿಸದ ವನ ಮೊಗ (ಮುಖ)ವು‌ ಸ್ಮಶಾನದಂತೆ ಅಪವಿತ್ರ ವಾದದ್ದಾಗಿದ್ದು ಅಂತಹ ಮುಖವನ್ನು ನೋಡುವ ಮಾತ್ರದಿಂದ  ಸೂರ್ಯದರ್ಶನ ಅಂದರೆ ಸೂರ್ಯಾಂತರ್ಗತ ಶ್ರೀನಾರಾಯಣನನ್ನು ಸ್ಮರಿಸಿಯೇ ಶುದ್ಧನಾಗಬೇಕೆಂಬ ಕಿವಿಮಾತೇ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.‌
by prasadacharya
***

ಗೋಪೀಚಂದನ ಧಾರಣೆಯ ಮಹತ್ತ್ವಗಳು

೧. ಮಹಾದೇವನು ಹೇಳಿದನು-

ಎಲೈ ನಾರದನೆ ! ಇನ್ನೂ ಒಂದು ವಿಷಯವನ್ನು ಹೇಳುತ್ತೇನೆ ಕೇಳು. ಅದು ಗೋಪೀಚಂದನದ ಮಹಿಮೆಯು, ಅದರ ವಿಷಯದಲ್ಲಿ ನಾನು ಕಂಡುದುದನ್ನೂ ಕೇಳಿದುದನ್ನೂ ಹೇಳುತ್ತೇನೆ. 
೨. ಚಾತುರ್ವಣದ ಯಾವನೇ ಆಗಲಿ ಮೈಗೆ ಗೋಪಿಚಂದನವನ್ನು ಬಳಿದುಕೊಂಡರೆ ಅವನು ಬ್ರಹ್ಮಹತ್ಯೆ ಮಾಡಿದ್ದರೂ ಶುದ್ಧನಾಗುತ್ತಾನೆ. 
೩. ಗೋಪೀಚಂದನದಲ್ಲಿ ತಿಲಕವಿಟ್ಟುಕೊಂಡರೆ ಅವನು ಹೆಂಡ ಮುಂತಾದುವುಗಳನ್ನು ಕುಡಿದು ಜಾತಿ ಭ್ರಷ್ಟನಾಗಿದ್ದರೂ ಅವೆಲ್ಲವೂ ಹೋಗುತ್ತವೆ. 
೪. ವಿಷ್ಣುಭಕ್ತನಾದ ಮನುಷ್ಯನು ಗೋಪಿ ಚಂದನವನ್ನು ಮೈಗೆ ಹಚ್ಚಿಕೊಂಡರೆ, ಅವನು ಗಂಗೆಯಲ್ಲಿ ಸ್ನಾನಮಾಡಿದರೆ, ಎಲ್ಲಾ ಪಾಪಗಳನ್ನೂ ಕಳೆದು ಕೊಳ್ಳುವಂತೆ ಇದರಿಂದಲೂ ಕಳೆದುಕೊಳ್ಳುತ್ತಾನೆ. 
೫. ಬ್ರಹ್ಮಹತ್ಯೆ, ಮದ್ಯಪಾನ, ಸ್ವರ್ಣಸ್ತೇಯ, ಗುರುವಿನ ಹೆಂಡತಿಯಲ್ಲಿ ಸಂಗ ಇವು ಯಾವುದನ್ನು ಮಾಡಿ ಪಾಪಹೊಂದಿದ್ದರೂ, ಅವನು ದ್ವಿಜನಾಗಲಿ ಯಾವ ಪಾಪಿಯೇ ಆಗಲಿ ಗೋಪಿಚಂದವನ್ನು ಮೈಗೆ ಬಳಿದುಕೊಂಡರೆ ಹುಟ್ಟಿದಮೊದಲುಗೊಂಡು ಮಾಡಿದ ಪಾಪಗಳನ್ನೆಲ್ಲಾ ಕಳೆದುಕೊಳ್ಳುತ್ತಾನೆ. 
೬-೮. ವೈಷ್ಣವರಾದವರೆಲ್ಲರೂ ಕೂಡ ಹನ್ನೆರಡು ಜಾಗದಲ್ಲಿ ಈ ಗೋಪೀ ಚಂದನವನ್ನಿಟ್ಟು ಕೊಳ್ಳಬೇಕು. ಇದರಿಂದ ಒಳ್ಳೆಯದಾಗುತ್ತದೆ. ಬ್ರಾಹ್ಮಣರು ನಿಯಮದಿಂದ ಇಟ್ಟುಕೊಂಡೇ ತೀರಬೇಕು. ಹಣೆಯಲ್ಲಿ ದೊಣ್ಣೆಯಂತೆ ಇಟ್ಟು ಕೊಳ್ಳಬೇಕು. ಎದೆಯಲ್ಲಿ ಪದ್ಮದ ಅಕಾರಕ್ಕೆ ಇಟ್ಟುಕೊಳ್ಳಬೇಕು. ಭುಜದಮೇಲೆ ಬಿದಿರಿನ ಎಲೆಯಂತೆ ಇಟ್ಟುಕೊಳ್ಳಬೇಕು. ಉಳಿದುವು ದೀಪದಂತೆ ಇರಬೇಕು. ಬಲದ ತೋಳಿನ ಬುಡದಲ್ಲಿ ನಾಲ್ಕು ದೊಡ್ಡ ದೊಡ್ಡ ಚಕ್ರಗಳನ್ನು ಮೇಲುಮುಖವಾಗಿ ಬರೆದುಕೊಳ್ಳಬೇಕು. 
೯-೧೦. ನಾಮದ ಆಕಾರಕ್ಕೆ ಒಂದು, ಮುದ್ರೆಯ ಆಕಾರಕ್ಕೆ ಒಂದು, ಈ ರೀತಿ ಎರಡನ್ನು ಕೆಳಮುಖವಾಗಿ ಇಟ್ಟುಕೊಳ್ಳಬೇಕು. ಅವುಗಳ ಮಧ್ಯೆ ಒಂದು ಶಂಖವನ್ನು ಬರೆದುಕೊಳ್ಳಬೇಕು. ಅವುಗಳ ಪಕ್ಕದಲ್ಲಿ ಎರಡೆರಡು ಪದ್ಮಗಳನ್ನು ಬರೆದುಕೊಳ್ಳಬೇಕು, ಎಡಗಡೆಯಲ್ಲಿಯೂ ಕೂಡ ನಾಲ್ಕು ಶಂಖಗಳನ್ನೂ, ನಾಮ ಮುದ್ರೆಗಳನ್ನೂ ಬಲಗಡೆಯಂತೆ ಇಟ್ಟುಕೊಳ್ಳಬೇಕು. ಒಂದು ಚಕ್ರ, ಎರಡೆರಡು ಗದೆಗಳು ಅವುಗಳ ಪಕ್ಕದಲ್ಲಿ ಬರುವಂತೆ ಇಟ್ಟುಕೊಳ್ಳಬೇಕು. 
೧೧. ಹಣೆಯಲ್ಲಿ ಒಂದು ಗದೆಯನ್ನೂ, ಎದೆಯಲ್ಲಿ ಒಂದು ನಾಮ, ಒಂದು ಮುದ್ರೆಯನ್ನೂ, ಮೂರು ಮೂರು ಚಕ್ರಗಳನ್ನೂ, ಅವುಗಳ ಮಧ್ಯದಲ್ಲಿ ಎರಡೆರಡು ಶಂಖಗಳನ್ನೂ ಇಟ್ಟುಕೊಳ್ಳಬೇಕು. 
೧೨. ಹೃದಯ, ಪಕ್ಕೆಗಳು, ಸ್ತನಗಳಿಂದ ಮೇಲೆ, ಗದಾಪದ್ಮಗಳನ್ನು ತೋಳಿನಲ್ಲಿಟ್ಟುಕೊಂಡಿರುವಂತೆ ಇಟ್ಟುಕೊಳ್ಳಬೇಕು. ಕತ್ತಿನಲ್ಲಿ ಕಿವಿಯ ಕೆಳಗೆ ಎರಡು ಕಡೆಗಳಲ್ಲಿಯೂ ಮೂರು ಮೂರು ಚಕ್ರಗಳನ್ನೂ ಇಟ್ಟುಕೊಳ್ಳಬೇಕು. 
೧೩. ಇವುಗಳ ಮೇಲೆಲ್ಲಾ ಒಂದೊಂದು ತಿಲಕವನ್ನೂ ಇಟ್ಟುಕೊಳ್ಳಬೇಕು. ಈ ವಿಷಯದಲ್ಲಿ ಸಂಪ್ರದಾಯವೇ ಉತ್ತಮವಾದುದು. ಶಿಷ್ಟರು ಹೇಳಿದಂತೆ ಮಾಡುವುದು ಒಳ್ಳೆಯದು. 
೧೪. ಅದಿಲ್ಲದಿದ್ದರೆ ಇಷ್ಟವಿದ್ದಂತೆ ಇಟ್ಟುಕೊಳ್ಳಬಹುದು. ಅದರಲ್ಲಿ ನಿಯಮವಿಲ್ಲ. ಈ ತಿಲಕವನ್ನು ಇಟ್ಟುಕೊಳ್ಳುವುದರಿಂದ ಪರಮಪಾಪಿಯೂ ಮೊದಲುಗೊಂಡು ಶುದ್ಧನಾಗುತ್ತಾನೆ. 
೧೫. ವೈಷ್ಣವರನ್ನು ನಿಂದಿಸುವವನು ಪರಮಪಾಪಿಗಳಲ್ಲಿಯೂ ನೀಚನು. ಆ ವೈಷ್ಣವನು ವಿಷ್ಣುವಿಗೆ ಸಮನು. ಈ ವಿಷಯದಲ್ಲಿ ಸಂದೇಹವಿಲ್ಲ. 
೧೬. ವಿಷ್ಣುಧ್ಯಾನದಲ್ಲಿ ಆಸಕ್ತನಾದ ವೈಷ್ಣವ ಬ್ರಾಹ್ಮಣನಿಗೂ ವಿಷ್ಣುವಿಗೂ ಭೇದವೇ ಇಲ್ಲ . ಅವನೇ ಈ ಲೋಕದಲ್ಲಿ ವಿಷ್ಣುವು.  (ಅಂದರೆ ಅಂತಹಾ ವೈಷ್ಣವ ಬ್ರಾಹ್ಮಣನು ವಿಷ್ಣುವಿಗೆ ಸಮೀಪನಾಗಿ ವಿಷ್ಣುವಿನಂತೆಯೇ ಮಾನ್ಯಾನಾಗುತ್ತಾನೆ)
೧೬. ಬ್ರಾಹ್ಮಣನು ವೇದಾಧ್ಯಯನ ಮಾಡುತ್ತ ಶಂಖ ಚಕ್ರಗಳನ್ನು ಧರಿಸಿದ್ದರೆ ಅವನೇ ನಾರಾಯಣನೆಂದು ತಿಳಿ, ವೇದದಲ್ಲಿಯೂ ಹಾಗೆಯೇ ಹೇಳಿರುತ್ತದೆ.  ( ಅಂತರೆ  ನಾರಾಯಣನಿಗೆ ಅತಿ ಸಾಮೀಪ್ಯ ಮತ್ತು ಮಾನ್ಯನಾಗುತ್ತಾನೆ)
೧೮. ಬೆಂಕಿಯಲ್ಲಿ ಕಾಯಿಸಿ ಮುದ್ರೆಧಾರಣೆ ಮಾಡಿಸಿಕೊಂಡ ಬ್ರಾಹ್ಮಣನು ಪಂಕ್ತಿಯನ್ನೇ ಪವಿತ್ರವನ್ನಾಗಿ ಮಾಡುತ್ತಾನೆ. ಅವನು ಭಕ್ತನೂ ಆಗಿದ್ದರೆ ಮಹಾ ಪಾಪಗಳೂ ಹೋಗುತ್ತವೆ. 
೧೯. ತುಳಸಿಯ ಮಾಲೆಯನ್ನೂ ತುಳಸಿಯ ಮಣಿಯನ್ನೂ ಧರಿಸಿದ ಬ್ರಾಹ್ಮಣನು ಮುಕ್ತಿ ಹೊಂದುತ್ತಾನೆ. ಸಂಶಯವಿಲ್ಲ. 
೨೦-೨೪. ವೈಷ್ಣವನಾಗಿರುವ ಬ್ರಾಹ್ಮಣನನ್ನು ಈ ಲೋಕದಲ್ಲಿ ವಿಷ್ಣುವಿನ ರೂಪವೆಂದು (ವಿಷ್ಣುವಿನ ಹೆಚ್ಚು ಸಾನ್ನಿದ್ಯವನ್ನು ಪಡೆದವನೆಂದು) ಹೇಳುತ್ತಾರೆ. ಸಾಯುವಾಗ ಯಾವನು ಗೋಪೀಚಂದನದ ತಿಲಕವನ್ನು ಇಟ್ಟುಕೊಂಡಿರುವನೋ ಅವನು ವಿಮಾನವನ್ನು ಹತ್ತಿಕೊಂಡು ವಿಷ್ಣುವಿನ ಪದವನ್ನು ಹೊಂದುತ್ತಾನೆ. ಎಲೈ ನಾರದನೇ ! ಈ ಕಲಿಯುಗದಲ್ಲಿ ಗೋಪೀ ಚಂದನದ ತಿಲಕವನ್ನು ಇಟ್ಟುಕೊಳ್ಳುವವನು ಶ್ರೇಷ್ಠನು. ಅವನಿಗೆ ದುರ್ಗತಿ ಎಂಬುದು ಸಂಭವಿಸುವುದೇ ಇಲ್ಲ. ಬಲಗೈಯ್ಯಲ್ಲಿ ಶಂಖವನ್ನೂ ಎಡಗೈಯ್ಯಲ್ಲಿ ಚಕ್ರವನ್ನೂ ಧಾರಣೆಮಾಡಿಸಿಕೊಂಡವನು ಮಹಾಪಾಪಗಳನ್ನು ಕಳೆದುಕೊಳ್ಳುತ್ತಾನೆ. ಮಧ್ಯಪಾನ ಮಾಡುವವನು ಸ್ತ್ರೀಘಾತುಕ, ಬಾಲಘಾತುಕ, ಅಗಮ್ಯಗಾಮಿಗಳಾದ ಮಹಾಪಾಪಿಗಳೂ ಕೂಡ ಈ ಭಕ್ತರ ದರ್ಶನದಿಂದಲೇ ಮುಕ್ತರಾಗುತ್ತಾರೆ. ಸಂಶಯವಿಲ್ಲ. 
೨೫-೨೬. ಮೊದಲೇ ಈ ಸಂಸಾರವು ಸಾರವಿಲ್ಲದ್ದು. ಇಂತಹವರ ಕುಲದಲ್ಲಿ ವೈಷ್ಣವರೇ ಹುಟ್ಟುವುದಿಲ್ಲ. ನಾನೊಬ್ಬನು ವಿಷ್ಣುವಿನ ಪ್ರಸಾದದಿಂದ ವೈಷ್ಣವನಾಗಿ ಹುಟ್ಟಿರುವೆನು. ನಾನು ಈ ಕಾಶಿಯಲ್ಲಿ ರಾಮ ರಾಮನೆಂದು ಜಪಿಸುತ್ತಿರುವ ಪುಣ್ಯದ ಯೋಗದಿಂದ ಈ ಕಾಶಿಯಲ್ಲಿ ವಾಸಮಾಡುವವರಿಗೆ ಶಿವನಾಗಿ ಮೋಕ್ಷದಾಯಕನಾಗಿ ಪರಿಣಮಿಸಿದ್ದೇನೆ. ಸಂಶಯವಿಲ್ಲ.

 ‌(received in WhatsApp)

***



***
ಊರ್ಧ್ವಪುಂಡ್ರ ಪಂಚಮುದ್ರಾ ತಪ್ತಮುದ್ರಾ 

ಪ್ರತಿಯೊಬ್ಬನೂ ಧರ್ಮಕರ್ಮಗಳ ಆಚರಣೆಯನ್ನು ತಿಳಿಯಬೇಕು. ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕು. 

ಆ ಆಚರಣೆಗಳಲ್ಲಿ ಊರ್ಧ್ವ ಪುಂಡ್ರ ಹಾಗೂ ಮುದ್ರಾ ಧಾರಣೆಯೂ ಸೇರಿವೆ. ಇವುಗಳು ಮಾನವನ ಸಾಧನೆಗೆ ಇರುವಂತಹದ್ದು. ಮೋಕ್ಷದ ಹಾದಿಗೆ ಕರೆದುಕೊಂಡು ಹೋಗುವಂತಹದ್ದು. ಇದು ವೈದಿಕವೂ ಹೌದು. ವೈಷ್ಣವವೂ ಹೌದು. 

ವೇದೋಕ್ತವಾದ ಆಚಾರಣೆ ಯಾದ್ದರಿಂದ ವೈದಿಕ. ವಿಷ್ಣುಪ್ರಿಯವಾದ ವೈಷ್ಣವ ಧರ್ಮಗಳಾದ್ದರಿಂದ ವೈಷ್ಣವ. 

ಹಾಗಾಗಿ ಪ್ರತಿಯೊಬ್ಬ ಮಾಧ್ವರೂ ಮಧ್ವಾಚಾರ್ಯರು ಹಾಕಿಕೊಟ್ಟ ಕ್ರಮದಲ್ಲಿ ಊರ್ಧ್ವಪುಂಡ್ರ ಧಾರಣೆ, ಹಾಗೂ ಮುದ್ರಾಧಾರಣೆಯನ್ನು ಮಾಡಿಕೊಳ್ಳುತ್ತಾರೆ. 

ಊಧ್ವಪುಂಡ್ರ ಪಂಚಮುದ್ರಾ -
ಪುಂಡ್ರ ಎಂದರೆ ನಾಮ, ಅಥವಾ ಚಿಹ್ನೆ ಅಂದು ಹೇಳಬಹುದು. ಊರ್ಧ್ವ ಎಂದರೆ ಮೇಲ್ಮುಖ ಎಂದರ್ಥ. ಅಂದರೆ ಮೇಲ್ಮುಖವಾಗಿ ಹಾಕುವ ನಾಮಗಳನ್ನು ಊರ್ಧ್ವಪುಂಡ್ರ ಎನ್ನುತ್ತಾರೆ. 

ಗೋಪಿಚಂದನದಿಂದ ಊರ್ಧ್ವಪುಂಡ್ರವನ್ನು ಧಾರಣೆ ಮಾಡುವಂತಹದ್ದು. ಅದೇ ರೀತಿ (ಚಕ್ರ, ಶಂಖ, ಗದಾ, ಪದ್ಮ, ನಾರಾಯಣ) ಪಂಚ ಮುದ್ರೆಗಳನ್ನೂ ಕೂಡ ಗೋಪಿಚಂದನದಿಂದ ನಿತ್ಯದಲ್ಲಿ ಧಾರಣೆ ಮಾಡಬೇಕು. 

ತಪ್ತಮುದ್ರಾ – 
ಇನ್ನು ಪರ್ವಕಾಲಗಳಲ್ಲಿ, ಶಾಸ್ತ್ರಗಳು ತಿಳಿಸಿದಂತೆ, ಪವಿತ್ರವಾದ ತಪ್ತಚಕ್ರಶಂಖಮುದ್ರೆಗಳನ್ನು ಶರೀರದಲ್ಲಿ ಧಾರಣೆ ಮಾಡಬೇಕು. 

ಸಾಧಕನು ವೇದಾಂತಪೀಠದಲ್ಲಿ ವಿರಾಜಮಾನರಾದ ಪರಮಹಂಸರಾದ ಯತಿಗಳ ಮೂಲಕವೇ ತಪ್ತಮುದ್ರೆಗಳನ್ನು ಧಾರಣೆ ಮಾಡಿಸಿಕೊಳ್ಳಬೇಕು. 

ಇವುಗಳನ್ನು ವೈದಿಕ ದೀಕ್ಷೆ, ಅಥವಾ ವೈಷ್ಣವ ದೀಕ್ಷೆ ಎಂದು ಕರೆಯುವುದು. ಶರೀರ ಶುದ್ಧಿ ಹಾಗೂ ಮನಶ್ಶುದ್ಧಿಯನ್ನು ತಂದು ಕೊಟ್ಟು, ಸಾಧಕನನ್ನು ವೇದಾಂತಪ್ರಪಂಚದಲ್ಲಿ ಪ್ರವೇಶ ಮಾಡುವಂತೆ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬ ಸಾಧಕನೂ ತನ್ನ ಜನ್ಮದ ಸಾರ್ಥಕತೆಗೆ ಈ ದೀಕ್ಷೆಯನ್ನು ಪಡೆಯಲೇ ಬೇಕು. 

ನಮ್ಮ ಪ್ರಾಚೀನ ಪದ್ಧತಿ ಎಷ್ಟು ಚೆನ್ನಾಗಿದೆ. ನೋಡಿ, ಮನಶ್ಶುದ್ಧಿ ಇಲ್ಲದೆ, ಸರಿಯಾದ ಜ್ಞಾನ ಬರಲು ಸಾಧ್ಯವಿಲ್ಲ. ಜ್ಞಾನ ಬರದೇ ಪರಮಾತ್ಮನ ಅನುಗ್ರಹ ಇಲ್ಲ. ಮೋಕ್ಷವೂ ಇಲ್ಲ. 

ಹಾಗಾಗಿ ಮನಶ್ಶುದ್ಧಿಗಾಗಿ ಇಂದ್ರಿಯ ನಿಗ್ರಹ, ಬ್ರಹ್ಮಚರ್ಯ, ಅಧ್ಯಯನ ಮೊದಲಾದವುಗಳು ಇದ್ದಂತೆ, ಈ ದೀಕ್ಷೆಯನ್ನೂ ಇಟ್ಟುಕೊಳ್ಳಬೇಕು. ಆಗ ಮನಸ್ಸು ಶುದ್ಧವಾಗಲು ಸಾಧ್ಯ. ಸರಿಯಾದ ಜ್ಞಾನ ಪಡೆಯಲು ಸಾಧ್ಯ. 

ಜೊತೆಗೆ ಪುಂಡ್ರ ಧಾರಣೆ ಮುದ್ರಾಧಾರಣೆ ಯಿಂದ ವ್ಯಕ್ತಿಯು ಪರಮಾತ್ಮನ ಸಂಬಂಧಿ ಎಂದು ಗೊತ್ತಾಗುತ್ತದೆ. ಹಾಗಾಗಿಯೇ ಪ್ರಾಚೀನರು ಇವುಗಳಿಲ್ಲದೇ ಮಾಡಿದ ಕರ್ಮಾಚರಣೆ ನಿಷ್ಫಲ ಎಂದು ಹೇಳಿದ್ದಾರೆ. 

ಕರ್ಮಕ್ಕೆ ಸರಿಯಾಗಿ ಫಲವನ್ನು ಕೊಡುವ, ನಮ್ಮ ಅಧಿಪತಿಯನ್ನೇ ಮರೆತು ನಾವು ಕರ್ಮ ಮಾಡಿದರೆ ಅದು ಸರಿಯಾದ ಫಲ ಕೊಡಲು ಸಾಧ್ಯವೇ? 
ಕರ್ಮ ಯಾವತ್ತೂ ಫಲ ಕೊಡುವುದಿಲ್ಲ. 
ಫಲ ಕೊಡುವುದು ಕರ್ಮಾಧ್ಯಕ್ಷನಾದ ಪರಮಾತ್ಮ. ಹಾಗಾಗಿ ಅವನ ಚಿಹ್ನೆಗಳನ್ನು ಧಾರಣೆ ಮಾಡಬೇಕು. 

ಇದು ಕೇವಲ ಶಾಸ್ತ್ರೋಕ್ತವಾದ ಕರ್ಮವಷ್ಟೇ ಅಲ್ಲ. ಇದು ವೇದಾಂತಕ್ಕೆ ಬೇಕಾದ ಕರ್ಮಾಚರಣೆ. ಜನನ, ಮರಣ, ಅಜ್ಞಾನ ಎಲ್ಲದರಿಂದ ಪಾರಾಗಲು ಊರ್ಧ್ವಪುಂಡ್ರಾದಿಗಳು ಸಹಾಯಕ. 

ಹಾಗಾಗಿ ಮಾಧ್ವ ಪರಂಪರೆಯಲ್ಲಿ ಊರ್ಧ್ವಪುಂಡ್ರಧಾರಣೆ, ಹಾಗೂ ಪಂಚಮುದ್ರಾಧಾರಣೆ, ತಪ್ತಮುದ್ರಾಧಾರಣೆ ಗಳು ಅನೂಚಾನವಾಗಿ ನಡೆದುಕೊಂಡು ಬಂದಿದೆ. 

ಮಧ್ವಾಚಾರ್ಯರು ಹಾಕಿಕೊಟ್ಟ ಈ ಸಂಪ್ರಾದಯದ ಬಗ್ಗೆ ಅನೇಕರು ಆಕ್ಷೇಪ ಮಾಡುತ್ತಾರೆ.

ಇದಿಷ್ಟು ಮಧ್ವಮತದವರು ಮಾಡಿಕೊಂಡ ಆಚರಣೆ. ಊರ್ಧ್ವಪುಂಡ್ರಧಾರಣೆ, ಮುದ್ರಾಧಾರಣೆ, ತಪ್ತಮುದ್ರಾಧಾರಣೆ ಇದೆಲ್ಲಾ ವೈದಿಕವೇ ಅಲ್ಲ. ಹಾಗಾಗಿ ಇವು ಅವೈದಿಕವಾದ ಆಚರಣೆಗಳು. 

ಊರ್ಧ್ವಪುಂಢ್ರಧಾರಣೆ ತ್ರಿವರ್ಣೇತರರ ಆಚರಣೆ. ವೇದೋಕ್ತ ಕರ್ಮ ಮಾಡುವ ಅಧಿಕಾರ ಇಲ್ಲದವರಿಗೆ ವೇದೇತರ ಗ್ರಂಥಗಳಲ್ಲಿ ಇವನ್ನು ಹೇಳಿದ್ದಾರೆ. ಅದನ್ನೇ ಮಾಧ್ವರು ಅನುಷ್ಠಾನ ಮಾಡುತ್ತಾರೆ. ಆದ್ದರಿಂದ ಇದನ್ನು ಅನುಷ್ಠಾನ ಮಾಡುವವರು ಅವೈದಿಕರು. ಎಂದು ಕೆಲವರ ವಾದ. 

ಕೆಲವರು ಊರ್ಧ್ವಪುಂಡ್ರ ಒಪ್ಪೋಣ. ಆದರೆ ತಪ್ತಮುದ್ರೆ ಸರಿಯಲ್ಲ ಎಂದು ವಾದಿಸುತ್ತಾರೆ. 

ಮತ್ತೆ ಕೆಲವರು ಊರ್ಧ್ವಪುಂಡ್ರಧಾರಣೆ ಹಾಗೂ ಮುದ್ರಾಧಾರಣೆಗಳು ವೈಷ್ಣವ ಆಚರಣೆಯೇ ವಿನಹ ವೈದಿಕ ಆಚರಣೆ ಅಲ್ಲ. ಪುರಾಣಗಳು ಆಗಮಗಳು ಇವುಗಳನ್ನು ಹೇಳಿದೆ. ಆದರೆ ಪುರಾಣಾದಿಗಳು ಊರ್ಧ್ವಪುಂಡ್ರದಂತೆ, ಪುಂಡ್ರಾಂತರವನ್ನೂ ವಿಧಾನ ಮಾಡಿದೆ. ಜೊತೆಗೆ ಪುಂಡ್ರಾಂತರಗಳನ್ನು ನಿಷೇಧಿಸುವಂತೆ ಊರ್ಧ್ವಪುಂಡ್ರವನ್ನೂ ನಿಷೇಧಿಸಿದೆ. 

ಹಾಗಾಗಿ ಊರ್ಧ್ವಪುಂಡ್ರ ಮುದ್ರಾಧಾರಣೆ ಎಂಬುದು ಕೇವಲ ವೈಷ್ಣವರ ಆಚರಣೆಗೆ ಇರುವುದೇ ವಿನಹ ಅದು ವೇದೋಕ್ತ ಆಚರಣೆ ಅಲ್ಲ. ಎಂದು ಹೇಳುತ್ತಾರೆ.

ಇನ್ನು ತಪ್ತಮುದ್ರಾಧಾರಣೆ ಎಂಬುದು ಅವೈದಿಕ. ಜೊತೆಗೆ ಇದು ನಿಷಿದ್ಧಕೆಲಸ. ಶರೀರವನ್ನು ಸುಟ್ಟುಕೊಳ್ಳುವುದು ತಪ್ಪು. ಹಾಗಾಗಿ ಇದು ಮಾಧ್ವಸಂಪ್ರದಾಯದಲ್ಲಿ ಬಂದ ಹೇಯವಾದ ಆಚರಣೆ ಎಂದು ಹೇಳುವುದಲ್ಲದೇ, ಅನೇಕ ರೀತಿಯಲ್ಲಿ ನಿಂದಿಸುವವರೂ ಇದ್ದಾರೆ. 

ವಿಶೇಷವಾಗಿ ರೋಗ ಬಂದವನಿಗೆ ವೈದ್ಯರು ಕಬ್ಬಿಣ ಕಾಯಿಸಿ ಚುಚ್ಚುವಂತೆ, ಈ ಮೂರ್ಖರು ಮಠಗಳಲ್ಲಿ ಗುರುಗಳ ಹತ್ತಿರ ಕಾಯಿಸಿ ಚುಚ್ಚಿಸಿಕೊಳ್ಳುತ್ತಾರೆಂದು ಅರಚುವವರಿಗೂ ಈ ಸಮಾಜದಲ್ಲಿ ಕೊರತೆ ಇಲ್ಲ. 

ಇಲ್ಲಿ ಕೆಲವನ್ನು ಹೇಳಿದ್ದೇನೆ. ಇನ್ನೂ ಅನೇಕ ರೀತಿಯಲ್ಲಿ ಮಾಧ್ವರ ಆಚರಣೆ ಯಾದ ವೈದಿಕ ವಾದ ಊರ್ಧ್ವಪುಂಡ್ರಧಾರಣೆ, ಮುದ್ರಾಧಾರಣೆ ತಪ್ತಮುದ್ರಾಧಾರಣೆಯನ್ನು ಅನೇಕರು ಆಡಿಕೊಳ್ಳುತ್ತಾರೆ. ಆಕ್ಷೇಪ ಮಾಡುತ್ತಾರೆ. ಕೆಲವು ವ್ಯಂಗ್ಯವಾದದ್ದು, ಕೆಲವು ಸಂದೇಹ ಮೂಲವಾದದ್ದು. ಕೆಲವು ಅಜ್ಞಾನಭೂಯಿಷ್ಠವಾದದ್ದು.

ಆದರೆ ಮಧ್ವಾಚಾರ್ಯರು ಹೇಳಿದ ಈ ಆಚರಣೆ ಸರಿಯೇ ತಪ್ಪೇ? 
ಎಂಬ ಪ್ರಶ್ನೆಯನ್ನು ಸ್ವಲ್ಪ ವಿಚಾರ ಮಾಡೋಣ. –

ಮಾಧ್ವಗ್ರಂಥಗಳಲ್ಲಿ ಅನೇಕ ವೇದವಚನಗಳನ್ನು ಈ ವಿಷಯದಲ್ಲಿ ಪ್ರಮಾಣವಾಗಿ ಕೊಟ್ಟಿದ್ದಾರೆ. ಇದರ ವಿಷಯವನ್ನು ಇಟ್ಟುಕೊಂಡೇ ಅನೇಕ ಗ್ರಂಥಗಳನ್ನು ಅನೇಕ ಜ್ಞಾನಿಗಳು ರಚಿಸಿದ್ದಾರೆ. ಆ ಗ್ರಂಥಗಳಲ್ಲಿ, ವೇದವಾಕ್ಯಗಳು, ಪುರಾಣವಾಕ್ಯಗಳು, ಸ್ಮೃತಿವಾಕ್ಯಗಳು ಎಲ್ಲವನ್ನೂ ನಿರ್ದೇಶ ಮಾಡಿ ಸಮರ್ಥನೆ ಮಾಡಿದ್ದಾರೆ. 

ವಸ್ತುತಃ ಈ ಆಚರಣೆ ಮಧ್ವಾಚಾರ್ಯರಿಗಿಂತ ಮೊದಲೇ ಇತ್ತು. ಶಂಕರಾಚಾರ್ಯರ ಕಾಲದಲ್ಲಿಯೂ ಇತ್ತು. ಅದಕ್ಕಿಂತ ಪೂರ್ವದಲ್ಲಿಯೂ ಇತ್ತು. 

ಮೊದಲು ಒಂದು ಕಥೆಯನ್ನು ನೋಡೋಣ. – 
ಶಂಕರಾಚಾರ್ಯರು ಅವತಾರ ಮಾಡುವ ಮುನ್ನ ಯಾವ ಸ್ಥಿತಿ ಇತ್ತು ಎಂದು ಶಂಕರವಿಜಯಗಳು ಹೇಳುತ್ತವೆ. 
ಆನಂದಗಿರಿಯಲ್ಲಿ ಬರುವ ಮಾತು – 
ಲೋಕದಲ್ಲಿ ಯಾವ ಯಾವ ತರಹದ ಜನರು ಇದ್ದಾರೆ ಎಂದು ಶಿವನ ಬಳಿ ಪ್ರಾರ್ಥಿಸುವ ಮುನ್ನ ಇರುವ ಮಾತು. 

ಶಂಖಚಕ್ರಗದಾಪದ್ಮಾದಿಚಿಹ್ನಂ …

ಇತ್ಯಾದಿ ಬೇರೆ ಬೇರೆ ಚಿಹ್ನೆ ಹಾಕುವವರ ಒಟ್ಟಿಗೆ ವೈಷ್ಣವರು ಧಾರಣೆ ಮಾಡುವ ಮುದ್ರೆಯ ಉಲ್ಲೇಖ ಕಾಣುತ್ತದೆ. 

ಆನಂತರ ೬ ನೇ ಪ್ರಕರಣದಲ್ಲಿ ಬರುವ ವಿಷಯ – 
ಶಂಕರಾಚಾರ್ಯರು ಅನಂತಶಯನ ಕ್ಷೇತ್ರಕ್ಕೆ ಹೋಗುತ್ತಾರೆ. ಅಲ್ಲಿ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಕೆಲವು ಸಮಯ ಅಲ್ಲಿಯೇ ಇರುತ್ತಾರೆ. 

ಅಲ್ಲಿ ವಿಷ್ಣುಶರ್ಮಾ ಮೊದಲಾದ ಅನೇಕ ವೈಷ್ಣವರು ಇರುತ್ತಾರೆ ಅವರ ಬಳಿಯಲ್ಲಿ ಶಂಕರಾಚಾರ್ಯರು ಪ್ರಶ್ನಿಸುತ್ತಾರೆ. ಲಕ್ಷಣವನ್ನು ಹೇಳಿ ಎಂದು? 
ಅವರು ಹೇಳುತ್ತಾರೆ – 

ವಾಸುದೇವನೇ ಪರಮ ಪುರುಷ. ಅವನೇ ಜಗತ್ತಿನ ರಕ್ಷಕ. ರಾಮ ಕೃಷ್ಣಾದಿ ಅವತಾರರೂಪದಿಂದ ಭೂಭಾರವನ್ನು ಪರಿಹಾರ ಮಾಡುತ್ತಾನೆ. ಶಿಷ್ಟರ ರಕ್ಷಣೆ ಮಾಡುತ್ತಾನೆ. ಅವನ ಪಾದಸೇವನೆಯಿಂದ ನಾವು ಪಾಪರಹಿತರಾಗುತ್ತೇವೆ. ಎಂಬ ಜ್ಞಾನವು ಕೌಂಡಿನ್ಯಮುನಿಗಳಿಗೆ ಇತ್ತು. ಅವರಿಗೆ ಪ್ರಸನ್ನನಾದ ಅನಂತನಾಮಕನಾದ ವಿಷ್ಣುವು ಇಲ್ಲಿಯೇ ಇದ್ದಾನೆ. ಅವನ ದೇವಸ್ಥಾನದಲ್ಲಿ ಅವನ ಪಾದಸೇವೆಯನ್ನು ನಿತ್ಯದಲ್ಲಿ ಮಾಡುತ್ತಾ, ಅವನ ತೀರ್ಥಪ್ರಸಾದಾದಿಗಳನ್ನು ಸ್ವೀಕರಿಸುತ್ತಾ, ಅವನ ಮಂದಿರದ ಕೆಲಸಗಳನ್ನು ಮಾಡುತ್ತಾ ಸಂತೋಷದಿಂದ ಇದ್ದೇವೆ. ಎಂದು ಹೇಳುತ್ತಾರೆ. 

ಮುಂದೆ ವಿಜಯವು ಇವರ ಸ್ವರೂಪವನ್ನು ಉಲ್ಲೇಖ ಮಾಡುತ್ತದೆ. 

ಅಂಗೇನ ರಹಿತಾನೇತಾನ್ ಸ್ಮಾರ್ತವಂಶಸಮುದ್ಭವಾನ್ | 
ಊರ್ಧ್ವಪುಂಡ್ರಪರಾನ್ ಭಕ್ತಾನ್ ಅನಂತಾಂಘ್ರಿದ್ವಯೇ ನಯೇತ್ || …. 

ಇಲ್ಲಿ ಅವರ ಆಚರಣೆಯಲ್ಲಿ ಊರ್ಧ್ವಪುಂಡ್ರಧಾರಣೆ ಇದ್ದ ಬಗ್ಗೆ ಉಲ್ಲೇಖವಿದೆ. 

ಆದರೆ ಇವರೆಲ್ಲರೂ ಸನ್ಮಾರ್ಗಭ್ರಷ್ಟರಾಗಿದ್ದು ಅವರನ್ನು ಶಂಕರರು ಬೋಧಿಸಿ, ಅವರೆಲ್ಲರೂ ಪ್ರಾಯಶ್ಚಿತ್ತ ಮಾಡಿಕೊಂಡು ಶಂಕರರ ಮಾರ್ಗದರ್ಶನದಲ್ಲಿ ನಡೆದರು ಎಂದು ಹೇಳಿದೆ. 

ಆನಂತರ ವಿಷ್ಣುಶರ್ಮಾದಿಗಳು ಶಂಕರರಲ್ಲಿ ಉಪದೇಶ ಕೇಳುತ್ತಾರೆ. 
ನಂತರ ವಿಷ್ಣುಶರ್ಮಾದಿಗಳು ಕರ್ಮಾಚರಣೆ ಮಾಡುತ್ತಾರೆ. ಆಗ ಅವರು  –

ಸ್ನಾತ್ವಾ ಮೃತ್ತಿಕಯಾ ಚೋರ್ಧ್ವ-
ಪುಂಡ್ರಂ ಕುರ್ವನ್ ಪ್ರಯತ್ನತಃ | 

ಸ್ನಾನ ಮಾಡಿ ಊರ್ಧ್ವಪುಂಡ್ರವನ್ನು ಧರಿಸುತ್ತಿದ್ದರು ಎಂದು ಹೇಳಿದೆ. 

ಮುಂದೆ ಶಂಕರರು ಭಾಗವತಮತಾವಲಂಬಿಗಳನ್ನು ಭೇಟಿಯಾಗುತ್ತಾರೆ. ಭಾಗವತರ ಅಭಿಪ್ರಾಯ –

ನಾರಾಯಣ ಭಕ್ತರಾದ ನಾವು, ನಿತ್ಯದಲ್ಲಿ ಊರ್ಧ್ವಪುಂಡ್ರವನ್ನು, ಶಂಖ ಚಕ್ರ ಮೊದಲಾದ ಮುದ್ರೆಗಳನ್ನು ಧಾರಣೆ ಮಾಡಿಕೊಳ್ಳುತ್ತಾ ತುಳಸೀಮಾಲೆಯನ್ನು ಕಂಠದಲ್ಲಿ ಧರಿಸುತ್ತಾ, ಎಲ್ಲ ಕಾಲದಲ್ಲಿಯೂ ಉಚ್ಚಸ್ವರದಲ್ಲಿ ನಾರಾಯಣನನ್ನೇ ಸ್ತೋತ್ರ ಮಾಡುತ್ತೇವೆ ಎಂದು ಹೇಳುವರು. 

ಇಲ್ಲಿ ಊರ್ಧ್ವಪುಂಡ್ರಧಾರಣೆ ಮುದ್ರಾಧಾರಣೆಯ ಉಲ್ಲೇಖ ಸ್ಪಷ್ಟವಾಗಿದೆ. 

ಮುಂದೆ ಶಂಕರರು ಇವರ ಅಭಿಪ್ರಾಯವನ್ನು ಖಂಡಿಸಿ ಚಿಹ್ನೆಯ ಅಂಕನವನ್ನು ಮಾಡದಂತೆ ಆದೇಶಿಸಿದರು ಇತ್ಯಾದಿಯಾಗಿ ಕಥೆಯು ಸಾಗುತ್ತದೆ. 

ನಮಗೆ ಪ್ರಸಕ್ತವಾದದ್ದು ಊರ್ಧ್ವಪುಂಡ್ರ, ಮುದ್ರಾಧಾರಣೆ ಶಂಕರರ ಕಾಲದಲ್ಲಿ ಎಲ್ಲ ಕಡೆ ಇತ್ತು. ಎಂಬುದು ತಿಳಿಯುತ್ತದೆ. 

ಮುಂದೆ ಮತ್ತೊಬ್ಬ ವೈಷ್ಣವರು ಶಂಕರರಿಗೆ ಎದುರಾಗುತ್ತಾರೆ. ಅವರು 
ಮುಕ್ತಿಗೆ ಹೋಗಲು ಶಂಖಾದಿಗಳ ಅಂಕನವನ್ನು ಮಾಡಿಕೊಳ್ಳಬೇಕು. ಹಾಗೆ ಅಂಕನ ಮಾಡಿಕೊಂಡವನು ವೈಷ್ಣವೋತ್ತಮ ಎಂದು ಹೇಳಿ ಅದಕ್ಕೆ ಪ್ರಮಾಣವಾಗಿ ಒಂದು ಶ್ಲೋಕವನ್ನು ಹೇಳುತ್ತಾರೆ – 

ಯೇ ಬಾಹುಮೂಲಪರಿಚಿಹ್ನಿತಶಂಖಚಕ್ರಾಃ 
ಯೇ ಕಂಠಲಗ್ನತುಲಸೀನಲಿನಾಕ್ಷಮಾಲಾಃ | 
ಯೇ ವಾ ಲಲಾಟಫಲಕೇ ಲಸದೂರ್ಧ್ವಪುಂಡ್ರಾಃ
ತೇ ವೈಷ್ಣವಾ ಭುವನಮಾಶು ಪವಿತ್ರಯಂತಿ || 
ಎಂದು. 

ಹೀಗೆ ಪುರಾಣಾದಿಗಳಲ್ಲಿ ಶಂಖಾದಿಗಳ ಧಾರಣೆ ಹೇಳಿದ್ದಾರೆ ಹಾಗಾಗಿ ಅವಶ್ಯ ಧರಿಸಬೇಕೆಂದು ಹೇಳುತ್ತಾರೆ. ಆಗ ಶಂಕರರು ಹೇಳುತ್ತಾರೆ – 

ತಪ್ತಶಂಖಾದಿಗಳ ಧಾರಣೆ ಸರಿಯಲ್ಲ. ಅದನ್ನು ಹೇಳುವು ಶ್ರುತಿ ಇಲ್ಲ ಎಂದು, ಅವರ ಆಶಯವನ್ನು ಖಂಡಿಸುತ್ತಾರೆ. 

ಇದರಿಂದ ಗೋಪಿಚಂದನದಿಂದ ಊರ್ಧ್ವಪುಂಡ್ರಧಾರಣೆ, ಹಾಗೂ ಮುದ್ರಾಧಾರಣೆಗೆ ಶಂಕರಾಚಾರ್ಯರ ಯಾವ ವಿರೋಧವಿಲ್ಲ ಎಂದು ತಿಳಯಬಹುದಲ್ಲವೇ? ಅದಕ್ಕೆ ಅವರ ಸಹಮತಿ ಇದೆ. 

ಮುಂದೆ ಶಂಕರರು ತಪ್ತಮುದ್ರೆಯನ್ನು ನಿರಾಕರಣೆ ಮಾಡುತ್ತಾ ಹೇಳುತ್ತಾರೆ. ತಪ್ತಮುದ್ರಾಧಾರಣೆಯ ವಿಷಯದಲ್ಲಿ ಶ್ರುತಿಯಿಲ್ಲ. ಎನ್ನುವರು. 

ಆದರೆ ಅತಪ್ತತನೂರ್ನ ತದಾಮೋ .. ಇತ್ಯಾದಿ ವಾಕ್ಯವು ತಪ್ತಮುದ್ರೆಗೆ ಪ್ರಮಾಣವಾಗುತ್ತದೆ ಅಲ್ಲವೇ? ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ಶಂಕರರು ಹೀಗೆ ಉತ್ತರಿಸುತ್ತಾರೆ – 

ಆ ಮಂತ್ರದಲ್ಲಿ ತಪ್ತ ಶಬ್ದಕ್ಕೆ ಕಾಯಿಸಿದ ಎಂಬ ಅರ್ಥವಲ್ಲ. ಮಹಾಪಾತಕವನ್ನು ಪರಿಹರಿಸುವ ಕೃಚ್ಛ್ರಚಾಂದ್ರಾಯಣಾದಿಗಳು ಎಂದರ್ಥ. ಹಾಗಾಗಿ ಈ ಶ್ರುತಿಯು ತಪ್ತಮುದ್ರಾವನ್ನು ಹೇಳುವುದಿಲ್ಲ. ಎಂದು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ. 

ಇದರಿಂದ ತಪ್ತಮುದ್ರಾಧಾರಣೆಯ ವಿಷಯದಲ್ಲಿ, ಈ ವಾಕ್ಯವು ಪ್ರಮಾಣವಾಗುತ್ತದೆ ಎಂಬ ಅಭಿಪ್ರಾಯವು ಶಂಕರರ ಪೂರ್ವಕಾಲದಿಂದಲೂ ಇತ್ತು. ಎಂಬುದು ಸ್ಪಷ್ಟವಾಗುತ್ತದೆ. 
ಶಂಕರರು ಒಪ್ಪಿಲ್ಲ ಸತ್ಯ. ಅವರು ಆ ಮಂತ್ರಕ್ಕೆ ಬೇರೆ ರೀತಿಯಲ್ಲಿ ಅರ್ಥ ಮಾಡಿದ್ದಾರೆ. ಇರಲಿ. ಆದರೆ ಕೆಲವರ ಅಭಿಪ್ರಾಯವಂತೂ ಇತ್ತು.

ಆಶ್ಚರ್ಯವೆಂದರೆ ಸರ್ವದರ್ಶನಸಂಗ್ರಹದಲ್ಲಿ ಪೂರ್ಣಪ್ರಜ್ಞದರ್ಶನವನ್ನು ನಿರೂಪಣೆ ಮಾಡುವಾಗಲೂ ತಪ್ತಮುದ್ರಾದಿಗಳ ವಿಷಯವು ಹೇಳಿದೆ. ಅಲ್ಲಿಯೂ ಇಂತಹ ವಾಕ್ಯವನ್ನು ಉಲ್ಲೇಖ ಮಾಡಿದ್ದಾರೆ. ಇರಲಿ. 

ಹೀಗೆ ಶಂಕರರು ಆ ವೈಷ್ಣವರ ಬಳಿಯಲ್ಲಿ ತಪ್ತಮುದ್ರಾಧಾರಣೆಯನ್ನು ನಿರಾಕರಣೆ ಮಾಡುತ್ತಾರೆ. ಮುಂದೆ ಆ ವೈಷ್ಣವರು ಶಂಕರರ ಮಾರ್ಗವನ್ನು ಅನುಸರಿಸುತ್ತಾರೆ, ಎಂದು ಕಥೆ ಮುಂದೆ ಸಾಗುತ್ತದೆ. 

ಶಂಕರರ ಬಳಿ ಇನ್ನೂ ಅನೇಕರ ಸಮಾಗಮವಾಗಿ ಕೆಲವರು ದತ್ತಾತ್ರೇಯಾದಿಗಳು ಶಂಖಾದಿ ಪಂಚಮುದ್ರೆಗಳ ಧಾರಣೆಯನ್ನು ಮಾಡಿದ್ದು ಕೇಳಿದ್ದೇವೆ. ಹಾಗಾಗಿ ಶಿಷ್ಟರು ಮಾಡಿರುವುದರಿಂದ ಬಿಡುವುದು ಹೇಗೆ ಎಂದು ವಾದಿಸುತ್ತಾರೆ. ಆಗ ಶಂಕರರು ಅದಕ್ಕೆ ಪ್ರಮಾಣವಿಲ್ಲ ಎಂದು ನಿರಾಕರಿಸುತ್ತಾರೆ. 

ವಸ್ತುತಃ ಶಂಕರರ ಉದ್ದೇಶ ಕೇವಲ ಬಾಹ್ಯವಾದ ಮುದ್ರಾದಿಗಳ ಆಡಂಬರವನ್ನು ಮಾಡಿಕೊಳುವುದಕ್ಕಿಂತ ಅದ್ವೈತೋಪಾಸನೆ ಮಾಡುವುದು ಪ್ರಧಾನ ಎಂದು ತಿಳಿಸುವ ಉದ್ದೇಶ ಆಗಿರಬಹುದು. ಅದೇನೇ ಇರಲಿ. ಆ ಸಮಯದಲ್ಲಿ ಊರ್ಧ್ವಪುಂಡ್ರ, ಪಂಚ ಮುದ್ರಾ, ತಪ್ತಮುದ್ರಾ ಧಾರಣೆ ಕ್ರಮ ಇತ್ತು ಎಂಬುದು ತಿಳಿಯುತ್ತದೆ. 

ಇನ್ನು ತಪ್ತಮುದ್ರೆಯನ್ನು ಹೇಳುವ ಅತಪ್ತತನೂ… ಎಂಬ ಶ್ರುತಿಯನ್ನು ಶಂಕರರು ಬೇರೆ ಅರ್ಥ ಮಾಡಿದ್ದಾರೆ. ಮಧ್ವರು ತಪ್ತಮುದ್ರಾಪರವಾಗಿ ಅರ್ಥ ಮಾಡಿದ್ದಾರೆ. ಹೇಗೆ? ಯಾವುದು ಸರಿ ಎಂಬ ವಿವೇಚನೆ ಅನಾವಶ್ಯಕ. 

ಅದ್ವೈತಿಗಳು ನಿರ್ಗುಣಬ್ರಹ್ಮನನ್ನು ಹೇಳುವ ಶ್ರುತಿಯನ್ನು ದ್ವೈತಿಗಳು ಸಗುಣಬ್ರಹ್ಮಪರವಾಗಿ ಅರ್ಥ ಮಾಡುತ್ತಾರೆ. 

ದ್ವೈತಿಗಳು ಹೇಳುವ ಭೇದಪರವಾದ ಶ್ರುತಿಗಳನ್ನು ಅದ್ವೈತಿಗಳು ಐಕ್ಯಪರವಾಗಿ ಅರ್ಥ ಮಾಡುತ್ತಾರೆ. 

ಇಬ್ಬರೂ ವೇದಾರ್ಥವನ್ನು ಹೇಳಲು ಹೊರಟದ್ದರಿಂದ ಇದು ಸಹಜ. ಅವರವರ ವೇದಾರ್ಥಚಿಂತನೆಗಳು. ಅದರ ಸರಿ ತಪ್ಪು ನಮಗೆ ಅಪ್ರಸಕ್ತ. 

ಮುಂದೆ ಶಂಕರಾಚಾರ್ಯರ ದೇಶಸಂಚಾರ, ವ್ಯಾಸದರ್ಶನ ಮೊದಲಾದ ಎಲ್ಲಾ ಘಟನೆಯ ನಂತರ ಶಂಕರರು ಶಿಷ್ಯರ ಮೂಲಕ ಮತಗಳ ಪ್ರವೃತ್ತಿಯನ್ನು ಮಾಡಿದ ಉಲ್ಲೇಖ ಬರುತ್ತದೆ. 

ಅದ್ವೈತ ಮತದ ಸ್ಥಾಪಕರಾದ ಶಂಕರಾಚಾರ್ಯರು ಅನೇಕ ಶಿಷ್ಯರಿಗೆ ಬೋಧನೆಯನ್ನು ಮಾಡುತ್ತಾರೆ. ಅವರಲ್ಲಿ ಹಸ್ತಾಮಲಕರೂ ಒಬ್ಬರು. ಅವರ ಜೊತೆಗೆ ಲಕ್ಷ್ಮಣ ಎಂಬ ಹೆಸರಿನ ಮತ್ತೊಬ್ಬರು ಇರುತ್ತಾರೆ. ಅವರಿಬ್ಬರೂ ಶಂಕರರ ಪಾದಕ್ಕೆ ನಮಸಿ ಕೈಮುಗಿದು ಹೇಳುತ್ತಾರೆ. 

ಗುರುಗಳೇ ನಿಮ್ಮ ಉಪದೇಶವನ್ನು ಕೇಳಿ, ಸತ್ಯಂ ಜ್ಞಾನಮನಂತಂ ಬ್ರಹ್ಮ ಮುಂತಾದ ವಾಕ್ಯಗಳು ತಿಳಿಸುವ `ಸರ್ವಕಾರಣನಾದ ಪರಬ್ರಹ್ಮನು ನಾನೇ’ ಎಂಬ ಜ್ಞಾನಸಿದ್ಧವಾಗಿದೆ. 

ಆದರೂ ಮನಸ್ಸು ಒಪ್ಪುತ್ತಿಲ್ಲ. ನನ್ನ ಮನಸ್ಸು ಯಾವಾಗಲೂ ನಾರಾಯಣನ ಪಾದಕಮಗಳನ್ನೇ ಆವರಿಸಿವೆ. ನಾರಾಯಣನೇ ಪರಬ್ರಹ್ಮ ಎಂದು ಸಾವಿರಾರು ಪ್ರಮಾಣಗಳಿಂದ ಸಿದ್ಧವಾದ ಸಿದ್ಧಾಂತವೇ ನಮಗೆ ಸಮ್ಮತವಾಗಿ ಕಾಣುತ್ತಿದೆ. ಎಂದು ಹೇಳುತ್ತಾರೆ. 

ಇದನ್ನು ಕೇಳಿ ಶಂಕರರು ಇಬ್ಬರು ಶಿಷ್ಯರಿಗೂ ವೈಷ್ಣವಮತವನ್ನು ಪ್ರಚಾರ ಮಾಡಲು ಹೇಳುತ್ತಾರೆ. ಗುರುಗಳನ್ನು ನಮಸಿ ಅವರಿಂದ ಆಜ್ಞಪ್ತರಾಗಿ, ವೈಷ್ಣವಮತವನ್ನು ಪ್ರಚಾರ ಮಾಡಲು ಆರಂಭ ಮಾಡುತ್ತಾರೆ. 

.,….ಸ ಹಿ ಪೂರ್ವಭಾಗೇ ಲಕ್ಷ್ಮಣಾಚಾರ್ಯಃ ಕಿಲ ದಿಗ್ವಿಜಯಂ ಕೃತ್ವಾ ಕಾಂಶ್ಚಿದ್ ಬ್ರಾಹ್ಮಣಾದೀನ್ ಸಚ್ಛಿದ್ರೋರ್ಧ್ವಪುಂಡ್ರಧಾರಣಶಂಖಚಕ್ರಾಂಕಭಾಸುರಭುಜಯುಗಲಾನ್ ಕೃತ್ವಾ ಬಹುಶಿಷ್ಯಸಮೇತಃ ಪುನರಾವೃತ್ಯ ……

…..ಹಸ್ತಾಮಲಕಸ್ತು ಭೂಮಧ್ಯಾತ್ಪಶ್ಚಿಮಖಂಡದಿಗ್ವಿಜಯಂ ಕೃತ್ವಾ ಪಂಚಮುದ್ರಾಂಕವಿರಾಜಿತಾನ್ ಭಗವದಷ್ಟಾಕ್ಷರಮಂತ್ರಜಪಾಸಕ್ತಾನ್ ಕಾಂಶ್ಚಿದ್ ಬ್ರಾಹ್ಮಣಾದೀನ್ ಕೃತ್ವಾ ರಜತಪೀಠಾದಿಸ್ಥಲೇಷು ಕೃಷ್ಣಾದಿದೇವಪ್ರತಿಮಾಂ ಕೃತ್ವಾ ಮತಂ ವಿಜ್ಞಾಪಯಿತುಮ್, ಪುನಃ ಪರಮಗುರುಂ ಪ್ರಾಪ………

ಭಾರತದ ಪೂರ್ವಭಾಗದಲ್ಲಿ ಲಕ್ಷ್ಮಣರು ಸಂಚಾರ ಮಾಡುತ್ತಾರೆ. ಲಕ್ಷ್ಮಣರು ತತ್ವೋಪದೇಶವನ್ನು ಮಾಡುತ್ತಾ ತಮ್ಮ ಬಳಿ ಬಂದ ಬ್ರಾಹ್ಮಣರಿಗೆ ಊರ್ಧ್ವಪುಂಡ್ರಧಾರಣೆ ಮಾಡಲು ಹೇಳುತ್ತಾರೆ. (ಅದೂ ಸಛಿದ್ರವಾಗಿ) ಜೊತೆಗೆ ಶಂಖಾದಿಮುದ್ರೆಗಳ ಅಂಕನವನ್ನೂ ಮಾಡಿಕೊಳ್ಳುವಂತೆ ಉಪದೇಶ ಮಾಡುತ್ತಾರೆ. 

ಹೀಗೆ ಊರ್ಧ್ವಪುಂಡ್ರಧಾರಣೆ ಮುದ್ರಾಧಾರಣೆ ಮಾಡಿಕೊಂಡ ಬ್ರಾಹ್ಮಣರಿಂದ ಕೂಡಿಕೊಂಡು ನಾನಾ ಗ್ರಾಮಗಳನ್ನು ಸಂಚರಿಸಿ ಶಂಕರರ ಸಮೀಪಕ್ಕೆ ಮರಳಿ ಬರುತ್ತಾರೆ. 

ಭಾರತದ ಪಶ್ಚಿಮಭಾಗದಲ್ಲಿ ಹಸ್ತಾಮಲಕರು ಸಂಚಾರ ಮಾಡುತ್ತಾರೆ. ತಾವು ಅನೇಕ ಬ್ರಾಹ್ಮಣರನ್ನು ಪಂಚಮುದ್ರೆಗಳಿಂದ ಅಲಂಕೃತರಾಗುವಂತೆ ಮಾಡುತ್ತಾರೆ. ಅಷ್ಟಾಕ್ಷರಮಂತ್ರಜಪಾಸಕ್ತರನ್ನಾಗಿ ಮಾಡುತ್ತಾರೆ. 

ರಜತಪೀಠಪುರ ಮೊದಲಾದ ಸ್ಥಳಗಳಲ್ಲಿ ಕೃಷ್ಣನೇ ಮೊದಲಾದ ದೇವರ ಪ್ರತಿಮೆಗಳನ್ನು ಪ್ರತಿಷ್ಠೆ ಮಾಡುತ್ತಾರೆ. ನಂತರ ಪುನಃ ಗುರುಗಳ ಸಮೀಪಕ್ಕೆ ಬರುತ್ತಾರೆ. 
ಇದು ಆನಂದಗಿರಿಯವರು ಬರೆದ ಶಂಕರವಿಜಯದ ೬೮ ನೇ ಪ್ರಕರಣದಲ್ಲಿ ಬರುವ ಕಥೆ. 

ಇದರಿಂದ ತಿಳಿಯುವ ಅಂಶ – 
ಶಂಕರರ ಕಾಲದಲ್ಲಿಯೇ ಊರ್ಧ್ವಪುಂಢ್ರಧಾರಣೆ, ಶಂಖಚಕ್ರಾದಿಮುದ್ರಾಧಾರಣೆ ಇದೆಲ್ಲವೂ ಇತ್ತು. ಇದು ಬ್ರಾಹ್ಮಣರ ಆಚರಣೆ ಯಾಗಿತ್ತು. ವೈಷ್ಣವರಲ್ಲಿ ಉಳಿದಿತ್ತು. ಎಂಬುದು ಸ್ಪಷ್ಟ. 

ಆದ್ದರಿಂದ ಈ ಊರ್ಧ್ವಪುಂಢ್ರಧಾರಣೆ ತ್ರಿವರ್ಣೇತರರ ಆಚರಣೆ ಎಂಬುದು ಅತ್ಯಂತ ಬಾಲಿಶವಾದ ವಿಚಾರ. ಹಸ್ತಾಮಲಕಾದಿ ಆಚಾರ್ಯರ ಆಶಯಕ್ಕೆ ವಿರುದ್ಧ. 

ಇಲ್ಲಿ ಒಂದು ಸಂದೇಹ ಬರಬಹುದು.  
ಇನ್ನು ಈ ಗ್ರಂಥವೇ ಪ್ರಕ್ಷೇಪ, ಅಥವಾ ಇದೆಲ್ಲಾ ಯಾರೋ ಸೇರಿಸಿದ್ದು, ಎಂದು ಹೇಳಲು ಬರುವುದಿಲ್ಲ. 

ಶಂಕರರ ಪೂರ್ವದಲ್ಲಿ ಶಂಖಾದಿಗಳ ಧಾರಣೆ ಮಾಡುವವರು ಇದ್ದರು ಎಂಬುದು ಎಲ್ಲಾ ಶಂಕರವಿಜಯಗಳಲ್ಲಿಯೂ ಬಂದಿದೆ. ಹಾಗಾಗಿ ಮೇಲಿನ ಯಾವ ವಿಷಯವನ್ನೂ ತಿರಸ್ಕರಿಸಲು ಬರುವುದಿಲ್ಲ. 

ಮಾಧವೀಯ ಶಂಕರವಿಜಯದಲ್ಲಿ – 

ಶಿವವಿಷ್ಣ್ವಾಗಮಪರೈಃ ಲಿಂಗಚಕ್ರಾದಿಚಿಹ್ನಿತೈಃ | 
ಪಾಂಖಡೈಃ ಕರ್ಮ ಸಂನ್ಯಸ್ತಂ …|

ಎಂಬುದಾಗಿ ಚಕ್ರಾದಿಧಾರಕರು ಇದ್ದರು ಎಂದು ಹೇಳಿದ್ದಾರೆ. 

ಗುರುವಂಶಕಾವ್ಯದಲ್ಲಿ ಶಂಕರರ ಅವತಾರದ ಪೂರ್ವದಲ್ಲಿ ಬಂದ ವಾಕ್ಯ – 

ಲಕ್ಷ್ಮೀಶಂ ವಿಧೃತಸುದರ್ಶನಾದಿಚಿಹ್ನಾಃ 
ಸೇವಂತೇ ತದಿತರದೇವತಾ ವಿಹಾಯ | 
ತ್ಯಕ್ತ್ವಾನ್ಯೇ ಪಿತೃಮೃತಿಕಾಲಸಂವಿಧೇಯಂ 
ತನ್ವಾನಾಃ ಪಶುಮಪಿ ಪೈಷ್ಟಮೇವ ಯಜ್ಞೇ || 

ಇದರಲ್ಲಿ ಸ್ಪಷ್ಟವಾಗಿ ಶಂಖಾದಿಧಾರಣೆ, ವಿಷ್ಣುಸರ್ವೋತ್ತಮತ್ವ, ಏಕಾದಶೀ ಶ್ರಾದ್ಧ ಮಾಡದೇ ಇರುವುದು, ಪಿಶ್ಟಪಶುಯಾಗ ಇವುಗಳನ್ನು ಉಲ್ಲೇಖ ಮಾಡಿದ್ದಾರೆ. ಅಂದರೆ ಇದೆಲ್ಲಾ ಶಂಕರರ ಅವತಾರದ ಪೂರ್ವದಲ್ಲಿಯೂ ಇತ್ತು. ಎಂದು ತಿಳಿಯುತ್ತದೆ. 

ಎಲ್ಲಾ ಕಡೆಯಲ್ಲಿ ಈ ಆಚರಣೆಯನ್ನು ನಿಂದನಾತ್ಮಕ ವಾಗಿ ಹೇಳಿರಬಹುದು. ಆದರೆ ಆಚರಣೆ ಇತ್ತು ಎಂಬುದು ಸ್ಪಷ್ಟ. 

ಮುಖ್ಯವಾಗಿ ಮೇಲಿನ ಹಸ್ತಾಮಲಕರ ಘಟನೆಗೆ ಸಾಕ್ಷಿಯಾಗಿ, ಆದಿಉಡುಪಿಯಲ್ಲಿ ಕೃಷ್ಣನ ಪ್ರತಿಮೆ ಇರುವುದು ಇವತ್ತಿಗೂ ಪ್ರತ್ಯಕ್ಷ ಸಿದ್ಧ. 

ಹಸ್ತಾಮಲಕರು ಪೂಜಿಸಿದ ಕೃಷ್ಣನ ಪ್ರತಿಮೆಗೆ ದಾಖಲೆ ಈ ಕೃತಿಯಲ್ಲಿ ಇದೆ. ಹಸ್ತಾಮಲಕರು ಕೃಷ್ಣನನ್ನು ಆದಿಉಡುಪಿಯಲ್ಲಿ ಪ್ರತಿಷ್ಟಿಸಿದ್ದಾರೆ. ಇವತ್ತಿಗೂ ಆ ಗೋಪಿನಾಥನ ಪೂಜೆ ಸಾಂಗವಾಗಿ ನಡೆಯುತ್ತಿದೆ. 

ಹಾಗಾಗಿ ಈ ವಿಷಯಕ್ಕೆ ನಾವು ಶಂಕರವಿಜಯವನ್ನು ಪ್ರಮಾಣವನ್ನಾಗಿ ತಗೆದುಕೊಂಡು, ಅದರ ಜೊತೆಗೆ ಹಸ್ತಾಮಲಕರು ಪಂಚಮುದ್ರಾದಿಧಾರಣೆಯನ್ನು ಬ್ರಾಹ್ಮಣರಿಂದ ಮಾಡಿಸಿದರು ಎಂಬ ಅಂಶವನ್ನು ಬಿಡುವುದು ಸರಿಯೇ? 

ಆದ್ದರಿಂದ ಈ ಆಚಾರಣೆ ಮೊದಲಿನಿಂದಲೂ ಇತ್ತು ಎಂಬುದು ಸ್ಪಷ್ಟ. 

ಈ ಕಥಾನಕದಿಂದ ಮತ್ತೊಂದು ಅಂಶವನ್ನು ನಾವು ಗಮನಿಸಬಹುದು. ಮಧ್ವಾಚಾರ್ಯರ ತಂದೆ, ಅಚ್ಯುತಪ್ರೇಕ್ಷರು, ಪಂಡಿತಾಚಾರ್ಯರು ಇವರೆಲ್ಲರೂ ಮಧ್ವಾಚಾರ್ಯರ ಅವತಾರಕ್ಕಿಂತ ಮೊದಲೂ ಕೂಡ ವೈಷ್ಣವಮತದಲ್ಲೇ ಇದ್ದರು. 

ಅವರೆಲ್ಲರೂ ಗೋಪಿಚಂದನ, ಮುದ್ರಾದಿಗಳ ಧಾರಣೆಯನ್ನೇ ಮಾಡುತ್ತಿದ್ದರು. ಎಂದು ತಿಳಿಯಬಹುದು. 

ಯಾಕಂದರೆ ಉಡುಪಿ ಮೊದಲಾದ ಎಲ್ಲಾ ಕಡೆ ಹಸ್ತಾಮಲಕಾದಿಗಳೇ ಊರ್ಧ್ವಪುಂಡ್ರಾದಿಗಳನ್ನು ಧಾರಣೆ ಮಾಡಿಸಿದ್ದಾರೆ. 

ಮಧ್ವಾಚಾರ್ಯರ ಪೂರ್ವದಲ್ಲಿ ಇವರೆಲ್ಲರೂ ವೇದಾಂತದ ವಿಷಯದಲ್ಲಿ ಅದ್ವೈತಮತವನ್ನು ಹೊಂದಿರಬಹುದು. ಆದರೆ ಅವರೆಲ್ಲರೂ ಊರ್ಧ್ವಪುಂಡ್ರಾದಿಗಳನ್ನು ಧಾರಣೆ ಮಾಡುತ್ತಿದ್ದರು. ವಿಷ್ಣುಸರ್ವೋತ್ತಮತ್ವವನ್ನು ತಿಳಿದಿದ್ದರು ಎಂಬುದು ಸ್ಪಷ್ಟವಾಗುತ್ತದೆ. 

ಮಧ್ವಚಾರ್ಯರ ಜೊತೆಗೆ ಅಚ್ಯುತಪ್ರೇಕ್ಷಾಚಾರ್ಯರು, ಪಂಡಿತಾಚಾರ್ಯರು ದ್ವೈತಾದ್ವೈತವಿಷಯದಲ್ಲಿ ಚರ್ಚೆ ಮಾಡಿದ್ದಾರೆ. ಆದರೆ ಊರ್ಧ್ವಪುಂಡ್ರಾದಿಗಳ ಬಗ್ಗೆ ಚರ್ಚೆ ಮಾಡಿದ ಯಾವ ಉಲ್ಲೇಖವೂ ಇಲ್ಲ. 

ಹಾಗಾಗಿ ನಿರ್ವಿವಾದವಾಗಿ ಊರ್ಧ್ವಪುಂಡ್ರಾದಿಧಾರಣೆ ಮೊದಲನಿಂದಲೂ ಆಚರಣೆಯಲ್ಲಿ ಇತ್ತು ಎಂಬುದು ಸ್ಪಷ್ಟ. 

ಇನ್ನು ಊರ್ಧ್ವಪುಂಡ್ರ ಎಂಬುದು ವಿಷ್ಣುವೇ ಧರಿಸಿದ್ದಾನೆ. ಹಾಗಾಗಿ ಇದು ವೈದಿಕವೋ ಅವೈದಿಕೋ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲ. 

ಲೋಕದಲ್ಲಿ ಸಾಮಾನ್ಯ ಜ್ಞಾನಿಗಳೇ ಅವೈದಿಕ ಕರ್ಮಗಳನ್ನು ಮಾಡುವುದಿಲ್ಲ. ಋಷಿಮುನಿಗಳು ದೇವತೆಗಳು ಖಂಡಿತ ಅವೈದಿಕ ಆಚರಣೆ ಮಾಡುವುದೇ ಇಲ್ಲ. 

ಹಾಗಿರುವಾಗ ಪುರುಷೋತ್ತಮನಾದ ವಿಷ್ಣು ತನ್ನ ಲಲಾಟದಲ್ಲಿ ಊರ್ಧ್ವಪುಂಡ್ರವನ್ನು ಧಾರಣೆ ಮಾಡಿದ್ದಾನೆ ಎಂದ ಮೇಲೆ ಅದು ವೈದಿಕವೇ ಅಗಬೇಕಲ್ಲವೇ? 

ವಿಷ್ಣುವಿನ ಲಲಾಟವನ್ನು ವರ್ಣನೆ ಮಾಡುವ ಶ್ಲೋಕ – 
ಭೂಯಾದ್ಭೂಯೋ ವಿಭೂತ್ಯೈ ಮಮ ಭುವನಪತೇರ್ಭ್ರೂಲತಾದ್ವಂದ್ವಮಧ್ಯಾ-
ದುತ್ಥಂ ತತ್ಪುಂಡ್ರಮೂರ್ಧ್ವಂ ಜನಿಮರಣತಮಃಖಂಡನಂ ಮಂಡನಂ ಚ ||೪೩|| 

ಪರಮಾತ್ಮನ ಹುಬ್ಬುಗಳ ಮಧ್ಯದಲ್ಲಿ ಇರುವ ಊರ್ಧ್ವಪುಂಡ್ರವು ನನಗೆ ಅಧಿಕವಾದ ಐಶ್ವರ್ಯವನ್ನು ತಂದುಕೊಡಲಿ. ಜೊತೆಗೆ ಆ ಪುಂಡ್ರವು ಜನನ, ಮರಣ, ಅಜ್ಞಾನದ ನಾಶಕವಾಗಿದೆ. 

ಇಲ್ಲಿ ವಿಷ್ಣುವಿನ ಹಣೆಯಲ್ಲಿ ಊರ್ಧ್ವಪುಂಡ್ರ ಇದೆ ಎಂದು ಹೇಳಿದೆ. ಜೊತೆಗೆ ಅದು ಜನನ ಮರಣ, ಅಜ್ಞಾನಾದಿಗಳ ನಿವಾರಕ ಅಂದರೆ ಮೋಕ್ಷಪ್ರದ ಎಂದು ತಿಳಿಸಲಾಗಿದೆ. 

ಇಲ್ಲಿ ಊರ್ಧ್ವಪುಂಡ್ರ ಶಬ್ದಕ್ಕೆ ಬೇರೆ ಏನೋ ಅರ್ಥ ಮಾಡಲು ಬರುವುದಿಲ್ಲ. ಯಾಕಂದರೆ ಈ ಶ್ಲೋಕದ ಪೂರ್ವಾರ್ಧದಲ್ಲಿ – 

ರೂಕ್ಷಸ್ಮಾರೇಕ್ಷುಚಾಪಚ್ಯುತಶರನಿಕರಕ್ಷೀಣಲಕ್ಷ್ಮೀಕಟಾಕ್ಷ-
ಪ್ರೋತ್ಫುಲ್ಲತ್ಪದ್ಮಮಾಲಾವಿಲಸಿತಮಹಿತಂ ಸ್ಫಾಟಿಕೇಶಾನಲಿಂಗಮ್ | 

ಎಂಬಲ್ಲಿ ಈ ಪುಂಡ್ರವು ಸ್ಫಟಿಕದ ಶಿವಲಿಂಗದಂತೆ ಇದೆ ಎಂದು ಹೇಳಲಾಗಿದೆ. ಹಾಗಾಗಿ ಇಲ್ಲಿ ಯಾವ ಊರ್ಧ್ವಪುಂಡ್ರ ಹೇಳಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. 

ಇದು ಶಂಕರಾಚಾರ್ಯರು ಬರೆದ ವಿಷ್ಣುಪಾದಾದಿಕೇಶಾಂತವರ್ಣನ ಸ್ತೋತ್ರದಲ್ಲಿ ಬರುವ ನಲವತ್ತಮೂರನೇ ಶ್ಲೋಕ. 

ಇದರಿಂದ ವಿಷ್ಣು ವಿನ ಅವತಾರರಾದ ವ್ಯಾಸರೂ ಊರ್ಧ್ವಪುಂಡ್ರವನ್ನು ಧಾರಣೆ ಮಾಡಿದ್ದಾರೆ ಎಂದು ತಿಳಿಯಬಹುದು. 

ಶಂಕರರು ಪುಂಡ್ರಾಂತರವನ್ನು ಹೇಳಿರಬಹುದು. ಪ್ರಕೃತದಲ್ಲಿ ಊರ್ಧ್ವಪುಂಡ್ರವನ್ನು ಹೇಳಿದ್ದಾರೆಯೋ ಇಲ್ಲವೋ ಎಂಬುದನ್ನು ಮಾತ್ರ ಇಲ್ಲಿ ವಿವೇಚನೆ ಮಾಡಿದೆ. 

ಹಾಗಾಗಿ ಊರ್ಧ್ವಪುಂಡ್ರ ವಿಷ್ಣುವೇ ಧಾರಣೆ ಮಾಡಿದ್ದರಿಂದ ಅದು ಅವೈದಿಕ ಎಂದು ಹೇಳುವುದು ಅತ್ಯಂತ ಹಾಸ್ಯಾಸ್ಪದ. 

ಹಾಗಾಗಿ ಊರ್ಧ್ವಪುಂಡ್ರಾದಿಗಳು ವೈದಿಕವೂ ಹೌದು ವೈಷ್ಣವವೂ ಹೌದು. ಅನಾದಿಕಾಲದಿಂದಲೂ ಬಂದ ಆಚರಣೆಗಳು. ಇವುಗಳನ್ನು ಧಾರಣೆ ಮಾಡಿ ನಾವು ವಿಷ್ಣು ಭಕ್ತರಾಗಿ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗೋಣ. ಅವನ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳೋಣ. 

ಹೃಷೀಕೇಶ ಮಠದ

॥ श्रीश्रीशभक्तो जयति मध्वो विध्वस्तसाध्वसः ॥
***


No comments:

Post a Comment