ಗೋಗ್ರಾಸದ ಸಂಕ್ಷಿಪ್ತ ಮಹಿಮೆ
ನಮ್ಮ ಪೂರ್ವಜರು ಯಾವುದೇ ನಂಬಿಕೆಗಳನ್ನು ಬಲವಾದ ಕಾರಣವಿಲ್ಲದೆ ಮುಂದುವರಿಸಿಕೊಂಡು ಬಂದಿಲ್ಲ. ಅಂತಹ ನಂಬಿಕೆಗಳಲ್ಲಿ ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ಗೋಗ್ರಾಸವು ಒಂದು. ಕೆಲ ದಶಮಾನಗಳ ಹಿಂದಿನವರೆಗೂ ನಮ್ಮಲ್ಲಿ ಗೋವುಗಳನ್ನು ಮನೆಯಲ್ಲಿಯೇ ಸಾಕುವಂತಹ ಪದ್ಧತಿ ರೂಢಿಯಲ್ಲಿತ್ತು. ಹೀಗಾಗಿ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಹತ್ತಿಪ್ಪತ್ತು ದೇಸಿ ತಳಿ ಗೋವುಗಳು ಇದ್ದೇ ಇರುತ್ತಿದ್ದವು. ಮನೆಯಲ್ಲಿ ಇವುಗಳೊಂದಿಗೆ ಮತ್ತು ಕರುಗಳ ಸರಿಸುಮಾರಿಗೆ ಹುಟ್ಟಿದ ಮಕ್ಕಳನ್ನು ಅವುಗಳೊಂದಿಗೆ ಹೋಲಿಕೆ ಮಾಡಲಾಗುತ್ತಿತ್ತು. ತಾಯಿ ಮತ್ತು ಕರು ಎರಡಕ್ಕೂ ಮನೆ ಮಂದಿಯೆಲ್ಲಾ ಆತ್ಮೀಯತೆಯಿಂದ ನಮಸ್ಕರಿಸಿ ಗೋಗ್ರಾಸವನ್ನು ನೀಡುವುದು ಸಂಪ್ರದಾಯದ ಒಂದು ಅಂಗವಾಗಿತ್ತು. ಇದರಿಂದ ಅವುಗಳಲ್ಲೂ ಆತ್ಮೀಯತೆ ಬೆಳೆದು ಮನುಷ್ಯರನ್ನು ಹತ್ತಿರ ಬಿಟ್ಟುಕೊಳ್ಳುತ್ತಿದ್ದವು, ಹಾಲು ಕರೆಯುವಾಗ ಸಹಕರಿಸುತ್ತಿದ್ದವು. ಆದರೆ ಈ ಪದ್ಧತಿ ಇಂದು ನಾಗರಿಕತೆಯ ನೆಪದಲ್ಲಿ ಕ್ರಮೇಣ ಕಣ್ಮರೆಯಾಗುತ್ತಿದ್ದು, ಗ್ರಾಮೀಣ ಭಾಗದ ಕೆಲ ಮನೆಗಳಲ್ಲಿ ಮಾತ್ರ ಈ ಪದ್ಧತಿ ಇಂದಿಗೂ ಅಪರೂಪವಾಗಿ ಕಂಡುಬರುವಂತಾಗಿದೆ.
ಹೀಗೆ ನಾವು ಹಿಂದೆಲ್ಲಾ ಪ್ರತಿ ನಿತ್ಯ ನೀಡುತ್ತಿದ್ದ ಗೋಗ್ರಾಸ ಎಂಬುದು ಒಂದು ಮುಷ್ಠಿ ಬೆಲ್ಲ ಮತ್ತು ಅಕ್ಕಿಯನ್ನು ಸೇರಿಸಿ ಗೋವುಗಳಿಗೆ ಕೈಯಾರೆ ನೀಡುವ ಒಂದು ಸಂಪ್ರದಾಯವಾಗಿತ್ತು. ಎಲ್ಲದ್ದಕ್ಕೂ ವೈಜ್ಞಾನಿಕ ಹಿನ್ನಲೆ ಕೇಳುವ ಒಂದಷ್ಟು ಜನರಿಗೆ ಈ ಗೋಗ್ರಾಸದ ವೈಜ್ಞಾನಿಕ ಮಹತ್ವವನ್ನು ಹೇಳುವುದು ಅವಶ್ಯಕವಾಗಿದೆ. ಗೋಗ್ರಾಸದ ಸಂಕ್ಷಿಪ್ತ ರೂಪವೇ ಗೋ ಮತ್ತು ಗ್ರಾಸ. ಗೋ ಎಂದರೆ ಗೋವು ಮತ್ತು ಗ್ರಾಸ ಎಂದರೆ ಆಹಾರದ ಸಾರ ಅಥವಾ ತಿರುಳು ಎಂದರ್ಥ. ಪ್ರತಿನಿತ್ಯ ಬೆಲ್ಲ ಮತ್ತು ಅಕ್ಕಿಯನ್ನು ಒಂದು ಪ್ರಮಾಣದಲ್ಲಿ ಗೋವಿಗೆ ನೀಡುವುದರಿಂದ ಬೆಲ್ಲದಲ್ಲಿರುವ ಶಕ್ತಿ ಮತ್ತು ಅಕ್ಕಿಯಲ್ಲಿರುವ ಪಿಷ್ಟ ಅಂದರೆ ಕಾರ್ಬೋ ಹೈಡ್ರೇಟ್ ಅವುಗಳ ದೇಹಕ್ಕೆ ಸೇರುತ್ತದೆ. ಇದು ಅವುಗಳ ಆಹಾರದ ಸಾರವು ಹೌದು. ಇದು ಬಹಳ ಸಣ್ಣ ವಿಷಯ ಎನಿಸಿದರೂ ಗೋಸಾಕಾಣಿಕೆಯಲ್ಲಿ ಬಹು ಪ್ರಮುಖವಾದುದು. ಪ್ರತಿ ನಿತ್ಯ ಗೋಗ್ರಾಸ ನೀಡಿದಲ್ಲಿ ಗೋವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದಲ್ಲದೆ, ಹಾಲಿನ ಉತ್ಪಾದನೆಯೂ ಹೆಚ್ಚುವುದು ಕಂಡುಬಂದಿದೆ. ಹೀಗೆ ನೀಡುವ ಗೋಗ್ರಾಸವು ಬೇರೆ ಬೇರೆ ಭಾಗಗಳಲ್ಲಿ ಬೇರೆಯದೇ ರೀತಿಯಲ್ಲಿದ್ದು, ಪ್ರತಿ ದಿನ ನೀಡುವ ಆಹಾರಕ್ಕೂ ಗೋಗ್ರಾಸಕ್ಕೂ ಸಾಕಷ್ಟು ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ.
ಪ್ರಶಾಂತ್ಭಟ್ ಕೋಟೇಶ್ವರ ಎಂಬುವವರು ಧರ್ಮ ಕರ್ಮದಲ್ಲಿ ಗೋಗ್ರಾಸದ ವೈಶಿಷ್ಟ್ಯವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಧರ್ಮ ಗ್ರಂಥಗಳಲ್ಲಿ ಗೋಗ್ರಾಸದ ಕುರಿತಂತೆ ಉಲ್ಲೇಖಿಸಲ್ಪಟ್ಟಿರುವ ಪ್ರತಿಯೊಂದು ಶ್ಲೋಕಗಳನ್ನು ಉದಾಹರಿಸುವ ಮೂಲಕ ಗೋಗ್ರಾಸದ ಮಹಿಮೆಯನ್ನು ಸಾಮಾನ್ಯರು ಅರ್ಥೈಸಿಕೊಳ್ಳುವಂತೆ ವಿವರವಾಗಿ ತಿಳಿಸಿದ್ದಾರೆ. ಹೀಗೆ ಇವರು ವಿವರಿಸಿರುವ ಗೋಗ್ರಾಸಕ್ಕೂ ಇಂದಿನ ಜನಮಾನಸದಲ್ಲಿರುವ ಗೋಗ್ರಾಸಕ್ಕೂ ಕೊಂಚ ಮಟ್ಟಿಗೆ ವ್ಯತ್ಯಾಸ ಕಂಡುಬರುತ್ತದೆ. ನಮ್ಮಲ್ಲಿಯ ಧರ್ಮ ಗ್ರಂಥಗಳು ಹೇಳುವಂತೆ ನಾವು ಆಚರಿಸುವ ಯಾವುದೇ ಯಜ್ಞ, ಯಾಗ, ಪೂಜೆ, ಪಿತೃಕರ್ಮಗಳು ಗೋಗ್ರಾಸವನ್ನು ನೀಡದೇ ಪೂರ್ಣವಾಗಲಾರವು. ಯಜ್ಞ, ಶ್ರಾದ್ಧಾದಿಗಳಲ್ಲಿ ವಿಪ್ರ ಭೋಜನದಂತೆಯೇ ಗೋಗ್ರಾಸ ದಾನವೂ ಅನಿವಾರ್ಯ ಕರ್ತವ್ಯವಾಗಿದೆ. ಗೋಗ್ರಾಸ ದಾನದ ಶಾಸ್ತ್ರವಿಧಿ ಬಹಳ ಸಣ್ಣದಾಗಿದೆ. ಬಾಳೆ ಎಲೆಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಟ್ಟು, ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ ಅರ್ಥವುಳ್ಳ ಈ ಶ್ಲೋಕಗಳನ್ನು ಹೇಳಬೇಕಿದೆ.
ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣಪದೇ ಸ್ಥಿತಾ |
ಗೋಗ್ರಾಸಸ್ತು ಮಯಾ ದತ್ತಃ ಸುರಭೇ ಪ್ರತಿಗೃಹ್ಯತಾಮ್ |
ಸೌರಭೇಯಃ ಸರ್ವಹಿತಾಃ ಪವಿತ್ರಾಃ ಪುಣ್ಯರಶಾಯಃ |
ಪ್ರತಿಗೃಹ್ಣತ್ವಿಮಂ ಗ್ರಾಸಂ ಗಾವಃ ತ್ರೈಲೋಕ್ಯ ಮಾತರಃ |
ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ |
ಗ್ರಾಸಮುಷ್ಟಿ ಪ್ರದಾನೇನ ಸ ಮೇ ವಿಷ್ಣುಃ ಪ್ರಸೀದತು |
ಗವಾಂತರಗತ ಗೋಪಾಲಕೃಷ್ಣ ಪ್ರಿಯತಾಂಮ
ಪ್ರೀತೋಭವತು ತತ್ಸತ್ ಶ್ರೀಹರಿ ಕೃಷ್ಣಾರ್ಪಣಮಸ್ತು |
ಇದರರ್ಥ ದೇವಲೋಕದ ಕಾಮಧೇನು ಸುರಭಿಯಾಗಿದ್ದು, ಇದರ ಜಾತಿಯ ಗೋವುಗಳನ್ನೂ ಕಾಮಧೇನುವಿನ ಸನ್ನಿಧಾನದ ಅನುಸಂಧಾನದೊಡನೆ ಸುರಭಿ ಎಂದೇ ಕರೆಯಲಾಗುತ್ತದೆ. ಸುರಭಿಯು ವಿಷ್ಣು ದೇವನ ಪ್ರತೀಕವಾಗಿದ್ದು, ಆಕೆ ಎಲ್ಲರಿಗೂ ಹಾಲು ನೀಡುವ ತಾಯಿಯಾಗಿದ್ದಾಳೆ. ಇಂತಹ ಎಂದೆಂದಿಗೂ ವಿಷ್ಣುಪದದಲ್ಲಿ ನೆಲೆಗೊಂಡ ಈ ಸುರಭಿಯು ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ, ಮೂರು ಲೋಕಕ್ಕೂ ಮಾತೆಯಾಗಿ ಸರ್ವ ಪುಣ್ಯ ರಾಶಿಯನ್ನು ಹೊಂದಿದ ಪವಿತ್ರವಾದ ಸುರಭಿಯ ಮಕ್ಕಳಾದ ಗೋವುಗಳು ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ. ಹಸುಗಳೆಲ್ಲಾ ನಮ್ಮ ತಾಯಿಯಾದರೆ, ಎತ್ತುಗಳೆಲ್ಲಾ ನಮ್ಮ ತಂದೆಗೆ ಸಮವಾಗಿವೆ. ಇಂತಹ ಗೋವುಗಳಿಗಿತ್ತ ಈ ಮುಷ್ಟಿ ತುತ್ತಿನಿಂದ ಗೋವಿನ ಒಳಗಿರುವ ಶ್ರೀಕೃಷ್ಣನು ಪ್ರೀತನಾಗಲಿ ಎಂಬುದಾಗಿದೆ. ಇದರೊಂದಿಗೆ ಪ್ರಾರ್ಥಿಸುತ್ತಾ ‘ಗವಾಂತರ್ಗತ ಗೋಪಾಲ ಕೃಷ್ಣಃ ಪ್ರೀಯತಾಮ್’ ಎಂದು ಗೋಗ್ರಾಸವನ್ನು ಗೋವಿಗೆ ನೀಡಬೇಕಿದೆ.
ಹಿಂದೂ ಧರ್ಮದಲ್ಲಿ ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞಗಳೆಂಬ ಮೂರು ಯಜ್ಞಗಳು ಸಾಮಾನ್ಯವಾದುದಾಗಿದ್ದು, ಇದರೊಂದಿಗೆ ಮನುಷ್ಯಯಜ್ಞ ಹಾಗೂ ಭೂತಯಜ್ಞಗಳೆಂಬ ಮತ್ತೆರಡು ಯಜ್ಞಗಳೂ ಸಹ ಕಂಡುಬರುತ್ತವೆ. ಗೃಹಸ್ಥನಿಗೆ ಈ ಐದು ಯಜ್ಞಗಳು ಕರ್ತವ್ಯವೆಂದೇ ಹೇಳಲಾಗಿದೆ. ಇದರಲ್ಲಿ ಮನೆಗೆ ಹಸಿದು ಬಂದ ವ್ಯಕ್ತಿಗೆ ಆತಿಥ್ಯವಿತ್ತು ಉಣಬಡಿಸುವಿಕೆಯನ್ನು ಮನುಷ್ಯಯಜ್ಞ ಎಂದು ಹೇಳಲಾಗಿದೆ. ಈ ಯಜ್ಞದಲ್ಲಿ ಹಸಿದ ವ್ಯಕ್ತಿಯೇ ಅಗ್ನಿಯಾಗಿದ್ದು, ಅನ್ನದ ಭೋಜ್ಯಗಳೇ ಆಹುತಿಯಾಗಿವೆ. ‘ಅನ್ನಸ್ಯ ಕ್ಷುಧಿತಂ ಪಾತ್ರಂ’ ಎಂಬಂತೆ ಅನ್ನದಾನಕ್ಕೆ ಬಂದ ಅತಿಥಿಗಳೆಲ್ಲಾ ಇದಕ್ಕೆ ಪಾತ್ರರಾಗಿರುತ್ತಾರೆ. ಬರಿಯ ಅನ್ನದಾನವಲ್ಲದೇ ನಾಲ್ಕು ಜನರಿಗೆ ಉಪಕರಿಸುವ ಎಲ್ಲಾ ಸಮಾಜೋಪಯೋಗಿ ಸೇವೆಗಳೂ ಮನುಷ್ಯಯಜ್ಞದ ಪರಿಧಿಯಲ್ಲೇ ಸೇರಿವೆ. ನಾಲ್ಕನೆಯದಾದ ಈ ಮನುಷ್ಯಯಜ್ಞದಿಂದ ಸಮಾಜದ ಋಣ ಪರಿಹಾರವಾಗುತ್ತದೆ.
ಐದನೆಯದು ಅಥವಾ ಕೊನೆಯದ್ದು ಭೂತಯಜ್ಞ. ಪಶು ಪ್ರಾಣಿಗಳಿಗೆ ಆಹಾರ ನೀಡುವಿಕೆ ಭೂತಯಜ್ಞದ ಒಂದು ಅಂಗವಾಗಿದೆ. ಮನುಷ್ಯ ತನ್ನ ಬದುಕಿನಲ್ಲಿ ಗೋವೃಷಭಾದಿ ಪಶುಗಳ ಉಪಕಾರ ಮರೆಯುವಂತಿಲ್ಲ. ಗವ್ಯಗಳಾದ ಹಾಲು, ಮೊಸರು, ತುಪ್ಪಗಳಿಲ್ಲದೇ ಮನುಷ್ಯ ಬದುಕಲಾರ. ದೇವಕರ್ಮಗಳನ್ನು ನಿರ್ವಹಿಸಲಾರ. ಹುಟ್ಟಿದ ಮೊದಲಲ್ಲಿ ತಾಯಿ ಆತನಿಗೆ ಹಾಲು ಕೊಟ್ಟು ಬೆಳೆಸಿದರೆ ಮುಂದಿನ ಆತನ ಜೀವನ ಪೂರ್ತಿ ಗೋಮಾತೆ ಹಾಲು ನೀಡಿ ಪೋಷಿಸುತ್ತಾಳೆ. ಆದ್ದರಿಂದಲೇ ಗೋವಿಗೆ ಮಾತೃ ಸ್ಥಾನವನ್ನು ನೀಡಿದ್ದು, ವೃಷಭಕ್ಕೆ ಪಿತೃ ಸ್ಥಾನವನ್ನು ನೀಡಲಾಗಿದೆ. ತಂದೆಯು ಅನ್ನವಿತ್ತು ಪರಿಪೋಷಿಸುತ್ತಾನೆ. ಅಂತೆಯೇ ಎತ್ತು ಸಹ ಉತ್ತು ಧಾನ್ಯವನ್ನು ಬೆಳೆಸುತ್ತದೆ. ತನ್ನ ಗೊಬ್ಬರದಿಂದ ಧಾನ್ಯ ಬೆಳೆಗೆ ನೆರವಾಗುತ್ತದೆ. ಗಾಡಿ ಹೊತ್ತು ಧಾನ್ಯವನ್ನು ಹೊಲದಿಂದ ಮನೆಗೆ ಹೊರುತ್ತದೆ. ಆದ್ದರಿಂದಲೇ ‘ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ’ ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿರುವುದು. ಇಂತಹ ಗೋವುಗಳಿಗೆ ಸಾಧ್ಯವಾದಷ್ಟು ಪ್ರತ್ಯುಪಕರಿಸಬೇಕು. ಈ ಮೂಲಕ ಭೂತ ಋಣದಿಂದ ಮುಕ್ತನಾಗಬೇಕು.
ಉಳ್ಳವನು ಗೋಮಾಳವನ್ನು ರಕ್ಷಿಸುತ್ತಾನೆ, ಗೋಶಾಲೆಯನ್ನು ನಿರ್ವಹಿಸುತ್ತಾನೆ. ಏನು ಇಲ್ಲದವರು ಕೊನೇ ಪಕ್ಷ ಪ್ರತಿದಿನ ಉಣ್ಣುವುದಕ್ಕೆ ಮುಂಚೆ ಒಂದು ಮುಷ್ಟಿ ಅನ್ನವನ್ನಾದರೂ ಗೋವಿಗಾಗಿ ತೆಗೆದಿಡಬೇಕು ಎನ್ನುತ್ತದೆ ಧರ್ಮಶಾಸ್ತ್ರ. ಹೀಗಾಗಿ ಇಂದು ಗೋಗ್ರಾಸ ಎಂಬ ಹೆಸರಿನಲ್ಲಿ ಭೂತಯಜ್ಞ ಉಳಿದುಕೊಂಡಿದೆ. ಅಲ್ಲದೇ ಗೋಗ್ರಾಸ ದಾನವು ನಿತ್ಯಕರ್ಮವಾಗಿದ್ದು, ಅದನ್ನು ಮಾಡದಿರುವುದು ಅಪರಾಧವಾಗಿದೆ. ಯಾವುದನ್ನು ಮಾಡದಿದ್ದರೆ ಪಾಪ ಬರುವುದೋ ಅದು ನಿತ್ಯಕರ್ಮವಾಗುತ್ತದೆ. ‘ಯದಕರಣೇ ಪ್ರತ್ಯವಾಯಸ್ತನ್ನಿತ್ಯಮ್’ ಅಂದರೆ, ಗವ್ಯ ಪದಾರ್ಥಗಳನ್ನೆಲ್ಲಾ ಯಥೇಷ್ಟವಾಗಿ ಉಪಯೋಗಿಸಿಕೊಳ್ಳುವ ವ್ಯಕ್ತಿ ಅವನ್ನು ಕೊಟ್ಟ ಗೋವಿಗೆ ಪ್ರಕೃತಿದತ್ತವಾದ ಹಿಡಿ ಹುಲ್ಲಿನ ಜೊತೆ ತಾನು ಉಣ್ಣುವ ಅನ್ನದಲ್ಲಿ ಒಂದು ಮುಷ್ಟಿಯನ್ನಾದರೂ ತೆಗೆದಿಡದಿದ್ದರೆ ಆತ ಕೃತಘ್ನನಾಗಲಾರ. ಅಲ್ಲದೇ ಗೋವು ಸಕಲ ದೇವತೆಗಳಿಗೆ ಅಧಿಷ್ಠಾನವಾಗಿದೆ. ‘ಗವಾಮಂಗೇಷು ತಿಷ್ಠಂತಿ ಭುವನಾನಿ ಚತುರ್ದಶ’, ಹದಿನಾಲ್ಕು ಲೋಕಗಳು ಗೋವಿನ ಅಂಗಾಂಗಗಳಲ್ಲಿ ಅಧಿಷ್ಠಿತ ಎಂಬ ಮಾತಿದೆ. ಮುಖ್ಯವಾಗಿ ಪ್ರತಿ ನಿತ್ಯ ಗೋವುಗಳಿಗೆ ನೀಡುವ ಗೋಗ್ರಾಸದಿಂದಲೇ ಭಗವಂತನಾದ ಗೋಪಾಲಕೃಷ್ಣನು ಪ್ರಸನ್ನನಾಗುತ್ತಾನೆ ಎಂಬ ಬಲವಾದ ನಂಬಿಕೆ ಮನೆಮಾಡಿದೆ. ಪಟ್ಟಣದಲ್ಲಿ ವ್ಯವಹಾರ ಮತ್ತು ಉದ್ಯೋಗದ ಒತ್ತಡದಲ್ಲಿ ಇರುವ ಜನತೆಗೆ ಇಂದು ಗೋಗ್ರಾಸ ನೀಡುವುದು ಕಷ್ಟಸಾಧ್ಯ. ಆದರೂ ಅಂತಹವರು ಒಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿಬೇಕು. ಹಸುವನ್ನು ಸಾಕದಿದ್ದರೂ ಹಾಲು ಕುಡಿಯುವುದನ್ನು ಇವರ್ಯಾರು ಬಿಟ್ಟಿಲ್ಲ. ಆದ್ದರಿಂದ ಹಸುವನ್ನು ಸಾಕುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಅದಕ್ಕಾಗಿ ಗೋಗ್ರಾಸದ ಹೆಸರಿನಲ್ಲಿ ಸ್ವಲ್ಪವಾದರೂ ಧನವನ್ನು ತೆಗೆದಿಡುವ ಕೆಲಸವನ್ನು ಪ್ರತಿ ನಿತ್ಯ ಮಾಡಬೇಕು. ಆ ಹಣ ದೊಡ್ಡ ಮೊತ್ತವಾದಾಗ ಸಮೀಪದಲ್ಲಿರುವ ಗೋಶಾಲೆಗಳಿಗೆ ಭೇಟಿ ನೀಡಿ ಭೂತಯಜ್ಞ ಫಲದಿಂದ ಋಣಮುಕ್ತನಾಗಬೇಕು.
-ಕೆ.ಎನ್. ಶೈಲೇಶ್ ಹೊಳ್ಳ
***
"ಗೋಗ್ರಾಸ" ಏಕೆ?
ನಾವು ಆಚರಿಸುವ ಯಾವುದೇ ಯಜ್ಞ ;ಯಾಗ ಪೂಜೆ, ಪಿತೃಕರ್ಮಗಳು ಗೋಗ್ರಾಸವನ್ನಿಡದೇ ಪೂರ್ಣವಾಗಲಾರವು.
ಯಜ್ಞ, ಶ್ರಾದ್ಧಾದಿಗಳಲ್ಲಿ ವಿಪ್ರಭೋಜನದಂತೆಯೇ ಗೋಗ್ರಾಸ ದಾನವೂ ಅನಿವಾರ್ಯ ಕರ್ತವ್ಯವಾಗಿದೆ.
ಗೋಗ್ರಾಸ ದಾನದ ಶಾಸ್ತ್ರವಿಧಿ ಬಹಳ ಸಣ್ಣದು. ಬಾಳೆ ಎಲೆ ಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಡಬೇಕು. ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ ಅರ್ಥವುಳ್ಳ ಈ ಶ್ಲೋಕಗಳನ್ನು ಹೇಳಬೇಕು.
ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣಪದೇ ಸ್ಥಿತಾ |
ಗೋಗ್ರಾಸಸ್ತು ಮಯಾ ದತ್ತಃ ಸುರಭೇ(ಸುರಭಿ) ಪ್ರತಿಗೃಹ್ಯತಾಮ್ ||1||
ಸೌರಭೇಯಃ ಸರ್ವಹಿತಾಃ ಪವಿತ್ರಾಃ ಪುಣ್ಯರಾಶಾಯಃ |
ಪ್ರತಿಗ್ರಹ್ಣತ್ವಿಮಂ ಗ್ರಾಸಂ ಗಾವಃ ತ್ರೈಲೋಕ್ಯ ಮಾತರಃ
ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ |
ಗ್ರಾಸಮುಷ್ಟಿ ಪ್ರದಾನೇನ ಸ ಮೇ ವಿಷ್ಣುಃ ಪ್ರಸೀದತು || ||
ಗವಾಂತರಗತ ಗೋಪಾಲಕೃಷ್ಣ ಪ್ರಿಯತಾಂಮ ಪ್ರೀತೋಭವತು ತತ್ಸತ್ ಶ್ರೀಹರಿ ಕೃಷ್ಣಾರ್ಪಣಮಸ್ತು
“ದೇವಲೋಕದ ಕಾಮಧೇನು ಸುರಭಿ. ಕಾಮಧೇನುವಿನ ಜಾತಿಯೆನಿಸಿದ ಗೋಜಾತಿಯಲ್ಲಿ ಬಂದ ಎಲ್ಲಾ ಗೋವುಗಳನ್ನೂ ಕಾಮಧೇನುವಿನ ಸನ್ನಿಧಾನದ ಅನುಸಂಧಾನದೊಡನೆ ‘ಸುರಭಿ’ ಎಂದೇ ಕರೆಯಲಾಗುತ್ತದೆ. ಸುರಭಿಯು ವಿಷ್ಣುದೇವನ ಪ್ರತೀಕ. ಆಕೆ ಎಲ್ಲರಿಗೂ ಹಾಲು ನೀಡುವ ತಾಯಿ. ಎಂದೆಂದಿಗೂ ವಿಷ್ಣುಪದದಲ್ಲಿ ನೆಲೆಗೊಂಡ ಈ ಸುರಭಿ ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ”
ಮೂರು ಲೋಕಕ್ಕೂ ಮಾತೆಯಾಗಿ ಸರ್ವ ಪುಣ್ಯ ರಾಶಿಯನ್ನು ಹೊಂದಿದ ಪವಿತ್ರವಾದ ಸುರಭಿಯ ಮಕ್ಕಳಾದ ಗೋವುಗಳು ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ”
“ಹಸುಗಳೆಲ್ಲಾ ನಮ್ಮ ತಾಯಿ. ಎತ್ತುಗಳೆಲ್ಲಾ ನಮ್ಮ ತಂದೆಗೆ ಸಮ. ಅಂತಹ ಗೋವುಗಳಿಗಿತ್ತ ಈ ಮುಷ್ಟಿ ತುತ್ತಿನಿಂದ ಗೋವಿನ ಒಳಗಿರುವ ಶ್ರೀಕೃಷ್ಣ ಪ್ರೀತನಾಗಲಿ”
ಈ ಎರಡು ಶ್ಲೋಕಗಳಿಂದ ಪ್ರಾರ್ಥಿಸಿ ‘ಗವಾಂತರ್ಗತ ಗೋಪಾಲ ಕೃಷ್ಣಃ ಪ್ರೀಯತಾಮ್’ ಎಂದು ಗೋಗ್ರಾಸವನ್ನು ಗೋವಿಗೆ ನೀಡಬೇಕು.
ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞಗಳೆಂಬ ಮೂರು ಯಜ್ಞಗಳನ್ನು ಗಮನಿಸಿದ್ದೇವೆ. ಇವಲ್ಲದೇ ಮನುಷ್ಯಯಜ್ಞ ಹಾಗೂ ಭೂತ ಯಜ್ಞಗಳೆಂಬ ಎರಡು ಯಜ್ಞಗಳೂ ಇವೆ. ಗೃಹಸ್ಥನಿಗೆ ಈ ಐದು ಯಜ್ಞಗಳು ಕರ್ತವ್ಯ.
ಮನೆಗೆ ಹಸಿದು ಬಂದ ವ್ಯಕ್ತಿಗೆ ಆತಿಥ್ಯವಿತ್ತು ಉಣಬಡಿಸುವಿಕೆಯೇ ಮನುಷ್ಯಯಜ್ಞ, ಈ ಯಜ್ಞದಲ್ಲಿ ಹಸಿದ ವ್ಯಕ್ತಿಯೇ ಅಗ್ನಿ. ಅನ್ನ ಭೋಜ್ಯಗಳೇ ಆಹುತಿ. ‘ಅನ್ನಸ್ಯ ಕ್ಷುಧಿತಂ ಪಾತ್ರಂ’ ಎಂಬಂತೆ ಅನ್ನದಾನಕ್ಕೆ ಬಂದ ಅತಿಥಿ ಗಳೆಲ್ಲಾ ಪಾತ್ರರು.
ಬರಿಯ ಅನ್ನದಾನವಲ್ಲದೇ ನಾಲ್ಕು ಜನರಿಗೆ ಉಪಕರಿಸುವ ಎಲ್ಲಾ ಸಮಾಜೋಪಯೋಗಿ ಸೇವೆಗಳೂ ಮನುಷ್ಯಯಜ್ಞದ ಪರಿಧಿಯಲ್ಲೇ ಸೇರಿವೆ. ನಾಲ್ಕನೆಯದಾದ ಈ ಮನುಷ್ಯಯಜ್ಞದಿಂದ ಸಮಾಜದ ಋಣ ಪರಿಹಾರವಾಗುತ್ತದೆ.ಕೊನೆಯದು ಭೂತಯಜ್ಞ. ಅಂದರೆ ಪಶುಪ್ರಾಣಿಗಳಿಗೆ ಆಹಾರ ನೀಡುವಿಕೆ.
ಮನುಷ್ಯ ತನ್ನ ಬದುಕಿನಲ್ಲಿ ಗೋವೃಷಭಾದಿ ಪಶುಗಳ ಉಪಕಾರ ಮರೆಯುವಂತಿಲ್ಲ. ಮನುಷ್ಯ ಗವ್ಯಗಳಾದ ಹಾಲು, ಮೊಸರು, ತುಪ್ಪಗಳಿಲ್ಲದೇ ಬದುಕಲಾರ. ದೇವಕರ್ಮಗಳನ್ನು ನಿರ್ವಹಿಸಲಾರ. ಹುಟ್ಟಿದ ಮೊದಲಲ್ಲಿ ತಾಯಿ ಆತನಿಗೆ ಹಾಲು ಕೊಟ್ಟು ಬೆಳೆಸಿದರೆ ಮುಂದಿನ ಆತನ ಜೀವನ ಪೂರ್ತಿ ಈ ಗೋಮಾತೆ ಹಾಲು ಕೊಡುತ್ತಾಳೆ. ಆದ್ದರಿಂದಲೇ ಗೋವಿಗೆ ಮಾತೃಸ್ಥಾನ, ವೃಷಭಕ್ಕೆ ಪಿತೃಸ್ಥಾನವಿದೆ. ತಂದೆಯು ಅನ್ನವಿತ್ತು ಪರಿಪೋಷಿಸುತ್ತಾನೆ. ಎತ್ತು ತಾನು ಉತ್ತು ಧಾನ್ಯ ಬೆಳೆಸುತ್ತದೆ. ತನ್ನ ಗೊಬ್ಬರದಿಂದ ಧಾನ್ಯ ಬೆಳೆಗೆ
ನೆರವಾಗುತ್ತದೆ. ಗಾಡಿ ಹೊತ್ತು ಧಾನ್ಯವನ್ನು ಮನೆಗೆ ಹೊರುತ್ತದೆ. ಆದ್ದರಿಂದಲೇ “ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ”
ಇಂತಹ ಗೋವುಗಳಿಗೆ ಸಾಧ್ಯವಾದಷ್ಟು ಪ್ರತ್ಯುಪಕರಿಸಬೇಕು. ಈ ಮೂಲಕ ಭೂತಋಣದಿಂದ ಮುಕ್ತನಾಗಬೇಕು. ಉಳ್ಳವನು ಗೋಮಾಳವನ್ನು ರಕ್ಷಿಸುತ್ತಾನೆ. ಗೋಶಾಲೆಯನ್ನು ನಿರ್ವಹಿಸಬಲ್ಲ. ಕೊನೇ ಪಕ್ಷ ಪ್ರತಿದಿನ ಉಣ್ಣುವುದಕ್ಕೆ ಮುಂಚೆ ಒಂದು ಮುಷ್ಟಿ ಅನ್ನವನ್ನಾದರೂ ಗೋವಿಗಾಗಿ ತೆಗೆದಿಡಬೇಕು. ಇಂದು ‘ಗೋಗ್ರಾಸ" ಎಂಬ ಹೆಸರಿನಲ್ಲಿ ಭೂತಯಜ್ಞ ಉಳಿದುಕೊಂಡಿದೆ.
ಅಲ್ಲದೇ ಗೋಗ್ರಾಸದಾನವು ನಿತ್ಯಕರ್ಮ. ಅದನ್ನು ಮಾಡದಿರುವುದು ಅಪರಾಧ. ಯಾವುದನ್ನು ಮಾಡದಿದ್ದರೆ ಪಾಪ ಬರುವುದೋ ಅದು ನಿತ್ಯಕರ್ಮ.
“ಯದಕರಣೇ ಪ್ರತ್ಯವಾಯಸ್ತನ್ನಿತ್ಯಮ್”
ಗವ್ಯ ಪದಾರ್ಥಗಳನ್ನೆಲ್ಲಾ ಯಥೇಷ್ಟವಾಗಿ ಉಪಯೋಗಿಸಿಕೊಳ್ಳುವ ವ್ಯಕ್ತಿ ಅವನ್ನು ಕೊಟ್ಟ ಗೋವಿಗೆ ಪ್ರಕೃತಿದತ್ತವಾದ ಹಿಡಿಹುಲ್ಲಿನ ಜೊತೆ ತಾನು ಉಣ್ಣುವ ಅನ್ನದಲ್ಲಿ ಒಂದು ಮುಷ್ಟಿಯನ್ನಾದರೂ ತೆಗೆದಿಡದಿದ್ದರೆ ಆತ ಕೃತಘ್ನನಾಗಲಾರನೇ?
ಅಲ್ಲದೇ ಗೋವು ಸಕಲದೇವತೆಗಳಿಗೆ ಅಧಿಷ್ಠಾನ. ‘ಗವಾಮಂಗೇಷು ತಿಷ್ಠಂತಿ ಭುವನಾನಿ ಚತುರ್ದಶ.’ ಹದಿನಾಲ್ಕು ಲೋಕಗಳು ಗೋವಿನ ಅಂಗಾಂಗಗಳಲ್ಲಿ ಅಧಿಷ್ಠಿತ ಎಂಬ ಮಾತಿದೆ. ಗೋಗ್ರಾಸದಿಂದಲೇ ಗೋಪಾಲಕೃಷ್ಣ ಪ್ರಸನ್ನನಾಗುತ್ತಾನೆ.
ಪಟ್ಟಣದಲ್ಲಿ ವ್ಯವಹಾರ ಉದ್ಯೋಗದ ಒತ್ತಡದಲ್ಲಿ ಇರುವ ಜನತೆಗೆ ಇಂದು ಗೋಗ್ರಾಸ ನೀಡುವುದು ಕ್ಲೇಶವೆನಿಸಿದೆ. ಆದರೂ ಆತ ಒಂದು ವಿಷಯವನ್ನು ಗಮನಿಸಬೇಕು. ತಾನು ಹಸುವನ್ನು ಸಾಕದಿದ್ದರೂ ಹಾಲು ಕುಡಿಯುವುದನ್ನು ಬಿಡಲಿಲ್ಲ. ಆದ್ದರಿಂದ ಹಸುವನ್ನು ಸಾಕುವ ಜವಾಬ್ದಾರಿ ಅವನಿಗಿದೆ. ಅದಕ್ಕಾಗಿ ಗೋಗ್ರಾಸದ ಹೆಸರಿನಲ್ಲಿ ಸ್ವಲ್ಪವಾದರೂ ಧನವನ್ನು ತೆಗೆದಿಡುವ ಕೆಲಸವನ್ನು ಆತ ಮಾಡಬಹುದು. ಆ ಹಣವನ್ನು ದೊಡ್ಡ ಮೊತ್ತವಾದಾಗ ಅಲ್ಲಲ್ಲಿ ನಡೆಯುತ್ತಿರುವ ಗೋಶಾಲೆಗಳಿಗೆ ನೀಡಿ ಭೂತ ಯಜ್ಞದ ಫಲ ಪಡೆಯಬಹುದು. ಧರ್ಮದ ನಡೆ ಆಧುನಿಕತೆಯಲ್ಲಿ ಕ್ಲಿಷ್ಟವೆನಿಸಿದರೂ ಮನಸ್ಸಿದಲ್ಲಿ ಮಾರ್ಗವಿದ್ದೇ ಇದೆ.
ಹೀಗೆ ಗೃಹಸ್ಥನಿಗೆ ನಿತ್ಯಕರ್ಮಗಳಾಗಿ ಐದು ಯಜ್ಞಗಳು.
ಇವೇ ಪಂಚಯಜ್ಞ.
ಬ್ರಹ್ಮಯಜ್ಞೋ ದೇವಯಜ್ಞಃ ಪಿತೃಯಜ್ಞಸ್ತಥೈವ ಚ |
ಮನುಷ್ಯಭೂತಯಜ್ಞೌ ಚ ಪಂಚಯಜ್ಞಾಃ ಪ್ರಕೀರ್ತಿತಾಃ ||
ಈ ಐದು ಯಜ್ಞಗಳನ್ನು ನಡೆಸುವಲ್ಲಿ ಪ್ರಯತ್ನಶೀಲನಾದ ಗೃಹಸ್ಥ ವ್ಯಕ್ತಿ ಮೋಕ್ಷಪಡೆಯಲು ಅರ್ಹ ಅಧಿಕಾರಿಯಾಗುತ್ತಾನೆ.
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ
ಭಾರತೀಯ_ಗೋವುಗಳು
***
No comments:
Post a Comment