SEARCH HERE

Friday 1 October 2021

ಕರಿಬೇವು curry leaf

 ಕರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಸಾಂಬಾರಿಗೆ ಒಗ್ಗರಣೆ ಹಾಕಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು ಇಲ್ಲದ ಅಡುಗೆ ರುಚಿಹೀನ ಎನ್ನಬಹುದು. ಈ ಕರಿಬೇವು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಅಷ್ಟೆ ಅಲ್ಲದೆ ಕರಿಬೇವಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ, ಬಿ, ಎ ಪೋಷಕಾಂಶಗಳು ಇದ್ದು ಔಷಧೀಯ ಗುಣವನ್ನು ಹೊಂದಿದೆ.

1.ಬಿಳಿ ಕೂದಲು ಕಡಿಮೆ: ಬಿಳಿ ಕೂದಲ ಸಮಸ್ಯೆಯನ್ನು ಕರಿಬೇವು ದೂರ ಮಾಡುತ್ತದೆ. ದೇಹದಲ್ಲಿ ಪೋಷಕಾಂಶದ ಕೊರತೆಯಾದಾಗ ಮಕ್ಕಳಿಗೆ ಕೂದಲು ಬೇಗ ಬಿಳಿಯಾಗುತ್ತದೆ. ಇಂತಹ ಸಮಸ್ಯೆಗೆ ಕರಿಬೇವು ತುಂಬಾ ಸಹಕಾರಿಯಾಗಿದೆ. ಹಾಗೂ ಕೂದಲ ಬೆಳವಣಿಗೆಗೂ ಉಪಯುಕ್ತವಾಗಿದೆ. ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ, ಎಣ್ಣೆ ಹಸಿರು ಬಣ್ಣಕ್ಕೆ ಬರುವವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

2.ಎಸಿಡಿಟಿ ಕಡಿಮೆ: ಕರಿಬೇವಿನ ಮರದ ತೊಗಟೆಯನ್ನು ಒಣಗಿಸಿ, ಪುಡಿ ಮಾಡಿಕೊಂಡು, ಒಂದು ಚಮಚ ಆ ಪುಡಿಯನ್ನು ನೀರಲ್ಲಿ ಬೆರಸಿ ಸೇವಿಸದರೆ ಎಸಿಡಿಟಿ ಕಡಿಮೆಯಾಗುತ್ತದೆ. ಕರಿಬೇವಿಗೆ ಸಕ್ಕರೆ ಮತ್ತು ನಿಂಬೆ ರಸವನ್ನು ಸೇರಿಸಿ ಕಡಿಯುವುದರಿಂದ ಎಸಿಡಿಟಿ ಕಡಿಮೆ ಆಗುತ್ತದೆ. 

3.ಬೇಧಿ, ಆಮಶಂಕೆ ನಿವಾರಣೆ: ಎಳೆಯದಾದ ಕರಿಬೇವಿನ ಎಲೆಯನ್ನು ಜೇನು ತುಪ್ಪದೊಂದಿಗೆ ತಿನ್ನುವುದು, ಅಥವಾ ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯುವುದರಿಂದ ಬೇಧಿ, ಆಮಶಂಕೆಯನ್ನು ನಿವಾರಿಸಬಹುದು.

4.ಬೊಜ್ಜು ಕರಗಿಸಲು ಕರಿಬೇವು: ಕೆಲವರಿಗೆ ದೇಹದ ತೂಕ ಕಡಿಮೆ ಮಾಡುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಕರಿಬೇವು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಮೂಲಕ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 8 ರಿಂದ 10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು. 

5.ಕಾಮಾಲೆ ರೋಗಕ್ಕೆ ಕರಿಬೇವು ಮದ್ದು:  ಕರಿಬೇವು ಕಾಮಾಲೆ ರೋಗಕ್ಕೆ ರಾಮಮದ್ದು ಆಗಿದೆ. 10 ರಿಂದ 12 ಕರಿಬೇವಿನ ಎಲೆಗಳನ್ನ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಏಕೆಂದರೆ ಎಲೆಗಳ ಮೇಲೆ ಸಣ್ಣ ಪುಟ್ಟ ಕಶ್ಮಲಗಳು ಅಥವಾ ಹುಳು ಹಪ್ಪಟೆಗಳು ಹರಿದಿರುವ ಸಾಧ್ಯತೆ ಇರುತ್ತದೆ. ನಂತರ ಎಲೆಗಳನ್ನು ಅರೆದು ಆ ಮಿಶ್ರಣವನ್ನು ಸುಮಾರು 60 ರಿಂದ 100 ಮಿ.ಲೀ ಎಳೆನೀರಿನೊಂದಿಗೆ ಕುಡಿಯುವುದರಿಂದ ಕಾಮಾಲೆ ರೋಗವನ್ನು ಹೋಗಲಾಡಿಸಬಹುದು.

6.ರಕ್ತಹೀನತೆ ನಿವಾರಣೆ: 1/2 ಚಮಚ ಕರಿಬೇವು ಸೊಪ್ಪಿನ ಪುಡಿಯನ್ನು, ಜೇನು ತುಪ್ಪದ ಜೊತೆ ಸಮ ಪ್ರಮಾಣದಲ್ಲಿ ಬೆರಸಿ ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ. ಕರಿಬೇವು ಅನೇಕ ರೋಗಗಳಿಗೆ ಸಹಕಾರಿಯಾಗಿದೆ. ಕರಿಬೇವಿನ ಕಷಾಯ ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಕಡಿಮೆ ಮಾಡುವುದರ ಮೂಲಕ ಜ್ವರವನ್ನು ಕಡಿಮೆಮಾಡಬಹುದು. ಮತ್ತು ಕರಿಬೇವು ಮೂಗು ಕಟ್ಟುವುದು, ಶ್ವಾಸಕೋಶದ ಸಮಸ್ಯೆ, ಮತ್ತು ಹೃದಯ ರೋಗದ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ. ಆಲ್ಕೋಹಾಲ್ ಸೇವಿಸುವವರು ಆಹಾರದಲ್ಲಿ ಕರಿಬೇವನ್ನು ಸೇವಿಸುವುದರಿಂದ ಲಿವರ್ ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು.

***


No comments:

Post a Comment