SEARCH HERE

Tuesday 30 November 2021

ಕಾಶಿಗೆ ಹೋದಾಗ ಕಾಯನ್ನೋ ಫಲವನ್ನೋ ಬಿಡಬೇಕು

 ಕಾಶೀ ವಿಶ್ವನಾಥನ ದರ್ಶನ ಮತ್ತು ನಿಮ್ಮ ಇಷ್ಟದ ಕಾಯಿ (ತರಕಾರಿ) ಹಾಗು ನಿಮ್ಮ ಇಷ್ಟದ ಫಲ (ತಿಂಡಿ) ಇತ್ಯಾದಿಗಳ ತ್ಯಾಗ ಬಹುಕಾಲದಿಂದ,ಮನೆ ಮನೆಯ ಹಿರಿಯರು ಮಾಡಿಕೊಂಡು ಬಂದಿರುವ ಸಂಪ್ರದಾಯವಿದು. ನಾವೂ, ನೀವೂ ಪಾಲಿಸುತ್ತಲೇ ಬಂದಿರುವೆವು. ನಮ್ಮ ಮುಂದಿನ ಪೀಳಿಗೆಗೆ ಇದನ್ನು ತಿಳಿಸಿಕೊಡುವೆವು ನಾವು.


ಆದರೆ,ಅದರ ನಿಜಾರ್ಥವು ಇಂತಿದೆ:


ಕಾಶಿಗೆ ಹೋದಾಗ,ಕಾಯನ್ನೋ,ಫಲವನ್ನೋ ಬಿಡಬೇಕು ಎಂದು ನಮ್ಮ ಹಿರಿಯರು ಏಕೆ ಹೇಳುತ್ತಾರೆ? ಅದರ ಮರ್ಮವೇನು, ಅಂದರೆ, ರಹಸ್ಯವೇನು?


ಹಾಗೆ,ಅಧ್ಯಯನ ಮಾಡಿದರೆ, ನಮ್ಮ ಶಾಸ್ತ್ರಗಳಲ್ಲಿ, ಅಂದರೆ,ವೇದ,ಉಪನಿಷತ್ತು,ಪುರಾಣ,ಸ್ಮೃತಿಗಳಲ್ಲಿ ಎಲ್ಲೂ ಈ ಸಂಗತಿ(ಅಂದರೆ,ಒಂದು ಕಾಯನ್ನು ಮತ್ತು ಒಂದು ಹಣ್ಣನ್ನು ಬಿಡಬೇಕು,ಎಂಬುದನ್ನು) ಹೇಳಿಲ್ಲವಲ್ಲ ಎಂಬುದನ್ನು ಕಂಡುಕೊಂಡೆವು ನಾವು.


ಶಾಸ್ತ್ರವು ಹೇಳಿದ ವಿಷಯವನ್ನು, ಆಡುಭಾಷೆಯಲ್ಲಿ, ತಿರುಚಿ ಆದ ಪ್ರಮಾದ ನೋಡಿ ಹೀಗಿದೆ:


ಕಾಶೀ ಕ್ಷೇತ್ರದ ವಿಷಯದಲ್ಲಿ ಶಾಸ್ತ್ರಗಳು ಹೇಳುತ್ತಿರುವುದು - ಕಾಶೀ ಕ್ಷೇತ್ರಕ್ಕೆ ಹೋಗಿ,ಗಂಗಾ ಸ್ನಾನ ಮಾಡಿ, ಅಲ್ಲಿ, ಅಂದರೆ, ಆ ಗಂಗೆಯಲ್ಲಿ, ಕಾಯಾಪೇಕ್ಷೆ ಮತ್ತು ಫಲಾಪೇಕ್ಷೆಯನ್ನು ತ್ಯಾಗ ಮಾಡಿ,ಅಂದರೆ,ತೊರೆದು,ನಂತರ,ಭಕ್ತಿಯಿಂದ ವಿಶ್ವನಾಥನ ದರುಶನ  ಮಾಡಬೇಕು ಎಂದು.


ಇಲ್ಲಿ ಕಾಯಾಪೇಕ್ಷೆ ಅಂತರ ತನ್ನ ಅಥವ ಇತರರ ದೇಹದ ಮೇಲಿನ ಅಪೇಕ್ಷೆ ಹಾಗು ಫಲಾಪೇಕ್ಷೆ ಅಂದರೆ,ಮಾಡಿದ ಕರ್ಮಂಗಳಿಂದ ಉಂಟಾಗುವ ಫಲಗಳ ಅಪೇಕ್ಷೆ ಬಿಡಬೇಕು ಎಂಬುದು ಶಾಸ್ತ್ರವಚನಾರ್ಥವು.


ಇವೆರಡನ್ನೂ ಮಾಡಿದ ಕ್ಷಣವೇ,ಜೀವನ್ಮುಕ್ತಿಯು ದೊರೆಯುವುದು ನಿಶ್ಚಿತವಾಗುವುದು,ಆಗ ಮಹಾಸ್ಮಶಾನವಾದ ಕಾಶಿಯ ವಿಶ್ವನಾಥನ ದರುಶನದಿಂದ, ನಿಜಫಲವು (ಅಂದರೆ,ಮುಕ್ತಿಯೇ) ಸಿಗುವುದು ಎಂದರ್ಥವು.


ಕಾಲ ಕಳೆದಂತೆ,ಈ ಶಾಸ್ತ್ರವಚನವು, ಅಪಭ್ರಂಶಗೊಂಡು, ಅಂದರೆ,ಭ್ರಷ್ಟಗೊಂಡು,ಕಾಶಿಗೆ ಹೋದಾಗ,ಒಂದು ಕಾಯಿ ಅಂದರೆ ತರಕಾರಿಯನ್ನೋ ಮತ್ತು ಒಂದು ಫಲ ಅಂದರೆ, ಯಾವುದೋ ಇಷ್ಟದ ತಿಂಡಿಯನ್ನೋ, ಹಣ್ಣನ್ನೋ, ಒಣಹಣ್ಣನ್ನೋ ಬಿಡುವುದು ಸಂಪ್ರದಾಯ ಆಯಿತು.


ಇದು ಸುಲಭ ಸಾಧ್ಯವಾದುದರಿಂದ ಜನರೆಲ್ಲಾ ಇದನ್ನೇ ಪುರಸ್ಕರಿಸಿದರು‌.


ಕಾಯ ಅಪೇಕ್ಷೆ ಅಂದರೆ ಶರೀರದ ಬಯಕೆಗಳನ್ನು ಮತ್ತು ಫಲ ಅಂದರೆ ಕರ್ಮಫಲಂಗಳ ಬಯಕೆ ಬಿಡುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು.


ಆದರೆ,ಶಾಸ್ತ್ರವಚನ ಭ್ರಷ್ಟವಾದುದು ಯಾರ ಗಮನದಲ್ಲೂ ಉಳಿಯಲೇ ಇಲ್ಲ. ಆದುದರಿಂದ,ಕಾಯ ಅಂದರೆ ಕಾಯಿ ಎಂದುಕೊಂಡು,ತರಕಾರಿಯೊಂದನ್ನು ಮತ್ತು ಫಲ ಅಂದರೆ,ಹಣ್ಣನ್ನೋ ತಿಂಡಿಯನ್ನೋ ಬಿಟ್ಟೆವು ನಾವು.


ಒಂದೊಮ್ಮೆ,ಕಾಯ ಅಂದರೆ, ಶರೀರಗಳ ಮೇಲಿನ ಆಶೆ ಮತ್ತು ಫಲ ಅಂದರೆ,ಕರ್ಮಫಲಗಳ ಮೇಲಿನ ಆಶೆ ತೊರೆದಿದ್ದೇ ಆದರೆ,ಚೈತನ್ಯವೇ ತಾನಾದ ಚಿನ್ಮಯನಾದ ವಿಶ್ವನಾಥನ ದರುಶನವೇ ಕಾಶಿಯಲ್ಲಿ ನಮಗಾಗುವುದೂ, ನಾವೇ ವಿಶ್ವನಾಥನಾಗುವುದೂ ನಿಶ್ಚಿತವೇ, ಬಂಧು ಮಿತ್ರರೇ.


ಆದುದರಿಂದ,ಶಾಸ್ತ್ರವಚನದ ನಿಜವಾದ ಅರ್ಥವನ್ನು ಗ್ರಹಿಸಿ,ನಾವು ಅದನ್ನು ಪಾಲಿಸಿದಲ್ಲಿ, ಆನಂದದ ಸೆಲೆಯು ನಮ್ಮ ಹೃದಯದಲ್ಲಿರುವುದನ್ನು ಕಂಡು ಹಿಡಿದು, ವಿಶ್ವನಾಥನ ಸನ್ನಿಧಿಯನ್ನು ನಾವು ಸೇರಬಹುದು,ಅಲ್ಲವೇ ಮಿತ್ರರೇ?


ಆದುದರಿಂದ,ನೀವು ಇನ್ನೊಮ್ಮೆ ಕಾಶೀಕ್ಷೇತ್ರಕ್ಕೆ ಹೋಗುವುದಿದ್ದರೆ,ಅಥವ ಭೂಮಿಯ ಮೇಲಣ ಆ ಮಹಾಸ್ಮಶಾನಕ್ಕೆ ಇನ್ಯಾರೇ ಹೋಗುವುದಿದ್ದರೆ,ಈ ವಿಷಯವನ್ನು ಗಮನಕ್ಕೆ ತಂದುಕೊಂಡು, ಕಾಶಿ ಪಟ್ಟಣ ಸೇರಿ,ಗಂಗಾಸ್ನಾನ ಮಾಡಿ, ಶರೀರದ ಆಶೆ ಮತ್ತು ಕರ್ಮಫಲಗಳ ಆಶೆಗಳನ್ನು ತ್ಯಾಗ ಮಾಡಿ, ವಿಶ್ವನಾಥನ ದರುಶನ ಮಾಡಿದಲ್ಲಿ,ಅವಿಮುಕ್ತಕ ಕ್ಷೇತ್ರವಾದ ಕಾಶಿಯಲ್ಲಿ ನಿಮಗೆ ಅಥವ ಅವರಿಗೆ,ಸಂಪೂರ್ಣ ಆತ್ಮಜ್ಞಾನ ಲಭಿಸಿ,ಜೀವನ್ಮುಕ್ತಿಗೆ ಅಧಿಕಾರ ದೊರಕುತ್ತದೆ.

(ಕೃಪೆ:ವಾಟ್ಸಪ್)

***


No comments:

Post a Comment